Friday 30 September 2016

ಪ್ರಭಾ

SHARE
ಪ್ರಭಾ…

`ಎಲ್ಲಿಗೆ ಮೇಡಂ` ಕಂಡೆಕ್ಟರ್‌ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್‌ ನೀಡಿದ ಚಿಲ್ಲರೆಯನ್ನು ಪರ್ಸ್‌ಗೆ ತುಂಬಿಕೊಂಡವಳ ಮನಸ್ಸು ಚಡಪಡಿಸುತ್ತಿತ್ತು. ನಾನು ಕೆಲಸ ಬಿಟ್ಟು ಬಂದೆ ಅಂದರೆ ಅಮ್ಮ ಏನು ಹೇಳಬಹುದು. ಅಪ್ಪನ ಮುಖ ಸಪ್ಪೆಯಾಗಬಹುದಾ? ಎರಡು ವರ್ಷದ ಹಿಂದೆ ಎಷ್ಟು ಆರಾಮವಾಗಿದ್ದೆ. ಯಾರಿಗೆ ಬೇಕು ಬೆಂಗಳೂರು ಥೂ!

***

ಅವಳು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, ಅನುಭವ ಎಲ್ಲವೂ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚೇ ಸಿಕ್ಕಿದೆ. ಓದಿದ್ದು ಎಂಸಿಎ. ಕ್ಯಾಂಪಸ್‌ನಲ್ಲಿಯೇ ಪ್ರತಿಷ್ಠಿತ ಕಂಪನಿಗೆ ಸೆಲೆಕ್ಟ್‌ ಆಗಿದ್ದಳು. ತಿಂಗಳಿಗೆ ಹತ್ತುವರೆ ಸಾವಿರ ರೂ. ಸಂಬಳ ಇತ್ತು. ಸುಮ್ಮನೆ ಯಾಕೆ ಮನೆಯಲ್ಲಿ ಟೈಂವೇಸ್ಟ್‌ ಮಾಡುವುದು ಅಂತಲೂ ಅನಿಸಿತ್ತು. ಇವಳ್ಯಾಕೆ ಬೆಂಗಳೂರಿಗೆ ಹೋಗಬೇಕು ಅಂತಾ ಅಮ್ಮ ತಡೆದರೂ ಅನುಭವ ಆಗಲಿ ಅಂತ ಅಪ್ಪ ಓಕೆ ಎಂದಿದ್ದರು.

***

ಊರಿನಲ್ಲಿ ಓದು, ಭರತನಾಟ್ಯ, ಕ್ರೀಡೆ ಎಲ್ಲದರಲ್ಲೂ ಅವಳೇ ಫಸ್ಟ್‌. ಊರಿನವರಿಗಂತೂ ಪ್ರಭಾ ಎಂದರೆ ಅಚ್ಚುಮೆಚ್ಚು. ತುಂಬಾ ಮುಗ್ಧ ಹುಡುಗಿ. ಮೊದಲ ಸಲ ಬೆಂಗಳೂರಿನ ಬಸ್‌ ಏರಿದಾಗ ನೆರೆಮನೆಯ ಯಮುನಕ್ಕನ ಕಣ್ಣ ತುಂಬಾ ನೀರು. ಗೆಳತಿಯರಾದ ಸವಿತ, ರೇಖಾ, ಕವಿತ ಇವರೆಲ್ಲರ ಮುಖ ಕೂಡ ನೋಡುವಂತಿರಲ್ಲಿಲ್ಲ. ಊರಲ್ಲೇ ಟ್ರೈಮಾಡಿದ್ದರೆ ಟೀಚಿಂಗ್‌ ಕೆಲಸ ಸಿಗುತ್ತಿತ್ತು. ಇವಳಿಗೆ ಮನಸ್ಸಿರಲ್ಲಿಲ್ಲ. ಹಾಗಂತ ಇಷ್ಟು ಓದಿದ ತಪ್ಪಿಗೆ ಊರಲ್ಲಿ ಇರುವಂತಿಲ್ಲ. ಸ್ನಾತಕೋತ್ತರ ಪದವಿಗಾಗಿ ಬ್ಯಾಂಕ್‌ನಿಂದ ಸಾಲ ಬೇರೆ ಮಾಡಿಯಾಗಿದೆ. ಅನಿವಾರ್ಯವಾಗಿ ಮುಗ್ಧ ಮುಖದಲ್ಲಿ ದುಗುಡ ತುಂಬಿಕೊಂಡು ಬೆಂಗಳೂರು ಬಸ್ಸು ಹತ್ತಿದ್ದಳು. ಗೊತ್ತು ಗುರಿ ಇಲ್ಲದ ಊರಲ್ಲಿ ಒಬ್ಬಳೇ ಏನು ಮಾಡುವುದು. ಅದಕ್ಕೆ ಅಮ್ಮನೇ ಪರಿಹಾರ ನೀಡಿದ್ದಳು.  ಅಮ್ಮನ ದೂರದ ಸಂಬಂಧಿ ನಿಶಾಂತ್‌ ಬೆಂಗಳೂರಿನಲ್ಲಿದ್ದ. ಅವನೇ ಇವಳನ್ನು ಯಾವುದಾದರೂ ಲೇಡಿಸ್‌ ಹಾಸ್ಟೇಲ್‌ಗೆ ಸೇರಿಸುವ ಭರವಸೆ ನೀಡಿದ್ದ. ಇವಳಿಗಿಂತ ಒಂದು ವರ್ಷ ದೊಡ್ಡವ. ಬಾಲ್ಯದಲ್ಲಿ ಒಂದೆರಡು ಬಾರಿ ಅವನ ಮನೆಗೆ ಹೋಗಿ ಅವನೊಂದಿಗೆ ಆಟವಾಡಿದ ನೆನಪೂ ಅವಳಿಗಿದೆ. ಎಂಬಿಎ ಮುಗಿಸಿ ಕೈತುಂಬಾ ಸಂಪಾದಿಸುತ್ತಿದ್ದ.

