Friday 30 September 2016

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ವಾಹನ ಕಂಪನಿಗಳು ಒಂದು ಕಾರು ಮಾಡೆಲಿನ ವಿವಿಧ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತವೆ. ಆ ಆವೃತ್ತಿಗಳಲ್ಲಿ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ವರ್ಷನ್‍ಗಳಿರುತ್ತವೆ. ಹೈಎಂಡ್ ಆವೃತ್ತಿಯಲ್ಲಿರುವ ವಿವಿಧ ಫೀಚರುಗಳು ಎಂಟ್ರಿ ಲೆವೆಲ್ ಕಾರಿನಲ್ಲಿ ಇರುವುದೇ ಇಲ್ಲ. ಉದಾಹರಣೆಗೆ
ಸ್ವಿಫ್ಟ್ ವಿಡಿಐನಲ್ಲಿ ಸೆಂಟ್ರಲ್ ಲಾಕಿಂಗ್ ಇದೆ. ಆದರೆ ಎಲ್‍ಎಕ್ಸ್‍ಐ ಮತ್ತು ಎಲ್‍ಡಿಐ ಆವೃತ್ತಿಗಳಲ್ಲಿ ಈ ಫೀಚರ್ ಇಲ್ಲ. ಆಲ್ಟೊ 800 ಎಲ್‍ಎಕ್ಸ್ ಕಾರಿನಲ್ಲಿ ಪವರ್ ಸ್ಟಿಯರಿಂಗ್, ಲೊ ಲೆವೆಲ್ ಫ್ಯೂಯೆಲ್ ವಾರ್ನಿಂಗ್, ಏರ್‍ಬ್ಯಾಗ್ ಇಲ್ಲ. ಆದರೆ ಈ ಫೀಚರುಗಳು ಆಲ್ಟೊ 800 ಎಲ್‍ಎಕ್ಸ್‍ಐನಲ್ಲಿವೆ. ಟಾಟಾ ಸಫಾರಿ ಇಎಕ್ಸ್ ಡಿಕೊರ್‍ನಲ್ಲಿ ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಇದೆ. ಆದರೆ ಎಲ್‍ಎಕ್ಸ್ ಡಿಕೊರ್‍ನಲ್ಲಿ ಈ ಫೀಚರ್ ಇಲ್ಲ. ಇಂಡಿಕಾ ವಿಸ್ಟಾ ಡಿ90 ವಿಎಕ್ಸ್ ಕಾರಿನಲ್ಲಿ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಮತ್ತು ಜಿಪಿಎಸ್ ನ್ಯಾವಿಗೇಷನ್ ಇಲ್ಲ. ಆದರೆ ಈ ಫೀಚರುಗಳು ವಿಸ್ಟಾ ಡಿ90 ಝಡ್‍ಎಕ್ಸ್ ಪ್ಲಸ್ ಆವೃತ್ತಿಯಲ್ಲಿ ಇವೆ. ನಿಸ್ಸಾನ್ ಸನ್ನಿ ಎಕ್ಸ್‍ಇ ಆವೃತ್ತಿಯಲ್ಲಿ ಚೈಲ್ಡ್ ಸೇಫ್ಟಿ ಲಾಕ್, ರಿಯರ್ ಡಿಫಾಗರ್ ಇತ್ಯಾದಿ ಫೀಚರುಗಳು ಇಲ್ಲ. ಸನ್ನಿ ಎಕ್ಸ್‍ಎಲ್ ಡೀಸೆಲ್ ಆವೃತ್ತಿಯಲ್ಲಿ ಈ ಎಲ್ಲಾ ಫೀಚರುಗಳಿವೆ.

ಹೀಗೆ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ಆವೃತ್ತಿಗಳ ಫೀಚರುಗಳು, ವಿಶೇಷತೆಗಳ ನಡುವೆ ಹಲವು ವ್ಯತ್ಯಾಸಗಳು ಇರುತ್ತವೆ. ಕಾರು ಖರೀದಿಸುವಾಗ ಹಣಕಾಸಿನ ಅಭಾವವೋ.. ಅಥವಾ ಇನ್ನಿತರ ಕಾರಣಗಳಿಂದ ಕಡಿಮೆ ಫೀಚರ್‍ಗಳಿರುವ ಕಾರನ್ನು ನೀವು ಖರೀದಿಸಿರಬಹುದು. ಆದರೆ ದಿನಕಳೆದಂತೆ ಬೇಕೆನಿಸಿದರೆ ಹೈಎಂಡ್ ಆವೃತ್ತಿಗಳಲ್ಲಿರುವ ಸೆನ್ಸಾರ್, ಜಿಪಿಎಸ್, ಅಲಾಯ್ ಇತ್ಯಾದಿ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಅಲಾಯ್ ವೀಲ್
ಚಕ್ರಗಳಿಗೆ ಅಲಾಯ್ ವೀಲ್ ಅಳವಡಿಸಿದರೆ ಕಾರಿನ ಅಂದ ಹೆಚ್ಚಾಗುತ್ತದೆ. ಇವು ಹಗುರವಾಗಿರುವುದರಿಂದ ಕಾರಿನ ಹ್ಯಾಂಡ್ಲಿಂಗ್, ಪರ್ಫಾಮೆನ್ಸ್ ಸಹ ಹೆಚ್ಚಾಗುತ್ತದೆ. ರಿಮ್ ಬಾಳಿಕೆ ಹೆಚ್ಚಿಸುತ್ತದೆ ಮತ್ತು ರಿಮ್ ಬೆಂಡ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಸೆಟ್ ಅಲಾಯ್ ವೀಲ್‍ಗೆ ಸುಮಾರು 15-20 ಸಾವಿರ ರೂಪಾಯಿ ವಿನಿಯೋಗಿಸಬೇಕಾಗಬಹುದು. ಇದಕ್ಕಿಂತ ದುಬಾರಿ ಅಲಾಯ್‍ಗಳೂ ದೊರಕುತ್ತವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ಕಾರ್ ಪಾರ್ಕಿಂಗ್ ಮಾಡುವಾಗ ಕಾರಿನ ಹಿಂಬದಿಯ ಪ್ರದೇಶಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ದೊಡ್ಡ ಕಾರುಗಳಲ್ಲಿ ಈ ಸಮಸ್ಯೆ ಹೆಚ್ಚು. ಪಾರ್ಕಿಂಗ್ ಮಾಡುವಾಗ ಹಿಂಬದಿಯ ಗೋಡೆಗೆ, ಬೇರಾವುದೋ ವಾಹನಕ್ಕೆ ಗಾಡಿ ತಾಗಿಸಿದಾಗ `ಛೇ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್ ಇದ್ದಿದ್ದರೆ' ಎಂದೆನಿಸಬಹುದು. ಆಫ್ಟರ್ ಮಾರ್ಕೇಟ್ಟಿನಲ್ಲಿ ಇಂತಹ ಪ್ಲಗ್ ಇನ್ ಪಾರ್ಕಿಂಗ್ ಸೆನ್ಸಾರ್‍ಗಳು ಸಿಗುತ್ತವೆ. ಇವನ್ನು ನಿಮ್ಮ ಕಾರಿನ ರಿವರ್ಸ್ ಲ್ಯಾಂಪಿನ ಹತ್ತಿರ ಜೋಡಿಸಿ ನಿರಾಳವಾಗಿ ಕಾರನ್ನು ಪಾರ್ಕಿಂಗ್ ಮಾಡಬಹುದು. ಇದನ್ನು ಅಳವಡಿಸಲು ನೀವು 3 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಬಹುದು.

ರಿಮೋಟ್ ಲಾಕಿಂಗ್
ಇಮೊಬಿಲೈಝರ್ ರಿಮೋಟ್ ಲಾಕಿಂಗ್  ವ್ಯವಸ್ಥೆ ಕಾರಿನಲ್ಲಿದ್ದರೆ ಉತ್ತಮ. ಇದನ್ನು ಕಾರಿಗೆ ಅಳವಡಿಸಲು ಹೆಚ್ಚು ಕಷ್ಟಪಡಬೇಕಿಲ್ಲ. ಇದರ ದರ 4ರಿಂದ 12 ಸಾವಿರ ರೂಪಾಯಿವರೆಗಿದೆ. ಆಟೊಕಾಪ್, ಮೈಕ್ರೊವಿಬಿಬಿ, ಪಿಯೊನಿಕ್ಸ್, ಸಿಲಿಕಾನ್, ನಿಪ್ಪಾನ್ ಇತ್ಯಾದಿ ಕಂಪನಿಗಳ ರಿಮೋಟ್ ಲಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳಬಹುದು.

ಲೆದರ್ ಅಪ್‍ಹೊಲೆಸ್ಟ್ರೆ

ಕಾರಿನ ಸೀಟು ಮತ್ತು ಇತರ ಪ್ರಮುಖ ಭಾಗಗಳಲ್ಲಿ ಮೆತ್ತನೆಯ ಚರ್ಮದ ಹೊದಿಕೆ ಇದ್ದರೆ ಚೆನ್ನಾಗಿತ್ತು ಎಂದು ನೀವು ಅಂದುಕೊಂಡಿರಬಹುದು. ಸಂಪೂರ್ಣ ಅಸಲಿ ಲೆದರ್ ಅಪ್‍ಹೊಲೆಸ್ಟ್ರೆ ಅಳವಡಿಸಿಕೊಳ್ಳುವುದು ದುಬಾರಿ. ಯಾಕೆಂದರೆ ಇವುಗಳ ವೆಚ್ಚ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತವೆ. ಆದರೆ ಫಾಕ್ಸ್ ಲೆದರ್ ಹೊದಿಕೆಗಳು ಸುಮಾರು 15 ಸಾವಿರ ರೂಪಾಯಿಗೆ ದೊರಕುತ್ತವೆ. ವಿವಿಧ ಬಣ್ಣದ ಲೆದರ್ ಅಪ್‍ಹೊಲೆಸ್ಟ್ರೆ ಹಾಕಿಕೊಳ್ಳುವ ಮೂಲಕ ನಿಮ್ಮ ಕಾರಿನ ಅಂದ ಹೆಚ್ಚಿಸಿಕೊಳ್ಳಬಹುದು. ಸೆಖೆಗಾಲದಲ್ಲಿ ಇವು ಕೊಂಚ ಹೀಟ್ ಅನಿಸಬಹುದು.

ರಿಯರ್ ವ್ಯೂ ಕ್ಯಾಮರಾ
ನಿಮ್ಮ ಕಾರಿನಲ್ಲಿ ಡಿವಿಡಿ ಡಿಸ್‍ಪ್ಲೇ ಇದ್ದರೆ, ನೇರವಾಗಿ ಅದಕ್ಕ ರಿವರ್ಸ್ ಕ್ಯಾಮರಾವನ್ನು ಕನೆಕ್ಟ್ ಮಾಡಬಹುದು. ಆಕ್ಸೆಸರಿ ಮಾರುಕಟ್ಟೆಯಲ್ಲಿ ಡಿಸ್‍ಪ್ಲೇ ಜೊತೆಗೆ ರಿಯರ್ ವ್ಯೂ ಕ್ಯಾಮರಾಗಳ ಪೂರ್ತಿ ಸೆಟ್ ದೊರಕುತ್ತದೆ. ಕೆಲವೊಂದು ಕಂಪನಿಗಳು ಇಂತಹ ಕಿಟ್‍ನಲ್ಲಿ ಪಾರ್ಕಿಂಗ್ ಸೆನ್ಸಾರ್ ಸಹ ನೀಡುತ್ತವೆ. ಕ್ಯಾಮರಾ ಡಿಸ್‍ಪ್ಲೇಯನ್ನು ಕಾರಿನ ಡ್ಯಾಷ್‍ಬೋರ್ಡಿಗೆ ಜೋಡಿಸಬಹುದು. ಇದಕ್ಕೆ ಸುಮಾರು 3 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿ ಖರ್ಚಾಗಬಹುದು.

ಬ್ಲೂಟೂಥ್ ಸಾಧನ
ಕಾರ್ ಡ್ರೈವ್ ಮಾಡುತ್ತ ಮೊಬೈಲ್ ಫೆÇೀನ್ ಬಳಕೆ ಮಾಡುವುದು ತಪ್ಪು. ಆದರೆ ಈಗಿನ ಹೈಎಂಡ್ ಕಾರುಗಳಲ್ಲಿರುವ ಬ್ಲೂಟೂಥ್ ಸಾಧನಗಳು ಆಟೋಮ್ಯಾಟಿಕ್ ಆಗಿ ಕರೆ ಸ್ವೀಕರಿಸಿ ಮಾತನಾಡಲು ಅನುವು ಮಾಡಿಕೊಡುತ್ತವೆ. ಜಾಬ್ರಾ, ಪ್ಲಾಂಟ್ರೊನ್ಕಿಸ್, ಮೊಟೊರೊಲಾ, ನೊಕಿಯಾ ಮುಂತಾದ ಕಂಪನಿಗಳ ಬ್ಲೂಟೂಥ್ ಸಾಧನ ಖರೀದಿಸಿ ಅದನ್ನು ಕಾರಿನ ಸನ್ ವಿಷರ್‍ಗೆ ಕ್ಲಿಪ್ ಮಾಡಿ ನಿಮ್ಮ ಮೊಬೈಲ್ ಫೆÇೀನಿಗೆ ಪೇರ್ ಮಾಡಬಹುದು. ಕೆಲವು ಮ್ಯೂಸಿಕ್ ಪ್ಲೇಯರ್‍ಗಳಲ್ಲಿ ಇಂತಹ ಬ್ಲೂಟೂಥ್ ಸಾಧನ ಇರುತ್ತದೆ.

ಪವರ್ ವಿಂಡೋಸ್
ನಿಮ್ಮ ಕಾರಿನಲ್ಲಿ ಪವರ್ ವಿಂಡೋ ಇಲ್ಲವೆಂದು ಚಿಂತೆ ಮಾಡುವ ಅಗತ್ಯವಿಲ್ಲ. ಕಾರ್ ಆಫ್ಟರ್ ಮಾರ್ಕೇಟ್‍ಗಳಲ್ಲಿ ಪವರ್ ವಿಂಡೋಸ್ ಸಿಸ್ಟಮ್ ಸಹ ದೊರಕುತ್ತವೆ. ಸುಮಾರು 3ರಿಂದ 8 ಸಾವಿರ ರೂಪಾಯಿಗೆ ನಿಮ್ಮ ಕಾರಿಗೆ ಪವರ್ ವಿಂಡೋಸ್‍ಗಳನ್ನು ಅಳವಡಿಸಿಕೊಳ್ಳಬಹುದು.

ಜಿಪಿಎಸ್ಅಪರಿಚಿತ ರಸ್ತೆಗಳಲ್ಲಿ ದಾರಿ ತೋರಿಸುವ ಜಿಪಿಎಸ್ ಸಾಧನಗಳನ್ನು ಸಹ ನಿಮ್ಮ ಕಾರಿಗೆ ಅಳವಡಿಸಿಕೊಳ್ಳಬಹುದು. ಈಗ ಹೆಚ್ಚಿನ ಸ್ಮಾರ್ಟ್‍ಫೆÇೀನ್‍ಗಳಲ್ಲೂ ಜಿಪಿಎಸ್ ಸಾಧನವಿದೆ. ಇವಿಷ್ಟು ಮಾತ್ರವಲ್ಲದೇ ನಿಮ್ಮ ಕಾರಿಗೆ ಫಾಗ್ ಲ್ಯಾಂಪ್, ಸನ್‍ರೂಫ್‍ಗಳನ್ನು ಅಳವಡಿಸಿಕೊಳ್ಳಬಹುದು. 4-8 ಸಾವಿರ ರೂಪಾಯಿ ವಿನಿಯೋಗಿಸಿದರೆ ಕಾರಿನ ಸ್ಟಿಯರಿಂಗ್ ವೀಲ್‍ಗೆ `ಸ್ಟಿಯರಿಂಗ್ ಆಡಿಯೋ ರಿಮೋಟ್' ಅಳವಡಿಸಿಕೊಳ್ಳಬಹುದು.

ಕಾರ್ ಮಾಡಿಫೈ ಅಂದರೆ ಇಷ್ಟೇ ಅಲ್ಲ. ನಿಮ್ಮಲ್ಲಿ ವೆಚ್ಚ ಮಾಡಲು ಸಾಕಷ್ಟು ಹಣವಿದ್ದರೆ ಟೈರ್, ಎಗ್ಸಾಸ್ಟ್, ಏರ್‍ಫಿಲ್ಟರ್, ಸ್ಪಾರ್ಕ್ ಪ್ಲಗ್ಸ್, ಎಂಜಿನ್ ಸೇರಿದಂತೆ ಕಾರಿನ ಪರ್ಫಾಮೆನ್ಸ್ ವಿಷಯಗಳನ್ನು ಸಹ ಅಪ್‍ಗ್ರೇಡ್ ಮಾಡಿಕೊಳ್ಳಬಹುದು.
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ
ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಓದಿ ಅಕೌಂಟೆಂಟ್ ಆದವರಿಗೆ ವೃತ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲು ವಿವಿಧ ಸರ್ಟಿಫಿಕೇಷನ್ ಕೋರ್ಸ್‍ಗಳು ಸಾಥ್ ನೀಡುತ್ತವೆ. ಅವುಗಳಲ್ಲಿ ಎಸ್‍ಎಂಎ ಸರ್ಟಿಫಿಕೇಷನ್ ಸಹ ಪ್ರಮುಖವಾದದ್ದು. ಅಮೆರಿಕದ ಐಎಂಎ ಜೊತೆ ದೇಶದ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಸಿಎಂಎಯು ಎಂಒಯು ಒಪ್ಪಂದ ಮಾಡಿಕೊಂಡು ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ ಸರ್ಟಿಫಿಕೇಷನ್ ನೀಡುತ್ತಿದೆ. ಕಂಪನಿಯೊಳಗಿನ ಹಣಕಾಸು ಕಾರ್ಯಗಳನ್ನು ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂ ನೆರವಾಗುತ್ತದೆ. ಈಗಿನ ಸಂಕೀರ್ಣ ವಾಣಿಜ್ಯ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂನಿಂದ ಸಾಧ್ಯವಾಗುತ್ತದೆ.
ವಿಜಯ ಕರ್ನಾಟಕ ಕಾಂಪಿಟೇಷನ್ ವಿಕೆಯ ಪ್ರೊ ಲರ್ನಿಂಗ್ ಅಂಕಣದಲ್ಲಿ ಪ್ರಕಟಿ

ಯಾಕೆ ಸಿಎಂಎ ಕಲಿಯಬೇಕು?
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಮತ್ತು ಫೈನಾನ್ಸಿಯಲ್ ಅಕೌಂಟೆಂಟ್ ಕುರಿತು ಉತ್ತಮ ಜ್ಞಾನ ಲಭಿಸುತ್ತದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂ ತೂಕ ಹೆಚ್ಚಾಗುತ್ತದೆ. ಉದ್ಯೋಗಾವಕಾಶವೂ ಹೆಚ್ಚುತ್ತದೆ. ಹೆಚ್ಚು ವೇತನದ ಆಫರ್ ಸಹ ದೊರಕುತ್ತದೆ. ನಾಯಕತ್ವ ಕೌಶಲ, ವ್ಯವಹಾರದ ಅಂತಾರಾಷ್ಟ್ರೀಯ ಮಜಲುಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಯಾರು ಕಲಿಯಬಹುದು?
ಈ ಕೋರ್ಸ್ ಅನ್ನು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ವೃತ್ತಿಯಲ್ಲಿ ಇರುವವರೂ ಮಾಡಬಹುದಾಗಿದೆ. ಅಂಗೀಕೃತ ವಿವಿ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅರ್ಥಶಾಸ್ತ್ರ, ಬೇಸಿಕ್ ಸ್ಟಟಿಸ್ಟಿಕ್ಸ್ ಮತ್ತು ಫೈನಾನ್ಸಿಯಲ್ ಅಕೌಂಟಿಂಗ್‍ನ ಮೂಲಭೂತ ಜ್ಞಾನ ಇರಬೇಕು. ಎರಡು ವರ್ಷದ ವೃತ್ತಿಪರ ಅನುಭವ ಜೊತೆಗಿರಬೇಕು.
ಬಿಕಾಂ, ಬಿಬಿಎ, ಎಂಬಿಎ ಇತ್ಯಾದಿ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು, ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಪಡೆದವರು ಸಿಎಂಎ ಸರ್ಟಿಫಿಕೇಷನ್ ಪಡೆಯಬಹುದು. ಮ್ಯಾನೇಜ್‍ಮೆಂಟ್ ಹಂತದಲ್ಲಿ ವೃತ್ತಿಗೆ ಪ್ರವೇಶಿಸಬಯಸುವವರು ಸಹ ಈ ಕೋರ್ಸ್ ಪಡೆಯಬಹುದು. ಕೇವಲ ಆರೆಂಟು ತಿಂಗಳಲ್ಲಿ ಈ ಎಗ್ಸಾಂ ಅನ್ನು ಪಾಸ್ ಮಾಡಬಹುದಾಗಿದೆ. ಕೇವಲ 2 ಪೇಪರ್‍ಗಳಿದ್ದು, 6 ತಿಂಗಳಲ್ಲಿ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ. 12 ತಿಂಗಳು ಅಥವಾ 3 ವರ್ಷದ ಅವಧಿಯ ಕೋರ್ಸ್‍ಗಳನ್ನೂ ಮಾಡಬಹುದಾಗಿದೆ.

ಪರೀಕ್ಷೆಗೆ ಏನು ಓದಬೇಕು?
ಸಿಎಂಎ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿವೆ. ಭಾಗ 1 ಪ್ರಶ್ನೆಪತ್ರಿಕೆಯಲ್ಲಿ ಹಣಕಾಸು ಯೋಜನೆ, ಕಾರ್ಯಕ್ಷಮತೆ ಮತ್ತು ನಿಯಂತ್ರಣ- ಪ್ಲಾನಿಂಗ್ ಬಜೆಟಿಂಗ್ ಫಾರ್‍ಕಾಸ್ಟಿಂಗ್, ಫರ್ಫಾಮೆನ್ಸ್ ಮ್ಯಾನೇಜ್‍ಮೆಂಟ್, ಕಾಸ್ಟ್ ಮ್ಯಾನೇಜ್‍ಮೆಂಟ್, ಇಂಟರ್ನಲ್ ಕಂಟ್ರೋಲ್ಸ್ ಮತ್ತು ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಾರ್ಟ್ 2 ಪ್ರಶ್ನೆಪತ್ರಿಕೆಯಲ್ಲಿ ಫೈನಾನ್ಶಿಯಲ್ ಡಿಸಿಷನ್ ಮೇಕಿಂಗ್- ಫೈನಾನ್ಶಿಯಲ್ ಸ್ಟೇಟ್‍ಮೆಂಟ್ ಅನಾಲಿಸಿಸ್, ಕಾಪೆರ್Çರೇಟ್ ಫೈನಾನ್ಸ್, ಡಿಸಿಷನ್ ಅನಾಲಿಸಿಸ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್, ಇನ್ವೆಸ್ಟ್‍ಮೆಂಟ್ ಡಿಸಿಷನ್, ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಕುರಿತು ಪ್ರಶ್ನೆಗಳಿರುತ್ತವೆ. ಒಟ್ಟು 4 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಶೇಕಡ 75ರಷ್ಟು ಬಹುಆಯ್ಕೆ ಪ್ರಶ್ನೆಗಳು ಮತ್ತು ಶೇಕಡ 25ರಷ್ಟು ಪ್ರಬಂಧ ಬರೆಯುವ ಪ್ರಶ್ನೆಗಳಿರುತ್ತವೆ. ಜನವರಿ/ಫೆಬ್ರವರಿ, ಮೇ/ಜೂನ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಕಂಪ್ಯೂಟರೀಕೃತ ಆನ್‍ಲೈನ್ ಪರೀಕ್ಷೆ ನಡೆಯುತ್ತದೆ. ಪಾಸ್ ಆಗಲು ಶೇಕಡ 72ರಷ್ಟು ಅಂಕ ಪಡೆಯಬೇಕು.

ಉದ್ಯೋಗಾವಕಾಶ ಹೇಗಿದೆ?
ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಎಂಎ ಸರ್ಟಿಫಿಕೇಷನ್ ಇದ್ದವರಿಗೆ ಬಹುಬೇಡಿಕೆಯಿದೆ. ಫೈನಾನ್ಶಿಯಲ್ ಅನಾಲಿಸ್ಟ್, ಇಂಟರ್ನಲ್ ಅಡಿಟರ್, ಸೀನಿಯರ್ ಎಕ್ಸಿಕ್ಯುಟಿವ್, ಫೈನಾನ್ಸ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್, ಪ್ರೈಸಿಂಗ್ ಅನಾಲಿಸ್ಟ್, ಡೈರೆಕ್ಟರ್-ಫೈನಾನ್ಸ್, ಚೀಫ್ ಫೈನಾನ್ಸಿಯಲ್ ಆಫೀಸರ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಸಿಎಂಎ ಸರ್ಟಿಫಿಕೇಷನ್ ನೆರವಾಗುತ್ತದೆ. ಈ ಕೋರ್ಸ್ ಕಲಿಯಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ವೆಬ್ ಸೈಟ್‍ಗೆ ಭೇಟಿ ನೀಡಬಹುದು.

ಜನಪ್ರಿಯ ಫೈನಾನ್ಸ್ ಕೋರ್ಸ್‍ಗಳು
ಎಂಬಿಎ: ಎಂಬಿಎ ಇನ್ ಫೈನಾನ್ಸ್ ಓದಿದವರಿಗೆ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಫೈನಾನ್ಶಿಯಲ್ ಮಾಡೆಲಿಂಗ್, ಸ್ಟಟಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಎಂಬಿಎ ಪದವೀಧರರು ಹೆಚ್ಚಾಗುತ್ತಿದ್ದು, ಹೆಚ್ಚು ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.


ಚಾರ್ಟೆಡ್ ಅಕೌಂಟೆಂಟ್: 1949ರ ಚಾರ್ಟೆಡ್ ಅಕೌಂಟೆಂಟ್ ಕಾಯಿದೆ ಅನ್ವಯ ಸ್ಥಾಪನೆಯಾದ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್‍ಗೆ ದೇಶದಲ್ಲಿಂದು ಹೆಚ್ಚು ಬೇಡಿಕೆಯಿದೆ. ಕನ್ಸಲ್ಟೆನ್ಸಿ, ಅಡಿಟ್ ಪ್ರಾಕ್ಟೀಸ್, ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಇದು ನಿಮಗೆ ಉತ್ತಮ ಉದ್ಯೋಗವಕಾಶ ದೊರಕಿಸಿಕೊಡುತ್ತದೆ. ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ ಓದಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಪಡೆಯಬಹುದು. ಅಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗ ಪಡೆಯಲು ದೇಶದ ಸಿಎ ಕೋರ್ಸ್ ನೆರವಾಗುತ್ತದೆ.


ಕಾಸ್ಟ್ ಅಕೌಂಟೆಂಟ್: ಕಾಸ್ಟ್ ಆ್ಯಂಡ್ ವಕ್ರ್ಸ್ ಅಕೌಂಟೆಂಟ್ಸ್ ಕಾಯಿದೆ, 1959ತ ಅನ್ವಯ ಸ್ಥಾಪನೆಯಾದ ಕಾಸ್ಟ್ ಅಕೌಂಟೆಂಟ್ ಕೋರ್ಸ್ ಸಹ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ.


ಕಂಪನಿ ಸೆಕ್ರೆಟರಿ: ಕಂಪನಿ ಸೆಕ್ರೆಟರಿ ಕಾಯಿದೆ, 1980ರ ಅನ್ವಯ ಸ್ಥಾಪನೆಯಾದ ಈ ಕೋರ್ಸ್ ಅನ್ನು ಕಲಿತವರು ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಗ್ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ, ಕಾಪೆರ್Çರೇಟ್ ಆಫೀಸ್‍ಗಳಲ್ಲಿ ಉದ್ಯೋಗ ಪಡೆಯಬಹುದು.



ವೆಬ್‍ ಡಿಸೈನರ್ ಆಗುವುದು ಹೇಗೆ?

ವೆಬ್‍ ಡಿಸೈನರ್ ಆಗುವುದು ಹೇಗೆ?

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
Published in Vijaya Karnataka Mini

ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು ವೆಬ್ ಡೆವಲಪರ್, ವೆಬ್‍ಸೈಟ್ ಪೆÇ್ರಗ್ರಾಮರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಬಹುದು.
ಸರ್ಟಿಫಿಕೇಷನ್ ಬೇಕಿಲ್ಲವೆಂದರೆ ಇಂಟರ್‍ನೆಟ್‍ನಲ್ಲಿ ಉಚಿತವಾಗಿ ವೆಬ್ ವಿನ್ಯಾಸ ಕಲಿಸುವ ಟ್ಯುಟೋರಿಯಲ್‍ಗಳಿಗೆ ಸೇರಬಹುದು. ನೆಟ್‍ನಲ್ಲಿ ವೆಬ್ ಮಾಸ್ಟರ್ ಆಗಲು ತರಬೇತಿ ನೀಡುವ ಸಾಕಷ್ಟು ವಿಡಿಯೋಗಳು, ಪಠ್ಯಗಳೂ ದೊರಕುತ್ತವೆ. ಆನ್‍ಲೈನ್ ಅಥವಾ ಆಫ್‍ಲೈನ್ ಪುಸ್ತಕದಂಗಡಿಗೆ ಹೋಗಿ ವೆಬ್ ಡಿಸೈನ್ ಕುರಿತಾದ ಪುಸ್ತಕಗಳನ್ನೂ ಓದಿಯೂ ವೆಬ್ ವಿನ್ಯಾಸದಲ್ಲಿ ಪರಿಣತಿ ಪಡೆಯಬಹುದು.

ವೆಬ್ ಮಾಸ್ಟರ್‍ಗೆ ಬೇಡಿಕೆ
ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ಗೋಡ್ಯಾಡಿ.ಕಾಮ್‍ನಂತಹ ತಾಣಗಳಲ್ಲಿ ಅನುಭವ ಇಲ್ಲದವರೂ ವೆಬ್‍ಸೈಟ್ ರಚಿಸಬಹುದಾದರೂ ಪೆÇ್ರಫೆಷನಲ್ ವೆಬ್‍ಸೈಟ್ ವಿನ್ಯಾಸಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ನಿಮ್ಮಲ್ಲಿ ಅತ್ಯುತ್ತಮ ಕ್ರಿಯೇಟಿವಿಟಿ ಇದ್ದರಂತೂ ಗ್ರಾಹಕರನ್ನು ಪಡೆಯುವುದು ಕಷ್ಟವಲ್ಲ. ಪಾರ್ಟ್‍ಟೈಮ್ ಆಗಿಯೂ ಈ ಕ್ಷೇತ್ರದಲ್ಲಿ ದುಡಿಯಬಹುದು. ವೆಬ್‍ಡಿಸೈನ್ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮ್ಮಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸು ಇದ್ದರೆ ನಿಮ್ಮ ಊರಿಗೆ ಸಮೀಪವಿರುವ ಪಟ್ಟಣ, ನಗರಗಳಲ್ಲಿ ವೆಬ್ ಡಿಸೈನ್ ಸಂಸ್ಥೆಯನ್ನೂ ತೆರೆಯಬಹುದು.

ಏನಿದು ವೆಬ್ ಡಿಸೈನ್ ಪೆÇ್ರೀಗ್ರಾಮ್?
ಇಂತಹ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವೆಬ್‍ಸೈಟ್ ನಿರ್ಮಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತಾರೆ. ಹೈಪರ್‍ಟೆಕ್ಸ್ಟ್ ಪ್ರಿಪೆÇ್ರಸೆಸರ್(ಪಿಎಚ್‍ಪಿ), ಹೈಪರ್‍ಟೆಕ್ಸ್ಟ್ ಮಾರ್ಕ್- ಅಪ್ ಲ್ಯಾಂಗ್ವೇಜ್(ಎಚ್‍ಟಿಎಂಎಲ್) ಮತ್ತು ಕ್ಯಾಸ್‍ಕ್ಯಾಡಿಂಗ್ ಸ್ಟೈಲ್ ಶೀಟ್ಸ್(ಸಿಎಸ್‍ಎಸ್) ಇತ್ಯಾದಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನೀವು ಎಷ್ಟು ತಿಂಗಳ ಅವಧಿಯ ಕೋರ್ಸ್ ಮಾಡುವಿರೋ ಎಂಬುದರ ಮೇಲೆ ವೆಬ್ ಡಿಸೈನ್ ಕಲಿಕೆಯ ಸಬ್ಜೆಕ್ಟ್‍ಗಳು ಇರುತ್ತವೆ. ಕೆಲವೊಮ್ಮೆ ಪ್ರತಿಯೊಂದು ವಿಷಯಗಳಿಗೂ ಪ್ರತ್ಯೇಕ ಪ್ರತ್ಯೇಕ ಸರ್ಟಿಫಿಕೇಷನ್‍ಗಳಿರುತ್ತವೆ. ಅಂದರೆ, ಫ್ರೀಲ್ಯಾನ್ಸ್ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಅನಿಮೇಷನ್ ಕ್ರೀಯೆಟರ್, ವೆಬ್ ಡೆವಲಪರ್, ಪಿಎಚ್‍ಪಿ ಆ್ಯಂಡ್ ಸಿಎಸ್‍ಎಸ್ ಡೆವಲಪರ್ ಇತ್ಯಾದಿ ಕೋರ್ಸ್‍ಗಳನ್ನು ಮಾಡಬಹುದು.

ಎಲ್ಲಿ ಕಲಿಯಬಹುದು?
ರಾಜ್ಯದಲ್ಲಿ ವೆಬ್ ಡಿಸೈನ್ ಕಲಿಸುವ ಹಲವು ಶಿಕ್ಷಣ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಹಲವು ಬ್ರಾಂಚ್‍ಗಳನ್ನು ಹೊಂದಿರುವ ಆಪ್ಟೆಕ್ ಕಂಪ್ಯೂಟರ್ ಎಜುಕೇಷನ್ ಸಹ ವೆಬ್ ಡಿಸೈನರ್/ಡೆವಲಪ್‍ಮೆಂಟ್ ವಿಷಯದಲ್ಲಿ `ಎಸಿಡಬ್ಲ್ಯುಡಿ ಪೆÇ್ರ' ಎಂಬ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್ ನಡೆಸುತ್ತದೆ. ಪಿಯುಸಿ, ಪದವಿ ವಿದ್ಯಾರ್ಥಿಗಳು ಈ ಸರ್ಟಿಫಿಕೇಷನ್ ಪಡೆಯಬಹುದು. ಎಚ್‍ಟಿಎಂಎಲ್5, ಜಾವಾ ಸ್ಕ್ರಿಪ್ಟ್, ಸಿಎಸ್‍ಎಸ್3 ಪಿಎಚ್‍ಪಿ ಆ್ಯಂಡ್ ಮೈಎಸ್‍ಕ್ಯೂಎಲ್ ಇತ್ಯಾದಿ ಪೆÇ್ರಗ್ರಾಮಿಂಗ್ ಭಾಷೆಗಳನ್ನು ಕಲಿಸಿ ವೆಬ್‍ಸೈಟ್ ನಿರ್ಮಿಸುವುದನ್ನು ಕಲಿಯಬಹುದು. ಇದು 7 ತಿಂಗಳ ಕೋರ್ಸ್. ವಾರಕ್ಕೆ ಮೂರು ದಿನಗಳಂತೆ ದಿನಕ್ಕೆ ಎರಡು ಗಂಟೆÉ ಈ ಕೋರ್ಸ್ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಲಿಂಕ್
ಬೆಂಗಳೂರಿನಲ್ಲಿ ಅರೆನಾ ಮಲ್ಟಿಮೀಡಿಯಾವೂ ಪಿಯುಸಿ/ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ಆಸಕ್ತರಿಗೆ 10 ತಿಂಗಳ ಶಾರ್ಟ್‍ಟರ್ಮ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತದೆ. ವಾರಕ್ಕೆ ಮೂರು ದಿನ, ದಿನಕ್ಕೆ ಎರಡು ಗಂಟೆಯಂತೆ ಈ ಕೋರ್ಸ್ ಇರುತ್ತದೆ. ಹೆಚ್ಚುವರಿ ಗಂಟೆಗಳ ಕ್ಲಾಸ್ ತೆಗೆದುಕೊಂಡು ಕೋರ್ಸ್ ಅನ್ನು ಬೇಗ ಮುಗಿಸಲೂ ಅವಕಾಶವಿದೆ. ಮಾಹಿತಿಗೆ ವೆಬ್‍ಲಿಂಕ್
ಬೆಂಗಳೂರಿನ ಇಂಟರ್‍ನೆಟ್ ಅಕಾಡೆಮಿಯೂ ವೆಬ್ ಡೆವಲಪ್‍ಮೆಂಟ್ ಕೋರ್ಸ್‍ಗಳನ್ನು ನಡೆಸಿಕೊಡುತ್ತದೆ. ಸುಮಾರು ಒಂದೂವರೆ ತಿಂಗಳ ಕೋರ್ಸ್ ಇದಾಗಿದೆ. ಮೊಬೈಲ್ ವೆಬ್‍ಸೈಟ್ ನಿರ್ಮಾಣ ಕಲಿಕೆಯನ್ನು ಒಳಗೊಂಡ `ರೆಸ್ಪಾನ್ಸಿವ್ ವೆಬ್ ಡೆವಲಪ್‍ಮೆಂಟ್' ಕೋರ್ಸ್ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಲಿಂಕ್

ಮೈಸೂರಿನಲ್ಲಿರುವ ಟೂನ್2 ಮಲ್ಟಿಮೀಡಿಯಾ ಸ್ಕೂಲ್‍ನಲ್ಲಿ ವೆಬ್ ಡಿಸೈನ್‍ನಲ್ಲಿ ಶಾರ್ಟ್‍ಟರ್ಮ್ ಕೋರ್ಸ್‍ಗಳಿವೆ. ಮಾಸ್ಟರ್ ಇನ್ ವೆಬ್ ಡಿಸೈನ್ 7 ತಿಂಗಳ ಕೋರ್ಸ್. ಪೆÇ್ರಫೆಷನಲ್ ಇನ್ ವೆಬ್ ಡಿಸೈನ್ ಕೋರ್ಸ್ 4 ತಿಂಗಳಾದ್ದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್

ಮೈಸೂರಿನ ಅನಿಫ್ರೇಮ್ಸ್ ಸಹ ಸರ್ಟಿಫಿಕೇಟ್ ಇನ್ ಗ್ರಾಫಿಕ್ ಆ್ಯಂಡ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತಿದೆ. ಎಸ್‍ಎಸ್‍ಎಲ್‍ಸಿ ಪಾಸ್/ಫೇಲ್ ಆದವರು ಈ ಕೋರ್ಸ್ ಮಾಡಬಹುದು. ಇದು 15 ತಿಂಗಳ ಕೋರ್ಸ್. ವೆಬ್‍ಲಿಂಕ್

ಪಕ್ಕದ ರಾಜ್ಯವಾಗಿರುವ ಚೆನ್ನೈನಲ್ಲಿರುವ ವಿಎಫ್‍ಎಕ್ಸ್ ಮೀಡಿಯಾ ಆ್ಯಂಡ್ ಡಿಸೈನ್ ಸಂಸ್ಥೆಯು ವೆಬ್ ಡಿಸೈನ್ ಕುರಿತಾದ 9 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್ ನಡೆಸುತ್ತದೆ. ಇದು ಐಎಒ ಸರ್ಟಿಫಿಕೇಷನ್ ಅಂಗೀಕೃತ ಸರ್ಟಿಫಿಕೇಷನ್ ಆಗಿದೆ. ಎಸ್‍ಎಸ್‍ಎಲ್‍ಸಿ/ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಲಿಂಕ್
ಇವು ಕೆಲವು ವೆಬ್ ಡಿಸೈನ್ ಕಲಿಸುವ ಸಂಸ್ಥೆಗಳ ವಿವರವಾಗಿದೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವೆಲ್ಲ ಸಂಸ್ಥೆ ವೆಬ್ ಡಿಸೈನ್ ಕಲಿಸುತ್ತದೆ ಎಂದು ತಿಳಿದುಕೊಳ್ಳಿ. ಅಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ಜಾಯಿನ್ ಆಗಬಹುದು.

ಆನ್‍ಲೈನ್‍ನಲ್ಲಿ ಕಲಿಯಿರಿ
ಆನ್‍ಲೈನ್‍ನಲ್ಲೇ ವೆಬ್ ಡಿಸೈನ್ ಕಲಿಸುವ ಹಲವು ತಾಣಗಳು ಇವೆ. ಡಾಲರ್ ರೂಪದಲ್ಲಿ ಹಣ ನೀಡಲು ಸಿದ್ಧವಿದ್ದರೆ ವಿದೇಶಿ ವೆಬ್‍ತಾಣಗಳಿಂದಲೂ ಸರ್ಟಿಫಿಕೇಷನ್ ಪಡೆದುಕೊಳ್ಳಬಹುದು. ದೇಶದ ಕೆಲವು ಸಂಸ್ಥೆಗಳೂ ಇಂತಹ ಆನ್‍ಲೈನ್ ಕೋರ್ಸ್ ನಡೆಸುತ್ತವೆ. ಉಚಿತವಾಗಿ ವೆಬ್ ಡಿಸೈನ್ ಕಲಿಯುವ ಅವಕಾಶವನ್ನೂ ಕೆಲವು ವೆಬ್ ತಾಣಗಳು ಒದಗಿಸುತ್ತವೆ. ಇಂತಹ ಬಹುವೈವಿಧ್ಯತೆಯ ಆನ್‍ಲೈನ್ ವೆಬ್ ಡಿಸೈನ್ ಕಲಿಕಾ ತಾಣಗಳ ಲಿಂಕ್‍ಗಳು ಇಲ್ಲಿವೆ. ಆರಂಭಿಕರು ಉಚಿತ ತಾಣಗಳಲ್ಲಿ ಕಲಿತು ಮುಂದುವರೆಯುವುದು ಒಳಿತು.

