Showing posts with label ಲಹರಿ. Show all posts
Showing posts with label ಲಹರಿ. Show all posts

Monday, 13 February 2017

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಶುರುವಾಯ್ತು!

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಶುರುವಾಯ್ತು!


(2012ರಲ್ಲಿ ಒನ್ ಇಂಡಿಯಾಕ್ಕಾಗಿ ನೆನಪಿಸಿಕೊಂಡು ಬರೆದ ಸತ್ಯ ಘಟನೆ :-) )

ಹಲವು ವರ್ಷಗಳ ನಂತ್ರ ಅನಿರೀಕ್ಷಿತವಾಗಿ ರಿಲೇಷನ್ ಹುಡುಗಿ ಮಮತಾ ಎದುರಿಗೆ ಸಿಕ್ಕಿದಾಗ ಸುಮ್ಮಗೆ ಕೇಳಿದ್ದೆ.

ಲಾವಣ್ಯ ಹೇಗಿದ್ದಾಳೆ? ಅಂತ.


ಅವ್ಳಿಗೆ ಎಷ್ಟು ಅಚ್ಚರಿಯಾಯಿತೆಂದರೆ... "ಅಯ್ಯೋ.. ಅಣ್ಣಾ, ನೀನಿನ್ನು ಅವಳ್ನ ಮರೆತಿಲ್ವಾ" ಅಂತ ಹೇಳಿದ್ಮೇಳೆ "ಅವ್ಳಿಗೆ ಕಳೆದ ವರ್ಷ ಮದುವೆಯಾಯ್ತು. ಗಂಡ ಮಿಲಿಟಿರಿಯಲ್ಲಿದ್ದಾನೆ" ಅನ್ನೋ ಬಾಂಬ್ ಕೂಡ ಹಾಕಿದಳು.

ಆದ್ರೆ ಆ ಬಾಂಬ್ ನನ್ನೆದೆಯಲ್ಲಿ ಸ್ಪೋಟಿಸಲಿಲ್ಲ.

ಲಾವಣ್ಯ ಅಂದ್ರೆ ನನ್ನ ಮೊದಲ ಲವ್.

ಐದನೇ ಕ್ಲಾಸ್‌ನಲ್ಲಿ ನನಗೆ ಗೊತ್ತಿಲ್ಲದೇ ಸುರುವಾದ ಡವ್.

ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು.

ಆದ್ರೂ ನಮ್ಮ ಲವ್ ಮದುವೆಯವರೆಗೂ ಬಂದಿತ್ತು!

ಮೂಲ ಊರು ಮಡಿಕೇರಿಯಾದರೂ ನಾನು ಹುಟ್ಟಿದ್ಮೆಲೆ ನಮ್ ಫ್ಯಾಮಿಲಿ ನೆಲೆ ನಿಂತದ್ದು ಪುತ್ತೂರಲ್ಲಿ. ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ. ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತಾ(ಮಾಮನ ಮಕ್ಕಳು) ರೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ.

ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಗೋಣಿಕೊಪ್ಪಲು ಸಮೀಪದ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ.

ಅಲ್ಲಿನ ಗದ್ದೆ, ಕುಬ್ಜ ಕಾಫಿ ಗಿಡಗಳು, ಒಂದು ಬೃಹತ್ ಮರದಲ್ಲಿ ಹತ್ತಿಪ್ಪತ್ತು ದೊಡ್ಡ ಜೇನುಗೂಡುಗಳು.

...ಹೀಗೆ ಅಜ್ಜಿ ಮನೆಯ ನೆನಪು ಜೇನಿಗಿಂತ ಹೆಚ್ಚು ಸಿಹಿ. ನಾವು ಮಾಮನ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು.

ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಮೊದ್ಲಿಗೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು. ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಕೊಂಚ ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಜೀನ್ಸ್ ಚಡ್ಡಿ, ಕಿವಿಯಲ್ಲಿ ರಿಂಗ್, ವೈಟ್ ಶಾರ್ಟ್ ಶರ್ಟ್, ಬಿಳಿ ಬಣ್ಣ, ನನಗಿಂತ ಉದ್ದವಾಗಿದ್ದ ಲಾವಣ್ಯ ಮುದ್ದಾಗಿ ಕಾಣುತ್ತಿದ್ದಳು.

ಕ್ಷಮಿಸಿ ಹೆಚ್ಚು ನೆನಪಿಲ್ಲ! ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದದ್ದು ಉದ್ಧಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ.

ಅದೊಂದು ದಿನ. ರಸ್ತೆ, ಗದ್ದೆ ಸುತ್ತಾಡಿಕೊಂಡು ಬಂದು ಸುಸ್ತಾಗಿ ಮನೆಯ ಜಗಲಿಯಲ್ಲಿ ಕುಳಿತುಕೊಂಡೆವು. ಅತ್ತೆಮಾವ ಎಲ್ಲೋ ಹೋಗಿದ್ದರು. ಅಲ್ಲಿ ನಾವಿಬ್ಬರೇ ಇದ್ದೇವು!

ಆ ಸಮಯದಲ್ಲಿ ನಾವು ಮಾತನಾಡಿದ್ದು ನಮ್ ಮದುವೆಯ ಬಗ್ಗೆ..!

ನೀನು ಯಾವಾಗ ಮನೆಗೆ ಹೋಗೋದು. ನಂಗೆ ಬೇಜಾರಾಗ್ತಿದೆ ಅಂತ ಲಾವಣ್ಯ ಅಳು ಮುಖ ಮಾಡಿಕೊಂಡ್ಳು. ಆ ಸಮಯದಲ್ಲಿ ನಮ್ ಮನಸ್ಸಿಗೆ ಹೊಳೆದದ್ದು ಮದುವೆ. ಸರಿ ಮದುವೆ ಕುರಿತು ತುಂಬಾ ಹೊತ್ತು ಮಾತನಾಡಿದೆವು. ಕೊನೆವರೆಗೂ ಜೊತೆಯಾಗಿರೋಣ. ಮದುವೆಯಾದ್ಮೆಳೆ ಜಗಳವಾಡಬಾರ್ದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು... ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು.

ಆಮೇಲೆ ಏನೋ ಜ್ಞಾನೋದಯವಾದಂತೆ ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ ಅಂತ ಮಾತನಾಡಿಕೊಂಡೆವು. ಜಗಲಿಯಲ್ಲಿ ಕುಳಿತು ಮಾತನಾಡಿದ್ದು ಸಾಕೆನಿಸಿ ಮತ್ತೆ ಆಟವಾಡಲು ಹೋದೆವು..

.....ಸಂಜೆ ಮನೆಗೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ಜೋರಾಗಿ ನಗುತ್ತ ಮಾತನಾಡುತ್ತಿದ್ದರು.

ಆಮೇಲೆ ನಮಗೆ ಗೊತ್ತಾದ ವಿಷ್ಯವೆಂದ್ರೆ,

ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಒಳಗೆ ಮಲಗಿಕೊಂಡಿದ್ದ ಅಜ್ಜಿ ಎಲ್ಲಾ ಕೇಳಿಸಿಕೊಂಡಿದ್ರಂತೆ. ಅದನ್ನು ಎಲ್ಲರಿಗೂ ಹೇಳಿ ಬೊಚ್ಚು ಬಾಯಿಯಿಂದ ನಗುತ್ತಿದ್ದರು. ಅವ್ರ ಹಲ್ಲು ಉದುರಿಸಬೇಕೆಂದು ಆಗ ಅನಿಸಿತ್ತೋ ಇಲ್ವೋ ಅನ್ನೋದು ಈಗ ನೆನಪಿಲ್ಲ!

ನನ್ನನ್ನು ಹತ್ತಿರ ಕೂರಿಸಿಕೊಂಡ ಮಾಮಿ "ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳ್ಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ಅವ್ಳು ಅಳೋದನ್ನು ನೋಡಿ ನಂಗೂ ಅಳು ಬಂದು ಮನೆಯೊಳಗೆ ಓಡಿದೆ.

Friday, 9 December 2016

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.


ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್‌ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ  ಹುಡುಗ ಇವನೇನಾ ಅಂತ ಅನಿಸಿರಬೇಕು.


ಶೇಷಮ್ಮ ಟೀಚರ್‌ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್‌ ಆಗಿದ್ದರು.  ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ  ಶೇಷಮ್ಮ ಟೀಚರ್‌ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್‌ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ.


ನನಗಿನ್ನೂ ನೆನಪಿದೆ. ನಾನು ಶಾಲೆಗೆ ಹೋಗುವಾಗ ಬ್ಯಾಗ್‌ನಲ್ಲಿ ಪಾಠ ಪುಸ್ತಕಕ್ಕಿಂತ ಚಂದಮಾಮ, ಬಾಲಮಂಗಳ ಮತ್ತು ಒಂದಿಷ್ಟು ಕಸ ಯಾವತ್ತೂ ಇರುತ್ತಿತ್ತು. ಟೀಚರ್‌ ನನ್ನ ಬ್ಯಾಗನ್ನು ಮೇಜಿನ ಮೇಲೆ ಸುರಿದು ಅದರಲ್ಲಿದ್ದ ಹರಿದ ಕತೆ ಪುಸ್ತಕಗಳನ್ನು ಎಲ್ಲರಿಗೆ ತೋರಿಸಿ ಅಪಹಾಸ್ಯ ಮಾಡುತ್ತಿದ್ದರು.  `ಇವನ ಚೀಲದಲ್ಲಿ ಪಾಠ ಪುಸ್ತಕಕ್ಕಿಂತ ಬಾಲಮಂಗಳ, ಚಂದಮಾಮ, ಕಸವೇ ಜಾಸ್ತಿ’ ಅಂತ ದಿನಾ ಅಮ್ಮನ ಬಳಿ ಬಂದು ದೂರು ಹೇಳುತ್ತಿದ್ದಳು. ಅಮ್ಮ ಇಂತಹ ದೂರುಗಳಿಗೆ ಕಿವುಡಿಯಾಗುತ್ತಿದ್ದಳು. ಪಕ್ಕದ ಮನೆಯ ರಶ್ಮಿಗೆ ಹೋಲಿಸಿ `ಅವಳು ನೋಡು ಎಷ್ಟು ಜಾಣ ಹುಡುಗಿ. ಕ್ಲಾಸ್‌ಗೆ ಯಾವಾಗಲೂ ಫಸ್ಟ್‌. ಇವನನ್ನು ಕೂಡ ಅದೇರೀತಿ ಕುಳಿತು ಓದೋಕೆ ಹೇಳಿ ಅಂತ’ ಅಮ್ಮನಿಗೆ ಹೇಳುತ್ತಿದ್ದರು. ರಶ್ಮಿಗೆ ನನ್ನನ್ನು ಹೋಲಿಸುವಾಗ ಅಮ್ಮ ಕೋಪಗೊಳ್ಳುತ್ತಿದ್ದಳು. ಅವಳಿಗೇನು ಅಪ್ಪ  ಸರ್ಕಾರಿ ಕೆಲಸದಲ್ಲಿದ್ದಾರೆ. ದುಡ್ಡು ವಿದ್ಯೆ ಎರಡೂ ಇದೆ. ಹೇಳಿ ಕೊಡ್ತಾರೆ’ ಅಂತ ಅಮ್ಮ ಸುಮ್ಮನಾಗುತ್ತಿದ್ದಳು.


ಇಷ್ಟಕ್ಕೂ ನನಗೆ ಕಥೆ ಪುಸ್ತಕ ಓದುವ ಹುಚ್ಚು ಹಿಡಿಸಿದೇ ಅಮ್ಮ. `ಒಂದು ಗೋಣಿ ತುಂಬಾ ಚಂದಮಾಮ ಇಟ್ಟಿದೆ. ಹಾಳಾದ ಗೆದ್ದಲು ತಿಂದು ಬಿಡ್ತು’ ಹಾಗಂತ ನಾನು ಹೈಸ್ಕೂಲ್‌ನಲ್ಲಿರುವಾಗ ಅವ್ಯಕ್ತ ನೋವಿನಿಂದ ಹೇಳುತ್ತಿದ್ದಳು. ಓದಿರುವುದು ನಾಲ್ಕನೇ ತರಗತಿಯಾದರೂ ರಾಮಾಯಣ, ಮಹಾಭಾರತ ಅಂತ ಅವಳು ಓದದ ಪುಸ್ತಕವಿಲ್ಲ. ನಾನು ಎಂಎ ಮುಗಿಸುವರೆಗೂ ಅವಳಿಗಾಗಿ ಲೈಬ್ರೆರಿಯಿಂದ ಪುಸ್ತಕ ತರುತ್ತಿದ್ದೆ. ಚಿಕ್ಕವರಿದ್ದಾಗ ನಾನು ಮತ್ತು ನನ್ಣಣ್ಣ ನಿದ್ರೆಗೆ ಮುನ್ನ ಅಮ್ಮನ ಅಕ್ಕ ಪಕ್ಕ ಮಲಗಿ ಕತೆ ಹೇಳುವಂತೆ ಪೀಡಿಸುತ್ತಿದ್ದೇವು.


ಪಂಚತಂತ್ರ, ನರಿ, ರಾಜರಾಣಿ, ಹುಲಿ ತೋಳ ರಾಕ್ಷಸ ಅಂತ ಅವಳಲ್ಲಿ ಕಥೆಗಳೆಂದೂ ಮುಗಿಯುತ್ತಿರಲ್ಲಿಲ್ಲ. ಏನೋ ತಪ್ಪು ಮಾಡಿದಕ್ಕೆ ತಡೆಯಾಲಾರದೇ ಅಮ್ಮ ಒಂದು ದಿನ ಚಾಟಿಯಿಂದ ಹೊಡೆದಿದ್ದಳು. ಆ ಏಟಿಗೆ ನಾನು ಅಮ್ಮ ಅಂತ ಕಿರುಚಿ ದೂರಕ್ಕೆ ಓಡಿದ್ದೆ. ಮತ್ತೆ ಬಂದು ನೋಡಿದಾಗ ಅಮ್ಮ ಅಳುತ್ತಿದ್ದಳು.


ಚಂದಮಾಮ ಅಂದಾಗ ನನಗೆ ನೆನಪಾಗುವುದು ಮಳಿಯ ವೆಂಕಟಕೃಷ್ಣ ಭಟ್ರು. ಪ್ರತಿವಾರ(ಗುರುವಾರ ಅಂತ ನೆನಪು) ತಪ್ಪದೇ ಮನೆಗೆ ಚಂದಮಾಮ ತರುತ್ತಿದ್ದರು. ಅಮ್ಮ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಭಟ್ರು ಸೈಕಲ್‌ ಮೂಲಕ ಮನೆ ಮನೆಗೆ ಚಂದಮಾಮ, ಪತ್ರಿಕೆಗಳನ್ನು ಹಂಚುತ್ತಿದ್ದರು. ಅವರಿಗೆ ಆಗಲೇ ಜೇನು ಸಾಕುವ ಹುಚ್ಚು ಕೂಡ ವಿಪರಿತವಾಗಿತ್ತು. ಇದೆಲ್ಲವುದರ ಪರಿಣಾಮ ಎಂಬಂತೆ ಅವರೀಗ `ಮಧು ಮಲ್ಟಿಪಲ್ಸ್‌’ ಎನ್ನುವ ಉದ್ಯಮ ಮಾಲೀಕ. ಸುಮಾರು ನೂರೈವತ್ತು ಜನರಿಗೆ ಉದ್ಯೋಗದಾತ. ಚಂದಮಾಮ ಮಾರುತ್ತಿದ್ದ ಭಟ್ರು ಈಗ ಯಶಸ್ವಿ ಉದ್ಯಮಿಯಾಗಲು ಎಷ್ಟು ಶ್ರಮ ಪಟ್ಟಿದ್ದಾರೋ? ಅವರಿಗೇ ಗೊತ್ತು. (http://madhumultiples.com).


ನನ್ನಣ್ಣ ನನಗಿಂತ ಎರಡು ಕ್ಲಾಸ್‌ ಮುಂದಿದ್ದ. ಸೈಕಲ್‌ ಕಲಿತದ್ದು ಅವನು ಫಸ್ಟ್‌. ಸೈಕಲ್‌ ಕಲಿತ ಖುಷಿಯಲ್ಲಿ ನನ್ನನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಆಗ ಸೋಡದಂಗಡಿಯ ಮಮ್ಮದೆ ಬಳಿ ಗಂಟೆಗೆ 2 ರೂಪಾಯಿಗೆ ಸೈಕಲ್‌ ಬಾಡಿಗೆಗೆ ಸಿಗುತ್ತಿತ್ತು.  ತುಂಬಾ ವೇಗವಾಗಿ ಹೋಗುತ್ತಿದ್ದ. ಅದು ನಮ್ಮೂರಿನ ದೊಡ್ಡ ತಿರುವು. ಅಲ್ಲಿ ಸಾಮಾನ್ಯ ಸೈಕಲ್‌ಗಳಿಗೆ ಬ್ರೇಕ್‌ ಹಿಡಿತಾ ಇರಲ್ಲಿಲ್ಲ. ಅತೀ ವೇಗದಿಂದ ಕೆಳಗಿಳಿಯುತ್ತಿರುವಾಗ ಎದುರಿನಿಂದ ಬಸ್‌ ಬರುತ್ತಿತ್ತು. ಅಣ್ಣ ಬ್ರೇಕ್‌ ಹಿಡಿಯೋಕೆ ನೋಡ್ತನೆ. ನಿಲ್ಲೋದೆ ಇಲ್ಲ. ಎದುರಿನಿಂದ ಯಮನಂತೆ ಬರುವ ಬಸ್ಸು. ಏನಾಯಿತು ಅಂತ ಗೊತ್ತಾಗಲ್ಲಿಲ್ಲ. ನಾವಿಬ್ಬರು ಮಾರ್ಗದಲ್ಲಿ ಬಿದ್ದಿದ್ದೇವು.


ಬಸ್‌ ನಿಂತಿತು. ಅದರಲ್ಲಿದ್ದವರು ನಮ್ಮನ್ನು ಎಬ್ಬಿಸಿದರು. ಅಣ್ಣ ಎದುರಿನ ಮೋರಿಗೆ ಸೈಕಲ್‌ನ್ನು ಗುದ್ದಿಸಿದ. ಸ್ವಲ್ಪ ಎಚ್ಚರ ತಪ್ಪಿದರೆ ಕೆಳಗಿನ ದೊಡ್ಡ ಗುಂಡಿಗೆ ಬೀಳುತ್ತಿದ್ದೇವು. ಸೈಕಲ್‌ನ ಎದುರಿನ ಟೈರ್‌ ಎಂಟು ಆಕಾರಕ್ಕೆ ತಿರುಗಿತ್ತು. ಅದೇ ಕೊನೆ ಮತ್ತೆ ನಾನು ಅವನೊಂದಿಗೆ ಸೈಕಲ್‌ನಲ್ಲಿ ಹೋಗಿಲ್ಲ.


ಶಾರದ ಪೂಜೆ, ಸ್ವಾತಂತ್ರೋತ್ಸವ ಸೇರಿದಂತೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ. ಕಾಗದ ಕೊಡೊಕೆ ನಾನು ಮತ್ತು ಸುನಿಲನೇ ಆಗಬೇಕು. ಕ್ಲಾಸ್‌ ಇಲ್ಲದೇ ಊರು ಸುತ್ತುವುದೆಂದರೆ ನಮಗೂ ಎಲ್ಲಿಲ್ಲದ ಖುಷಿ. ಕಾಡಿನೆಡೆಯಲ್ಲಿರುವ ಮನೆಗಳಿಗೆ, ಗುಡ್ಡದಾಚೆ ಹೋಗೊದಂದ್ರೆ ಮಜಾನೇ ಮಜಾ.


ಕಾಡಿನಲ್ಲಿ ಯಾವುದೋ ದೊಡ್ಡ ಬಂಡೆಯನ್ನು ತೋರಿಸಿ ಸುನಿಲ ‘ಇದು ಹುಲಿಯ ಗುಹೆಯಾಗಿತ್ತು’ ಅಂದ್ರೆ ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಈ ಮರದಲ್ಲಿ ಮೋಹಿನಿ ದೆವ್ವ ಇದೆ ಅಂತಲೂ ಹೆದರಿಸುತ್ತಿದ್ದ. ಕ್ಲಾಸ್‌ ಮುಗಿದ ಕ್ಷಣ ನಾನು ಮತ್ತು ಸುನಿಲ ಕಾಡಿಗೆ ಓಡುತ್ತಿದ್ದೇವು. ಅಲ್ಲಿ ನೆಲ್ಲಿಕಾಯಿ ಕಾರೆಕಾಯಿ ಅಂತ ಸಿಕ್ಕಿಸಿಕ್ಕಿದನ್ನು ತಿನ್ನುತ್ತಿದ್ದೇವು. ಕಾಡಿನಲ್ಲಿ ಜೇನು ಹಿಡಿಯೋ ನಾರ್ಣ ಸಿಕ್ಕದರೆ ಮುಗೀತು.ಮತ್ತೆ ಅವನೊಂದಿಗೆ ಕತ್ತಲಾಗುವ ತನಕ ಕಾಡು ಸುತ್ತುತ್ತಿದ್ದೇವು.