***

ಅವಳು ಮೊದಲನೇ ದಿನವೇ ಬೆಂಗಳೂರನ್ನು ಬೆರಗುಗಣ್ಣಿನಿಂದಲೇ ನೋಡಿದಳು. ಇಲ್ಲಿನ ಗಿಜಿಗುಟ್ಟುವ ಜನ, ಟ್ರಾಫಿಕ್‌, ಆಧುನಿಕತೆ, ಅಪರಿಚಿತತೆ ಎಲ್ಲವೂ ಅವಳಲ್ಲಿ ಅವ್ಯಕ್ತ ನೋವು ಉಂಟು ಮಾಡಿದ್ದು ಸುಳ್ಳಲ್ಲ. ಬಸ್‌ಸ್ಟಾಂಡ್‌ನಲ್ಲಿ ನಿಶಾಂತ ಕಾಯುತ್ತಿದ್ದ. ಅವನ ಬೈಕ್‌ನಲ್ಲಿ ಸೀದಾ ಆತನ ಮನೆಗೆ ಕರೆದುಕೊಂಡು ಹೋದ. ಇವನು ರೂಂಗೆ ಕರೆದುಕೊಂಡು ಬಂದದ್ದನ್ನು ನೋಡಿ ಭಯದಿಂದ ನೋಡಿದವಳಿಗೆ ‘ಇವತ್ತು ಸಂಜೆ ತನಕ ಇಲ್ಲೇ ಇರು. ನನ್ನ ಆಫೀಸ್‌ನಲ್ಲಿರುವ ಮೇಡಂಗಳಲ್ಲಿ ವಿಚಾರಿಸಿ ಒಳ್ಳೆಯ ಹಾಸ್ಟೇಲ್‌ಗೆ ಸೇರಿಸ್ತಿನಿ’ ಅಂದ. ಬಕೆಟ್‌ನಲ್ಲಿ ಕ್ವಾಯಿಲ್‌ ಹಾಕಿ ಬಂದು ಯಾರ್ಯಾರಿಗೋ ಫೋನ್‌ ಮಾಡಿದ. ನೀರು ಬಿಸಿಯಾಗಿದೆ ಸ್ನಾನ ಮಾಡಿ ಬಾ ಅಂತ ಟವಲ್‌ ಕೊಟ್ಟು ಕಳುಹಿಸಿದ. ಇವಳು ಸ್ನಾನ ಮಾಡಿಬಂದಾಗ ಅವನು ಉಪ್ಪಿಟ್ಟು ರೆಡಿ ಮಾಡಿಟ್ಟಿದ್ದ. ಉಪ್ಪಿಟ್ಟು ರುಚಿಯಾಗಿತ್ತು. 10 ಗಂಟೆಯಾಗುತ್ತಿದ್ದಂತೆ ಅವನು ಆಫೀಸ್‌ಗೆ ಸಿದ್ದನಾಗಿ ಮನೆಯ ಕೀಯನ್ನು ಅವಳಲ್ಲಿ ನೀಡಿ. ಬೋರಾದರೆ ಕಂಪ್ಯೂಟರ್‌ ಆನ್‌ ಮಾಡು. ಮದ್ಯಾಹ್ನ ಊಟಕ್ಕೆ ಹೊರಗಡೆ ಹೋಗು ಎಂದಾಗ ಇವಳು ಉಳಿದಿರುವ ಅಷ್ಟು ಉಪ್ಪಿಟ್ಟನ್ನು ನೋಡಿ ಬೇಡಾ ಇದನ್ನೇ ತಿನ್ತಿನಿ ಅಂದಳು. ಅವನು ಮುಗುಳ್ನಗುತ್ತ ಹೊರಗೆ ಹೋದ. ಮನೆಯವರೊಂದಿಗೆ ಫೋನ್‌ ಮಾಡಿ ತುಂಬಾ ಮಾತನಾಡಿ ಬೆಂಗಳೂರನ್ನು ವಿವರಿಸತೊಡಗಿದಳು. ಕಂಪ್ಯೂಟರ್‌ನಲ್ಲಿದ್ದ ಹಾಡುಗಳನ್ನು ಕೇಳತೊಡಗಿದಳು. ನಿಶಾಂತ ಒಳ್ಳೆ ಹುಡುಗ ಅಂತ ಅವಳಿಗೆ ಅನಿಸಿತು. ರೂಮ್‌ನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾನೆ. ಟೆಲಿವಿಷನ್‌ ಮಾತ್ರ ಇಲ್ಲ. ಕಂಪ್ಯೂಟರ್‌, ಗೋಡೆಯಲ್ಲಿನ ಚಿತ್ರಗಳು ಎಲ್ಲವೂ ಅವಳಿಗೆ ಇಷ್ಟವಾದವು.