1

2

3

ವೆಬ್ ಡಿಸೈನ್ ಪುಸ್ತಕಗಳು
ಪುಸ್ತಕದಂಗಡಿಗೆ ಭೇಟಿ ನೀಡಿದರೆ ವೆಬ್ ಡಿಸೈನ್‍ಗೆ ಸಂಬಂಧಿಸಿದ ಹಲವು ಪುಸ್ತಕಗಳು ದೊರಕುತ್ತವೆ. ಮೊದಲಿಗೆ ಬೇಸಿಕ್ ಕಲಿಸುವ ಪುಸ್ತಕ ಓದಿರಿ. ನಂತರ ಪೂರ್ಣ ಪ್ರಮಾಣದ ವೆಬ್ ಡಿಸೈನ್ ಪುಸ್ತಕ ಓದಿ. ಇಂಟರ್‍ನೆಟ್‍ನಲ್ಲಿ ಕೆಲವು ಉಚಿತ ಇ-ಬುಕ್‍ಗಳು ಸಿಗುತ್ತವೆ.
ವೆಬ್ ಡಿಸೈನ್ ಕಲಿಕೆಗೆ 15 ಉಚಿತ ಪುಸ್ತಕಗಳು
50 ಉಚಿತ ಪುಸ್ತಕಗಳು:

ಆನ್‍ಲೈನ್ ಅಂಗಡಿಗಳಿಗೆ ಹೋಗಿ ಅಲ್ಲಿ ಪುಸ್ತಕ ಎಂಬ ಕೆಟಗರಿಗೆ ಹೋಗಿ ಸರ್ಚ್ ಆಯ್ಕೆ ಇರುವಲ್ಲಿ ವೆಬ್ ಡಿಸೈನ್ ಎಂದು ಸರ್ಚ್ ಕೊಟ್ಟರೆ ಹಲವು ಪುಸ್ತಕಗಳು ಬರುತ್ತವೆ. ನಿಮ್ಮ ಊರಿಗೆ ಈ ತಾಣಗಳ ಸೇವೆಗಳು ಲಭ್ಯ ಇವೆಯೇ ಎಂದು ತಿಳಿದುಕೊಂಡು ಖರೀದಿಸಿರಿ.
ಲಿಂಕ್‍ಗಳು:

1

2

3

CAD and CAM Certification read 
ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

ಕಾಪೆರ್Çರೇಟ್ ರಂಗದಲ್ಲಿ ಉದ್ಯೋಗ ಪಡೆಯಲು ಬಯಸುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಸಾಫ್ಟ್ ಸ್ಕಿಲ್ ಅಥವಾ ಬಿಸಿನೆಸ್ ಸ್ಕಿಲ್ ಸರ್ಟಿಫಿಕೇಷನ್ ಪಡೆದರೆ ಕರಿಯರ್‍ನಲ್ಲಿ ಇನ್ನಷ್ಟು ಸಾಧನೆ ಮಾಡಬಹುದು.

*
ನೀವು ಕಾಲೇಜಿನಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿರಬಹುದು. ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರಬಹುದು. ಸಾಕಷ್ಟು ಪ್ರತಿಭೆ ನಿಮ್ಮಲ್ಲಿರಬಹುದು. ಆದರೆ, ಉದ್ಯೋಗ ಸಂದರ್ಶಕರಿಗೆ ನಿಮ್ಮನ್ನು ನೋಡಿದಾಗ ಹಾಗೆ ಅನಿಸದೆ ಇರಬಹುದು. ನೀವು ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನ ಹೊಂದಿರಬಹುದು. ಆದರೆ, ಪ್ರಸಂಟೇಷನ್ ಮಾಡುವ ಕಲೆ ಗೊತ್ತಿಲ್ಲದೆ ಇರಬಹುದು. ನೀವು ತಂಡದ ಲೀಡರ್ ಆಗಿರಬಹುದು. ಆದರೆ, ಸಹೋದ್ಯೋಗಿಗಳನ್ನು ಪ್ರೇರೇಪಿಸಲು ತಿಳಿಯದವರಾಗಿರಬಹುದು. ನಿಮ್ಮಲ್ಲಿ ಸಾಕಷ್ಟು ಪದಸಂಪತ್ತು ಇರಬಹುದು. ಆದರೆ, ಸಂವಹನ ಕೌಶಲ ಇಲ್ಲದೆ ಇರಬಹುದು. ಇಂದಿನ ಕಾಪೆರ್Çರೇಟ್ ಜಗತ್ತಿಗೆ ಇವೆಲ್ಲ ಅತ್ಯಂತ ಅವಶ್ಯವಾದ ಕೌಶಲಗಳು. ಈಗ ಕೆಲವು ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಹೇಳಿಕೊಡುವ ಪ್ರಯತ್ನ ಮಾಡುತ್ತಿವೆ. ಇಂತಹ ಕೌಶಲಗಳನ್ನು ಕಲಿಸಿ ಸರ್ಟಿಫಿಕೇಷನ್ ನೀಡುವ ಸಾಕಷ್ಟು ಸಂಸ್ಥೆಗಳಿವೆ. ಇಂತಹ ತರಬೇತಿಯನ್ನು ಯಾರು, ಯಾವಾಗ ಬೇಕಾದರೂ ಪಡೆಯಬಹುದು. ಉದ್ಯೋಗ ಸಂದರ್ಶನದಲ್ಲಿ ಇಂತಹ ಸರ್ಟಿಫಿಕೇಷನ್ ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.

ಏನಿದು ಸಾಫ್ಟ್ ಸ್ಕಿಲ್?
ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂಧಿತ ಸಂವಹನದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವುದೇ ಸಾಫ್ಟ್ ಸ್ಕಿಲ್. ಇದು ಸಂವಹನ ಕಲೆಯಾಗಿರಬಹುದು, ಯಾರಾದರೂ ಹೇಳುವುದನ್ನು ಗಮನವಿಟ್ಟು ಕೇಳುವ ಕಲೆಯಾಗಿರಬಹುದು, ವಿಷಯ ಮಂಡನೆ ಕಲೆಯಾಗಿರಬಹುದು, ಸಮಯ ನಿರ್ವಹಣೆ, ಆ್ಯಟಿಟ್ಯೂಡ್, ವರ್ತನಾ ವಿಧಾನ, ಸಮಸ್ಯೆ ಬಗೆಹರಿಸುವ ಕಲೆ, ತಂಡದ ಜೊತೆ ಸೇರಿ ಕೆಲಸ ಮಾಡುವುದು, ಗುರಿ ನಿಗದಿ ಪಡಿಸುವುದು ಇತ್ಯಾದಿಗಳ ತರಬೇತಿಯಾಗಿರಬಹುದು. ಕೆಲಸ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅಥವಾ ಭಾವನೆಯನ್ನು ನಿಯಂತ್ರಿಸುವುದು ಸಹ ಸಾಫ್ಟ್ ಸ್ಕಿಲ್ ಕಲಿಕೆಯಲ್ಲಿ ಸೇರಿದೆ. ಸಾಫ್ಟ್ ಸ್ಕಿಲ್‍ಗಳು ವೃತ್ತಿಪರ ಮತ್ತು ವ್ಯವಹಾರದ ಯಶಸ್ಸಿಗೆ ಅತ್ಯಂತ ಅವಶ್ಯಕ. ಇದಕ್ಕಾಗಿಯೇ ಈಗ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡುತ್ತವೆ. ಸಾಫ್ಟ್ ಸ್ಕಿಲ್‍ನಲ್ಲಿ ಪರಿಣತಿ ಹೊಂದಿರದ ವ್ಯಕ್ತಿಯಿಂದ ಕಂಪನಿಯ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬೀಳಬಹುದು.

ಎಲ್ಲಿ ಕಲಿಯಬಹುದು ಸಾಫ್ಟ್‍ಸ್ಕಿಲ್?
ಸಾಫ್ಟ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳು ನಿಮ್ಮ ಆಸುಪಾಸಿನಲ್ಲೇ ಇರಬಹುದು. . ನೀವಿರುವ ಕಾಲೇಜಿಗೆ ಇಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಬಹುದು. ಹಣ ಮಾಡುವುದೇ ಪ್ರಮುಖ ಉದ್ದೇಶವಾಗಿಟ್ಟುಕೊಂಡವರಿಂದ ದೂರವಿರುವುದು ಒಳ್ಳೆಯದು. ಆದರೆ, ಕೆಲವು ಸಂಸ್ಥೆಗಳು ಸಾಫ್ಟ್ ಸ್ಕಿಲ್ ತರಬೇತಿ ನೀಡುವಲ್ಲಿ ಜನಪ್ರಿಯತೆ ಪಡೆದಿರುತ್ತವೆ. ಸಾಫ್ಟ್ ಸ್ಕಿಲ್ ಪಡೆಯಲು ಅಂತಹ ಸಂಸ್ಥೆಗಳನ್ನು ಅವಲಂಬಿಸಿಕೊಳ್ಳಬಹುದು.
ಸಾಫ್ಟ್ ಸ್ಕಿಲ್ಸ್ ಅಥವಾ ಬಿಸಿನೆಸ್ ಸ್ಕಿಲ್ಸ್ ಕೆಲವು ವೆಬ್‍ಸೈಟ್ ಲಿಂಕ್‍ಗಳು:
*ಆರೆಂಜ್ ಅಕಾಡೆಮಿ 
* ಕಾರ್ಪೆಕ್ಸ್
* ಬುಕ್‍ಮೈಟ್ರೈನಿಂಗ್ಸ್
* ಸ್ಕಿಲ್ ತರಬೇತಿದಾರರಾಗಲು ಲಿಂಕ್

* ಪ್ರಸಂಟೇಷನ್ ಸ್ಕಿಲ್ ತರಬೇತುದಾರರನ್ನು ಇಲ್ಲಿ ಹುಡುಕಬಹುದು

ಅಗತ್ಯ ಬಿಸಿನೆಸ್ ಕೌಶಲಗಳು
* ಪ್ರಸಂಟೇಷನ್ ಸ್ಕಿಲ್: ಕಂಪನಿಯಲ್ಲಿ ಉದ್ಯೋಗಿಗಳಿಗೆ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರ ನೀಡುವ ಅವಕಾಶ ಇರುತ್ತದೆ. ಕೆಲವೊಮ್ಮೆ ಎಲ್ಲದರಲ್ಲಿಯೂ ಚತುರನಾಗಿರುವ ವ್ಯಕ್ತಿಯು ಪ್ರಸಂಟೇಷನ್‍ನಲ್ಲಿ ಹಿಂದೆ ಬೀಳುತ್ತಾನೆ. ಈ ಮೂಲಕ ಗಮನ ಸೆಳೆಯಲು ವಿಫಲನಾಗುತ್ತಾನೆ. ಪ್ರಸಂಟೇಷನ್‍ನಲ್ಲಿ ಪಕ್ಕಾ ಆಗಲು ನೀವು ಸಾಕಷ್ಟು ಪ್ರಾಕ್ಟೀಸ್ ಮಾಡಬೇಕು. ಪಿಪಿಟಿ ಪ್ರಸಂಟೇಷನ್ ಇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನರ್ವಸ್ ಆಗಬೇಡಿ. ವೀಕ್ಷಕರ ಜೊತೆ ಮಾತುಕತೆಯಾಡುತ್ತ ಪ್ರಸಂಟೇಷನ್ ಮಾಡಿ. ಯೂಟ್ಯೂಬ್‍ನಲ್ಲಿರುವ ಪಿಪಿಟಿಗಳನ್ನು ನೋಡಿ. ನಿಮಗೆ ಪ್ರಸಂಟೇಷನ್ ಕುರಿತಾದ ಭಯ ಹೋಗಿಲ್ಲವೆಂದಾದರೆ ಪ್ರಸಂಟೇಷನ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯಿರಿ.
* ಸಂವಹನ ಕೌಶಲ: ಈಗ ಸಂವಹನ ಕೌಶಲ ಕಲಿಸುವ ಸಾಕಷ್ಟು ಸಂಸ್ಥೆಗಳು ನೀವಿರುವ ಪ್ರದೇಶದಲ್ಲೇ ದೊರಕಬಹುದು. ಆದಷ್ಟು, ಇತರರ ಜೊತೆ ಮಾತನಾಡಿ. ಕನ್ನಡಿಯ ಮುಂದೆ ಮಾತನಾಡುತ್ತ, ನಿಮ್ಮ ಹಾವಭಾವ ಗಮನಿಸಿ. ಕಮ್ಯುನಿಕೇಷನ್ ಕೌಶಲ ಕಲಿಸುವ ಅಲ್ಪಾವಧಿ ಕೋರ್ಸ್‍ಗಳನ್ನು ಮಾಡಿ. ಆದಷ್ಟು, ಚರ್ಚೆ, ಗೋಷ್ಠಿಗಳಲ್ಲಿ ಭಾಗವಹಿಸಿ.
* ಆಲಿಸುವ ಕಲೆ: ನೀವು ಉತ್ತಮ ಮಾತುಗಾರನಾಗುವ ಜೊತೆಗೆ ಉತ್ತಮ ಕೇಳುಗನಾಗಬೇಕು. ನಿಮ್ಮ ಎದುರಿನಲ್ಲಿರುವ ವ್ಯಕ್ತಿ ಮಾತನಾಡುತ್ತಿರುವಾಗ ಸಂಯಮದಿಂದ ಆಲಿಸಿ. ಅವರು ಮಾತು ಮುಗಿಸಿದ ನಂತರ ಮಾತನಾಡಿ.
* ಭಾವನೆಯ ನಿರ್ವಹಣೆ: ಎಂತಹ ಪರಿಸ್ಥಿತಿಯಲ್ಲೂ ಕುಗ್ಗದೆ ಭಾವನಾತ್ಮಕವಾಗಿ ಸಕಾರಾತ್ಮಕವಾಗಿರುವಂತಹ ವ್ಯಕ್ತಿತ್ವ ಸಹ ಬಿಸಿನೆಸ್ ಕೌಶಲದಲ್ಲಿ ಅಗತ್ಯವಾಗಿದೆ.
* ತೊಂದರೆ ನಿವಾರಣೆ: ಕೆಲಸ ಮಾಡುವಾಗ ಬಿಸಿನೆಸ್‍ಗೆ ಸಂಬಂಧಪಟ್ಟ ಹಲವು ತೊಂದರೆಗಳು ಎದುರಾಗಬಹುದು. ಅಂತಹ ತೊಂದರೆಗಳನ್ನು ಕೌಶಲದಿಂದ ಬಗೆಹರಿಸಲು ತಿಳಿದಿರಬೇಕಾಗುತ್ತದೆ.

*ಕ್ರಿಯಾತ್ಮಕವಾಗಿರುವುದು ಮತ್ತು ಅನ್ವೇಷಣಾ ಮನೋಭಾವ.

* ಸಹೋದ್ಯೋಗಿಗಳಿಗೆ ತರಬೇತಿ ನೀಡುವ ಸಾಮಥ್ರ್ಯ.

* ಕೆಲಸವನ್ನು ಹೊಸ ರೀತಿಯಿಂದ ಸುಲಭವಾಗಿ ಮಾಡಲು ಪ್ರಯತ್ನಿಸುವುದು.

* ತಂಡದ ಜೊತೆ ಕಾರ್ಯನಿರ್ವಹಿಸುವ ಸಾಮಥ್ರ್ಯ.

* ಪ್ರಾಜೆಕ್ಟ್ ನಿರ್ವಹಣೆ ಸಾಮಥ್ರ್ಯ.
ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ

ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ

ಆನ್‍ಲೈನ್ ಮೂಲಕ ಹೆಚ್ಚು ಗ್ರಾಹಕರನ್ನು ತಲುಪಲು ಬಹುತೇಕ ಕಂಪನಿಗಳು ಪ್ರಯತ್ನಿಸುತ್ತಿರುವುದರಿಂದ ಸರ್ಚ್ ಎಂಜಿನ್ ಆಪ್ಟಿಮೈಜೇಷನ್‍ನಲ್ಲಿ ಪರಿಣತಿ ಪಡೆದವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಎಸ್‍ಇಒ ಸರ್ಟಿಫಿಕೇಷನ್ ಕೋರ್ಸ್‍ಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು

ನಿಮಗೆ ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕು. ಉದಾಹರಣೆಗೆ ಆ ವಿಷಯ ಕಾರ್' ಎಂದಿರಲಿ. ಗೂಗಲ್‍ನ ಸರ್ಚ್ ಬಾಕ್ಸ್‍ಗೆ ಹೋಗಿ ಕಾರ್ ಎಂದು ಟೈಪ್ ಮಾಡಿ ಎಂಟರ್ ಹೊಡೆಯುವಿರಿ. ಆಗ ವೆಬ್‍ಫಲಿತಾಂಶಗಳ ರಾಶಿಯೇ ನಿಮ್ಮ ಮುಂದೆ ಬರುತ್ತದೆ. ಮೊದಲ ಪುಟದ ಟಾಪ್‍ನಲ್ಲಿ ಕಾರ್‍ವಾಲೆ, ಕಾರ್‍ಟ್ರೇಡ್, ಕಾರ್‍ದೇಕೊ ಮುಂತಾದ ವೆಬ್‍ಸೈಟ್‍ಗಳ ಮಾಹಿತಿಗಳು ಬರುತ್ತವೆ. ಕಾರುಗಳ ಮಾಹಿತಿ ನೀಡುವ ಸಾವಿರಾರು ವೆಬ್‍ಸೈಟ್‍ಗಳು ಭಾರತದಲ್ಲಿವೆ. ಯಾಕೆ, ಕೆಲವೇ ಕೆಲವು ವೆಬ್‍ಸೈಟ್‍ಗಳ ಹೆಸರು ಗೂಗಲ್ ಹುಡುಕಾಟದಲ್ಲಿ ಮೊದಲಿಗೆ ಬರುತ್ತವೆ? ಪವರ್‍ಫುಲ್ ವೆಬ್ ಮಾರ್ಕೆಟಿಂಗ್ ಟೆಕ್ನಿಕ್ ಆದಎಸ್‍ಇಒ' ಅನ್ನು ಸಮರ್ಥವಾಗಿ ಅಳವಡಿಸಿಕೊಂಡಿರುವುದೇ ಆ ವೆಬ್‍ಸೈಟ್‍ಗಳ ಲಿಂಕ್‍ಗಳು ಗೂಗಲ್, ಬಿಂಗ್, ಯಾಹೂ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಟಾಪ್‍ನಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಏನಿದು ಎಸ್‍ಇಒ?
ಎಸ್‍ಇಒ ವಿಸ್ತೃತ ರೂಪ ಸರ್ಚ್ ಎಂಜಿನ್ ಆಪ್ಟಿಮೈಜೇಷನ್. ಸರ್ಚ್ ಎಂಜಿನ್‍ನಲ್ಲಿರುವ ಕೋಟಿ ಕೋಟಿ ವೆಬ್‍ಸೈಟ್‍ಗಳು, ಮಾಹಿತಿ ಕಣಜಗಳನ್ನು ಹಿಂದಿಕ್ಕಿ ನಿಮ್ಮ ವೆಬ್‍ಸೈಟ್‍ಗೆ ಅಗ್ರ ರ್ಯಾಂಕ್ ನೀಡಿ ಮಾಹಿತಿ ಹುಡುಕಾಡುವವರಿಗೆ ಮೊದಲ ಪುಟದಲ್ಲಿ ತೋರಿಸಲು ಸಹಕರಿಸುವ ವೆಬ್ ಟೆಕ್ನಿಕ್ ಅನ್ನು ಎಸ್‍ಇಒ ಎನ್ನಬಹುದು. ಸರ್ಚ್ ಫಲಿತಾಂಶಗಳಲ್ಲಿ ಮೊದಲ ಪುಟದಲ್ಲಿ ಕಾಣುವ ಲಿಂಕ್‍ಗಳನ್ನು ಅತ್ಯಧಿಕ ಜನರು ಕ್ಲಿಕ್ ಮಾಡುತ್ತಾರೆ. ನಿಮ್ಮ ವೆಬ್ ತಾಣಕ್ಕೆ ಹೆಚ್ಚು ಜನರು ಭೇಟಿ ನೀಡಬೇಕಾದರೆ ಉತ್ತಮ ಎಸ್‍ಇಒ ತಂತ್ರವನ್ನು ನೀವು ಅಳವಡಿಸಿಕೊಳ್ಳಲೇಬೇಕು.

ಎಸ್‍ಇಒಗೆ ಸಖತ್ ಬೇಡಿಕೆ
ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಅನ್ನು ಅವಲಂಬಿಸಿವೆ. ಆನ್‍ಲೈನ್ ವ್ಯವಹಾರಕ್ಕಾಗಿ ವೆಬ್‍ಸೈಟ್‍ಗಳು ಪ್ರಮುಖವಾಗಿರುತ್ತವೆ. ಇಂಟರ್‍ನೆಟ್‍ನಲ್ಲಿಂದು ಕೋಟಿ ಕೋಟಿ ವೆಬ್‍ಸೈಟ್‍ಗಳಿವೆ. ಆನ್‍ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಅಜ್ಞಾತವಾಗಿರುತ್ತಾರೆ. ಅಜ್ಞಾತ ಗ್ರಾಹಕರನ್ನು ತಮ್ಮ ಕಂಪನಿಗೆ ಸೆಳೆಯಲು ಪರಿಣಿತರ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆನ್‍ಲೈನ್‍ನಲ್ಲಿ ನೀವು ಗಿಫ್ಟ್ ಸೆಂಟರ್ ತೆರೆದಿದ್ದೀರಿ ಎಂದಿರಲಿ. ಯಾರಾದರೂ ಗಿಫ್ಟ್ ಇನ್ ಬೆಂಗಳೂರು ಎಂದು ಹುಡುಕಿದಾಗ ಸುಲಭವಾಗಿ ನಿಮ್ಮ ವೆಬ್‍ಸೈಟ್ ಅವರಿಗೆ ಕಾಣಿಸಬೇಕು. ಯಾವುದೇ ಆನ್‍ಲೈನ್ ವ್ಯವಹಾರದ ಪ್ರಮುಖ ಉದ್ದೇಶ ಹೆಚ್ಚಿನ ಗ್ರಾಹಕರಿಗೆ ತಲುಪುವುದಾಗಿದೆ. ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾರ್ಕೆಟ್ ಮಾಡಲು ಎಸ್‍ಇಒ ಪರಿಣತಿ ನೆರವಾಗುತ್ತದೆ. ಅದಕ್ಕಾಗಿ ಎಸ್‍ಇಒ ಪರಿಣಿತರನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭವಿಷ್ಯದಲ್ಲಿ ಆನ್‍ಲೈನ್ ವ್ಯವಹಾರ ಇನ್ನಷ್ಟು ಅಧಿಕಗೊಳ್ಳುವುದರಿಂದ ಇದು ಮುಂದೆಯೂ ಬೇಡಿಕೆಯಲ್ಲಿರಲಿರುವ ಜಾಬ್ ಆಗಿದೆ.

ಎಸ್‍ಇಒ ಕೋರ್ಸ್
ಎಸ್‍ಇಒ ಕಲಿಸುವ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳಿಂದು ಲಭ್ಯ ಇವೆ. ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರು, ಉದ್ಯಮಿಗಳು, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ ವೃತ್ತಿಪರರು, ಕಂಟೆಂಟ್ ಬರಹಗಾರರು, ಎಸ್‍ಇಒ ಬಗ್ಗೆ ಅಷ್ಟಾಗಿ ತಿಳಿದಿರದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಎಸ್‍ಇಒ ಉದ್ಯಮದಲ್ಲಿ ತಮ್ಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದಾಗಿದೆ.

ಎಲ್ಲ ಕಲಿಯಬಹುದು?
ಎಸ್‍ಇಒ ಮೂಲಭೂತ ಅಂಶಗಳನ್ನು ನೀವು ಇಂಟರ್‍ನೆಟ್‍ನಲ್ಲಿ ಕಲಿಯಿರಿ. ಅಂದರೆ, ಎಸ್‍ಇಒ ಬಗ್ಗೆ ಪಾಠ ಮಾಡುವ ಸಾಕಷ್ಟು ಉಚಿತ ಕೋರ್ಸ್‍ಗಳು ಇವೆ. ಅದಕ್ಕಾಗಿ ಫ್ರೀ ಎಸ್‍ಇಒ ಕೋರ್ಸ್ ಎಂದು ಗೂಗಲ್ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಹುಡುಕಾಡಿ. ಇಲ್ಲಿ ನಿಮ್ಮ ಜ್ಞಾನ ಹೆಚ್ಚಿಸಿಕೊಂಡ ನಂತರ ಯಾವುದಾದರೂ ಕ್ಲಾಸ್‍ರೂಂ ಅಥವಾ ಆನ್‍ಲೈನ್ ಕೋರ್ಸ್‍ಗಳಿಗೆ ಸೇರಬಹುದು. ನೀವಿರುವ ಊರಿಗೆ ಸಮೀಪದಲ್ಲಿ ಎಲ್ಲೆಲ್ಲಿ ಎಸ್‍ಇಒ ಕಲಿಕಾ ಕೇಂದ್ರಗಳಿವೆ ಎಂದು ಗೂಗಲ್‍ನಲ್ಲಿ ಹುಡುಕಾಟ ನಡೆಸಬಹುದು. ಆನ್‍ಲೈನ್ ಮೂಲಕ ಕಲಿಯಲು www.seocertification.org,  www.simplilearn.com, www.digitalvidya.com, www.seotrainingpoint.com, www.inventateq.com  ಮುಂತಾದ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ದುಬಾರಿ ದರ ಕೇಳುವ ಕಲಿಕಾ ಕೇಂದ್ರಗಳಿಂದ ದೂರವಿರಿ. ಅಲ್ಲಿರುವ ಸೌಲಭ್ಯ, ಫ್ಯಾಕಲ್ಟಿ ಗಮನಿಸಿ ಮುಂದುವರೆಯಿರಿ.

ವೆಬ್‍ಸೈಟ್ ಎಸ್‍ಇಒ ಟಿಪ್ಸ್
* ವೆಬ್‍ಸೈಟ್‍ನಲ್ಲಿ ಬಳಸಿರುವ ವಿಷಯಕ್ಕೆ ಸಂಬಂಧಪಟ್ಟ ಸಮರ್ಪಕ ಕೀವರ್ಡ್‍ಗಳನ್ನು ಬರೆಯಿರಿ.
* ನಿಮ್ಮ ವೆಬ್‍ಸೈಟ್‍ಗೆ ಬೇರೆ ಆಂತರಿಕ ಲಿಂಕ್‍ಗಳನ್ನು ಸೇರಿಸಿ.
* ವೆಬ್‍ಸೈಟ್ ಅನ್ನು ಸ್ಲೋ ಮಾಡುವ ಪ್ರತಿಯೊಂದು ಅಂಶವನ್ನು ತೆಗೆದುಬಿಡಿ.
* ಇಮೇಜ್ ಟೈಟಲ್, ಡಿಸ್ಕ್ರಿಪ್ಷನ್ ಇತ್ಯಾದಿಗಳಲ್ಲಿಯೂ ಕೀವರ್ಡ್‍ಗಳನ್ನು ಬಳಕೆ ಮಾಡಿ.
* ಇತರ ಪ್ರಮುಖ ವೆಬ್‍ಸೈಟ್‍ಗಳ ಲಿಂಕ್‍ಗಳನ್ನೂ ಸಂದರ್ಭಕ್ಕೆ ತಕ್ಕಂತೆ ನೀಡಿ.
* ಸಮಯಕ್ಕೆ ಸರಿಯಾಗಿ ವೆಬ್‍ಸೈಟ್ ಅನ್ನು ಅಪ್‍ಗ್ರೇಡ್ ಮಾಡುತ್ತಿರಿ.
* ಸರ್ಚ್ ಎಂಜಿನ್‍ಗಳಿಗೆ ನಿಮ್ಮ ವೆಬ್‍ಸೈಟ್ ಅನ್ನು ಇಂಡಕ್ಸ್ ಮಾಡಿ.
* ಆಗಾಗ ನಿಮ್ಮ ವೆಬ್‍ಸೈಟ್‍ನ ಡೊಮೇನ್ ಹೆಸರನ್ನು ಬದಲಾಯಿಸಬೇಡಿ.
* ವೆಬ್‍ಸೈಟ್‍ನಲ್ಲಿ ಮನುಷ್ಯರು ಬರೆದಂತೆ ಬರೆಯಿರಿ. ಯಂತ್ರ ಬರೆದಂತೆ ಬರೆಯದಿರಿ.
ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

ಕಾಮರ್ಸ್ ಪದವಿ ಪಡೆದ ನಂತರ ಟ್ಯಾಕ್ಸ್ ಸಂಬಂಧಿತ ವಿಭಾಗಗಳಲ್ಲಿ ಕೆಲಸ ಮಾಡಬಯಸುವವರು `ಟ್ಯಾಕ್ಸೇಷನ್'ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Published in Vijaya Karnataka Mini


  • ಪ್ರವೀಣ್ ಚಂದ್ರ ಪುತ್ತೂರು


ಕಾಮರ್ಸ್ ಓದಿದವರಿಗೆ ಸಖತ್ ಡಿಮ್ಯಾಂಡ್ ಇದೆ ಎಂದು ಬಿ.ಕಾಂ., ಎಂ.ಕಾಂ. ಓದುವವರು ಹೆಚ್ಚಾಗಿದ್ದಾರೆ. ವಾಣಿಜ್ಯ ಪದವೀಧರರು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೆÇೀಟಿ ಸಹಜ. ಕೆಲವೊಮ್ಮೆ ಕೆಲಸ ಪಡೆಯಲು ಕಾಲೇಜಿನಲ್ಲಿ ದೊರಕುವ ಸರ್ಟಿಫಿಕೇಟ್ ಮಾತ್ರ ಸಾಕಾಗದು. ಬಿ.ಕಾಂ., ಎಂ.ಕಾಂ., ಇತ್ಯಾದಿ ಪದವಿ ಪಡೆದವರು ತೆರಿಗೆ ಸಂಬಂಧಿತ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಲು ಇಷ್ಟಪಟ್ಟರೆ ಅಲ್ಪಾವಧಿಯ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ಇದರಿಂದ ನಿಮ್ಮ ರೆಸ್ಯೂಂನ ತೂಕ ಹೆಚ್ಚಾಗುತ್ತದೆ. ಕೆಲಸ ದೊರಕುವ ಸಾಧ್ಯತೆ ಹೆಚ್ಚಾಗುತ್ತದೆ.

ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಇರುವುದರಿಂದ ಟ್ಯಾಕ್ಸೇಷನ್‍ಗೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ನಡೆಸುವ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಸಾಕಷ್ಟಿವೆ. ಆದರೆ, ರಾಜ್ಯದಲ್ಲಿ ಇಂತಹ ಸಂಸ್ಥೆಗಳು ಕಡಿಮೆ ಇವೆ. ದೂರಶಿಕ್ಷಣ ಅಥವಾ ಆನ್‍ಲೈನ್‍ನಿಂದಲೂ ಇಂತಹ ಸರ್ಟಿಫಿಕೇಷನ್ ಪಡೆಯಬಹುದು.

ಏನಿದು ಟ್ಯಾಕ್ಸೇಷನ್ ಕೋರ್ಸ್?
ತೆರಿಗೆ ನಿರ್ವಹಣೆ, ಮೌಲ್ಯಮಾಪನ, ವರದಿ, ಲೆಕ್ಕಪರಿಶೋಧನೆ, ಪರಿಶೀಲನೆ ಮತ್ತು ಅಂತಾರಾಷ್ಟ್ರೀಯ ತೆರಿಗೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ರೂಪಿಸಲಾಗಿರುತ್ತದೆ. ವಾಣಿಜ್ಯ ಪದವಿ, ಸಿಎ, ಮ್ಯಾನೇಜ್‍ಮೆಂಟ್ ವಿಷಯಗಳನ್ನು ಓದಿದವರು ಇಂತಹ ಕೋರ್ಸ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದು. ಟ್ಯಾಕ್ಸೇಷನ್ ಸಂಬಂಧಿಸಿದ ಡಿಪೆÇ್ಲಮಾ ಮಾತ್ರವಲ್ಲದೆ ಅಲ್ಪಾವಧಿಯ ಕೋರ್ಸ್‍ಗಳೂ ಇರುತ್ತವೆ.

ಐಸಿಎಐನಿಂದ ಸರ್ಟಿಫಿಕೇಟ್
ಚಾರ್ಟೆಡ್ ಅಕೌಂಟೆಂಟ್ ಆ್ಯಕ್ಟ್, 1949ರ ಅನ್ವಯ ದೆಹಲಿಯಲ್ಲಿ ಸ್ಥಾಪನೆಗೊಂಡ `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)'ದಲ್ಲಿ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಹಲವು ಕೋರ್ಸ್‍ಗಳಿವೆ. ಈ ಸಂಸ್ಥೆಯು ಸುಮಾರು 100 ಗಂಟೆಗಳ(16 ದಿನಗಳ) ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ನಡೆಸುತ್ತದೆ. ಸುಮಾರು ಶೇಕಡ 90ರಷ್ಟು ಪಾಠ ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸಾದವರಿಗೆ ಸರ್ಟಿಫಿಕೇಟ್ ದೊರೆಯುತ್ತದೆ. ಐಸಿಎಐನ ಸದಸ್ಯರು ಅಥವಾ ಸಿಎ ಅಂತಿಮ ಪರೀಕ್ಷೆ ಮುಗಿಸಿ ಐಸಿಎಐನ ಸದಸ್ಯತ್ವ ಸಂಖ್ಯೆ ಪಡೆದವರು ಈ ಸರ್ಟಿಫಿಕೇಷನ್ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ 16 ದಿನಗಳ ಕೋರ್ಸ್‍ಗೆ 25 ಸಾವಿರ ರೂ. ಶುಲ್ಕ ಇರುತ್ತದೆ. ಈ ಕೋರ್ಸ್‍ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‍ಸೈಟ್ ಲಿಂಕ್ ಪ್ರವೇಶಿಸಬಹುದು.

ರಾಜ್ಯದಲ್ಲಿ ಟ್ಯಾಕ್ಸೇಷನ್
ಕರ್ನಾಟಕದಲ್ಲಿ ಟ್ಯಾಕ್ಸೇಷನ್ ವಿಷಯದಲ್ಲಿ ಅಲ್ಪಾವಧಿ ಕೋರ್ಸ್‍ಗಳನ್ನು ನೀಡುವ ವಿದ್ಯಾಸಂಸ್ಥೆಗಳು ಅತ್ಯಲ್ಪ. ಟ್ಯಾಕ್ಸ್ ಆ್ಯಂಡ್ ರೆಗ್ಯುಲೇಟರಿ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಬೆಂಗಳೂರಿನ ವೆಲ್ಲಿಂಗಕರ್ ಎಜುಕೇಷನ್ ಸಂಸ್ಥೆಯು 6 ತಿಂಗಳ ಅವಧಿಯ ಡಿಪೆÇ್ಲಮಾ ಕೋರ್ಸ್ ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು. ಈ ಸಂಸ್ಥೆಯು ಆರು ತಿಂಗಳ ಕೋರ್ಸ್‍ಗೆ 50 ಸಾವಿರ ರೂ.(ವ್ಯಾಟ್ ಸೇರದೆ) ಶುಲ್ಕ ನಿಗದಿಪಡಿಸಿದೆ. ಕೆಲವು ಖಾಸಗಿ ಸಂಸ್ಥೆಗಳು ಸಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನೀಡುತ್ತವೆ. ಬೆಂಗಳೂರಿನ ವಿಜಯನಗರದಲ್ಲಿರುವ ಐಜಿಎಸ್‍ಎಸ್‍ನಲ್ಲಿ 6 ತಿಂಗಳ ಟ್ಯಾಕ್ಸೇಷನ್ ಕೋರ್ಸ್ ಇದೆ. ಬಿಕಾಂ, ಬಿಬಿಎಂ, ಎಂಬಿಎ, ಎಂಕಾಂ ಇತ್ಯಾದಿ ಶಿಕ್ಷಣ ಪೂರೈಸಿದವರು ಈ ಕೋರ್ಸ್ ಮಾಡಬಹುದು. ರಾಜ್ಯದಲ್ಲಿ ಬೆರಳೆಣಿಕೆಯ ಖಾಸಗಿ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‍ಗಳನ್ನು ನಡೆಸುತ್ತಿವೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವುದಾದರೂ ಸಂಸ್ಥೆಯು ಇಂತಹ ಕೋರ್ಸ್‍ಗಳನ್ನು ನಡೆಸುತ್ತಿದೆಯೇ ಎಂದು ತಿಳಿದುಕೊಳ್ಳಿ.

ಆನ್‍ಲೈನ್ ಕೋರ್ಸ್‍ಗಳು
* ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಟ್ರೇಡ್ ಆ್ಯಂಡ್ ಟ್ಯಾಕ್ಸ್ ಸ್ಟಡೀಸ್‍ನಲ್ಲಿ `ಕಸ್ಟಮ್ಸ್ ಆ್ಯಂಡ್ ಫಾರಿನ್ ಟ್ರೇಡ್ ಪಾಲಿಸಿ' ವಿಷಯದ ಕುರಿತು ಆನ್‍ಲೈನ್ ಕೋರ್ಸ್ ಮಾಡಬಹುದಾಗಿದೆ. 90 ದಿನಗಳ ಈ ಕೋರ್ಸ್‍ಗೆ 10 ಸಾವಿರ ರೂ. ನೀಡಬೇಕು. ಹೆಚ್ಚಿನ ಮಾಹಿತಿಗೆ ಲಿಂಕ್
* ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನಡೆಸುತ್ತದೆ. ವೆಬ್‍ಲಿಂಕ್

ದೂರಶಿಕ್ಷಣದಿಂದ ಸರ್ಟಿಫಿಕೇಟ್
ಟ್ಯಾಕ್ಸೇಷನ್ ಡಿಪೆÇ್ಲಮಾ ಕೋರ್ಸ್‍ಗಳು ರಾಜ್ಯದಲ್ಲಿ ಕಡಿಮೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಸ್ಟೇನ್ಸ್ ಎಜುಕೇಷನ್ ಮೂಲಕ ತೆರಿಗೆ ಕಾನೂನು ಕಲಿಯಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್‍ನಲ್ಲಿ ಟ್ಯಾಕ್ಸೇಷನ್ ಸಂಬಂಧಿಸಿದಂತೆ ಡಿಸ್ಟೆನ್ಸ್ ಎಜುಕೇಷನ್ ಮಾಡಬಹುದು.

ಚೆನ್ನೈನಲ್ಲಿರುವ ಯೂನಿವರ್ಸಿಟಿ ಆಫ್ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಡಿಸ್ಟೆನ್ಸ್ ಎಜುಕೇಷನ್ನಲ್ಲಿ ಅಥವಾ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಟ್ಯಾಕ್ಸೇಷನ್ ಡಿಪೆÇ್ಲಮಾ ಓದಬಹುದು.
ಡಿಸ್ಟೆನ್ಸ್ ಕೋರ್ಸ್ ಮಾಡುವವರಿಗೆ ಮುಂಬೈನಲ್ಲಿರುವ ಟಿವಿಸಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಟ್ಯಾಕ್ಸೇಷನ್ ಕುರಿತಾದ ಹಲವು ಕೋರ್ಸ್‍ಗಳಿವೆ. ಡಿಪೆÇ್ಲಮಾ ಇನ್ ಇನ್‍ಡೈರೆಕ್ಟ್ ಟ್ಯಾಕ್ಸೇಷನ್, ಡಿಪೆÇ್ಲಮಾ ಇನ್ ಡೈರೆಕ್ಟ್ ಟ್ಯಾಕ್ಸೇಷನ್ ಇತ್ಯಾದಿ ಕೋರ್ಸ್‍ಗಳಿವೆ. ಇವು ತಲಾ ನಾಲ್ಕು ತಿಂಗಳ ಕೋರ್ಸ್. ಹೆಚ್ಚಿನ ಮಾಹಿತಿge. ಮುಂಬೈನಲ್ಲಿರುವ ಇಂಡೋ ಜರ್ಮನ್ ಟೂಲ್ ರೂಂ ಎಂಬ ಸಂಸ್ಥೆಯೂ ಭಾರತೀಯ ದೂರ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 6 ತಿಂಗಳ ಡಿಪೆÇ್ಲಮಾ ಇನ್ ಟ್ಯಾಕ್ಸ್ ಮ್ಯಾನೇಜ್‍ಮೆಂಟ್' ಕೋರ್ಸ್ ಇದೆ.
<strong>ಯಾರು ಮಾಡಬಹುದು?</strong>
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಅಥವಾ ಈಗಾಗಲೇ ಅಕೌಂಟೆಂಟ್/ಟ್ಯಾಕ್ಸ್ ಪ್ರಿಪರೇಷನ್ ವಿಭಾಗಗಳಲ್ಲಿ ಉದ್ಯೋಗದಲ್ಲಿರುವವರು ಕಂದಾಯಕ್ಕೆ ಸಂಬಂಧಿಸಿದ
ಟ್ಯಾಕ್ಸೇಷನ್' ಅಥವಾ `ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್' ಕೋರ್ಸ್‍ಗಳನ್ನು ಮಾಡಬಹುದು. ಅಂದರೆ, ಬಿಕಾಂ, ಎಂಕಾಂ, ಸಿಎ ಮಾತ್ರವಲ್ಲದೆ ಮ್ಯಾನೇಜ್‍ಮೆಂಟ್ ವಿಷಯಗಳನ್ನೂ ಓದಿದದವರೂ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ದೆಹಲಿಯ ಐಸಿಎಐನಲ್ಲಿ ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ಮಾಡಲು ಐಸಿಎಐ ಸದಸ್ಯತ್ವ ಅಥವಾ ಸದಸ್ಯತ್ವ ಸಂಖ್ಯೆ ಪಡೆಯಬೇಕಿರುವುದು ಕಡ್ಡಾಯ.