ನಾರ್ಣನಿಗೆ ಒಂದು ಜೇನು ಹುಳ ಕಣ್ಣಿಗೆ ಬಿದ್ದರೆ ಸಾಕು. ಅದರ ಹಿಂದೆಯೇ ಸಾಗಿ ಜೇನು ಗೂಡಿನ ಜಾಡು ಹಿಡಿಯುತ್ತಿದ್ದ. ಇವನ ತಾಯಿ ಅಯ್ತೆ ತೋಡಿನ ಬದಿಯಲ್ಲಿ ಕುಳಿತುಕೊಂಡು ಏಡಿಯ ಪುಟ್ಟ ಗುಹೆಯೊಳಗೆ ಕೈಹಾಕಿ ಏಡಿ ಹಿಡಿಯುವುದನ್ನು ನಾವು ನೋಡಿ ಆಶ್ಚರ್ಯಗೊಳ್ಳುತ್ತಿದ್ದೇವು. ಕಾಡಿನಲ್ಲಿ ಸಂಗ್ರಹಿಸಿದ ಸೀಗೆಕಾಯಿಗಳನ್ನು ನನ್ನ ಮನೆಯ ಪಕ್ಕದಲ್ಲಿದ್ದ ಅಜ್ಮೀರ್‌ನ ಅಂಗಡಿಗೆ ಮಾರುತ್ತಿದ್ದೇವು. ಆತ ನೀಡಿದ ಚಿಲ್ಲರೆ ಹಣದಲ್ಲಿ ತಪ್ಪದೆ ತಿಂಡಿ, ಐಸ್‌ಕ್ಯಾಂಡಿ ತಿನ್ನುತ್ತಿದ್ದೇವು.


ಅಜ್ಮೀರ್‌ ಅಂದಾಗ ನೆನಪಾಯಿತು. ನಾನು ಚಿಕ್ಕದಾಗಿರುವಾಗ ಕಿಸೆಯಲ್ಲಿ ಅಡಕೆ ತುಂಬಿಸಿಕೊಂಡು ಬಂದು ಇವನಿಗೆ ಮಾರುತ್ತಿದ್ದೆ. ಆತ ಒಂದೆರಡು ದಿನ ಸುಮ್ಮನಿದ್ದ. ಕೊನೆಗೆ ಅಜ್ಜನಿಗೆ ಕಂಪ್ಲೇಟ್‌ ಕೊಡೋದ?. ಅಜ್ಜ ಬೈರವನಂತೆ ದೊಣ್ಣೆ ಹಿಡಿದು ಬಂದಿದ್ದರು. ಮನೆಗೆ ಕರೆದುಕೊಂಡು ಹೋಗಿ ಕಳ್ಳತನ ಮಾಡಬಾರದೆಂದು ತುಂಬಾ ಬುದ್ದಿವಾದ ಹೇಳಿದ್ದರು. ಅಜ್ಜ ಅಂದರೆ ಅಜಾನುಬಾಹು ವ್ಯಕ್ತಿತ್ವ. ಹಳ್ಳಿ ಮದ್ದು ಕೊಡುವುದರಲ್ಲಿ ಹೆಸರುವಾಸಿಯಾಗಿದ್ದರು. ಪಾಡ್ದನ, ಸಂದಿ ಅಂತ ಅವರಿಗೆ ತಿಳಿಯದ ವಿಷಯವಿರಲ್ಲಿಲ್ಲ. ಅಜ್ಜ ನಮಗೊಂದು ಅಚ್ಚರಿಯಾಗಿದ್ದರು.


ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ. ಈಗೀಗ ನನಗೆ ಗೆದ್ದಲು ಹುಳುಗಳ ಮೇಲೆ ವಿಪರೀತ ಸಿಟ್ಟು ಬರುತ್ತಿದೆ. ನನ್ನ ಅಜ್ಜನಂತೆ ದೊಡ್ಡ ನೆಲ್ಲಿಕಾಯಿ ಮರ ಕೂಡ ಧರೆಗುರುಳಿದೆ. ಊರಿಗೆ ಹೋದಾಗ ಪ್ರೈಮರಿಯ ಮಕ್ಕಳು ನಮ್ಮನ್ನು ಅಚ್ಚರಿಗಣ್ಣಿನಿಂದ ನೋಡುತ್ತಾರೆ. ನನಗೆ ಅವರನ್ನು ನೋಡುವಾಗ ಅಸೂಯೆಯಾಗುತ್ತದೆ. ಬಾಲ್ಯವೆಂಬುದು ನೆನಪುಗಳ ಅಕ್ಷಯ ಪಾತ್ರೆ. ಅದು ಖಾಲಿಯಾಗುವುದೇ ಇಲ್ಲ. ದೊಡ್ಡಾದಾಗುತ್ತ ಬಂದಂತೆ ಊರು ಅಚ್ಚರಿಯಾಗಿ ಉಳಿಯಲ್ಲಿಲ್ಲ. ಪ್ರತಿಯೊಬ್ಬರಲ್ಲೂ ಬಾಲ್ಯದ ಅಕ್ಕರೆಯ ಸಕ್ಕರೆಯ ನೆನಪಿರುತ್ತದೆ. ಯಾಕೋ ಶೇಷಮ್ಮ ಟೀಚರ್‌ನಲ್ಲಿ ಮಾತನಾಡಿದ ನಂತರ ಮನದ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ನೆನಪುಗಳು ಮತ್ತೆ ಕಾಡತೊಡಗಿವೆ.

ಪ್ರವೀಣ ಚಂದ್ರ ಪುತ್ತೂರು

Monday, 14 November 2016

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.


 

Published in VK Mini

Thursday, 20 October 2016

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

"ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ' ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. "ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ" ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ.


"ಇವತ್ತು ಡೇಟ್ ಎಷ್ಟು?' ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  "ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು' ಎಂದಿತ್ತು. ಸಮಯ ಹೋಗೋದೇ ಗೊತ್ತಾಗ್ತ ಇಲ್ಲ. ರಾಮ ರಾಮ' ಎಂದೆ. ಅದನ್ನೇ ಕಮಾಂಡ್ ಎಂದುಕೊಂಡ ರೋಬೊ "ರಾಮ ರಾಮ ಜಯರಾಮ, ರಘುರಾಮ' ಎಂದು ರಾಮ ಶ್ಲೋಕ ಹಾಡತೊಡಗಿತು. ಸ್ವಲ್ಪ ಹೊತ್ತು ಕೇಳುತ್ತ ಕುಳಿತೆ.


ಸರಿ, ಬಾತ್ ರೂಂಗೆ ಹೋಗಿ ಬರೋಣ ಎಂದು ಎದ್ದೆ. ಜೊತೆಗೆ ರೋಬೊನೂ ಬಂತು. "ಶೀ, ನೀನು ಹೊರಗೆ ಇರಪ್ಪ' ಎಂದೆ. "ನಿಮ್ಮ ಸೇವೆ ನನ್ನ ಕರ್ತವ್ಯ' ಎಂದು ಒಳಗೆ ಬಂತು. ಪ್ರತಿದಿನ ಇದೇ ಡೈಲಾಗ್ ಎಂದುಕೊಂಡು ಕುಳಿತುಕೊಂಡೆ. "ಸರಿಯಾದ ಪೊಸಿಷನ್ ನಲ್ಲಿ ಕುಳಿತುಕೊಳ್ಳಿ' ಆಜ್ಞಾಪಿಸಿತು. ಅದು ಹೇಳಿದಂತೆ ಕೇಳದೆ ಬೇರೆ ವಿಧಿಯಿಲ್ಲ. "ರೋಬೊ ಇಂಡಿಯಾ" ಪರಿಕಲ್ಪನೆ ಸರಿಯಾಗಿ ಜಾರಿಯಾಗಿದೆ ಎಂದುಕೊಂಡೆ.


'ಯಾವ ಪೇಪರ್ ಓದಲು ಇಷ್ಟಪಡುವಿರಿ' ಅದೇ ಮಾಮೂಲಿ ಡೈಲಾಗ್. ಇದನ್ನು ಪ್ರೋಗ್ರಾಮ್ ಮಾಡಿದವ ಸಿಕ್ಕರೆ ಸಾಯಿಸಿಬಿಡುತ್ತಿದ್ದೆ. "ಮರ್ಡರ್ ಬಗ್ಗೆ ಯೋಚನೆ ಮಾಡುವುದು ಅಪರಾಧ' ಎಂದಿತು ರೋಬೊ. ಇದಕ್ಕೆ ಮೈಂಡ್ ರೀಡಿಂಗ್ ಸಹ ಗೊತ್ತು. ಇನ್ನೊಮ್ಮೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೋ ಏನೋ.


"ಪೇಪರ್ ಆಮೇಲೆ ಓದ್ತಿನಿ. ಕನ್ನಡ ಚಿತ್ರಗೀತೆ ಹಾಕಪ್ಪ' ಅಂದೆ. ತಕ್ಷಣ ಅದು ಯಾವುದೋ ಹಾಡು ಹಾಕಿತು. ನಾನು ಬೇಡವೆಂದು ತಲೆಯಾಡಿಸಿದರೆ ಬೇರೆ ಹಾಡುಬರುತ್ತಿತ್ತು. ಈಗ ಕನ್ನಡ ಹಾಡುಗಳಲ್ಲಿ ಕನ್ನಡ ಪದ ಹುಡುಕಬೇಕು ಎಂದು ಗೊಣಗಿದೆ. ಅದಕ್ಕೆ ರೋಬೊ "ಪ್ಲೀಸ್ ರಿಪೀಟ್ ಯುವರ್ ಕಮಾಂಡ್' ಅಂತು. "ಏನಿಲ್ಲ ಮುಗೀತು' ಅಂದೆ. ಅದು ಟಿಶ್ಯು ತಂದುಕೊಡ್ತು. ಟಾಯ್ಲೆಟ್ ನಲ್ಲಿ ನೀರು ಬಳಸುವುದು ಅಪರಾಧ ಅಂತ ಗ್ಲೋಬಲ್ ಐಟಿ ಕೋರ್ಟ್ ಬೇರೆ ಇತ್ತೀಚೆಗೆ ತೀರ್ಪು ನೀಡಿದೆ. .


ಅಲ್ಲಿಂದ ಹೊರಗೆ ಬಂದೆ. ರೋಬೊ ಅಲ್ಲೇ ಪಕ್ಕದಲ್ಲಿದ್ದ ಮೆಷಿನ್ ಒಳಗಿನಿಂದ ಒಂದು ಲೋಟ ಚಹಾ ತಂದುಕೊಡ್ತು. ಕುಡಿದಾಗ ಹಾಯೆನಿಸಿತ್ತು. "ಏನಪ್ಪ ಇವತ್ತಿನ ಸುದ್ದಿ?" ಅಂದೆ. ರೋಬೊ ಕೈಬೆರಳಿನಿಂದ ಬೆಳಕು ಹೊರಗೆ ಬಂದು ಗೋಡೆ ಮೇಲೆ ಬಿತ್ತು. ನೂರಾರು ಇಂಗ್ಲಿಷ್ ಪೇಪರ್ ಗಳ ಹೆಸರು ಪಟಪಟನೆ ಮೂಡಿದವು. ಕನ್ನಡ ಪೇಪರ್ ಅಂದ್ರೆ ಈ ರೋಬೊಗೂ ತಾತ್ಸಾರ. ವಿಜಯ ಕರ್ನಾಟಕ ಹಾಕಪ್ಪ ಅಂದೆ. ಸ್ವಲ್ಪ ಸ್ಲೋ ಆಗಿ ಲೋಡ್ ಆಯ್ತು. ಕನ್ನಡ ಪೇಪರ್ ಗಳೆಲ್ಲ ಸ್ಲೋ ಆಗಿಯೇ ಲೋಡ್ ಆಗೋದು. ಅದು ಈ ರೋಬೊ ಕುತಂತ್ರ ಆಗಿರಬೇಕು.


ವಿಜಯ ಕರ್ನಾಟಕ ಗೋಡೆ ಮೇಲೆ ಮೂಡಿತು. ರಾಜ್ಯದಲ್ಲಿ ವೈಫೈ ಉಚಿತ ಅಂತ ಮುಖ್ಯಮಂತ್ರಿ ಘೋಷಣೆ ಮಾಡಿದ್ರು. ಅಕ್ಕಿ ಬೆಲೆ ಇಳಿಕೆ ಎಂದಿತ್ತು. ಅದನ್ನು ನೋಡಿ ಖುಷಿಯಾಯ್ತು. ಒಂದು ಕೇಜಿ ಅಕ್ಕಿ ದರ 12 ಸಾವಿರಕ್ಕೆ ಇಳಿದಿತ್ತು. ಕೆಲವು ದಿನದ ಹಿಂದೆ ಅಕ್ಕಿ ರೇಟ್ ಕೇಜಿಗೆ 18 ಸಾವಿರ ರೂ. ಇತ್ತು. ದುಡ್ಡಿಗೆ ಬೆಲೆ ಇಲ್ಲ. ಒಂದೊಂದು ಸುದ್ದಿನ ನೋಡಿದಾಗ ಅದು ಝೂಮ್ ಆಗುತ್ತಿತ್ತು. ಏನೋ ಗೆಶ್ಚರ್ ಟೆಕ್ನಾಲಜಿಯಂತೆ. ನಾನು ದೂರದಿಂದಲೇ ಕೈಯಾಡಿಸಿದರೆ ಸುದ್ದಿ ಬೇಕಾದಂತೆ ಬದಲಾಗುತ್ತಿತ್ತು. ನಾನು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗಿರಲಿಲ್ಲ. ಚೆನ್ನಾಗಿ ಹತ್ತಿಪ್ಪತ್ತು ಪುಟಗಳ ಪೇಪರ್ ಬರುತ್ತಿತ್ತು. ಈಗ ಪೇಪರ್ ಕತೆ ಹೇಳಿದರೆ ಮಗ ನಗುತ್ತಾನೆ. ಈಗ ಅದೇ ವಿನ್ಯಾಸದ ಪೇಪರ್ ಗೋಡೆ ಮೇಲೆ ಮೂಡುತ್ತದೆ.


ಸರಿ, ನಾನು ವಾಕಿಂಗ್ ಹೋಗಿ ಬರ್ತಿನಿ ಅಂತ ಎದ್ದು ಹೋದೆ. ಓಕೆ ಅಂತ ಹೇಳಿತು ರೋಬೊ. ಸದ್ಯ ಇದರ ಸಹವಾಸ ತಪ್ಪಿತು ಅಂತ ಹೊರಗೆ ಬಂದೆ. ಹೆಸರಿಗಷ್ಟೇ ಪಾರ್ಕ್. ಎಲ್ಲವೂ ಗಿಡಗಳ ಕಾಂಕ್ರಿಟ್  ಕಲಾಕೃತಿಗಳು. ಒಂದೆಡೆ ಆಮ್ಲಜನಕ ಸಿಂಪಡಣೆ ಬೇರೆ. ಕೈನಲ್ಲಿದ್ದ ವಾಚ್ ವೈಬ್ರೆಟ್ ಆಯ್ತು. ಪಾರ್ಕ್ ಬೆಂಚ್ ಮೇಲೆ ವಾಚ್ ಪೋಕಸ್ ಮಾಡಿದೆ. ಅಲ್ಲಿ ಮೂಡಿದ ಪರದೆ ಮೇಲೆ ಗೆಳೆಯ ಸೂರ್ಯ ಇದ್ದ. ಅವನು ಆಗಾಗ ಚಾಟಿಂಗ್ ಗೆ ಬರುತ್ತಾನೆ. ಆತ ನನ್ನ ಕ್ಲಾಸ್ ಮೇಟ್. ನಾನು ವಿಜಯ ನೆಕ್ಸ್ಟ್ ವೀಕ್ಲಿಯಲ್ಲಿದ್ದಾಗ ಅವನು ಪ್ರಜಾವಾಣಿಯಲ್ಲಿದ್ದ.


"ಹೇ, ದನಿಕುಲೆ, ದಾನೆ ಮಾರಾಯ ಸುದ್ದಿನೇ ಇಜ್ಜಿ(ಏನು ಧನಿಗಳೇ ಸುದ್ದಿನೇ ಇಲ್ಲ)' ಅಂದ. "ಎಂಚಿ ಸಾವು ಮಾರೆ, ಬೋರ್ ಲೈಫ್' ಅಂದೆ. ಹೆಚ್ಚಾಗಿ ನಾವು ತುಳುವಿನಲ್ಲೇ ಮಾತಾಡೋದು. ತುಳು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ರೋಬೊ ಇನ್ನೂ ಬಂದಿಲ್ಲ. ರೋಬೊ ಭಾಷೆಗೆ ತುಳುವನ್ನು ಸೇರಿಸಬೇಕು ಎಂದು ದೆಹಲಿಯಲ್ಲಿ ಈಗಲೂ ಹೋರಾಟ ನಡೆಯುತ್ತಲೇ ಇದೆ.


ನಾವು ತುಳುವಿನಲ್ಲೇ ಮಾತು ಮುಂದುವರೆಸಿದೆವು. ಅದರ ಕನ್ನಡ ಅನುವಾದ ಹೀಗಿದೆ. "ಸೂರ್ಯ ನಿನ್ನ ಮಗ ಮಾರ್ಸ್ ನಿಂದ ಯಾವಾಗ ವಾಪಸ್ ಬರ್ತಾನೆ' ಎಂದೆ. "ಅವನನ್ನು ಬಿಡಪ್ಪ. ಅಲ್ಲೇ ಹೋಗಿ ಸೆಟ್ಲ್ ಆದರೂ ಆದನು' ಎಂದ. ಸೂರ್ಯನ ಮಗ ನಾಸಾದಲ್ಲಿ ಕೆಲಸ ಮಾಡೋದು. ಒಮ್ಮೆ ಮಾರ್ಸ್, ಒಮ್ಮೆ ಲೂನಾರ್ಸ್ ಅಂತ ವರ್ಷಕ್ಕೆ ಎರಡು ಬಾರಿ ಟ್ರಿಪ್ ಹೋಗ್ತಾ ಇರ್ತಾನೆ. "ನನ್ನನ್ನೂ ಲೂನಾರ್ಸ್ ಗೆ ಕರ್ಕೊಂಡು ಹೋಗ್ತಾನಂತೆ' ಎಂದು  ಸೂರ್ಯ. "ನೀನು ಬಿಡಪ್ಪ ನಿನ್ನ ಹೆಸರೇ ಸೂರ್ಯ, ಎಲ್ಲಾ ಗ್ರಹಗಳು ನಿನ್ನ ಸುತ್ತ ಸುತ್ತುತ್ತಿವೆ' ಅಂದೆ. "ಹ್ಹ ಹ್ಹ ಹ್ಹ' ಗಹಿಗಹಿಸಿ ನಕ್ಕ' ಅವನ ನಗುವೇ ಹಾಗೆ. ಕ್ಲಾಸಲ್ಲಿ ಪಾಠ ನಡೆಯುವಾಗಲೂ ಹೀಗೆ ಅಟ್ಟಹಾಸ ಮಾಡುತ್ತಿದ್ದ.


"ವಿಷ್ಯ ಗೊತ್ತಾಯ್ತ' ಅವನು ಬ್ರೇಕಿಂಗ್ ನ್ಯೂಸೊಂದು ಹೇಳಿದ. "ಗ್ಯಾಲಾಕ್ಸಿಯಲ್ಲಿ ತುಂಬಾ ನೀರಿರುವ ಒಂದು ಗ್ರಹ ಸಿಕ್ಕಿದೆಯಂತೆ. ಇಲ್ಲಿರುವ ಎಲ್ಲಾ ಓಲ್ಡ್ ಪೀಪಲ್ ಗಳನ್ನು ಅಲ್ಲಿಗೆ ಕಲಿಸ್ತಾರಂತೆ. ನಾಸಾದಲ್ಲಿ ಈ ಪ್ರಾಜೆಕ್ಟ್ ನಡೀತಾ ಇದೆ. ನಾವೇಲ್ಲ ಬೇಗ ಆ ಗ್ರಹಕ್ಕೆ ಹೋಗೋದು ಗ್ಯಾರಂಟಿ' ಅಂದ.


ಯಾರು ಬೇಕಾದರೂ ಹೋಗ್ಲಿ. ನಾನು ಮಾತ್ರ ಪುತ್ತೂರಲ್ಲೇ ಸಾಯೋದು ಅಂದೆ. ಮತ್ತೆ ಹ್ಹ ಹ್ಹ ಎಂದು ನಕ್ಕ ಸೂರ್ಯ "ಸರಿ, ನಾನು ಆಮೇಲೆ ಸಿಗ್ತಿನಿ. ರೋಬೊ ವಿಶ್ವಕಪ್ ಫುಟ್ಬಾಲ್ ನೋಡ್ಬೇಕು' ಅಂತ ಹೇಳಿ ಮರೆಯಾದ.


ಕತೆ ತುಂಬಾ ಉದ್ದ ಆಯ್ತು. ಸದ್ಯ ಇಷ್ಟು ಸಾಕು ;-).

Friday, 30 September 2016

ಪ್ರಭಾ

ಪ್ರಭಾ

ಪ್ರಭಾ…

`ಎಲ್ಲಿಗೆ ಮೇಡಂ` ಕಂಡೆಕ್ಟರ್‌ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್‌ ನೀಡಿದ ಚಿಲ್ಲರೆಯನ್ನು ಪರ್ಸ್‌ಗೆ ತುಂಬಿಕೊಂಡವಳ ಮನಸ್ಸು ಚಡಪಡಿಸುತ್ತಿತ್ತು. ನಾನು ಕೆಲಸ ಬಿಟ್ಟು ಬಂದೆ ಅಂದರೆ ಅಮ್ಮ ಏನು ಹೇಳಬಹುದು. ಅಪ್ಪನ ಮುಖ ಸಪ್ಪೆಯಾಗಬಹುದಾ? ಎರಡು ವರ್ಷದ ಹಿಂದೆ ಎಷ್ಟು ಆರಾಮವಾಗಿದ್ದೆ. ಯಾರಿಗೆ ಬೇಕು ಬೆಂಗಳೂರು ಥೂ!