ಮನೆಯವರ ನೆನಪು ಕಾಡತೊಡಗಿದಾಗ ಫೋನ್‌ ಮಾಡಿದಳು. ಎಲ್ಲರ ಪ್ರೀತಿಯ ಮಾತುಗಳನ್ನು ಕೇಳಿದಾಗ ಊರಲ್ಲೇ ಇದ್ದರೆ ಎಷ್ಟು ಒಳ್ಳೆಯದ್ದಿತ್ತು ಅಂತ ಅವಳಿಗೆ ಅನಿಸಿತು. ಹಾಡು ಕೇಳಿ ಬೋರಾಯಿತು. ಅದರಲ್ಲಿ ಇಂಗ್ಲಿಷ್‌ ಸಿನಿಮಾಗಳೇ ತುಂಬಿಕೊಂಡಿದ್ದವು. ಹೆಸರಿಲ್ಲದ ಒಂದು ಫೈಲ್‌ನ್ನೂ ಆನ್‌ ಮಾಡಿದಾಗ ತಬ್ಬಿಬ್ಬಾದಳು. ಅದರಲ್ಲಿ ಬ್ಲೂಫಿಲ್ಮ್‌ಗಳ ದೊಡ್ಡ ರಾಶಿಯೇ ತುಂಬಿಕೊಂಡಿತ್ತು. ನೋಡುವ ಕುತೂಹಳವಾದರೂ ಕ್ಲೋಸ್‌ ಮಾಡಿದಳು. ಥೂ ಈ ನಿಶಾಂತನೂ ಇಂತವನೇ. ಊರಿನಲ್ಲಿ ಎಷ್ಟು ಒಳ್ಳೆಯ ಹುಡುಗನಾಗಿದ್ದ ಅಂತ ಅಂದುಕೊಂಡಳು.