ಎಲ್ಲೆಲ್ಲಿ ಅವಕಾಶ ದೊರಕುತ್ತದೆ?
ಇಂತಹ ಸರ್ಟಿಫಿಕೇಷನ್ ಪಡೆದವರಿಗೆ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಸರಕಾರಿ ಏಜೆನ್ಸಿಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ರಿಟೀಲ್ ಅಥವಾ ಸರ್ವೀಸ್ ಉದ್ಯಮಗಳಲ್ಲಿ ಸುಲಭವಾಗಿ ಕೆಲಸ ದೊರಕುತ್ತದೆ. ಟ್ಯಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಟ್ಯಾಕ್ಸೇಷನ್, ತೆರಿಗೆ ಕಾನೂನು ಮತ್ತು ಕಾಪೆರ್Çರೇಟ್ ತೆರಿಗೆ ಇತ್ಯಾದಿ ವಿಷಯಗಳಲ್ಲಿ ತಜ್ಞರಾಗಬಹುದು.
ಕಾಲೇಜಿನಲ್ಲಿ ಬಿಕಾಂ ಇತ್ಯಾದಿ ಪದವಿ ಪಡೆzವರಿಗೆ ಪ್ರಾಕ್ಟಿಕಲ್ ಅನುಭವ ಇರುವುದಿಲ್ಲ. ಟ್ಯಾಕ್ಸೇಷನ್ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್ ಮಾಡಿದರೆ ಅವರಿಗೆ ಸ್ಪೆಸಿಫಿಕ್ ಆದ ನಾಲೆಡ್ಜ್ ದೊರಕುತ್ತದೆ. ಇಂತಹ ಕೋರ್ಸ್ ಮಾಡಿದ್ದರೆ ಫ್ರೆಷರ್ಸ್‍ಗಳಿಗೆ ಉದ್ಯೋಗಾವಕಾಶವೂ ಉತ್ತಮವಾಗಿರುತ್ತದೆ.
ಗಂಗಾಧರ್ ಹೆಗಡೆ | ಅಡಿಟರ್, ಬೆಂಗಳೂರು


ಕರ್ನಾಟಕದಲ್ಲಿ ಟ್ಯಾಕ್ಸೇಷನ್ ಸಂಬಂಧಪಟ್ಟಂತೆ ಹೆಚ್ಚು ಶಾರ್ಟ್‍ಟರ್ಮ್ ಕೋರ್ಸ್‍ಗಳಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿರುವ ಇನ್‍ಸ್ಟಿಟ್ಯೂಷನ್‍ಗಳಿಂದ ದೂರಶಿಕ್ಷಣ, ಆನ್‍ಲೈನ್ ಕೋರ್ಸ್ ಮಾಡಬಹುದು. ಇಂತಹ ಸರ್ಟಿಫಿಕೇಷನ್ ರೆಸ್ಯೂಂನ ವ್ಯಾಲ್ಯೂ ಹೆಚ್ಚಿಸಿ ಉದ್ಯೋಗ ದೊರಕಿಸಲು ನೆರವಾಗಬಹುದು.
ನರೇಂದ್ರ ಹಿರೆಕೈ | ಟ್ಯಾಕ್ಸ್ ಕನ್ಸಲ್ಟೆಂಟ್, ಬೆಂಗಳೂರು


ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಬಿ.ಕಾಂ., ಎಂ.ಕಾಂ., ಎಂಬಿಇ ಇತ್ಯಾದಿ ಕಾಮರ್ಸ್ ಅಥವಾ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದ ನಂತರ ಷೇರು ಮಾರುಕಟ್ಟೆ ಸಂಬಂಧಿ ಉದ್ಯೋಗ ಪಡೆಯಲು ನೆರವು ನೀಡುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ ಇಲ್ಲಿದೆ.

  • ಪ್ರವೀಣ್ ಚಂದ್ರ ಪುತ್ತೂರು


ಕಾಮರ್ಸ್ ಸಂಬಂಧಿತ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಜಾಬ್ ಆಯ್ಕೆಯ ಸಮಯದಲ್ಲಿ ಒಂದಿಷ್ಟು ಗೊಂದಲವಿರುತ್ತದೆ. ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದೇ? ಮಾರ್ಕೆಟಿಂಗ್ ಫೀಲ್ಡ್‍ಗೆ ಹೋಗಬಹುದೇ? ಅಕೌಂಟೆಟ್, ಸೇಲ್ಸ್, ಟ್ಯಾಕ್ಸ್ ಪ್ಲಾನಿಂಗ್... ಹೀಗೆ ಯಾವ ವಿಭಾಗದ ಜಾಬ್‍ಗೆ ಅಪ್ಲೈ ಮಾಡಲಿ ಎಂಬ ಸಂದಿಗ್ಧತೆ ಇರಬಹುದು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಿಕ್ಕ ಜಾಬ್‍ಗೆ ಹೋಗಿ ಸೇರಿದರೆ ನಂತರ ಬೇರೆ ಫೀಲ್ಡ್‍ನಲ್ಲಿ ಅವಕಾಶ ಸಿಗದೆ ಪರಿತಪಿಸಬೇಕಾಗಬಹುದು. ಇದರ ಬದಲು ಇವುಗಳಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಕಡಿಮೆ ಅವಧಿಯ ಸರ್ಟಿಫಿಕೇಷನ್ ಕೋರ್ಸ್ ಪಡೆದರೆ ಹೋಗುವ ಹಾದಿಯು ನಿಶ್ಚಿತವಾಗಿರುತ್ತದೆ. ಅವಕಾಶಗಳೂ ಸುಲಭವಾಗಿ ದೊರಕುತ್ತದೆ. ಈ ಲೇಖನದಲ್ಲಿ ಷೇರುಪೇಟೆ ಸಂಬಂಧಿತ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಶಾರ್ಟ್ ಟರ್ಮ್ ಕೋರ್ಸ್‍ಗಳ ವಿವರ ಇಲ್ಲಿದೆ.
ಷೇರುಪೇಟೆ ಸಂಬಂಧಿತ ಜಾಬ್ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಲು ಇಂತಹ ಕೋರ್ಸ್‍ಗಳು ನೆರವಾಗಬಹುದು.
ನಿಮ್ಮಲ್ಲಿ ಕಾಮರ್ಸ್ ಪದವಿ, ಸ್ನಾತಕೋತ್ತರ ಪದವಿ ಇದ್ದರೂ ಕೆಲವೊಮ್ಮೆ ಇಂತಹ ಷೇರು ಸಂಸ್ಥೆಗಳು ಕೆಲವೊಮ್ಮೆ ಕೆಲಸ ಕೊಡದಿರಬಹುದು. ಇಂತಹ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಸಂಬಂಧಿತ ಸರ್ಟಿಫಿಕೇಷನ್ ಕೋರ್ಸ್‍ಗಳ ನೆರವಿಗೆ ಬರಬಹುದು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಸಹ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

ಕ್ಲಾಸ್‍ರೂಂ ಕೋರ್ಸ್
ಎನ್‍ಎಸ್‍ಇ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.
ಬಿಎಸ್‍ಇ: ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಅಲ್ಲಿ 3 ತಿಂಗಳ ಅವಧಿಯ ಷೇರುಪೇಟೆಯ ಬೇಸಿಕ್ ಕೋರ್ಸ್‍ಗೆ ಸರ್ವೀಸ್ ಟ್ಯಾಕ್ಸ್ ಸೇರಿಸದೆ 8,250 ರೂಪಾಯಿ ಶುಲ್ಕವಿದೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಸಿಯಲ್ ಇನ್‍ಸ್ಟಿಟ್ಯೂಷನ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು. ಸರ್ವೀಸ್ ಟ್ಯಾಕ್ಸ್ ಸೇರಿಸದೆ ಈ ಕೋರ್ಸ್ ಶುಲ್ಕ 18 ಸಾವಿರ ರೂ. ಇದೆ.

ಆನ್‍ಲೈನ್ ಕೋರ್ಸ್
ಆನ್‍ಲೈನ್‍ನಲ್ಲೂ ಷೇರುಪೇಟೆ ಸಂಬಂಧಿಸಿದ ಇಂತಹ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಬಹುದು.
ಇಲರ್ನ್‍ಮಾರ್ಕೆಟ್ಸ್: ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಇಂತಹ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅಧ್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.
ಐಐಟ್ರೇಡ್: ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಧಿಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.
ದಲಾಲ್‍ಸ್ಟ್ರೀಟ್ ಅಕಾಡೆಮಿ: ಈ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಶುಲ್ಕ 5,500 ರೂಪಾಯಿ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.
ಹೀಗೆ ಷೇರುಪೇಟೆ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನೀಡುವ ಹಲವು ಸಂಸ್ಥೆಗಳಿವೆ. ಎನ್‍ಎಸ್‍ಇ ಅಥವಾ ಬಿಎಸ್‍ಇಯಿಂದ ಅಂಗೀಕೃತವಾದ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದರೆ ಒಳ್ಳೆಯದು.
ತುಕ್ರ ಬೆಂಗಳೂರಿಗೆ ಹೋದದ್ದು..

ತುಕ್ರ ಬೆಂಗಳೂರಿಗೆ ಹೋದದ್ದು..

ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್‌ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್‌ ತುಂಡಾಗಿರುವ ಟೈಟಾನ್‌ ಕಂಪನಿಯ ವಾಚ್‌ ತೆರೆದು ಗಂಟೆ ನೋಡಿಕೊಂಡ. ಇನ್ನೂ ಆರೂವರೆಯಷ್ಟೇ. ಏಳುವರೆಗೆ ಮೆಜೆಸ್ಟಿಕ್‌ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು. ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ. ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು. `ಸಾಬ್‌ ಬೀಡಿ’ ಅಂತ ಮುದುಕನೊಬ್ಬ ಇವನ ಪಕ್ಕ ಕುಳಿತುಕೊಂಡಾಗ ಅವನಿಗೂ ಒಂದು ತೆಗೆದುಕೊಟ್ಟ. ಆತ ಸಹ ಬಾಗಿಲ ಪಕ್ಕದಲ್ಲಿ ಇವನಿಗೆ ಒರಗಿ ಕುಳಿತ. ಸ್ವಲ್ಪ ಸಮಯವಾದಗ ಒಂದಿಷ್ಟು ತೂಕಡಿಕೆ ಬಂದಂತಾಗಿ ಅಲ್ಲಿಂದ ಎದ್ದು ಬಂದ ತುಕ್ರ ಸೀಟ್‌ನಲ್ಲಿ ಕುಳಿತುಕೊಂಡ.

****
ದಿನಾ ಕುಡಿದು ಬರುವುದನ್ನು ತುಕ್ರಾನ ಹೆಂಡತಿ ಕಮಲ ಆಕ್ಷೇಪಿಸುತ್ತಿದ್ದಳು. ಇದೇ ಕಾರಣಕ್ಕೆ ದಿನನಿತ್ಯ ಸಣ್ಣಪುಟ್ಟ ಜಗಳವೂ ಆಗುತ್ತಿತ್ತು. ನಿನ್ನೆ ರಾತ್ರಿ ಹೆಂಡತಿ ಏನೋ ಹೇಳಿದ್ದು ಇವನ ಪಿತ್ತವನ್ನು ನೆತ್ತಿಗೇರಿಸಿತ್ತು. ನೀನು ಒಬ್ಬಳೇ ಇಲ್ಲಿರು. ನಾನು ಮಗನಲ್ಲಿಗೆ ಹೋಗ್ತಿನಿ ಅಂದಾಗ ಕಮಲ ಮೊದಲು ಕುಡಿದ ಅಮಲಿಗೆ ಹೇಳುತ್ತಿದ್ದಾನೆ ಅಂದುಕೊಂಡಳು. ಕ್ವಿಂಟಾಲ್‌ ಅಕ್ಕಿ ತರಲೆಂದು ಕಪಾಟ್‌ನಲ್ಲಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕಿಸೆಗೆ ಹಾಕಿಕೊಂಡು ಅಂಗಿ ಹಾಕಿದಾಗ ಕಮಲ ಕಳವಳಗೊಂಡು ಕ್ಷಮೆ ಕೇಳಿದರೂ ತುಕ್ರ ಹಠ ಬಿಡಲಿಲ್ಲ. ಯಾಕೋ ಎಂದು ನೋಡಿರದ ಬೆಂಗಳೂರು ಕುಡಿದ ಅಮಲಿನಲ್ಲಿ ತುಕ್ರನಿಗೆ ಸುಂದರವಾಗಿ ಕಾಣಿಸಿತ್ತು. ಮತ್ತೆ ಒಂದಿಷ್ಟು ಜಗಳ ಮಾಡಿ ಸೀದಾ ಪುತ್ತೂರು ರೈಲ್ವೆ ಸ್ಟೇಷನ್‌ಗೆ ಬಂದಿದ್ದ. ಸ್ಟೇಷನ್‌ವರೆಗೆ ಹೂವಿನ ಅಂಗಡಿಯ ಗಡಂಗ್‌ ಗೆಳೆಯ ನಾರಾಯಣನನ್ನು ಕರೆದುಕೊಂಡು ಹೋಗಿದ್ದ.

****
ಪುತ್ತೂರು ರೈಲ್ವೆ ಸ್ಟೇಷನ್‌ಗೆ ಬಂದವನೇ ಕ್ವಾಯಿನ್‌ ಬಾಕ್ಸ್‌ನಲ್ಲಿ ಯಾರಿಂದಲೋ ನಂಬರ್‌ ಡಯಲ್‌ ಮಾಡಿಸಿ ಮಗನಲ್ಲಿ ಮಾತನಾಡಿದ್ದ. ನಾನು ಬೆಂಗಳೂರಿಗೆ ಬರ್ತಿನಿ ಅಂತ ಮಗನಲ್ಲಿ ಹೇಳಿದಾಗ ಇವರು ತಮಾಷೆಗೆ ಹೇಳುತ್ತಿದ್ದಾರೆ ಅಂತ ತಿಳಿದುಕೊಂಡು ಏನು ಕುಡಿದದ್ದು ಜಾಸ್ತಿ ಆಗಿದೆಯಾ ಅಂತ ಮಗ ಚಂದ್ರಕಾಂತ್‌ ನಕ್ಕ. ಈಗಲೇ ಬರುತ್ತಿದ್ದೇನೆ ಅಂದಾಗ ಇವನಿಗೆ ತಬ್ಬಿಬ್ಬಾಯಿತು. ತಂದೆಗೆ ಬುದ್ಧಿ ಹೇಳುವಂತೆ ನಾರಾಯಣನ ಮೂಲಕ ಹೇಳಿಸಿದರೂ ತುಕ್ರ ಕಿವಿಗೆ ಹಾಕಿಕೊಳ್ಳಲಿಲ್ಲ. `ನೀನು ನನ್ನ ಮಗ ಆಗಿದ್ರೆ ನಾಳೆ ರೈಲ್ವೆ ಸ್ಟೇಷನ್‌ಗೆ ಬಂದು ಕರ್ಕೊಂಡು ಹೋಗು’ ಅಂತ ಮತ್ತಿನಲ್ಲಿ ಹೇಳಿದ್ದ. ಕೊನೆಗೆ ಚಂದ್ರಕಾಂತ, ರೈಲು ಎಷ್ಟು ಗಂಟೆಗೆ ಬರುತ್ತೆ, ಎಲ್ಲಿ ನಿಲ್ಲಬೇಕು. ಬಂದ ಕೂಡಲೇ ಫೋನ್‌ ಮಾಡಬೇಕು ಅಂತ ತುಂಬಾ ಎಚ್ಚರಿಕೆ ಹೇಳಿದ. ಅವನು ಕಿವಿಗೆ ಹಾಕಿಕೊಂಡನೋ ಬಿಟ್ಟನೋ ಕಿಸೆಯಲ್ಲಿದ್ದ ಕ್ವಾಯಿನ್‌ ಮುಗಿದಾಗ ಫೋನ್‌ ಕೆಳಗಿಟ್ಟು ಟಿಕೇಟ್‌ ಮಾಡಿ ರೈಲು ಹತ್ತಿಬಿಟ್ಟ. ಎಚ್ಚರವಾದಾಗ ಆರುಗಂಟೆ ಕಳೆದಿತ್ತು.

****
ಒಮ್ಮೆಗೆ ರೈಲು ನಿಂತಿತ್ತು. ಮೈಮೇಲೆ ಯಾರು ಬಿದ್ದಂತಾಗಿ ಎದ್ದು ಕುಳಿತ ತುಕ್ರ ಹೊರಗಿನ ಪರಿಸರವನ್ನು ಅಚ್ಚರಿಯಿಂದ ನೋಡುತ್ತ ಕುಳಿತ. ಇದು ಯಾವ ಸ್ಥಳ ಅಂತ ಅಲ್ಲಿ ಯಾರೋ ಒಬ್ಬರನ್ನು ಕೇಳಿದ. ಮೆಜೆಸ್ಟಿಕ್‌ ಅಂದಾಗ ಗಡಿಬಿಡಿಯಿಂದ ಎದ್ದು ರೈಲಿನಿಂದಿಳಿದ. ಅಬ್ಬಾ ಎಷ್ಟೊಂದು ರೈಲುಗಳು, ಎಷ್ಟು ಜನರಿದ್ದಾರೆ. ಪುತ್ತೂರಿನಲ್ಲಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆಯಲ್ಲೂ ಇಷ್ಟು ಜನ ಇರಲಿಕ್ಕಿಲ್ಲ ಅಂದುಕೊಂಡ. ಆತ ಮಂಗಳೂರಿಗೆ 2 ಬಾರಿ ಹೋಗಿದ್ದ ಅಷ್ಟೇ. ಬೆಂಗಳೂರೆಂದರೆ ಮಂಗ್ಳೂರಿಗಿಂತ ಸ್ವಲ್ಪ ದೊಡ್ಡದಿರಬಹುದು ಅಂದುಕೊಂಡಿದ್ದ. ಯಾವುದಕ್ಕೂ ಮಗನಿಗೆ ಫೋನ್‌ ಮಾಡಬೇಕು ಅಂತ ಯೋಚಿಸಿ ಎಲ್ಲಿಯಾದರೂ ಕ್ವಾಯಿನ್‌ ಬಾಕ್ಸ್‌ ಕಾಣಿಸುತ್ತದೆಯೇ ಎಂದು ಹುಡುಕಿದ. ಅಲ್ಲಿ ಯಾರೋ ಕಾಫಿ ಮಾರುತ್ತಿರುವುದನ್ನು ಕಂಡು ಒಂದು ಚಾ ಅಂದ. ಅವನು ಪ್ಲಾಸ್ಟಿಕ್‌ ಗ್ಲಾಸ್‌ಗೆ ಟೀ ಹಾಕುತ್ತಿದ್ದಾಗ ಹಣ ತೆಗೆಯಲು ಅಂತ ಕಿಸೆ ನೋಡಿಕೊಂಡವನೇ ರಾಮ ರಾಮ ಅಂತ ಬೊಬ್ಬೆ ಹಾಕಿದ.

ಆತನ ಮುಂಡಿನ ಒಳಗಡೆಯಿದ್ದ ಅಂಡರ್‌ವೇರ್‌ನ ಕಿಸೆಯನ್ನೇ ಕಟ್‌ ಮಾಡಲಾಗಿತ್ತು. ಟೀಯವನನ್ನು ಅಲ್ಲೇ ಬಿಟ್ಟು ಪಕ್ಕದಲ್ಲಿದ್ದ ಬೆಂಚಿನಲ್ಲಿ ಕುಸಿದು ಕುಳಿತ ತುಕ್ರನಿಗೆ ಆಕಾಶವೇ ಬಿದ್ದಾಂತಾಯಿತು. ದೇವರೇ ಅಕ್ಕಿಗಿಟ್ಟ ದುಡ್ಡು ಬೇವರ್ಸಿಗಳು ಕದ್ದು ಬಿಟ್ಟರಲ್ಲ ಅಂತ ಶಾಪ ಹಾಕುತ್ತಿದ್ದಾಗ ಅದೇ ಪರ್ಸ್‌ನಲ್ಲಿ ಮಗನ ಮೊಬೈಲ್‌ ನಂಬರ್‌ ಇದ್ದದ್ದು ನೆನಪಾಯಿತು. ಇನ್ನೇನೂ ಮಾಡಲಿ ದೇವರೇ ಅಂತ ತಲೆಮೇಲೆ ಕೈಹೊತ್ತುಕೊಂಡು ಅಲ್ಲಿಯೇ ಕುಳಿತ. ಕುಳಿತಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ `ಪಾಶಾನಮೂರ್ತಿ ದೈವವೇ ಕಾಪಾಡು’ ಅಂತ ಅಲ್ಲಿಯೇ ಹುಚ್ಚನಂತೆ ತಿರುಗಾಡತೊಡಗಿದ.

****
ಮಂಗಳೂರು ರೈಲು ಬಂದಾಗ ಚಂದ್ರಕಾಂತ್‌ ಫ್ಲಾಟ್‌ಫಾರ್ಮ್‌ನಲ್ಲಿಯೇ ಇದ್ದ. ಇನ್ನೂ ಯಾಕೆ ಇವರು ಫೋನ್‌ ಮಾಡಿಲ್ಲ ಅಂತ ಮೊಬೈಲನ್ನೇ ನೋಡುತ್ತಿದ್ದ. ರೈಲು ಹೋಗಿ ಹತ್ತು ನಿಮಿಷ ಆದರೂ ಅಪ್ಪ ಫೋನ್‌ ಮಾಡದೇ ಇದ್ದಾಗ ಒಂದಿಷ್ಟು ಕಳವಳದಿಂದ ಫ್ಲಾಟ್‌ಫಾರ್ಮ್‌ನಲ್ಲಿ ಹುಡುಕಾಡತೊಡಗಿದ. ಇವರು ನಿದ್ದೆ ಮಾಡಿ ಮೆಜೆಸ್ಟಿಕ್‌ ಬಂದದ್ದೇ ಗೊತ್ತಿಲ್ಲದೇ ಯಶವಂತಪುರದಲ್ಲಿ ಇಳಿದರೋ ಎಂಬ ಸಂಶಯವೂ ಉಂಟಾಯಿತು.

ರೈಲು ಹೋಗಿ ಅರ್ಧಗಂಟೆ ಕಳೆಯಿತು. ಒಂದು ಕಡೆ ಕೋಪನೂ ಬಂತು. ನಾನು ಬರಬೇಡ ಅಂದಿದ್ದೆ. ಕೇಳದೆ ಬಂದ್ರು. ಥಕ್‌ ಒಳ್ಳೆ ಪಿಕಳಾಟ ಆಯ್ತಲ್ಲ ಅಂತ ಗೊಣಗಿಕೊಂಡ. ಎಲ್ಲ ಕಡೆ ಸುತ್ತಾಡಿ ಸಾಕಾಗಿ ಅಲ್ಲೇ ಬೆಂಚಿನ ಮೇಲೆ ಕುಳಿತ. ಅಥವಾ ಬರ್ತಿನಿ ಅಂತ ಹೇಳಿ ಬಂದಿಲ್ಲವೋ ಹೇಗೆ ಅಂದುಕೊಂಡು ಮನೆಗೆ ಫೋನ್‌ ಮಾಡಿ ಕೇಳಿದ. ಅವನ ಅಮ್ಮ ಅಳುತ್ತ `ನಿನ್ನೆಯೇ ಹೊದ್ರಂತೆ. ಹೂವಿನಂಗಡಿಯ ನಾರಾಯಣನೇ ರೈಲು ಹತ್ತಿಸಿ ಬಂದದಂತೆ’ ಅಂತ ತಿಳಿಸಿದರು. ಅಮ್ಮನಿಗೆ ಸಮಧಾನ ಹೇಳಿ ಫೋನ್‌ ಇಟ್ಟ.
****
ಗಂಟೆ ಒಂಬತ್ತಾಗುತ್ತ ಬಂತು. ಅವನು ಫ್ಲಾಟ್‌ಫಾರ್ಮ್‌ನಲ್ಲಿ ಹುಡುಕದೇ ಉಳಿದ ಸ್ಥಳ ಯಾವುದೂ ಉಳಿಯಲಿಲ್ಲ. ಅಯ್ಯೋ ಈ ಬೆಂಗಳೂರಲ್ಲಿ ಅವರನ್ನು ಎಲ್ಲಿ ಅಂತ ಹುಡುಕಲಿ ಎಂದು ಗೊತ್ತಾಗದೇ ತಲೆ ಕೆರೆದುಕೊಂಡ. ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಅಂತ ಅಮ್ಮ ಹೇಳಿದ್ದು ನೆನಪಾಗಿ ಸ್ವಲ್ಪ ಸಮಧಾನವೂ ಆಯಿತು. ದುಡ್ಡಿದ್ದರೆ ಹೇಗಾದರೂ ಇಲ್ಲಿ ಬದುಕಬಹುದು. ಅಥವಾ ವಾಪಸ್‌ ಮನೆಗೆ ಹೋಗಬಹುದು ಅಂದುಕೊಂಡ. ಸಂಜೆ ತನಕ ಇಲ್ಲೇ ಕಾಯುವುದು ಅಂತ ತೀರ್ಮಾನಿಸಿದ ಚಂದ್ರಕಾಂತ್‌ ಹುಡುಕಾಟ ಮುಂದುವರೆಸಿದ. ಆತ ತನ್ನ ಕೆಲವು ಸ್ನೇಹಿತರಿಗೂ ವಿಷಯ ತಿಳಿಸಿದ. ಅವರೂ ಮೆಜೆಸ್ಟಿಕ್‌ಗೆ ಬರುವುದಾಗಿ ಹೇಳಿದ್ರು.

****
ಚಂದ್ರಕಾಂತ್‌ಗೆ ಬೆಳಗ್ಗಿನಿಂದ ಹುಡುಕಿ ಸಾಕಾಗಿ ಹೋಗಿತ್ತು. ಚಿಕ್ಕದಿನಿಂದ ಅವನಿಗೆೆ ಅಪ್ಪನೆಂದರೆ ಪ್ರೀತಿ ಜಾಸ್ತಿ. ಅಪ್ಪ ದುಡಿದ ಹಣದಿಂದಲೇ ಕಷ್ಟಪಟ್ಟು ಡಿಪ್ಲೋಮ ಓದಿದ್ದ. ಅಂತಹ ಬಡತನದಲ್ಲೂ ಬೆಂಗಳೂರಿನಲ್ಲಿ ಒಳ್ಳೆ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಲು ಅಪ್ಪನ ದುಡಿತವೇ ಕಾರಣವಾಗಿತ್ತು. ಆದ್ರೆ ಅಪ್ಪ ದುಡುಕಿಬಿಟ್ಟ ಅಂತ ಅನಿಸಿತ್ತು. ಒಂದು ಕಡೆ ಅಮ್ಮನ ಮೇಲೂ ಕೋಪ ಬಂತು. ಆದರೆ ಅಮ್ಮ ಇಲ್ಲದಿದ್ದರೆ ಅಪ್ಪ ಮಹಾ ಕುಡುಕನಾಗುತ್ತಿದ್ದ ಅಂತ ಸಮಧಾನ ಮಾಡಿಕೊಂಡ.

****
ಗೆಳೆಯರೊಂದಿಗೆ ಸೇರಿ ಮುಂದೆ ಏನು ಮಾಡೋದೆಂದು ಚರ್ಚಿಸಿದ. ನಾಳೆಯವರೆಗೆ ಕಾಯೋಣ ಅಂತ ಒಬ್ಬ ಸಲಹೆ ನೀಡಿದರೆ ಮತ್ತೊಬ್ಬ ಪೋಲಿಸ್‌ ಕಂಪ್ಲೇಟ್‌ ಕೊಡೋದು ಒಳ್ಳೆಯದೆಂದು ತಿಳಿಸಿದ. ಕೊನೆಗೆ ಎಲ್ಲರೂ ಚರ್ಚಿಸಿ ಪೋಲಿಸ್‌ ಕಂಪ್ಲೇಟ್‌ ಕೊಡುವುದು ಸೂಕ್ತ ಎಂದು ತೀರ್ಮಾನಿಸಿದರು. `ಅವರು ಕಂಪ್ಲೇಟ್‌ ಪಡೆದುಕೊಂಡು ಹುಡುಕದೇ ಇದ್ರೆ’ ಅಂತ ಒಬ್ಬ ವರಾತ ತೆಗೆದಾಗ ಚಂದ್ರಕಾಂತನಿಗೆ ಹೌದೆನಿಸಿತು. ಇಲ್ಲಿ ದಿನಕ್ಕೆ ಎಷ್ಟು ಸಾವಿರ ಇಂತಹ ಪ್ರಕರಣ ಬರುತ್ತದೆಯೋ ಯಾರಿಗೆ ಗೊತ್ತು ಅಂತ ಅಂದುಕೊಂಡ. ಈ ಸಮಸ್ಯೆಗೆ ಸ್ನೇಹಿತನೊಬ್ಬನ ಮೂಲಕ ಪರಿಹಾರ ಸಿಕ್ಕಿತು. ಆತನ ಸಂಬಂಧಿಕರೊಬ್ಬರು ಬೆಂಗಳೂರು ಪೋಲಿಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಮೂಲಕವೇ ಕಂಪ್ಲೇಟ್‌ ಕೊಡಲಾಯಿತು. ಶೀಘ್ರದಲ್ಲಿ ಹುಡುಕಿಕೊಡುವ ಭರವಸೆಯೇನೂ ಸಿಕ್ಕಿತು.

****
ಎರಡು ದಿನ ಕಳೆದವು. ಪೋಲಿಸ್‌ ಸ್ಟೇಷನ್‌ನಿಂದ ಏನೂ ಮಾಹಿತಿ ಸಿಗಲಿಲ್ಲ. ಈತ ಆಗಾಗ ಸ್ಟೇಷನ್‌ಗೆ ಫೋನ್‌ ಮಾಡಿ ವಿಚಾರಿಸುತ್ತಿದ್ದ. ಪೇಪರ್‌ನಲ್ಲಿ ಕಾಣೆಯಾಗಿದ್ದಾರೆ ಅಂತ ಫೋಟೊ ಹಾಕಿಯೂ ಆಗಿತ್ತು. ಅಂದೊಂದು ದಿನ ಮೆಜೆಸ್ಟಿಕ್‌ ಸಮೀಪದಲ್ಲಿ ಅಪರಿಚಿತ ಹೆಣವೊಂದನ್ನು ನೋಡಿದ ಪೋಲಿಸರು ಈತನಿಗೆ ಫೋನ್‌ ಮಾಡಿದ್ರು. ಚಂದ್ರಕಾಂತ್‌ ಭಯದಿಂದಲೇ ಅದನ್ನು ನೋಡಲು ಹೋದ. ಕೊನೆಗೂ ಅದು ಆತನ ಅಪ್ಪನದ್ದಲ್ಲ ಅಂತ ಗೊತ್ತಾಯಿತು. ಕೊನೆಗೆ ಟಿವಿಯಲ್ಲೂ ಜಾಹೀರಾತು ನೀಡಿದ. ಬಿಕ್ಷುಕರ ಮರುವಸತಿ ಕೇಂದ್ರಕ್ಕೂ ಹೋಗಿ ಬಂದ. ಅಲ್ಲೂ ಇರಲಿಲ್ಲ. ಇನ್ನು ನಾನು ಮಾಡುವುದು ಏನು ಇಲ್ಲ ಅಂತ ದೇವರ ಮೇಲೆ ಭಾರ ಹಾಕಿ ಕುಳಿತುಕೊಂಡ. ದಿನಗಳು ಕಳೆಯುತ್ತಿದ್ದವು. ಅಪ್ಪನ ನೆನಪಿನಲ್ಲಿಯೇ ದುಃಖದಿಂದ ಮತ್ತೆ ಆಫೀಸ್‌ಗೆ ಹೋಗಲು ಸುರು ಮಾಡಿದ.

****
ಚಂದ್ರಕಾಂತ್‌ ಅಪ್ಪನನ್ನು ಕಳೆದುಕೊಂಡು ಸುಮಾರು ಎರಡು ತಿಂಗಳು ಕಳೆದಿತ್ತು. ಅದೊಂದು ದಿನ ಪೋಲಿಸ್‌ ಸ್ಟೇಷನ್‌ನಿಂದ ಅರ್ಜೆಂಟ್‌ ಫೋನ್‌ ಬಂದಾಗ ಸೀದಾ ಅಲ್ಲಿಗೆ ಹೋದ. ಇನ್ಸ್‌ಪೆಕ್ಟರ್‌ ಆತನನ್ನು ಸೀದಾ ಶವಾಗಾರಕ್ಕೆ ಕರೆದುಕೊಂಡು ಹೋದರು. ಮುಖ ಜಜ್ಜಿದ ಸ್ಥಿತಿಯಲ್ಲಿದ್ದ ಒಂದು ಹೆಣ ತೋರಿಸಿ ನೋಡಲು ಹೇಳಿದ್ರು. ಅದು ಎರಡು ದಿನದ ಹಿಂದೆ ಆನಂದ್‌ ರಾವ್‌ ಸರ್ಕಲ್‌ ಪಕ್ಕದ ಚರಂಡಿಯಲ್ಲಿ ಸಿಕ್ಕಿದಂತೆ. ಹೆಣ ಸಿಕ್ಕಪಟ್ಟೆ ಊದಿಕೊಂಡಿತ್ತು. ಮುಖ ಜಜ್ಜಿದರಿಂದ ಗುರುತು ಸಿಕ್ಕಿರಲಿಲ್ಲ. ಆ ಹೆಣದೊಂದಿಗೆ ಸಿಕ್ಕಿದ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲವೊಂದರಲ್ಲಿ ಇಟ್ಟಿದ್ದರು. ಒಂದಿಷ್ಟು ಬಟ್ಟೆಗಳೊಂದಿಗೆ ಒಂದು ಬೆಲ್ಟ್‌ ತುಂಡಾದ ಟೈಟಾನ್‌ ವಾಚ್‌ ಕೂಡ ಇತ್ತು. ಅದನ್ನು ನೋಡಿದ ಚಂದ್ರಕಾಂತ್‌ ಅಲ್ಲೇ ಕುಸಿದು ಕುಳಿತ. ಯಾಕೆಂದರೆ ಅದು ಆತ ಕೆಲಸ ಸಿಕ್ಕ ಖುಷಿಯಲ್ಲಿ ಅಪ್ಪನಿಗೆ ನೀಡಿದ್ದ ವಾಚಾಗಿತ್ತು. ಈತನಿಗೆ ಸಿಕ್ಕ ವಾಚ್‌ ಆಧಾರದಲ್ಲಿ ಆ ಹೆಣ ಅವನ ತಂದೆಯದ್ದೇ ಎಂದು ತೀರ್ಮಾನಿಸಿದರು.

ಒಂದಿಷ್ಟು ಸಮಯದ ನಂತರ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿದರು. ಸಾವರಿಸಿಕೊಂಡ ನಂತರ ಚಂದ್ರಕಾಂತ್‌ ಊರಿಗೆ ಫೋನ್‌ ಮಾಡಿ ವಿಷಯ ತಿಳಿಸಿದ. ಆಫೀಸ್‌ಗೆ ಫೋನ್‌ ಮಾಡಿ 20 ದಿನ ರಜೆ ಹಾಕಿ ಹೆಣದೊಂದಿಗೆ ಅಂಬ್ಯುಲೆನ್ಸ್‌ನಲ್ಲಿ ಊರಿಗೆ ಮರಳಿದ.

****
ನಾನು ಎಷ್ಟು ಹೇಳಿದರೂ ಕೇಳದೇ ಬೆಂಗ್ಳೂರಿಗೆ ಹೋದಿ ಅಂತ ಬೊಬ್ಬೆ ಹಾಕುತ್ತ ಹೆಣದ ಮುಂದೆ ಕಮಲ ಹಣೆ ಬಡಿದುಕೊಂಡು ಅತ್ತರು. ಚಂದ್ರಕಾಂತನೂ ದುಃಖದಿಂದ ಅಂತಿಮ ಸಂಸ್ಕಾರ ಮಾಡಿ ಮುಗಿಸಿದ. ಎಲ್ಲ ಮುಗಿದ ನಂತರ ಎಷ್ಟು ಹೇಳಿದರೂ ಚಂದ್ರಕಾಂತ್‌ನ ಅಮ್ಮ ಬೆಂಗಳೂರಿಗೆ ಬರಲು ಒಪ್ಪಲಿಲ್ಲ. ಒಬ್ಬನೇ ಮಗನಾಗಿದ್ದರಿಂದ ಅಮ್ಮನನ್ನು ಒಬ್ಬರನ್ನೇ ಬಿಟ್ಟು ಬರುವುದು ಚಂದ್ರಕಾಂತ್‌ಗೆ ಸರಿಬರಲಿಲ್ಲ. ಸಂಸ್ಕಾರ ನಡೆಸಿ 11ನೇ ದಿನದ ಎಲ್ಲ ಕಾರ್ಯಗಳು ಮುಗಿದವು.

ಅದೊಂದು ದಿನ ಹೂವಿನಂಗಡಿಯ ನಾರಾಯಣ ರಿಕ್ಷಾದಲ್ಲಿ ಮನೆಗೆ ಬಂದ. ಆತನೊಂದಿಗೆ ಉದ್ದವಾದ ಗಡ್ಡದ, ಕೆದರಿದ ಕೂದಲಿನ ಹುಚ್ಚನಂತೆ ಕಾಣುವ ವ್ಯಕ್ತಿಯೊಬ್ಬ ನಿಂತಿದ್ದ. `ಚಂದ್ರ ಇವ್ರು ನಿಮ್ಮಪ್ಪ ಕಣೋ’ ಅಂದಾಗ ಚಂದ್ರಕಾಂತ್‌ಗೆ ಒಮ್ಮೆಗೆ ಶಾಕ್‌! ಮತ್ತೆ ಮತ್ತೆ ನೋಡಿದ. ಹೌದು ಅಪ್ಪನೇ. ಕಣ್ಣು ತೇವಗೊಂಡಿತ್ತು. ಹಾಗಾದರೆ ಈಗ ಅಂತ್ಯಸಂಸ್ಕಾರ ಮಾಡಿದ್ದು ಬೇರೆ ಯಾರದ್ದೋ ಹೆಣ ಆಗಿರಬೇಕು ಅಂದುಕೊಂಡ. ಇದ್ಯಾವುದೋ ಕನಸು ಎಂಬಂತೆ ಭಾಸವಾಯಿತು. ಹೋಗಿ ಅಪ್ಪನನ್ನು ಅಪ್ಪಿಕೊಂಡು ಉಪಚರಿಸಿದ. ಅಪ್ಪನ ಮೈಕೈಗಳಲ್ಲಿ ಒಂದಿಷ್ಟು ಹುಣ್ಣಾಗಿತ್ತು. ಚಂದ್ರಕಾಂತ್‌ ಸೀದಾ ಆತನನ್ನು ಮನೆಯೊಳಗೆ ಕರೆದುಕೊಂಡು ಹೋದ.

ಸ್ವಲ್ಪ ಸಮಯ ಕಳೆಯಿತು. ಹೇಗೋ ತುಕ್ರ ಒಂದಿಷ್ಟು ಗಂಜಿ ತಿಂದ. ಒಂದೆರಡು ಗಂಟೆಯಲ್ಲಿ ತುಕ್ರ ಸುಧಾರಿಸಿಕೊಂಡ. ಆಮೇಲೆ ಆತ ಹೇಳಿದ ಕತೆ ಹೀಗಿತ್ತು. ಪರ್ಸ್‌ ಕಳೆದ ಚಿಂತೆಯಲ್ಲಿ ತುಕ್ರಾ ತುಂಬಾ ಹೊತ್ತು ರೈಲು ಪ್ಲಾಟ್‌ಫಾರ್ಮ್‌ನಲ್ಲಿ ತಿರುಗಿದ. ಮತ್ತೆ ಏನು ಮಾಡುವುದೆಂದು ಗೊತ್ತಾಗದೇ ರೈಲ್ವೇ ಸ್ಟೇಷನ್‌ನಿಂದ ಹೊರಗಡೆ ಬಂದ. ಅಲ್ಲಿ ಜನರು ಸಾಲಾಗಿ ಹೋಗುತ್ತಿರುವುದನ್ನು ಕಂಡು ಅವರ ಹಿಂದೆಯೇ ಹೋಗಿ ಬಿಎಂಟಿಸಿ ಬಸ್‌ಸ್ಟಾಂಡ್‌ ತಲುಪಿದನಂತೆ. ಹೊಟ್ಟೆ ತೊಳೆಸಿದಂತಾಗಿ ಪಕ್ಕದಲ್ಲಿ ಕಂಡ ಟಾಯ್ಲೆಟ್‌ಗೆ ನುಗ್ಗಿದ. ಬರುವಾಗ ಇವನಲ್ಲಿ ದುಡ್ಡಿಲ್ಲ ಅಂತ ತಿಳಿದಾಗ ಅಲ್ಲಿದ್ದ ರೌಡಿಯಂತಹ ವ್ಯಕ್ತಿ ಮುಖ ಮೂತಿ ನೋಡದೆ ಹೊಡೆದನಂತೆ. ಬದುಕಿದರೆ ಸಾಕು ಅಂತ ಅಲ್ಲಿಂದ ಓಡಿ ಹೋದ. ಸಂಜೆವರೆಗೆ ಅಲ್ಲೇ ಬಸ್‌ಸ್ಟಾಂಡ್‌ನಲ್ಲಿಯೇ ಕಾದನಂತೆ.

****
ಆಮೇಲೆ ಯಾವ ಕಡೆ ನಡೆದ ಅಂತ ನೆನೆಪಿರಲಿಲ್ಲ. ಯಾವುದೋ ಹೋಟೆಲ್‌ ಪ್ರವೇಶಿಸಿ. ತನಗೆ ಗೊತ್ತಿದ್ದ ಕನ್ನಡದಲ್ಲಿ ಅಲ್ಲಿನವರೊಂದಿಗೆ ತನ್ನ ಪರಿಸ್ಥಿತಿ ವಿವರಿಸಿದನಂತೆ. ಅಲ್ಲಿನವರಿಗೆ ಇವನ ಭಾಷೆ ಗೊತ್ತಾಯಿತೋ ಇಲ್ಲವೋ ತಿನ್ನಲು ಒಂದಿಷ್ಟು ಚಿತ್ರಾನ್ನ ನೀಡಿ ಸೀದಾ ಮೋರಿಯಲ್ಲಿ ಪಾತ್ರೆ ತೊಳೆಯಲು ಬಿಟ್ಟರಂತೆ. ಒಂದು ವಾರದಲ್ಲಿಯೇ ಈ ಕೆಲಸದ ಸಹವಾಸ ಸಾಕು ಅಂತ ತುಕ್ರನಿಗೆ ಅನಿಸಿತ್ತು. ಅಲ್ಲಿ ಪಾತ್ರೆಗಳು ತೊಳೆದಷ್ಟು ಮುಗಿಯುತ್ತಿರಲಿಲ್ಲ. ಮೋರಿಯಲ್ಲಿ ಕುಳಿತು ಕುಳಿತು ಮೈಕೈ ಹುಣ್ಣಾಗಿತ್ತು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಉಳಿದವರು ಇವನಿಗೆ ಅಲ್ಲಿಯ ಸ್ಥಿತಿ ಹೇಳಿದಾಗ ಭಯಗೊಂಡನಂತೆ.

ಈ ಮೋರಿಗೆ ಬಂದವರನ್ನು ಮತ್ತೆ ಮನೆಗೆ ಹೋಗಲು ಬಿಡುತ್ತಿರಲಿಲ್ಲವಂತೆ. ಕದ್ದುಮುಚ್ಚಿ ಕೆಲವರು ಓಡಿ ಹೋಗುತ್ತಾರಂತೆ. ಅವರಲ್ಲಿ ಒಬ್ಬ ಕಾಲು ತುಂಡಾದವನೊಬ್ಬ ಇದ್ದ. ಆತ ಒಮ್ಮೆ ಓಡಿ ಹೋದದ್ದಕ್ಕೆ ಹೋಟೆಲ್‌ನ ಕ್ರೂರಿಗಳು ಆತನ ಕಾಲನ್ನೇ ತುಂಡು ಮಾಡಿದರಂತೆ. ಹೋಟೆಲ್‌ನ ಓನರ್‌ ದೊಡ್ಡ ರೌಡಿಯಂತೆ..ಹೀಗೆ ಅಂತೆಕಂತೆಗಳನ್ನು ಕೇಳಿ ತುಕ್ರನಿಗೆ ಭಯವಾಯಿತು. ಎಷ್ಟು ಆರಾಮವಾಗಿ ಮನೆಯಲ್ಲಿದ್ದೆ. ಪಾಪ ಅವಳೊಂದಿಗೆ ಸುಮ್ಮನೆ ಜಗಳ ಮಾಡಿದ್ದು. ಅವಳು ಎಷ್ಟೇ ಬಯ್ದರೂ ಹೊಟ್ಟೆಗೆ ಒಂದು ತುತ್ತು ಕಮ್ಮಿ ಉನ್ನಲು ಬಿಡುತ್ತಿರಲಿಲ್ಲ. ಹೆಂಡತಿ ಮತ್ತು ಮಗನನ್ನು ನೆನಪಿಸಿಕೊಂಡು ತುಂಬಾ ದಿನ ಅಳುತ್ತಾ ಕುಳಿತುಕೊಳ್ಳುತ್ತಿದ್ದಾನಂತೆ. ಅದೊಂದು ದಿನ ಹೋಟೆಲ್‌ನ ಓನರ್‌ ಮತ್ತು ರೌಡಿಗಳು ಇಲ್ಲದ ದಿನ ತಿಳಿದಾಗ ‘ಬದುಕಿದರೆ ಬಿಕ್ಷೆ ಬೇಡಿ ಬದುಕಬಹುದು’ ಅಂತ ಜೀವ ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಓಡಿಬಂದನಂತೆ.

ಕಿಸೆಯಲ್ಲಿ ಒಂದು ರೂಪಾಯಿ ಇರಲಿಲ್ಲ. ಆಗ ಅವನಿಗೆ ಮಗ ಕೊಟ್ಟ ವಾಚ್‌ ನೆನಪಾಯಿತು. ತುಂಬಾ ಅಂಗಡಿಯವರಿಗೆ ತೋರಿಸಿದರೂ ಯಾರು ಖರೀದಿಸಲಿಲ್ಲವಂತೆ. ಮಾರ್ಗ ಸೈಡ್‌ನಲ್ಲಿದ್ದ ವಾಚ್‌ ಅಂಗಡಿಯವನೊಬ್ಬ ಕೊನೆಗೆ ಅದನ್ನು ಖರೀದಿಸಿ 100 ರೂಪಾಯಿ ನೀಡಿದನಂತೆ.

ಪುತ್ತೂರಿಗೆ ಹೋಗಲು ಬಸ್‌ ಟಿಕೇಟ್‌ಗೆ 300 ರೂಪಾಯಿ ಆಗುತ್ತದೆ ಅಂದಾಗ ಏನು ಮಾಡುವುದೆಂದು ಆತನಿಗೆ ತಿಳಿಯಲಿಲ್ಲ. ಓ ರೈಲ್‌ನಲ್ಲಿ 100 ರೂಪಾಯಿ ಅಲ್ವ ಅಂತ ನೆನಪಾಗಿ ಸೀದಾ ರೈಲು ಟಿಕೇಟ್‌ ಮಾಡಲು ನೋಡಿದ. ಆದರೆ ಪುತ್ತೂರಿಗೆ 103 ರೂಪಾಯಿ ಅಂತಗೊತ್ತಾಯಿತು. ಮೂರು ರೂಪಾಯಿ ಇಲ್ಲದೆ ಇದ್ದರಿಂದ ಸುಬ್ರಹ್ಮಣ್ಯಕ್ಕೆ ಟಿಕೇಟ್‌ ಮಾಡಿದ. ಸುಬ್ರಹ್ಮಣ್ಯದಲ್ಲಿ ಚಕ್ಕಿಂಗ್‌ನವರು ಹತ್ತಿದರಿಂದ ಅಲ್ಲಿ ಇಳಿದು ಇಲ್ಲಿವರೆಗೆ ನಡೆದುಕೊಂಡು ಬಂದನಂತೆ ತುಕ್ರ.
****
`ಪಾಸಾನಮೂರ್ತಿ ದೈವದ ದಯೆ. ಕೊನೆಗೂ ಜೀವಂತವಾಗಿ ಬಂದೆ’ ಅಂತ ತುಕ್ರಾ ಹೇಳಿ ನಿಟ್ಟುಸಿರು ಬಿಟ್ಟ.
****
ತಕ್ಷಣ ಏನೋ ನೆನಪಾದಂತೆ ಕಮಲ ಒಳಗೆ ಓಡಿ ದೇವರ ಕೋಣೆ ಪ್ರವೇಶಿಸಿ ದೇವರಿಗೆ ಕೈಮುಗಿದು ದೊಡ್ಡದಾಗಿ ಕುಂಕುಮದ ಬೊಟ್ಟು ಇಟ್ಟುಕೊಂಡರು.

ಪ್ರವೀಣ ಚಂದ್ರ ಪುತ್ತೂರು
ಪುಟ್ಟಕಥೆ: ಪ್ರೇಮದ ಹಕ್ಕಿ

ಪುಟ್ಟಕಥೆ: ಪ್ರೇಮದ ಹಕ್ಕಿ

ಹೂದೋಟದಲ್ಲಿದ್ದೆ. ಯಾವುದೋ ರೆಕ್ಕೆ ಬಡಿತದ ಸದ್ದು ಕೇಳಿ ಮೇಲ್ನೋಡಿದೆ. ಮುದ್ದಾದ ಹಕ್ಕಿ ನನ್ನನ್ನೇ ನೋಡುತ್ತಿತ್ತು. ಯಾವೂರ ಹಕ್ಕಿಯಿದು? ಎಲ್ಲಿಂದ ಬಂತು? ಸಣ್ಣದಾಗಿದ್ದರೂ ಚೂಟಿಯಾಗಿದೆಯಲ್ವ ಎಂದೆನಿಸಿತು. ನಾನೂ ಹಕ್ಕಿಯತ್ತ ನೋಡಿ ಕಣ್ ಮಿಟುಕಿಸಿದೆ. ಅದು ಗರಿಗೆದರಿ ಸ್ಮೈಲ್ ಕೊಟ್ಟಿತು.

ಪ್ರತಿದಿನ ಹೂದೋಟಕ್ಕೆ ಬರುತ್ತಿದ್ದೆ. ಆ ಹಕ್ಕಿ ನನಗೆ ಒಳ್ಳೆ ಕಂಪೆನಿ ಕೊಡುತ್ತಿತ್ತು. ಹೂದೋಟದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ನನ್ನ ಕಣ್ಣುಗಳನ್ನೇ ನೋಡುತ್ತಿತ್ತು. ಹಕ್ಕಿ ಚೆನ್ನಾಗಿರಬೇಕು ಎಂದು ಹೂದೋಟವನ್ನು ಹೆಚ್ಚು ಜತನದಿಂದ ನೋಡಿಕೊಳ್ಳತೊಡಗಿದೆ.

ಇತ್ತೀಚೆಗೆ ಹೂದೋಟದಲ್ಲಿ ಬಣ್ಣಬಣ್ಣದ ಹೂವುಗಳು ನಳನಳಿಸುತ್ತಿದ್ದವು. ಹಕ್ಕಿ ಕಾಲ್ಗುಣವಾಗಿರಬೇಕು. ದಿನಕಳೆದಂತೆ ಹಕ್ಕಿಯನ್ನು ನನ್ನ ಮನಸ್ಸು ಹೆಚ್ಚು ಹಚ್ಚಿಕೊಂಡಿತು. ಕುಂಚವಿಡಿದು ಹಕ್ಕಿ ಚಿತ್ರಬಿಡಿಸುತ್ತಿದೆ.

ಅಂದೊಂದು ದಿನ ಹಕ್ಕಿಗೆ ತಿಳಿಸಿದೆ. “ನೀ ಬಂದು ಇಷ್ಟು ದಿನವಾಯ್ತಲ್ಲ, ನನ್ನ ಹೂದೋಟದಲ್ಲೇ ಗೂಡು ಕಟ್ಟಿಬಿಡಬಾರದೇ?” ಎಂದೆ. ಹಕ್ಕಿಗದು ಅನಿರೀಕ್ಷಿತ. ಹಕ್ಕಿಗಳ ಮನಸ್ಸು ಅರಿಯೋದು ಕಷ್ಟ.

ನನ್ನ ಹೂದೋಟದಿಂದ ಹೊರಬಂದ ಹಕ್ಕಿ “ನಾನು ಈಗಾಗಲೇ ಬೇರೆಡೆ ಗೂಡು ಕಟ್ಟುತ್ತಿದ್ದೇನೆ” ಎಂದು ಹಾರಿಹೋಯಿತು. ಮತ್ತೆ ಬರಲೇ ಇಲ್ಲ.

ಮುದ್ದು ಹಕ್ಕಿಯೇ ಗೂಡು ಕಟ್ಟುವುದು ಬೇಡ. ಹಾಗೆ ಬಂದುಹೋಗಬಾರದೇ, ಹೂದೋಟದಲ್ಲಿ ಹೂಗಳು ಬಾಡಿಹೋಗಿವೆ. ನಾನು ಕಾಯುತ್ತಿದ್ದೇನೆ.
ಮಿನಿಕಥೆ: ಮುತ್ತಿನ ಉಂಗುರ

ಮಿನಿಕಥೆ: ಮುತ್ತಿನ ಉಂಗುರ

ಕ್ಲಾಸಿನಲ್ಲಿ ಅವಳೇ ಸುಂದರಿ. 4 ಕಾಲೇಜು ಹುಡುಗರು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದರು. ಆಕೆಗೂ ಒಬ್ಬ ಪ್ರಿಯಕರನ ಅವಶ್ಯಕತೆಯಿತ್ತು.

“ನನಗೆ ಮುತ್ತಿನ ಉಂಗುರ ತಂದುಕೊಡಿ. ನನಗೆ ಇಷ್ಟವಾದ ಉಂಗುರ ತರುವರನ್ನು ಪ್ರೀತಿಸ್ತಿನಿ”

ಆಕೆಯ ಬೇಡಿಕೆಗೆ ಮನಸ್ಸಲ್ಲೆ ನಕ್ಕು ಎಲ್ಲರೂ ಮನೆಗೆ ಹೋದರು. ಮರುದಿನ ಮೂವರು ತಾವು ತಂದ ಉಂಗುರಗಳನ್ನು ತೋರಿಸಿದರು.

ಒಬ್ಬ ವಜ್ರಖಚಿತ ಮುತ್ತಿನ ಉಂಗುರ ತಂದಿದ್ದ. ಮತ್ತೊಬ್ಬ ಆಕರ್ಷಕ ವಿನ್ಯಾಸದ ಮುತ್ತಿನ ಉಂಗುರ ತಂದುಕೊಂಡಿದ್ದ. ಮತ್ತೊಬ್ಬನೂ ಮುತ್ತಿನ ಉಂಗುರ ತಂದಿದ್ದ. ಮೊದಲ ನೋಟಕ್ಕೆ ಎಲ್ಲವೂ ದುಬಾರಿ ಬೆಲೆಯ ಉಂಗುರ ಎಂದು ಗೊತ್ತಾಗುತ್ತಿತ್ತು.

ಆಕೆ ಯಾವುದನ್ನು ಪಡೆದುಕೊಳ್ಳಲಿಲ್ಲ.

ನಾಲ್ಕನೆಯವ ಬಂದ.
ಅವನ ಮೇಲೆ ಅವಳಿಗೆ ಏನೋ ಭರವಸೆ ಇತ್ತು. ಉಂಗುರ ತೋರಿಸು ಎಂದಳು.

ನಾನು ಹೊಸ ಉಂಗುರ ಖರೀದಿಸಿಲ್ಲ ಅಂದ.

“ಓಹ್ ಅಷ್ಟೇನಾ ನಿನ್ನ ಪ್ರೀತಿ” ಅವಳು ಕೇಳಿದಳು. ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕೆ ಎಂಬ ಭೀತಿಯೂ ಅವಳಲ್ಲಿತ್ತು.

“ನನ್ನ ಅಪ್ಪ ಕೊಟ್ಟ ದುಡ್ಡಿನಲ್ಲಿ ನನ್ನ ಪ್ರೀತಿಗೆ ಉಂಗುರ ತೊಡಿಸೋದು ನನಗೆ ಇಷ್ಟವಿಲ್ಲ” ಅವನು ಸ್ವಾಭಿಮಾನದ ಮಾತನಾಡಿದ.

ಸರಿ ಹಾಗಾದರೆ ನಿನ್ನ ಸ್ವಂತ ದುಡ್ಡಿನಿಂದ ತಂದ ಉಂಗುರ ಕೊಡು.

ಆತ ತನ್ನ ಕೈನಲ್ಲಿದ್ದ ಉಂಗುರ ಬಿಚ್ಚಿ ಹೇಳಿದ.

“ತೆಗೆದುಕೋ ಇದು ನಾನು ರಜೆಯಲ್ಲಿ ದುಡಿದ ಹಣದಲ್ಲಿ ಖರೀದಿಸಿದ ಉಂಗುರ”

ಅವಳು ಉಂಗುರ ಕೈನಲ್ಲಿಡಿದು ಆ ಕಡೆ ಈ ಕಡೆ ತಿರುಗಿಸಿ ನೋಡಿ ಕೇಳಿದಳು

ಇದರಲ್ಲಿ ಮುತ್ತಿಲ್ಲ ಅವಳು ಮುಗ್ಧವಾಗಿ ಕೇಳಿ ಬಾಯಿಮುಚ್ಚಿಸುವಷ್ಟರಲ್ಲಿ

ಅವನಿಗೆ ಮುತ್ತುಕೊಟ್ಟಾಗಿತ್ತು.

ಅವಳ ಕಣ್ಣಲ್ಲಿ ಸಾವಿರ ಮುತ್ತುಗಳು ಮಿಣುಗುತ್ತಿದ್ದವು.
ಪ್ರಭಾ

ಪ್ರಭಾ

ಪ್ರಭಾ…

`ಎಲ್ಲಿಗೆ ಮೇಡಂ` ಕಂಡೆಕ್ಟರ್‌ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್‌ ನೀಡಿದ ಚಿಲ್ಲರೆಯನ್ನು ಪರ್ಸ್‌ಗೆ ತುಂಬಿಕೊಂಡವಳ ಮನಸ್ಸು ಚಡಪಡಿಸುತ್ತಿತ್ತು. ನಾನು ಕೆಲಸ ಬಿಟ್ಟು ಬಂದೆ ಅಂದರೆ ಅಮ್ಮ ಏನು ಹೇಳಬಹುದು. ಅಪ್ಪನ ಮುಖ ಸಪ್ಪೆಯಾಗಬಹುದಾ? ಎರಡು ವರ್ಷದ ಹಿಂದೆ ಎಷ್ಟು ಆರಾಮವಾಗಿದ್ದೆ. ಯಾರಿಗೆ ಬೇಕು ಬೆಂಗಳೂರು ಥೂ!

***

ಅವಳು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, ಅನುಭವ ಎಲ್ಲವೂ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚೇ ಸಿಕ್ಕಿದೆ. ಓದಿದ್ದು ಎಂಸಿಎ. ಕ್ಯಾಂಪಸ್‌ನಲ್ಲಿಯೇ ಪ್ರತಿಷ್ಠಿತ ಕಂಪನಿಗೆ ಸೆಲೆಕ್ಟ್‌ ಆಗಿದ್ದಳು. ತಿಂಗಳಿಗೆ ಹತ್ತುವರೆ ಸಾವಿರ ರೂ. ಸಂಬಳ ಇತ್ತು. ಸುಮ್ಮನೆ ಯಾಕೆ ಮನೆಯಲ್ಲಿ ಟೈಂವೇಸ್ಟ್‌ ಮಾಡುವುದು ಅಂತಲೂ ಅನಿಸಿತ್ತು. ಇವಳ್ಯಾಕೆ ಬೆಂಗಳೂರಿಗೆ ಹೋಗಬೇಕು ಅಂತಾ ಅಮ್ಮ ತಡೆದರೂ ಅನುಭವ ಆಗಲಿ ಅಂತ ಅಪ್ಪ ಓಕೆ ಎಂದಿದ್ದರು.

***

ಊರಿನಲ್ಲಿ ಓದು, ಭರತನಾಟ್ಯ, ಕ್ರೀಡೆ ಎಲ್ಲದರಲ್ಲೂ ಅವಳೇ ಫಸ್ಟ್‌. ಊರಿನವರಿಗಂತೂ ಪ್ರಭಾ ಎಂದರೆ ಅಚ್ಚುಮೆಚ್ಚು. ತುಂಬಾ ಮುಗ್ಧ ಹುಡುಗಿ. ಮೊದಲ ಸಲ ಬೆಂಗಳೂರಿನ ಬಸ್‌ ಏರಿದಾಗ ನೆರೆಮನೆಯ ಯಮುನಕ್ಕನ ಕಣ್ಣ ತುಂಬಾ ನೀರು. ಗೆಳತಿಯರಾದ ಸವಿತ, ರೇಖಾ, ಕವಿತ ಇವರೆಲ್ಲರ ಮುಖ ಕೂಡ ನೋಡುವಂತಿರಲ್ಲಿಲ್ಲ. ಊರಲ್ಲೇ ಟ್ರೈಮಾಡಿದ್ದರೆ ಟೀಚಿಂಗ್‌ ಕೆಲಸ ಸಿಗುತ್ತಿತ್ತು. ಇವಳಿಗೆ ಮನಸ್ಸಿರಲ್ಲಿಲ್ಲ. ಹಾಗಂತ ಇಷ್ಟು ಓದಿದ ತಪ್ಪಿಗೆ ಊರಲ್ಲಿ ಇರುವಂತಿಲ್ಲ. ಸ್ನಾತಕೋತ್ತರ ಪದವಿಗಾಗಿ ಬ್ಯಾಂಕ್‌ನಿಂದ ಸಾಲ ಬೇರೆ ಮಾಡಿಯಾಗಿದೆ. ಅನಿವಾರ್ಯವಾಗಿ ಮುಗ್ಧ ಮುಖದಲ್ಲಿ ದುಗುಡ ತುಂಬಿಕೊಂಡು ಬೆಂಗಳೂರು ಬಸ್ಸು ಹತ್ತಿದ್ದಳು. ಗೊತ್ತು ಗುರಿ ಇಲ್ಲದ ಊರಲ್ಲಿ ಒಬ್ಬಳೇ ಏನು ಮಾಡುವುದು. ಅದಕ್ಕೆ ಅಮ್ಮನೇ ಪರಿಹಾರ ನೀಡಿದ್ದಳು.  ಅಮ್ಮನ ದೂರದ ಸಂಬಂಧಿ ನಿಶಾಂತ್‌ ಬೆಂಗಳೂರಿನಲ್ಲಿದ್ದ. ಅವನೇ ಇವಳನ್ನು ಯಾವುದಾದರೂ ಲೇಡಿಸ್‌ ಹಾಸ್ಟೇಲ್‌ಗೆ ಸೇರಿಸುವ ಭರವಸೆ ನೀಡಿದ್ದ. ಇವಳಿಗಿಂತ ಒಂದು ವರ್ಷ ದೊಡ್ಡವ. ಬಾಲ್ಯದಲ್ಲಿ ಒಂದೆರಡು ಬಾರಿ ಅವನ ಮನೆಗೆ ಹೋಗಿ ಅವನೊಂದಿಗೆ ಆಟವಾಡಿದ ನೆನಪೂ ಅವಳಿಗಿದೆ. ಎಂಬಿಎ ಮುಗಿಸಿ ಕೈತುಂಬಾ ಸಂಪಾದಿಸುತ್ತಿದ್ದ.

***

ಅವಳು ಮೊದಲನೇ ದಿನವೇ ಬೆಂಗಳೂರನ್ನು ಬೆರಗುಗಣ್ಣಿನಿಂದಲೇ ನೋಡಿದಳು. ಇಲ್ಲಿನ ಗಿಜಿಗುಟ್ಟುವ ಜನ, ಟ್ರಾಫಿಕ್‌, ಆಧುನಿಕತೆ, ಅಪರಿಚಿತತೆ ಎಲ್ಲವೂ ಅವಳಲ್ಲಿ ಅವ್ಯಕ್ತ ನೋವು ಉಂಟು ಮಾಡಿದ್ದು ಸುಳ್ಳಲ್ಲ. ಬಸ್‌ಸ್ಟಾಂಡ್‌ನಲ್ಲಿ ನಿಶಾಂತ ಕಾಯುತ್ತಿದ್ದ. ಅವನ ಬೈಕ್‌ನಲ್ಲಿ ಸೀದಾ ಆತನ ಮನೆಗೆ ಕರೆದುಕೊಂಡು ಹೋದ. ಇವನು ರೂಂಗೆ ಕರೆದುಕೊಂಡು ಬಂದದ್ದನ್ನು ನೋಡಿ ಭಯದಿಂದ ನೋಡಿದವಳಿಗೆ ‘ಇವತ್ತು ಸಂಜೆ ತನಕ ಇಲ್ಲೇ ಇರು. ನನ್ನ ಆಫೀಸ್‌ನಲ್ಲಿರುವ ಮೇಡಂಗಳಲ್ಲಿ ವಿಚಾರಿಸಿ ಒಳ್ಳೆಯ ಹಾಸ್ಟೇಲ್‌ಗೆ ಸೇರಿಸ್ತಿನಿ’ ಅಂದ. ಬಕೆಟ್‌ನಲ್ಲಿ ಕ್ವಾಯಿಲ್‌ ಹಾಕಿ ಬಂದು ಯಾರ್ಯಾರಿಗೋ ಫೋನ್‌ ಮಾಡಿದ. ನೀರು ಬಿಸಿಯಾಗಿದೆ ಸ್ನಾನ ಮಾಡಿ ಬಾ ಅಂತ ಟವಲ್‌ ಕೊಟ್ಟು ಕಳುಹಿಸಿದ. ಇವಳು ಸ್ನಾನ ಮಾಡಿಬಂದಾಗ ಅವನು ಉಪ್ಪಿಟ್ಟು ರೆಡಿ ಮಾಡಿಟ್ಟಿದ್ದ. ಉಪ್ಪಿಟ್ಟು ರುಚಿಯಾಗಿತ್ತು. 10 ಗಂಟೆಯಾಗುತ್ತಿದ್ದಂತೆ ಅವನು ಆಫೀಸ್‌ಗೆ ಸಿದ್ದನಾಗಿ ಮನೆಯ ಕೀಯನ್ನು ಅವಳಲ್ಲಿ ನೀಡಿ. ಬೋರಾದರೆ ಕಂಪ್ಯೂಟರ್‌ ಆನ್‌ ಮಾಡು. ಮದ್ಯಾಹ್ನ ಊಟಕ್ಕೆ ಹೊರಗಡೆ ಹೋಗು ಎಂದಾಗ ಇವಳು ಉಳಿದಿರುವ ಅಷ್ಟು ಉಪ್ಪಿಟ್ಟನ್ನು ನೋಡಿ ಬೇಡಾ ಇದನ್ನೇ ತಿನ್ತಿನಿ ಅಂದಳು. ಅವನು ಮುಗುಳ್ನಗುತ್ತ ಹೊರಗೆ ಹೋದ. ಮನೆಯವರೊಂದಿಗೆ ಫೋನ್‌ ಮಾಡಿ ತುಂಬಾ ಮಾತನಾಡಿ ಬೆಂಗಳೂರನ್ನು ವಿವರಿಸತೊಡಗಿದಳು. ಕಂಪ್ಯೂಟರ್‌ನಲ್ಲಿದ್ದ ಹಾಡುಗಳನ್ನು ಕೇಳತೊಡಗಿದಳು. ನಿಶಾಂತ ಒಳ್ಳೆ ಹುಡುಗ ಅಂತ ಅವಳಿಗೆ ಅನಿಸಿತು. ರೂಮ್‌ನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾನೆ. ಟೆಲಿವಿಷನ್‌ ಮಾತ್ರ ಇಲ್ಲ. ಕಂಪ್ಯೂಟರ್‌, ಗೋಡೆಯಲ್ಲಿನ ಚಿತ್ರಗಳು ಎಲ್ಲವೂ ಅವಳಿಗೆ ಇಷ್ಟವಾದವು.

ಮನೆಯವರ ನೆನಪು ಕಾಡತೊಡಗಿದಾಗ ಫೋನ್‌ ಮಾಡಿದಳು. ಎಲ್ಲರ ಪ್ರೀತಿಯ ಮಾತುಗಳನ್ನು ಕೇಳಿದಾಗ ಊರಲ್ಲೇ ಇದ್ದರೆ ಎಷ್ಟು ಒಳ್ಳೆಯದ್ದಿತ್ತು ಅಂತ ಅವಳಿಗೆ ಅನಿಸಿತು. ಹಾಡು ಕೇಳಿ ಬೋರಾಯಿತು. ಅದರಲ್ಲಿ ಇಂಗ್ಲಿಷ್‌ ಸಿನಿಮಾಗಳೇ ತುಂಬಿಕೊಂಡಿದ್ದವು. ಹೆಸರಿಲ್ಲದ ಒಂದು ಫೈಲ್‌ನ್ನೂ ಆನ್‌ ಮಾಡಿದಾಗ ತಬ್ಬಿಬ್ಬಾದಳು. ಅದರಲ್ಲಿ ಬ್ಲೂಫಿಲ್ಮ್‌ಗಳ ದೊಡ್ಡ ರಾಶಿಯೇ ತುಂಬಿಕೊಂಡಿತ್ತು. ನೋಡುವ ಕುತೂಹಳವಾದರೂ ಕ್ಲೋಸ್‌ ಮಾಡಿದಳು. ಥೂ ಈ ನಿಶಾಂತನೂ ಇಂತವನೇ. ಊರಿನಲ್ಲಿ ಎಷ್ಟು ಒಳ್ಳೆಯ ಹುಡುಗನಾಗಿದ್ದ ಅಂತ ಅಂದುಕೊಂಡಳು.

***

ಸಂಜೆ ಬಂದ ನಿಶಾಂತ ಇವಳನ್ನು ಯಾವುದೋ ಹಾಸ್ಟೇಲ್‌ಗೆ ಕರೆದೊಯ್ದ. ಹಾಸ್ಟೇಲ್‌ನ ಪುಟ್ಟ ಕೋಣೆಯಲ್ಲಿ ಕುಳಿತಾಗ ಊರು, ಗೆಳೆಯ ಗೆಳತಿಯರು, ಕಾಡು, ನಾಯಿ ಬೆಕ್ಕು ದನ ಕರುಗಳೂ ಎಲ್ಲವೂ ನೆನಪಾಯಿತು. ರಾತ್ರಿಯಾದಗ ಇವಳಿದ್ದ ರೂಮ್‌ಗೆ ಮತ್ತೊಬ್ಬಳು ಬಂದಳು. ಐಟಿ ಕಂಪನಿಯಲ್ಲಿ ಕೆಲಸವಂತೆ ಇವಳ ಮುಗ್ಧಮುಖವನ್ನು ಒಂದು ತರಹಾ ನೋಡಿ ಹಾಯ್‌ ಐಹ್ಯಾಮ್‌ ನಮ್ರತಾ ಅಂತಾ ಕೈಕೊಟ್ಟಳು. ಸ್ವಲ್ಪಹೊತ್ತಾದರೂ ಅವಳು ಕೈ ಬಿಡಿಸದೇ ಇದ್ದಾಗ ಇವಳೇ ಬಿಡಿಸಿಕೊಂಡು ಐ ಏಮ್‌ ಪ್ರ..ಭಾ ಅಂತಾ ಉಗುಳು ನುಂಗುತ್ತ ಹೇಳಿದ್ದಳು. ಅವಳು ಒಂದಿಷ್ಟು ತೂರಾಡುವುದನ್ನು ನೋಡಿದಾಗ ಇವಳು ಕುಡಿದಿರುವುದು ಪ್ರಭಾಳಿಗೆ ಖಾತ್ರಿಯಾಗಿ ನಗರದ ಬಗೆಗಿನ ತಿರಸ್ಕಾರ ಮತ್ತಷ್ಟು ಹೆಚ್ಚಾಯಿತು. ತಿರಸ್ಕಾರದೊಂದಿಗೆ ನಗರದ ಕುರಿತು ಅಸಹ್ಯ ಮೂಡಿದ್ದು ರಾತ್ರಿ ಮಲಗಿದಾಗ ನಮ್ರತಾ ಇವಳ ಎದೆಗೆ ಕೈ ಹಾಕಿದಾಗ! ಪ್ರಭಾ ಭಯದಿಂದ ಮೂಲೆಯಲ್ಲಿ ಹೋಗಿ ಕುಳಿತುಕೊಂಡಳು. ಏನೋ ಗೊಣಗುತ್ತಿದ್ದ ಅವಳು ನಿದ್ದೆ ಹೋದದ್ದನ್ನು ಖಾತ್ರಿ ಪಡಿಸಿಕೊಂಡ ನಂತರ ಬೆಡ್‌ನ ಮೂಲೆಯಲ್ಲಿ ಮುದುಡಿಕೊಂಡಳು. ಎಲ್ಲಿಯ ನಿದ್ದೆ!

ಮುಂಜಾನೆ ಎದ್ದವಳೇ ನಿಶಾಂತನಿಗೆ ಫೋನ್‌ ಮಾಡಿ ಬಡಬಡಿಸಿದಳು. ಅವನು ಹಾಸ್ಟೇಲ್‌ನ ಓನರ್‌ಗೆ ಫೋನ್‌ ಮಾಡಿ ಬೇರೆ ರೂಂಗೆ ಶಿಫ್ಟ್‌ ಮಾಡಿಸಿದ.

**

ಮರುದಿನ ಆಫೀಸ್‌ಗೆ ಹೋಗಿ ಬಂದಳು. ಹೀಗೆ ಹಾಸ್ಟೇಲ್‌, ಆಫೀಸ್‌ ಅಂತ ದಿನಗಳುರಿದವು. ಹಣದ ರುಚಿಯೂ ಹಿಡಿಯಿತು. ಹಣ ನೀರಿನಂತೆ ಖರ್ಚಾಗುವುದನ್ನು ಕಂಡು ಬೆಚ್ಚಿದಳು. ಒಂದು ಸಾರಿ ಬಸ್‌ನಲ್ಲಿ ಇವಳ ಪರ್ಸ್‌ ಕಳುವಾಗಿ ಒಂದೆರಡು ಸಾವಿರ ಕಳೆದುಕೊಂಡಿದ್ದಳು.

ಒಂದು ಸಾರಿ ಇವಳಿಗೆ ಜ್ವರ ಬಂದಾಗ ರೂಂನಲ್ಲಿ ಗೀತಾ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅವಳಿಗೆ ಟೈಫಾಯಿಡ್‌ ಜ್ವರ ಬಂದ ಕಾರಣ ಕುಡಿಯುವ ನೀರು, ಸೇವಿಸುವ ಆಹಾರದ ಕುರಿತು ಎಚ್ಚರದಿರುವಂತೆ ಡಾಕ್ಟರ್‌ ಹೇಳಿದ್ದರು. ಮನೆಗೆ ಫೋನ್‌ ಮಾಡಿದಾಗ ಎಲ್ಲರೂ ಮನೆಗೆ ಬರಲು ಹೇಳಿದ್ದರು. ಆದರೆ ಪ್ರಯಾಣ ಮಾಡುವಷ್ಟು ತ್ರಾಸ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ. ಮೊದಲ ಒಂದು ದಿನ ಅವಳನ್ನು ನೋಡಿಕೊಳ್ಳುವರಿಲ್ಲದರಿಂದ ನಿಶಾಂತನೇ ಆಫೀಸ್‌ಗೆ ರಜೆ ಮಾಡಿ ಆಸ್ಪತ್ರೆಯಲ್ಲಿ ಉಳಿದಿದ್ದ.

ಅವನು ಅವಳನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ. ಆದರೆ ಅವಳ ಬಗ್ಗೆ ಕಾಮಕ್ಕಿಂತ ಮಮತೆಯೇ ಇವನಿಗೆ ಉಕ್ಕಿ ಬರುತ್ತಿತ್ತು. ಮುಖಕ್ಕೆ ಬಿದ್ದ ಕೂದಲನ್ನು ಹಿಂದಕ್ಕೆ ಸರಿಸಿ ತಲೆ ನೇವರಿಸುವ ಬಯಕೆಯೂ ಆಗುತ್ತಿತ್ತು.

ರಾತ್ರಿ ಇವಳ ನರಳಿಕೆ ಕೇಳಿ ಬಂದರೆ ಹಣೆ ಮುಟ್ಟಿ ನೋಡಿ ಹಣೆಗೆ ಒದ್ದೆ ಬಟ್ಟೆಯಿಡುತ್ತಿದ್ದ. ಅವನ ಆರೈಕೆಯ ಫಲವೋ ಅವಳು ಬೇಗ ಗುಣಗೊಂಡು ಹಾಸ್ಟೇಲ್‌ಗೆ ಮರಳಿದಳು.

***

ರೂಂಗೆ ಮರಳಿದವಳಿಗೆ ನಿಶಾಂತ ತೋರಿದ ಕಾಳಜಿಯದ್ದೇ ನೆನಪಾಗಿ ಎದೆ ತುಂಬಿ ಬಂತು. ಎಷ್ಟು ಒಳ್ಳೆಯವನು. ಅಂತ ನೂರಾರು ಸಾರಿ ಅಂದುಕೊಂಡಳು. ಸುಮ್ಮನೆ ಇವನ ಬಗ್ಗೆ ತಪ್ಪಾಗಿ ತಿಳಿದುಕೊಂಡೆ ಅಂತ ಅಂದುಕೊಂಡಳು. ಅವನ ನೆನಪು ಅವಳಿಗೆ ಇಷ್ಟವಾಗತೊಡಗಿತ್ತು. ಥಕ್‌ ಅವನಿಗೆ ನನ್ನ ಬಗ್ಗೆ ಯಾವ ಭಾವನೆ ಇದೆಯೋ ಸುಮ್ಮನೆ ದೂರಾಗುವುದು ಬೇಡಾ ಅಂತ ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಟುಕೊಂಡಳು.

ಅವನಿಗೂ ಅಷ್ಟೇ. ಅವಳೊಂದಿಗಿನ ಒಂದೆರಡು ದಿನದ ಸಾಮೀಪ್ಯ ಇಷ್ಟವಾಗಿತ್ತು. ಇವಳೊಂದಿಗೆ ಜೀವನ ಪೂರ್ತಿ ಕಳೆವ ಬದುಕ ನನ್ನದಾಗಿರಬಾರದೇ ಅಂತ ಮನ ಹಂಬಲಿಸಿತು.

**

ದಿನಗಳು ಕಳೆದವು.

ಆರ್ಥಿಕ ಬಿಕ್ಕಟ್ಟು ನಿಶಾಂತನ ಕಂಪನಿಗೂ ತಟ್ಟಿತು. ಪಿಂಕ್‌ಸ್ಲಿಪ್‌ ಇವನಿಗೂ ದೊರಕಿತು. ಮತ್ತೆ ಬೇರೆ ಕೆಲಸ ಹುಡುಕುವ ಗೋಜಿಗೆ ಹೋಗಲ್ಲಿಲ್ಲ. ಊರಿಗೆ ಮರಳಿದ ನಿಶಾಂತ್‌ ಸೈಬರ್‌ ಕೆಫೆಯೊಂದನ್ನು ಆರಂಭಿಸಿದ. ಇವಳು ಒಬ್ಬಂಟಿಯಾದಳು. ಇವಳನ್ನೂ ಊರಿಗೆ ಬರಲು ಒತ್ತಾಯ ಮಾಡುತ್ತಿದ್ದ. ಸೈಬರ್‌ನ ಹಿಂದಿನ ಖಾಲಿ ಜಾಗದಲ್ಲಿ ಟ್ಯುಟೋರಿಯಲ್‌ ಮಾಡುವಂತೆ ಹೇಳಿ ನಾನು ನೆರವಾಗುವುದಾಗಿ ಹೇಳುತ್ತಿದ್ದ. ಇವಳಲ್ಲಿ ಹೊಸ ಕನಸು ಕಟ್ಟ ತೊಡಗಿದ.

***

ಆಫೀಸ್‌ನಲ್ಲಿ ಬಾಸ್‌ ಸುಮ್ಮಗೆ ಕಿರಿಕಿರಿ ಮಾಡಿದಾಗ ಯಾಕೋ ನಗರದ ಸಹವಾಸವೇ ಬೇಡ ಅನಿಸಿ ಅಳು ಬಂದುಬಿಟ್ಟಿತ್ತು. ಬಿಕ್ಕಟ್ಟಿನಿಂದ ಮೊದಲ ವರ್ಷದ ಇನ್‌ಕ್ರಿಮೆಂಟ್‌ ಕೂಡ ಇಲ್ಲ. ನೆಮ್ಮದಿ ಅಂತು ಇಲ್ಲವೇ ಇಲ್ಲ. ದುಡ್ಡು ಕೊಡೋ ತೃಪ್ತಿಗಿಂತ ಬದುಕಿನ ನೆಮ್ಮದಿಯೇ ಮುಖ್ಯ ಅಂತ ಅನಿಸತೊಡಗಿತ್ತು. ಮತ್ತೆ ಊರು ನೆನಪಾಗತೊಡಗಿತು. ದನ ಕರು, ನಾಯಿ ಬೆಕ್ಕು, ಹೂವಿನ ಗಿಡಗಳು ಮತ್ತೆ ಕಾಡತೊಡಗಿದವು. ಗೆಳತಿಯ ಕೈ ಹಿಡಿದು ಬೆಟ್ಟ ಹತ್ತಬೇಕು. ತಂಗಿಯ ಜುಟ್ಟು ಹಿಡಿದು ಓದಿಸಬೇಕು. ತೋಡಲ್ಲಿ ಹೋಗಿ ಸುಮ್ಮನೆ ಏಡಿ ಹಿಡಿಯಬೇಕು.. ಇಂಥ ಕನಸುಗಳು ಇಷ್ಟವಾಗತೊಡಗಿದವು. ಊರಿನ ನೆನಪಿನ ಪುಳಕದಲ್ಲಿಯೇ ಇಂದು ಅಂತಿನ ನಿರ್ಧಾರ ಮಾಡಿ ಊರಿನ ಬಸ್‌ ಹತ್ತಿದ್ದಳು.

****

ಮತ್ತೆ ಊರಿಗೆ ಬಂದಾಗ ಮನಸ್ಸಿಗೆ ಏನೋ ನೆಮ್ಮದಿ. ಪ್ರತಿ ಗಿಡಮರಗಳನ್ನೂ ಹೊಸತು ಎಂಬಂತೆ ನೋಡಿದಳು. ಗೆಳತಿಯರು ಇವಳು ವಾಪಸ್‌ ಬಂದದ್ದನ್ನು ನೋಡಿ ಖುಷಿಗೊಂಡರು. ಮನೆಯವರು ಪ್ರೀತಿಯಿಂದ ಸ್ವಾಗತಿದರು. ನಿಶಾಂತನೂ ಫೋನ್‌ ಮಾಡಿ ಮಾತನಾಡಿದ.

***

ನಗರದಲ್ಲಿ ಕಳೆದ ಬದುಕು ಮತ್ತೆ ಊರಿಗೆ ಹೊಂದಿಕೊಳ್ಳಲು ಒಂದಿಷ್ಟು ತಡವರಿಸಿತು. ಟ್ರಾಫಿಕ್‌ ಕಿರಿಕಿರಿ ಇಲ್ಲದ ಕಿವಿ ಗುಂಯಿಗುಡುತ್ತಿತ್ತು. ಒಂದೆರಡು ವಾರ ಕಳೆದಿರಬಹುದು. ನಾಳೆ ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಅಂತ ಅಮ್ಮ ಹೇಳಿದಾಗ ಬೆಚ್ಚಿದಳು. ಒಳ್ಳೆ ಆಸ್ತಿ ಇರೋರು ಕಣೇ. ಒಬ್ಬನೇ ಮಗ ಒಪ್ಪಿಕೋ ಮತ್ತೆ ನಮಗೆ ಹುಡುಕಲು ಆಗುವುದಿಲ್ಲ. ಅಂತ ಅಪ್ಪ ಜೋರು ಮಾಡಿದಾಗ ಥೂ ನಗರದಲ್ಲಿಯೇ ಇದ್ರೆ ಆಗ್ತಾ ಇತ್ತು ಅಂತ ಅವಳಿಗೆ ಅನಿಸಿತು. ನಾಳೆ ಬರುವ ಹುಡುಗ ಇಷ್ಟವಾಗಿಲ್ಲ ಅಂತ ಹೇಳಬೇಕೆಂದು ಇವತ್ತೇ ತೀರ್ಮಾನ ಮಾಡಿಕೊಂಡಳು.

***

ನನ್ನ ಬಗ್ಗೆ ಈ ನಿಶಾಂತ್‌ಗೆ ಏನು ಭಾವನೆ ಇದೆ ಅಂತ ತಿಳಿದುಕೊಳ್ಳಬೇಕು ಅಂತ ಅವನಿಗೆ ಫೋನ್‌ ಮಾಡಿದಳು. ಪರಿಸ್ಥಿತಿ ಹೀಗಿದೆ ಅಂದಾಗ ಅವನು ನಗುತ್ತಾ ಹೇಳಿದ `ನಾಳೆ ನಿನ್ನನ್ನು ನೋಡಲು ಬಂದವರನ್ನು ಒಪ್ಪಿಕೋ. ಏನಾಗುವುದಿಲ್ಲ’ ಅಂತ ಹೇಳಿ ಫೋನ್‌ ಇಟ್ಟ. ಛೇ ಇವನಿಗೂ ನನ್ನ ಭಾವನೆ ಅರ್ಥವಾಗುತ್ತಿಲ್ವ. ಅಂತ ಬೇಜಾರಾಗಿ ಫೋನ್‌ ಕುಕ್ಕಿದಳು.

***

ಮರುದಿನ 11 ಗಂಟೆಗೆ ಸರಿಯಾಗಿ ಗಂಡಿನ ಕಡೆಯವರು ಬಂದರು. ಜ್ಯೂಸ್‌ ತೆಗೆದುಕೊಂಡು ಹೋಗು ಅಂತ ಅಮ್ಮ ಹೇಳಿದಾಗ ತಲೆತಗ್ಗಿಸಿ ಹೋದವಳು ಒಮ್ಮೆಗೆ ತಲೆಯೆತ್ತಿ ನೋಡಿದಳು. ನೋಡಲು ಬಂದ ಹುಡುಗ ನಿಶಾಂತನಾಗಿದ್ದ.

(ಕಥೆ ದಾರಾವಾಹಿಯಾಗುವ ಲಕ್ಷಣ ಕಂಡು ಬಂದಿರುವುದರಿಂದ ಇಲ್ಲಿಗೆ ನಿಲ್ಲಿಸಲಾಗಿದೆ. ಧನ್ಯವಾದಗಳು- ಪ್ರವೀಣ ಚಂದ್ರ)
ಹನಿಕಥೆ: ಕೂಗು

ಹನಿಕಥೆ: ಕೂಗು

“ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು.

ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು ಮೆಲ್ಲಗೆ ಗಂಡಿನ ಮುಖ ನೋಡಿದಳು. “ತುಂಬಾ ಮುಗ್ದನಂತೆ ಕಾಣುತ್ತಾನೆ, ಎಲ್ಲಾ ಮರೆತು ಇವನ್ನೊಂದಿಗೆ ಚೆನ್ನಾಗಿ ಬಾಳಬೇಕು” ಎಂದುಕೊಂಡಳು. ಆಗ “ಅಮ್ಮಾ” ಎಂದು ಯಾರೋ ಕರೆದಂತಾಯಿತು. ಸುತ್ತಮುತ್ತ ನೋಡಿದಳು. ಯಾವುದೇ ಮಗು ಇರಲಿಲ್ಲ.

ಮತ್ತೊಮ್ಮೆ ಮಗದೊಮ್ಮೆ ಅದೇ ಧ್ವನಿ “ಅಮ್ಮಾ.. ಅಮ್ಮಾ…”. ಇದೇನು ಭ್ರಾಂತಿ ಅಂದುಕೊಂಡವಳ ಹೊಟ್ಟೆಯೊಳಗೆ ಯಾರೋ ಒದ್ದಾಂತಾಯಿತು. ಅಮ್ಮಾ..

—————

“ಪ್ರೇಮತಾಣ” ಹನಿಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಹೆಮ್ಮೆ ಈ ಪುಟ್ಟ ಕಥೆಗೆ. ಜನಪ್ರಿಯ ಕಥೆಗಾರ ಪ್ರೇಮಶೇಖರ ಈ ಕಥೆಗೆ ಬಹುಮಾನ ನೀಡಿ ವಿಮರ್ಶಿಸಿದ್ದು ಹೀಗೆ. “ಪ್ರವೀಣ ಚಂದ್ರ ಅವರ “ಕೂಗು” ಸಹಾ ಒಂದು ಒಳ್ಳೆಯ ಪ್ರಯತ್ನ.


ತನಗೆ ಮೋಸ ಮಾಡಿದವನ ಬಗ್ಗೆಅತೀವ ತಿರಸ್ಕಾರ ಕುದಿಯುತ್ತಿರುವಾಗಲೇ ತಾನೇ ಮತ್ತೊಬ್ಬನಿಗೆ ಮೋಸ ಮಾಡಹೊರಟಿರುವ ಸತ್ಯಕಥಾನಾಯಕಿಯ ಅರಿವಿಗೆ ನಿಲುಕುತ್ತದೆ.


ಇದು ಕಥಾನಾಕಿಯನ್ನಷ್ಟೇ ಅಲ್ಲ, ಓದುಗರನ್ನೂ ಬೆಚ್ಚಿಸುತ್ತದೆ.”


ಜನಪ್ರಿಯ ಕಥೆಗಾರರೊಬ್ಬರು ಬೆನ್ನುತಟ್ಟಿದಾಗ ಆಗುವ ಖುಷಿಯ ಅನುಭವ ಅನನ್ಯ ನಾನು ಪುಳಕಗೊಂಡೆ🙂
ಅಜ್ಜ ಹೇಳಿದ ಲವ್ ಸ್ಟೋರಿ

ಅಜ್ಜ ಹೇಳಿದ ಲವ್ ಸ್ಟೋರಿ

"ಈ ಗುಲಾಬಿಗೆ ಎಷ್ಟು?" ಹರೆಯದ ಯುವಕನೊಬ್ಬ ಕೇಳುತ್ತಿದ್ದ. "30 ರೂಪಾಯಿ" ಹೂ ಮಾರುವ ಹೆಂಗಸಿನ ಮಾರುತ್ತರ. "ಜಾಸ್ತಿಯಾಯಿತು" ಹುಡುಗ ಅಸಹನೆಯ ಮುಖ ಮಾಡಿದ. "ಇವತ್ತು ಇದಕ್ಕಿಂತ ಕಡಿಮೆಗೆ ಎಲ್ಲೂ ಸಿಗೋಲ್ಲ, ತಗೋ" ಎಂದು ಪಕೆಳೆಗಳಲ್ಲಿ ನೀರಿನ ಬಿಂದು ಜಾರುತ್ತಿದ್ದ ಚಂದದ ಹೂವನ್ನು ಆತನ ಕೈಗಿತ್ತಳು. ಯುವಕ ಮರು ಮಾತಾಡದೆ ದುಡ್ಡು ನೀಡಿ ಹೂವನ್ನು ಹಿಡಿದುಕೊಂಡು ನಡೆದ. ನನಗೂ ಹೂವೊಂದು ಬೇಕಿತ್ತು. ಆಕೆಗೆ ಹಣ ನೀಡಿ ಮುದ್ದಾಗಿ ಕಂಡ ರೋಜಾವನ್ನು ಪಡೆದುಕೊಂಡೆ.


ಅಲ್ಲೇ ಕಲ್ಲು ಬೆಂಚಿನಲ್ಲಿ ಕುಳಿತಿದ್ದ ಅಜ್ಜ ಕುತೂಹಲದಿಂದ ನೋಡುತ್ತಿದ್ದರು. ಆ ಅಜ್ಜನನ್ನು ನೋಡಿದಾಗ ನನಗೂ ನನ್ನ ಅಜ್ಜನ ನೆನಪಾಯಿತು. ನನ್ನಜ್ಜನೂ ಇಷ್ಟೇ ಬಲಿಷ್ಠವಾಗಿದ್ದ. ಇಷ್ಟು ವಯಸ್ಸಾದರೂ ಮುಖದಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಅಜ್ಜ ಹೂವಮ್ಮನನ್ನು ಹತ್ತಿರ ಕರೆದು "ಏನಮ್ಮ ಇವತ್ತು ರೇಟು ಜಾಸ್ತಿ" ಎಂದರು. ಅದಕ್ಕೆ ಆಕೆ ""ಏನಜ್ಜ ನಿಂಗೂ ಹೂವು ಬೇಕಾ, ಲವರ್ಸ್ ಡೇ ಇವತ್ತು, ಅಜ್ಜಿಗೆ ಗುಲಾಬಿ ಕೊಡುವಿಯಂತೆ" ಎಂದು ವಿಚಿತ್ರವಾಗಿ ನಗುತ್ತ ಮುಂದೆ ಸಾಗಿದಳು. ಅಜ್ಜ ನಗಲಿಲ್ಲ.

ನಾನು ಮೆಲ್ಲಗೆ ಹೋಗಿ ಅಜ್ಜನ ಪಕ್ಕ ಕೂತೆ. "ಅಜ್ಜ ಇವತ್ತು ಲವರ್ಸ್ ಡೇ, ಅದಕ್ಕೆ ಹೂವಿನ ರೇಟು ಜಾಸ್ತಿ' ಅಂದೆ. "ಹೌದಾ? ಎಂದು ಅಜ್ಜ ಪ್ರಶ್ನಿಸಿ ಸುಮ್ಮನಾದರು. ನಂತರ ನನ್ನ ಬಗ್ಗೆ ವಿಚಾರಿಸಿದರು. ನನ್ನ ಸಂಕ್ಷಿಪ್ತ ಪರಿಚಯ ನೀಡಿದೆ.

ಆಗ ನನ್ನ ಮೊಬೈಲಿಗೆ "ಟಿಂಕ್" ಅಂತ ಎಸ್ ಎಂ ಎಸ್ ಬಂತು. ಅದನ್ನು ಓದುತ್ತಲೇ ನನ್ನ ಮುಖ ಅರಳಿತು. ಒಂದು ಗಂಟೆ ಕಳೆದು ಮಾಲ್ ಹತ್ತಿರ ಬರಲು ಹೇಳಿದ್ದಳು. ನಾನು ಪ್ರೀತಿಸುತ್ತಿರುವುದಾಗಿ ಅವಳಿಗೆ ಅವತ್ತೇ ಹೇಳಿದ್ದೆ. ಸುಮ್ಮಗೆ ನಕ್ಕಿದ್ದಳು. ಇವತ್ತು ಸ್ಪೆಷಲ್ ಆಗಿ ಪ್ರೊಪೊಸ್ ಮಾಡಬೇಕು. ಆಗ ಅಜ್ಜ ಕೆಮ್ಮಿ ನನ್ನ ಯೋಚನೆಗೆ ಕಡಿವಾಣ ಹಾಕಿದ್ರು.

ಅಜ್ಜ ನನ್ನ ಮುಖವನ್ನೇ ನೋಡುತ್ತ "ನಮ್ಮ ಕಾಲದಲ್ಲಿ ಪತ್ರ ವ್ಯವಹಾರ ಇಷ್ಟು ಸುಲಭವಾಗಿರಲಿಲ್ಲ. ಅವಳ ಪತ್ರ ತಲುಪಲು ದಿನಗಟ್ಟಲೆ ಕಾಯಬೇಕಿತ್ತು" ಎಂದಾಗ ನನಗೂ ಕುತೂಹಲ ತಡೆಯಲಿಲ್ಲ. "ಅಜ್ಜ ನಿಂಗೂ ಪ್ರೇಯಸಿ ಇದ್ದಳಾ?" ನನ್ನ ಕುತೂಹಲದ ಪ್ರಶ್ನೆಗೆ ನಕ್ಕ ಅಜ್ಜ ನನ್ನ ಒತ್ತಾಯದ ಮೇರೆಗೆ ಅವರ ಕತೆ ಹೇಳತೊಡಗಿದರು.

***
ಬಹುಶಃ ಇದೇ ದಿನವಾಗಿರಬೇಕು ಅವತ್ತು. ಸರಿಯಾಗಿ ನೆನಪಿಲ್ಲ. ಫೆಬ್ರವರಿ ಅನ್ನೋದು ನಿಜ. ನಾನೂ ಅವಳ ಮನೆಗೆ ಹೋಗಿದ್ದೆ. ಅವಳ ಮನೆಯ ಮುಂದಿನ ಮಾವಿನ ಮರ ಹೂವು ಬಿಟ್ಟು ಸೊಗಸಾಗಿ ಕಾಣುತ್ತಿತ್ತು. ಗೇಟಿನ ಬಳಿಯಲ್ಲಿ ಯಾರೋ ಗೂರ್ಖ ಕುಳಿತಿದ್ದ. ಅವನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸಿದೆ. ಆಗ ಆ ಉದ್ದ ಮೀಸೆಯವ ಬಂದ.

"ಯಾರು ಬೇಕಿತ್ತು" ದೊಡ್ಡ ಧ್ವನಿಯಲ್ಲಿ ಕೇಳಿದ್ದ. ಬ್ರಿಟಿಷ್ ಸರಕಾರದ ನೌಕರಿ ಮಾಡುವ ಹಮ್ಮು ಅವನಿಗೆ. "ಇದು ಅರುಂದತಿಯ ಮನೆನಾ?" ನನ್ನ ಪ್ರಶ್ನೆಗೆ ಆತ "ಹೌದು, ನಾನು ಅವಳಪ್ಪ". ಒಮ್ಮೆಗೆ ನಾನು ನೇರವಾಗಿ ನಿಂತುಕೊಂಡೆ. ಸರ್, ಅದು ಅದು ಅವರು ನನ್ನ ಬರಲು ಹೇಳಿದ್ರು... ಎಂದೆ. ಆತ ನಂಬಲಿಲ್ಲ. ಆಕೆಯಿಂದ ಬಂದ ಪತ್ರ ತೋರಿಸಿದೆ. ಅದು ನಾನು ಮಾಡಿದ ಮೂರ್ಖ ಕೆಲಸ.

ಅದರಲ್ಲಿ, "ಪ್ರೀತಿಯ ರಾಜ, ಇನ್ನೆಷ್ಟು ವರ್ಷ ಈ ಪತ್ರ ಸಲ್ಲಾಪ. ಮನೆಗೆ ಬಂದು ನನ್ನ ಕರೆದುಕೊಂಡು ಹೋಗು" ಎಂದೆಲ್ಲ ಬರೆದಿತ್ತು. ಅವನು ಒಮ್ಮೆಗೆ ಮುಖಗಂಟಿಕ್ಕಿಕ್ಕೊಂಡ. ನಂತರ ಆತನ ಮುಖ ಸಡಿಲಗೊಂಡಿತು. "ಬನ್ನಿ ಬನ್ನಿ, ಬಹಳ ದೂರದಿಂದ ಬಂದಹಾಗೆ ಇದೆ. ಎಲ್ಲರೂ ಕ್ಷೇಮವೇ? ಎಂದೆಲ್ಲ ಆದರಿಸಿ, ಪಕ್ಕದಲ್ಲಿದ್ದ ಸೇವಕನಿಗೆ "ಇವರನ್ನು ಕುಳಿತುಕೊಳ್ಳಲು ಹೇಳು, ನಾನೀಗ ಬಂದೆ" ಎಂದು ಅವಸರದಲ್ಲಿ ಹೊರಟರು. ನಾನು ಮನೆ ಪ್ರವೇಶಿಸಿದೆ.

ಮನೆಯೊಳಗೆ ದೊಡ್ಡದಾಗಿ ಇಂಗ್ಲೆಂಡ್ ರಾಣಿಯ ಭಾವಚಿತ್ರ ನೇತಾಡಿಸಿತ್ತು. ನಾನು ಬರಬಾರದ ದಾರಿಯಲ್ಲಿ ಬಂದೆನೋ... ಮನಸ್ಸಿಗೆ ಖೇದವೆನಿಸಿತು. ನಮ್ಮ ನಾಯಕರಿಗೆ ಈ ವಿಷಯ ತಿಳಿದರೆ ನನ್ನನ್ನು ಸಿಗಿದು ನೇತಾಡಿಸಿಬಿಡಬಹುದು. ಅವರಿಗೆ ಬ್ರಿಟಿಷರ ಎಂಜಲು ಕಾಯುವ ಭಾರತೀಯರೆಂದರೆ ರಕ್ತ ಕುದಿಯುತ್ತಿತ್ತು. ನಾನೂ ಅವರ ಸೇವಕ. ಅವರಷ್ಟು ಲೋಕ ಜ್ಞಾನ ಇಲ್ಲದಿದ್ದರೂ ನಮ್ಮ ದೇಶ ಬೇರೆಯವರ ಪಾಲಾಗಲು ಮನಸ್ಸು ವಿರೋಧಿಸುತ್ತಿತ್ತು. ದೇಶಕ್ಕಾಗಿ ರಕ್ತ ಕೊಡಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದೆ.

"ಬಾಯಾರಿಕೆ ತೆಗೆದುಕೊಳ್ಳಿ" ಸೇವಕ ದೊಡ್ಡ ಗಾಜಿನ ಗ್ಲಾಸಿನಲ್ಲಿ ಬಣ್ಣದ ಪಾನೀಯ ತಂದಿರಿಸಿದ. ನಾನು ಅದನ್ನು ಕೈಗೆ ತೆಗೆದುಕೊಂಡು ಪ್ರೀಯೆಯ ಸುಳಿವಿದೆಯೇ ಎಂದು ಸುತ್ತಮುತ್ತ ನೋಡತೊಡಗಿದೆ. ಆ ಬಣ್ಣದ ಪಾನೀಯ ಬಾಯಿಗಿರಿಸಿದೆ. ಹೆಜ್ಜೆಯ ಸದ್ದು ಕೇಳಿತು. ಯಾರೋಬರುತ್ತಿರುವಂತೆ ಅನಿಸಿತು. ಅವಳಪ್ಪ. ಕೈನಲ್ಲಿ ಚಾಟಿ. ಅಕ್ಕಪಕ್ಕ ದೊಣ್ಣೆ ಹಿಡಿದುಕೊಂಡ ಸೇವಕರು.

ಯಾಕೋ ತಲೆ ಧಿಮ್ಮೆನ್ನತೊಡಗಿತು. ಅರೇ ಎದುರಿಗೆ ಬರುತ್ತಿರುವರ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಣ್ಣು ಮಂಜು ಮಂಜಾಗುತ್ತಿದೆ. ಯಾಕೋ ಕಾಲುಗಳು ಜೋಮು ಹಿಡಿದಂತೆ ಭಾಸವಾಗತೊಡಗಿತು. ಪಾನೀಯಕ್ಕೆ ಮತ್ತು ಬೆರೆಸಿದ್ದಾರೆಯೇ? "ಈ ಕುನ್ನಿಯನ್ನು ಕಂಬಕ್ಕೆ ಕಟ್ಟಿ" ಅವಳಪ್ಪನ ಆಜ್ಞೆ ಕೇಳಿತು. "ಓಹ್, ದೇವರೆ ನಾನು ಮೋಸದ ಸುಳಿಗೆ ಬಿದ್ದೆ" ಎಂದು ತಿಳಿದು ಒಮ್ಮೆಗೆ ಎದ್ದು ನಿಂತು ವಸ್ತ್ರದೊಳಗಿನ ಸಣ್ಣ ಕತ್ತಿ ತೆಗೆಯಲು ಹೋದೆ. ತಲೆಗೆ ದಡ್ ಅಂತ ಯಾರೋ ಹೊಡೆದರು. ನಿಲ್ಲಲಾಗದೆ ತಲೆ ಹಿಡಿದುಕೊಂಡು ಬಿದ್ದೆ.

ಮುಖಕ್ಕೆ ನೀರು ಎರಚಿದಂತಾಗಿ ಮುಖ ಎತ್ತಿ ನೋಡಿದೆ. ನನ್ನ ಕೈಕಾಲುಗಳನ್ನು ಕಟ್ಟಿದ್ದರು. ಏನು ಇವರ ಉದ್ದೇಶ. ಏನಿದು ಮೋಸ. ನನ್ನ ನಾಯಕನ ಜೊತೆ ಹೋರಾಡುವುದು ಬಿಟ್ಟು ನನ್ನನ್ಯಾಕೆ ಇಲ್ಲಿಗೆ ಕರೆಸಿದರು...

"ನನ್ನ ಮಗಳಿಗೆ ಪತ್ರ ಬರೆಯುವೆಯಾ? ಎಷ್ಟು ದೈರ್ಯ ನಿನಗೆ. ನೋಡು ಇವಳೇ ನನ್ನ ಮಗಳು. ಬೇಕೆ ನಿನಗೆ?" ಆತ ಅಬ್ಬರಿಸುತ್ತಿದ್ದ. ನಾನು ಮೆಲ್ಲಗೆ ತಲೆಯೆತ್ತಿ ನೋಡಿದೆ. ಕೊಂಚ ಕುಳ್ಳಗಿನ ನನ್ನ ಸುಂದರ ಪ್ರೇಯಸಿ ತಲೆತಗ್ಗಿಸಿ ನಿಂತಿದ್ದಳು. ಶಾಕುಂತಲೆ ನಾನೆಂದು ಪತ್ರ ಬರೆಯುತ್ತಿದ್ದ ನನ್ನ ಸುಂದರಿ, ನನಗ್ಯಾಕೆ ಇಂತಹ ಮೋಸ ಮಾಡಿದೆ ಎಂದು ಜೋರಾಗಿ ಕೇಳಬೇಕೆನಿಸಿತು. ಆಗ ಅವಳಪ್ಪ ಚಾಟಿಯ ಉದ್ದವನ್ನು ಎರಡು ಕೈನಿಂದ ಅಳೆದು ಚಟಿರನೆ ಬೀಸಿದ. ನನ್ನ ಪ್ರಿಯೆ ಮುಖಮುಚ್ಚಿ ಒಳಗೆ ಓಡಿದಳು.

ಒಂದು, ಎರಡು, ಮೂರು, ನಾಲ್ಕು ಎಷ್ಟು ಹೊಡೆದನೋ.. ಲೆಕ್ಕವಿಡಲಾಗಲಿಲ್ಲ. ಮೈನಲ್ಲಿ ರಕ್ತ ಹೊರಗೆ ಬರುತ್ತಿತ್ತು. ಅವನಿಗೆ ಅವನ ಸೇವಕನೊಬ್ಬ ಏನೋ ಗುಸುಗುಸು ಎಂದ. ತಕ್ಷಣ ಆತನ ಮುಖ ಇನ್ನಷ್ಟು ವ್ಯಗ್ರವಾಯಿತು. "ನೀನು ಸ್ವಾತಂತ್ರ್ಯ ಹೋರಾಟಗಾರನೇ? ನಿನ್ನ ನಾಯಕನ ಬಗ್ಗೆ ಸಂಪೂರ್ಣ ವಿಷಯ ಹೇಳು. ನೀವು ಎಷ್ಟು ಜನರಿದ್ದೀರಿ. ಯಾವಾಗ ದಂಗೆ? ಎಷ್ಟು ಮದ್ದುಗುಂಡುಗಳಿವೆ? ಎಲ್ಲೆಲ್ಲಿ ಅಡಗುತಾಣಗಳಿವೆ?" ಲೆಕ್ಕಪತ್ರ ಓದುವಂತೆ ಆತ ಪ್ರಶ್ನೆಗಳ ಮಳೆ ಸುರಿಸಿದ್ದ.

ಓಹ್, ಇದಾ ವಿಷಯ. ಮೈನಲ್ಲಿ ರಕ್ತ ಸುರಿಯುತ್ತಿದ್ದರೂ ದೇಶಭಕ್ತಿ ಉರಿದುಬಂತು. "ನಿನಗೆ ತಾಕತ್ತು ಇದ್ದರೆ ನನ್ನ ಹಗ್ಗ ಬಿಚ್ಚಿ ಯುದ್ದಕ್ಕೆ ಬಾರೋ" ನಾನು ಶಕ್ತಿಮೀರಿ ಜೋರಾಗಿ ಹೇಳಿದೆ. ಅವನ ಮುಖ ಒಮ್ಮೆಗೆ ಕಪ್ಪಿಟ್ಟಿತು. ಮತ್ತೊಂದಿಷ್ಟು ಚಾಟಿಯ ಏಟು ಬಿತ್ತು. ಹೊರಗೆ ಏನೋ ಸದ್ದಾದಂತೆ ಕೇಳಿತು. ಪೊಲೀಸರು ಬಂದು ನನ್ನ ಹಗ್ಗ ಬಿಚ್ಚಿ ಕೋಳ ಹಾಕಿ ಕರೆದೊಯ್ದರು.

ನಾನು ಕಂಬಿಯ ಹಿಂದೆ ಬಂಧಿಯಾದೆ. ಯಾವುದೋ ಸುಳ್ಳು ಪ್ರಕರಣ ದಾಖಲಿಸಿದ್ದರು. ಎಷ್ಟೇ ಹಿಂಸಿಸಿದರೂ ನಾಯಕನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡಲಿಲ್ಲ. ನನ್ನನ್ನು ಬೇರೆ ಯಾವುದೋ ಜೈಲಿಗೆ ಕಳುಹಿಸುವ ಬಗ್ಗೆ ಮಾತನಾಡುತ್ತಿದ್ದರು. ಈ ಮಾಹಿತಿಯನ್ನು ಪೊಲೀಸಪ್ಪನೊಬ್ಬ ನನಗೆ ನೀಡಿದ್ದ. ಅವನಿಗೆ ನನ್ನ ಬಗ್ಗೆ ಕರುಣೆಯಿತ್ತು. ಆತ ಅನಿವಾರ್ಯವಾಗಿ ಸರಕಾರಿ ಚಾಕರಿ ಮಾಡುತ್ತಿದ್ದ.  ನಿಮ್ಮ ನಾಯಕರ ಸೈನ ಈ ಕಡೆಗೆ ಬಂದಾಗ ನಾನು ಅವರ ಜೊತೆ ಸೇರುತ್ತೇನೆ ಎಂಬ ಭರವಸೆ ನೀಡಿದ್ದ. ಆತನಲ್ಲೂ ಸುಪ್ತವಾಗಿರುವ ದೇಶಪ್ರೇಮ ಕಂಡು ಎದೆಯುಬ್ಬಿ ಬಂದಿತ್ತು.

ಆದರೂ, ನನ್ನ ಪ್ರೇಯಸಿಯದ್ದು ಸುಳ್ಳು ಪ್ರೀತಿಯೆಂದು ನನ್ನ ಒಳಮನಸ್ಸು ಒಪ್ಪಲಿಲ್ಲ. ಆಕೆ ಬರೆಯುತ್ತಿದ್ದ ಪತ್ರಗಳಲ್ಲಿ ನಾಟಕೀಯತೆ ಇರಲಿಲ್ಲ. ಅವಳನ್ನು ಐದು ವರ್ಷದ ಹಿಂದೆ ನೋಡಿದ್ದು. ಮಡಿಕೇರಿಯಿಂದ ಎತ್ತಿನಗಾಡಿಯಲ್ಲಿ ಆಕೆ ತನ್ನ ಕುಟುಂಬದ ಜೊತೆ ಸಾಗುತ್ತಿದ್ದಳು. ನಾನು ಅದೇ ದಾರಿಯಲ್ಲಿ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆಗ ಆನೆಗಳ ಗುಂಪು ಅವರು ಹೋಗುವ ದಾರಿಯಲ್ಲಿ ಬೀಡುಬಿಟ್ಟಿತು.

ಆನೆಗಳ ಹಾದಿಯಲ್ಲಿ ಸಾಗಲಾಗದೆ ಭೀತಿಯಲ್ಲಿದ್ದ ಅವರನ್ನು ಮತ್ತೊಂದು ಒಳದಾರಿಯ ಮೂಲಕ ಕರೆದೊಯ್ದಿದೆ. ಅವಳ ಜೊತೆಯಿದ್ದ ಮುದುಕಿ ನನಗೆ ವಿಳಾಸ ನೀಡಿ "ಘಟ್ಟದ ಕೆಳಗೆ ತಾವು ಭಾರೀ ಪ್ರಭಾವಿಗಳು, ಏನಾದರೂ ಕಷ್ಟ ಬಂದರೆ ನಮ್ಮನ್ನು ಕಾಣು ಎಂದಿದ್ದರು. ಜೊತೆಗೆ ವಿಳಾಸವನ್ನೂ ನೀಡಿದ್ದರು. ಅದ್ಯಾವುದೋ ಸಮಯದಲ್ಲಿ ನಾನು ಕುಶಲ ಕ್ಷೇಮ ವಿಚಾರಿಸಿ ಪತ್ರ ಬರೆದಿದ್ದೆ. ಅದಕ್ಕೆ ಅವರ ಮನೆಯಿಂದ ಮಾರುತ್ತರ ಬಂದಿರಲಿಲ್ಲ. ತುಂಬಾ ದಿನ ಕಳೆದು ಕಾಗದವೊಂದು ಬಂತು. ಅಂದು ನಾನು ಬಂಡಿಯಲ್ಲಿ ನೋಡಿದ್ದ ಕುಳ್ಳಗಿನ ಸುಂದರಿಯ ಪತ್ರವಾಗಿತ್ತು.

"ಅಂದೇ ನನ್ನನ್ನು ನೋಡಿ ಇಷ್ಟಪಟ್ಟದಾಗಿಯೂ, ಮದುವೆಯಾಗುವುದಿದ್ದರೆ ನಿಮ್ಮನೇ" ಎಂದು ಬರೆದಿದ್ದಳು. ಪತ್ರ ವ್ಯವಹಾರಕ್ಕಾಗಿ ಸ್ನೇಹಿತೆಯೊಬ್ಬಳ ಮನೆಯ ವಿಳಾಸ ನೀಡಿದ್ದಳು. ದುಷ್ಯಂತ ಶಾಕುಂತಲೆ, ರೊಮಿಯೊ ಜ್ಯೂಲಿಯಟ್ ಬರಹಗಳ ಸಾಲುಗಳನ್ನೂ ಉಲ್ಲೇಖಿಸಿದ್ದಳು. ತುಂಬಾ ಓದಿಕೊಂಡಿದ್ದಾಳೆ ಅನಿಸಿತು.

ನನಗೂ ಜೀವನಕ್ಕೆ ಹೊಸ ಚೈತನ್ಯ ಬಂದಂತಾಗಿತ್ತು. ನಾನೂ ಮಾರುತ್ತರ ಬರೆದೆ. ನಮ್ಮ ಪತ್ರ ವ್ಯವಹಾರ ಯಾವುದೇ ಎಗ್ಗಿಲ್ಲದೇ ಸಾಗುತ್ತಿತ್ತು. ನಾನು ಒಮ್ಮೊಮ್ಮೆ ತಡವಾಗಿ ಕಾಗದ ಬರೆದರೆ ಮುನಿಸಿಕೊಳ್ಳುತ್ತಿದ್ದಳು. ಸ್ವಾತಂತ್ರ್ಯ ಹೋರಾಟಕ್ಕಾಗಿ ನಾವು ಗುಂಪುಗಟ್ಟಿ ರಹಸ್ಯ ಕಾರ್ಯಚರಣೆಗಳನ್ನು ಮಾಡುತ್ತಿದ್ದೇವು. ಬ್ರಿಟಿಷರನ್ನು ವಿರೋಧಿಸುತ್ತಿದ್ದರೂ ನನ್ನ ಪತ್ರ ವ್ಯವಹಾರಗಳು ಆಗ ಬ್ರಿಟಿಷ್ ಈಸ್ಟ್ ಇಂಡಿಯಾ ಪೋಸ್ಟಲ್ ಸೇವೆಯನ್ನು ಬಳಸಿಕೊಳ್ಳುತ್ತಿತ್ತು. ಈ ವಿಷಯ ನಮ್ಮ ನಾಯಕರಿಗೆ ಗೊತ್ತಿರಲಿಲ್ಲ. ಪೋಸ್ಟ್ ಮ್ಯಾನ್ ಕರಿಯಪ್ಪ ಯಾರಿಗೂ ಗೊತ್ತಾಗದಂತೆ ನನಗೆ ಪತ್ರಗಳನ್ನು ನೀಡುತ್ತಿದ್ದ.

ಆದರೆ ನಾನು ಎಡವಿದ್ದೆಲ್ಲಿ ಎನ್ನುವುದು ಇನ್ನೂ ಅರಿವಾಗಲಿಲ್ಲ. ಈ ಕುರಿತು ಆ ಜೈಲಿನ ಪೊಲೀಸ್ ಬಳಿಯೂ ವಿಚಾರಿಸಿದೆ. ಕೆಲವು ದಿನ ಕಳೆದ ಬಳಿಕ ಆತ ಒಂದು ಪತ್ರದೊಂದಿಗೆ ಬಂದ. ಅದು ನನಗೆ ಪ್ರೇಯಸಿ ಬರೆದ ಅಂತಿಮ ಪತ್ರವಾಗಿತ್ತು. ಅದರಲ್ಲಿ ಅವಳಪ್ಪ ಕ್ರೂರಿಯೆಂದೂ, ಸಾಕಷ್ಟು ಪ್ರಭಾವಿಯಾಗಿರುವುದರಿಂದ ಅವನನ್ನು ಎದುರಿಸುವುದು ಕಷ್ಟ. ಅವಳನ್ನು ಅವಳಪ್ಪ ಯಾವುದೋ ಬ್ರಿಟಿಷ್ ಅಧಿಕಾರಿಗೆ ಮದುವೆ ಮಾಡಲು ಬಯಸಿದ್ದಾನೆ, ಆ ನರಕದ ಬದುಕಿಗಿಂತ ಸಾವೇ ಮೇಲು, ಮುಂದಿನ ಜನ್ಮದಲ್ಲಿ ಒಂದಾಗೋಣ... ನೀನು ನಿನ್ನ ಜೀವನವನ್ನು ಸಂಪೂರ್ಣವಾಗಿ ದೇಶಸೇವೆಗೆ ಮುಡಿಪಾಗಿಡು" ಎಂದೆಲ್ಲ ಬರೆದಿದ್ದಳು.

ಆ ಪತ್ರ ನನ್ನ ಕೈಸೇರುವಾಗಲೇ ತಡವಾಗಿತ್ತು. ಪೊಲೀಸ್ ನೀಡಿದ ಮಾಹಿತಿ ಪ್ರಕಾರ ಆಕೆ ಆತ್ಮಹತ್ಯೆ ಮಾಡಿಕೊಂಡಾಗಿತ್ತು. ಕೆಲವೇ ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ದೇಶಸೇವೆ ಮಾಡಬೇಕಿದ್ದ ನಾನು ಪ್ರೇಮದ ಆಕರ್ಷಣೆಗೆ ಸಿಲುಕಿ, ಮೋಸದಿಂದ ಸುಳ್ಳು ಅಪರಾಧದ ಹೆಸರಿನಲ್ಲಿ ಜೈಲಿನಲ್ಲಿದ್ದು ಬಿಡುಗಡೆಯಾದೆ.

**
ಹಳೆಯ ನೆನಪಿನಿಂದ ತೇವವಾದ ಕಣ್ಣನ್ನು ಒರೆಸಿಕೊಂಡು ಅವರು ಎದ್ದು ನಿಂತರು. "ಈಗಿನ ಜನರೇಷನ್ ಬಗ್ಗೆ ಕರುಣೆ ಎನಿಸುತ್ತಿದೆ. ಕೆಲವೇ ಕ್ಷಣದಲ್ಲಿ ಎಲ್ಲಿಗೋ ಪತ್ರ ತಲುಪಿಸುತ್ತೀರಿ. ನಿಮಿಷದಲ್ಲೇ ಪ್ರೇಮಿಗಳನ್ನು ಪಡೆಯುತ್ತೀರಿ. ಮದುವೆಯಾಗುತ್ತೀರಿ. ಡೈವರ್ಸ್ ಮಾಡಿಕೊಳ್ಳುತ್ತೀರಿ. ತುಂಬಾ ಸ್ಪೀಡ್ ಒಳ್ಳೆಯದಲ್ಲ" ಎಂದು ಹೇಳುತ್ತ ಮುಂದೆ ಮುಂದೆ ಸಾಗಿದರು.

ಆಗಲೇ, "ಥ್ಯಾಂಕ್ಯು ಕಿರಣ್. ಐ ಲವ್ ಯು ಕಣೋ" ಎಂಬ ಸಂದೇಶ ನನ್ನ ಮೊಬೈಲಿಗೆ ಬಂದುಬಿತ್ತು. ನನಗೆ ದಿಗ್ಭಮೆಯಾಯಿತು. ನಾನು ಪ್ರೀತಿಸಿದಾಕೆ ಬೇರೊಬ್ಬನಿಗೆ ಕಳುಹಿಸಬೇಕಿದ್ದ ಎಸ್ಎಂಎಸ್ ನ್ನು ತಪ್ಪಿ ನನ್ನ ಮೊಬೈಲಿಗೆ ಕಳುಹಿಸಿದ್ದಳು. ನನಗೆ ನೂರಾರು ಚಾಟಿಯೇಟು ಬಿದ್ದಹಾಗಾಯ್ತು. ಕೈನಲ್ಲಿದ್ದ ಹೂವನ್ನು ಅಲ್ಲೇ ಬಿಸಾಕಿ ಅಜ್ಜನ ಹಿಂದೆಯೇ ಸಾಗಿದೆ.

______

ಪ್ರವೀಣ ಚಂದ್ರ ಪುತ್ತೂರು
ವಾಹನ ಸಾಲ ಪಡೆಯುವುದು ಹೇಗೆ?

ವಾಹನ ಸಾಲ ಪಡೆಯುವುದು ಹೇಗೆ?

ಣವಿದ್ದರೆ ಕಾರು ಖರೀದಿ ಸುಲಭ. ಪೂರ್ತಿ ಕ್ಯಾಷ್ ಕೊಟ್ಟು ಕಾರು ಖರೀದಿಸುವುದು ಒಂದು ವಿಧ. ಆದರೆ ಹೆಚ್ಚಿನವರು ಬ್ಯಾಂಕ್ ಸಾಲ ಪಡೆದು ಕಾರು ಖರೀದಿಸಲು ಇಚ್ಚಿಸುತ್ತಾರೆ. ಕಣ್ಣು ಮುಚ್ಚಿ ಬ್ಯಾಂಕ್‍ನಿಂದ ಸಾಲ ಪಡೆದರೆ ಕಿಸೆಗೆ ಕತ್ತರಿ ಗ್ಯಾರಂಟಿ. ಕಾರು ಸಂಬಂಧಿ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವಲ್ಲಿ ಅತ್ಯುತ್ತಮ ಬಡ್ಡಿದರದಲ್ಲಿ ದೊರಕಿದ ವಾಹನ ಸಾಲವೂ ನೆರವಾಗುತ್ತದೆ. ಹೀಗಾಗಿ ಸಾಲ ಪಡೆಯುವಾಗ ಉತ್ತಮ ಆಫರನ್ನು ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ.


ಸ್ಕೀಮ್‍ಗಳು: ವಿವಿಧ ಬ್ಯಾಂಕ್‍ಗಳು ನೀಡುವ ಆಫರುಗಳನ್ನು ಹೋಲಿಕೆ ಮಾಡಿ ನೋಡಿ. ಸಾಲದ ಮೇಲೆ ವಿಸುವ ಬಡ್ಡಿದರವು ಒಂದು ಬ್ಯಾಂಕ್‍ನಿಂದ ಮತ್ತೊಂದು ಬ್ಯಾಂಕ್‍ಗೆ ವ್ಯತ್ಯಾಸವಿರುತ್ತದೆ. ಸಾಲದ ಆಫರುಗಳನ್ನು ತುಲನೆ ಮಾಡಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.
ಹೆಚ್ಚುವರಿ ಶುಲ್ಕ: ಕೆಲವೊಂದು ಬ್ಯಾಂಕ್‍ಗಳು ಕಡಿಮೆ ಬಡ್ಡಿದರ ನೀಡಿದರೂ ಹೆಚ್ಚುವರಿ ಶುಲ್ಕಗಳನ್ನು ವಿಸಿರಬಹುದು. ಅಂದ್ರೆ ಶೀಘ್ರ ಮರುಪಾವತಿ ಶುಲ್ಕ, ಸಿಬ್ಬಂದಿ ಶುಲ್ಕ, ಸಂಸ್ಥೆಯ ಖರ್ಚು ಇತ್ಯಾದಿಗಳನ್ನೆಲ್ಲ ವಿಸಿರಬಹುದು. ಎಲ್ಲವನ್ನೂ ತಿಳಿದುಕೊಂಡು ಸಾಲ ಪಡೆಯಿರಿ.

ಡೌನ್‍ಪೇಮೆಂಟ್ ಹೆಚ್ಚಿರಲಿ: ಕಡಿಮೆ ಡೌನ್‍ಪೇಮೆಂಟ್ ನೀಡಿ ಕಾರು ಖರೀದಿಸುವುದು ಅಷ್ಟೇನೂ ಉತ್ತಮವಲ್ಲ. ಹೆಚ್ಚು ಡೌನ್‍ಪೇಮೆಂಟ್ ಮಾಡಿದರೆ ಮುಂದಿನ ಕಂತುಗಳಲ್ಲಿ ಪಾವತಿಸಬೇಕಾದ ಇಎಂಐ ಕಡಿಮೆ ಇರುತ್ತದೆ.
ವಿಮೆ: ಸಾಲ ಪಡೆಯುವುದರ ಜೊತೆಗೆ ಕಾರಿಗೊಂದು ಸೂಕ್ತ ವಿಮಾ ಸೌಲಭ್ಯ ಕಲ್ಪಿಸಿ. ಇದರಿಂದ ಅನಿರೀಕ್ಷಿತ ಅವಘಡ ಸಂ`ವಿಸಿದರೆ ಆರ್ಥಿಕ `ದ್ರತೆ ದೊರಕುತ್ತದೆ.

ಎಲ್ಲಿಂದ ಸಾಲ?
ವಾಹನ ಸಾಲಕ್ಕೆ ಬ್ಯಾಂಕ್‍ಗಳು ಪ್ರಮುಖ ಮೂಲ. ಈಗ ಬ್ಯಾಂಕ್‍ಗಳು ಪೈಪೋಟಿಗೆ ಬಿದ್ದು ಸಾಲ ನೀಡುತ್ತಿವೆ. ಬ್ಯಾಂಕ್‍ಗಳು ಮಾತ್ರವಲ್ಲದೇ ವಾಹನ ಡೀಲರುಗಳು ಮತ್ತು ಕಾರು ಕಂಪನಿಗಳ ನೆರವಿನಿಂದ ನಡೆಯುವ ಹಣಕಾಸು ಸಂಸ್ಥೆಗಳು ಸಹ ಸಾಲ ನೀಡುತ್ತವೆ. ಬ್ಯಾಂಕ್‍ಗಳಿಗೆ ಹೋಲಿಸಿದರೆ ಇವುಗಳು ತ್ವರಿತವಾಗಿ ಸಾಲ ನೀಡುತ್ತವೆ. ಝೀರೋ ಪರ್ಸೆಂಟ್ ಫೈನಾನ್ಸ್‍ನಿಂದ ಹಿಡಿದು ಬಡ್ಡಿರಹಿತ ಸಾಲದವರೆಗೆ ವಿವಿ` ವಾಹನ ಸಾಲಗಳು ಲ`್ಯವಿರುತ್ತವೆ. ಆದರೆ ಕೆಲವು ಸಾಲಗಳಲ್ಲಿ ಡೀಲರ್ ಡಿಸ್ಕೌಂಟ್ಸ್ ಇರುವುದಿಲ್ಲ. ಬ್ಯಾಂಕ್ ಸಾಲಕ್ಕೆ ಹೋಲಿಸಿದರೆ ಸಾಲ ಪಾವತಿಸಬೇಕಾದ ಕಾಲಾವಧಿಯೂ ಕಡಿಮೆ ಇರುತ್ತದೆ.

ಸಾಮಾನ್ಯ ಅರ್ಹತೆಗಳು
* ಕನಿಷ್ಠ ವಯಸ್ಸು: 18 ವರ್ಷ(ವೇತನ ಪಡೆಯುವರಿಗೆ) ಮತ್ತು 21 ವರ್ಷಗಳು(ಸ್ವಉದ್ಯೋಗಿಗಳಿಗೆ).
* ವೇತನ ಪಡೆಯುವವರು: ಪ್ರಸಕ್ತ ಕಂಪನಿಯಲ್ಲಿ ಕನಿಷ್ಠ ಒಂದು ವರ್ಷವಾದರೂ ಕೆಲಸ ಮಾಡಿರಬೇಕು.
* ಸ್ವಉದ್ಯೋಗಿಗಳು: ಕನಿಷ್ಠ 2 ವರ್ಷವಾದರೂ ಬಿಸಿನೆಸ್‍ನಲ್ಲಿ ತೊಡಗಿರಬೇಕು.
* ಸಾಲದ ಮೊತ್ತ: ಕಾರು ಸಾಲದ ಕನಿಷ್ಠ ಮೊತ್ತ ಸುಮಾರು ಒಂದು ಲಕ್ಷ ರೂಪಾಯಿ ಇರುತ್ತದೆ.

ದಾಖಲೆಗಳು
ಸಾಮಾನ್ಯವಾಗಿ ಕಾರು ಸಾಲಕ್ಕಾಗಿ ಈ ಕೆಳಗಿನ ದಾಖಲೆ ಪತ್ರಗಳನ್ನು ನೀಡಬೇಕಾಗುತ್ತದೆ.
ವೇತನ ಪಡೆಯುವವರು
ವಿಳಾಸ ಪ್ರಮಾಣ ಪತ್ರ : (ಈ ಮುಂದಿನವುಗಳಲ್ಲಿ ಯಾವುದಾದರೂ) ಮನೆ `Éೂೀಗ್ಯಪತ್ರ/ವಾಸ ಮತ್ತು ಪರವಾನಿಗೆ ಪತ್ರ, ಪಡಿತರ ಚೀಟೆ, ಮನೆ ತೆರಿಗೆ ರಸೀದಿ, ಹೌಸಿಂಗ್ ಸೊಸೈಟಿ ಬಿಲ್, ಮತದಾರರ ಗುರುತಿನ ಚೀಟಿ, ಪಾಸ್ ಪೆÇೀರ್ಟ್, ಟೆಲಿಫೆÇೀನ್ ಬಿಲ್,  ಕರೆಂಟ್ ಬಿಲ್, ನೀರಿನ ತೆರಿಗೆ ರಸೀದಿ, ವಯರ್‍ಲೆಸ್ ಲ್ಯಾಂಡ್‍ಲೈನ್ ರಸೀದಿ ಇತ್ಯಾದಿಗಳನ್ನು ವಿಳಾಸ ದೃಢೀಕರಣಕ್ಕಾಗಿ ನೀಡಬಹುದು. ಇತ್ತೀಚಿನ ಒಂದು ರಸೀದಿ ಮತ್ತು ಆರು ತಿಂಗಳ ಹಿಂದಿನ ಒಂದು ರಸೀದಿ ನೀಡಬೇಕಾಗುತ್ತದೆ.
ಗುರುತಿನ ಚೀಟಿ: (ಈ ಮುಂದಿನವುಗಳಲ್ಲಿ ಯಾವುದೇ ದಾಖಲೆ)  ಪಾಸ್ ಪೆÇೀರ್ಟ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ಲಿಮಿಟೆಡ ಕಂಪನಿ ಅಥವಾ `Áರತ ಸರಕಾರದಿಂದ ಪಡೆದಿರುವ ಉದ್ಯೋಗದ ಗುರುತಿನ ಚೀಟಿ, ಸ್ಥಳೀಯ ಪಂಚಾಯಿತಿಯಿಂದ ಪಡೆದ ಗುರುತಿನ ಚೀಟಿ, ಫೆÇೀಟೊ ಜೊತೆ ನೋಟರಿ ದೃಢೀಕರಣ. ಇತ್ತೀಚಿನ ಸ್ಯಾಲರಿ ಸ್ಪಿಪ್ ಜೊತೆ ಫಾರಮ್ 16 ದಾಖಲೆ ಪತ್ರ.

ಸ್ವ ಉದ್ಯೋಗಿಗಳು
ವಿಳಾಸ ದಾಖಲೆ: ಈಗಿನ ಬಿಸಿನೆಸ್ ವಿಳಾಸವಿರುವ ದಾಖಲೆ ಪತ್ರ.
ಐಡೆಂಟೆಟಿ ಪ್ರೂಫ್: (ಇವುಗಳಲ್ಲಿ ಯಾವುದಾದರೂ) ಪಾಸ್ ಪೆÇೀರ್ಟ್, ಪಾನ್ ಕಾರ್ಡ್, ಮತದಾನದ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ಇತ್ತೀಚಿನ ಮಾರಾಟ ತೆರಿಗೆ ಪಾವತಿ ಆದೇಶ ಪತ್ರ , ಸೇಲ್ ಟ್ಯಾಕ್ಸ್ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಇತ್ಯಾದಿ.
ಆದಾಯ ದಾಖಲೆ: ಇತ್ತೀಚಿನ ಇನ್‍ಕಂ ಟ್ಯಾಕ್ಸ್ ರಿಟರ್ನ್

ಪಾಲುದಾರ ಕಂಪನಿಯಾಗಿದ್ದರೆ:
ವಿಳಾಸ ದಾಖಲೆ: ಈಗಿನ ಕಂಪನಿ ಅಥವಾ ವಹಿವಾಟಿನ ವಿಳಾಸವಿರುವ ದಾಖಲೆ ಪತ್ರ.
ಗುರುತಿನ ಚೀಟಿ: (ಇವುಗಳಲ್ಲಿ ಯಾವುದಾದರೂ) ಪಾಟ್ನರ್‍ಷಿಪ್ ಪತ್ರ, ಶಾಪ್ ಆ್ಯಂಡ್ ಎಸ್ಟಾಬ್ಲಿಷ್‍ಮೆಂಟ್ ಆ್ಯಕ್ಟ್ ಸರ್ಟಿಫಿಕೆಟ್, ಇತ್ತೀಚಿನ ತೆರಿಗೆ ಪಾವತಿ ಆದೇಶ ಪತ್ರ, ಮಾರಾಟ ತೆರಿಗೆ ದಾಖಲೆ ಪತ್ರ.
ಆದಾಯ ದಾಖಲೆ: ಅಡಿಟೆಡ್ ಬ್ಯಾಲೆನ್ಸ್ ಷೀಟ್, ಲಾ` ಮತ್ತು ನಷ್ಟದ ದಾಖಲೆ(ಇತ್ತೀಚಿನ ಎರಡು ವರ್ಷ) ಮತ್ತು ಕಂಪನಿಯ ಇತ್ತೀಚಿನ ಎರಡು ವರ್ಷದ ಐಟಿ ರಿಟರ್ನ್.

ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದರೆ:
ವಿಳಾಸ ದಾಖಲೆ: ಈಗಿನ ಕಂಪನಿ ಅಥವಾ ವಹಿವಾಟಿನ ವಿಳಾಸವಿರುವ ದಾಖಲೆ ಪತ್ರ.
ಗುರುತಿನ ಚೀಟಿ: ಮೆಮೊರಡಮ್ ಮತ್ತು ಆರ್ಟಿಕಲ್ ಆಫ್ ಅಸೋಸಿಯೇಷನ್(ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನೊಂದಿಗೆ).
ಆದಾಯ ದಾಖಲೆ: ಅಡಿಟೆಡ್ ಬ್ಯಾಲೆನ್ಸ್ ಷೀಟ್, ಲಾ` ನಷ್ಟ ದಾಖಲೆ(ಇತ್ತೀಚಿನ ಎರಡು ವರ್ಷಗಳದ್ದು ಮತ್ತು ಕಂಪನಿಯ ಇತ್ತೀಚಿನ ಐಟಿ ರಿಟರ್ನ್.

- Praveen Chandra Puttur
ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

ನಿನ್ನ ಕೋಪಕ್ಕೀಗ ಮೊದಲ ಅನಿವರ್ಸರಿ..!

ಹಾಯ್, ಮರೆತುಬಿಡಬೇಕು ಅಂತ ಪ್ರತಿಸಾರಿ ಅಂದುಕೊಂಡಾಗಲೆಲ್ಲ ಮಲ್ಲಿಗೆ ತೂಕದ ನೀನು ನೆನಪಾಗುತ್ತಿ. ಉದ್ದಜಡೆಯ, ಮುಗ್ಧ ನಗೆಯ ಮುದ್ದುಮುದ್ದಾದ ನಿನ್ನ ಇನ್ನೊಸೆನ್ಸ್ ವ್ಯಕ್ತಿತ್ವ ನೆನಪಾಗುತ್ತೆ ಗೆಳತಿ. ನೀನು ನನ್ನಲ್ಲಿ ಕೋಪಿಸಿಕೊಂಡು ಇವತ್ತಿಗೆ ಭರ್ತಿ ಒಂದು ವರ್ಷವಾಗಿದೆ. ನಿನ್ನ ನೆನಪು ಸೂಜಿಮೊನೆಯಂತೆ ಪ್ರತಿದಿನ ಹೃದಯ ಚುಚ್ಚುತ್ತಿದೆ. ಫೇಸ್ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿ ಸ್ಟೇಟಸ್, ಫೋಟೊಗಳನ್ನು ಲೈಕ್ ಮಾಡಲಾಗದಂತೆ ನನ್ನ ಕೈಕಟ್ಟಿರುವ ನಿನ್ನ ಮೇಲೆ ತುಸು ಕೋಪವಿದೆ ನನಗೆ.


ಮೊನ್ನೆ ನಿನಗೆ ಸಾರಿ ಅಂತ ಮೆಸೆಜ್ ಮಾಡಿದ್ಯಾಕೆ ಅಂತ ನನಗಿನ್ನೂ ಅರ್ಥವಾಗಿಲ್ಲ. ನನ್ನ ಸಾವಿರಾರು ಸಾರಿಗಳಿಗೆ ಮಾರುತ್ತರ ಬರೆಯದ ನೀನು ಅವತ್ಯಾಕೋ "ತಪ್ಪು ಮಾಡದೆ ಇದ್ದರೆ ಸಾರಿ ಕೇಳೋಕೆ ಹೋಗ್ಬಾರ್ದು' ಅಂತ ಮಾರುತ್ತರ ಬರೆದುಬಿಟ್ಟೆ. ನಿನ್ನ ಮಾರುತ್ತರ ನೋಡಿ ಎಷ್ಟು ಖುಷಿಯಾಯ್ತು ಗೊತ್ತ? ಬಹುಶಃ ರಾಮನ ಫಸ್ಟ್ ಕಂಡ ಶಬರಿಗೂ ಅಷ್ಟು ಖುಷಿಯಾಗಿರಲಿಕ್ಕಿಲ್ಲ.

ಹುಡುಗನೊಬ್ಬನ ಪ್ರೀತಿ ಪ್ರಿಯತಮೆ ಹೊರತುಪಡಿಸಿ ಉಳಿದ ಎಲ್ಲರಿಗೂ ಗೊತ್ತಾಗಿರುತ್ತಂತೆ. ಆದರೆ ಹುಡುಗಿಯ ಪ್ರೀತಿ ಪ್ರಿಯತಮನ ಬಿಟ್ಟು ಬೇರೆ ಯಾರಿಗೂ ತಿಳಿದಿರುವುದಿಲ್ಲವಂತೆ. ಅದೇ ರೀತಿ ನಾನು ನಿನ್ನನ್ನು ಪ್ರೀತಿಸುತ್ತಿದ್ದದ್ದು ಸ್ನೇಹಿತರೆಲ್ಲರಿಗೆ ಗೊತ್ತಾಗಿತ್ತು. ನಿನ್ನಲ್ಲಿ ನನ್ನ ಪ್ರೀತಿಯನ್ನು ಹೇಳಬೇಕೆಂದು ಮಹೂರ್ತ ಫಿಕ್ಸ್ ಮಾಡುತ್ತ ಗುಂಡಿಗೆ ಗಟ್ಟಿ ಮಾಡುತ್ತಿರುವಾಗಲೇ ನೀನು ಬೇರೆ ಊರಿಗೆ ಮನೆ ಬದಲಾಯಿಸಿದ್ದು.

ಅದೊಂದು ಕೆಟ್ಟ ಸಮಯದಲ್ಲಿ ನಾವಿಬ್ಬರು ದೂರ ದೂರ ಹೋಗಬೇಕಾಯ್ತು. ಹತ್ತಿರದಲ್ಲಿದ್ದಾಗ ಹತ್ತಿರವಿದ್ದವರು ದೂರ ಹೋದಾಗ ಮತ್ತಷ್ಟು ಹತ್ತಿರವಾಗುತ್ತಾರೆ ಅಂದುಕೊಂಡಿದ್ದೆ. ನೀನು ನನ್ನ ಕಣ್ಣೆದುರಿನಿಂದ ದೂರ ಹೋದ ನಂತರ ಏಕಾಂತದ ಸಂಜೆಯಲ್ಲಿ ನಿನ್ನ ನೆನಪು ಹೆಚ್ಚು ಕಾಡುತ್ತಿತ್ತು. ಮಿಸ್ ಯು ಅಂತ ಸಾವಿರ ಸಾರಿ ಹೇಳಿ ಮಾತನಾಡುತ್ತಿದ್ದ ನಿನ್ನ ಧ್ವನಿ ಕೆಲವೇ ತಿಂಗಳಲ್ಲಿ ನಾಟಕೀಯವಾಯಿತು.

ಆದರೆ ಅದೊಂದು ದಿನ ಪ್ರೀತಿಯ ಬಗ್ಗೆ ತಿಳಿಸಿದ್ದೇ ನನ್ನ ದೂರ ಮಾಡಲು ನಿನಗೆ ನೆಪವಾಯ್ತೆ? ನಾನು ನಿನ್ನ ಫ್ರೆಂಡ್ ಅಂದುಕೊಂಡಿದ್ದೆ. ನಾನು ಬೇರೊಬ್ಬರನ್ನು ಇಷ್ಟಪಟ್ಟಿದ್ದೀನಿ. ಗುಡ್ ಬೈ ಅಂತ ಎಸ್ ಎಂಎಸ್ ಬರೆದು ಒಂದಿಡಿ ವರ್ಷ ಸೈಲೆಂಟ್ ಮೂಡಿಗೆ ಹೋಗಲು ನಿನಗೆ ಹೇಗೆ ಮನಸ್ಸು ಬಂತು. ಗಾಯದ ಮೇಲೆ ಬರೆ ಎಳೆದಂತೆ ಫೇಸ್ಬುಕ್ ನಿಂದಲೂ ಅನ್ ಫ್ರೆಂಡ್ ಮಾಡಲು ಹೇಗೆ ಮನಸ್ಸು ಬಂತು. ಪ್ರೀತಿ ಮತ್ತು ಸ್ನೇಹಾ ಎರಡನ್ನೂ ಕಳೆದುಕೊಂಡು ಪರಿತಪಿಸಿದ ನನ್ನ ನಿಟ್ಟುಸಿರು, ಬಿಕ್ಕಳಿಕೆ ಒಮ್ಮೆಯೂ ನಿನ್ನ ಹೃದಯ ತಟ್ಟಲಿಲ್ಲವೇ?

ಕೆಲವು ನಾಟಕಗಳು ನಾಟಕ ಮುಗಿದ ನಂತರ ಅರ್ಥವಾಗುತ್ತದಂತೆ. ಆದರೆ ನೀನು ಒಂದು ವರ್ಷದ ಹಿಂದೆ ಮಾಡಿದ್ದು ನಾಟಕ ಅಂತ ಜಗತ್ತೇ ಹೇಳಿದರೂ ಒಪ್ಪಲು ನಾನು ತಯಾರಿಲ್ಲ. ಅಥವಾ ನನ್ನಲ್ಲಿ ನಿನಗೆ ಇದ್ದದ್ದು ಬರೀ ಸ್ನೇಹ ಅಂದರೆ ನನ್ನ ಮನಸ್ಸು ಒಪ್ಪದು. ಅಲ್ಲಿ ಅದೆಷ್ಟೋ ಬಾಯ್ಸ್ ಇದ್ದರೂ ನೀನು ನನ್ನನ್ನೇ ಆಯ್ಕೆ ಮಾಡಿಕೊಂಡದ್ದು ಯಾಕೆ? ದುಃಖದಲ್ಲಿ ಅಳುತ್ತ ನನ್ನ ಭುಜಕ್ಕೆ ಒರಗುತ್ತಿದ್ದದ್ದು ಯಾಕೆ? ಗುಡ್ ಮಾರ್ನಿಂಗ್ ನಿಂದ ಗುಡ್ ನೈಟ್ ತನಕ 100 ಫ್ರೀ ಎಸ್ ಎಂಎಸ್ ನನಗೆ ಮೀಸಲಿಟ್ಟಿದ್ದು ಯಾಕೆ? ಪ್ರತಿ  ಸಂಜೆಯೂ ಸಂತೆ ಬೀದಿಗಳಲ್ಲಿ ಕೈಕೈ ಹಿಡಿದು ಸುತ್ತಾಡಿದ್ದು,ಗೋಲ್ ಕಪ್ಪ ತಿನ್ನುತ್ತಿದ್ದದ್ದು. ಕಣ್ಣಲ್ಲೇ ನೀನು ನನ್ನನ್ನು ಕೊಲ್ಲುತ್ತಿದ್ದದ್ದು. ಅದೊಂದು ದಿನ ಮೂಗಿಗೆ ಮೂಗು ತಾಗಿಸಿ....  ಎಲ್ಲವೂ ಸ್ನೇಹವೇ...?

ಪ್ರಪೋಸ್ ಮಾಡದೆ ಇದ್ದರೆ ಹೃದಯದೊಳಗಿನ ಪ್ರೀತಿನಾ ದಿನಾ ದಿನಾ ಸಾಯಿಸಿ ಸ್ನೇಹದ ಮುಖವಾಡ ಧರಿಸುತ್ತ ಕಾಲ ಕಳೆಯಬಹುದಿತ್ತು. ಆದರೆ ಈ ಜಗತ್ತಿನಲ್ಲಿ ಹೇಳದೆ ಕಳೆದು ಹೋದ ಪ್ರೀತಿಯ ಲೋಕದಲ್ಲಿ ನಾನೂ ಸೇರಿ ಹೋಗಬಾರದಲ್ವ? ಅದಕ್ಕಾಗಿ ಜೀವನ ಪರ್ಯಂತ ಪರಿತಪಿಸಬಾರದಲ್ವೆ. ಅದಕ್ಕೆ ನಾನು ಪ್ರಪೋಸ್ ಮಾಡಿದ್ದು. ಆದರೆ ಅದಕ್ಕೆ ನೀಡಿದ ಮೌನದ ಶಿಕ್ಷೆ, ಸ್ನೇಹದ ಕಗ್ಗೋಲೆ ನೀಡಿದ ನೋವು ಮಾತ್ರ ಸಹಿಸಲಸಾಧ್ಯ. ನನ್ನ ಸಾವಿರ ಸಂದೇಶಗಳಿಗೆ ಒಂದಾಕ್ಕಾದರೂ ಬೈದಾದರೂ ಮಾರುತ್ತರ ಬರೆಯಬಾರದಿತ್ತೆ ಎಂದು ನಾನು ಎಷ್ಟು ಕಾದಿದ್ದೆ. ನಿನ್ನ ಒಂದು ಉತ್ತರ ನನಗೆ ಸಾಕಷ್ಟು ಆಕ್ಸಿಜನ್ ನೀಡಿದೆ.

ನನ್ನೊಂದಿಗಿರುವಾಗ ಅಳುಬುರುಕಿಯಾಗಿದ್ದ ನಿನ್ನಲ್ಲಿ ಇಂತಹ ಕಠೋರ ವ್ಯಕ್ತಿತ್ವ ಎಲ್ಲಿಂದ ಬಂತು. ನಿನಗೆ ಗೊತ್ತೆ ಕಳೆದ ವರ್ಷ ಯುಗಾದಿಯಲ್ಲಿ ನಾನು ಮಾಡಿದ ರೆವಲ್ಯೂಷನ್ ಪಟ್ಟಿಯಲ್ಲಿ ನಿನ್ನನ್ನು ಮರೆಯುವ ಗುರಿಯನ್ನೂ ಸೇರಿಸಿದ್ದೆ. ಮತ್ತೊಂದು ಯುಗಾದಿ ಹತ್ತಿರ ಬಂದರೂ ನಿನ್ನ ನೆನಪು ದೂರ ಸರಿಯುತ್ತಿಲ್ಲ. ಪ್ರತಿ ರಾತ್ರಿ ನಿದ್ದೆಯ ಮುನ್ನದ ಕನಸಿನಲ್ಲಿ ನೀನೇ ಯಾಕೆ ಕಾಡುತ್ತಿ. ನನ್ನ ಪ್ರೀತಿ ನಿನಗೆ ಬರೀ ಕ್ರಷ್ ಆಗಿತ್ತೆ? ಹೇಳೇ ಗೆಳತಿ ನಿನ್ನಲ್ಲಿ ನಿಜವಾಗಿಯೂ ಹೃದಯವಿತ್ತೇ? ಈ ಪತ್ರ ಓದಿ ಮತ್ತೆ ಮೌನಗೌರಿಯಾದರೂ ಮುಂದಿನ ಅನಿವರ್ಸರಿಗೆ ಒಂದು ಸಾಲು ಮರೆಯದಿರು. ಬಿ ಹ್ಯಾಪಿ -ಯುರ್ ಪಾಪಿ

ಪ್ರವೀಣ ಚಂದ್ರ
ಮಂಗಳೂರು ಬಜ್ಜಿ: ಒಂದು ಗೋಳಿಬಜೆ ಪ್ರಸಂಗ

ಮಂಗಳೂರು ಬಜ್ಜಿ: ಒಂದು ಗೋಳಿಬಜೆ ಪ್ರಸಂಗ

ಮೊನ್ನೆ ಬಾನು ತೂತಾದ ಹಾಗೆ ಎರಡು ದಿನ ಬಿಡದೆ ಮಳೆ ಸುರಿಯಿತಲ್ಲ. ಆ ಸಂಜೆಯೊಂದರಲ್ಲಿ ನಾನು ಬಸವನಗುಡಿ ಪಕ್ಕ ಹಾದು ಹೋಗುತ್ತಿದ್ದೆ. ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಮಳೆ ಜೋರಿದ್ದಾಗ ಹಸಿವು ಜಾಸ್ತಿಯಾಗೋದ್ಯಾಕೆ ಅಂತ ಇನ್ನೂ ಅರ್ಥವಾಗಿಲ್ಲ. ಊರಲ್ಲಿಯಾದರೆ ಮಳೆಗೆ ತಿನ್ನಲು ಕುರುಕುರು ಹಲಸಿನ ಹಪ್ಪಳ ಇರುತ್ತಿತ್ತು. ಬೆಂಗಳೂರಲ್ಲಿ ಕುರುಕುರೇ, ಲೇಸ್ ಪ್ಯಾಕೇಟೇ ಗತಿ!


ಅಲ್ಲೇ ಪಕ್ಕದಲ್ಲಿದ್ದ ಹಳ್ಳಿತಿಂಡಿ ಹೋಟೆಲ್ ಪ್ರವೇಶಿಸಿದಾಗ ನನ್ನ ಗಮನಸೆಳೆದದ್ದು ಗೋಳಿಬಜೆ, ಅಂದ್ರೆ ಮಂಗಳೂರು ಬಜ್ಜಿ. ಒಂದನೊಂದು ಕಾಲದಲ್ಲಿ ಅದು ನನ್ನ ಫೇವರಿಟ್ ಡಿಶ್. ಬೆಂಗಳೂರಲ್ಲಿ ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಹೋಟೆಲ್ ನಲ್ಲಿ ಗೋಳಿಬಜೆ ಸಿಗುತ್ತೆ. ಹಾಗೆ ಒಂದು ಪ್ಲೇಟ್ ಮಂಗಳೂರು ಬಜ್ಜಿ ತಿಂದು ಮನೆ ಕಡೆ ಹೊರಟವನಿಗೆ ಯಾಕೋ ಗೋಳಿಬಜೆಯ ಆ ದಿನಗಳು ನೆನಪಾದವು.

ಪೆರ್ನಾಜೆಯಲ್ಲಿ ಹೈಸ್ಕೂಲ್ ಓದುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಸಂಕಪ್ಪಣ್ಣನ ಹೋಟೆಲ್ ಇತ್ತು. ಬುತ್ತಿ ತರದವತ್ತು ಕಿಸೆಯಲ್ಲಿ ಐದ್ರೂಪಾಯಿ ಇಟ್ಟುಕೊಂಡು ಅಲ್ಲಿಗೆ ಹೋಗಿ ಒಂದು ಪ್ಲೇಟ್ ಗೋಳಿಬಜೆ ತಿನ್ನುತ್ತಿದ್ದೆ. ಕ್ರಮೇಣ ಬುತ್ತಿ ತರೋದೆ ನಿಲ್ಲಿಸಿಬಿಟ್ಟೆ. ಬೇಯಿಸಿದ ಕಡಲೆಯ ನೀರಿಗೆ ಉಪ್ಪು, ಮಸಾಲ ಹಾಕಿ ಅದನ್ನೇ ಸಾಂಬಾರು ತರಹ ನೀಡುತ್ತಿದ್ದರು. ಅದರಲ್ಲಿ ಗೋಳಿಬಜೆ ಮುಳುಗಿಸಿ ತಿಂದರೆ ಸಕತ್ ಟೇಸ್ಟು.

ಐದ್ರೂಪಾಯಿಗೆ ಲೆಕ್ಕಮಾಡಿ ಐದು ಗೋಳಿಬಜೆ ಸಿಗುತ್ತಿತ್ತು. ಅಷ್ಟು ದುಡ್ಡಿಗೆ ಮನೆಯಲ್ಲೇ ಐವತ್ತಕ್ಕೂ ಹೆಚ್ಚು ಗೋಳಿಬಜೆ ಮಾಡಬಹುದಂತ ಸ್ನೇಹಿತ ಸುನಿಲ ಹೇಳಿದ್ದು ಕಿವಿಗೆ ಹುಳಬಿಟ್ಟಂತಾಗಿತ್ತು. ಅದೊಂದು ದಿನ ಮನೆಯಲ್ಲೇ ಗೋಳಿಬಜೆ ಮಾಡಲು ನಾನು, ಮಾಮನ ಮಗ ಸೇರಿ ಸ್ಕೆಚ್ ಹಾಕಿದೆವು.

ಅಂದು ಮನೆಯಲ್ಲಿ ಯಾರೂ ಇರಲಿಲ್ಲ. ನಾನು, ಮಾಮನ ಮಗ ಮಾತ್ರ. ಆಗ ಕಣ್ಣಿಗೆ ಬಿದ್ದದ್ದು ದೇವರಕೋಣೆಯಲ್ಲಿ ದೊಡ್ಡ ಬಿಳಿಕ್ಯಾನ್ ನಲ್ಲಿಟ್ಟಿದ್ದ ತೆಂಗಿನ ಎಣ್ಣೆ. ತಕ್ಷಣ ನನಗೆ ಸಂಕಪ್ಪಣ್ಣನ ಹೋಟೆಲ್ ಗೋಳಿಬಜೆ ನೆನಪಾಯಿತು. ಅದನ್ನುಅವನಿಗೆ ಹೇಳಿದ್ದೇ ತಡ, ಅದು ಸುಲಭ. ಮೈದಾ ಇದ್ರೆ ಆಯ್ತು ಅಂದ.

ತಕ್ಷಣ ಪಕ್ಕದ ಅಜ್ಮಿರ್ ನ ಅಂಗಡಿಯಿಂದ ಐದ್ರೂಪಾಯಿಯ ಮೈದಾ ತಂದಾಯ್ತು. ಅದಕ್ಕೆ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಮಿಕ್ಸ್ ಮಾಡಿದೆವು. ಅದು ದೋಸೆ ಹಿಟ್ಟಿನಂತೆ ನೀರಾಯಿತು. ಏನ್ಮಾಡೋದು? ಮತ್ತೆ ಐದ್ರೂಪಾಯಿಯ ಮೈದಾ ತಂದೆವು.

ಗಟ್ಟಿಯಾದ ಹಿಟ್ಟನ್ನು ಚಿಕ್ಕಚಿಕ್ಕ ಉಂಡೆ ಮಾಡಿ ಲೆಕ್ಕ ಮಾಡಿದೆವು. 33 ಉಂಡೆ ಆಗಿದ್ದವು. ಹತ್ರೂಪಾಯಿಗೆ ಇಷ್ಟೊಂದು ಗೋಳಿಬಜೆ ವಾಹ್! ನಾಲಗೆಯಲ್ಲಿ ನೀರು ಜಿನುಗುತ್ತಿತ್ತು. ಅರ್ಧ ಲೀಟರ್ ನಷ್ಟು ತೆಂಗಿನ ಎಣ್ಣೆಯನ್ನು ಬಾಣಲೆಗೆ ಹಾಕಿದೆವು. ಅದು ಸಾಕಾಗದು ಎಣಿಸಿ ಮತ್ತೆ ಸ್ವಲ್ಪ ಎಣ್ಣೆ ಹಾಕಿದೆವು. ಮೈಕೈ ಪೂರ್ತಿ ಬಿಳಿಬಿಳಿ ಹಿಟ್ಟಿನ ಕಲೆಗಳಿದ್ದವು. ನೆಲದಲ್ಲೂ ಅಲ್ಲಲ್ಲಿ ಹಿಟ್ಟು ಬಿದ್ದಿತ್ತು. ಒಟ್ಟಾರೆ ಅಡುಗೆ ಮನೆ ಪೂರ್ತಿ ಸುಣ್ಣ ಚೆಲ್ಲಿದಂತೆ ಇತ್ತು.

ಎಣ್ಣೆ ಬಿಸಿಯಾದಗ ಉಂಡೆ ಉಂಡೆ ಹಿಟ್ಟು ಹಾಕಿದೆವು. ಎಣ್ಣೆಮೇಲಿದ್ದ ಗೋಳಿಬಜೆಗಳನ್ನು ಆಸೆಯಿಂದ ನೋಡತೊಡಗಿದೆವು. ಯಾಕೋ ಸಂಕಪ್ಪಣ್ಣನ ಹೋಟೆಲ್ ಗೋಳಿಬಜೆಯ ಬಣ್ಣಬರಲೇ ಇಲ್ಲ. ಬಣ್ಣ ಯಾವುದಾದರೇನು ಅಂದುಕೊಂಡು ರೆಡಿಯಾದ ಗೋಳಿಬಜೆಯನ್ನು ಬಾಯಿಗೆ ಹಾಕಿನೋಡಿದೆ. ಕಲ್ಲಿನಷ್ಟು ಗಟ್ಟಿಯಾಗಿತ್ತು. ರುಚಿನೇ ಇರಲಿಲ್ಲ. ಗುಡ್ಡಪ್ಪಣ್ಣನ ಹೋಟೆಲ್ ನಲ್ಲಿ ಸ್ಪಾಂಜ್ ತರಹ ಮೃದುವಾದ ಗೋಳಿಬಜೆ ಇರುತ್ತಿತ್ತು.

ತಕ್ಷಣ ಅಂಗಡಿಗೆ ಹೋಗಿ ಮೆಲ್ಲಗೆ ಅಜ್ಮಿರ್ ಬಳಿ ಗೋಳಿಬಜೆ ಮಾಡೋದು ಹೇಗೆ ಅಂತ ಕೇಳಿದೆವು. ಅದಕ್ಕೆ ಕಡ್ಲೆ ಪುಡಿನೂ ಬೇಕು ಅಂತ ಗೊತ್ತಾಯ್ತು. ಮೂರು ರುಪಾಯಿ ಕಡ್ಲೆ ಹುಡಿ ತಂದು ಅದನ್ನೂ ಮಿಕ್ಸ್ ಮಾಡಿದೆವು. ಮತ್ತೊಂದು ಸುತ್ತು ಹಿಟ್ಟಿನ ಉಂಡೆಗಳನ್ನು ಎಣ್ಣೆಗೆ ಹಾಕಿದೆವು. ತೆಗೆದು ನೋಡಿದಾಗ ಮತ್ತೆ ಗಟ್ಟಿಗಟ್ಟಿಯಾಗಿತ್ತು.

ಆಗ ಮಾಮನ ಮಗನಿಗೆ ಸೋಡಾ ಹಾಕಿದಾಗ ಮೃದುವಾಗುವ ಇಡ್ಲಿ ಸಿದ್ದಾಂತ ನೆನಪಾಯಿತು. ತಕ್ಷಣ ಅಡುಗೆಮನೆ ಅಟ್ಟದಲ್ಲಿ ಸೋಡಾದ ಹುಡಿ ಹುಡುಕಿದೆವು. ಕೊನೆಗೂ ಸಿಕ್ತು. ಮೈಕೈನಲ್ಲಿ ಕೊಂಚ ಮಸಿಯೂ ಆಗಿತ್ತು. ಸೋಡಾ ಹಾಕಿ ಮಾಡಿದ ಗೋಲಿಬಜೆ ಕೊಂಚ ಮೃದುವಾಗಿತ್ತು. ಜಾಸ್ತಿ ಸ್ಮೂತ್ ಆಗಲಿ ಅಂತ ಆತ ಸ್ವಲ್ಪ ಜಾಸ್ತಿನೇ ಸೋಡಾ ಪುಡಿ ಹಾಕಿದೆವು. ಮತ್ತೆ ರೆಡಿಯಾದ ಗೋಲಿ ಬಜೆ ಕಹಿಕಹಿಯಾಗಿತ್ತು. ಇಷ್ಟು ಮಾಡುವ ಹೊತ್ತಿಗೆ ಸಂಜೆ ಆಗಿತ್ತು.

ವಾಪಸ್ ಬಂದ ಅಮ್ಮನಿಗೆ ಮನೆ ಅವಸ್ಥೆ ನೋಡಿ ಏನಾನಿಸಿತೋ, ಒಂದು ಲೀಟರ್ ತೆಂಗಿನ ಎಣ್ಣೆ ವ್ಯರ್ಥವಾದ ಚಿಂತೆ ಬೇರೆ. ಅಪ್ಪ ಬರ್ಲಿ, ನಿಂಗೆ ಕಾದಿದೆ ಅಂದ್ರು. ನನಗೆ ಭಯ ಶುರು ಆಯ್ತು. ಮಾಮನ ಮಗ ಎಸ್ಕೇಪ್ ಆಗಿದ್ದ. ಅಷ್ಟೊತ್ತಿಗೆ ನನಗೆ ಹೊಟ್ಟೆನೋವು ಆರಂಭವಾಗಿತ್ತು. ಹೊಟ್ಟೆನೋವು ನೆಪದಿಂದ ಅಪ್ಪನ ಬೈಗುಳ ತಪ್ಪಿತ್ತು.

ಮರುದಿನ ಅಪ್ಪ ಭಟ್ರ ಹೋಟೆಲ್ ನಿಂದ ಗೋಳಿಬಜೆ ತಂದು ಕೊಟ್ರು :-) ನಂತ್ರ ಕೆಲವು ಸಮಯದ ನಂತರ ನಾನು ಅಪ್ಪ, ಅಮ್ಮ ಸೇರಿ ಮನೆಯಲ್ಲಿ ಗೋಳಿಬಜೆ ಮಾಡಿದೆವು. ಅದಕ್ಕೆ ಬಾಳೆಹಣ್ಣು ಸಹ ಹಾಕಿದ್ದರಿಂದ ಸ್ವೀಟಾಗಿತ್ತು........

(ಗೋಳಿಬಜೆ ಮಾಡೋದು ಹೀಗೆ: 4 ಕಪ್ಪು ಮೈದಾಹಿಟ್ಟು, ಅರ್ಧಕಪ್ ಕಡಲೇ ಹಿಟ್ಟು, ಕೊಂಚ ಅಡುಗೆ ಸೋಡ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನ ಕಾಯಿ 3-4 ಮತ್ತು ಬಾಣಲೆಯಲ್ಲಿ ಗೋಳಿಬಜೆ ಮುಳುಗುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಬೇಕು.

ಮೈದಾಹಿಟ್ಟು, ಕಡಲೇ ಹಿಟ್ಟು, ಸ್ವಲ್ಪ ಸೋಡಾ ಎಲ್ಲವನ್ನು ಕೊಂಚ ನೀರು ಹಾಕಿ ಮಿಕ್ಸ್ ಮಾಡಿ ಕಲಸಬೇಕು. ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ. ಸ್ವೀಟಾಗಬೇಕು ಅಂದರೆ ಸ್ವಲ್ಪ ಸಕ್ಕರೆ ಅಥವಾ ಒಂದೆರಡು ಬಾಳೆಹಣ್ಣು ಹಾಕಬಹುದು. ಇವೆಲ್ಲ ಹಾಕಿ ರೆಡಿಯಾದ ಹಿಟ್ಟನ್ನು ಉಂಡೆ ಮಾಡಿ ಕಾದ ಎಣ್ಣೆಗೆ ಹಾಕಿ. ಗೋಳಿಬಜೆ ರೆಡಿ :-) )
ಲಾವಣ್ಯ ಎಂಬ ಬಾಲ್ಯದ ಗೆಳತಿ

ಲಾವಣ್ಯ ಎಂಬ ಬಾಲ್ಯದ ಗೆಳತಿ

ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ

`ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ ಕೇಳಿ ಆಮೇಲೆ `ಅವಳಿಗೆ ಮದುವೆಯಾಗಿದೆ. ಗಂಡ ಮಿಲಿಟರಿಯಲ್ಲಿದ್ದಾನೆ’ ಅನ್ನೋ ಬಾಂಬ್‌ ಕೂಡ ಹಾಕಿದಳು. ಆದರೆ ಆ ಬಾಂಬ್‌ ಸ್ಪೋಟಗೊಂಡಿರಲಿಲ್ಲ.

ಯಾಕೆಂದರೆ ಅದು ನನ್ನ ಐದನೇ ಕ್ಲಾಸ್‌ನಲ್ಲಿ ನಡೆದ ಲವ್‌!ಹೌದು. ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು. ನನ್ನ ತಂದೆ ಮದುವೆಯಾದ ನಂತರ ಮಡಿಕೇರಿ ಎಂಬ ಊರನ್ನು ಬಿಟ್ಟು ಪುತ್ತೂರಲ್ಲಿ ನೆಲೆ ನಿಂತವರು. ಹೀಗಾಗಿ ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತನೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ. ಹೀಗೆ ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ.

ಆ ಮನೆಯ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು. ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಆದರೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು. ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಒಂದಿಷ್ಟು ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಚಡ್ಡಿ, ಕಿವಿಯಲ್ಲಿ ಪುಟ್ಟದಾದ ಎರಡು ಓಲೆಗಳು. ಬಿಳಿ ಬಣ್ಣ. ಮುದ್ದು ಮುಖ. ಕ್ಷಮಿಸಿ ಹೆಚ್ಚು ನೆನಪಿಲ್ಲ!ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದ ನನ್ನದ್ದು ಉದ್ದಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ. ಅದೊಂದು ದಿನ ಮನೆಯಲ್ಲಿ ಯಾರಿಲ್ಲ ಅಂತ ತಿಳಿದುಕೊಂಡು ನಾವಿಬ್ಬರು ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದೇವು. ಅದು ಏನು ಗೊತ್ತಾ? ನಮ್ಮ ಮದುವೆಯ ವಿಷ್ಯ! ನಾವು ಮದುವೆಯಾಗೋಣ. ಜೀವನ ಪೂರ್ತಿ ಒಟ್ಟಿಗೇ ಇರೋಣ, ನಾನು ನಿನ್ನನ್ನು ಕೊನೆವರೆಗೂ ಜೊತೆಯಾಗಿರ್ತಿನಿ, ಮದುವೆಯಾದ್ಮೆಲೆ ಜಗಳವಾಡಬಾರದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು….

ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು. ಆಮೇಲೆ ಏನೋ ಜ್ಞಾನೋದಯವಾದಂತೆ `ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ. ಹೀಗೆ ತುಂಬಾ ಮುಗ್ಧವಾಗಿ ಮಾತನಾಡುತ್ತಿದ್ದೇವು.ಹೀಗೆ ಆ ಜಗಲಿಯ ಮಾತು ಮುಗಿಸಿ ಮತ್ತೆ ಆಡಲು ಗದ್ದೆ ಬದಿಗೆ ಹೋದೆವು.

ಆಮೇಲೆ ಸಂಜೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ನಗಾಡುತ್ತಾ ಮಾತನಾಡುತ್ತಿದ್ದರು.ಆಮೇಲೆ ಗೊತ್ತಾಯಿತು. ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಅಜ್ಜಿ ಒಳಗೆ ಮಲಗಿಕೊಂಡಿದ್ದಾರಂತೆ. ಅವರೆಲ್ಲ ನಾವು ಹೇಳಿದ ರೀತಿಯೇ ಹೇಳಿ ನಗುತ್ತಿದ್ದರು.

ಆಮೇಲೆ ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ನಾನು ಅಳಲಿಲ್ಲ.

😮
ಅವನು ನಂಗೆ ಇಷ್ಟವಿಲ್ಲ ಕಣೇ…!!!

ಅವನು ನಂಗೆ ಇಷ್ಟವಿಲ್ಲ ಕಣೇ…!!!

ಹೇ ಅವನು ನನಗೆ ಇಷ್ಟವಿಲ್ಲ ಕಣೇ’

ಶ್ರಾವ್ಯಳ ಮಾತಿಗೆ ರಂಜಿತ ಬೆಚ್ಚಿಕೇಳಿದಳು.

`ಹೇ ಏನಾಗಿದೆ ನಿನಗೆ. ನಿನ್ನೆ ನಿನ್ನ ಎಂಗೇಜ್‌ಮೆಂಟ್‌ ಆಯ್ತು. ಅವತ್ತೇ ಹೇಳಬೇಕಿತ್ತು.. ನೀನು ಒಪ್ಪಿದರಿಂದ ತಾನೇ ಮದುವೆ ಫಿಕ್ಸ್‌ ಮಾಡಿದ್ದು. ಯಾಕೋ ಅಷ್ಟ ಚಂದದ ಹುಡುಗ ನಿನಗೆ ಬೇಡ್ವ?’

ಅದಕ್ಕೆ ಶ್ರಾವ್ಯ `ಸುಮ್ನಿರೇ, ನಂಗೆ ಬೆಂಗಳೂರು ಹುಡುಗ ಇಷ್ಟವಿಲ್ಲ. ಈ ಊರು ಬಿಟ್ಟು ಅಲ್ಲಿಗೆ ಹೋಗಬೇಕಾ? ಅಪ್ಪ ಅಮ್ಮನ ಒತ್ತಾಯಕ್ಕೆ ಹೂಂ ಅಂದದ್ದು’

`ನಂಗೊತ್ತಿಲ್ಲ ಏನಾದರೂ ಮಾಡ್ಕೊ’ ಅಂತ ರಂಜಿತ ಎದ್ದು ಹೋಗಲು ನೋಡಿದಾಗ ಅವಳ ಕೈ ಹಿಡಿದೆಳೆದ ಶ್ರಾವ್ಯ `ಹೇ, ರಂಜಿ ಏನಾದರೂ ಐಡಿಯಾ ಹೇಳೇ’ ಅಂದಳು.

ಅವಳ ಮಾತಿಗೆ `ಇದಕ್ಕೆ ಏನು ಮಾಡೋದಪ್ಪ’ ಅಂತ ತಲೆಕೆಡಿಸಿಕೊಳ್ಳುತ್ತ ಅಲ್ಲೇ ಕುಳಿತುಕೊಳ್ಳುತ್ತ ಯೋಚಿಸಿದಳು. `ಹೇ ಹೀಗೆ ಮಾಡು. ನಿನ್ನ ಅಮ್ಮನಲ್ಲಿ ಹೇಳು’

`ಬೇಡ ಅದು ಬೇಡ. ಬೇರೆ ಉಪಾಯ ಹೇಳು’ ಅದಕ್ಕೆ ರಂಜಿತ ಮತ್ತೆ ಸ್ವಲ್ಪ ಹೊತ್ತು ಯೋಚಿಸಿದಳು.

`ನೀನು ನಿನ್ನ ಭಾವಿ ಪತಿಗೆ ಫೋನ್‌ ಮಾಡಿ ಹೇಳು. ಹುಡುಗರಿಗೆ ಬೇಗ ಅರ್ಥವಾಗುತ್ತದೆ’ ಅದಕ್ಕೆ ಶ್ರಾವ್ಯ `ನಂಗೆ ಭಯ ಆಗುತ್ತೆ’ ಕೊನೆಗೆ ರಂಜಿತಳ ಒತ್ತಾಯಕ್ಕೆ ಶಶಾಂಕನಿಗೆ ಫೋನ್‌ ಮಾಡಲು ಒಪ್ಪಿದಳು.

ನಿನ್ನ ನಂಬರ್‌ ಅವನಲ್ಲಿ ಇರುತ್ತೆ. ನನ್ನ ಮೊಬೈಲ್‌ನಿಂದ ಮಾಡು ಅಂತ ರಂಜಿತ ತನ್ನ ಮೊಬೈಲ್‌ ಕೊಟ್ಟಳು.`ಹೇ ಅವನು ರಿಸೀವ್‌ ಮಾಡ್ತಾ ಇಲ್ಲ’ ಶ್ರಾವ್ಯ ನಿರಾಸೆಯ ಧ್ವನಿಯಲ್ಲಿ ಹೇಳಿದಳು.`ಹುಂ. ಈಗ 9 ಗಂಟೆ, ಬ್ಯುಸಿ ಇರಬೇಕು. ಆಮೇಲೆ ಟ್ರೈ ಮಾಡು.. ಮೊಬೈಲ್‌ ನಿನ್ನಲ್ಲಿ ಇರಲಿ. ಆಮೇಲೆ ಸಿಗ್ತಿನಿ’ ಅಂತ ಹೇಳಿ ರಂಜಿತ ಹೊರಹೋದಳು.

***
ಮುಂಜಾನೆ 9 ಗಂಟೆಗೆ(ಅವನು ನಿತ್ಯ ಎದ್ದೇಳುವ ಸಮಯ)ಎದ್ದಾಗ ಮೊಬೈಲ್‌ನಲ್ಲಿ ಮಿಸ್‌ಕಾಲ್‌ ಇತ್ತು. ತೆರೆದು ನೋಡಿದರೆ ಯಾವುದೋ ಅಪರಿಚಿತ ನಂಬರ್‌.

ಶಶಾಂಕ್‌ ಆ ನಂಬರ್‌ಗೆ ಫೋನ್‌ ಮಾಡಿದ.

ಹಲೋ ಯಾರು? ಅಂದ.

ಈ ಕಡೆಯಲ್ಲಿದ್ದ ಶ್ರಾವ್ಯಳಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಮದುವೆ ಇಷ್ಟ ಇಲ್ಲ ಅಂತ ಹೇಳಲು ಧೈರ್ಯನೂ ಬರಲಿಲ್ಲ. ಸುಮ್ಮನೆ ರಾಂಗ್‌ ನಂಬರ್‌ ಅಂತ ಹೇಳಿದ್ರೆ ಆಯ್ತು ಅಂತ ಮನಸ್ಸಿನಲ್ಲಿಯೇ ಅಂದುಕೊಂಡಳು.

‘ನಾನು ಸ್ವಾತಿ` ಅಂದಳು.

ಇವನು ತಲೆಕೆರೆದುಕೊಂಡ ‘ಯಾವ ಸ್ವಾತಿ ಮುತ್ತು’

ಅವಳು ಕಿಲಕಿಲನೆ ನಕ್ಕಳು.

ಆಮೇಲೆ ಶ್ರಾವ್ಯ ಕೇಳಿದಳು.`ನೀವು ರಮೇಶ್‌ ಅಲ್ವ’

ಯಾವ ರಮೇಶ್‌.

ಅದಕ್ಕೆ ಅವಳು `ರಮೇಶಣ್ಣ ?ಅಂದಳು.

ಅಲ್ಲ ನಾನು ಶಶಾಂಕ್‌.

ಓಹ್‌ ರಾಂಗ್‌ ನಂಬರ್‌. ಸಾರಿ.

ಅದಕ್ಕೆ ಇವನು ತುಂಟಧ್ವನಿಯಲ್ಲಿ ಥ್ಯಾಂಕ್ಸ್‌ ಅಂದ.

ಯಾಕೆ ಥ್ಯಾಂಕ್ಸ್‌ ? ಅವಳದ್ದು ಮರುಪ್ರಶ್ನೆ.

ಇವನು ಸುಮ್ಮಗೆ ಅಂತ ಹೇಳಿ ನಕ್ಕ.

ಯಾಕೆ ಥ್ಯಾಂಕ್ಸ್‌ ಹೇಳಿದ್ದು ಹೇಳಿ? ಅವಳು ಕಾಡುವ ಧ್ವನಿಯಲ್ಲಿ ಕೇಳಿದಳು.

`ಬೆಳಗ್ಗೆ ನಿಮ್ಮ ಮುದ್ದಾದ ಧ್ವನಿಯ ಸುಪ್ರಭಾತದಿಂದ ನನ್ನ ಎಬ್ಬಿಸಿದಕ್ಕೆ` ಅಂದ.

`ಇಷ್ಟು ಹೊತ್ತಿನವರೆಗೆ ಮಲಗುತ್ತೀರಾ?’ ಆಶ್ಚರ್ಯದಿಂದ ಕೇಳಿದಳು.

‘ಹುಂ. ನನ್ನ ಟೈಮಿಂಗ್ಸ್‌ ಹಾಗೇ’ಅವಳು

`ಲೂಸ್‌’ ಅಂತ ಹೇಳಿ ಫೋನ್‌ ಇಟ್ಟಳು.

***ಫೋನ್‌ ಇಟ್ಟಮೇಲೆ ಶ್ರಾವ್ಯಳಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನಿನ್ನೆ ಎಂಗೇಜ್‌ಮೆಂಟ್‌ ಕಳೆದರೂ ಅವನಲ್ಲಿ ಮನಬಿಚ್ಚಿ ಮಾತನಾಡಿರಲಿಲ್ಲ. ಈಗ ಫೋನ್‌ನಲ್ಲಿ ಆತನ ತುಂಟ ಧ್ವನಿ ಕೇಳಿ ಇವಳು ಖುಷಿ ಪಟ್ಟದ್ದು ನಿಜ. ಹೀಗೆ ಏನೋ ಯೋಚಿಸುತ್ತ ಕುಳಿತಾಗ ರಂಜಿತ ಬಂದಳು.

`ಏನಾಯ್ತೆ?’ ಅಂತ ಅವಳು ಕೇಳಿದ್ದಕ್ಕೆ ಇವಳು ನಗುತ್ತ ಫೋನ್‌ನಲ್ಲಿ ಮಾತನಾಡಿದ್ದನ್ನು ಹೇಳಿದಳು.

ರಂಜಿತ ನಗಲಿಲ್ಲ. ಗಂಭೀರವಾದ ಧ್ವನಿಯಲ್ಲಿ `ಏ ನಿನ್ನ ಭಾವಿಪತಿ ಬಗ್ಗೆ ನಾನು ಹೀಗೆ ಹೇಳಿದ್ದಕ್ಕೆ ಬೇಜಾರು ಮಾಡ್ಕೊಬೇಡ. ನನಗೆನಿಸುತ್ತೆ. ಅವನ್ಯಾರೋ ದೊಡ್ಡ ಫ್ಲರ್ಟ್‌ ಅಂತ’

ನಗುತ್ತಿದ್ದಶ್ರಾವ್ಯ ಒಮ್ಮೆಗೆ ಗಂಭೀರವಾದಳು. `ಹೇ ಹಾಗೇ ಏನು ಮಾತನಾಡಲಿಲ್ಲ ಕಣೇ ಅವರು’ ಅಂತ ಅವನ ಪರವಾಗಿ ಮಾತನಾಡಿದಳು.

ಯಾಕೋ ಅವನನ್ನು ಫ್ಲರ್ಟ್‌ ಅಂತ ಒಪ್ಪಿಕೊಳ್ಳೋಕೆ ಅವಳಿಗೆ ಮನಸ್ಸು ಬರಲಿಲ್ಲ.

ಸರಿ ನಾನು ಹೇಳಿದ ಹಾಗೇ ಕೇಳ್ತಿಯಾ? ರಂಜಿತಳದ್ದು ಮರುಪ್ರಶ್ನೆ

ಹುಂ ಹೇಳು.`ನೀನು ಅವನನ್ನು ಟೆಸ್ಟ್‌ ಮಾಡು’ ಅದಕ್ಕೆ ಶ್ರಾವ್ಯ

`ಟೆಸ್ಟಾ’ ಅಂತ ಅಚ್ಚರಿಯಿಂದ ಕೇಳಿದಳು.

‘ಹೌದು. ನೀನು ಸುಮ್ಮನೆ ಅವರಿಗೆ ಮೆಸೆಜ್‌ ಮಾಡು. ಹಾಯ್‌ ಅಂತ’

ಶ್ರಾವ್ಯಗೆ ಇದ್ಯಾಕೋ ಇಂಟ್ರೆಸ್ಟಿಂಗ್‌ ಅನಿಸ್ತು. ಮೆಸೆಜ್‌ನಲ್ಲಿ ಹಾಯ್‌ ಅಂತ ಕಳಿಸಿದಳು.

ಸ್ವಲ್ಪ ಹೊತ್ತು ಕಳೆದಾಗ ಶಶಾಂಕ್‌ನಿಂದಾಲೂ `ಹಾಯ್‌’ ಅಂತ ಬಂತು.`ಕಾಲ್‌ ಮಿ’ ಅಂತ ಕಳಿಸು ಅಂತ ರಂಜಿತಾ ಹೇಳಿದಾಗ ಹಾಗೇ ಬರೆದು ಕಳಿಸಿದಳು. ಆಮೇಲೆ ರಂಜಿತ ಶ್ರಾವ್ಯಗೆ ಪಾಠ ಸುರು ಮಾಡಿದಳು. `ನೋಡು ಅವನೀಗ ಲವ್‌ನಲ್ಲಿ ಬೀಳೋ ತರಹ ನೀನು ಮಾತನಾಡಬೇಕು. ನಿಮ್ಮ ಧ್ವನಿ ನಂಗೆ ಇಷ್ಟ, ಹೀಗೆ ಏನಾದ್ರು ಹೇಳು. ನಿಂಗೆ ಹೇಳಿಕೊಡುವ ಅಗತ್ಯವಿಲ್ಲ ಅಲ್ವ…..

***

ಆಫೀಸ್‌ಗೆ ಹೋಗೋಕೆ ಇನ್ನೂ ಸಮಯವಿದ್ದರಿಂದ ಶಶಾಂಕ ಟಿವಿ ನೋಡುತ್ತ ಕುಳಿತಿದ್ದ..

ಆಗ ಆಫೀಸ್‌ನಿಂದ ಪ್ರಾಜೆಕ್ಟ್‌ನಲ್ಲಿ ಏನೋ ತಪ್ಪಾಗಿರೋ ಕುರಿತು ಬಾಸ್‌ ಫೋನ್‌ ಮಾಡಿ ಕಿರಿಕಿರಿ ಮಾಡಿದ್ರು. ಆತನ ತಲೆಕೆಟ್ಟು ಹೋಗಿತ್ತು ಆಗ ಬಂತು ಸ್ವಾತಿಯ `ಕಾಲ್‌ಮಿ ‘ಮೆಸೆಜ್‌.

ಅವಳಿಗೆ ಕಾಲ್‌ ಮಾಡಿ `ಹೇಳಿ ಮೇಡಂ’ ಅಂತ ಗಂಭೀರವಾಗಿ ಹೇಳಿದ.

`ಸುಮ್ಮಗೆ ಕಾಲ್‌ ಮಾಡಿದ್ದು’ ಅಂತ ಅವಳ ಪೆಚ್ಚು ಮಾತಿಗೆ .

`ಏನ್ರಿ ಮಾಡೋಕೆ ಏನು ಕೆಲಸವಿಲ್ವ? ಏನಂದುಕೊಂಡಿದ್ದಿರಾ?’

ಇವನ ಬಯ್ಗುಳ ಕೇಳಿದ ಶ್ರಾವ್ಯಗೆ ರಂಜಿತ ಮಾಡಿದ ಪಾಠವೆಲ್ಲ ಮರೆತೋಯ್ತು.

`ಅದು ಅದು’ ಅಂತ ಪೇಚಾಡಿದಳು.

ಅಲ್ಲ ಅಪರಿಚಿತ ಹುಡುಗರಿಗೆ ಕಾಲ್‌ ಮಾಡ್ತಿರಲ್ವ. ಇಷ್ಟು ಧೈರ್ಯ ಹುಡುಗಿರಿಗೆ ಇರಬಾರದು’ಶಶಾಂಕನ ಇಂತಹ ಬೈಯ್ಗುಳ ಕೇಳಿ ಶ್ರಾವ್ಯಗೆ ಅಳು ಬರೋದಷ್ಟೇ ಬಾಕಿ.

`ಹಾಗಲ್ಲ ಸರ್‌ ಅದು.. ‘ಅಂತ ಮತ್ತೆ ತಡವರಿಸಿದಳು.

ಈಗ ಶಶಾಂಕ್‌ ಕೂಲಾಗಿ ಹೇಳಿದ. `ನೋಡಮ್ಮ ನೀನ್ಯಾರು ಅಂತ ನಂಗೊತ್ತಿಲ್ಲ. ನಿಂಗೂ ನಾನ್ಯಾರು ಅಂತ ಗೊತ್ತಿಲ್ಲ. ಹೀಗೆಲ್ಲ ಮಾಡಬಾರದು’

`ಸಾರ್‌  ನಾನು ಸುಮ್ಮನೆ ಮಾಡಿದ್ದು. ಯಾಕೋ ಬೋರಾಗಿತ್ತು. ಅದಕ್ಕೆ’ ಅಂತ ಹೇಳಿ ಅವನು ಏನು ಹೇಳ್ತಾನೆ ಅಂತ ಕೇಳದೇ ಫೋನ್‌ ಕಟ್‌ ಮಾಡಿದಳು.

***

ಫೋನ್‌ ಕಟ್ಟಾದಾಗ ಶಶಾಂಕ ಯೋಚಿಸಿದ.

ನಾನು ಹೇಳಿದ್ದು ಹೆಚ್ಚಾಯಿತಾ. ಪಾಪ ಹುಡುಗಿ ಭಯಪಟ್ಟಳಾ ಹೇಗೆ? ಅಂತ ಒಂದು ಮನಸ್ಸು ಹೇಳಿದರೆ, ಇಲ್ಲ ಇದನ್ನು ಮುಂದುವರೆಸಬಾರದು. ಅಂತ ಇನ್ನೊಂದು ಮನಸ್ಸು ಹೇಳಿತು.ಆಗ ಮತ್ತೆ ಶ್ರಾವ್ಯಳ `ಸಾರಿ’ ಎಂಬ ಮೆಸೆಜ್‌ ಬಂತು.`ಪರವಾಗಿಲ್ಲ. ಏನೋ ಟೆನ್ಷನ್‌ನಲ್ಲಿದ್ದೆ.. ಬೇಜಾರು ಮಾಡ್ಕೊಬೇಡಿ’ ಅಂತ ಮಾರುತ್ತರ ಕಳಿಸಿದ.

`ಬೆಳ್ಳಗೆ ಅಷ್ಟು ಚೆನ್ನಾಗಿ ಮಾತನಾಡಿದಿರಿ’ ಇವಳು ಮಾರುತ್ತರ ಕಳಿಸಿದಳು. ಹೀಗೆ ಇವರ ಚಾಟಿಂಗ್‌ ಮುಂದುವರೆಯಿತು. ಹೀಗೆ ಶಶಾಂಕನ ಸ್ನೇಹ ಗಳಿಸಿಕೊಳ್ಳುವಲ್ಲಿ ಶ್ರಾವ್ಯ ಯಶಸ್ವಿಯಾದಳು.

ಆದರೆ ಅವನನ್ನು ಪ್ರೀತಿಯ ಬಲೆಗೆ ಬೀಳಿಸಲು ಅವಳಿಂದ ಸಾಧ್ಯವಾಗಲಿಲ್ಲ. ಅದೊಂದು ದಿನ `ನಿಮಗೆ ನನ್ನ ಮೇಲೆ ಯಾವ ಅಭಿಪ್ರಾಯ ಇದೆ’ ಅಂತ ಅಳುಕುತ್ತ ಕೇಳಿದಳು.

`ಅಂದ್ರೆ’

‘ಏನಿಲ್ಲ ಸುಮ್ಮಗೆ ಕೇಳಿದೆ’

‘ನೋಡು ಸ್ವಾತಿ ತಪ್ಪು ತಿಳಿದುಕೊಳ್ಳಬೇಡ. nange ಎಂಗೇಜ್‌ಮೆಂಟ್‌ ಆಗಿದೆ. ಮುಂದಿನ ತಿಂಗಳು ಮದುವೆ’ ಅಂತ ಶಶಾಂಕ ಹೇಳಿದಾಗ ಇವಳಿಗೂ ಕಿಟಲೆ ಮಾಡಬೇಕೆನಿಸಿತು.

`ಮುಂದಿನ ತಿಂಗಳು ಮದುವೆನಾ?’ ಇವಳು ಆಶ್ಚರ್ಯ ವ್ಯಕ್ತಪಡಿಸುತ್ತ ಕೇಳಿದಳು.

`ಹುಂ. ನಿನ್ನನ್ನೂ ಕರೀತಿನಿ’ ಇವನ ಮಾತಿಗೆ ಅವಳು ನಗುತ್ತ ಕೇಳಿದಳು.

`ಹೇಗಿದ್ದಾಳೆ ಸರ್‌ ನಿಮ್‌ ಹುಡುಗಿ’ `ಸೂಪರ್‌’ ಅಂತ ಹೇಳಿ ಶಶಾಂಕ ನಕ್ಕಾಗ ಶ್ರಾವ್ಯಳ ಎದೆಯಲ್ಲಿ ಅವ್ಯಕ್ತ ಭಾವವೊಂದು ಹಾದು ಹೊಯಿತು.

`ಲವ್‌ ಮಾಡಿ ಮದುವೆಯಾಗ್ತ ಇದ್ದಿರಾ?’ ಇವಳ ಅಧಿಕಪ್ರಸಂಗದ ಪ್ರಶ್ನೆಗೆ ಅವನು ಕೋಪಗೊಳ್ಳದೇ ಹೇಳಿದ.

`ಹುಂ ಒಂದು ರೀತಿಯಲ್ಲಿ ಲವ್‌ ಮ್ಯಾರೇಜೇ, ನಾನು ಅವಳನ್ನು ಕಳೆದ ವರ್ಷನೇ ಇಷ್ಟಪಟ್ಟಿದ್ದೆ. ಇವತ್ತಿಗೂ ಹೇಳಿಲ್ಲ’ ಮಾರ್ಮಿಕವಾಗಿ ಹೇಳಿದಾಗ ಶ್ರಾವ್ಯಗೆ ಅಚ್ಚರಿ.

`ಏನು ನೀವು ಅವಳನ್ನು ಲವ್‌ ಮಾಡಿದ್ರ. ಇನ್ನೂ ಹೇಳಿಲ್ವ. ಹಾಗಾದ್ರೆ ಎಂಗೇಜ್‌ಮೆಂಟ್‌?’

`ಹೌದು ನಾನು ಅವಳನ್ನು ಪ್ರೀತಿಸತೊಡಗಿ ಒಂದು ವರ್ಷ ಆಯ್ತು. ಆದ್ರೆ ಹೇಳೋಕೆ ಧೈರ್ಯ ಇರಲಿಲ್ಲ. ಕೊನೆಗೆ ಉಪಾಯ ಮಾಡಿ ಮನೆಯಲ್ಲಿ ಇನ್‌ಡೈರೆಕ್ಟ್‌ ಆಗಿ ತಿಳಿಸಿದೆ. ಮನೆಯವರು ಸಂಪ್ರದಾಯ ಪ್ರಕಾರ ಹೋಗಿ ಹೆಣ್ಣು ಕೇಳಿದ್ರು. ನಾನು ಡೀಸಂಟ್‌ ಆಗಿ ಹೆಣ್ಣು ನೋಡೋ ಕಾರ್ಯ ಮುಗಿಸಿದೆ. ಅವಳಿಗೆ ನನ್ನ ಲವ್‌ ಸ್ಟೋರಿ ಇನ್ನೂ ಗೊತ್ತಿಲ್ಲ. ಹ್ಹ..ಹ್ಹ’ ಅಂತ ಇವನು ಹೇಳಿದಾಗ ಶ್ರಾವ್ಯಳ ಮುಖಕ್ಕೆ ರಕ್ತ ನುಗ್ಗಿತ್ತು.

ಆದರೂ ಸುಮ್ಮಗೆ ನಗುತ್ತ `ವೆರಿ ಇಂಟ್ರೆಸ್ಟಿಂಗ್‌” ಅಂತ ನಕ್ಕಳು.

`ಹುಂ. ಸುಮ್ಮಗೆ ನಿಮ್ಮ ತಲೆ ತಿಂದೆ. ಮದುವೆಗೆ ಕಾಲ್‌ ಮಾಡ್ತಿನಿ. ಖಂಡಿತಾ ಬನ್ನಿ. ಬಾಯ್‌’

ಶ್ರಾವ್ಯ ಬಾಯ್‌ ಹೇಳಿ ಫೋನ್‌ ಕಟ್‌ ಮಾಡಿದಳು

.ಆಮೇಲೆ `ರಂಜಿತಾ ಇದಕ್ಕಿಂತ ಒಳ್ಳೆ ಆಫರ್‌ ಇರೋ ಬೇರೆ ಸಿಮ್‌ ತಗೋ’ ಅಂದಳು. ಅದರಲ್ಲಿರುವ ಎಲ್ಲ ಕಾಂಟ್ಯಾಕ್ಟ್‌ಗಳನ್ನು ನಿನ್ನ ಫೋನ್‌ಗೆ ಹಾಕಿಕೊ’ ಅಂತ ಹೇಳಿದಳು.`ಸರಿ ಹಾಕ್ತಿನಿ. ಯಾಕೆ ಅಂತ ಹೇಳು ಅಂದಾಗ `ಹೇ ಅವರು ನಂಗೆ ಇಷ್ಟವಾಗಿದ್ದಾರೆ ಕಣೇ. ನಾವು ಫೋನ್‌ ಮಾಡಿದ್ದು ಅಂತ ಅವರಿಗೆ ಗೊತ್ತಾಗೋದು ಬೇಡ’ ಅಂತ ತುಸು ನಾಚಿಕೆಯಿಂದ ಹೇಳಿದಳು.

‘ಹೇ ಗುಡ್‌, ಅವರಲ್ಲಿ ಇಷ್ಟ ಇಲ್ಲ ಅಂತ ಹೇಳೋಕೆ ಹೋಗಿ ಬೌಲ್ಡ್‌ ಆದೆಯಾ ಹ್ಹ ಹ್ಹ’ ರಂಜಿತ ಜೋರಾಗಿ ನಗತೊಡಗಿದಳು.

ಶ್ರಾವ್ಯಳ ಮುಖ ಕೆಂಪಗಾಗತೊಡಗಿತು.

 

 
ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

ಏಕ್ ರೆಗ್ಯುಲರ್, ದೋ ಸ್ಮಾಲ್” ಧ್ವನಿ ಕೇಳಿದಾಕ್ಷಣ ಮುಖ ಮೇಲೆ ಎತ್ತದೆಯೇ ಮೂರು ಸಿಗರೇಟುಗಳನ್ನು ಮುಂದಿಟ್ಟ ಪಾನ್ ಅಂಗಡಿಯ ಹುಳುಕು ಹಲ್ಲಿನ ಹುಡುಗ.

ಸ್ಮಂಜಿಗೆ ನೋವಾಗುತ್ತೋ ಎಂಬಂತೆ ಮೆಲ್ಲಗೆ ಸಿಗರೇಟ್ ಬಾಯಿಯೊಳಗಿಟ್ಟು ಅಂಗಡಿಯ ಹರಕು ಡಬ್ಬದ ಮೇಲೆ ಇಟ್ಟಿದ್ದ ಬೆಂಕಿಪೊಟ್ಟಣವನ್ನು ಜೀವನ್ ಕೈಗೆತ್ತಿಕೊಂಡಾಗ ಕಿರಣ್ ಕೂಡ ಸಿಗರೇಟ್ ಬಾಯಲ್ಲಿಟ್ಟುಕೊಂಡು ರೆಡಿಯಾದ.

ತನ್ನ ಸಿಗರೇಟಿನ ಮುಂಭಾಗಕ್ಕೆ ಬೆಂಕಿಯಿಟ್ಟು ಕಿರಣ್ ಸಿಗರೇಟಿಗೂ ಜೀವನ್ ಬೆಂಕಿ ಕೊಟ್ಟಾಗ ಪಕ್ಕದಲ್ಲಿದ್ದ ಶ್ರಾವಣ್ ಕೂಡ ಬಾಯಲ್ಲಿ ಸಿಗರೇಟ್ ಇಟ್ಟು ಬೆಂಕಿ ಹತ್ತಿಸಿಕೊಳ್ಳಲು ನೋಡಿದ.

ಅರ್ಧ ಉರಿದ ಕಡ್ಡಿಯಲ್ಲಿ ಜೋರಾಗಿ ಪ್ರಜ್ವಲಿಸುತ್ತಿದ್ದ ಬೆಂಕಿಯನ್ನು ಜೀವನ್ ಊದಲು ಪ್ರಯತ್ನಿಸಿದಾಗ ಬಿಡದೆ ಅದೇ ಕಡ್ಡಿಯಲ್ಲಿ ಶ್ರಾವಣ್ ಸಿಗರೇಟ್ ಹಚ್ಚಿಸಿಕೊಂಡ.

ತಕ್ಷಣ ಮುಖ ಸಿಂಡರಿಸಿ ಜೀವನ್ “ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು ಕಣೋ” ಅಂದ.

ಪಕ್ಕದಲ್ಲಿದ್ದ ಕಿರಣ್ ಜೋರಾಗಿ ನಕ್ಕು “ಮೂವರು ಹೊತ್ತಿಸ್ಕೊಂಡ್ರೆ ಏನಾಗುತ್ತೆ” ಎಂದು ಪ್ರಶ್ನಿಸಿದ.

“ಮೂವರು ಒಂದೇ ಕಡ್ಡಿಯಿಂದ ಸಿಗರೇಟ್ ಹಚ್ಚಿಸ್ಕೊಂಡ್ರೆ ಅವರ ನಡುವೆ ಮನಸ್ತಾಪ ಆಗುತ್ತೆ” ವೇದಂತಿಯಂತೆ ನುಡಿದ ಜೀವನ್ ಕಡೆಗೊಮ್ಮೆ ಹೊಗೆ ಬಿಟ್ಟು ಜೋರಾಗಿ ನಕ್ಕುಬಿಟ್ಟ ಕಿರಣ್.

“ನೋಡಪ್ಪ ಕೆಲವು ನಂಬಿಕೆಗಳು ಇರುತ್ತೆ. ನಿಂಗೊತ್ತ ಲವರ್ರಿಗೆ ಪೆನ್ ಗಿಫ್ಟ್ ಕೊಡ್ಬಾರ್ದು, ಗಾಜಿನ ವಸ್ತು ಉಡುಗೊರೆ ಕೊಡ್ಬಾರ್ದು… ಹಿಂಗೆ ತುಂಬಾ ನಂಬಿಕೆಗಳು ಇದೆ. ಅದೆಲ್ಲ ಅನುಭವಕ್ಕೆ ಬಂದ್ಮೆಲೆ ಗೊತ್ತಾಗೋದು.. ” ಎಂದು ಹೇಳಿ ಜೀವನ್ ಯಾವುದೋ ಯೋಚನೆಯಲ್ಲಿ ಮುಳುಗಿದ.

“ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು ಅನ್ನೊ ಮಾತಿನ ಸತ್ಯ ಏನಂತ ನಿಂಗೊತ್ತ?” ಎಂದು ಪ್ರಶ್ನಿಸಿದ ಕಿರಣ್ ಕಡೆಗೆ ನೋಡಿ ದೀರ್ಘವಾಗಿ ಹೊಗೆ ಒಳಗೆ ಎಳೆದುಕೊಂಡು “ಏನು” ಎಂದು ಶ್ರಾವಣ್ ಪ್ರಶ್ನಿಸಿದ.

ಕಿರಣ್ ಬುದ್ದಿಜೀವಿಯಂತೆ ಮುಖಮಾಡಿ ಹೇಳತೊಡಗಿದ.

“ಈ ನಂಬಿಕೆ ಆರಂಭವಾದದ್ದು ವಿಯಟ್ನಾಂ ಯುದ್ಧಕಾಲದಲ್ಲಿ. ಆಗ ಸೈನಿಕರು ಮೂರು ಮೂರು ಜನರು ಒಟ್ಟಿಗೆ ಇರುತ್ತಿದ್ದರು. ಮೂವರು ಒಟ್ಟಿಗೆ ಒಂದೇ ಸಮಯದಲ್ಲಿ ಕಡ್ಡಿ ಹತ್ತಿಸಿಕೊಳ್ಳುವ ಸಮಯದಲ್ಲಿ ವೈರಿ ಸೈನಿಕರು ಧಾಳಿ ಮಾಡುವ ಅಪಾಯವಿದೆ ಅಲ್ವ? ಅದಕ್ಕೆ ಒಂದು ಕಡ್ಡಿಯಿಂದ ಇಬ್ರು ಮಾತ್ರ ಬೆಂಕಿ ಉರಿಸುತ್ತಿದ್ದರು. ಮತ್ತೊಬ್ಬ ಸೈನಿಕ ಸುತ್ತಮುತ್ತ ನಿಗಾವಹಿಸುತ್ತಿದ್ದ. ಅದೇ ನಂಬಿಕೆ ಈಗ ಮೂಢ ನಂಬಿಕೆಯಾಗಿದೆ.

ಇತಿಹಾಸದ ಉದಾಹರಣೆ ನೀಡಿ ಉದ್ದ ಭಾಷಣ ಬಿಗಿದ ಶ್ರಾವಣ್ ಮುಖವನ್ನೇ ಕೆಲವು ಕ್ಷಣ ನೋಡಿದ ಜೀವನ್ ತಕ್ಷಣ ಏನೋ ನೆನಪಾದಂತೆ, “ಪರ್ಸ್ ತಂದಿಲ್ಲ ಕಣೋ, ಸಿಗರೇಟ್ ದುಡ್ಡು ಕೊಡು” ಅಂತ ಹೇಳಿ ಮುಗುಳ್ನಕ್ಕ.

ಮುಗಿದ ಸಿಗರೇಟನ್ನು ನೆಲಕ್ಕೆ ಬಿಸಾಕಿ ಅದನ್ನು ಎಡಗಾಲಿನಲ್ಲಿ ಹೊಸಕಿದ ಶ್ರಾವಣ್ ಪರ್ಸಿಗೆ ಕೈ ಹಾಕಿದ. ಆಗ ಅವನ ಕಿಸೆಯಿಂದ ಬಿದ್ದ ಹುಡುಗಿಯ ಫೋಟೊವನ್ನು ಮೆಲ್ಲಗೆ ಹೆಕ್ಕಿಕೊಂಡು ನೋಡಿದ ಜೀವನ್ ಬೆಚ್ಚಿಬಿದ್ದ.

ಅಲ್ಲಿದ್ದದ್ದು ಜೀವನ್ ಮನಸ್ಸಿನಲ್ಲಿಯೇ ಪ್ರೀತಿಸುತ್ತಿದ್ದ ಹುಡುಗಿಯ ಫೋಟೊ!

Thursday 29 September 2016

ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು?

ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು?

ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು? ಡ್ರೈವಿಂಗ್ ಮಾಡುವಾಗ ಅನುಸರಿಸಬೇಕಾದ ಮುನ್ನೇಚರಿಕೆ ಕ್ರಮಗಳೇನು? ಮಾನ್ಸೂನ್‍ನಲ್ಲಿ ಡ್ರೈವಿಂಗ್ ಮಾಡುವ ಸಮಸ್ತ ವಾಹನ ಚಾಲಕರಿಗೆ ಅನುಕೂಲವಾಗುವಂತಹ ಸಲಹೆಗಳು ಇಲ್ಲಿವೆ.




ಮಾರ್ಗಶಿರ, ಪುಷ್ಯ, ಮಾಘ, ಪಾಲ್ಗುಣ, ಚೈತ್ರ, ವೈಶಾಖ, ಜೇಷ್ಠ.... ಹೀಗೆ ಒಂದೊಂದೇ ಮಾಸಗಳು ಮುಗಿದು ಮಳೆ ಶುರುವಾಗುತ್ತಿದೆ. ವರ್ಷ ಋತುವಿನಲ್ಲಿ ಹ್ಯಾಪಿಯಾಗಿ ಉಲ್ಲಾಸ, ಉತ್ಸಾಹದಿಂದ ಡ್ರೈವಿಂಗ್ ಮಾಡುವುದು ನಿಮಗೆ ಇಷ್ಟವಾಗಿರಬಹುದು. ಅಥವಾ ಮಳೆಯಲ್ಲಿ ಕಾರಿನ ಸಹವಾಸವೇ ಬೇಡವೆಂದು ತೀರ್ಮಾನಿಸಿರಬಹುದು. ಮಳೆಗಾಲದಲ್ಲಿ ವಾಹನಗಳ ಕುರಿತು ಹೆಚ್ಚುವರಿ ಕಾಳಜಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮಂತೆ ನಿಮ್ಮ ಕಾರಿಗೂ ಥಂಡಿಯಾಗಬಹುದು.

ಕಾರು ಏರುವ ಮುನ್ನ
- ಮೊದಲನೆಯದಾಗಿ ನಿಮ್ಮ ಕಾರಿನ ಕಂಡಿಷನ್ ಹೇಗಿದೆ ಎಂದು ಪರಿಶೀಲಿಸಿ. ಅಂದರೆ ಟೈರ್, ಬ್ರೇಕ್, ವೈಪರ್ ಇವೆಲ್ಲ ಸಮರ್ಪಕವಾಗಿ ಕೆಲಸ ಮಾಡುವುದೇ ಚೆಕ್ ಮಾಡಿ. ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದಾದರೆ ಬದಲಾಯಿಸಿ ಅಥವಾ ಸರಿಪಡಿಸಿ.
- ಟೈರ್ ಗುಣಮಟ್ಟ ಹೇಗಿದೆಯೆಂದು ತಿಳಿದುಕೊಳ್ಳಿ. ಟೈರ್ ಟ್ರೀಡ್ ಸವೆದಿರುವುದೇ? ಚಿಕ್ಕ ಮುಳ್ಳು ಚುಚ್ಚಿದರೂ ಠುಸ್ಸೆನ್ನಬಹುದೇ? ಪರಿಶೀಲಿಸಿ. ಮಳೆಗಾಲದಲ್ಲಿ ಟೈರ್ ಗುಣಮಟ್ಟ ಪರಿಶೀಲಿಸಿಯೇ ಕಾರು ಏರಿ.

- ಮಳೆಗಾಲದಲ್ಲಿ ಕಾರಿನ ಬೆಳಕಿನ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿರಬೇಕು. ಹೆಡ್‍ಲೈಟ್ ಬೀಮ್‍ಗಳು ಸರಿಯಾಗಿ ಫೆÇೀಕಸ್ ಆಗುವುದೇ ಗಮನಿಸಿ. ಪಾರ್ಕಿಂಗ್ ಲೈಟ್, ಫಾಗ್ ಲ್ಯಾಂಪ್‍ಗಳನ್ನೂ ಪರಿಶೀಲಿಸಿ. ಉರಿಯದ ಬಲ್ಬ್‍ಗಳನ್ನು ಬದಲಾಯಿಸಿ.
- ಬ್ರೇಕ್, ಆಕ್ಸಿಲರೇಟರ್, ಕ್ಲಚ್ ಪೆಡಲ್‍ಗಳನ್ನು ಗಮನಿಸಿ. ಅವುಗಳ ಮೇಲಿರುವ ರಬ್ಬರ್ ಸವೆದಿದ್ದರೆ ಬದಲಾಯಿಸಿ. ಮಳೆಗಾಲದಲ್ಲಿ ಬ್ರೇಕ್ ಸರಿಯಾಗಿ ಹಿಡಿಯಲು ಪೆಡಲ್‍ಗಳು ಉತ್ತಮ ಕಂಡಿಷನ್‍ನಲ್ಲಿರುವುದು ಅಗತ್ಯ.
- ಕಾರಿನೊಳಗೆ ನೀರು ನುಗ್ಗುವ ಸಾ`್ಯತೆಗಳನ್ನು ಕಡಿಮೆ ಮಾಡಿ. ಡ್ರೈನ್ ಹೋಲ್ ಪ್ಲಗ್, ಕಾರಿನ ಕಿಟಕಿ ಮತ್ತು ಬಾಗಿಲಿನ ರಬ್ಬರ್ ಬೀಡಿಂಗ್‍ಗಳನ್ನು ಪರಿಶೀಲಿಸಿ. ಇವುಗಳನ್ನು ಸರಿಪಡಿಸುವುದರಿಂದ ಕೇವಲ ನೀರು ಒಳಬರುವುದನ್ನು ತಡೆಯುವುದು ಮಾತ್ರವಲ್ಲದೇ ಶಾರ್ಟ್‍ಸಕ್ರ್ಯೂಟ್ ಅಪಾಯಗಳು ಕಡಿಮೆಯಾಗುತ್ತವೆ.
- ಕಾರಿನ ವೈಪರ್ ಸಮರ್ಪಕವಾಗಿ ಕೆಲಸ ಮಾಡುವುದೇ ಪರಿಶೀಲಿಸಿರಿ, ಮುಂ`Áಗದ ವೈಂಡ್ ಶೀಲ್ಡ್ ಗಾಜು ಶು`್ರವಾಗಿರಲಿ.
- ಸುರಕ್ಷತೆಯ ಕಿಟ್‍ಗಳು: ಕಾರಿನೊಳಗೆ ಫಸ್ಟ್ ಏಯ್ಡ್ ಬಾಕ್ಸ್, ಟಾರ್ಚ್, ಕೊಡೆ ಇತ್ಯಾದಿಗಳಿರಲಿ.

ಕಾರು ಏರಿದ ನಂತರ
ಈಗಿನ ಹೆಚ್ಚಿನ ವಾಹನಗಳಿಗೆ, ಅವುಗಳ ಎಂಜಿನ್‍ಗಳಿಗೆ ನೀರು ಅಪಾಯಕಾರಿಯಲ್ಲ. ಆದರೆ ಮಳೆಗಾಲದಲ್ಲಿ ಕಲುಷಿತ ನೀರು ಎಂಜಿನ್ ಇತ್ಯಾದಿಗಳಿಗೆ ಹಾನಿ ಮಾಡಬಹುದು. ಜೊತೆಗೆ ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವಾಗ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯೂ ಇದೆ.
-ಅನಿವಾರ್ಯತೆ ಇಲ್ಲದಿದ್ದರೆ ಜಲಾವೃತ ರಸ್ತೆಗಳಲ್ಲಿ ಸಂಚರಿಸಬೇಡಿ. ಪ್ರಯಾಣಿಸುವುದು ಅನಿವಾರ್ಯವೆಂದಾದರೆ ಆದಷ್ಟು ಎತ್ತರದ `Áಗಗಳಲ್ಲಿ ಚಲಾಯಿಸಿ. ನೀರು ಎಷ್ಟು ಆಳವಿದೆ ಎಂದು ಖಚಿತವಾಗಿ ತಿಳಿಯದಿದ್ದರೆ, ಆ ರಸ್ತೆಯ ಪರಿಚಯ ನಿಮಗಿಲ್ಲದಿದ್ದರೆ ನೀರು ಕಡಿಮೆಯಾಗುವರೆಗೆ ಕಾಯುವುದು ಶ್ರೇಯಸ್ಸು.
- ಎಂಜಿನ್ ಜಾಮ್ ಆಗುವುದನ್ನು ತಪ್ಪಿಸಲು ನಿ`Áನವಾಗಿ ಕಾರು ಚಲಾಯಿಸಿ. ಪ್ರವಾಹದ ವಿರುದ್ಧ ದಿಕ್ಕಿಗೆ ಡ್ರೈವಿಂಗ್ ಮಾಡಬೇಡಿ. ವೇಗದ ಪ್ರಯಾಣ ಬೇಡ. ಜಲಾವೃತ ರಸ್ತೆಯಲ್ಲಿ ಟಾಪ್‍ಗಿಯರ್‍ಗಳ ಬಳಕೆ ಬೇಡ. ಲೋ ಗಿಯರ್‍ನಲ್ಲಿ ಚಲಾಯಿಸಿ.
- ರೇಡಿಯೇಟರ್ ಫ್ಯಾನ್ ಕಾರ್ಯಕ್ಷಮತೆ ಪರೀಕ್ಷಿಸಿಕೊಳ್ಳಿ. ನೀರು ಒಳಹೋದರೆ ಎಂಜಿನ್ ಸ್ಥಗಿತಗೊಳ್ಳುವ ಅಪಾಯವಿದೆ.
- ನಡುನೀರಿನಲ್ಲಿ ಕಾರು ಮೂವ್ ಆಗದಿದ್ದರೆ ಒಂದೇ ಸಮನೆ ಆಕ್ಸಿಲರೇಟರ್ ತುಳಿಯಬೇಡಿ. ಕಾರಿನಿಂದ ಇಳಿದು ಕಾರನ್ನು ತಳ್ಳಿಕೊಂಡು ಬದಿಯಲ್ಲಿ ನಿಲ್ಲಿಸಿ. ಮೆಕಾನಿಕ್ ನೆರವು ಪಡೆಯಿರಿ.
- ಜಲಾವೃತ ರಸ್ತೆಯಲ್ಲಿ ಚಾಲನೆ ಮಾಡುತ್ತಿರುವಾಗ ಏರ್ ಕಂಡಿಷನ್ ಆನ್ ಮಾಡದಿರಿ. ಕಾರಿನ ಸೆಂಟ್ರಲ್ ಲಾಕಿಂಗ್ ಆನ್ ಮಾಡಬೇಡಿ. ಎಲ್ಲಾದರೂ ಶಾರ್ಟ್ ಸಕ್ರ್ಯೂಟ್ ಆದರೆ ಲಾಕಿಂಗ್ ಸಿಸ್ಟಮ್ ಕೆಲಸ ಮಾಡದೆ ನೀವು ಕಾರಿನೊಳಗೆ ಬಂಯಾಗುವ ಅಪಾಯವಿದೆ. ಕಾರಿನೊಳಗೆ ಹ್ಯಾಮರ್ ಅಥವಾ ಗಟ್ಟಿಯಾದ ವಸ್ತುಗಳಿರಲಿ. ಕಾರಿನೊಳಗೆ ಬಂಯಾದ ಸ್ಥಿತಿಯಲ್ಲಿ ಕಿಟಕಿ ಗಾಜು ಹೊಡೆಯಲು ಇದು ನೆರವಾಗಬಹುದು.
- ಕಾರಿನೊಳಗೆ ನೀರು ನುಗ್ಗಿದರೆ ಇಗ್ನಿಷನ್ ಆನ್ ಮಾಡಬೇಡಿ. ಶಾರ್ಟ್ ಸಕ್ರ್ಯೂಟ್ ಆಗುವ ಅಪಾಯವಿದೆ.  ಮಳೆಗಾಲದಲ್ಲಿ ನೀರಿಗೆ ಸಿಲುಕಿ ಕಾರಿಗೆ ಹಾನಿಯಾದರೆ ಮೆಕಾನಿಕ್‍ಗಳ ನೆರವು ಪಡೆದು ರಿಪೇರಿ ಮಾಡಿ.
ಹೊಸ ಕಾರುಗಳು ಮಳೆಗಾಲದಲ್ಲಿ ಹೆಚ್ಚು ಕಿರಿಕ್ ನೀಡುವುದಿಲ್ಲ. ಆದರೆ ಹಳೆಕಾರುಗಳ ಆರೋಗ್ಯ ಮಳೆಗಾಲದಲ್ಲಿ ಬೇಗ ಕೆಡುತ್ತದೆ.  ಕಾರಿನ ಬಾಡಿಯಲ್ಲಿ ಗೀರುಗಳಾಗಿದ್ದರೆ, ಪೇಂಟ್ ಹೋಗಿದ್ದರೆ ಪೇಂಟ್ ನೀಡಿ. ಮಳೆಗಾಲದಲ್ಲಿ ನೀರು ತಾಗಿ ಇವು ಇನ್ನಷ್ಟು ಅಂದಗೆಡಿಸುತ್ತದೆ. ಇದು ನಿಮ್ಮ ಕಾರಿನ ಮರುಮಾರಾಟ ಮೌಲ್ಯ ಕಡಿಮೆ ಮಾಡುತ್ತದೆ. ಕಾರಿನೊಳಗೆ ರಬ್ಬರ್ ಮ್ಯಾಟ್‍ಗಳನ್ನು ಬಳಸಿ. ಕಾರಿನೊಳಗೆ ಹೆಚ್ಚು ಒದ್ದೆಯಾಗಲು ಅವಕಾಶ ನೀಡಬೇಡಿ. ಹ್ಯಾಪಿ ಜರ್ನಿ.

- Praveen Chandra Puttur


ಡ್ರೈವಿಂಗ್ ಲೈಸನ್ಸ್ ಪಡೆಯುವುದು ಹೇಗೆ?

ಡ್ರೈವಿಂಗ್ ಲೈಸನ್ಸ್ ಪಡೆಯುವುದು ಹೇಗೆ?

ಹೆಚ್ಚಿನ ಜನರು ಡ್ರೈವಿಂಗ್ ಸ್ಕೂಲ್ ಅಥವಾ ಮಧ್ಯವರ್ತಿಗಳ ನೆರವಿನಿಂದಲೇ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇವರ ನೆರವಿಲ್ಲದೆಯೇ ಎಲ್‍ಎಲ್, ಡಿಎಲ್, ಐಡಿಪಿ ಪಡೆಯುವುದು ಹೇಗೆ?

ವಾಹನ ಚಾಲನಾ ಪರವಾನಿಗೆ  ಹೇಗೆ ಪಡೆದಿರಿ? ಎಂಬ ಪ್ರಶ್ನೆಗೆ ಹೆಚ್ಚಿನ ಜನರು `ಡ್ರೈವಿಂಗ್ ಸ್ಕೂಲ್ ಮೂಲಕ' ಎಂದು ಉತ್ತರಿಸುತ್ತಾರೆ. ಅಪರೂಪಕ್ಕೆ ಕೆಲವರು ಮಾತ್ರ ಯಾವುದೇ ಮಧ್ಯವರ್ತಿಗಳಿಗೆ ಹಲವು ಪಟ್ಟು ದುಡ್ಡು ನೀಡಲು ಇಚ್ಚಿಸದೇ ಸ್ವತಃ ತಾವೇ ಡಿಎಲ್ ಮಾಡಿಸಿಕೊಳ್ಳುತ್ತಾರೆ.

`ಡಿಎಲ್ ಕುರಿತು ಮೊದಲು ಡ್ರೈವಿಂಗ್ ಸ್ಕೂಲ್‍ನವರಲ್ಲಿ ವಿಚಾರಿಸಿದ್ದೆ. ಹೇಗೂ ಫ್ರೆಂಡ್ಸ್ ಕಾರು ಡ್ರೈವಿಂಗ್ ಮಾಡಿದ ಅನುಭವವಿತ್ತು. ಸ್ಕೂಲ್‍ನವರು ವಿದೌಟ್ ಕ್ಲಾಸ್ 2,500 ರೂಪಾಯಿ ಕೇಳಿದ್ರು. ನಂತ್ರ ಆರ್‍ಟಿಒ ಕಚೇರಿಗೆ ಹೋಗಿ ಡಿಎಲ್ ಮಾಡಿಸ್ಕೊಂಡೆ. ಕೆಲವು ನೂರು ರುಪಾಯಿ ಖರ್ಚಾಯಿತು ಅಷ್ಟೇ!' ಎಂದವರು ಬೆಂಗಳೂರಿನ ರಿಚ್‍ಮಂಡ್ ನಿವಾಸಿ ಸುದರ್ಶನ್ ಎಂ.
ವಾಹನ ಚಾಲನೆ ತಿಳಿದಿದ್ದರೂ ಎಲ್‍ಎಲ್, ಡಿಎಲ್ ಪಡೆಯಲು ಮಧ್ಯವರ್ತಿಗಳ ನೆರವು ಪಡೆಯುವರು ಹೆಚ್ಚಿದ್ದಾರೆ. ಸ್ಕೂಲ್ ಮೂಲಕ ಹೋದರೆ ಸುಲಭವಾಗಿ ಪಾಸ್ ಆಗಬಹುದು, ಅರ್ಜಿ, ದಾಖಲೆ ಪತ್ರ ವ್ಯವಹಾರಗಳನ್ನು ಅವರೇ ನಿರ್ವಹಿಸುತ್ತಾರೆ. ಒಂದೆರಡು ಸಾವಿರ ರೂಪಾಯಿ ವ್ಯರ್ಥವಾದರೂ ಪರವಾಗಿಲ್ಲ ಎಂಬ ಮನೋಭಾವ ಹೆಚ್ಚಿನವರದ್ದು. ವಾಹನ ಚಾಲನೆ(ರಿವರ್ಸ್ ಚಾಲನೆ ಸೇರಿದಂತೆ), ಸಂಚಾರ ನೀತಿ ನಿಯಮಗಳ ಸಾಮಾನ್ಯ ಜ್ಞಾನ ಇದ್ದರೆ ಸಾಕು. ಯಾವುದೇ ಕಷ್ಟವಿಲ್ಲದೇ ಲೈಸನ್ಸ್ ಪಡೆಯಬಹುದು.

ಕಲಿಕೆಗೆ ಪರ್ಮಿಟ್(ಎಲ್‍ಎಲ್)
ಡ್ರೈವಿಂಗ್ ಕಲಿಕೆಗೂ ಪರವಾನಿಗೆ ಪಡೆದುಕೊಳ್ಳಬೇಕು. ನೇರ ಆರ್‍ಟಿಒ ಕಚೇರಿಗೆ ಹೋಗಿ ಸಿಎಂವಿ2 ಫಾರ್ಮ್ ಪಡೆಯಿರಿ. ಇದನ್ನು ಆರ್‍ಟಿಒ ವೆಬ್‍ಸೈಟ್‍ನಿಂದಲೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಪಾಸ್‍ಪೆÇೀರ್ಟ್ ಗಾತ್ರದ ಮೂರು ಭಾವಚಿತ್ರ, ವಿಳಾಸ ದಾಖಲೆ, ವಯಸ್ಸು ಪ್ರಮಾಣ ಪತ್ರ(ಎಸ್‍ಎಸ್‍ಎಲ್‍ಸಿ ಮಾರ್ಕ್‍ಕಾರ್ಡ್ ಇತ್ಯಾದಿ) ಮತ್ತು 30 ರುಪಾಯಿ ಶುಲ್ಕ ಪಾವತಿಸಿದರೆ ಸಾಕು. ಟೆಸ್ಟ್‍ಗೆ ಯಾವಾಗ ಹಾಜರಾಗಬೇಕು ಎಂದು ಕೇಳಿತಿಳಿದುಕೊಳ್ಳಿ.
ಪರೀಕ್ಷೆ ಎಂದರೆ ಭಯಬೀಳದಿರಿ. ಟ್ರಾಫಿಕ್ ಚಿನ್ಹೆಗಳು, ಸಂಚಾರ ನೀತಿನಿಯಮಗಳ ಬಗ್ಗೆ  ಪ್ರಶ್ನೆಗಳಿರುತ್ತವೆ. ಇದನ್ನು ಇಂಟರ್‍ನೆಟ್‍ನಲ್ಲಿ ಹುಡುಕಿ ಕಲಿಯಬಹುದು ಅಥವಾ ಆರ್‍ಟಿಒ ಕಚೇರಿಗಳ ಗೋಡೆಗಳಲ್ಲಿಯೇ ಈ ಮಾಹಿತಿಗಳು ಇರುತ್ತವೆ. ಎಲ್‍ಎಲ್ ಪಡೆಯಲು ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತವಾದರೆ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳಿರುತ್ತವೆ. ಮೌಖಿಕ ಪರೀಕ್ಷೆಯಲ್ಲಿ ಟ್ರಾಫಿಕ್ ಇನ್‍ಸ್ಪೆಕ್ಟರ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಹೆಚ್ಚಾಗಿ, ಕೆಲವು ಟ್ರಾಫಿಕ್ ಚಿನ್ಹೆಗಳನ್ನು ತೋರಿಸಿ, ಇದೇನು.. ಇದೇನು ಎಂದು ಪ್ರಶ್ನಿಸುತ್ತಾರೆ. ತಡವರಿಸದೆ ಸರಿಯಾಗಿ ಉತ್ತರಿಸಿದರೆ ಪಾಸ್! ಆಮೇಲೆ ದೃಷ್ಟಿ ದೋಷವಿದೆಯೇ ಎಂದು ಪರಿಶೀಲಿಸಲು ಒಂದು ಕಣ್ಣು ಮುಚ್ಚಲು ಹೇಳಿ ಏನಾದರೂ ಅಕ್ಷರಗಳನ್ನು ಓದಿಸುತ್ತಾರೆ. ಪಾಸ್ ಆದರೆ ಒಂದು ದಿನದಲ್ಲಿ ಎಲ್‍ಎಲ್ ನಿಮಗೆ ದೊರಕುತ್ತದೆ.
ಕೆಲವೊಮ್ಮೆ ಎಲ್‍ಎಲ್ ಕಳೆದುಹೋಗಬಹುದು. ಕಳೆದು ಹೋಗಿರುವುದಕ್ಕೆ ದಾಖಲೆ (ಪೆÇಲೀಸ್ ಕಂಪ್ಲೇಟ್ ಪ್ರತಿ) ಇರಲಿ. ಆರ್‍ಟಿಒಗೆ ಹೋಗಿ ಕೆಎಂವಿ-1ಎ ಫಾರ್ಮ್ ಪಡೆಯಿರಿ. 2 ಪಾಸ್‍ಪೆÇೀರ್ಟ್ ಗಾತ್ರದ ಭಾವಚಿತ್ರ ನೀಡಬೇಕು. ಆರ್‍ಟಿಒ ಕ್ಯಾಷ್ ಕೌಂಟರ್‍ನಲ್ಲಿ 15 ರುಪಾಯಿ ಶುಲ್ಕ ಪಾವತಿಸಿ. ಒಂದು ದಿನದಲ್ಲಿ ಡುಬ್ಲಿಕೇಟ್ ಲರ್ನಿಂಗ್ ಲೈಸನ್ಸ್ ನಿಮ್ಮ ಕೈ ಸೇರಬಹುದು.

ಡ್ರೈವಿಂಗ್ ಲೈಸನ್ಸ್
ವಾಹನ ಚಾಲನೆ ತಿಳಿದಿದ್ದರೆ ಡ್ರೈವಿಂಗ್ ಸ್ಕೂಲ್ ಅವಲಂಬನೆ ಇಲ್ಲದೆಯೇ ಆರ್‍ಟಿಒ ಬಳಿ ಡಿಎಲ್ ಮಾಡಿಸಿಕೊಳ್ಳಬಹುದು. ಎಲ್‍ಎಲ್ ಪಡೆದ 30 ದಿನಗಳ ನಂತರ ಡಿಎಲ್ ಪರೀಕ್ಷೆ ಇರುತ್ತದೆ. ಆರ್‍ಟಿಒ ಕಚೇರಿಯಿಂದ ಸಿಎಂವಿ 4 ಫಾರ್ಮ್ ಪಡೆದು ತುಂಬಬೇಕು. ಪಾಸ್‍ಪೆÇೀರ್ಟ್ ಗಾತ್ರದ ಮೂರು ಭಾವಚಿತ್ರ, ಡಿಎಲ್ ಕಾರ್ಡ್ ದರ 215 ರು ಮತ್ತು ಡ್ರೈವಿಂಗ್ ಟೆಸ್ಟ್ ಶುಲ್ಕ 50 ರು ಪಾವತಿಸಬೇಕು. ವ್ಯಾಲಿಡಿಟಿ ಮುಗಿಯದ ಎಲ್‍ಎಲ್ ಜೊತೆಗಿರಲಿ.
ಡ್ರೈವಿಂಗ್ ಟೆಸ್ಟ್ ಎಂದರೆ ಕೆಲವರಿಗೆ ಭಯ. ಡ್ರೈವಿಂಗ್ ಗೊತ್ತಿದ್ದವರು ಸಹ ಕೆಲವೊಮ್ಮೆ ಭಯಪಟ್ಟು ಫೇಲಾಗುವುದುಂಟು. ಡ್ರೈವಿಂಗ್ ಇನ್‍ಸ್ಪೆಕ್ಟರ್ ಸಾಮಾನ್ಯವಾಗಿ ಫಾರ್ವಡ್ ಅಥವಾ ರಿವರ್ಸ್ ಡ್ರೈವಿಂಗ್ ಟೆಸ್ಟ್ ಮಾಡುವಂತೆ ಹೇಳುತ್ತಾರೆ. ನಿಮ್ಮ ವಾಹನ ಚಾಲನೆ ಇನ್‍ಸ್ಪೆಕ್ಟರ್‍ಗೆ ತೃಪ್ತಿದಾಯಕವೆನಿಸಿದರೆ ಪಾಸ್. ಶೀಘ್ರದಲ್ಲಿ ಡಿಎಲ್ ನಿಮಗೆ ಸಿಗುತ್ತದೆ. ನಪಾಸಾದರೆ  7 ದಿನದ ನಂತರ 50 ರು. ಶುಲ್ಕ ಪಾವತಿಸಿ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬೇಕು.
ಕೆಲವೊಮ್ಮೆ ಡಿಎಲ್ ಕಳೆದುಹೋಗಬಹುದು. ಡುಬ್ಲಿಕೇಟ್ ಡಿಎಲ್ ಪಡೆಯುವುದು ಕಷ್ಟವಲ್ಲ. ರೋಟರಿಯಿಂದ ಅಫಿಡವಿಟ್ ಮಾಡಿಸಿ. ಆರ್‍ಟಿಒ ಕಚೇರಿಗೆ ಹೋಗಿ ಕೆಎಂವಿ 1 ಅರ್ಜಿ ಪಡೆದು ತುಂಬಿಸಬೇಕು. ಸಂಬಂಧಿತ ದಾಖಲೆಗಳನ್ನು ನೀಡಬೇಕು. ಡಿಎಲ್ ಕಾರ್ಡ್ ಶುಲ್ಕ 215 ರುಪಾಯಿ ನೀಡಬೇಕು.

ಅಂತಾರಾಷ್ಟ್ರೀಯ ಪರ್ಮಿಟ್
ನೀವು ಕೆಲವು ಸಮಯ ವಿದೇಶಕ್ಕೆ ಹೋಗುತ್ತೀರಿ ಎಂದಿರಲಿ. ಅಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್ ಪೆÇಲೀಸರು ಅಡ್ಡಗಟ್ಟಿದರೆ ಭಾರತದ ಡಿಎಲ್ ತೋರಿಸಿದರೆ ಆಗದು. ಅಂತಾರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್(ಇಡಿಪಿ) ನಿಮ್ಮಲ್ಲಿರಬೇಕು.
ಇಡಿಪಿ ಪಡೆಯವುದುದು ಕಷ್ಟವಲ್ಲ. ಆರ್‍ಟಿಒ ಕಚೇರಿಯಿಂದ ಸಿಎಂವಿ 4ಎ ಅಪ್ಲಿಕೇಷನ್ ಪಡೆಯಬೇಕು. 500 ರು. ಶುಲ್ಕ ಪಾವತಿಸಬೇಕು. ಒರಿಜಿನಲ್ ಡಿಎಲ್, ಪಾಸ್‍ಪೋರ್ಟ್, ವೀಸಾ, ವಿಮಾನ ಟಿಕೇಟ್ ಇತ್ಯಾದಿಗಳ ಒಂದು ಪ್ರತಿ ನೀಡಬೇಕು. ಸಿಎಂವಿ1 ಮತ್ತು ಸಿಎಂವಿ1ಎ ಫಾರ್ಮ್‍ನಲ್ಲಿ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕು. ಪಾಸ್‍ಪೋರ್ಟ್ ಗಾತ್ರದ ಮೂರು ಭಾವಚಿತ್ರ ನೀಡಬೇಕು. ಖುದ್ದಾಗಿ ಆರ್‍ಟಿಒ ಕಚೇರಿಯಲ್ಲಿ ನೀವೇ ಹಾಜರಾಗಬೇಕು. ಹೊಸ ಡಿಎಲ್ ಪಡೆದು ಮೂರು ತಿಂಗಳು ಕಳೆದಿದ್ದರೆ ಮತ್ತೊಮ್ಮೆ ಡ್ರೈವಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಡಿಎಲ್ ಮಾಡಿಸಿದ ವ್ಯಾಪ್ತಿಯ ಆರ್‍ಟಿಒ ಕಚೇರಿಯಲ್ಲಿಯೇ ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು. ಐಡಿಪಿ ವ್ಯಾಲಿಡಿಟಿ ಒಂದು ವರ್ಷ.

ಎಲ್ಲಾದರೂ ಡಿಎಲ್, ಎಲ್‍ಎಲ್‍ಗೆ ನೀಡಿದ ವಿಳಾಸವನ್ನು ಬದಲಾಯಿಸುವ ಅನಿವಾರ್ಯತೆ ಇದ್ದರೆ ನೀವು ಆರ್‍ಟಿಒ ಕಚೇರಿಗೆ ಭೇಟಿ ನೀಡಿ ಹೊಸ ವಿಳಾಸದ ದಾಖಲೆ ಪತ್ರ ನೀಡಬೇಕು. ವಾಹನ ಚಾಲನೆ ಎಬಿಸಿಡಿ ಗೊತ್ತಿಲ್ಲದವರು ಡ್ರೈವಿಂಗ್ ಸ್ಕೂಲ್ ಮೂಲಕವೇ ಎಲ್‍ಎಲ್, ಡಿಎಲ್ ಮಾಡಿಸಿಕೊಳ್ಳುವುದು ಒಳಿತು. ವಾಹನದ ಲಭ್ಯತೆ ಇದ್ದೂ, ಡ್ರೈವಿಂಗ್ ಗೊತ್ತಿದ್ದೂ ಮಧ್ಯವರ್ತಿಗಳನ್ನು ಅವಲಂಬಿಸಿದರೆ ನಷ್ಟ ನಿಮಗೆ!

ಕರ್ನಾಟಕ ಆರ್ ಟಿಒ ವಿಳಾಸ

* ಪ್ರವೀಣ ಚಂದ್ರ
ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲವೊಂದು ನಿಮ್ಮ ಮನದ ಮೂಲೆಯಲ್ಲಿ ಇರಬಹುದು. ಇಂಧನವನ್ನು ಚಲನೆಯಾಗಿ ಪರಿವರ್ತಿಸುವುದು ಎಂಜಿನ್ ಕೆಲಸ. ಅದಕ್ಕಾಗಿ ಎಂಜಿನ್ ಒಳಗೆ ಇಂಧನ ಉರಿಯುವ ಇಂಟರ್ನಲ್ ಕಂಬಶ್ಟನ್ ಸಿಸ್ಟಮ್ ಬಳಸಲಾಗುತ್ತದೆ.ಈ ಎಂಜಿನ್‍ಗಳಿಗೆ ಕಡಿಮೆ ಇಂಧನ ಸಾಕು.  ಹಳೆಕಾಲದ ಉಗಿರೈಲುಗಳಲ್ಲಿ ಎಂಜಿನ್ ಹೊರಗಡೆ ಕಲ್ಲಿದ್ದಲ್ಲಿನಂತಹ ಇಂಧನ ಉರಿಸಲಾಗುತ್ತಿತ್ತು.
ಎಂಜಿನ್ ಒಳಗೆ ಬೆಂಕಿ!
ಇಂಟರ್ನಲ್ ಕಂಬಶ್ಟನ್ ಎಂಜಿನ್‍ನ ಒಳಭಾಗದ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್‍ನಂತಹ ಇಂಧನದ ಹನಿ ಹಾಕಿ ಬೆಂಕಿಯ ಕಿಡಿ ಹಚ್ಚಿದರೆ ನಂಬಲು ಅಸಾಧ್ಯವಾದಷ್ಟು ಪ್ರಮಾಣದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕಾರಿನ ಚಕ್ರಗಳು ತಿರುಗಲು ಇವೇ ಅಶ್ವಶಕ್ತಿ. ಹೆಚ್ಚಿನ ಕಾರುಗಳಲ್ಲಿ ನಾಲ್ಕು ಸ್ಟ್ರೋಕ್(ಕಿಡಿ)ನ ಕಂಬಶ್ಟನ್ ಸೈಕಲ್ ಸಿಸ್ಟಮ್ ಬಳಸಲಾಗುತ್ತದೆ. ಇದಕ್ಕೆ ಒಟ್ಟೊ ಸೈಕಲ್ ಎಂಬ ಹೆಸರು ಸಹ ಇದೆ. 1967ರಲ್ಲಿ ನಿಕೊಲಾಸ್ ಒಟ್ಟೊ ಈ ಟೆಕ್ನಾಲಜಿ ಕಂಡುಹಿಡಿದಿದ್ದರು.

ಎಂಜಿನ್ ಒಳಗೆ ಏನಿದೆ?
ಇಂಟೆಕ್(ಇಂಧನ ಒಳಬರುವುದು), ಕಂಪ್ರೆಷನ್ (ಸಂಕೋಚನ), ಕಂಬಸ್ಟನ್(ದಹನ) ಮತ್ತು ಎಗ್ಸಾಸ್ಟ್ ಸ್ಟ್ರೋಕ್(ಹೊಗೆ ಹೊರಕ್ಕೆ) ಎಂಬ ನಾಲ್ಕು ಸ್ಟ್ರೋಕ್‍ಗಳು ಎಂಜಿನ್ ಒಳಗೆ ಕಾರ್ಯನಿರ್ವಹಿಸುತ್ತವೆ. ಎಂಜಿನ್ ಒಳಗೆ ನೂರಾರು ಬಿಡಿಭಾಗಗಳಿವೆ. ಕ್ಯಾಮ್‍ಶಾಫ್ಟ್, ವಾಲ್ವ್ ಕವರ್, ಇಂಟೆಕ್ ವಾಲ್ವ್, ಇಂಟೆಕ್ ಪೆÇೀರ್ಟ್, ಹೆಡ್, ಕೂಲೆಂಟ್, ಎಂಜಿನ್ ಬ್ಲಾಕ್, ಆಯಿಲ್ ಪಾನ್, ಆಯಿಲ್ ಸುಂಪ್, ಸ್ಪಾರ್ಕ್ ಪ್ಲಗ್, ಎಗ್ಸಾಟ್ ವಾಲ್ವ್, ಎಗ್ಸಾಟ್ ಪೆÇೀರ್ಟ್, ಪಿಸ್ಟನ್, ಕನೆಕ್ಟಿಂಗ್ ರಾಡ್ಸ್, ಕ್ರಾಂಕ್‍ಶಾಫ್ಟ್ ಇತ್ಯಾದಿಗಳಿವೆ.

ಹೇಗೆ ಕೆಲಸ ಮಾಡುತ್ತದೆ?
ಎಂಜಿನ್‍ನಲ್ಲಿರುವ ಪಿಸ್ಟನನ್ನು ಕನೆಕ್ಟಿಂಗ್ ರಾಡ್ ಮೂಲಕ ಕ್ರಾಂಕ್‍ಶಾಫ್ಟ್‍ಗೆ ಸಂಪರ್ಕ ಮಾಡಲಾಗಿರುತ್ತದೆ. ಕ್ರಾಂಕ್‍ಶಾಫ್ಟ್ ಸುತ್ತುತ್ತಿರುವಾಗ ಕ್ಯಾನನ್ ಮರುಹೊಂದಿಕೊಳ್ಳುತ್ತದೆ. ಎಂಜಿನ್ ಸಿಲಿಂಡರ್ ಒಳಗಿರುವ ಪಿಸ್ಟನ್ ಮೇಲಿನಿಂದ ಕೆಳಗೆ ಬರಲು ಆರಂಭವಾದಗ ಇಂಟೆಕ್ ಕವಾಟ ತೆರೆದುಕೊಳ್ಳುತ್ತದೆ. ಅದರಿಂದ ಅಲ್ಪ ಪ್ರಮಾಣದ ಇಂಧನ ಮತ್ತು ಗಾಳಿಯ ಮಿಶ್ರಣ ಸಿಲಿಂಡರ್ ಒಳಗೆ ಬಂದಾಗ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲೆ ಬಂದಾಗ ಸ್ಪಾರ್ಕ್ ಪ್ಲಗ್ ಉಂಟು ಮಾಡಿದ ಕಿಡಿಯು ಇಂಧನ/ಗಾಳಿ ಮಿಶ್ರಣವನ್ನು ಸ್ಪೋಟಿಸಿದಾಗ ಬಿಡುಗಡೆಯಾಗುವ ಶಕ್ತಿಗೆ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲಕ್ಕೆ ಹೋದಾಗ ಇಂಟೆಂಕ್ ಕವಾಟದ ಮೂಲಕ ಹೊಗೆ ಹೊರಕ್ಕೆ ಹೋಗುತ್ತದೆ. ಕ್ಯಾಮ್‍ಶಾಫ್ಟ್ ಸಮರ್ಪಕವಾಗಿ ತಿರುಗಿದಾಗ ಇಂಟೆಕ್ ಮತ್ತು ಎಗ್ಸಾಸ್ಟ್ ಕವಾಟಗಳು ತೆರೆಯುವುದು ಮತ್ತು ಮುಚ್ಚುವುದು ನಡೆಯುತ್ತಿರುತ್ತವೆ. ಪಿಸ್ಟನ್ ಮೇಲೆ ಕೆಳಗೆ ಬರುತ್ತಿರುವಾಗ ಅದಕ್ಕೆ ಕನೆಕ್ಟ್ ಮಾಡಿದ ಕ್ರಾಂಕ್‍ಶಾಫ್ಟ್ ತಿರುಗುತ್ತದೆ(ಸೈಕಲ್ ತುಳಿದಾಗ ಆಗುವಂತೆ).
ನಾವೀಗ ಕೇವಲ ಒಂದು ಪಿಸ್ಟನ್ ಸಿಲಿಂಡರ್ ತಿರುಗುವ ಬಗ್ಗೆ ತಿಳಿದುಕೊಂಡೆವು. ಆದರೆ ಹೆಚ್ಚಿನ ಕಾರುಗಳು ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿರುತ್ತವೆ. ನಾಲ್ಕು, ಆರು, ಎಂಟು ಸಿಲಿಂಡರ್‍ನ ಎಂಜಿನ್‍ಗಳು ಇರುತ್ತವೆ. ಹೀಗೆ ಹಲವು ಸಿಲಿಂಡರ್‍ಗಳು ಇರುವಾಗ ಸಿಲಿಂಡರ್‍ಗಳನ್ನು ಹೆಚ್ಚಾಗಿ ಮೂರು ರೀತಿಯಾಗಿ(ಇನ್‍ಲೈನ್, ವಿ ಅಥವಾ ಫ್ಲಾಟ್) ಜೋಡಿಸಲಾಗಿರುತ್ತದೆ.

ಯಾವುದಕ್ಕೆ ಏನು ಕೆಲಸ?
ಸ್ಪಾರ್ಕ್ ಪ್ಲಗ್: ಇಂಧನ/ಗಾಳಿ ಮಿಶ್ರಣಕ್ಕೆ ಬೆಂಕಿ ಹಾಕುವುದು ಸ್ಪಾರ್ಕ್ ಪ್ಲಗ್ ಕಾರ್ಯ. ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಸ್ಪಾರ್ಕ್ ಆದರೆ ಮಾತ್ರ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ವಾಲ್ವ್: ಇಂಟೆಕ್ ಮತ್ತು ಎಗ್ಸಾಟ್ ವಾಲ್ವ್(ಕವಾಟ)ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡರೆ ಮಾತ್ರ ಸರಿಯಾದ ಸಮಯಕ್ಕೆ ಗಾಳಿ ಮತ್ತು ಇಂಧನ ಮಿಶ್ರಣ ಒಳಬರುತ್ತದೆ. ಸಂಕೋಚನ ಮತ್ತು ದಹನ ಸಮಯದಲ್ಲಿ ಎರಡೂ ಕವಾಟಗಳು ಮುಚ್ಚಿರುತ್ತವೆ.
ಪಿಸ್ಟನ್: ಸಿಲಿಂಡರ್ ಒಳಭಾಗದಲ್ಲಿ ಮೇಲೆ ಕೆಳಗೆ ಹೋಗುವ ಸಿಲಿಂಡರ್ ತುಂಡು.
ಪಿಸ್ಟನ್ ರಿಂಗ್‍ಗಳು: ಸಿಲಿಂಡರ್ ಒಳಭಾಗದಿಂದ ಯಾವುದೇ ಲೀಕ್ ಆಗದಂತೆ, ದಕ್ಷತೆಯಿಂದ ಇಂಧನ/ಗಾಳಿ ದಹನವಾಗುವಂತೆ ನೋಡಿಕೊಳ್ಳುತ್ತದೆ.
ಕನೆಕ್ಟಿಂಗ್ ರಾಡ್: ಪಿಸ್ಟನನ್ನು ಕ್ರಾಂಕ್‍ಶಾಫ್ಟ್‍ಗೆ ಕನೆಕ್ಟ್ ಮಾಡೋ ಕೆಲಸವನ್ನು ಕನೆಕ್ಟಿಂಗ್ ರಾಡ್ ಮಾಡುತ್ತದೆ. ಕ್ರಾಂಕ್‍ಶಾಫ್ಟ್: ಪಿಸ್ಟನ್ ಮೇಲೆ ಕೆಳಗೆ ಚಲಿಸಿದಾಗ ಕ್ರಾಂಕ್‍ಶಾಫ್ಟ್ ತಿರುಗುತ್ತದೆ.
ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಇತರೆ ಅಂಶಗಳು.
ವಾಲ್ವ್ ಟ್ರೈನ್: ಕವಾಟಗಳು ಮತ್ತು ಇತರ ಮೆಕಾನಿಸಂ ಇರುವ ವಾಲ್ವ್ ಟ್ರೈನ್‍ಗಳು ಕಾಮ್‍ಶಾಫ್ಟ್‍ನ್ನು ತೆರಯಲು ಮತ್ತು ಮುಚ್ಚಲು ನೆರವಾಗುತ್ತದೆ. ಹೆಚ್ಚಿನ ಆಧುನಿಕ ಎಂಜಿನ್‍ಗಳು ಓವರ್‍ಹೆಡ್ ಕ್ಯಾಮ್‍ಗಳನ್ನು ಹೊಂದಿರುತ್ತವೆ.
ರಾಡ್: ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಯಾಮ್‍ನ ಕೆಳಗೆ ಇರುವ ರಾಡ್‍ಗಳು ಸಹ ಸಮರ್ಪಕವಾಗಿ ಕೆಲಸ ಮಾಡಬೇಕು.
ಟೈಮಿಂಗ್ ಬೆಲ್ಟ್: ಟೈಮಿಂಗ್ ಚೈನ್ ಲಿಂಕ್ ಸಹ ಎಂಜಿನ್‍ನಲ್ಲಿ ಅತ್ಯಂತ ಅಗತ್ಯದ ಭಾಗ. ಈ ಚೈನ್ ಕ್ರಾಂಕ್‍ಶಾಫ್ಟ್‍ನಿಂದ ಕ್ಯಾಮ್‍ಶಾಫ್ಟ್‍ಗೆ ಲಿಂಕ್ ಮಾಡುತ್ತದೆ.
ಕ್ಯಾಮ್‍ಶಾಫ್ಟ್: ಹೆಚ್ಚಿನ ಆಧುನಿಕ ಎಂಜಿನ್‍ಗಳು ಪ್ರತಿಸಿಲಿಂಡರ್‍ಗೆ ನಾಲ್ಕು ವಾಲ್ವ್‍ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಎರಡು ಇಂಟೆಕ್‍ಗೆ ಮತ್ತು ಎರಡು ಎಗ್ಸಾಸ್ಟ್‍ಗೆ ಇರುತ್ತದೆ. ಇದರಿಂದಾಗಿ ಒಂದು ಸಿಲಿಂಡರ್‍ಗೆ ಎರಡು ಕ್ಯಾಮ್‍ಶಾಫ್ಟ್‍ಗಳು ಬೇಕಿರುತ್ತದೆ. ಇದಕ್ಕಾಗಿ ಡ್ಯೂಯಲ್ ಓವರ್‍ಹೆಡ್ ಕ್ಯಾಮ್ಸ್ ಬಳಕೆ ಮಾಡಲಾಗುತ್ತದೆ.

ಅಯ್ಯೋ ಎಂಜಿನ್ ಸ್ಟಾರ್ಟ್ ಆಗ್ತಿಲ್ಲ!
ಮುಂಜಾನೆ ಇಗ್ನಿಷನ್ ಕೀಲಿಕೈ ತಿರುಗಿಸಿದಾಗ ಕಾರು ಸ್ಟಾರ್ಟ್ ಆಗದ ಅನುಭವ ನಿಮಗೆ ಆಗಿರಬಹುದು. ಎಂಜಿನ್ ಸ್ಟಾರ್ಟ್ ಆಗದಿರಲು ನೂರಾರು ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಮೂರು ಕಾರಣಗಳಿವೆ.
ಅಸಮರ್ಪಕ ಇಂಧನ ಮಿಶ್ರಣ: ಇಂಧನ ಖಾಲಿಯಾದಗ ಎಂಜಿನ್‍ನೊಳಗೆ ಗಾಳಿ ಮಾತ್ರ ಪ್ರವೇಶಿಸುತ್ತದೆ. ಇಂಧನ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಏರ್ ಇಂಟೆಕ್ ಮುಚ್ಚಿದ್ದರೆ ಇಂಧನ ಪೂರೈಕೆ ಆಗುತ್ತದೆ, ಗಾಳಿ ಪೂರೈಕೆ ಆಗುವುದಿಲ್ಲ. ಒಮ್ಮೊಮ್ಮೆ ಹೆಚ್ಚು ಇಂಧನ, ಕಡಿಮೆ ಗಾಳಿ ಪೂರೈಕೆಯಾಗಬಹುದು. ಇಂಧನ ಟ್ಯಾಂಕ್‍ನಲ್ಲಿ ನೀರು ಪ್ರವೇಶಿಸಿದರೂ ಇಂಧನದ ಗುಣಮಟ್ಟ ಹಾಳಾಗಿ ಸ್ಟಾರ್ಟಿಂಗ್ ಟ್ರಬಲ್ ನೀಡಬಹುದು.
ಕಂಪ್ರೆಷನ್ ಪ್ರಾಬ್ಲಂ: ಗಾಳಿ ಮತ್ತು ಇಂಧನ ಸಮರ್ಪಕವಾಗಿ ಸಂಕೋಚನ ಆಗದೆ ಇದ್ದರೆ ಕಂಬಶ್ಟನ್ ಅಥವಾ ದಹನ ಪ್ರಕ್ರಿಯೆ ಸಮರ್ಪಕವಾಗಿ ನಡೆಯದು. ಕಂಪ್ರೆಷನ್‍ನಲ್ಲಿ ತೊಂದರೆ ಉಂಟಾಗಲು ಪಿಸ್ಟನ್ ರಿಂಗ್ ಸವೆದಿರುವುದೂ ಕಾರಣವಾಗಿರಬಹುದು. ಇಂಟೆಕ್ ಅಥವಾ ಎಗ್ಸಾಸ್ಟ್ ಕವಾಟಗಳು ಸರಿಯಾಗಿ ಸೀಲ್ ಆಗದಿದ್ದರೆ ಕಂಪ್ರೆಷನ್ ಸಮಯದಲ್ಲಿ ಲೀಕ್ ಉಂಟಾಗುತ್ತದೆ.
ಸ್ಪಾರ್ಕ್ ಆಗದಿರುವುದು: ಸ್ಪಾರ್ಕ್ ಪ್ಲಗ್‍ನ ವೈರ್‍ನಲ್ಲಿ ಉಂಟಾಗುವ ತೊಂದರೆಯಿಂದ ಕಿಡಿ ಹತ್ತಿಕೊಳ್ಳದಿದ್ದರೆ ಎಂಜಿನ್ ಸ್ಟಾರ್ಟ್ ಆಗದು. ಕೆಲವೊಮ್ಮೆ ಕಿಡಿ ಬೇಗ ಅಥವಾ ಲೇಟಾಗಿ ಹತ್ತಿಕೊಂಡರೂ ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದು.
ಇನ್ನಿತರ ಕಾರಣಗಳು: ಎಂಜಿನ್ ಸ್ಟಾರ್ಟ್ ಆಗದಿರಲು ಬ್ಯಾಟರಿ ಹಾಳಾಗಿರುವುದು, ಎಂಜಿನ್ ಕವಾಟಗಳು ಸರಿಯಾದ ಸಮಯಕ್ಕೆ ತೆರೆಯದೆ ಅಥವಾ ಮುಚ್ಚದೆ ಇರುವುದು ಇತ್ಯಾದಿ ಕಾರಣಗಳು ಇವೆ. ಆಯಿಲ್ ಇಲ್ಲದೆ ಪಿಸ್ಟನ್‍ಗೆ ಸರಾಗವಾಗಿ ಮೂವ್ ಆಗಲು ಸಾಧ್ಯವಾಗದೆ ಇದ್ದರೆ ಎಂಜಿನ್ ಸೀಝ್ ಆಗಬಹುದು.

ಕೂಲಾಗಿರಲಿ ಎಂಜಿನ್
ಎಂಜಿನ್ ಕೂಲಿಂಗ್: ಹೆಚ್ಚಿನ ಕಾರುಗಳಲ್ಲಿ ರೇಡಿಯೇಟರ್ ಮತ್ತು ವಾಟರ್ ಪಂಪ್ ಒಳಗೊಂಡಿರುವ ಕೂಲಿಂಗ್ ಸಿಸ್ಟಮ್ ಇರುತ್ತದೆ. ಸಿಲಿಂಡರ್ ಸುತ್ತಮುತ್ತ ನಾಳಗಳಲ್ಲಿ ನೀರು ಹರಿಯುತ್ತದೆ ಮತ್ತು ಮತ್ತೆ ರೇಡಿಯೇಟರ್ ಪ್ರವೇಶಿಸಿ ನಾಳಗಳಲ್ಲಿ ಹೊರಬರುತ್ತದೆ. ಏರ್‍ಕೂಲಿಂಗ್‍ನಿಂದ ಎಂಜಿನ್‍ಗೆ ತಂಪಾಗಿ ಹಾಯೆನಿಸುತ್ತದೆ. ಆದರೆ ಇದು ಎಂಜಿನ್ ಬಾಳ್ವಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ.

ಏರ್ ಇಂಟೆಕ್: ಹೆಚ್ಚಿನ ಕಾರುಗಳಲ್ಲಿ ಏರ್ ಫಿಲ್ಟರ್‍ನಿಂದ ನೇರವಾಗಿ ಸಿಲಿಂಡರ್‍ಗೆ ಗಾಳಿಯನ್ನು ಕಳುಹಿಸಿಕೊಡಲಾಗುತ್ತದೆ. ಟರ್ಬೊ ಜಾರ್ಜ್‍ಡ್ ಅಥವಾ ಸೂಪರ್ ಚಾರ್ಜ್‍ಡ್ ಎಂಜಿನ್‍ಗಳಲ್ಲಿ ಎಂಜಿನ್‍ಗೆ ಮೊದಲು ಏರ್ ಬರುತ್ತದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿರುತ್ತದೆ.



ಎಂಜಿನ್ ಲ್ಯುಬ್ರಿಕೇಷನ್: ಎಂಜಿನ್‍ನಲ್ಲಿ ಆಯಿಲ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಲುಬ್ರಿಕೇಷನ್ ವ್ಯವಸ್ಥೆಯು ಎಂಜಿನ್‍ನ ಎಲ್ಲಾ ಚಲಿಸುವ ಬಿಡಿಭಾಗಗಳಿಗೆ ಸಮರ್ಪಕವಾಗಿ ಆಯಿಲ್ ದೊರಕುವಂತೆ ಮಾಡುತ್ತದೆ. ಇದರಿಂದ ಎಂಜಿನ್‍ನ ಬಿಡಿಭಾಗಗಳು ಸಮರ್ಪಕವಾಗಿ ಚಲಿಸುತ್ತವೆ.- Praveen Chandra Puttur

(ಪೂರಕ ಮಾಹಿತಿ: ಹೌಸ್ಟಫ್ಸ್‍ವಕ್ರ್ಸ್‍ಡಾಟ್‍ಕಾಂ).



More information in web





How A Car Engine Works (animated infographic) - Jacob O'Neal





Wikipedia:

Internal combustion engine - Wikipedia, the free encyclopedia