***

ಅವಳು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, ಅನುಭವ ಎಲ್ಲವೂ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚೇ ಸಿಕ್ಕಿದೆ. ಓದಿದ್ದು ಎಂಸಿಎ. ಕ್ಯಾಂಪಸ್‌ನಲ್ಲಿಯೇ ಪ್ರತಿಷ್ಠಿತ ಕಂಪನಿಗೆ ಸೆಲೆಕ್ಟ್‌ ಆಗಿದ್ದಳು. ತಿಂಗಳಿಗೆ ಹತ್ತುವರೆ ಸಾವಿರ ರೂ. ಸಂಬಳ ಇತ್ತು. ಸುಮ್ಮನೆ ಯಾಕೆ ಮನೆಯಲ್ಲಿ ಟೈಂವೇಸ್ಟ್‌ ಮಾಡುವುದು ಅಂತಲೂ ಅನಿಸಿತ್ತು. ಇವಳ್ಯಾಕೆ ಬೆಂಗಳೂರಿಗೆ ಹೋಗಬೇಕು ಅಂತಾ ಅಮ್ಮ ತಡೆದರೂ ಅನುಭವ ಆಗಲಿ ಅಂತ ಅಪ್ಪ ಓಕೆ ಎಂದಿದ್ದರು.

***

ಊರಿನಲ್ಲಿ ಓದು, ಭರತನಾಟ್ಯ, ಕ್ರೀಡೆ ಎಲ್ಲದರಲ್ಲೂ ಅವಳೇ ಫಸ್ಟ್‌. ಊರಿನವರಿಗಂತೂ ಪ್ರಭಾ ಎಂದರೆ ಅಚ್ಚುಮೆಚ್ಚು. ತುಂಬಾ ಮುಗ್ಧ ಹುಡುಗಿ. ಮೊದಲ ಸಲ ಬೆಂಗಳೂರಿನ ಬಸ್‌ ಏರಿದಾಗ ನೆರೆಮನೆಯ ಯಮುನಕ್ಕನ ಕಣ್ಣ ತುಂಬಾ ನೀರು. ಗೆಳತಿಯರಾದ ಸವಿತ, ರೇಖಾ, ಕವಿತ ಇವರೆಲ್ಲರ ಮುಖ ಕೂಡ ನೋಡುವಂತಿರಲ್ಲಿಲ್ಲ. ಊರಲ್ಲೇ ಟ್ರೈಮಾಡಿದ್ದರೆ ಟೀಚಿಂಗ್‌ ಕೆಲಸ ಸಿಗುತ್ತಿತ್ತು. ಇವಳಿಗೆ ಮನಸ್ಸಿರಲ್ಲಿಲ್ಲ. ಹಾಗಂತ ಇಷ್ಟು ಓದಿದ ತಪ್ಪಿಗೆ ಊರಲ್ಲಿ ಇರುವಂತಿಲ್ಲ. ಸ್ನಾತಕೋತ್ತರ ಪದವಿಗಾಗಿ ಬ್ಯಾಂಕ್‌ನಿಂದ ಸಾಲ ಬೇರೆ ಮಾಡಿಯಾಗಿದೆ. ಅನಿವಾರ್ಯವಾಗಿ ಮುಗ್ಧ ಮುಖದಲ್ಲಿ ದುಗುಡ ತುಂಬಿಕೊಂಡು ಬೆಂಗಳೂರು ಬಸ್ಸು ಹತ್ತಿದ್ದಳು. ಗೊತ್ತು ಗುರಿ ಇಲ್ಲದ ಊರಲ್ಲಿ ಒಬ್ಬಳೇ ಏನು ಮಾಡುವುದು. ಅದಕ್ಕೆ ಅಮ್ಮನೇ ಪರಿಹಾರ ನೀಡಿದ್ದಳು.  ಅಮ್ಮನ ದೂರದ ಸಂಬಂಧಿ ನಿಶಾಂತ್‌ ಬೆಂಗಳೂರಿನಲ್ಲಿದ್ದ. ಅವನೇ ಇವಳನ್ನು ಯಾವುದಾದರೂ ಲೇಡಿಸ್‌ ಹಾಸ್ಟೇಲ್‌ಗೆ ಸೇರಿಸುವ ಭರವಸೆ ನೀಡಿದ್ದ. ಇವಳಿಗಿಂತ ಒಂದು ವರ್ಷ ದೊಡ್ಡವ. ಬಾಲ್ಯದಲ್ಲಿ ಒಂದೆರಡು ಬಾರಿ ಅವನ ಮನೆಗೆ ಹೋಗಿ ಅವನೊಂದಿಗೆ ಆಟವಾಡಿದ ನೆನಪೂ ಅವಳಿಗಿದೆ. ಎಂಬಿಎ ಮುಗಿಸಿ ಕೈತುಂಬಾ ಸಂಪಾದಿಸುತ್ತಿದ್ದ.

***

ಅವಳು ಮೊದಲನೇ ದಿನವೇ ಬೆಂಗಳೂರನ್ನು ಬೆರಗುಗಣ್ಣಿನಿಂದಲೇ ನೋಡಿದಳು. ಇಲ್ಲಿನ ಗಿಜಿಗುಟ್ಟುವ ಜನ, ಟ್ರಾಫಿಕ್‌, ಆಧುನಿಕತೆ, ಅಪರಿಚಿತತೆ ಎಲ್ಲವೂ ಅವಳಲ್ಲಿ ಅವ್ಯಕ್ತ ನೋವು ಉಂಟು ಮಾಡಿದ್ದು ಸುಳ್ಳಲ್ಲ. ಬಸ್‌ಸ್ಟಾಂಡ್‌ನಲ್ಲಿ ನಿಶಾಂತ ಕಾಯುತ್ತಿದ್ದ. ಅವನ ಬೈಕ್‌ನಲ್ಲಿ ಸೀದಾ ಆತನ ಮನೆಗೆ ಕರೆದುಕೊಂಡು ಹೋದ. ಇವನು ರೂಂಗೆ ಕರೆದುಕೊಂಡು ಬಂದದ್ದನ್ನು ನೋಡಿ ಭಯದಿಂದ ನೋಡಿದವಳಿಗೆ ‘ಇವತ್ತು ಸಂಜೆ ತನಕ ಇಲ್ಲೇ ಇರು. ನನ್ನ ಆಫೀಸ್‌ನಲ್ಲಿರುವ ಮೇಡಂಗಳಲ್ಲಿ ವಿಚಾರಿಸಿ ಒಳ್ಳೆಯ ಹಾಸ್ಟೇಲ್‌ಗೆ ಸೇರಿಸ್ತಿನಿ’ ಅಂದ. ಬಕೆಟ್‌ನಲ್ಲಿ ಕ್ವಾಯಿಲ್‌ ಹಾಕಿ ಬಂದು ಯಾರ್ಯಾರಿಗೋ ಫೋನ್‌ ಮಾಡಿದ. ನೀರು ಬಿಸಿಯಾಗಿದೆ ಸ್ನಾನ ಮಾಡಿ ಬಾ ಅಂತ ಟವಲ್‌ ಕೊಟ್ಟು ಕಳುಹಿಸಿದ. ಇವಳು ಸ್ನಾನ ಮಾಡಿಬಂದಾಗ ಅವನು ಉಪ್ಪಿಟ್ಟು ರೆಡಿ ಮಾಡಿಟ್ಟಿದ್ದ. ಉಪ್ಪಿಟ್ಟು ರುಚಿಯಾಗಿತ್ತು. 10 ಗಂಟೆಯಾಗುತ್ತಿದ್ದಂತೆ ಅವನು ಆಫೀಸ್‌ಗೆ ಸಿದ್ದನಾಗಿ ಮನೆಯ ಕೀಯನ್ನು ಅವಳಲ್ಲಿ ನೀಡಿ. ಬೋರಾದರೆ ಕಂಪ್ಯೂಟರ್‌ ಆನ್‌ ಮಾಡು. ಮದ್ಯಾಹ್ನ ಊಟಕ್ಕೆ ಹೊರಗಡೆ ಹೋಗು ಎಂದಾಗ ಇವಳು ಉಳಿದಿರುವ ಅಷ್ಟು ಉಪ್ಪಿಟ್ಟನ್ನು ನೋಡಿ ಬೇಡಾ ಇದನ್ನೇ ತಿನ್ತಿನಿ ಅಂದಳು. ಅವನು ಮುಗುಳ್ನಗುತ್ತ ಹೊರಗೆ ಹೋದ. ಮನೆಯವರೊಂದಿಗೆ ಫೋನ್‌ ಮಾಡಿ ತುಂಬಾ ಮಾತನಾಡಿ ಬೆಂಗಳೂರನ್ನು ವಿವರಿಸತೊಡಗಿದಳು. ಕಂಪ್ಯೂಟರ್‌ನಲ್ಲಿದ್ದ ಹಾಡುಗಳನ್ನು ಕೇಳತೊಡಗಿದಳು. ನಿಶಾಂತ ಒಳ್ಳೆ ಹುಡುಗ ಅಂತ ಅವಳಿಗೆ ಅನಿಸಿತು. ರೂಮ್‌ನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾನೆ. ಟೆಲಿವಿಷನ್‌ ಮಾತ್ರ ಇಲ್ಲ. ಕಂಪ್ಯೂಟರ್‌, ಗೋಡೆಯಲ್ಲಿನ ಚಿತ್ರಗಳು ಎಲ್ಲವೂ ಅವಳಿಗೆ ಇಷ್ಟವಾದವು.

ಮನೆಯವರ ನೆನಪು ಕಾಡತೊಡಗಿದಾಗ ಫೋನ್‌ ಮಾಡಿದಳು. ಎಲ್ಲರ ಪ್ರೀತಿಯ ಮಾತುಗಳನ್ನು ಕೇಳಿದಾಗ ಊರಲ್ಲೇ ಇದ್ದರೆ ಎಷ್ಟು ಒಳ್ಳೆಯದ್ದಿತ್ತು ಅಂತ ಅವಳಿಗೆ ಅನಿಸಿತು. ಹಾಡು ಕೇಳಿ ಬೋರಾಯಿತು. ಅದರಲ್ಲಿ ಇಂಗ್ಲಿಷ್‌ ಸಿನಿಮಾಗಳೇ ತುಂಬಿಕೊಂಡಿದ್ದವು. ಹೆಸರಿಲ್ಲದ ಒಂದು ಫೈಲ್‌ನ್ನೂ ಆನ್‌ ಮಾಡಿದಾಗ ತಬ್ಬಿಬ್ಬಾದಳು. ಅದರಲ್ಲಿ ಬ್ಲೂಫಿಲ್ಮ್‌ಗಳ ದೊಡ್ಡ ರಾಶಿಯೇ ತುಂಬಿಕೊಂಡಿತ್ತು. ನೋಡುವ ಕುತೂಹಳವಾದರೂ ಕ್ಲೋಸ್‌ ಮಾಡಿದಳು. ಥೂ ಈ ನಿಶಾಂತನೂ ಇಂತವನೇ. ಊರಿನಲ್ಲಿ ಎಷ್ಟು ಒಳ್ಳೆಯ ಹುಡುಗನಾಗಿದ್ದ ಅಂತ ಅಂದುಕೊಂಡಳು.

***

ಸಂಜೆ ಬಂದ ನಿಶಾಂತ ಇವಳನ್ನು ಯಾವುದೋ ಹಾಸ್ಟೇಲ್‌ಗೆ ಕರೆದೊಯ್ದ. ಹಾಸ್ಟೇಲ್‌ನ ಪುಟ್ಟ ಕೋಣೆಯಲ್ಲಿ ಕುಳಿತಾಗ ಊರು, ಗೆಳೆಯ ಗೆಳತಿಯರು, ಕಾಡು, ನಾಯಿ ಬೆಕ್ಕು ದನ ಕರುಗಳೂ ಎಲ್ಲವೂ ನೆನಪಾಯಿತು. ರಾತ್ರಿಯಾದಗ ಇವಳಿದ್ದ ರೂಮ್‌ಗೆ ಮತ್ತೊಬ್ಬಳು ಬಂದಳು. ಐಟಿ ಕಂಪನಿಯಲ್ಲಿ ಕೆಲಸವಂತೆ ಇವಳ ಮುಗ್ಧಮುಖವನ್ನು ಒಂದು ತರಹಾ ನೋಡಿ ಹಾಯ್‌ ಐಹ್ಯಾಮ್‌ ನಮ್ರತಾ ಅಂತಾ ಕೈಕೊಟ್ಟಳು. ಸ್ವಲ್ಪಹೊತ್ತಾದರೂ ಅವಳು ಕೈ ಬಿಡಿಸದೇ ಇದ್ದಾಗ ಇವಳೇ ಬಿಡಿಸಿಕೊಂಡು ಐ ಏಮ್‌ ಪ್ರ..ಭಾ ಅಂತಾ ಉಗುಳು ನುಂಗುತ್ತ ಹೇಳಿದ್ದಳು. ಅವಳು ಒಂದಿಷ್ಟು ತೂರಾಡುವುದನ್ನು ನೋಡಿದಾಗ ಇವಳು ಕುಡಿದಿರುವುದು ಪ್ರಭಾಳಿಗೆ ಖಾತ್ರಿಯಾಗಿ ನಗರದ ಬಗೆಗಿನ ತಿರಸ್ಕಾರ ಮತ್ತಷ್ಟು ಹೆಚ್ಚಾಯಿತು. ತಿರಸ್ಕಾರದೊಂದಿಗೆ ನಗರದ ಕುರಿತು ಅಸಹ್ಯ ಮೂಡಿದ್ದು ರಾತ್ರಿ ಮಲಗಿದಾಗ ನಮ್ರತಾ ಇವಳ ಎದೆಗೆ ಕೈ ಹಾಕಿದಾಗ! ಪ್ರಭಾ ಭಯದಿಂದ ಮೂಲೆಯಲ್ಲಿ ಹೋಗಿ ಕುಳಿತುಕೊಂಡಳು. ಏನೋ ಗೊಣಗುತ್ತಿದ್ದ ಅವಳು ನಿದ್ದೆ ಹೋದದ್ದನ್ನು ಖಾತ್ರಿ ಪಡಿಸಿಕೊಂಡ ನಂತರ ಬೆಡ್‌ನ ಮೂಲೆಯಲ್ಲಿ ಮುದುಡಿಕೊಂಡಳು. ಎಲ್ಲಿಯ ನಿದ್ದೆ!

ಮುಂಜಾನೆ ಎದ್ದವಳೇ ನಿಶಾಂತನಿಗೆ ಫೋನ್‌ ಮಾಡಿ ಬಡಬಡಿಸಿದಳು. ಅವನು ಹಾಸ್ಟೇಲ್‌ನ ಓನರ್‌ಗೆ ಫೋನ್‌ ಮಾಡಿ ಬೇರೆ ರೂಂಗೆ ಶಿಫ್ಟ್‌ ಮಾಡಿಸಿದ.

**

ಮರುದಿನ ಆಫೀಸ್‌ಗೆ ಹೋಗಿ ಬಂದಳು. ಹೀಗೆ ಹಾಸ್ಟೇಲ್‌, ಆಫೀಸ್‌ ಅಂತ ದಿನಗಳುರಿದವು. ಹಣದ ರುಚಿಯೂ ಹಿಡಿಯಿತು. ಹಣ ನೀರಿನಂತೆ ಖರ್ಚಾಗುವುದನ್ನು ಕಂಡು ಬೆಚ್ಚಿದಳು. ಒಂದು ಸಾರಿ ಬಸ್‌ನಲ್ಲಿ ಇವಳ ಪರ್ಸ್‌ ಕಳುವಾಗಿ ಒಂದೆರಡು ಸಾವಿರ ಕಳೆದುಕೊಂಡಿದ್ದಳು.

ಒಂದು ಸಾರಿ ಇವಳಿಗೆ ಜ್ವರ ಬಂದಾಗ ರೂಂನಲ್ಲಿ ಗೀತಾ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅವಳಿಗೆ ಟೈಫಾಯಿಡ್‌ ಜ್ವರ ಬಂದ ಕಾರಣ ಕುಡಿಯುವ ನೀರು, ಸೇವಿಸುವ ಆಹಾರದ ಕುರಿತು ಎಚ್ಚರದಿರುವಂತೆ ಡಾಕ್ಟರ್‌ ಹೇಳಿದ್ದರು. ಮನೆಗೆ ಫೋನ್‌ ಮಾಡಿದಾಗ ಎಲ್ಲರೂ ಮನೆಗೆ ಬರಲು ಹೇಳಿದ್ದರು. ಆದರೆ ಪ್ರಯಾಣ ಮಾಡುವಷ್ಟು ತ್ರಾಸ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ. ಮೊದಲ ಒಂದು ದಿನ ಅವಳನ್ನು ನೋಡಿಕೊಳ್ಳುವರಿಲ್ಲದರಿಂದ ನಿಶಾಂತನೇ ಆಫೀಸ್‌ಗೆ ರಜೆ ಮಾಡಿ ಆಸ್ಪತ್ರೆಯಲ್ಲಿ ಉಳಿದಿದ್ದ.

ಅವನು ಅವಳನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ. ಆದರೆ ಅವಳ ಬಗ್ಗೆ ಕಾಮಕ್ಕಿಂತ ಮಮತೆಯೇ ಇವನಿಗೆ ಉಕ್ಕಿ ಬರುತ್ತಿತ್ತು. ಮುಖಕ್ಕೆ ಬಿದ್ದ ಕೂದಲನ್ನು ಹಿಂದಕ್ಕೆ ಸರಿಸಿ ತಲೆ ನೇವರಿಸುವ ಬಯಕೆಯೂ ಆಗುತ್ತಿತ್ತು.

ರಾತ್ರಿ ಇವಳ ನರಳಿಕೆ ಕೇಳಿ ಬಂದರೆ ಹಣೆ ಮುಟ್ಟಿ ನೋಡಿ ಹಣೆಗೆ ಒದ್ದೆ ಬಟ್ಟೆಯಿಡುತ್ತಿದ್ದ. ಅವನ ಆರೈಕೆಯ ಫಲವೋ ಅವಳು ಬೇಗ ಗುಣಗೊಂಡು ಹಾಸ್ಟೇಲ್‌ಗೆ ಮರಳಿದಳು.

***

ರೂಂಗೆ ಮರಳಿದವಳಿಗೆ ನಿಶಾಂತ ತೋರಿದ ಕಾಳಜಿಯದ್ದೇ ನೆನಪಾಗಿ ಎದೆ ತುಂಬಿ ಬಂತು. ಎಷ್ಟು ಒಳ್ಳೆಯವನು. ಅಂತ ನೂರಾರು ಸಾರಿ ಅಂದುಕೊಂಡಳು. ಸುಮ್ಮನೆ ಇವನ ಬಗ್ಗೆ ತಪ್ಪಾಗಿ ತಿಳಿದುಕೊಂಡೆ ಅಂತ ಅಂದುಕೊಂಡಳು. ಅವನ ನೆನಪು ಅವಳಿಗೆ ಇಷ್ಟವಾಗತೊಡಗಿತ್ತು. ಥಕ್‌ ಅವನಿಗೆ ನನ್ನ ಬಗ್ಗೆ ಯಾವ ಭಾವನೆ ಇದೆಯೋ ಸುಮ್ಮನೆ ದೂರಾಗುವುದು ಬೇಡಾ ಅಂತ ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಟುಕೊಂಡಳು.

ಅವನಿಗೂ ಅಷ್ಟೇ. ಅವಳೊಂದಿಗಿನ ಒಂದೆರಡು ದಿನದ ಸಾಮೀಪ್ಯ ಇಷ್ಟವಾಗಿತ್ತು. ಇವಳೊಂದಿಗೆ ಜೀವನ ಪೂರ್ತಿ ಕಳೆವ ಬದುಕ ನನ್ನದಾಗಿರಬಾರದೇ ಅಂತ ಮನ ಹಂಬಲಿಸಿತು.

**

ದಿನಗಳು ಕಳೆದವು.

ಆರ್ಥಿಕ ಬಿಕ್ಕಟ್ಟು ನಿಶಾಂತನ ಕಂಪನಿಗೂ ತಟ್ಟಿತು. ಪಿಂಕ್‌ಸ್ಲಿಪ್‌ ಇವನಿಗೂ ದೊರಕಿತು. ಮತ್ತೆ ಬೇರೆ ಕೆಲಸ ಹುಡುಕುವ ಗೋಜಿಗೆ ಹೋಗಲ್ಲಿಲ್ಲ. ಊರಿಗೆ ಮರಳಿದ ನಿಶಾಂತ್‌ ಸೈಬರ್‌ ಕೆಫೆಯೊಂದನ್ನು ಆರಂಭಿಸಿದ. ಇವಳು ಒಬ್ಬಂಟಿಯಾದಳು. ಇವಳನ್ನೂ ಊರಿಗೆ ಬರಲು ಒತ್ತಾಯ ಮಾಡುತ್ತಿದ್ದ. ಸೈಬರ್‌ನ ಹಿಂದಿನ ಖಾಲಿ ಜಾಗದಲ್ಲಿ ಟ್ಯುಟೋರಿಯಲ್‌ ಮಾಡುವಂತೆ ಹೇಳಿ ನಾನು ನೆರವಾಗುವುದಾಗಿ ಹೇಳುತ್ತಿದ್ದ. ಇವಳಲ್ಲಿ ಹೊಸ ಕನಸು ಕಟ್ಟ ತೊಡಗಿದ.