***

ಸಂಜೆ ಬಂದ ನಿಶಾಂತ ಇವಳನ್ನು ಯಾವುದೋ ಹಾಸ್ಟೇಲ್‌ಗೆ ಕರೆದೊಯ್ದ. ಹಾಸ್ಟೇಲ್‌ನ ಪುಟ್ಟ ಕೋಣೆಯಲ್ಲಿ ಕುಳಿತಾಗ ಊರು, ಗೆಳೆಯ ಗೆಳತಿಯರು, ಕಾಡು, ನಾಯಿ ಬೆಕ್ಕು ದನ ಕರುಗಳೂ ಎಲ್ಲವೂ ನೆನಪಾಯಿತು. ರಾತ್ರಿಯಾದಗ ಇವಳಿದ್ದ ರೂಮ್‌ಗೆ ಮತ್ತೊಬ್ಬಳು ಬಂದಳು. ಐಟಿ ಕಂಪನಿಯಲ್ಲಿ ಕೆಲಸವಂತೆ ಇವಳ ಮುಗ್ಧಮುಖವನ್ನು ಒಂದು ತರಹಾ ನೋಡಿ ಹಾಯ್‌ ಐಹ್ಯಾಮ್‌ ನಮ್ರತಾ ಅಂತಾ ಕೈಕೊಟ್ಟಳು. ಸ್ವಲ್ಪಹೊತ್ತಾದರೂ ಅವಳು ಕೈ ಬಿಡಿಸದೇ ಇದ್ದಾಗ ಇವಳೇ ಬಿಡಿಸಿಕೊಂಡು ಐ ಏಮ್‌ ಪ್ರ..ಭಾ ಅಂತಾ ಉಗುಳು ನುಂಗುತ್ತ ಹೇಳಿದ್ದಳು. ಅವಳು ಒಂದಿಷ್ಟು ತೂರಾಡುವುದನ್ನು ನೋಡಿದಾಗ ಇವಳು ಕುಡಿದಿರುವುದು ಪ್ರಭಾಳಿಗೆ ಖಾತ್ರಿಯಾಗಿ ನಗರದ ಬಗೆಗಿನ ತಿರಸ್ಕಾರ ಮತ್ತಷ್ಟು ಹೆಚ್ಚಾಯಿತು. ತಿರಸ್ಕಾರದೊಂದಿಗೆ ನಗರದ ಕುರಿತು ಅಸಹ್ಯ ಮೂಡಿದ್ದು ರಾತ್ರಿ ಮಲಗಿದಾಗ ನಮ್ರತಾ ಇವಳ ಎದೆಗೆ ಕೈ ಹಾಕಿದಾಗ! ಪ್ರಭಾ ಭಯದಿಂದ ಮೂಲೆಯಲ್ಲಿ ಹೋಗಿ ಕುಳಿತುಕೊಂಡಳು. ಏನೋ ಗೊಣಗುತ್ತಿದ್ದ ಅವಳು ನಿದ್ದೆ ಹೋದದ್ದನ್ನು ಖಾತ್ರಿ ಪಡಿಸಿಕೊಂಡ ನಂತರ ಬೆಡ್‌ನ ಮೂಲೆಯಲ್ಲಿ ಮುದುಡಿಕೊಂಡಳು. ಎಲ್ಲಿಯ ನಿದ್ದೆ!

ಮುಂಜಾನೆ ಎದ್ದವಳೇ ನಿಶಾಂತನಿಗೆ ಫೋನ್‌ ಮಾಡಿ ಬಡಬಡಿಸಿದಳು. ಅವನು ಹಾಸ್ಟೇಲ್‌ನ ಓನರ್‌ಗೆ ಫೋನ್‌ ಮಾಡಿ ಬೇರೆ ರೂಂಗೆ ಶಿಫ್ಟ್‌ ಮಾಡಿಸಿದ.

**

ಮರುದಿನ ಆಫೀಸ್‌ಗೆ ಹೋಗಿ ಬಂದಳು. ಹೀಗೆ ಹಾಸ್ಟೇಲ್‌, ಆಫೀಸ್‌ ಅಂತ ದಿನಗಳುರಿದವು. ಹಣದ ರುಚಿಯೂ ಹಿಡಿಯಿತು. ಹಣ ನೀರಿನಂತೆ ಖರ್ಚಾಗುವುದನ್ನು ಕಂಡು ಬೆಚ್ಚಿದಳು. ಒಂದು ಸಾರಿ ಬಸ್‌ನಲ್ಲಿ ಇವಳ ಪರ್ಸ್‌ ಕಳುವಾಗಿ ಒಂದೆರಡು ಸಾವಿರ ಕಳೆದುಕೊಂಡಿದ್ದಳು.

ಒಂದು ಸಾರಿ ಇವಳಿಗೆ ಜ್ವರ ಬಂದಾಗ ರೂಂನಲ್ಲಿ ಗೀತಾ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅವಳಿಗೆ ಟೈಫಾಯಿಡ್‌ ಜ್ವರ ಬಂದ ಕಾರಣ ಕುಡಿಯುವ ನೀರು, ಸೇವಿಸುವ ಆಹಾರದ ಕುರಿತು ಎಚ್ಚರದಿರುವಂತೆ ಡಾಕ್ಟರ್‌ ಹೇಳಿದ್ದರು. ಮನೆಗೆ ಫೋನ್‌ ಮಾಡಿದಾಗ ಎಲ್ಲರೂ ಮನೆಗೆ ಬರಲು ಹೇಳಿದ್ದರು. ಆದರೆ ಪ್ರಯಾಣ ಮಾಡುವಷ್ಟು ತ್ರಾಸ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ. ಮೊದಲ ಒಂದು ದಿನ ಅವಳನ್ನು ನೋಡಿಕೊಳ್ಳುವರಿಲ್ಲದರಿಂದ ನಿಶಾಂತನೇ ಆಫೀಸ್‌ಗೆ ರಜೆ ಮಾಡಿ ಆಸ್ಪತ್ರೆಯಲ್ಲಿ ಉಳಿದಿದ್ದ.

ಅವನು ಅವಳನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ. ಆದರೆ ಅವಳ ಬಗ್ಗೆ ಕಾಮಕ್ಕಿಂತ ಮಮತೆಯೇ ಇವನಿಗೆ ಉಕ್ಕಿ ಬರುತ್ತಿತ್ತು. ಮುಖಕ್ಕೆ ಬಿದ್ದ ಕೂದಲನ್ನು ಹಿಂದಕ್ಕೆ ಸರಿಸಿ ತಲೆ ನೇವರಿಸುವ ಬಯಕೆಯೂ ಆಗುತ್ತಿತ್ತು.

ರಾತ್ರಿ ಇವಳ ನರಳಿಕೆ ಕೇಳಿ ಬಂದರೆ ಹಣೆ ಮುಟ್ಟಿ ನೋಡಿ ಹಣೆಗೆ ಒದ್ದೆ ಬಟ್ಟೆಯಿಡುತ್ತಿದ್ದ. ಅವನ ಆರೈಕೆಯ ಫಲವೋ ಅವಳು ಬೇಗ ಗುಣಗೊಂಡು ಹಾಸ್ಟೇಲ್‌ಗೆ ಮರಳಿದಳು.

***

ರೂಂಗೆ ಮರಳಿದವಳಿಗೆ ನಿಶಾಂತ ತೋರಿದ ಕಾಳಜಿಯದ್ದೇ ನೆನಪಾಗಿ ಎದೆ ತುಂಬಿ ಬಂತು. ಎಷ್ಟು ಒಳ್ಳೆಯವನು. ಅಂತ ನೂರಾರು ಸಾರಿ ಅಂದುಕೊಂಡಳು. ಸುಮ್ಮನೆ ಇವನ ಬಗ್ಗೆ ತಪ್ಪಾಗಿ ತಿಳಿದುಕೊಂಡೆ ಅಂತ ಅಂದುಕೊಂಡಳು. ಅವನ ನೆನಪು ಅವಳಿಗೆ ಇಷ್ಟವಾಗತೊಡಗಿತ್ತು. ಥಕ್‌ ಅವನಿಗೆ ನನ್ನ ಬಗ್ಗೆ ಯಾವ ಭಾವನೆ ಇದೆಯೋ ಸುಮ್ಮನೆ ದೂರಾಗುವುದು ಬೇಡಾ ಅಂತ ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಟುಕೊಂಡಳು.

ಅವನಿಗೂ ಅಷ್ಟೇ. ಅವಳೊಂದಿಗಿನ ಒಂದೆರಡು ದಿನದ ಸಾಮೀಪ್ಯ ಇಷ್ಟವಾಗಿತ್ತು. ಇವಳೊಂದಿಗೆ ಜೀವನ ಪೂರ್ತಿ ಕಳೆವ ಬದುಕ ನನ್ನದಾಗಿರಬಾರದೇ ಅಂತ ಮನ ಹಂಬಲಿಸಿತು.

**

ದಿನಗಳು ಕಳೆದವು.