***

ಆಫೀಸ್‌ನಲ್ಲಿ ಬಾಸ್‌ ಸುಮ್ಮಗೆ ಕಿರಿಕಿರಿ ಮಾಡಿದಾಗ ಯಾಕೋ ನಗರದ ಸಹವಾಸವೇ ಬೇಡ ಅನಿಸಿ ಅಳು ಬಂದುಬಿಟ್ಟಿತ್ತು. ಬಿಕ್ಕಟ್ಟಿನಿಂದ ಮೊದಲ ವರ್ಷದ ಇನ್‌ಕ್ರಿಮೆಂಟ್‌ ಕೂಡ ಇಲ್ಲ. ನೆಮ್ಮದಿ ಅಂತು ಇಲ್ಲವೇ ಇಲ್ಲ. ದುಡ್ಡು ಕೊಡೋ ತೃಪ್ತಿಗಿಂತ ಬದುಕಿನ ನೆಮ್ಮದಿಯೇ ಮುಖ್ಯ ಅಂತ ಅನಿಸತೊಡಗಿತ್ತು. ಮತ್ತೆ ಊರು ನೆನಪಾಗತೊಡಗಿತು. ದನ ಕರು, ನಾಯಿ ಬೆಕ್ಕು, ಹೂವಿನ ಗಿಡಗಳು ಮತ್ತೆ ಕಾಡತೊಡಗಿದವು. ಗೆಳತಿಯ ಕೈ ಹಿಡಿದು ಬೆಟ್ಟ ಹತ್ತಬೇಕು. ತಂಗಿಯ ಜುಟ್ಟು ಹಿಡಿದು ಓದಿಸಬೇಕು. ತೋಡಲ್ಲಿ ಹೋಗಿ ಸುಮ್ಮನೆ ಏಡಿ ಹಿಡಿಯಬೇಕು.. ಇಂಥ ಕನಸುಗಳು ಇಷ್ಟವಾಗತೊಡಗಿದವು. ಊರಿನ ನೆನಪಿನ ಪುಳಕದಲ್ಲಿಯೇ ಇಂದು ಅಂತಿನ ನಿರ್ಧಾರ ಮಾಡಿ ಊರಿನ ಬಸ್‌ ಹತ್ತಿದ್ದಳು.

****

ಮತ್ತೆ ಊರಿಗೆ ಬಂದಾಗ ಮನಸ್ಸಿಗೆ ಏನೋ ನೆಮ್ಮದಿ. ಪ್ರತಿ ಗಿಡಮರಗಳನ್ನೂ ಹೊಸತು ಎಂಬಂತೆ ನೋಡಿದಳು. ಗೆಳತಿಯರು ಇವಳು ವಾಪಸ್‌ ಬಂದದ್ದನ್ನು ನೋಡಿ ಖುಷಿಗೊಂಡರು. ಮನೆಯವರು ಪ್ರೀತಿಯಿಂದ ಸ್ವಾಗತಿದರು. ನಿಶಾಂತನೂ ಫೋನ್‌ ಮಾಡಿ ಮಾತನಾಡಿದ.

***

ನಗರದಲ್ಲಿ ಕಳೆದ ಬದುಕು ಮತ್ತೆ ಊರಿಗೆ ಹೊಂದಿಕೊಳ್ಳಲು ಒಂದಿಷ್ಟು ತಡವರಿಸಿತು. ಟ್ರಾಫಿಕ್‌ ಕಿರಿಕಿರಿ ಇಲ್ಲದ ಕಿವಿ ಗುಂಯಿಗುಡುತ್ತಿತ್ತು. ಒಂದೆರಡು ವಾರ ಕಳೆದಿರಬಹುದು. ನಾಳೆ ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಅಂತ ಅಮ್ಮ ಹೇಳಿದಾಗ ಬೆಚ್ಚಿದಳು. ಒಳ್ಳೆ ಆಸ್ತಿ ಇರೋರು ಕಣೇ. ಒಬ್ಬನೇ ಮಗ ಒಪ್ಪಿಕೋ ಮತ್ತೆ ನಮಗೆ ಹುಡುಕಲು ಆಗುವುದಿಲ್ಲ. ಅಂತ ಅಪ್ಪ ಜೋರು ಮಾಡಿದಾಗ ಥೂ ನಗರದಲ್ಲಿಯೇ ಇದ್ರೆ ಆಗ್ತಾ ಇತ್ತು ಅಂತ ಅವಳಿಗೆ ಅನಿಸಿತು. ನಾಳೆ ಬರುವ ಹುಡುಗ ಇಷ್ಟವಾಗಿಲ್ಲ ಅಂತ ಹೇಳಬೇಕೆಂದು ಇವತ್ತೇ ತೀರ್ಮಾನ ಮಾಡಿಕೊಂಡಳು.

***

ನನ್ನ ಬಗ್ಗೆ ಈ ನಿಶಾಂತ್‌ಗೆ ಏನು ಭಾವನೆ ಇದೆ ಅಂತ ತಿಳಿದುಕೊಳ್ಳಬೇಕು ಅಂತ ಅವನಿಗೆ ಫೋನ್‌ ಮಾಡಿದಳು. ಪರಿಸ್ಥಿತಿ ಹೀಗಿದೆ ಅಂದಾಗ ಅವನು ನಗುತ್ತಾ ಹೇಳಿದ `ನಾಳೆ ನಿನ್ನನ್ನು ನೋಡಲು ಬಂದವರನ್ನು ಒಪ್ಪಿಕೋ. ಏನಾಗುವುದಿಲ್ಲ’ ಅಂತ ಹೇಳಿ ಫೋನ್‌ ಇಟ್ಟ. ಛೇ ಇವನಿಗೂ ನನ್ನ ಭಾವನೆ ಅರ್ಥವಾಗುತ್ತಿಲ್ವ. ಅಂತ ಬೇಜಾರಾಗಿ ಫೋನ್‌ ಕುಕ್ಕಿದಳು.

***

ಮರುದಿನ 11 ಗಂಟೆಗೆ ಸರಿಯಾಗಿ ಗಂಡಿನ ಕಡೆಯವರು ಬಂದರು. ಜ್ಯೂಸ್‌ ತೆಗೆದುಕೊಂಡು ಹೋಗು ಅಂತ ಅಮ್ಮ ಹೇಳಿದಾಗ ತಲೆತಗ್ಗಿಸಿ ಹೋದವಳು ಒಮ್ಮೆಗೆ ತಲೆಯೆತ್ತಿ ನೋಡಿದಳು. ನೋಡಲು ಬಂದ ಹುಡುಗ ನಿಶಾಂತನಾಗಿದ್ದ.

(ಕಥೆ ದಾರಾವಾಹಿಯಾಗುವ ಲಕ್ಷಣ ಕಂಡು ಬಂದಿರುವುದರಿಂದ ಇಲ್ಲಿಗೆ ನಿಲ್ಲಿಸಲಾಗಿದೆ. ಧನ್ಯವಾದಗಳು- ಪ್ರವೀಣ ಚಂದ್ರ)
ಅಜ್ಜ ಹೇಳಿದ ಲವ್ ಸ್ಟೋರಿ

ಅಜ್ಜ ಹೇಳಿದ ಲವ್ ಸ್ಟೋರಿ

"ಈ ಗುಲಾಬಿಗೆ ಎಷ್ಟು?" ಹರೆಯದ ಯುವಕನೊಬ್ಬ ಕೇಳುತ್ತಿದ್ದ. "30 ರೂಪಾಯಿ" ಹೂ ಮಾರುವ ಹೆಂಗಸಿನ ಮಾರುತ್ತರ. "ಜಾಸ್ತಿಯಾಯಿತು" ಹುಡುಗ ಅಸಹನೆಯ ಮುಖ ಮಾಡಿದ. "ಇವತ್ತು ಇದಕ್ಕಿಂತ ಕಡಿಮೆಗೆ ಎಲ್ಲೂ ಸಿಗೋಲ್ಲ, ತಗೋ" ಎಂದು ಪಕೆಳೆಗಳಲ್ಲಿ ನೀರಿನ ಬಿಂದು ಜಾರುತ್ತಿದ್ದ ಚಂದದ ಹೂವನ್ನು ಆತನ ಕೈಗಿತ್ತಳು. ಯುವಕ ಮರು ಮಾತಾಡದೆ ದುಡ್ಡು ನೀಡಿ ಹೂವನ್ನು ಹಿಡಿದುಕೊಂಡು ನಡೆದ. ನನಗೂ ಹೂವೊಂದು ಬೇಕಿತ್ತು. ಆಕೆಗೆ ಹಣ ನೀಡಿ ಮುದ್ದಾಗಿ ಕಂಡ ರೋಜಾವನ್ನು ಪಡೆದುಕೊಂಡೆ.


ಅಲ್ಲೇ ಕಲ್ಲು ಬೆಂಚಿನಲ್ಲಿ ಕುಳಿತಿದ್ದ ಅಜ್ಜ ಕುತೂಹಲದಿಂದ ನೋಡುತ್ತಿದ್ದರು. ಆ ಅಜ್ಜನನ್ನು ನೋಡಿದಾಗ ನನಗೂ ನನ್ನ ಅಜ್ಜನ ನೆನಪಾಯಿತು. ನನ್ನಜ್ಜನೂ ಇಷ್ಟೇ ಬಲಿಷ್ಠವಾಗಿದ್ದ. ಇಷ್ಟು ವಯಸ್ಸಾದರೂ ಮುಖದಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಅಜ್ಜ ಹೂವಮ್ಮನನ್ನು ಹತ್ತಿರ ಕರೆದು "ಏನಮ್ಮ ಇವತ್ತು ರೇಟು ಜಾಸ್ತಿ" ಎಂದರು. ಅದಕ್ಕೆ ಆಕೆ ""ಏನಜ್ಜ ನಿಂಗೂ ಹೂವು ಬೇಕಾ, ಲವರ್ಸ್ ಡೇ ಇವತ್ತು, ಅಜ್ಜಿಗೆ ಗುಲಾಬಿ ಕೊಡುವಿಯಂತೆ" ಎಂದು ವಿಚಿತ್ರವಾಗಿ ನಗುತ್ತ ಮುಂದೆ ಸಾಗಿದಳು. ಅಜ್ಜ ನಗಲಿಲ್ಲ.

ನಾನು ಮೆಲ್ಲಗೆ ಹೋಗಿ ಅಜ್ಜನ ಪಕ್ಕ ಕೂತೆ. "ಅಜ್ಜ ಇವತ್ತು ಲವರ್ಸ್ ಡೇ, ಅದಕ್ಕೆ ಹೂವಿನ ರೇಟು ಜಾಸ್ತಿ' ಅಂದೆ. "ಹೌದಾ? ಎಂದು ಅಜ್ಜ ಪ್ರಶ್ನಿಸಿ ಸುಮ್ಮನಾದರು. ನಂತರ ನನ್ನ ಬಗ್ಗೆ ವಿಚಾರಿಸಿದರು. ನನ್ನ ಸಂಕ್ಷಿಪ್ತ ಪರಿಚಯ ನೀಡಿದೆ.

ಆಗ ನನ್ನ ಮೊಬೈಲಿಗೆ "ಟಿಂಕ್" ಅಂತ ಎಸ್ ಎಂ ಎಸ್ ಬಂತು. ಅದನ್ನು ಓದುತ್ತಲೇ ನನ್ನ ಮುಖ ಅರಳಿತು. ಒಂದು ಗಂಟೆ ಕಳೆದು ಮಾಲ್ ಹತ್ತಿರ ಬರಲು ಹೇಳಿದ್ದಳು. ನಾನು ಪ್ರೀತಿಸುತ್ತಿರುವುದಾಗಿ ಅವಳಿಗೆ ಅವತ್ತೇ ಹೇಳಿದ್ದೆ. ಸುಮ್ಮಗೆ ನಕ್ಕಿದ್ದಳು. ಇವತ್ತು ಸ್ಪೆಷಲ್ ಆಗಿ ಪ್ರೊಪೊಸ್ ಮಾಡಬೇಕು. ಆಗ ಅಜ್ಜ ಕೆಮ್ಮಿ ನನ್ನ ಯೋಚನೆಗೆ ಕಡಿವಾಣ ಹಾಕಿದ್ರು.

ಅಜ್ಜ ನನ್ನ ಮುಖವನ್ನೇ ನೋಡುತ್ತ "ನಮ್ಮ ಕಾಲದಲ್ಲಿ ಪತ್ರ ವ್ಯವಹಾರ ಇಷ್ಟು ಸುಲಭವಾಗಿರಲಿಲ್ಲ. ಅವಳ ಪತ್ರ ತಲುಪಲು ದಿನಗಟ್ಟಲೆ ಕಾಯಬೇಕಿತ್ತು" ಎಂದಾಗ ನನಗೂ ಕುತೂಹಲ ತಡೆಯಲಿಲ್ಲ. "ಅಜ್ಜ ನಿಂಗೂ ಪ್ರೇಯಸಿ ಇದ್ದಳಾ?" ನನ್ನ ಕುತೂಹಲದ ಪ್ರಶ್ನೆಗೆ ನಕ್ಕ ಅಜ್ಜ ನನ್ನ ಒತ್ತಾಯದ ಮೇರೆಗೆ ಅವರ ಕತೆ ಹೇಳತೊಡಗಿದರು.

***
ಬಹುಶಃ ಇದೇ ದಿನವಾಗಿರಬೇಕು ಅವತ್ತು. ಸರಿಯಾಗಿ ನೆನಪಿಲ್ಲ. ಫೆಬ್ರವರಿ ಅನ್ನೋದು ನಿಜ. ನಾನೂ ಅವಳ ಮನೆಗೆ ಹೋಗಿದ್ದೆ. ಅವಳ ಮನೆಯ ಮುಂದಿನ ಮಾವಿನ ಮರ ಹೂವು ಬಿಟ್ಟು ಸೊಗಸಾಗಿ ಕಾಣುತ್ತಿತ್ತು. ಗೇಟಿನ ಬಳಿಯಲ್ಲಿ ಯಾರೋ ಗೂರ್ಖ ಕುಳಿತಿದ್ದ. ಅವನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸಿದೆ. ಆಗ ಆ ಉದ್ದ ಮೀಸೆಯವ ಬಂದ.

"ಯಾರು ಬೇಕಿತ್ತು" ದೊಡ್ಡ ಧ್ವನಿಯಲ್ಲಿ ಕೇಳಿದ್ದ. ಬ್ರಿಟಿಷ್ ಸರಕಾರದ ನೌಕರಿ ಮಾಡುವ ಹಮ್ಮು ಅವನಿಗೆ. "ಇದು ಅರುಂದತಿಯ ಮನೆನಾ?" ನನ್ನ ಪ್ರಶ್ನೆಗೆ ಆತ "ಹೌದು, ನಾನು ಅವಳಪ್ಪ". ಒಮ್ಮೆಗೆ ನಾನು ನೇರವಾಗಿ ನಿಂತುಕೊಂಡೆ. ಸರ್, ಅದು ಅದು ಅವರು ನನ್ನ ಬರಲು ಹೇಳಿದ್ರು... ಎಂದೆ. ಆತ ನಂಬಲಿಲ್ಲ. ಆಕೆಯಿಂದ ಬಂದ ಪತ್ರ ತೋರಿಸಿದೆ. ಅದು ನಾನು ಮಾಡಿದ ಮೂರ್ಖ ಕೆಲಸ.

ಅದರಲ್ಲಿ, "ಪ್ರೀತಿಯ ರಾಜ, ಇನ್ನೆಷ್ಟು ವರ್ಷ ಈ ಪತ್ರ ಸಲ್ಲಾಪ. ಮನೆಗೆ ಬಂದು ನನ್ನ ಕರೆದುಕೊಂಡು ಹೋಗು" ಎಂದೆಲ್ಲ ಬರೆದಿತ್ತು. ಅವನು ಒಮ್ಮೆಗೆ ಮುಖಗಂಟಿಕ್ಕಿಕ್ಕೊಂಡ. ನಂತರ ಆತನ ಮುಖ ಸಡಿಲಗೊಂಡಿತು. "ಬನ್ನಿ ಬನ್ನಿ, ಬಹಳ ದೂರದಿಂದ ಬಂದಹಾಗೆ ಇದೆ. ಎಲ್ಲರೂ ಕ್ಷೇಮವೇ? ಎಂದೆಲ್ಲ ಆದರಿಸಿ, ಪಕ್ಕದಲ್ಲಿದ್ದ ಸೇವಕನಿಗೆ "ಇವರನ್ನು ಕುಳಿತುಕೊಳ್ಳಲು ಹೇಳು, ನಾನೀಗ ಬಂದೆ" ಎಂದು ಅವಸರದಲ್ಲಿ ಹೊರಟರು. ನಾನು ಮನೆ ಪ್ರವೇಶಿಸಿದೆ.

ಮನೆಯೊಳಗೆ ದೊಡ್ಡದಾಗಿ ಇಂಗ್ಲೆಂಡ್ ರಾಣಿಯ ಭಾವಚಿತ್ರ ನೇತಾಡಿಸಿತ್ತು. ನಾನು ಬರಬಾರದ ದಾರಿಯಲ್ಲಿ ಬಂದೆನೋ... ಮನಸ್ಸಿಗೆ ಖೇದವೆನಿಸಿತು. ನಮ್ಮ ನಾಯಕರಿಗೆ ಈ ವಿಷಯ ತಿಳಿದರೆ ನನ್ನನ್ನು ಸಿಗಿದು ನೇತಾಡಿಸಿಬಿಡಬಹುದು. ಅವರಿಗೆ ಬ್ರಿಟಿಷರ ಎಂಜಲು ಕಾಯುವ ಭಾರತೀಯರೆಂದರೆ ರಕ್ತ ಕುದಿಯುತ್ತಿತ್ತು. ನಾನೂ ಅವರ ಸೇವಕ. ಅವರಷ್ಟು ಲೋಕ ಜ್ಞಾನ ಇಲ್ಲದಿದ್ದರೂ ನಮ್ಮ ದೇಶ ಬೇರೆಯವರ ಪಾಲಾಗಲು ಮನಸ್ಸು ವಿರೋಧಿಸುತ್ತಿತ್ತು. ದೇಶಕ್ಕಾಗಿ ರಕ್ತ ಕೊಡಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದೆ.

"ಬಾಯಾರಿಕೆ ತೆಗೆದುಕೊಳ್ಳಿ" ಸೇವಕ ದೊಡ್ಡ ಗಾಜಿನ ಗ್ಲಾಸಿನಲ್ಲಿ ಬಣ್ಣದ ಪಾನೀಯ ತಂದಿರಿಸಿದ. ನಾನು ಅದನ್ನು ಕೈಗೆ ತೆಗೆದುಕೊಂಡು ಪ್ರೀಯೆಯ ಸುಳಿವಿದೆಯೇ ಎಂದು ಸುತ್ತಮುತ್ತ ನೋಡತೊಡಗಿದೆ. ಆ ಬಣ್ಣದ ಪಾನೀಯ ಬಾಯಿಗಿರಿಸಿದೆ. ಹೆಜ್ಜೆಯ ಸದ್ದು ಕೇಳಿತು. ಯಾರೋಬರುತ್ತಿರುವಂತೆ ಅನಿಸಿತು. ಅವಳಪ್ಪ. ಕೈನಲ್ಲಿ ಚಾಟಿ. ಅಕ್ಕಪಕ್ಕ ದೊಣ್ಣೆ ಹಿಡಿದುಕೊಂಡ ಸೇವಕರು.

ಯಾಕೋ ತಲೆ ಧಿಮ್ಮೆನ್ನತೊಡಗಿತು. ಅರೇ ಎದುರಿಗೆ ಬರುತ್ತಿರುವರ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಣ್ಣು ಮಂಜು ಮಂಜಾಗುತ್ತಿದೆ. ಯಾಕೋ ಕಾಲುಗಳು ಜೋಮು ಹಿಡಿದಂತೆ ಭಾಸವಾಗತೊಡಗಿತು. ಪಾನೀಯಕ್ಕೆ ಮತ್ತು ಬೆರೆಸಿದ್ದಾರೆಯೇ? "ಈ ಕುನ್ನಿಯನ್ನು ಕಂಬಕ್ಕೆ ಕಟ್ಟಿ" ಅವಳಪ್ಪನ ಆಜ್ಞೆ ಕೇಳಿತು. "ಓಹ್, ದೇವರೆ ನಾನು ಮೋಸದ ಸುಳಿಗೆ ಬಿದ್ದೆ" ಎಂದು ತಿಳಿದು ಒಮ್ಮೆಗೆ ಎದ್ದು ನಿಂತು ವಸ್ತ್ರದೊಳಗಿನ ಸಣ್ಣ ಕತ್ತಿ ತೆಗೆಯಲು ಹೋದೆ. ತಲೆಗೆ ದಡ್ ಅಂತ ಯಾರೋ ಹೊಡೆದರು. ನಿಲ್ಲಲಾಗದೆ ತಲೆ ಹಿಡಿದುಕೊಂಡು ಬಿದ್ದೆ.

ಮುಖಕ್ಕೆ ನೀರು ಎರಚಿದಂತಾಗಿ ಮುಖ ಎತ್ತಿ ನೋಡಿದೆ. ನನ್ನ ಕೈಕಾಲುಗಳನ್ನು ಕಟ್ಟಿದ್ದರು. ಏನು ಇವರ ಉದ್ದೇಶ. ಏನಿದು ಮೋಸ. ನನ್ನ ನಾಯಕನ ಜೊತೆ ಹೋರಾಡುವುದು ಬಿಟ್ಟು ನನ್ನನ್ಯಾಕೆ ಇಲ್ಲಿಗೆ ಕರೆಸಿದರು...

"ನನ್ನ ಮಗಳಿಗೆ ಪತ್ರ ಬರೆಯುವೆಯಾ? ಎಷ್ಟು ದೈರ್ಯ ನಿನಗೆ. ನೋಡು ಇವಳೇ ನನ್ನ ಮಗಳು. ಬೇಕೆ ನಿನಗೆ?" ಆತ ಅಬ್ಬರಿಸುತ್ತಿದ್ದ. ನಾನು ಮೆಲ್ಲಗೆ ತಲೆಯೆತ್ತಿ ನೋಡಿದೆ. ಕೊಂಚ ಕುಳ್ಳಗಿನ ನನ್ನ ಸುಂದರ ಪ್ರೇಯಸಿ ತಲೆತಗ್ಗಿಸಿ ನಿಂತಿದ್ದಳು. ಶಾಕುಂತಲೆ ನಾನೆಂದು ಪತ್ರ ಬರೆಯುತ್ತಿದ್ದ ನನ್ನ ಸುಂದರಿ, ನನಗ್ಯಾಕೆ ಇಂತಹ ಮೋಸ ಮಾಡಿದೆ ಎಂದು ಜೋರಾಗಿ ಕೇಳಬೇಕೆನಿಸಿತು. ಆಗ ಅವಳಪ್ಪ ಚಾಟಿಯ ಉದ್ದವನ್ನು ಎರಡು ಕೈನಿಂದ ಅಳೆದು ಚಟಿರನೆ ಬೀಸಿದ. ನನ್ನ ಪ್ರಿಯೆ ಮುಖಮುಚ್ಚಿ ಒಳಗೆ ಓಡಿದಳು.

ಒಂದು, ಎರಡು, ಮೂರು, ನಾಲ್ಕು ಎಷ್ಟು ಹೊಡೆದನೋ.. ಲೆಕ್ಕವಿಡಲಾಗಲಿಲ್ಲ. ಮೈನಲ್ಲಿ ರಕ್ತ ಹೊರಗೆ ಬರುತ್ತಿತ್ತು. ಅವನಿಗೆ ಅವನ ಸೇವಕನೊಬ್ಬ ಏನೋ ಗುಸುಗುಸು ಎಂದ. ತಕ್ಷಣ ಆತನ ಮುಖ ಇನ್ನಷ್ಟು ವ್ಯಗ್ರವಾಯಿತು. "ನೀನು ಸ್ವಾತಂತ್ರ್ಯ ಹೋರಾಟಗಾರನೇ? ನಿನ್ನ ನಾಯಕನ ಬಗ್ಗೆ ಸಂಪೂರ್ಣ ವಿಷಯ ಹೇಳು. ನೀವು ಎಷ್ಟು ಜನರಿದ್ದೀರಿ. ಯಾವಾಗ ದಂಗೆ? ಎಷ್ಟು ಮದ್ದುಗುಂಡುಗಳಿವೆ? ಎಲ್ಲೆಲ್ಲಿ ಅಡಗುತಾಣಗಳಿವೆ?" ಲೆಕ್ಕಪತ್ರ ಓದುವಂತೆ ಆತ ಪ್ರಶ್ನೆಗಳ ಮಳೆ ಸುರಿಸಿದ್ದ.

ಓಹ್, ಇದಾ ವಿಷಯ. ಮೈನಲ್ಲಿ ರಕ್ತ ಸುರಿಯುತ್ತಿದ್ದರೂ ದೇಶಭಕ್ತಿ ಉರಿದುಬಂತು. "ನಿನಗೆ ತಾಕತ್ತು ಇದ್ದರೆ ನನ್ನ ಹಗ್ಗ ಬಿಚ್ಚಿ ಯುದ್ದಕ್ಕೆ ಬಾರೋ" ನಾನು ಶಕ್ತಿಮೀರಿ ಜೋರಾಗಿ ಹೇಳಿದೆ. ಅವನ ಮುಖ ಒಮ್ಮೆಗೆ ಕಪ್ಪಿಟ್ಟಿತು. ಮತ್ತೊಂದಿಷ್ಟು ಚಾಟಿಯ ಏಟು ಬಿತ್ತು. ಹೊರಗೆ ಏನೋ ಸದ್ದಾದಂತೆ ಕೇಳಿತು. ಪೊಲೀಸರು ಬಂದು ನನ್ನ ಹಗ್ಗ ಬಿಚ್ಚಿ ಕೋಳ ಹಾಕಿ ಕರೆದೊಯ್ದರು.

ನಾನು ಕಂಬಿಯ ಹಿಂದೆ ಬಂಧಿಯಾದೆ. ಯಾವುದೋ ಸುಳ್ಳು ಪ್ರಕರಣ ದಾಖಲಿಸಿದ್ದರು. ಎಷ್ಟೇ ಹಿಂಸಿಸಿದರೂ ನಾಯಕನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡಲಿಲ್ಲ. ನನ್ನನ್ನು ಬೇರೆ ಯಾವುದೋ ಜೈಲಿಗೆ ಕಳುಹಿಸುವ ಬಗ್ಗೆ ಮಾತನಾಡುತ್ತಿದ್ದರು. ಈ ಮಾಹಿತಿಯನ್ನು ಪೊಲೀಸಪ್ಪನೊಬ್ಬ ನನಗೆ ನೀಡಿದ್ದ. ಅವನಿಗೆ ನನ್ನ ಬಗ್ಗೆ ಕರುಣೆಯಿತ್ತು. ಆತ ಅನಿವಾರ್ಯವಾಗಿ ಸರಕಾರಿ ಚಾಕರಿ ಮಾಡುತ್ತಿದ್ದ.  ನಿಮ್ಮ ನಾಯಕರ ಸೈನ ಈ ಕಡೆಗೆ ಬಂದಾಗ ನಾನು ಅವರ ಜೊತೆ ಸೇರುತ್ತೇನೆ ಎಂಬ ಭರವಸೆ ನೀಡಿದ್ದ. ಆತನಲ್ಲೂ ಸುಪ್ತವಾಗಿರುವ ದೇಶಪ್ರೇಮ ಕಂಡು ಎದೆಯುಬ್ಬಿ ಬಂದಿತ್ತು.

ಆದರೂ, ನನ್ನ ಪ್ರೇಯಸಿಯದ್ದು ಸುಳ್ಳು ಪ್ರೀತಿಯೆಂದು ನನ್ನ ಒಳಮನಸ್ಸು ಒಪ್ಪಲಿಲ್ಲ. ಆಕೆ ಬರೆಯುತ್ತಿದ್ದ ಪತ್ರಗಳಲ್ಲಿ ನಾಟಕೀಯತೆ ಇರಲಿಲ್ಲ. ಅವಳನ್ನು ಐದು ವರ್ಷದ ಹಿಂದೆ ನೋಡಿದ್ದು. ಮಡಿಕೇರಿಯಿಂದ ಎತ್ತಿನಗಾಡಿಯಲ್ಲಿ ಆಕೆ ತನ್ನ ಕುಟುಂಬದ ಜೊತೆ ಸಾಗುತ್ತಿದ್ದಳು. ನಾನು ಅದೇ ದಾರಿಯಲ್ಲಿ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆಗ ಆನೆಗಳ ಗುಂಪು ಅವರು ಹೋಗುವ ದಾರಿಯಲ್ಲಿ ಬೀಡುಬಿಟ್ಟಿತು.

ಆನೆಗಳ ಹಾದಿಯಲ್ಲಿ ಸಾಗಲಾಗದೆ ಭೀತಿಯಲ್ಲಿದ್ದ ಅವರನ್ನು ಮತ್ತೊಂದು ಒಳದಾರಿಯ ಮೂಲಕ ಕರೆದೊಯ್ದಿದೆ. ಅವಳ ಜೊತೆಯಿದ್ದ ಮುದುಕಿ ನನಗೆ ವಿಳಾಸ ನೀಡಿ "ಘಟ್ಟದ ಕೆಳಗೆ ತಾವು ಭಾರೀ ಪ್ರಭಾವಿಗಳು, ಏನಾದರೂ ಕಷ್ಟ ಬಂದರೆ ನಮ್ಮನ್ನು ಕಾಣು ಎಂದಿದ್ದರು. ಜೊತೆಗೆ ವಿಳಾಸವನ್ನೂ ನೀಡಿದ್ದರು. ಅದ್ಯಾವುದೋ ಸಮಯದಲ್ಲಿ ನಾನು ಕುಶಲ ಕ್ಷೇಮ ವಿಚಾರಿಸಿ ಪತ್ರ ಬರೆದಿದ್ದೆ. ಅದಕ್ಕೆ ಅವರ ಮನೆಯಿಂದ ಮಾರುತ್ತರ ಬಂದಿರಲಿಲ್ಲ. ತುಂಬಾ ದಿನ ಕಳೆದು ಕಾಗದವೊಂದು ಬಂತು. ಅಂದು ನಾನು ಬಂಡಿಯಲ್ಲಿ ನೋಡಿದ್ದ ಕುಳ್ಳಗಿನ ಸುಂದರಿಯ ಪತ್ರವಾಗಿತ್ತು.

"ಅಂದೇ ನನ್ನನ್ನು ನೋಡಿ ಇಷ್ಟಪಟ್ಟದಾಗಿಯೂ, ಮದುವೆಯಾಗುವುದಿದ್ದರೆ ನಿಮ್ಮನೇ" ಎಂದು ಬರೆದಿದ್ದಳು. ಪತ್ರ ವ್ಯವಹಾರಕ್ಕಾಗಿ ಸ್ನೇಹಿತೆಯೊಬ್ಬಳ ಮನೆಯ ವಿಳಾಸ ನೀಡಿದ್ದಳು. ದುಷ್ಯಂತ ಶಾಕುಂತಲೆ, ರೊಮಿಯೊ ಜ್ಯೂಲಿಯಟ್ ಬರಹಗಳ ಸಾಲುಗಳನ್ನೂ ಉಲ್ಲೇಖಿಸಿದ್ದಳು. ತುಂಬಾ ಓದಿಕೊಂಡಿದ್ದಾಳೆ ಅನಿಸಿತು.

ನನಗೂ ಜೀವನಕ್ಕೆ ಹೊಸ ಚೈತನ್ಯ ಬಂದಂತಾಗಿತ್ತು. ನಾನೂ ಮಾರುತ್ತರ ಬರೆದೆ. ನಮ್ಮ ಪತ್ರ ವ್ಯವಹಾರ ಯಾವುದೇ ಎಗ್ಗಿಲ್ಲದೇ ಸಾಗುತ್ತಿತ್ತು. ನಾನು ಒಮ್ಮೊಮ್ಮೆ ತಡವಾಗಿ ಕಾಗದ ಬರೆದರೆ ಮುನಿಸಿಕೊಳ್ಳುತ್ತಿದ್ದಳು. ಸ್ವಾತಂತ್ರ್ಯ ಹೋರಾಟಕ್ಕಾಗಿ ನಾವು ಗುಂಪುಗಟ್ಟಿ ರಹಸ್ಯ ಕಾರ್ಯಚರಣೆಗಳನ್ನು ಮಾಡುತ್ತಿದ್ದೇವು. ಬ್ರಿಟಿಷರನ್ನು ವಿರೋಧಿಸುತ್ತಿದ್ದರೂ ನನ್ನ ಪತ್ರ ವ್ಯವಹಾರಗಳು ಆಗ ಬ್ರಿಟಿಷ್ ಈಸ್ಟ್ ಇಂಡಿಯಾ ಪೋಸ್ಟಲ್ ಸೇವೆಯನ್ನು ಬಳಸಿಕೊಳ್ಳುತ್ತಿತ್ತು. ಈ ವಿಷಯ ನಮ್ಮ ನಾಯಕರಿಗೆ ಗೊತ್ತಿರಲಿಲ್ಲ. ಪೋಸ್ಟ್ ಮ್ಯಾನ್ ಕರಿಯಪ್ಪ ಯಾರಿಗೂ ಗೊತ್ತಾಗದಂತೆ ನನಗೆ ಪತ್ರಗಳನ್ನು ನೀಡುತ್ತಿದ್ದ.

ಆದರೆ ನಾನು ಎಡವಿದ್ದೆಲ್ಲಿ ಎನ್ನುವುದು ಇನ್ನೂ ಅರಿವಾಗಲಿಲ್ಲ. ಈ ಕುರಿತು ಆ ಜೈಲಿನ ಪೊಲೀಸ್ ಬಳಿಯೂ ವಿಚಾರಿಸಿದೆ. ಕೆಲವು ದಿನ ಕಳೆದ ಬಳಿಕ ಆತ ಒಂದು ಪತ್ರದೊಂದಿಗೆ ಬಂದ. ಅದು ನನಗೆ ಪ್ರೇಯಸಿ ಬರೆದ ಅಂತಿಮ ಪತ್ರವಾಗಿತ್ತು. ಅದರಲ್ಲಿ ಅವಳಪ್ಪ ಕ್ರೂರಿಯೆಂದೂ, ಸಾಕಷ್ಟು ಪ್ರಭಾವಿಯಾಗಿರುವುದರಿಂದ ಅವನನ್ನು ಎದುರಿಸುವುದು ಕಷ್ಟ. ಅವಳನ್ನು ಅವಳಪ್ಪ ಯಾವುದೋ ಬ್ರಿಟಿಷ್ ಅಧಿಕಾರಿಗೆ ಮದುವೆ ಮಾಡಲು ಬಯಸಿದ್ದಾನೆ, ಆ ನರಕದ ಬದುಕಿಗಿಂತ ಸಾವೇ ಮೇಲು, ಮುಂದಿನ ಜನ್ಮದಲ್ಲಿ ಒಂದಾಗೋಣ... ನೀನು ನಿನ್ನ ಜೀವನವನ್ನು ಸಂಪೂರ್ಣವಾಗಿ ದೇಶಸೇವೆಗೆ ಮುಡಿಪಾಗಿಡು" ಎಂದೆಲ್ಲ ಬರೆದಿದ್ದಳು.

ಆ ಪತ್ರ ನನ್ನ ಕೈಸೇರುವಾಗಲೇ ತಡವಾಗಿತ್ತು. ಪೊಲೀಸ್ ನೀಡಿದ ಮಾಹಿತಿ ಪ್ರಕಾರ ಆಕೆ ಆತ್ಮಹತ್ಯೆ ಮಾಡಿಕೊಂಡಾಗಿತ್ತು. ಕೆಲವೇ ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ದೇಶಸೇವೆ ಮಾಡಬೇಕಿದ್ದ ನಾನು ಪ್ರೇಮದ ಆಕರ್ಷಣೆಗೆ ಸಿಲುಕಿ, ಮೋಸದಿಂದ ಸುಳ್ಳು ಅಪರಾಧದ ಹೆಸರಿನಲ್ಲಿ ಜೈಲಿನಲ್ಲಿದ್ದು ಬಿಡುಗಡೆಯಾದೆ.

**
ಹಳೆಯ ನೆನಪಿನಿಂದ ತೇವವಾದ ಕಣ್ಣನ್ನು ಒರೆಸಿಕೊಂಡು ಅವರು ಎದ್ದು ನಿಂತರು. "ಈಗಿನ ಜನರೇಷನ್ ಬಗ್ಗೆ ಕರುಣೆ ಎನಿಸುತ್ತಿದೆ. ಕೆಲವೇ ಕ್ಷಣದಲ್ಲಿ ಎಲ್ಲಿಗೋ ಪತ್ರ ತಲುಪಿಸುತ್ತೀರಿ. ನಿಮಿಷದಲ್ಲೇ ಪ್ರೇಮಿಗಳನ್ನು ಪಡೆಯುತ್ತೀರಿ. ಮದುವೆಯಾಗುತ್ತೀರಿ. ಡೈವರ್ಸ್ ಮಾಡಿಕೊಳ್ಳುತ್ತೀರಿ. ತುಂಬಾ ಸ್ಪೀಡ್ ಒಳ್ಳೆಯದಲ್ಲ" ಎಂದು ಹೇಳುತ್ತ ಮುಂದೆ ಮುಂದೆ ಸಾಗಿದರು.

ಆಗಲೇ, "ಥ್ಯಾಂಕ್ಯು ಕಿರಣ್. ಐ ಲವ್ ಯು ಕಣೋ" ಎಂಬ ಸಂದೇಶ ನನ್ನ ಮೊಬೈಲಿಗೆ ಬಂದುಬಿತ್ತು. ನನಗೆ ದಿಗ್ಭಮೆಯಾಯಿತು. ನಾನು ಪ್ರೀತಿಸಿದಾಕೆ ಬೇರೊಬ್ಬನಿಗೆ ಕಳುಹಿಸಬೇಕಿದ್ದ ಎಸ್ಎಂಎಸ್ ನ್ನು ತಪ್ಪಿ ನನ್ನ ಮೊಬೈಲಿಗೆ ಕಳುಹಿಸಿದ್ದಳು. ನನಗೆ ನೂರಾರು ಚಾಟಿಯೇಟು ಬಿದ್ದಹಾಗಾಯ್ತು. ಕೈನಲ್ಲಿದ್ದ ಹೂವನ್ನು ಅಲ್ಲೇ ಬಿಸಾಕಿ ಅಜ್ಜನ ಹಿಂದೆಯೇ ಸಾಗಿದೆ.

______

ಪ್ರವೀಣ ಚಂದ್ರ ಪುತ್ತೂರು
ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

ಹಾಯ್, ಮರೆತುಬಿಡಬೇಕು ಅಂತ ಪ್ರತಿಸಾರಿ ಅಂದುಕೊಂಡಾಗಲೆಲ್ಲ ಮಲ್ಲಿಗೆ ತೂಕದ ನೀನು ನೆನಪಾಗುತ್ತಿ. ಉದ್ದಜಡೆಯ, ಮುಗ್ಧ ನಗೆಯ ಮುದ್ದುಮುದ್ದಾದ ನಿನ್ನ ಇನ್ನೊಸೆನ್ಸ್ ವ್ಯಕ್ತಿತ್ವ ನೆನಪಾಗುತ್ತೆ ಗೆಳತಿ. ನೀನು ನನ್ನಲ್ಲಿ ಕೋಪಿಸಿಕೊಂಡು ಇವತ್ತಿಗೆ ಭರ್ತಿ ಒಂದು ವರ್ಷವಾಗಿದೆ. ನಿನ್ನ ನೆನಪು ಸೂಜಿಮೊನೆಯಂತೆ ಪ್ರತಿದಿನ ಹೃದಯ ಚುಚ್ಚುತ್ತಿದೆ. ಫೇಸ್ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿ ಸ್ಟೇಟಸ್, ಫೋಟೊಗಳನ್ನು ಲೈಕ್ ಮಾಡಲಾಗದಂತೆ ನನ್ನ ಕೈಕಟ್ಟಿರುವ ನಿನ್ನ ಮೇಲೆ ತುಸು ಕೋಪವಿದೆ ನನಗೆ.


ಮೊನ್ನೆ ನಿನಗೆ ಸಾರಿ ಅಂತ ಮೆಸೆಜ್ ಮಾಡಿದ್ಯಾಕೆ ಅಂತ ನನಗಿನ್ನೂ ಅರ್ಥವಾಗಿಲ್ಲ. ನನ್ನ ಸಾವಿರಾರು ಸಾರಿಗಳಿಗೆ ಮಾರುತ್ತರ ಬರೆಯದ ನೀನು ಅವತ್ಯಾಕೋ "ತಪ್ಪು ಮಾಡದೆ ಇದ್ದರೆ ಸಾರಿ ಕೇಳೋಕೆ ಹೋಗ್ಬಾರ್ದು' ಅಂತ ಮಾರುತ್ತರ ಬರೆದುಬಿಟ್ಟೆ. ನಿನ್ನ ಮಾರುತ್ತರ ನೋಡಿ ಎಷ್ಟು ಖುಷಿಯಾಯ್ತು ಗೊತ್ತ? ಬಹುಶಃ ರಾಮನ ಫಸ್ಟ್ ಕಂಡ ಶಬರಿಗೂ ಅಷ್ಟು ಖುಷಿಯಾಗಿರಲಿಕ್ಕಿಲ್ಲ.

ಹುಡುಗನೊಬ್ಬನ ಪ್ರೀತಿ ಪ್ರಿಯತಮೆ ಹೊರತುಪಡಿಸಿ ಉಳಿದ ಎಲ್ಲರಿಗೂ ಗೊತ್ತಾಗಿರುತ್ತಂತೆ. ಆದರೆ ಹುಡುಗಿಯ ಪ್ರೀತಿ ಪ್ರಿಯತಮನ ಬಿಟ್ಟು ಬೇರೆ ಯಾರಿಗೂ ತಿಳಿದಿರುವುದಿಲ್ಲವಂತೆ. ಅದೇ ರೀತಿ ನಾನು ನಿನ್ನನ್ನು ಪ್ರೀತಿಸುತ್ತಿದ್ದದ್ದು ಸ್ನೇಹಿತರೆಲ್ಲರಿಗೆ ಗೊತ್ತಾಗಿತ್ತು. ನಿನ್ನಲ್ಲಿ ನನ್ನ ಪ್ರೀತಿಯನ್ನು ಹೇಳಬೇಕೆಂದು ಮಹೂರ್ತ ಫಿಕ್ಸ್ ಮಾಡುತ್ತ ಗುಂಡಿಗೆ ಗಟ್ಟಿ ಮಾಡುತ್ತಿರುವಾಗಲೇ ನೀನು ಬೇರೆ ಊರಿಗೆ ಮನೆ ಬದಲಾಯಿಸಿದ್ದು.

ಅದೊಂದು ಕೆಟ್ಟ ಸಮಯದಲ್ಲಿ ನಾವಿಬ್ಬರು ದೂರ ದೂರ ಹೋಗಬೇಕಾಯ್ತು. ಹತ್ತಿರದಲ್ಲಿದ್ದಾಗ ಹತ್ತಿರವಿದ್ದವರು ದೂರ ಹೋದಾಗ ಮತ್ತಷ್ಟು ಹತ್ತಿರವಾಗುತ್ತಾರೆ ಅಂದುಕೊಂಡಿದ್ದೆ. ನೀನು ನನ್ನ ಕಣ್ಣೆದುರಿನಿಂದ ದೂರ ಹೋದ ನಂತರ ಏಕಾಂತದ ಸಂಜೆಯಲ್ಲಿ ನಿನ್ನ ನೆನಪು ಹೆಚ್ಚು ಕಾಡುತ್ತಿತ್ತು. ಮಿಸ್ ಯು ಅಂತ ಸಾವಿರ ಸಾರಿ ಹೇಳಿ ಮಾತನಾಡುತ್ತಿದ್ದ ನಿನ್ನ ಧ್ವನಿ ಕೆಲವೇ ತಿಂಗಳಲ್ಲಿ ನಾಟಕೀಯವಾಯಿತು.

ಆದರೆ ಅದೊಂದು ದಿನ ಪ್ರೀತಿಯ ಬಗ್ಗೆ ತಿಳಿಸಿದ್ದೇ ನನ್ನ ದೂರ ಮಾಡಲು ನಿನಗೆ ನೆಪವಾಯ್ತೆ? ನಾನು ನಿನ್ನ ಫ್ರೆಂಡ್ ಅಂದುಕೊಂಡಿದ್ದೆ. ನಾನು ಬೇರೊಬ್ಬರನ್ನು ಇಷ್ಟಪಟ್ಟಿದ್ದೀನಿ. ಗುಡ್ ಬೈ ಅಂತ ಎಸ್ ಎಂಎಸ್ ಬರೆದು ಒಂದಿಡಿ ವರ್ಷ ಸೈಲೆಂಟ್ ಮೂಡಿಗೆ ಹೋಗಲು ನಿನಗೆ ಹೇಗೆ ಮನಸ್ಸು ಬಂತು. ಗಾಯದ ಮೇಲೆ ಬರೆ ಎಳೆದಂತೆ ಫೇಸ್ಬುಕ್ ನಿಂದಲೂ ಅನ್ ಫ್ರೆಂಡ್ ಮಾಡಲು ಹೇಗೆ ಮನಸ್ಸು ಬಂತು. ಪ್ರೀತಿ ಮತ್ತು ಸ್ನೇಹಾ ಎರಡನ್ನೂ ಕಳೆದುಕೊಂಡು ಪರಿತಪಿಸಿದ ನನ್ನ ನಿಟ್ಟುಸಿರು, ಬಿಕ್ಕಳಿಕೆ ಒಮ್ಮೆಯೂ ನಿನ್ನ ಹೃದಯ ತಟ್ಟಲಿಲ್ಲವೇ?

ಕೆಲವು ನಾಟಕಗಳು ನಾಟಕ ಮುಗಿದ ನಂತರ ಅರ್ಥವಾಗುತ್ತದಂತೆ. ಆದರೆ ನೀನು ಒಂದು ವರ್ಷದ ಹಿಂದೆ ಮಾಡಿದ್ದು ನಾಟಕ ಅಂತ ಜಗತ್ತೇ ಹೇಳಿದರೂ ಒಪ್ಪಲು ನಾನು ತಯಾರಿಲ್ಲ. ಅಥವಾ ನನ್ನಲ್ಲಿ ನಿನಗೆ ಇದ್ದದ್ದು ಬರೀ ಸ್ನೇಹ ಅಂದರೆ ನನ್ನ ಮನಸ್ಸು ಒಪ್ಪದು. ಅಲ್ಲಿ ಅದೆಷ್ಟೋ ಬಾಯ್ಸ್ ಇದ್ದರೂ ನೀನು ನನ್ನನ್ನೇ ಆಯ್ಕೆ ಮಾಡಿಕೊಂಡದ್ದು ಯಾಕೆ? ದುಃಖದಲ್ಲಿ ಅಳುತ್ತ ನನ್ನ ಭುಜಕ್ಕೆ ಒರಗುತ್ತಿದ್ದದ್ದು ಯಾಕೆ? ಗುಡ್ ಮಾರ್ನಿಂಗ್ ನಿಂದ ಗುಡ್ ನೈಟ್ ತನಕ 100 ಫ್ರೀ ಎಸ್ ಎಂಎಸ್ ನನಗೆ ಮೀಸಲಿಟ್ಟಿದ್ದು ಯಾಕೆ? ಪ್ರತಿ  ಸಂಜೆಯೂ ಸಂತೆ ಬೀದಿಗಳಲ್ಲಿ ಕೈಕೈ ಹಿಡಿದು ಸುತ್ತಾಡಿದ್ದು,ಗೋಲ್ ಕಪ್ಪ ತಿನ್ನುತ್ತಿದ್ದದ್ದು. ಕಣ್ಣಲ್ಲೇ ನೀನು ನನ್ನನ್ನು ಕೊಲ್ಲುತ್ತಿದ್ದದ್ದು. ಅದೊಂದು ದಿನ ಮೂಗಿಗೆ ಮೂಗು ತಾಗಿಸಿ....  ಎಲ್ಲವೂ ಸ್ನೇಹವೇ...?

ಪ್ರಪೋಸ್ ಮಾಡದೆ ಇದ್ದರೆ ಹೃದಯದೊಳಗಿನ ಪ್ರೀತಿನಾ ದಿನಾ ದಿನಾ ಸಾಯಿಸಿ ಸ್ನೇಹದ ಮುಖವಾಡ ಧರಿಸುತ್ತ ಕಾಲ ಕಳೆಯಬಹುದಿತ್ತು. ಆದರೆ ಈ ಜಗತ್ತಿನಲ್ಲಿ ಹೇಳದೆ ಕಳೆದು ಹೋದ ಪ್ರೀತಿಯ ಲೋಕದಲ್ಲಿ ನಾನೂ ಸೇರಿ ಹೋಗಬಾರದಲ್ವ? ಅದಕ್ಕಾಗಿ ಜೀವನ ಪರ್ಯಂತ ಪರಿತಪಿಸಬಾರದಲ್ವೆ. ಅದಕ್ಕೆ ನಾನು ಪ್ರಪೋಸ್ ಮಾಡಿದ್ದು. ಆದರೆ ಅದಕ್ಕೆ ನೀಡಿದ ಮೌನದ ಶಿಕ್ಷೆ, ಸ್ನೇಹದ ಕಗ್ಗೋಲೆ ನೀಡಿದ ನೋವು ಮಾತ್ರ ಸಹಿಸಲಸಾಧ್ಯ. ನನ್ನ ಸಾವಿರ ಸಂದೇಶಗಳಿಗೆ ಒಂದಾಕ್ಕಾದರೂ ಬೈದಾದರೂ ಮಾರುತ್ತರ ಬರೆಯಬಾರದಿತ್ತೆ ಎಂದು ನಾನು ಎಷ್ಟು ಕಾದಿದ್ದೆ. ನಿನ್ನ ಒಂದು ಉತ್ತರ ನನಗೆ ಸಾಕಷ್ಟು ಆಕ್ಸಿಜನ್ ನೀಡಿದೆ.

ನನ್ನೊಂದಿಗಿರುವಾಗ ಅಳುಬುರುಕಿಯಾಗಿದ್ದ ನಿನ್ನಲ್ಲಿ ಇಂತಹ ಕಠೋರ ವ್ಯಕ್ತಿತ್ವ ಎಲ್ಲಿಂದ ಬಂತು. ನಿನಗೆ ಗೊತ್ತೆ ಕಳೆದ ವರ್ಷ ಯುಗಾದಿಯಲ್ಲಿ ನಾನು ಮಾಡಿದ ರೆವಲ್ಯೂಷನ್ ಪಟ್ಟಿಯಲ್ಲಿ ನಿನ್ನನ್ನು ಮರೆಯುವ ಗುರಿಯನ್ನೂ ಸೇರಿಸಿದ್ದೆ. ಮತ್ತೊಂದು ಯುಗಾದಿ ಹತ್ತಿರ ಬಂದರೂ ನಿನ್ನ ನೆನಪು ದೂರ ಸರಿಯುತ್ತಿಲ್ಲ. ಪ್ರತಿ ರಾತ್ರಿ ನಿದ್ದೆಯ ಮುನ್ನದ ಕನಸಿನಲ್ಲಿ ನೀನೇ ಯಾಕೆ ಕಾಡುತ್ತಿ. ನನ್ನ ಪ್ರೀತಿ ನಿನಗೆ ಬರೀ ಕ್ರಷ್ ಆಗಿತ್ತೆ? ಹೇಳೇ ಗೆಳತಿ ನಿನ್ನಲ್ಲಿ ನಿಜವಾಗಿಯೂ ಹೃದಯವಿತ್ತೇ? ಈ ಪತ್ರ ಓದಿ ಮತ್ತೆ ಮೌನಗೌರಿಯಾದರೂ ಮುಂದಿನ ಅನಿವರ್ಸರಿಗೆ ಒಂದು ಸಾಲು ಮರೆಯದಿರು. ಬಿ ಹ್ಯಾಪಿ -ಯುರ್ ಪಾಪಿ

ಪ್ರವೀಣ ಚಂದ್ರ
ಮಂಗಳೂರು ಬಜ್ಜಿ: ಒಂದು ಗೋಳಿಬಜೆ ಪ್ರಸಂಗ

ಮಂಗಳೂರು ಬಜ್ಜಿ: ಒಂದು ಗೋಳಿಬಜೆ ಪ್ರಸಂಗ

ಮೊನ್ನೆ ಬಾನು ತೂತಾದ ಹಾಗೆ ಎರಡು ದಿನ ಬಿಡದೆ ಮಳೆ ಸುರಿಯಿತಲ್ಲ. ಆ ಸಂಜೆಯೊಂದರಲ್ಲಿ ನಾನು ಬಸವನಗುಡಿ ಪಕ್ಕ ಹಾದು ಹೋಗುತ್ತಿದ್ದೆ. ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಮಳೆ ಜೋರಿದ್ದಾಗ ಹಸಿವು ಜಾಸ್ತಿಯಾಗೋದ್ಯಾಕೆ ಅಂತ ಇನ್ನೂ ಅರ್ಥವಾಗಿಲ್ಲ. ಊರಲ್ಲಿಯಾದರೆ ಮಳೆಗೆ ತಿನ್ನಲು ಕುರುಕುರು ಹಲಸಿನ ಹಪ್ಪಳ ಇರುತ್ತಿತ್ತು. ಬೆಂಗಳೂರಲ್ಲಿ ಕುರುಕುರೇ, ಲೇಸ್ ಪ್ಯಾಕೇಟೇ ಗತಿ!


ಅಲ್ಲೇ ಪಕ್ಕದಲ್ಲಿದ್ದ ಹಳ್ಳಿತಿಂಡಿ ಹೋಟೆಲ್ ಪ್ರವೇಶಿಸಿದಾಗ ನನ್ನ ಗಮನಸೆಳೆದದ್ದು ಗೋಳಿಬಜೆ, ಅಂದ್ರೆ ಮಂಗಳೂರು ಬಜ್ಜಿ. ಒಂದನೊಂದು ಕಾಲದಲ್ಲಿ ಅದು ನನ್ನ ಫೇವರಿಟ್ ಡಿಶ್. ಬೆಂಗಳೂರಲ್ಲಿ ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಹೋಟೆಲ್ ನಲ್ಲಿ ಗೋಳಿಬಜೆ ಸಿಗುತ್ತೆ. ಹಾಗೆ ಒಂದು ಪ್ಲೇಟ್ ಮಂಗಳೂರು ಬಜ್ಜಿ ತಿಂದು ಮನೆ ಕಡೆ ಹೊರಟವನಿಗೆ ಯಾಕೋ ಗೋಳಿಬಜೆಯ ಆ ದಿನಗಳು ನೆನಪಾದವು.

ಪೆರ್ನಾಜೆಯಲ್ಲಿ ಹೈಸ್ಕೂಲ್ ಓದುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಸಂಕಪ್ಪಣ್ಣನ ಹೋಟೆಲ್ ಇತ್ತು. ಬುತ್ತಿ ತರದವತ್ತು ಕಿಸೆಯಲ್ಲಿ ಐದ್ರೂಪಾಯಿ ಇಟ್ಟುಕೊಂಡು ಅಲ್ಲಿಗೆ ಹೋಗಿ ಒಂದು ಪ್ಲೇಟ್ ಗೋಳಿಬಜೆ ತಿನ್ನುತ್ತಿದ್ದೆ. ಕ್ರಮೇಣ ಬುತ್ತಿ ತರೋದೆ ನಿಲ್ಲಿಸಿಬಿಟ್ಟೆ. ಬೇಯಿಸಿದ ಕಡಲೆಯ ನೀರಿಗೆ ಉಪ್ಪು, ಮಸಾಲ ಹಾಕಿ ಅದನ್ನೇ ಸಾಂಬಾರು ತರಹ ನೀಡುತ್ತಿದ್ದರು. ಅದರಲ್ಲಿ ಗೋಳಿಬಜೆ ಮುಳುಗಿಸಿ ತಿಂದರೆ ಸಕತ್ ಟೇಸ್ಟು.

ಐದ್ರೂಪಾಯಿಗೆ ಲೆಕ್ಕಮಾಡಿ ಐದು ಗೋಳಿಬಜೆ ಸಿಗುತ್ತಿತ್ತು. ಅಷ್ಟು ದುಡ್ಡಿಗೆ ಮನೆಯಲ್ಲೇ ಐವತ್ತಕ್ಕೂ ಹೆಚ್ಚು ಗೋಳಿಬಜೆ ಮಾಡಬಹುದಂತ ಸ್ನೇಹಿತ ಸುನಿಲ ಹೇಳಿದ್ದು ಕಿವಿಗೆ ಹುಳಬಿಟ್ಟಂತಾಗಿತ್ತು. ಅದೊಂದು ದಿನ ಮನೆಯಲ್ಲೇ ಗೋಳಿಬಜೆ ಮಾಡಲು ನಾನು, ಮಾಮನ ಮಗ ಸೇರಿ ಸ್ಕೆಚ್ ಹಾಕಿದೆವು.

ಅಂದು ಮನೆಯಲ್ಲಿ ಯಾರೂ ಇರಲಿಲ್ಲ. ನಾನು, ಮಾಮನ ಮಗ ಮಾತ್ರ. ಆಗ ಕಣ್ಣಿಗೆ ಬಿದ್ದದ್ದು ದೇವರಕೋಣೆಯಲ್ಲಿ ದೊಡ್ಡ ಬಿಳಿಕ್ಯಾನ್ ನಲ್ಲಿಟ್ಟಿದ್ದ ತೆಂಗಿನ ಎಣ್ಣೆ. ತಕ್ಷಣ ನನಗೆ ಸಂಕಪ್ಪಣ್ಣನ ಹೋಟೆಲ್ ಗೋಳಿಬಜೆ ನೆನಪಾಯಿತು. ಅದನ್ನುಅವನಿಗೆ ಹೇಳಿದ್ದೇ ತಡ, ಅದು ಸುಲಭ. ಮೈದಾ ಇದ್ರೆ ಆಯ್ತು ಅಂದ.

ತಕ್ಷಣ ಪಕ್ಕದ ಅಜ್ಮಿರ್ ನ ಅಂಗಡಿಯಿಂದ ಐದ್ರೂಪಾಯಿಯ ಮೈದಾ ತಂದಾಯ್ತು. ಅದಕ್ಕೆ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಮಿಕ್ಸ್ ಮಾಡಿದೆವು. ಅದು ದೋಸೆ ಹಿಟ್ಟಿನಂತೆ ನೀರಾಯಿತು. ಏನ್ಮಾಡೋದು? ಮತ್ತೆ ಐದ್ರೂಪಾಯಿಯ ಮೈದಾ ತಂದೆವು.

ಗಟ್ಟಿಯಾದ ಹಿಟ್ಟನ್ನು ಚಿಕ್ಕಚಿಕ್ಕ ಉಂಡೆ ಮಾಡಿ ಲೆಕ್ಕ ಮಾಡಿದೆವು. 33 ಉಂಡೆ ಆಗಿದ್ದವು. ಹತ್ರೂಪಾಯಿಗೆ ಇಷ್ಟೊಂದು ಗೋಳಿಬಜೆ ವಾಹ್! ನಾಲಗೆಯಲ್ಲಿ ನೀರು ಜಿನುಗುತ್ತಿತ್ತು. ಅರ್ಧ ಲೀಟರ್ ನಷ್ಟು ತೆಂಗಿನ ಎಣ್ಣೆಯನ್ನು ಬಾಣಲೆಗೆ ಹಾಕಿದೆವು. ಅದು ಸಾಕಾಗದು ಎಣಿಸಿ ಮತ್ತೆ ಸ್ವಲ್ಪ ಎಣ್ಣೆ ಹಾಕಿದೆವು. ಮೈಕೈ ಪೂರ್ತಿ ಬಿಳಿಬಿಳಿ ಹಿಟ್ಟಿನ ಕಲೆಗಳಿದ್ದವು. ನೆಲದಲ್ಲೂ ಅಲ್ಲಲ್ಲಿ ಹಿಟ್ಟು ಬಿದ್ದಿತ್ತು. ಒಟ್ಟಾರೆ ಅಡುಗೆ ಮನೆ ಪೂರ್ತಿ ಸುಣ್ಣ ಚೆಲ್ಲಿದಂತೆ ಇತ್ತು.

ಎಣ್ಣೆ ಬಿಸಿಯಾದಗ ಉಂಡೆ ಉಂಡೆ ಹಿಟ್ಟು ಹಾಕಿದೆವು. ಎಣ್ಣೆಮೇಲಿದ್ದ ಗೋಳಿಬಜೆಗಳನ್ನು ಆಸೆಯಿಂದ ನೋಡತೊಡಗಿದೆವು. ಯಾಕೋ ಸಂಕಪ್ಪಣ್ಣನ ಹೋಟೆಲ್ ಗೋಳಿಬಜೆಯ ಬಣ್ಣಬರಲೇ ಇಲ್ಲ. ಬಣ್ಣ ಯಾವುದಾದರೇನು ಅಂದುಕೊಂಡು ರೆಡಿಯಾದ ಗೋಳಿಬಜೆಯನ್ನು ಬಾಯಿಗೆ ಹಾಕಿನೋಡಿದೆ. ಕಲ್ಲಿನಷ್ಟು ಗಟ್ಟಿಯಾಗಿತ್ತು. ರುಚಿನೇ ಇರಲಿಲ್ಲ. ಗುಡ್ಡಪ್ಪಣ್ಣನ ಹೋಟೆಲ್ ನಲ್ಲಿ ಸ್ಪಾಂಜ್ ತರಹ ಮೃದುವಾದ ಗೋಳಿಬಜೆ ಇರುತ್ತಿತ್ತು.

ತಕ್ಷಣ ಅಂಗಡಿಗೆ ಹೋಗಿ ಮೆಲ್ಲಗೆ ಅಜ್ಮಿರ್ ಬಳಿ ಗೋಳಿಬಜೆ ಮಾಡೋದು ಹೇಗೆ ಅಂತ ಕೇಳಿದೆವು. ಅದಕ್ಕೆ ಕಡ್ಲೆ ಪುಡಿನೂ ಬೇಕು ಅಂತ ಗೊತ್ತಾಯ್ತು. ಮೂರು ರುಪಾಯಿ ಕಡ್ಲೆ ಹುಡಿ ತಂದು ಅದನ್ನೂ ಮಿಕ್ಸ್ ಮಾಡಿದೆವು. ಮತ್ತೊಂದು ಸುತ್ತು ಹಿಟ್ಟಿನ ಉಂಡೆಗಳನ್ನು ಎಣ್ಣೆಗೆ ಹಾಕಿದೆವು. ತೆಗೆದು ನೋಡಿದಾಗ ಮತ್ತೆ ಗಟ್ಟಿಗಟ್ಟಿಯಾಗಿತ್ತು.

ಆಗ ಮಾಮನ ಮಗನಿಗೆ ಸೋಡಾ ಹಾಕಿದಾಗ ಮೃದುವಾಗುವ ಇಡ್ಲಿ ಸಿದ್ದಾಂತ ನೆನಪಾಯಿತು. ತಕ್ಷಣ ಅಡುಗೆಮನೆ ಅಟ್ಟದಲ್ಲಿ ಸೋಡಾದ ಹುಡಿ ಹುಡುಕಿದೆವು. ಕೊನೆಗೂ ಸಿಕ್ತು. ಮೈಕೈನಲ್ಲಿ ಕೊಂಚ ಮಸಿಯೂ ಆಗಿತ್ತು. ಸೋಡಾ ಹಾಕಿ ಮಾಡಿದ ಗೋಲಿಬಜೆ ಕೊಂಚ ಮೃದುವಾಗಿತ್ತು. ಜಾಸ್ತಿ ಸ್ಮೂತ್ ಆಗಲಿ ಅಂತ ಆತ ಸ್ವಲ್ಪ ಜಾಸ್ತಿನೇ ಸೋಡಾ ಪುಡಿ ಹಾಕಿದೆವು. ಮತ್ತೆ ರೆಡಿಯಾದ ಗೋಲಿ ಬಜೆ ಕಹಿಕಹಿಯಾಗಿತ್ತು. ಇಷ್ಟು ಮಾಡುವ ಹೊತ್ತಿಗೆ ಸಂಜೆ ಆಗಿತ್ತು.

ವಾಪಸ್ ಬಂದ ಅಮ್ಮನಿಗೆ ಮನೆ ಅವಸ್ಥೆ ನೋಡಿ ಏನಾನಿಸಿತೋ, ಒಂದು ಲೀಟರ್ ತೆಂಗಿನ ಎಣ್ಣೆ ವ್ಯರ್ಥವಾದ ಚಿಂತೆ ಬೇರೆ. ಅಪ್ಪ ಬರ್ಲಿ, ನಿಂಗೆ ಕಾದಿದೆ ಅಂದ್ರು. ನನಗೆ ಭಯ ಶುರು ಆಯ್ತು. ಮಾಮನ ಮಗ ಎಸ್ಕೇಪ್ ಆಗಿದ್ದ. ಅಷ್ಟೊತ್ತಿಗೆ ನನಗೆ ಹೊಟ್ಟೆನೋವು ಆರಂಭವಾಗಿತ್ತು. ಹೊಟ್ಟೆನೋವು ನೆಪದಿಂದ ಅಪ್ಪನ ಬೈಗುಳ ತಪ್ಪಿತ್ತು.

ಮರುದಿನ ಅಪ್ಪ ಭಟ್ರ ಹೋಟೆಲ್ ನಿಂದ ಗೋಳಿಬಜೆ ತಂದು ಕೊಟ್ರು :-) ನಂತ್ರ ಕೆಲವು ಸಮಯದ ನಂತರ ನಾನು ಅಪ್ಪ, ಅಮ್ಮ ಸೇರಿ ಮನೆಯಲ್ಲಿ ಗೋಳಿಬಜೆ ಮಾಡಿದೆವು. ಅದಕ್ಕೆ ಬಾಳೆಹಣ್ಣು ಸಹ ಹಾಕಿದ್ದರಿಂದ ಸ್ವೀಟಾಗಿತ್ತು........

(ಗೋಳಿಬಜೆ ಮಾಡೋದು ಹೀಗೆ: 4 ಕಪ್ಪು ಮೈದಾಹಿಟ್ಟು, ಅರ್ಧಕಪ್ ಕಡಲೇ ಹಿಟ್ಟು, ಕೊಂಚ ಅಡುಗೆ ಸೋಡ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನ ಕಾಯಿ 3-4 ಮತ್ತು ಬಾಣಲೆಯಲ್ಲಿ ಗೋಳಿಬಜೆ ಮುಳುಗುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಬೇಕು.

ಮೈದಾಹಿಟ್ಟು, ಕಡಲೇ ಹಿಟ್ಟು, ಸ್ವಲ್ಪ ಸೋಡಾ ಎಲ್ಲವನ್ನು ಕೊಂಚ ನೀರು ಹಾಕಿ ಮಿಕ್ಸ್ ಮಾಡಿ ಕಲಸಬೇಕು. ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ. ಸ್ವೀಟಾಗಬೇಕು ಅಂದರೆ ಸ್ವಲ್ಪ ಸಕ್ಕರೆ ಅಥವಾ ಒಂದೆರಡು ಬಾಳೆಹಣ್ಣು ಹಾಕಬಹುದು. ಇವೆಲ್ಲ ಹಾಕಿ ರೆಡಿಯಾದ ಹಿಟ್ಟನ್ನು ಉಂಡೆ ಮಾಡಿ ಕಾದ ಎಣ್ಣೆಗೆ ಹಾಕಿ. ಗೋಳಿಬಜೆ ರೆಡಿ :-) )
ಲಾವಣ್ಯ ಎಂಬ ಬಾಲ್ಯದ ಗೆಳತಿ

ಲಾವಣ್ಯ ಎಂಬ ಬಾಲ್ಯದ ಗೆಳತಿ

ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ

`ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ ಕೇಳಿ ಆಮೇಲೆ `ಅವಳಿಗೆ ಮದುವೆಯಾಗಿದೆ. ಗಂಡ ಮಿಲಿಟರಿಯಲ್ಲಿದ್ದಾನೆ’ ಅನ್ನೋ ಬಾಂಬ್‌ ಕೂಡ ಹಾಕಿದಳು. ಆದರೆ ಆ ಬಾಂಬ್‌ ಸ್ಪೋಟಗೊಂಡಿರಲಿಲ್ಲ.

ಯಾಕೆಂದರೆ ಅದು ನನ್ನ ಐದನೇ ಕ್ಲಾಸ್‌ನಲ್ಲಿ ನಡೆದ ಲವ್‌!ಹೌದು. ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು. ನನ್ನ ತಂದೆ ಮದುವೆಯಾದ ನಂತರ ಮಡಿಕೇರಿ ಎಂಬ ಊರನ್ನು ಬಿಟ್ಟು ಪುತ್ತೂರಲ್ಲಿ ನೆಲೆ ನಿಂತವರು. ಹೀಗಾಗಿ ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತನೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ. ಹೀಗೆ ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ.

ಆ ಮನೆಯ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು. ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಆದರೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು. ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಒಂದಿಷ್ಟು ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಚಡ್ಡಿ, ಕಿವಿಯಲ್ಲಿ ಪುಟ್ಟದಾದ ಎರಡು ಓಲೆಗಳು. ಬಿಳಿ ಬಣ್ಣ. ಮುದ್ದು ಮುಖ. ಕ್ಷಮಿಸಿ ಹೆಚ್ಚು ನೆನಪಿಲ್ಲ!ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದ ನನ್ನದ್ದು ಉದ್ದಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ. ಅದೊಂದು ದಿನ ಮನೆಯಲ್ಲಿ ಯಾರಿಲ್ಲ ಅಂತ ತಿಳಿದುಕೊಂಡು ನಾವಿಬ್ಬರು ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದೇವು. ಅದು ಏನು ಗೊತ್ತಾ? ನಮ್ಮ ಮದುವೆಯ ವಿಷ್ಯ! ನಾವು ಮದುವೆಯಾಗೋಣ. ಜೀವನ ಪೂರ್ತಿ ಒಟ್ಟಿಗೇ ಇರೋಣ, ನಾನು ನಿನ್ನನ್ನು ಕೊನೆವರೆಗೂ ಜೊತೆಯಾಗಿರ್ತಿನಿ, ಮದುವೆಯಾದ್ಮೆಲೆ ಜಗಳವಾಡಬಾರದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು….

ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು. ಆಮೇಲೆ ಏನೋ ಜ್ಞಾನೋದಯವಾದಂತೆ `ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ. ಹೀಗೆ ತುಂಬಾ ಮುಗ್ಧವಾಗಿ ಮಾತನಾಡುತ್ತಿದ್ದೇವು.ಹೀಗೆ ಆ ಜಗಲಿಯ ಮಾತು ಮುಗಿಸಿ ಮತ್ತೆ ಆಡಲು ಗದ್ದೆ ಬದಿಗೆ ಹೋದೆವು.

ಆಮೇಲೆ ಸಂಜೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ನಗಾಡುತ್ತಾ ಮಾತನಾಡುತ್ತಿದ್ದರು.ಆಮೇಲೆ ಗೊತ್ತಾಯಿತು. ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಅಜ್ಜಿ ಒಳಗೆ ಮಲಗಿಕೊಂಡಿದ್ದಾರಂತೆ. ಅವರೆಲ್ಲ ನಾವು ಹೇಳಿದ ರೀತಿಯೇ ಹೇಳಿ ನಗುತ್ತಿದ್ದರು.

ಆಮೇಲೆ ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ನಾನು ಅಳಲಿಲ್ಲ.

😮
ಅವನು ನಂಗೆ ಇಷ್ಟವಿಲ್ಲ ಕಣೇ…!!!

ಅವನು ನಂಗೆ ಇಷ್ಟವಿಲ್ಲ ಕಣೇ…!!!

ಹೇ ಅವನು ನನಗೆ ಇಷ್ಟವಿಲ್ಲ ಕಣೇ’

ಶ್ರಾವ್ಯಳ ಮಾತಿಗೆ ರಂಜಿತ ಬೆಚ್ಚಿಕೇಳಿದಳು.

`ಹೇ ಏನಾಗಿದೆ ನಿನಗೆ. ನಿನ್ನೆ ನಿನ್ನ ಎಂಗೇಜ್‌ಮೆಂಟ್‌ ಆಯ್ತು. ಅವತ್ತೇ ಹೇಳಬೇಕಿತ್ತು.. ನೀನು ಒಪ್ಪಿದರಿಂದ ತಾನೇ ಮದುವೆ ಫಿಕ್ಸ್‌ ಮಾಡಿದ್ದು. ಯಾಕೋ ಅಷ್ಟ ಚಂದದ ಹುಡುಗ ನಿನಗೆ ಬೇಡ್ವ?’

ಅದಕ್ಕೆ ಶ್ರಾವ್ಯ `ಸುಮ್ನಿರೇ, ನಂಗೆ ಬೆಂಗಳೂರು ಹುಡುಗ ಇಷ್ಟವಿಲ್ಲ. ಈ ಊರು ಬಿಟ್ಟು ಅಲ್ಲಿಗೆ ಹೋಗಬೇಕಾ? ಅಪ್ಪ ಅಮ್ಮನ ಒತ್ತಾಯಕ್ಕೆ ಹೂಂ ಅಂದದ್ದು’

`ನಂಗೊತ್ತಿಲ್ಲ ಏನಾದರೂ ಮಾಡ್ಕೊ’ ಅಂತ ರಂಜಿತ ಎದ್ದು ಹೋಗಲು ನೋಡಿದಾಗ ಅವಳ ಕೈ ಹಿಡಿದೆಳೆದ ಶ್ರಾವ್ಯ `ಹೇ, ರಂಜಿ ಏನಾದರೂ ಐಡಿಯಾ ಹೇಳೇ’ ಅಂದಳು.

ಅವಳ ಮಾತಿಗೆ `ಇದಕ್ಕೆ ಏನು ಮಾಡೋದಪ್ಪ’ ಅಂತ ತಲೆಕೆಡಿಸಿಕೊಳ್ಳುತ್ತ ಅಲ್ಲೇ ಕುಳಿತುಕೊಳ್ಳುತ್ತ ಯೋಚಿಸಿದಳು. `ಹೇ ಹೀಗೆ ಮಾಡು. ನಿನ್ನ ಅಮ್ಮನಲ್ಲಿ ಹೇಳು’

`ಬೇಡ ಅದು ಬೇಡ. ಬೇರೆ ಉಪಾಯ ಹೇಳು’ ಅದಕ್ಕೆ ರಂಜಿತ ಮತ್ತೆ ಸ್ವಲ್ಪ ಹೊತ್ತು ಯೋಚಿಸಿದಳು.

`ನೀನು ನಿನ್ನ ಭಾವಿ ಪತಿಗೆ ಫೋನ್‌ ಮಾಡಿ ಹೇಳು. ಹುಡುಗರಿಗೆ ಬೇಗ ಅರ್ಥವಾಗುತ್ತದೆ’ ಅದಕ್ಕೆ ಶ್ರಾವ್ಯ `ನಂಗೆ ಭಯ ಆಗುತ್ತೆ’ ಕೊನೆಗೆ ರಂಜಿತಳ ಒತ್ತಾಯಕ್ಕೆ ಶಶಾಂಕನಿಗೆ ಫೋನ್‌ ಮಾಡಲು ಒಪ್ಪಿದಳು.

ನಿನ್ನ ನಂಬರ್‌ ಅವನಲ್ಲಿ ಇರುತ್ತೆ. ನನ್ನ ಮೊಬೈಲ್‌ನಿಂದ ಮಾಡು ಅಂತ ರಂಜಿತ ತನ್ನ ಮೊಬೈಲ್‌ ಕೊಟ್ಟಳು.`ಹೇ ಅವನು ರಿಸೀವ್‌ ಮಾಡ್ತಾ ಇಲ್ಲ’ ಶ್ರಾವ್ಯ ನಿರಾಸೆಯ ಧ್ವನಿಯಲ್ಲಿ ಹೇಳಿದಳು.`ಹುಂ. ಈಗ 9 ಗಂಟೆ, ಬ್ಯುಸಿ ಇರಬೇಕು. ಆಮೇಲೆ ಟ್ರೈ ಮಾಡು.. ಮೊಬೈಲ್‌ ನಿನ್ನಲ್ಲಿ ಇರಲಿ. ಆಮೇಲೆ ಸಿಗ್ತಿನಿ’ ಅಂತ ಹೇಳಿ ರಂಜಿತ ಹೊರಹೋದಳು.

***
ಮುಂಜಾನೆ 9 ಗಂಟೆಗೆ(ಅವನು ನಿತ್ಯ ಎದ್ದೇಳುವ ಸಮಯ)ಎದ್ದಾಗ ಮೊಬೈಲ್‌ನಲ್ಲಿ ಮಿಸ್‌ಕಾಲ್‌ ಇತ್ತು. ತೆರೆದು ನೋಡಿದರೆ ಯಾವುದೋ ಅಪರಿಚಿತ ನಂಬರ್‌.

ಶಶಾಂಕ್‌ ಆ ನಂಬರ್‌ಗೆ ಫೋನ್‌ ಮಾಡಿದ.

ಹಲೋ ಯಾರು? ಅಂದ.

ಈ ಕಡೆಯಲ್ಲಿದ್ದ ಶ್ರಾವ್ಯಳಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಮದುವೆ ಇಷ್ಟ ಇಲ್ಲ ಅಂತ ಹೇಳಲು ಧೈರ್ಯನೂ ಬರಲಿಲ್ಲ. ಸುಮ್ಮನೆ ರಾಂಗ್‌ ನಂಬರ್‌ ಅಂತ ಹೇಳಿದ್ರೆ ಆಯ್ತು ಅಂತ ಮನಸ್ಸಿನಲ್ಲಿಯೇ ಅಂದುಕೊಂಡಳು.

‘ನಾನು ಸ್ವಾತಿ` ಅಂದಳು.

ಇವನು ತಲೆಕೆರೆದುಕೊಂಡ ‘ಯಾವ ಸ್ವಾತಿ ಮುತ್ತು’

ಅವಳು ಕಿಲಕಿಲನೆ ನಕ್ಕಳು.

ಆಮೇಲೆ ಶ್ರಾವ್ಯ ಕೇಳಿದಳು.`ನೀವು ರಮೇಶ್‌ ಅಲ್ವ’

ಯಾವ ರಮೇಶ್‌.

ಅದಕ್ಕೆ ಅವಳು `ರಮೇಶಣ್ಣ ?ಅಂದಳು.

ಅಲ್ಲ ನಾನು ಶಶಾಂಕ್‌.

ಓಹ್‌ ರಾಂಗ್‌ ನಂಬರ್‌. ಸಾರಿ.

ಅದಕ್ಕೆ ಇವನು ತುಂಟಧ್ವನಿಯಲ್ಲಿ ಥ್ಯಾಂಕ್ಸ್‌ ಅಂದ.

ಯಾಕೆ ಥ್ಯಾಂಕ್ಸ್‌ ? ಅವಳದ್ದು ಮರುಪ್ರಶ್ನೆ.

ಇವನು ಸುಮ್ಮಗೆ ಅಂತ ಹೇಳಿ ನಕ್ಕ.

ಯಾಕೆ ಥ್ಯಾಂಕ್ಸ್‌ ಹೇಳಿದ್ದು ಹೇಳಿ? ಅವಳು ಕಾಡುವ ಧ್ವನಿಯಲ್ಲಿ ಕೇಳಿದಳು.

`ಬೆಳಗ್ಗೆ ನಿಮ್ಮ ಮುದ್ದಾದ ಧ್ವನಿಯ ಸುಪ್ರಭಾತದಿಂದ ನನ್ನ ಎಬ್ಬಿಸಿದಕ್ಕೆ` ಅಂದ.

`ಇಷ್ಟು ಹೊತ್ತಿನವರೆಗೆ ಮಲಗುತ್ತೀರಾ?’ ಆಶ್ಚರ್ಯದಿಂದ ಕೇಳಿದಳು.

‘ಹುಂ. ನನ್ನ ಟೈಮಿಂಗ್ಸ್‌ ಹಾಗೇ’ಅವಳು

`ಲೂಸ್‌’ ಅಂತ ಹೇಳಿ ಫೋನ್‌ ಇಟ್ಟಳು.

***ಫೋನ್‌ ಇಟ್ಟಮೇಲೆ ಶ್ರಾವ್ಯಳಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನಿನ್ನೆ ಎಂಗೇಜ್‌ಮೆಂಟ್‌ ಕಳೆದರೂ ಅವನಲ್ಲಿ ಮನಬಿಚ್ಚಿ ಮಾತನಾಡಿರಲಿಲ್ಲ. ಈಗ ಫೋನ್‌ನಲ್ಲಿ ಆತನ ತುಂಟ ಧ್ವನಿ ಕೇಳಿ ಇವಳು ಖುಷಿ ಪಟ್ಟದ್ದು ನಿಜ. ಹೀಗೆ ಏನೋ ಯೋಚಿಸುತ್ತ ಕುಳಿತಾಗ ರಂಜಿತ ಬಂದಳು.

`ಏನಾಯ್ತೆ?’ ಅಂತ ಅವಳು ಕೇಳಿದ್ದಕ್ಕೆ ಇವಳು ನಗುತ್ತ ಫೋನ್‌ನಲ್ಲಿ ಮಾತನಾಡಿದ್ದನ್ನು ಹೇಳಿದಳು.

ರಂಜಿತ ನಗಲಿಲ್ಲ. ಗಂಭೀರವಾದ ಧ್ವನಿಯಲ್ಲಿ `ಏ ನಿನ್ನ ಭಾವಿಪತಿ ಬಗ್ಗೆ ನಾನು ಹೀಗೆ ಹೇಳಿದ್ದಕ್ಕೆ ಬೇಜಾರು ಮಾಡ್ಕೊಬೇಡ. ನನಗೆನಿಸುತ್ತೆ. ಅವನ್ಯಾರೋ ದೊಡ್ಡ ಫ್ಲರ್ಟ್‌ ಅಂತ’

ನಗುತ್ತಿದ್ದಶ್ರಾವ್ಯ ಒಮ್ಮೆಗೆ ಗಂಭೀರವಾದಳು. `ಹೇ ಹಾಗೇ ಏನು ಮಾತನಾಡಲಿಲ್ಲ ಕಣೇ ಅವರು’ ಅಂತ ಅವನ ಪರವಾಗಿ ಮಾತನಾಡಿದಳು.

ಯಾಕೋ ಅವನನ್ನು ಫ್ಲರ್ಟ್‌ ಅಂತ ಒಪ್ಪಿಕೊಳ್ಳೋಕೆ ಅವಳಿಗೆ ಮನಸ್ಸು ಬರಲಿಲ್ಲ.

ಸರಿ ನಾನು ಹೇಳಿದ ಹಾಗೇ ಕೇಳ್ತಿಯಾ? ರಂಜಿತಳದ್ದು ಮರುಪ್ರಶ್ನೆ

ಹುಂ ಹೇಳು.`ನೀನು ಅವನನ್ನು ಟೆಸ್ಟ್‌ ಮಾಡು’ ಅದಕ್ಕೆ ಶ್ರಾವ್ಯ

`ಟೆಸ್ಟಾ’ ಅಂತ ಅಚ್ಚರಿಯಿಂದ ಕೇಳಿದಳು.

‘ಹೌದು. ನೀನು ಸುಮ್ಮನೆ ಅವರಿಗೆ ಮೆಸೆಜ್‌ ಮಾಡು. ಹಾಯ್‌ ಅಂತ’

ಶ್ರಾವ್ಯಗೆ ಇದ್ಯಾಕೋ ಇಂಟ್ರೆಸ್ಟಿಂಗ್‌ ಅನಿಸ್ತು. ಮೆಸೆಜ್‌ನಲ್ಲಿ ಹಾಯ್‌ ಅಂತ ಕಳಿಸಿದಳು.

ಸ್ವಲ್ಪ ಹೊತ್ತು ಕಳೆದಾಗ ಶಶಾಂಕ್‌ನಿಂದಾಲೂ `ಹಾಯ್‌’ ಅಂತ ಬಂತು.`ಕಾಲ್‌ ಮಿ’ ಅಂತ ಕಳಿಸು ಅಂತ ರಂಜಿತಾ ಹೇಳಿದಾಗ ಹಾಗೇ ಬರೆದು ಕಳಿಸಿದಳು. ಆಮೇಲೆ ರಂಜಿತ ಶ್ರಾವ್ಯಗೆ ಪಾಠ ಸುರು ಮಾಡಿದಳು. `ನೋಡು ಅವನೀಗ ಲವ್‌ನಲ್ಲಿ ಬೀಳೋ ತರಹ ನೀನು ಮಾತನಾಡಬೇಕು. ನಿಮ್ಮ ಧ್ವನಿ ನಂಗೆ ಇಷ್ಟ, ಹೀಗೆ ಏನಾದ್ರು ಹೇಳು. ನಿಂಗೆ ಹೇಳಿಕೊಡುವ ಅಗತ್ಯವಿಲ್ಲ ಅಲ್ವ…..

***

ಆಫೀಸ್‌ಗೆ ಹೋಗೋಕೆ ಇನ್ನೂ ಸಮಯವಿದ್ದರಿಂದ ಶಶಾಂಕ ಟಿವಿ ನೋಡುತ್ತ ಕುಳಿತಿದ್ದ..

ಆಗ ಆಫೀಸ್‌ನಿಂದ ಪ್ರಾಜೆಕ್ಟ್‌ನಲ್ಲಿ ಏನೋ ತಪ್ಪಾಗಿರೋ ಕುರಿತು ಬಾಸ್‌ ಫೋನ್‌ ಮಾಡಿ ಕಿರಿಕಿರಿ ಮಾಡಿದ್ರು. ಆತನ ತಲೆಕೆಟ್ಟು ಹೋಗಿತ್ತು ಆಗ ಬಂತು ಸ್ವಾತಿಯ `ಕಾಲ್‌ಮಿ ‘ಮೆಸೆಜ್‌.

ಅವಳಿಗೆ ಕಾಲ್‌ ಮಾಡಿ `ಹೇಳಿ ಮೇಡಂ’ ಅಂತ ಗಂಭೀರವಾಗಿ ಹೇಳಿದ.

`ಸುಮ್ಮಗೆ ಕಾಲ್‌ ಮಾಡಿದ್ದು’ ಅಂತ ಅವಳ ಪೆಚ್ಚು ಮಾತಿಗೆ .

`ಏನ್ರಿ ಮಾಡೋಕೆ ಏನು ಕೆಲಸವಿಲ್ವ? ಏನಂದುಕೊಂಡಿದ್ದಿರಾ?’

ಇವನ ಬಯ್ಗುಳ ಕೇಳಿದ ಶ್ರಾವ್ಯಗೆ ರಂಜಿತ ಮಾಡಿದ ಪಾಠವೆಲ್ಲ ಮರೆತೋಯ್ತು.

`ಅದು ಅದು’ ಅಂತ ಪೇಚಾಡಿದಳು.

ಅಲ್ಲ ಅಪರಿಚಿತ ಹುಡುಗರಿಗೆ ಕಾಲ್‌ ಮಾಡ್ತಿರಲ್ವ. ಇಷ್ಟು ಧೈರ್ಯ ಹುಡುಗಿರಿಗೆ ಇರಬಾರದು’ಶಶಾಂಕನ ಇಂತಹ ಬೈಯ್ಗುಳ ಕೇಳಿ ಶ್ರಾವ್ಯಗೆ ಅಳು ಬರೋದಷ್ಟೇ ಬಾಕಿ.

`ಹಾಗಲ್ಲ ಸರ್‌ ಅದು.. ‘ಅಂತ ಮತ್ತೆ ತಡವರಿಸಿದಳು.

ಈಗ ಶಶಾಂಕ್‌ ಕೂಲಾಗಿ ಹೇಳಿದ. `ನೋಡಮ್ಮ ನೀನ್ಯಾರು ಅಂತ ನಂಗೊತ್ತಿಲ್ಲ. ನಿಂಗೂ ನಾನ್ಯಾರು ಅಂತ ಗೊತ್ತಿಲ್ಲ. ಹೀಗೆಲ್ಲ ಮಾಡಬಾರದು’

`ಸಾರ್‌  ನಾನು ಸುಮ್ಮನೆ ಮಾಡಿದ್ದು. ಯಾಕೋ ಬೋರಾಗಿತ್ತು. ಅದಕ್ಕೆ’ ಅಂತ ಹೇಳಿ ಅವನು ಏನು ಹೇಳ್ತಾನೆ ಅಂತ ಕೇಳದೇ ಫೋನ್‌ ಕಟ್‌ ಮಾಡಿದಳು.

***

ಫೋನ್‌ ಕಟ್ಟಾದಾಗ ಶಶಾಂಕ ಯೋಚಿಸಿದ.

ನಾನು ಹೇಳಿದ್ದು ಹೆಚ್ಚಾಯಿತಾ. ಪಾಪ ಹುಡುಗಿ ಭಯಪಟ್ಟಳಾ ಹೇಗೆ? ಅಂತ ಒಂದು ಮನಸ್ಸು ಹೇಳಿದರೆ, ಇಲ್ಲ ಇದನ್ನು ಮುಂದುವರೆಸಬಾರದು. ಅಂತ ಇನ್ನೊಂದು ಮನಸ್ಸು ಹೇಳಿತು.ಆಗ ಮತ್ತೆ ಶ್ರಾವ್ಯಳ `ಸಾರಿ’ ಎಂಬ ಮೆಸೆಜ್‌ ಬಂತು.`ಪರವಾಗಿಲ್ಲ. ಏನೋ ಟೆನ್ಷನ್‌ನಲ್ಲಿದ್ದೆ.. ಬೇಜಾರು ಮಾಡ್ಕೊಬೇಡಿ’ ಅಂತ ಮಾರುತ್ತರ ಕಳಿಸಿದ.

`ಬೆಳ್ಳಗೆ ಅಷ್ಟು ಚೆನ್ನಾಗಿ ಮಾತನಾಡಿದಿರಿ’ ಇವಳು ಮಾರುತ್ತರ ಕಳಿಸಿದಳು. ಹೀಗೆ ಇವರ ಚಾಟಿಂಗ್‌ ಮುಂದುವರೆಯಿತು. ಹೀಗೆ ಶಶಾಂಕನ ಸ್ನೇಹ ಗಳಿಸಿಕೊಳ್ಳುವಲ್ಲಿ ಶ್ರಾವ್ಯ ಯಶಸ್ವಿಯಾದಳು.

ಆದರೆ ಅವನನ್ನು ಪ್ರೀತಿಯ ಬಲೆಗೆ ಬೀಳಿಸಲು ಅವಳಿಂದ ಸಾಧ್ಯವಾಗಲಿಲ್ಲ. ಅದೊಂದು ದಿನ `ನಿಮಗೆ ನನ್ನ ಮೇಲೆ ಯಾವ ಅಭಿಪ್ರಾಯ ಇದೆ’ ಅಂತ ಅಳುಕುತ್ತ ಕೇಳಿದಳು.

`ಅಂದ್ರೆ’

‘ಏನಿಲ್ಲ ಸುಮ್ಮಗೆ ಕೇಳಿದೆ’

‘ನೋಡು ಸ್ವಾತಿ ತಪ್ಪು ತಿಳಿದುಕೊಳ್ಳಬೇಡ. nange ಎಂಗೇಜ್‌ಮೆಂಟ್‌ ಆಗಿದೆ. ಮುಂದಿನ ತಿಂಗಳು ಮದುವೆ’ ಅಂತ ಶಶಾಂಕ ಹೇಳಿದಾಗ ಇವಳಿಗೂ ಕಿಟಲೆ ಮಾಡಬೇಕೆನಿಸಿತು.

`ಮುಂದಿನ ತಿಂಗಳು ಮದುವೆನಾ?’ ಇವಳು ಆಶ್ಚರ್ಯ ವ್ಯಕ್ತಪಡಿಸುತ್ತ ಕೇಳಿದಳು.

`ಹುಂ. ನಿನ್ನನ್ನೂ ಕರೀತಿನಿ’ ಇವನ ಮಾತಿಗೆ ಅವಳು ನಗುತ್ತ ಕೇಳಿದಳು.

`ಹೇಗಿದ್ದಾಳೆ ಸರ್‌ ನಿಮ್‌ ಹುಡುಗಿ’ `ಸೂಪರ್‌’ ಅಂತ ಹೇಳಿ ಶಶಾಂಕ ನಕ್ಕಾಗ ಶ್ರಾವ್ಯಳ ಎದೆಯಲ್ಲಿ ಅವ್ಯಕ್ತ ಭಾವವೊಂದು ಹಾದು ಹೊಯಿತು.

`ಲವ್‌ ಮಾಡಿ ಮದುವೆಯಾಗ್ತ ಇದ್ದಿರಾ?’ ಇವಳ ಅಧಿಕಪ್ರಸಂಗದ ಪ್ರಶ್ನೆಗೆ ಅವನು ಕೋಪಗೊಳ್ಳದೇ ಹೇಳಿದ.

`ಹುಂ ಒಂದು ರೀತಿಯಲ್ಲಿ ಲವ್‌ ಮ್ಯಾರೇಜೇ, ನಾನು ಅವಳನ್ನು ಕಳೆದ ವರ್ಷನೇ ಇಷ್ಟಪಟ್ಟಿದ್ದೆ. ಇವತ್ತಿಗೂ ಹೇಳಿಲ್ಲ’ ಮಾರ್ಮಿಕವಾಗಿ ಹೇಳಿದಾಗ ಶ್ರಾವ್ಯಗೆ ಅಚ್ಚರಿ.

`ಏನು ನೀವು ಅವಳನ್ನು ಲವ್‌ ಮಾಡಿದ್ರ. ಇನ್ನೂ ಹೇಳಿಲ್ವ. ಹಾಗಾದ್ರೆ ಎಂಗೇಜ್‌ಮೆಂಟ್‌?’

`ಹೌದು ನಾನು ಅವಳನ್ನು ಪ್ರೀತಿಸತೊಡಗಿ ಒಂದು ವರ್ಷ ಆಯ್ತು. ಆದ್ರೆ ಹೇಳೋಕೆ ಧೈರ್ಯ ಇರಲಿಲ್ಲ. ಕೊನೆಗೆ ಉಪಾಯ ಮಾಡಿ ಮನೆಯಲ್ಲಿ ಇನ್‌ಡೈರೆಕ್ಟ್‌ ಆಗಿ ತಿಳಿಸಿದೆ. ಮನೆಯವರು ಸಂಪ್ರದಾಯ ಪ್ರಕಾರ ಹೋಗಿ ಹೆಣ್ಣು ಕೇಳಿದ್ರು. ನಾನು ಡೀಸಂಟ್‌ ಆಗಿ ಹೆಣ್ಣು ನೋಡೋ ಕಾರ್ಯ ಮುಗಿಸಿದೆ. ಅವಳಿಗೆ ನನ್ನ ಲವ್‌ ಸ್ಟೋರಿ ಇನ್ನೂ ಗೊತ್ತಿಲ್ಲ. ಹ್ಹ..ಹ್ಹ’ ಅಂತ ಇವನು ಹೇಳಿದಾಗ ಶ್ರಾವ್ಯಳ ಮುಖಕ್ಕೆ ರಕ್ತ ನುಗ್ಗಿತ್ತು.

ಆದರೂ ಸುಮ್ಮಗೆ ನಗುತ್ತ `ವೆರಿ ಇಂಟ್ರೆಸ್ಟಿಂಗ್‌” ಅಂತ ನಕ್ಕಳು.

`ಹುಂ. ಸುಮ್ಮಗೆ ನಿಮ್ಮ ತಲೆ ತಿಂದೆ. ಮದುವೆಗೆ ಕಾಲ್‌ ಮಾಡ್ತಿನಿ. ಖಂಡಿತಾ ಬನ್ನಿ. ಬಾಯ್‌’

ಶ್ರಾವ್ಯ ಬಾಯ್‌ ಹೇಳಿ ಫೋನ್‌ ಕಟ್‌ ಮಾಡಿದಳು

.ಆಮೇಲೆ `ರಂಜಿತಾ ಇದಕ್ಕಿಂತ ಒಳ್ಳೆ ಆಫರ್‌ ಇರೋ ಬೇರೆ ಸಿಮ್‌ ತಗೋ’ ಅಂದಳು. ಅದರಲ್ಲಿರುವ ಎಲ್ಲ ಕಾಂಟ್ಯಾಕ್ಟ್‌ಗಳನ್ನು ನಿನ್ನ ಫೋನ್‌ಗೆ ಹಾಕಿಕೊ’ ಅಂತ ಹೇಳಿದಳು.`ಸರಿ ಹಾಕ್ತಿನಿ. ಯಾಕೆ ಅಂತ ಹೇಳು ಅಂದಾಗ `ಹೇ ಅವರು ನಂಗೆ ಇಷ್ಟವಾಗಿದ್ದಾರೆ ಕಣೇ. ನಾವು ಫೋನ್‌ ಮಾಡಿದ್ದು ಅಂತ ಅವರಿಗೆ ಗೊತ್ತಾಗೋದು ಬೇಡ’ ಅಂತ ತುಸು ನಾಚಿಕೆಯಿಂದ ಹೇಳಿದಳು.

‘ಹೇ ಗುಡ್‌, ಅವರಲ್ಲಿ ಇಷ್ಟ ಇಲ್ಲ ಅಂತ ಹೇಳೋಕೆ ಹೋಗಿ ಬೌಲ್ಡ್‌ ಆದೆಯಾ ಹ್ಹ ಹ್ಹ’ ರಂಜಿತ ಜೋರಾಗಿ ನಗತೊಡಗಿದಳು.

ಶ್ರಾವ್ಯಳ ಮುಖ ಕೆಂಪಗಾಗತೊಡಗಿತು.

 

 
ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

ಏಕ್ ರೆಗ್ಯುಲರ್, ದೋ ಸ್ಮಾಲ್” ಧ್ವನಿ ಕೇಳಿದಾಕ್ಷಣ ಮುಖ ಮೇಲೆ ಎತ್ತದೆಯೇ ಮೂರು ಸಿಗರೇಟುಗಳನ್ನು ಮುಂದಿಟ್ಟ ಪಾನ್ ಅಂಗಡಿಯ ಹುಳುಕು ಹಲ್ಲಿನ ಹುಡುಗ.

ಸ್ಮಂಜಿಗೆ ನೋವಾಗುತ್ತೋ ಎಂಬಂತೆ ಮೆಲ್ಲಗೆ ಸಿಗರೇಟ್ ಬಾಯಿಯೊಳಗಿಟ್ಟು ಅಂಗಡಿಯ ಹರಕು ಡಬ್ಬದ ಮೇಲೆ ಇಟ್ಟಿದ್ದ ಬೆಂಕಿಪೊಟ್ಟಣವನ್ನು ಜೀವನ್ ಕೈಗೆತ್ತಿಕೊಂಡಾಗ ಕಿರಣ್ ಕೂಡ ಸಿಗರೇಟ್ ಬಾಯಲ್ಲಿಟ್ಟುಕೊಂಡು ರೆಡಿಯಾದ.

ತನ್ನ ಸಿಗರೇಟಿನ ಮುಂಭಾಗಕ್ಕೆ ಬೆಂಕಿಯಿಟ್ಟು ಕಿರಣ್ ಸಿಗರೇಟಿಗೂ ಜೀವನ್ ಬೆಂಕಿ ಕೊಟ್ಟಾಗ ಪಕ್ಕದಲ್ಲಿದ್ದ ಶ್ರಾವಣ್ ಕೂಡ ಬಾಯಲ್ಲಿ ಸಿಗರೇಟ್ ಇಟ್ಟು ಬೆಂಕಿ ಹತ್ತಿಸಿಕೊಳ್ಳಲು ನೋಡಿದ.

ಅರ್ಧ ಉರಿದ ಕಡ್ಡಿಯಲ್ಲಿ ಜೋರಾಗಿ ಪ್ರಜ್ವಲಿಸುತ್ತಿದ್ದ ಬೆಂಕಿಯನ್ನು ಜೀವನ್ ಊದಲು ಪ್ರಯತ್ನಿಸಿದಾಗ ಬಿಡದೆ ಅದೇ ಕಡ್ಡಿಯಲ್ಲಿ ಶ್ರಾವಣ್ ಸಿಗರೇಟ್ ಹಚ್ಚಿಸಿಕೊಂಡ.

ತಕ್ಷಣ ಮುಖ ಸಿಂಡರಿಸಿ ಜೀವನ್ “ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು ಕಣೋ” ಅಂದ.

ಪಕ್ಕದಲ್ಲಿದ್ದ ಕಿರಣ್ ಜೋರಾಗಿ ನಕ್ಕು “ಮೂವರು ಹೊತ್ತಿಸ್ಕೊಂಡ್ರೆ ಏನಾಗುತ್ತೆ” ಎಂದು ಪ್ರಶ್ನಿಸಿದ.

“ಮೂವರು ಒಂದೇ ಕಡ್ಡಿಯಿಂದ ಸಿಗರೇಟ್ ಹಚ್ಚಿಸ್ಕೊಂಡ್ರೆ ಅವರ ನಡುವೆ ಮನಸ್ತಾಪ ಆಗುತ್ತೆ” ವೇದಂತಿಯಂತೆ ನುಡಿದ ಜೀವನ್ ಕಡೆಗೊಮ್ಮೆ ಹೊಗೆ ಬಿಟ್ಟು ಜೋರಾಗಿ ನಕ್ಕುಬಿಟ್ಟ ಕಿರಣ್.

“ನೋಡಪ್ಪ ಕೆಲವು ನಂಬಿಕೆಗಳು ಇರುತ್ತೆ. ನಿಂಗೊತ್ತ ಲವರ್ರಿಗೆ ಪೆನ್ ಗಿಫ್ಟ್ ಕೊಡ್ಬಾರ್ದು, ಗಾಜಿನ ವಸ್ತು ಉಡುಗೊರೆ ಕೊಡ್ಬಾರ್ದು… ಹಿಂಗೆ ತುಂಬಾ ನಂಬಿಕೆಗಳು ಇದೆ. ಅದೆಲ್ಲ ಅನುಭವಕ್ಕೆ ಬಂದ್ಮೆಲೆ ಗೊತ್ತಾಗೋದು.. ” ಎಂದು ಹೇಳಿ ಜೀವನ್ ಯಾವುದೋ ಯೋಚನೆಯಲ್ಲಿ ಮುಳುಗಿದ.

“ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು ಅನ್ನೊ ಮಾತಿನ ಸತ್ಯ ಏನಂತ ನಿಂಗೊತ್ತ?” ಎಂದು ಪ್ರಶ್ನಿಸಿದ ಕಿರಣ್ ಕಡೆಗೆ ನೋಡಿ ದೀರ್ಘವಾಗಿ ಹೊಗೆ ಒಳಗೆ ಎಳೆದುಕೊಂಡು “ಏನು” ಎಂದು ಶ್ರಾವಣ್ ಪ್ರಶ್ನಿಸಿದ.

ಕಿರಣ್ ಬುದ್ದಿಜೀವಿಯಂತೆ ಮುಖಮಾಡಿ ಹೇಳತೊಡಗಿದ.

“ಈ ನಂಬಿಕೆ ಆರಂಭವಾದದ್ದು ವಿಯಟ್ನಾಂ ಯುದ್ಧಕಾಲದಲ್ಲಿ. ಆಗ ಸೈನಿಕರು ಮೂರು ಮೂರು ಜನರು ಒಟ್ಟಿಗೆ ಇರುತ್ತಿದ್ದರು. ಮೂವರು ಒಟ್ಟಿಗೆ ಒಂದೇ ಸಮಯದಲ್ಲಿ ಕಡ್ಡಿ ಹತ್ತಿಸಿಕೊಳ್ಳುವ ಸಮಯದಲ್ಲಿ ವೈರಿ ಸೈನಿಕರು ಧಾಳಿ ಮಾಡುವ ಅಪಾಯವಿದೆ ಅಲ್ವ? ಅದಕ್ಕೆ ಒಂದು ಕಡ್ಡಿಯಿಂದ ಇಬ್ರು ಮಾತ್ರ ಬೆಂಕಿ ಉರಿಸುತ್ತಿದ್ದರು. ಮತ್ತೊಬ್ಬ ಸೈನಿಕ ಸುತ್ತಮುತ್ತ ನಿಗಾವಹಿಸುತ್ತಿದ್ದ. ಅದೇ ನಂಬಿಕೆ ಈಗ ಮೂಢ ನಂಬಿಕೆಯಾಗಿದೆ.

ಇತಿಹಾಸದ ಉದಾಹರಣೆ ನೀಡಿ ಉದ್ದ ಭಾಷಣ ಬಿಗಿದ ಶ್ರಾವಣ್ ಮುಖವನ್ನೇ ಕೆಲವು ಕ್ಷಣ ನೋಡಿದ ಜೀವನ್ ತಕ್ಷಣ ಏನೋ ನೆನಪಾದಂತೆ, “ಪರ್ಸ್ ತಂದಿಲ್ಲ ಕಣೋ, ಸಿಗರೇಟ್ ದುಡ್ಡು ಕೊಡು” ಅಂತ ಹೇಳಿ ಮುಗುಳ್ನಕ್ಕ.

ಮುಗಿದ ಸಿಗರೇಟನ್ನು ನೆಲಕ್ಕೆ ಬಿಸಾಕಿ ಅದನ್ನು ಎಡಗಾಲಿನಲ್ಲಿ ಹೊಸಕಿದ ಶ್ರಾವಣ್ ಪರ್ಸಿಗೆ ಕೈ ಹಾಕಿದ. ಆಗ ಅವನ ಕಿಸೆಯಿಂದ ಬಿದ್ದ ಹುಡುಗಿಯ ಫೋಟೊವನ್ನು ಮೆಲ್ಲಗೆ ಹೆಕ್ಕಿಕೊಂಡು ನೋಡಿದ ಜೀವನ್ ಬೆಚ್ಚಿಬಿದ್ದ.

ಅಲ್ಲಿದ್ದದ್ದು ಜೀವನ್ ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ಹುಡುಗಿಯ ಫೋಟೊ!