ಆರ್ಥಿಕ ಬಿಕ್ಕಟ್ಟು ನಿಶಾಂತನ ಕಂಪನಿಗೂ ತಟ್ಟಿತು. ಪಿಂಕ್‌ಸ್ಲಿಪ್‌ ಇವನಿಗೂ ದೊರಕಿತು. ಮತ್ತೆ ಬೇರೆ ಕೆಲಸ ಹುಡುಕುವ ಗೋಜಿಗೆ ಹೋಗಲ್ಲಿಲ್ಲ. ಊರಿಗೆ ಮರಳಿದ ನಿಶಾಂತ್‌ ಸೈಬರ್‌ ಕೆಫೆಯೊಂದನ್ನು ಆರಂಭಿಸಿದ. ಇವಳು ಒಬ್ಬಂಟಿಯಾದಳು. ಇವಳನ್ನೂ ಊರಿಗೆ ಬರಲು ಒತ್ತಾಯ ಮಾಡುತ್ತಿದ್ದ. ಸೈಬರ್‌ನ ಹಿಂದಿನ ಖಾಲಿ ಜಾಗದಲ್ಲಿ ಟ್ಯುಟೋರಿಯಲ್‌ ಮಾಡುವಂತೆ ಹೇಳಿ ನಾನು ನೆರವಾಗುವುದಾಗಿ ಹೇಳುತ್ತಿದ್ದ. ಇವಳಲ್ಲಿ ಹೊಸ ಕನಸು ಕಟ್ಟ ತೊಡಗಿದ.

***

ಆಫೀಸ್‌ನಲ್ಲಿ ಬಾಸ್‌ ಸುಮ್ಮಗೆ ಕಿರಿಕಿರಿ ಮಾಡಿದಾಗ ಯಾಕೋ ನಗರದ ಸಹವಾಸವೇ ಬೇಡ ಅನಿಸಿ ಅಳು ಬಂದುಬಿಟ್ಟಿತ್ತು. ಬಿಕ್ಕಟ್ಟಿನಿಂದ ಮೊದಲ ವರ್ಷದ ಇನ್‌ಕ್ರಿಮೆಂಟ್‌ ಕೂಡ ಇಲ್ಲ. ನೆಮ್ಮದಿ ಅಂತು ಇಲ್ಲವೇ ಇಲ್ಲ. ದುಡ್ಡು ಕೊಡೋ ತೃಪ್ತಿಗಿಂತ ಬದುಕಿನ ನೆಮ್ಮದಿಯೇ ಮುಖ್ಯ ಅಂತ ಅನಿಸತೊಡಗಿತ್ತು. ಮತ್ತೆ ಊರು ನೆನಪಾಗತೊಡಗಿತು. ದನ ಕರು, ನಾಯಿ ಬೆಕ್ಕು, ಹೂವಿನ ಗಿಡಗಳು ಮತ್ತೆ ಕಾಡತೊಡಗಿದವು. ಗೆಳತಿಯ ಕೈ ಹಿಡಿದು ಬೆಟ್ಟ ಹತ್ತಬೇಕು. ತಂಗಿಯ ಜುಟ್ಟು ಹಿಡಿದು ಓದಿಸಬೇಕು. ತೋಡಲ್ಲಿ ಹೋಗಿ ಸುಮ್ಮನೆ ಏಡಿ ಹಿಡಿಯಬೇಕು.. ಇಂಥ ಕನಸುಗಳು ಇಷ್ಟವಾಗತೊಡಗಿದವು. ಊರಿನ ನೆನಪಿನ ಪುಳಕದಲ್ಲಿಯೇ ಇಂದು ಅಂತಿನ ನಿರ್ಧಾರ ಮಾಡಿ ಊರಿನ ಬಸ್‌ ಹತ್ತಿದ್ದಳು.

****

ಮತ್ತೆ ಊರಿಗೆ ಬಂದಾಗ ಮನಸ್ಸಿಗೆ ಏನೋ ನೆಮ್ಮದಿ. ಪ್ರತಿ ಗಿಡಮರಗಳನ್ನೂ ಹೊಸತು ಎಂಬಂತೆ ನೋಡಿದಳು. ಗೆಳತಿಯರು ಇವಳು ವಾಪಸ್‌ ಬಂದದ್ದನ್ನು ನೋಡಿ ಖುಷಿಗೊಂಡರು. ಮನೆಯವರು ಪ್ರೀತಿಯಿಂದ ಸ್ವಾಗತಿದರು. ನಿಶಾಂತನೂ ಫೋನ್‌ ಮಾಡಿ ಮಾತನಾಡಿದ.

***

ನಗರದಲ್ಲಿ ಕಳೆದ ಬದುಕು ಮತ್ತೆ ಊರಿಗೆ ಹೊಂದಿಕೊಳ್ಳಲು ಒಂದಿಷ್ಟು ತಡವರಿಸಿತು. ಟ್ರಾಫಿಕ್‌ ಕಿರಿಕಿರಿ ಇಲ್ಲದ ಕಿವಿ ಗುಂಯಿಗುಡುತ್ತಿತ್ತು. ಒಂದೆರಡು ವಾರ ಕಳೆದಿರಬಹುದು. ನಾಳೆ ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಅಂತ ಅಮ್ಮ ಹೇಳಿದಾಗ ಬೆಚ್ಚಿದಳು. ಒಳ್ಳೆ ಆಸ್ತಿ ಇರೋರು ಕಣೇ. ಒಬ್ಬನೇ ಮಗ ಒಪ್ಪಿಕೋ ಮತ್ತೆ ನಮಗೆ ಹುಡುಕಲು ಆಗುವುದಿಲ್ಲ. ಅಂತ ಅಪ್ಪ ಜೋರು ಮಾಡಿದಾಗ ಥೂ ನಗರದಲ್ಲಿಯೇ ಇದ್ರೆ ಆಗ್ತಾ ಇತ್ತು ಅಂತ ಅವಳಿಗೆ ಅನಿಸಿತು. ನಾಳೆ ಬರುವ ಹುಡುಗ ಇಷ್ಟವಾಗಿಲ್ಲ ಅಂತ ಹೇಳಬೇಕೆಂದು ಇವತ್ತೇ ತೀರ್ಮಾನ ಮಾಡಿಕೊಂಡಳು.

***

ನನ್ನ ಬಗ್ಗೆ ಈ ನಿಶಾಂತ್‌ಗೆ ಏನು ಭಾವನೆ ಇದೆ ಅಂತ ತಿಳಿದುಕೊಳ್ಳಬೇಕು ಅಂತ ಅವನಿಗೆ ಫೋನ್‌ ಮಾಡಿದಳು. ಪರಿಸ್ಥಿತಿ ಹೀಗಿದೆ ಅಂದಾಗ ಅವನು ನಗುತ್ತಾ ಹೇಳಿದ `ನಾಳೆ ನಿನ್ನನ್ನು ನೋಡಲು ಬಂದವರನ್ನು ಒಪ್ಪಿಕೋ. ಏನಾಗುವುದಿಲ್ಲ’ ಅಂತ ಹೇಳಿ ಫೋನ್‌ ಇಟ್ಟ. ಛೇ ಇವನಿಗೂ ನನ್ನ ಭಾವನೆ ಅರ್ಥವಾಗುತ್ತಿಲ್ವ. ಅಂತ ಬೇಜಾರಾಗಿ ಫೋನ್‌ ಕುಕ್ಕಿದಳು.

***

ಮರುದಿನ 11 ಗಂಟೆಗೆ ಸರಿಯಾಗಿ ಗಂಡಿನ ಕಡೆಯವರು ಬಂದರು. ಜ್ಯೂಸ್‌ ತೆಗೆದುಕೊಂಡು ಹೋಗು ಅಂತ ಅಮ್ಮ ಹೇಳಿದಾಗ ತಲೆತಗ್ಗಿಸಿ ಹೋದವಳು ಒಮ್ಮೆಗೆ ತಲೆಯೆತ್ತಿ ನೋಡಿದಳು. ನೋಡಲು ಬಂದ ಹುಡುಗ ನಿಶಾಂತನಾಗಿದ್ದ.

(ಕಥೆ ದಾರಾವಾಹಿಯಾಗುವ ಲಕ್ಷಣ ಕಂಡು ಬಂದಿರುವುದರಿಂದ ಇಲ್ಲಿಗೆ ನಿಲ್ಲಿಸಲಾಗಿದೆ. ಧನ್ಯವಾದಗಳು- ಪ್ರವೀಣ ಚಂದ್ರ)
SHARE

Author: verified_user

0 ಪ್ರತಿಕ್ರಿಯೆಗಳು: