Showing posts with label Story. Show all posts
Showing posts with label Story. Show all posts

Thursday, 20 October 2016

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

"ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ' ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. "ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ" ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ.


"ಇವತ್ತು ಡೇಟ್ ಎಷ್ಟು?' ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  "ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು' ಎಂದಿತ್ತು. ಸಮಯ ಹೋಗೋದೇ ಗೊತ್ತಾಗ್ತ ಇಲ್ಲ. ರಾಮ ರಾಮ' ಎಂದೆ. ಅದನ್ನೇ ಕಮಾಂಡ್ ಎಂದುಕೊಂಡ ರೋಬೊ "ರಾಮ ರಾಮ ಜಯರಾಮ, ರಘುರಾಮ' ಎಂದು ರಾಮ ಶ್ಲೋಕ ಹಾಡತೊಡಗಿತು. ಸ್ವಲ್ಪ ಹೊತ್ತು ಕೇಳುತ್ತ ಕುಳಿತೆ.


ಸರಿ, ಬಾತ್ ರೂಂಗೆ ಹೋಗಿ ಬರೋಣ ಎಂದು ಎದ್ದೆ. ಜೊತೆಗೆ ರೋಬೊನೂ ಬಂತು. "ಶೀ, ನೀನು ಹೊರಗೆ ಇರಪ್ಪ' ಎಂದೆ. "ನಿಮ್ಮ ಸೇವೆ ನನ್ನ ಕರ್ತವ್ಯ' ಎಂದು ಒಳಗೆ ಬಂತು. ಪ್ರತಿದಿನ ಇದೇ ಡೈಲಾಗ್ ಎಂದುಕೊಂಡು ಕುಳಿತುಕೊಂಡೆ. "ಸರಿಯಾದ ಪೊಸಿಷನ್ ನಲ್ಲಿ ಕುಳಿತುಕೊಳ್ಳಿ' ಆಜ್ಞಾಪಿಸಿತು. ಅದು ಹೇಳಿದಂತೆ ಕೇಳದೆ ಬೇರೆ ವಿಧಿಯಿಲ್ಲ. "ರೋಬೊ ಇಂಡಿಯಾ" ಪರಿಕಲ್ಪನೆ ಸರಿಯಾಗಿ ಜಾರಿಯಾಗಿದೆ ಎಂದುಕೊಂಡೆ.


'ಯಾವ ಪೇಪರ್ ಓದಲು ಇಷ್ಟಪಡುವಿರಿ' ಅದೇ ಮಾಮೂಲಿ ಡೈಲಾಗ್. ಇದನ್ನು ಪ್ರೋಗ್ರಾಮ್ ಮಾಡಿದವ ಸಿಕ್ಕರೆ ಸಾಯಿಸಿಬಿಡುತ್ತಿದ್ದೆ. "ಮರ್ಡರ್ ಬಗ್ಗೆ ಯೋಚನೆ ಮಾಡುವುದು ಅಪರಾಧ' ಎಂದಿತು ರೋಬೊ. ಇದಕ್ಕೆ ಮೈಂಡ್ ರೀಡಿಂಗ್ ಸಹ ಗೊತ್ತು. ಇನ್ನೊಮ್ಮೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೋ ಏನೋ.


"ಪೇಪರ್ ಆಮೇಲೆ ಓದ್ತಿನಿ. ಕನ್ನಡ ಚಿತ್ರಗೀತೆ ಹಾಕಪ್ಪ' ಅಂದೆ. ತಕ್ಷಣ ಅದು ಯಾವುದೋ ಹಾಡು ಹಾಕಿತು. ನಾನು ಬೇಡವೆಂದು ತಲೆಯಾಡಿಸಿದರೆ ಬೇರೆ ಹಾಡುಬರುತ್ತಿತ್ತು. ಈಗ ಕನ್ನಡ ಹಾಡುಗಳಲ್ಲಿ ಕನ್ನಡ ಪದ ಹುಡುಕಬೇಕು ಎಂದು ಗೊಣಗಿದೆ. ಅದಕ್ಕೆ ರೋಬೊ "ಪ್ಲೀಸ್ ರಿಪೀಟ್ ಯುವರ್ ಕಮಾಂಡ್' ಅಂತು. "ಏನಿಲ್ಲ ಮುಗೀತು' ಅಂದೆ. ಅದು ಟಿಶ್ಯು ತಂದುಕೊಡ್ತು. ಟಾಯ್ಲೆಟ್ ನಲ್ಲಿ ನೀರು ಬಳಸುವುದು ಅಪರಾಧ ಅಂತ ಗ್ಲೋಬಲ್ ಐಟಿ ಕೋರ್ಟ್ ಬೇರೆ ಇತ್ತೀಚೆಗೆ ತೀರ್ಪು ನೀಡಿದೆ. .


ಅಲ್ಲಿಂದ ಹೊರಗೆ ಬಂದೆ. ರೋಬೊ ಅಲ್ಲೇ ಪಕ್ಕದಲ್ಲಿದ್ದ ಮೆಷಿನ್ ಒಳಗಿನಿಂದ ಒಂದು ಲೋಟ ಚಹಾ ತಂದುಕೊಡ್ತು. ಕುಡಿದಾಗ ಹಾಯೆನಿಸಿತ್ತು. "ಏನಪ್ಪ ಇವತ್ತಿನ ಸುದ್ದಿ?" ಅಂದೆ. ರೋಬೊ ಕೈಬೆರಳಿನಿಂದ ಬೆಳಕು ಹೊರಗೆ ಬಂದು ಗೋಡೆ ಮೇಲೆ ಬಿತ್ತು. ನೂರಾರು ಇಂಗ್ಲಿಷ್ ಪೇಪರ್ ಗಳ ಹೆಸರು ಪಟಪಟನೆ ಮೂಡಿದವು. ಕನ್ನಡ ಪೇಪರ್ ಅಂದ್ರೆ ಈ ರೋಬೊಗೂ ತಾತ್ಸಾರ. ವಿಜಯ ಕರ್ನಾಟಕ ಹಾಕಪ್ಪ ಅಂದೆ. ಸ್ವಲ್ಪ ಸ್ಲೋ ಆಗಿ ಲೋಡ್ ಆಯ್ತು. ಕನ್ನಡ ಪೇಪರ್ ಗಳೆಲ್ಲ ಸ್ಲೋ ಆಗಿಯೇ ಲೋಡ್ ಆಗೋದು. ಅದು ಈ ರೋಬೊ ಕುತಂತ್ರ ಆಗಿರಬೇಕು.


ವಿಜಯ ಕರ್ನಾಟಕ ಗೋಡೆ ಮೇಲೆ ಮೂಡಿತು. ರಾಜ್ಯದಲ್ಲಿ ವೈಫೈ ಉಚಿತ ಅಂತ ಮುಖ್ಯಮಂತ್ರಿ ಘೋಷಣೆ ಮಾಡಿದ್ರು. ಅಕ್ಕಿ ಬೆಲೆ ಇಳಿಕೆ ಎಂದಿತ್ತು. ಅದನ್ನು ನೋಡಿ ಖುಷಿಯಾಯ್ತು. ಒಂದು ಕೇಜಿ ಅಕ್ಕಿ ದರ 12 ಸಾವಿರಕ್ಕೆ ಇಳಿದಿತ್ತು. ಕೆಲವು ದಿನದ ಹಿಂದೆ ಅಕ್ಕಿ ರೇಟ್ ಕೇಜಿಗೆ 18 ಸಾವಿರ ರೂ. ಇತ್ತು. ದುಡ್ಡಿಗೆ ಬೆಲೆ ಇಲ್ಲ. ಒಂದೊಂದು ಸುದ್ದಿನ ನೋಡಿದಾಗ ಅದು ಝೂಮ್ ಆಗುತ್ತಿತ್ತು. ಏನೋ ಗೆಶ್ಚರ್ ಟೆಕ್ನಾಲಜಿಯಂತೆ. ನಾನು ದೂರದಿಂದಲೇ ಕೈಯಾಡಿಸಿದರೆ ಸುದ್ದಿ ಬೇಕಾದಂತೆ ಬದಲಾಗುತ್ತಿತ್ತು. ನಾನು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗಿರಲಿಲ್ಲ. ಚೆನ್ನಾಗಿ ಹತ್ತಿಪ್ಪತ್ತು ಪುಟಗಳ ಪೇಪರ್ ಬರುತ್ತಿತ್ತು. ಈಗ ಪೇಪರ್ ಕತೆ ಹೇಳಿದರೆ ಮಗ ನಗುತ್ತಾನೆ. ಈಗ ಅದೇ ವಿನ್ಯಾಸದ ಪೇಪರ್ ಗೋಡೆ ಮೇಲೆ ಮೂಡುತ್ತದೆ.


ಸರಿ, ನಾನು ವಾಕಿಂಗ್ ಹೋಗಿ ಬರ್ತಿನಿ ಅಂತ ಎದ್ದು ಹೋದೆ. ಓಕೆ ಅಂತ ಹೇಳಿತು ರೋಬೊ. ಸದ್ಯ ಇದರ ಸಹವಾಸ ತಪ್ಪಿತು ಅಂತ ಹೊರಗೆ ಬಂದೆ. ಹೆಸರಿಗಷ್ಟೇ ಪಾರ್ಕ್. ಎಲ್ಲವೂ ಗಿಡಗಳ ಕಾಂಕ್ರಿಟ್  ಕಲಾಕೃತಿಗಳು. ಒಂದೆಡೆ ಆಮ್ಲಜನಕ ಸಿಂಪಡಣೆ ಬೇರೆ. ಕೈನಲ್ಲಿದ್ದ ವಾಚ್ ವೈಬ್ರೆಟ್ ಆಯ್ತು. ಪಾರ್ಕ್ ಬೆಂಚ್ ಮೇಲೆ ವಾಚ್ ಪೋಕಸ್ ಮಾಡಿದೆ. ಅಲ್ಲಿ ಮೂಡಿದ ಪರದೆ ಮೇಲೆ ಗೆಳೆಯ ಸೂರ್ಯ ಇದ್ದ. ಅವನು ಆಗಾಗ ಚಾಟಿಂಗ್ ಗೆ ಬರುತ್ತಾನೆ. ಆತ ನನ್ನ ಕ್ಲಾಸ್ ಮೇಟ್. ನಾನು ವಿಜಯ ನೆಕ್ಸ್ಟ್ ವೀಕ್ಲಿಯಲ್ಲಿದ್ದಾಗ ಅವನು ಪ್ರಜಾವಾಣಿಯಲ್ಲಿದ್ದ.


"ಹೇ, ದನಿಕುಲೆ, ದಾನೆ ಮಾರಾಯ ಸುದ್ದಿನೇ ಇಜ್ಜಿ(ಏನು ಧನಿಗಳೇ ಸುದ್ದಿನೇ ಇಲ್ಲ)' ಅಂದ. "ಎಂಚಿ ಸಾವು ಮಾರೆ, ಬೋರ್ ಲೈಫ್' ಅಂದೆ. ಹೆಚ್ಚಾಗಿ ನಾವು ತುಳುವಿನಲ್ಲೇ ಮಾತಾಡೋದು. ತುಳು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ರೋಬೊ ಇನ್ನೂ ಬಂದಿಲ್ಲ. ರೋಬೊ ಭಾಷೆಗೆ ತುಳುವನ್ನು ಸೇರಿಸಬೇಕು ಎಂದು ದೆಹಲಿಯಲ್ಲಿ ಈಗಲೂ ಹೋರಾಟ ನಡೆಯುತ್ತಲೇ ಇದೆ.


ನಾವು ತುಳುವಿನಲ್ಲೇ ಮಾತು ಮುಂದುವರೆಸಿದೆವು. ಅದರ ಕನ್ನಡ ಅನುವಾದ ಹೀಗಿದೆ. "ಸೂರ್ಯ ನಿನ್ನ ಮಗ ಮಾರ್ಸ್ ನಿಂದ ಯಾವಾಗ ವಾಪಸ್ ಬರ್ತಾನೆ' ಎಂದೆ. "ಅವನನ್ನು ಬಿಡಪ್ಪ. ಅಲ್ಲೇ ಹೋಗಿ ಸೆಟ್ಲ್ ಆದರೂ ಆದನು' ಎಂದ. ಸೂರ್ಯನ ಮಗ ನಾಸಾದಲ್ಲಿ ಕೆಲಸ ಮಾಡೋದು. ಒಮ್ಮೆ ಮಾರ್ಸ್, ಒಮ್ಮೆ ಲೂನಾರ್ಸ್ ಅಂತ ವರ್ಷಕ್ಕೆ ಎರಡು ಬಾರಿ ಟ್ರಿಪ್ ಹೋಗ್ತಾ ಇರ್ತಾನೆ. "ನನ್ನನ್ನೂ ಲೂನಾರ್ಸ್ ಗೆ ಕರ್ಕೊಂಡು ಹೋಗ್ತಾನಂತೆ' ಎಂದು  ಸೂರ್ಯ. "ನೀನು ಬಿಡಪ್ಪ ನಿನ್ನ ಹೆಸರೇ ಸೂರ್ಯ, ಎಲ್ಲಾ ಗ್ರಹಗಳು ನಿನ್ನ ಸುತ್ತ ಸುತ್ತುತ್ತಿವೆ' ಅಂದೆ. "ಹ್ಹ ಹ್ಹ ಹ್ಹ' ಗಹಿಗಹಿಸಿ ನಕ್ಕ' ಅವನ ನಗುವೇ ಹಾಗೆ. ಕ್ಲಾಸಲ್ಲಿ ಪಾಠ ನಡೆಯುವಾಗಲೂ ಹೀಗೆ ಅಟ್ಟಹಾಸ ಮಾಡುತ್ತಿದ್ದ.


"ವಿಷ್ಯ ಗೊತ್ತಾಯ್ತ' ಅವನು ಬ್ರೇಕಿಂಗ್ ನ್ಯೂಸೊಂದು ಹೇಳಿದ. "ಗ್ಯಾಲಾಕ್ಸಿಯಲ್ಲಿ ತುಂಬಾ ನೀರಿರುವ ಒಂದು ಗ್ರಹ ಸಿಕ್ಕಿದೆಯಂತೆ. ಇಲ್ಲಿರುವ ಎಲ್ಲಾ ಓಲ್ಡ್ ಪೀಪಲ್ ಗಳನ್ನು ಅಲ್ಲಿಗೆ ಕಲಿಸ್ತಾರಂತೆ. ನಾಸಾದಲ್ಲಿ ಈ ಪ್ರಾಜೆಕ್ಟ್ ನಡೀತಾ ಇದೆ. ನಾವೇಲ್ಲ ಬೇಗ ಆ ಗ್ರಹಕ್ಕೆ ಹೋಗೋದು ಗ್ಯಾರಂಟಿ' ಅಂದ.


ಯಾರು ಬೇಕಾದರೂ ಹೋಗ್ಲಿ. ನಾನು ಮಾತ್ರ ಪುತ್ತೂರಲ್ಲೇ ಸಾಯೋದು ಅಂದೆ. ಮತ್ತೆ ಹ್ಹ ಹ್ಹ ಎಂದು ನಕ್ಕ ಸೂರ್ಯ "ಸರಿ, ನಾನು ಆಮೇಲೆ ಸಿಗ್ತಿನಿ. ರೋಬೊ ವಿಶ್ವಕಪ್ ಫುಟ್ಬಾಲ್ ನೋಡ್ಬೇಕು' ಅಂತ ಹೇಳಿ ಮರೆಯಾದ.


ಕತೆ ತುಂಬಾ ಉದ್ದ ಆಯ್ತು. ಸದ್ಯ ಇಷ್ಟು ಸಾಕು ;-).

Friday, 30 September 2016

ತುಕ್ರ ಬೆಂಗಳೂರಿಗೆ ಹೋದದ್ದು..

ತುಕ್ರ ಬೆಂಗಳೂರಿಗೆ ಹೋದದ್ದು..

ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್‌ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್‌ ತುಂಡಾಗಿರುವ ಟೈಟಾನ್‌ ಕಂಪನಿಯ ವಾಚ್‌ ತೆರೆದು ಗಂಟೆ ನೋಡಿಕೊಂಡ. ಇನ್ನೂ ಆರೂವರೆಯಷ್ಟೇ. ಏಳುವರೆಗೆ ಮೆಜೆಸ್ಟಿಕ್‌ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು. ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ. ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು. `ಸಾಬ್‌ ಬೀಡಿ’ ಅಂತ ಮುದುಕನೊಬ್ಬ ಇವನ ಪಕ್ಕ ಕುಳಿತುಕೊಂಡಾಗ ಅವನಿಗೂ ಒಂದು ತೆಗೆದುಕೊಟ್ಟ. ಆತ ಸಹ ಬಾಗಿಲ ಪಕ್ಕದಲ್ಲಿ ಇವನಿಗೆ ಒರಗಿ ಕುಳಿತ. ಸ್ವಲ್ಪ ಸಮಯವಾದಗ ಒಂದಿಷ್ಟು ತೂಕಡಿಕೆ ಬಂದಂತಾಗಿ ಅಲ್ಲಿಂದ ಎದ್ದು ಬಂದ ತುಕ್ರ ಸೀಟ್‌ನಲ್ಲಿ ಕುಳಿತುಕೊಂಡ.

****
ದಿನಾ ಕುಡಿದು ಬರುವುದನ್ನು ತುಕ್ರಾನ ಹೆಂಡತಿ ಕಮಲ ಆಕ್ಷೇಪಿಸುತ್ತಿದ್ದಳು. ಇದೇ ಕಾರಣಕ್ಕೆ ದಿನನಿತ್ಯ ಸಣ್ಣಪುಟ್ಟ ಜಗಳವೂ ಆಗುತ್ತಿತ್ತು. ನಿನ್ನೆ ರಾತ್ರಿ ಹೆಂಡತಿ ಏನೋ ಹೇಳಿದ್ದು ಇವನ ಪಿತ್ತವನ್ನು ನೆತ್ತಿಗೇರಿಸಿತ್ತು. ನೀನು ಒಬ್ಬಳೇ ಇಲ್ಲಿರು. ನಾನು ಮಗನಲ್ಲಿಗೆ ಹೋಗ್ತಿನಿ ಅಂದಾಗ ಕಮಲ ಮೊದಲು ಕುಡಿದ ಅಮಲಿಗೆ ಹೇಳುತ್ತಿದ್ದಾನೆ ಅಂದುಕೊಂಡಳು. ಕ್ವಿಂಟಾಲ್‌ ಅಕ್ಕಿ ತರಲೆಂದು ಕಪಾಟ್‌ನಲ್ಲಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕಿಸೆಗೆ ಹಾಕಿಕೊಂಡು ಅಂಗಿ ಹಾಕಿದಾಗ ಕಮಲ ಕಳವಳಗೊಂಡು ಕ್ಷಮೆ ಕೇಳಿದರೂ ತುಕ್ರ ಹಠ ಬಿಡಲಿಲ್ಲ. ಯಾಕೋ ಎಂದು ನೋಡಿರದ ಬೆಂಗಳೂರು ಕುಡಿದ ಅಮಲಿನಲ್ಲಿ ತುಕ್ರನಿಗೆ ಸುಂದರವಾಗಿ ಕಾಣಿಸಿತ್ತು. ಮತ್ತೆ ಒಂದಿಷ್ಟು ಜಗಳ ಮಾಡಿ ಸೀದಾ ಪುತ್ತೂರು ರೈಲ್ವೆ ಸ್ಟೇಷನ್‌ಗೆ ಬಂದಿದ್ದ. ಸ್ಟೇಷನ್‌ವರೆಗೆ ಹೂವಿನ ಅಂಗಡಿಯ ಗಡಂಗ್‌ ಗೆಳೆಯ ನಾರಾಯಣನನ್ನು ಕರೆದುಕೊಂಡು ಹೋಗಿದ್ದ.

****
ಪುತ್ತೂರು ರೈಲ್ವೆ ಸ್ಟೇಷನ್‌ಗೆ ಬಂದವನೇ ಕ್ವಾಯಿನ್‌ ಬಾಕ್ಸ್‌ನಲ್ಲಿ ಯಾರಿಂದಲೋ ನಂಬರ್‌ ಡಯಲ್‌ ಮಾಡಿಸಿ ಮಗನಲ್ಲಿ ಮಾತನಾಡಿದ್ದ. ನಾನು ಬೆಂಗಳೂರಿಗೆ ಬರ್ತಿನಿ ಅಂತ ಮಗನಲ್ಲಿ ಹೇಳಿದಾಗ ಇವರು ತಮಾಷೆಗೆ ಹೇಳುತ್ತಿದ್ದಾರೆ ಅಂತ ತಿಳಿದುಕೊಂಡು ಏನು ಕುಡಿದದ್ದು ಜಾಸ್ತಿ ಆಗಿದೆಯಾ ಅಂತ ಮಗ ಚಂದ್ರಕಾಂತ್‌ ನಕ್ಕ. ಈಗಲೇ ಬರುತ್ತಿದ್ದೇನೆ ಅಂದಾಗ ಇವನಿಗೆ ತಬ್ಬಿಬ್ಬಾಯಿತು. ತಂದೆಗೆ ಬುದ್ಧಿ ಹೇಳುವಂತೆ ನಾರಾಯಣನ ಮೂಲಕ ಹೇಳಿಸಿದರೂ ತುಕ್ರ ಕಿವಿಗೆ ಹಾಕಿಕೊಳ್ಳಲಿಲ್ಲ. `ನೀನು ನನ್ನ ಮಗ ಆಗಿದ್ರೆ ನಾಳೆ ರೈಲ್ವೆ ಸ್ಟೇಷನ್‌ಗೆ ಬಂದು ಕರ್ಕೊಂಡು ಹೋಗು’ ಅಂತ ಮತ್ತಿನಲ್ಲಿ ಹೇಳಿದ್ದ. ಕೊನೆಗೆ ಚಂದ್ರಕಾಂತ, ರೈಲು ಎಷ್ಟು ಗಂಟೆಗೆ ಬರುತ್ತೆ, ಎಲ್ಲಿ ನಿಲ್ಲಬೇಕು. ಬಂದ ಕೂಡಲೇ ಫೋನ್‌ ಮಾಡಬೇಕು ಅಂತ ತುಂಬಾ ಎಚ್ಚರಿಕೆ ಹೇಳಿದ. ಅವನು ಕಿವಿಗೆ ಹಾಕಿಕೊಂಡನೋ ಬಿಟ್ಟನೋ ಕಿಸೆಯಲ್ಲಿದ್ದ ಕ್ವಾಯಿನ್‌ ಮುಗಿದಾಗ ಫೋನ್‌ ಕೆಳಗಿಟ್ಟು ಟಿಕೇಟ್‌ ಮಾಡಿ ರೈಲು ಹತ್ತಿಬಿಟ್ಟ. ಎಚ್ಚರವಾದಾಗ ಆರುಗಂಟೆ ಕಳೆದಿತ್ತು.

****
ಒಮ್ಮೆಗೆ ರೈಲು ನಿಂತಿತ್ತು. ಮೈಮೇಲೆ ಯಾರು ಬಿದ್ದಂತಾಗಿ ಎದ್ದು ಕುಳಿತ ತುಕ್ರ ಹೊರಗಿನ ಪರಿಸರವನ್ನು ಅಚ್ಚರಿಯಿಂದ ನೋಡುತ್ತ ಕುಳಿತ. ಇದು ಯಾವ ಸ್ಥಳ ಅಂತ ಅಲ್ಲಿ ಯಾರೋ ಒಬ್ಬರನ್ನು ಕೇಳಿದ. ಮೆಜೆಸ್ಟಿಕ್‌ ಅಂದಾಗ ಗಡಿಬಿಡಿಯಿಂದ ಎದ್ದು ರೈಲಿನಿಂದಿಳಿದ. ಅಬ್ಬಾ ಎಷ್ಟೊಂದು ರೈಲುಗಳು, ಎಷ್ಟು ಜನರಿದ್ದಾರೆ. ಪುತ್ತೂರಿನಲ್ಲಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆಯಲ್ಲೂ ಇಷ್ಟು ಜನ ಇರಲಿಕ್ಕಿಲ್ಲ ಅಂದುಕೊಂಡ. ಆತ ಮಂಗಳೂರಿಗೆ 2 ಬಾರಿ ಹೋಗಿದ್ದ ಅಷ್ಟೇ. ಬೆಂಗಳೂರೆಂದರೆ ಮಂಗ್ಳೂರಿಗಿಂತ ಸ್ವಲ್ಪ ದೊಡ್ಡದಿರಬಹುದು ಅಂದುಕೊಂಡಿದ್ದ. ಯಾವುದಕ್ಕೂ ಮಗನಿಗೆ ಫೋನ್‌ ಮಾಡಬೇಕು ಅಂತ ಯೋಚಿಸಿ ಎಲ್ಲಿಯಾದರೂ ಕ್ವಾಯಿನ್‌ ಬಾಕ್ಸ್‌ ಕಾಣಿಸುತ್ತದೆಯೇ ಎಂದು ಹುಡುಕಿದ. ಅಲ್ಲಿ ಯಾರೋ ಕಾಫಿ ಮಾರುತ್ತಿರುವುದನ್ನು ಕಂಡು ಒಂದು ಚಾ ಅಂದ. ಅವನು ಪ್ಲಾಸ್ಟಿಕ್‌ ಗ್ಲಾಸ್‌ಗೆ ಟೀ ಹಾಕುತ್ತಿದ್ದಾಗ ಹಣ ತೆಗೆಯಲು ಅಂತ ಕಿಸೆ ನೋಡಿಕೊಂಡವನೇ ರಾಮ ರಾಮ ಅಂತ ಬೊಬ್ಬೆ ಹಾಕಿದ.

ಆತನ ಮುಂಡಿನ ಒಳಗಡೆಯಿದ್ದ ಅಂಡರ್‌ವೇರ್‌ನ ಕಿಸೆಯನ್ನೇ ಕಟ್‌ ಮಾಡಲಾಗಿತ್ತು. ಟೀಯವನನ್ನು ಅಲ್ಲೇ ಬಿಟ್ಟು ಪಕ್ಕದಲ್ಲಿದ್ದ ಬೆಂಚಿನಲ್ಲಿ ಕುಸಿದು ಕುಳಿತ ತುಕ್ರನಿಗೆ ಆಕಾಶವೇ ಬಿದ್ದಾಂತಾಯಿತು. ದೇವರೇ ಅಕ್ಕಿಗಿಟ್ಟ ದುಡ್ಡು ಬೇವರ್ಸಿಗಳು ಕದ್ದು ಬಿಟ್ಟರಲ್ಲ ಅಂತ ಶಾಪ ಹಾಕುತ್ತಿದ್ದಾಗ ಅದೇ ಪರ್ಸ್‌ನಲ್ಲಿ ಮಗನ ಮೊಬೈಲ್‌ ನಂಬರ್‌ ಇದ್ದದ್ದು ನೆನಪಾಯಿತು. ಇನ್ನೇನೂ ಮಾಡಲಿ ದೇವರೇ ಅಂತ ತಲೆಮೇಲೆ ಕೈಹೊತ್ತುಕೊಂಡು ಅಲ್ಲಿಯೇ ಕುಳಿತ. ಕುಳಿತಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ `ಪಾಶಾನಮೂರ್ತಿ ದೈವವೇ ಕಾಪಾಡು’ ಅಂತ ಅಲ್ಲಿಯೇ ಹುಚ್ಚನಂತೆ ತಿರುಗಾಡತೊಡಗಿದ.

****
ಮಂಗಳೂರು ರೈಲು ಬಂದಾಗ ಚಂದ್ರಕಾಂತ್‌ ಫ್ಲಾಟ್‌ಫಾರ್ಮ್‌ನಲ್ಲಿಯೇ ಇದ್ದ. ಇನ್ನೂ ಯಾಕೆ ಇವರು ಫೋನ್‌ ಮಾಡಿಲ್ಲ ಅಂತ ಮೊಬೈಲನ್ನೇ ನೋಡುತ್ತಿದ್ದ. ರೈಲು ಹೋಗಿ ಹತ್ತು ನಿಮಿಷ ಆದರೂ ಅಪ್ಪ ಫೋನ್‌ ಮಾಡದೇ ಇದ್ದಾಗ ಒಂದಿಷ್ಟು ಕಳವಳದಿಂದ ಫ್ಲಾಟ್‌ಫಾರ್ಮ್‌ನಲ್ಲಿ ಹುಡುಕಾಡತೊಡಗಿದ. ಇವರು ನಿದ್ದೆ ಮಾಡಿ ಮೆಜೆಸ್ಟಿಕ್‌ ಬಂದದ್ದೇ ಗೊತ್ತಿಲ್ಲದೇ ಯಶವಂತಪುರದಲ್ಲಿ ಇಳಿದರೋ ಎಂಬ ಸಂಶಯವೂ ಉಂಟಾಯಿತು.

ರೈಲು ಹೋಗಿ ಅರ್ಧಗಂಟೆ ಕಳೆಯಿತು. ಒಂದು ಕಡೆ ಕೋಪನೂ ಬಂತು. ನಾನು ಬರಬೇಡ ಅಂದಿದ್ದೆ. ಕೇಳದೆ ಬಂದ್ರು. ಥಕ್‌ ಒಳ್ಳೆ ಪಿಕಳಾಟ ಆಯ್ತಲ್ಲ ಅಂತ ಗೊಣಗಿಕೊಂಡ. ಎಲ್ಲ ಕಡೆ ಸುತ್ತಾಡಿ ಸಾಕಾಗಿ ಅಲ್ಲೇ ಬೆಂಚಿನ ಮೇಲೆ ಕುಳಿತ. ಅಥವಾ ಬರ್ತಿನಿ ಅಂತ ಹೇಳಿ ಬಂದಿಲ್ಲವೋ ಹೇಗೆ ಅಂದುಕೊಂಡು ಮನೆಗೆ ಫೋನ್‌ ಮಾಡಿ ಕೇಳಿದ. ಅವನ ಅಮ್ಮ ಅಳುತ್ತ `ನಿನ್ನೆಯೇ ಹೊದ್ರಂತೆ. ಹೂವಿನಂಗಡಿಯ ನಾರಾಯಣನೇ ರೈಲು ಹತ್ತಿಸಿ ಬಂದದಂತೆ’ ಅಂತ ತಿಳಿಸಿದರು. ಅಮ್ಮನಿಗೆ ಸಮಧಾನ ಹೇಳಿ ಫೋನ್‌ ಇಟ್ಟ.
****
ಗಂಟೆ ಒಂಬತ್ತಾಗುತ್ತ ಬಂತು. ಅವನು ಫ್ಲಾಟ್‌ಫಾರ್ಮ್‌ನಲ್ಲಿ ಹುಡುಕದೇ ಉಳಿದ ಸ್ಥಳ ಯಾವುದೂ ಉಳಿಯಲಿಲ್ಲ. ಅಯ್ಯೋ ಈ ಬೆಂಗಳೂರಲ್ಲಿ ಅವರನ್ನು ಎಲ್ಲಿ ಅಂತ ಹುಡುಕಲಿ ಎಂದು ಗೊತ್ತಾಗದೇ ತಲೆ ಕೆರೆದುಕೊಂಡ. ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಅಂತ ಅಮ್ಮ ಹೇಳಿದ್ದು ನೆನಪಾಗಿ ಸ್ವಲ್ಪ ಸಮಧಾನವೂ ಆಯಿತು. ದುಡ್ಡಿದ್ದರೆ ಹೇಗಾದರೂ ಇಲ್ಲಿ ಬದುಕಬಹುದು. ಅಥವಾ ವಾಪಸ್‌ ಮನೆಗೆ ಹೋಗಬಹುದು ಅಂದುಕೊಂಡ. ಸಂಜೆ ತನಕ ಇಲ್ಲೇ ಕಾಯುವುದು ಅಂತ ತೀರ್ಮಾನಿಸಿದ ಚಂದ್ರಕಾಂತ್‌ ಹುಡುಕಾಟ ಮುಂದುವರೆಸಿದ. ಆತ ತನ್ನ ಕೆಲವು ಸ್ನೇಹಿತರಿಗೂ ವಿಷಯ ತಿಳಿಸಿದ. ಅವರೂ ಮೆಜೆಸ್ಟಿಕ್‌ಗೆ ಬರುವುದಾಗಿ ಹೇಳಿದ್ರು.

****
ಚಂದ್ರಕಾಂತ್‌ಗೆ ಬೆಳಗ್ಗಿನಿಂದ ಹುಡುಕಿ ಸಾಕಾಗಿ ಹೋಗಿತ್ತು. ಚಿಕ್ಕದಿನಿಂದ ಅವನಿಗೆೆ ಅಪ್ಪನೆಂದರೆ ಪ್ರೀತಿ ಜಾಸ್ತಿ. ಅಪ್ಪ ದುಡಿದ ಹಣದಿಂದಲೇ ಕಷ್ಟಪಟ್ಟು ಡಿಪ್ಲೋಮ ಓದಿದ್ದ. ಅಂತಹ ಬಡತನದಲ್ಲೂ ಬೆಂಗಳೂರಿನಲ್ಲಿ ಒಳ್ಳೆ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಲು ಅಪ್ಪನ ದುಡಿತವೇ ಕಾರಣವಾಗಿತ್ತು. ಆದ್ರೆ ಅಪ್ಪ ದುಡುಕಿಬಿಟ್ಟ ಅಂತ ಅನಿಸಿತ್ತು. ಒಂದು ಕಡೆ ಅಮ್ಮನ ಮೇಲೂ ಕೋಪ ಬಂತು. ಆದರೆ ಅಮ್ಮ ಇಲ್ಲದಿದ್ದರೆ ಅಪ್ಪ ಮಹಾ ಕುಡುಕನಾಗುತ್ತಿದ್ದ ಅಂತ ಸಮಧಾನ ಮಾಡಿಕೊಂಡ.

****
ಗೆಳೆಯರೊಂದಿಗೆ ಸೇರಿ ಮುಂದೆ ಏನು ಮಾಡೋದೆಂದು ಚರ್ಚಿಸಿದ. ನಾಳೆಯವರೆಗೆ ಕಾಯೋಣ ಅಂತ ಒಬ್ಬ ಸಲಹೆ ನೀಡಿದರೆ ಮತ್ತೊಬ್ಬ ಪೋಲಿಸ್‌ ಕಂಪ್ಲೇಟ್‌ ಕೊಡೋದು ಒಳ್ಳೆಯದೆಂದು ತಿಳಿಸಿದ. ಕೊನೆಗೆ ಎಲ್ಲರೂ ಚರ್ಚಿಸಿ ಪೋಲಿಸ್‌ ಕಂಪ್ಲೇಟ್‌ ಕೊಡುವುದು ಸೂಕ್ತ ಎಂದು ತೀರ್ಮಾನಿಸಿದರು. `ಅವರು ಕಂಪ್ಲೇಟ್‌ ಪಡೆದುಕೊಂಡು ಹುಡುಕದೇ ಇದ್ರೆ’ ಅಂತ ಒಬ್ಬ ವರಾತ ತೆಗೆದಾಗ ಚಂದ್ರಕಾಂತನಿಗೆ ಹೌದೆನಿಸಿತು. ಇಲ್ಲಿ ದಿನಕ್ಕೆ ಎಷ್ಟು ಸಾವಿರ ಇಂತಹ ಪ್ರಕರಣ ಬರುತ್ತದೆಯೋ ಯಾರಿಗೆ ಗೊತ್ತು ಅಂತ ಅಂದುಕೊಂಡ. ಈ ಸಮಸ್ಯೆಗೆ ಸ್ನೇಹಿತನೊಬ್ಬನ ಮೂಲಕ ಪರಿಹಾರ ಸಿಕ್ಕಿತು. ಆತನ ಸಂಬಂಧಿಕರೊಬ್ಬರು ಬೆಂಗಳೂರು ಪೋಲಿಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಮೂಲಕವೇ ಕಂಪ್ಲೇಟ್‌ ಕೊಡಲಾಯಿತು. ಶೀಘ್ರದಲ್ಲಿ ಹುಡುಕಿಕೊಡುವ ಭರವಸೆಯೇನೂ ಸಿಕ್ಕಿತು.

****
ಎರಡು ದಿನ ಕಳೆದವು. ಪೋಲಿಸ್‌ ಸ್ಟೇಷನ್‌ನಿಂದ ಏನೂ ಮಾಹಿತಿ ಸಿಗಲಿಲ್ಲ. ಈತ ಆಗಾಗ ಸ್ಟೇಷನ್‌ಗೆ ಫೋನ್‌ ಮಾಡಿ ವಿಚಾರಿಸುತ್ತಿದ್ದ. ಪೇಪರ್‌ನಲ್ಲಿ ಕಾಣೆಯಾಗಿದ್ದಾರೆ ಅಂತ ಫೋಟೊ ಹಾಕಿಯೂ ಆಗಿತ್ತು. ಅಂದೊಂದು ದಿನ ಮೆಜೆಸ್ಟಿಕ್‌ ಸಮೀಪದಲ್ಲಿ ಅಪರಿಚಿತ ಹೆಣವೊಂದನ್ನು ನೋಡಿದ ಪೋಲಿಸರು ಈತನಿಗೆ ಫೋನ್‌ ಮಾಡಿದ್ರು. ಚಂದ್ರಕಾಂತ್‌ ಭಯದಿಂದಲೇ ಅದನ್ನು ನೋಡಲು ಹೋದ. ಕೊನೆಗೂ ಅದು ಆತನ ಅಪ್ಪನದ್ದಲ್ಲ ಅಂತ ಗೊತ್ತಾಯಿತು. ಕೊನೆಗೆ ಟಿವಿಯಲ್ಲೂ ಜಾಹೀರಾತು ನೀಡಿದ. ಬಿಕ್ಷುಕರ ಮರುವಸತಿ ಕೇಂದ್ರಕ್ಕೂ ಹೋಗಿ ಬಂದ. ಅಲ್ಲೂ ಇರಲಿಲ್ಲ. ಇನ್ನು ನಾನು ಮಾಡುವುದು ಏನು ಇಲ್ಲ ಅಂತ ದೇವರ ಮೇಲೆ ಭಾರ ಹಾಕಿ ಕುಳಿತುಕೊಂಡ. ದಿನಗಳು ಕಳೆಯುತ್ತಿದ್ದವು. ಅಪ್ಪನ ನೆನಪಿನಲ್ಲಿಯೇ ದುಃಖದಿಂದ ಮತ್ತೆ ಆಫೀಸ್‌ಗೆ ಹೋಗಲು ಸುರು ಮಾಡಿದ.

****
ಚಂದ್ರಕಾಂತ್‌ ಅಪ್ಪನನ್ನು ಕಳೆದುಕೊಂಡು ಸುಮಾರು ಎರಡು ತಿಂಗಳು ಕಳೆದಿತ್ತು. ಅದೊಂದು ದಿನ ಪೋಲಿಸ್‌ ಸ್ಟೇಷನ್‌ನಿಂದ ಅರ್ಜೆಂಟ್‌ ಫೋನ್‌ ಬಂದಾಗ ಸೀದಾ ಅಲ್ಲಿಗೆ ಹೋದ. ಇನ್ಸ್‌ಪೆಕ್ಟರ್‌ ಆತನನ್ನು ಸೀದಾ ಶವಾಗಾರಕ್ಕೆ ಕರೆದುಕೊಂಡು ಹೋದರು. ಮುಖ ಜಜ್ಜಿದ ಸ್ಥಿತಿಯಲ್ಲಿದ್ದ ಒಂದು ಹೆಣ ತೋರಿಸಿ ನೋಡಲು ಹೇಳಿದ್ರು. ಅದು ಎರಡು ದಿನದ ಹಿಂದೆ ಆನಂದ್‌ ರಾವ್‌ ಸರ್ಕಲ್‌ ಪಕ್ಕದ ಚರಂಡಿಯಲ್ಲಿ ಸಿಕ್ಕಿದಂತೆ. ಹೆಣ ಸಿಕ್ಕಪಟ್ಟೆ ಊದಿಕೊಂಡಿತ್ತು. ಮುಖ ಜಜ್ಜಿದರಿಂದ ಗುರುತು ಸಿಕ್ಕಿರಲಿಲ್ಲ. ಆ ಹೆಣದೊಂದಿಗೆ ಸಿಕ್ಕಿದ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲವೊಂದರಲ್ಲಿ ಇಟ್ಟಿದ್ದರು. ಒಂದಿಷ್ಟು ಬಟ್ಟೆಗಳೊಂದಿಗೆ ಒಂದು ಬೆಲ್ಟ್‌ ತುಂಡಾದ ಟೈಟಾನ್‌ ವಾಚ್‌ ಕೂಡ ಇತ್ತು. ಅದನ್ನು ನೋಡಿದ ಚಂದ್ರಕಾಂತ್‌ ಅಲ್ಲೇ ಕುಸಿದು ಕುಳಿತ. ಯಾಕೆಂದರೆ ಅದು ಆತ ಕೆಲಸ ಸಿಕ್ಕ ಖುಷಿಯಲ್ಲಿ ಅಪ್ಪನಿಗೆ ನೀಡಿದ್ದ ವಾಚಾಗಿತ್ತು. ಈತನಿಗೆ ಸಿಕ್ಕ ವಾಚ್‌ ಆಧಾರದಲ್ಲಿ ಆ ಹೆಣ ಅವನ ತಂದೆಯದ್ದೇ ಎಂದು ತೀರ್ಮಾನಿಸಿದರು.

ಒಂದಿಷ್ಟು ಸಮಯದ ನಂತರ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿದರು. ಸಾವರಿಸಿಕೊಂಡ ನಂತರ ಚಂದ್ರಕಾಂತ್‌ ಊರಿಗೆ ಫೋನ್‌ ಮಾಡಿ ವಿಷಯ ತಿಳಿಸಿದ. ಆಫೀಸ್‌ಗೆ ಫೋನ್‌ ಮಾಡಿ 20 ದಿನ ರಜೆ ಹಾಕಿ ಹೆಣದೊಂದಿಗೆ ಅಂಬ್ಯುಲೆನ್ಸ್‌ನಲ್ಲಿ ಊರಿಗೆ ಮರಳಿದ.

****
ನಾನು ಎಷ್ಟು ಹೇಳಿದರೂ ಕೇಳದೇ ಬೆಂಗ್ಳೂರಿಗೆ ಹೋದಿ ಅಂತ ಬೊಬ್ಬೆ ಹಾಕುತ್ತ ಹೆಣದ ಮುಂದೆ ಕಮಲ ಹಣೆ ಬಡಿದುಕೊಂಡು ಅತ್ತರು. ಚಂದ್ರಕಾಂತನೂ ದುಃಖದಿಂದ ಅಂತಿಮ ಸಂಸ್ಕಾರ ಮಾಡಿ ಮುಗಿಸಿದ. ಎಲ್ಲ ಮುಗಿದ ನಂತರ ಎಷ್ಟು ಹೇಳಿದರೂ ಚಂದ್ರಕಾಂತ್‌ನ ಅಮ್ಮ ಬೆಂಗಳೂರಿಗೆ ಬರಲು ಒಪ್ಪಲಿಲ್ಲ. ಒಬ್ಬನೇ ಮಗನಾಗಿದ್ದರಿಂದ ಅಮ್ಮನನ್ನು ಒಬ್ಬರನ್ನೇ ಬಿಟ್ಟು ಬರುವುದು ಚಂದ್ರಕಾಂತ್‌ಗೆ ಸರಿಬರಲಿಲ್ಲ. ಸಂಸ್ಕಾರ ನಡೆಸಿ 11ನೇ ದಿನದ ಎಲ್ಲ ಕಾರ್ಯಗಳು ಮುಗಿದವು.

ಅದೊಂದು ದಿನ ಹೂವಿನಂಗಡಿಯ ನಾರಾಯಣ ರಿಕ್ಷಾದಲ್ಲಿ ಮನೆಗೆ ಬಂದ. ಆತನೊಂದಿಗೆ ಉದ್ದವಾದ ಗಡ್ಡದ, ಕೆದರಿದ ಕೂದಲಿನ ಹುಚ್ಚನಂತೆ ಕಾಣುವ ವ್ಯಕ್ತಿಯೊಬ್ಬ ನಿಂತಿದ್ದ. `ಚಂದ್ರ ಇವ್ರು ನಿಮ್ಮಪ್ಪ ಕಣೋ’ ಅಂದಾಗ ಚಂದ್ರಕಾಂತ್‌ಗೆ ಒಮ್ಮೆಗೆ ಶಾಕ್‌! ಮತ್ತೆ ಮತ್ತೆ ನೋಡಿದ. ಹೌದು ಅಪ್ಪನೇ. ಕಣ್ಣು ತೇವಗೊಂಡಿತ್ತು. ಹಾಗಾದರೆ ಈಗ ಅಂತ್ಯಸಂಸ್ಕಾರ ಮಾಡಿದ್ದು ಬೇರೆ ಯಾರದ್ದೋ ಹೆಣ ಆಗಿರಬೇಕು ಅಂದುಕೊಂಡ. ಇದ್ಯಾವುದೋ ಕನಸು ಎಂಬಂತೆ ಭಾಸವಾಯಿತು. ಹೋಗಿ ಅಪ್ಪನನ್ನು ಅಪ್ಪಿಕೊಂಡು ಉಪಚರಿಸಿದ. ಅಪ್ಪನ ಮೈಕೈಗಳಲ್ಲಿ ಒಂದಿಷ್ಟು ಹುಣ್ಣಾಗಿತ್ತು. ಚಂದ್ರಕಾಂತ್‌ ಸೀದಾ ಆತನನ್ನು ಮನೆಯೊಳಗೆ ಕರೆದುಕೊಂಡು ಹೋದ.

ಸ್ವಲ್ಪ ಸಮಯ ಕಳೆಯಿತು. ಹೇಗೋ ತುಕ್ರ ಒಂದಿಷ್ಟು ಗಂಜಿ ತಿಂದ. ಒಂದೆರಡು ಗಂಟೆಯಲ್ಲಿ ತುಕ್ರ ಸುಧಾರಿಸಿಕೊಂಡ. ಆಮೇಲೆ ಆತ ಹೇಳಿದ ಕತೆ ಹೀಗಿತ್ತು. ಪರ್ಸ್‌ ಕಳೆದ ಚಿಂತೆಯಲ್ಲಿ ತುಕ್ರಾ ತುಂಬಾ ಹೊತ್ತು ರೈಲು ಪ್ಲಾಟ್‌ಫಾರ್ಮ್‌ನಲ್ಲಿ ತಿರುಗಿದ. ಮತ್ತೆ ಏನು ಮಾಡುವುದೆಂದು ಗೊತ್ತಾಗದೇ ರೈಲ್ವೇ ಸ್ಟೇಷನ್‌ನಿಂದ ಹೊರಗಡೆ ಬಂದ. ಅಲ್ಲಿ ಜನರು ಸಾಲಾಗಿ ಹೋಗುತ್ತಿರುವುದನ್ನು ಕಂಡು ಅವರ ಹಿಂದೆಯೇ ಹೋಗಿ ಬಿಎಂಟಿಸಿ ಬಸ್‌ಸ್ಟಾಂಡ್‌ ತಲುಪಿದನಂತೆ. ಹೊಟ್ಟೆ ತೊಳೆಸಿದಂತಾಗಿ ಪಕ್ಕದಲ್ಲಿ ಕಂಡ ಟಾಯ್ಲೆಟ್‌ಗೆ ನುಗ್ಗಿದ. ಬರುವಾಗ ಇವನಲ್ಲಿ ದುಡ್ಡಿಲ್ಲ ಅಂತ ತಿಳಿದಾಗ ಅಲ್ಲಿದ್ದ ರೌಡಿಯಂತಹ ವ್ಯಕ್ತಿ ಮುಖ ಮೂತಿ ನೋಡದೆ ಹೊಡೆದನಂತೆ. ಬದುಕಿದರೆ ಸಾಕು ಅಂತ ಅಲ್ಲಿಂದ ಓಡಿ ಹೋದ. ಸಂಜೆವರೆಗೆ ಅಲ್ಲೇ ಬಸ್‌ಸ್ಟಾಂಡ್‌ನಲ್ಲಿಯೇ ಕಾದನಂತೆ.

****
ಆಮೇಲೆ ಯಾವ ಕಡೆ ನಡೆದ ಅಂತ ನೆನೆಪಿರಲಿಲ್ಲ. ಯಾವುದೋ ಹೋಟೆಲ್‌ ಪ್ರವೇಶಿಸಿ. ತನಗೆ ಗೊತ್ತಿದ್ದ ಕನ್ನಡದಲ್ಲಿ ಅಲ್ಲಿನವರೊಂದಿಗೆ ತನ್ನ ಪರಿಸ್ಥಿತಿ ವಿವರಿಸಿದನಂತೆ. ಅಲ್ಲಿನವರಿಗೆ ಇವನ ಭಾಷೆ ಗೊತ್ತಾಯಿತೋ ಇಲ್ಲವೋ ತಿನ್ನಲು ಒಂದಿಷ್ಟು ಚಿತ್ರಾನ್ನ ನೀಡಿ ಸೀದಾ ಮೋರಿಯಲ್ಲಿ ಪಾತ್ರೆ ತೊಳೆಯಲು ಬಿಟ್ಟರಂತೆ. ಒಂದು ವಾರದಲ್ಲಿಯೇ ಈ ಕೆಲಸದ ಸಹವಾಸ ಸಾಕು ಅಂತ ತುಕ್ರನಿಗೆ ಅನಿಸಿತ್ತು. ಅಲ್ಲಿ ಪಾತ್ರೆಗಳು ತೊಳೆದಷ್ಟು ಮುಗಿಯುತ್ತಿರಲಿಲ್ಲ. ಮೋರಿಯಲ್ಲಿ ಕುಳಿತು ಕುಳಿತು ಮೈಕೈ ಹುಣ್ಣಾಗಿತ್ತು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಉಳಿದವರು ಇವನಿಗೆ ಅಲ್ಲಿಯ ಸ್ಥಿತಿ ಹೇಳಿದಾಗ ಭಯಗೊಂಡನಂತೆ.

ಈ ಮೋರಿಗೆ ಬಂದವರನ್ನು ಮತ್ತೆ ಮನೆಗೆ ಹೋಗಲು ಬಿಡುತ್ತಿರಲಿಲ್ಲವಂತೆ. ಕದ್ದುಮುಚ್ಚಿ ಕೆಲವರು ಓಡಿ ಹೋಗುತ್ತಾರಂತೆ. ಅವರಲ್ಲಿ ಒಬ್ಬ ಕಾಲು ತುಂಡಾದವನೊಬ್ಬ ಇದ್ದ. ಆತ ಒಮ್ಮೆ ಓಡಿ ಹೋದದ್ದಕ್ಕೆ ಹೋಟೆಲ್‌ನ ಕ್ರೂರಿಗಳು ಆತನ ಕಾಲನ್ನೇ ತುಂಡು ಮಾಡಿದರಂತೆ. ಹೋಟೆಲ್‌ನ ಓನರ್‌ ದೊಡ್ಡ ರೌಡಿಯಂತೆ..ಹೀಗೆ ಅಂತೆಕಂತೆಗಳನ್ನು ಕೇಳಿ ತುಕ್ರನಿಗೆ ಭಯವಾಯಿತು. ಎಷ್ಟು ಆರಾಮವಾಗಿ ಮನೆಯಲ್ಲಿದ್ದೆ. ಪಾಪ ಅವಳೊಂದಿಗೆ ಸುಮ್ಮನೆ ಜಗಳ ಮಾಡಿದ್ದು. ಅವಳು ಎಷ್ಟೇ ಬಯ್ದರೂ ಹೊಟ್ಟೆಗೆ ಒಂದು ತುತ್ತು ಕಮ್ಮಿ ಉನ್ನಲು ಬಿಡುತ್ತಿರಲಿಲ್ಲ. ಹೆಂಡತಿ ಮತ್ತು ಮಗನನ್ನು ನೆನಪಿಸಿಕೊಂಡು ತುಂಬಾ ದಿನ ಅಳುತ್ತಾ ಕುಳಿತುಕೊಳ್ಳುತ್ತಿದ್ದಾನಂತೆ. ಅದೊಂದು ದಿನ ಹೋಟೆಲ್‌ನ ಓನರ್‌ ಮತ್ತು ರೌಡಿಗಳು ಇಲ್ಲದ ದಿನ ತಿಳಿದಾಗ ‘ಬದುಕಿದರೆ ಬಿಕ್ಷೆ ಬೇಡಿ ಬದುಕಬಹುದು’ ಅಂತ ಜೀವ ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಓಡಿಬಂದನಂತೆ.

ಕಿಸೆಯಲ್ಲಿ ಒಂದು ರೂಪಾಯಿ ಇರಲಿಲ್ಲ. ಆಗ ಅವನಿಗೆ ಮಗ ಕೊಟ್ಟ ವಾಚ್‌ ನೆನಪಾಯಿತು. ತುಂಬಾ ಅಂಗಡಿಯವರಿಗೆ ತೋರಿಸಿದರೂ ಯಾರು ಖರೀದಿಸಲಿಲ್ಲವಂತೆ. ಮಾರ್ಗ ಸೈಡ್‌ನಲ್ಲಿದ್ದ ವಾಚ್‌ ಅಂಗಡಿಯವನೊಬ್ಬ ಕೊನೆಗೆ ಅದನ್ನು ಖರೀದಿಸಿ 100 ರೂಪಾಯಿ ನೀಡಿದನಂತೆ.

ಪುತ್ತೂರಿಗೆ ಹೋಗಲು ಬಸ್‌ ಟಿಕೇಟ್‌ಗೆ 300 ರೂಪಾಯಿ ಆಗುತ್ತದೆ ಅಂದಾಗ ಏನು ಮಾಡುವುದೆಂದು ಆತನಿಗೆ ತಿಳಿಯಲಿಲ್ಲ. ಓ ರೈಲ್‌ನಲ್ಲಿ 100 ರೂಪಾಯಿ ಅಲ್ವ ಅಂತ ನೆನಪಾಗಿ ಸೀದಾ ರೈಲು ಟಿಕೇಟ್‌ ಮಾಡಲು ನೋಡಿದ. ಆದರೆ ಪುತ್ತೂರಿಗೆ 103 ರೂಪಾಯಿ ಅಂತಗೊತ್ತಾಯಿತು. ಮೂರು ರೂಪಾಯಿ ಇಲ್ಲದೆ ಇದ್ದರಿಂದ ಸುಬ್ರಹ್ಮಣ್ಯಕ್ಕೆ ಟಿಕೇಟ್‌ ಮಾಡಿದ. ಸುಬ್ರಹ್ಮಣ್ಯದಲ್ಲಿ ಚಕ್ಕಿಂಗ್‌ನವರು ಹತ್ತಿದರಿಂದ ಅಲ್ಲಿ ಇಳಿದು ಇಲ್ಲಿವರೆಗೆ ನಡೆದುಕೊಂಡು ಬಂದನಂತೆ ತುಕ್ರ.
****
`ಪಾಸಾನಮೂರ್ತಿ ದೈವದ ದಯೆ. ಕೊನೆಗೂ ಜೀವಂತವಾಗಿ ಬಂದೆ’ ಅಂತ ತುಕ್ರಾ ಹೇಳಿ ನಿಟ್ಟುಸಿರು ಬಿಟ್ಟ.
****
ತಕ್ಷಣ ಏನೋ ನೆನಪಾದಂತೆ ಕಮಲ ಒಳಗೆ ಓಡಿ ದೇವರ ಕೋಣೆ ಪ್ರವೇಶಿಸಿ ದೇವರಿಗೆ ಕೈಮುಗಿದು ದೊಡ್ಡದಾಗಿ ಕುಂಕುಮದ ಬೊಟ್ಟು ಇಟ್ಟುಕೊಂಡರು.

ಪ್ರವೀಣ ಚಂದ್ರ ಪುತ್ತೂರು
ಪುಟ್ಟಕಥೆ: ಪ್ರೇಮದ ಹಕ್ಕಿ

ಪುಟ್ಟಕಥೆ: ಪ್ರೇಮದ ಹಕ್ಕಿ

ಹೂದೋಟದಲ್ಲಿದ್ದೆ. ಯಾವುದೋ ರೆಕ್ಕೆ ಬಡಿತದ ಸದ್ದು ಕೇಳಿ ಮೇಲ್ನೋಡಿದೆ. ಮುದ್ದಾದ ಹಕ್ಕಿ ನನ್ನನ್ನೇ ನೋಡುತ್ತಿತ್ತು. ಯಾವೂರ ಹಕ್ಕಿಯಿದು? ಎಲ್ಲಿಂದ ಬಂತು? ಸಣ್ಣದಾಗಿದ್ದರೂ ಚೂಟಿಯಾಗಿದೆಯಲ್ವ ಎಂದೆನಿಸಿತು. ನಾನೂ ಹಕ್ಕಿಯತ್ತ ನೋಡಿ ಕಣ್ ಮಿಟುಕಿಸಿದೆ. ಅದು ಗರಿಗೆದರಿ ಸ್ಮೈಲ್ ಕೊಟ್ಟಿತು.

ಪ್ರತಿದಿನ ಹೂದೋಟಕ್ಕೆ ಬರುತ್ತಿದ್ದೆ. ಆ ಹಕ್ಕಿ ನನಗೆ ಒಳ್ಳೆ ಕಂಪೆನಿ ಕೊಡುತ್ತಿತ್ತು. ಹೂದೋಟದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ನನ್ನ ಕಣ್ಣುಗಳನ್ನೇ ನೋಡುತ್ತಿತ್ತು. ಹಕ್ಕಿ ಚೆನ್ನಾಗಿರಬೇಕು ಎಂದು ಹೂದೋಟವನ್ನು ಹೆಚ್ಚು ಜತನದಿಂದ ನೋಡಿಕೊಳ್ಳತೊಡಗಿದೆ.

ಇತ್ತೀಚೆಗೆ ಹೂದೋಟದಲ್ಲಿ ಬಣ್ಣಬಣ್ಣದ ಹೂವುಗಳು ನಳನಳಿಸುತ್ತಿದ್ದವು. ಹಕ್ಕಿ ಕಾಲ್ಗುಣವಾಗಿರಬೇಕು. ದಿನಕಳೆದಂತೆ ಹಕ್ಕಿಯನ್ನು ನನ್ನ ಮನಸ್ಸು ಹೆಚ್ಚು ಹಚ್ಚಿಕೊಂಡಿತು. ಕುಂಚವಿಡಿದು ಹಕ್ಕಿ ಚಿತ್ರಬಿಡಿಸುತ್ತಿದೆ.

ಅಂದೊಂದು ದಿನ ಹಕ್ಕಿಗೆ ತಿಳಿಸಿದೆ. “ನೀ ಬಂದು ಇಷ್ಟು ದಿನವಾಯ್ತಲ್ಲ, ನನ್ನ ಹೂದೋಟದಲ್ಲೇ ಗೂಡು ಕಟ್ಟಿಬಿಡಬಾರದೇ?” ಎಂದೆ. ಹಕ್ಕಿಗದು ಅನಿರೀಕ್ಷಿತ. ಹಕ್ಕಿಗಳ ಮನಸ್ಸು ಅರಿಯೋದು ಕಷ್ಟ.

ನನ್ನ ಹೂದೋಟದಿಂದ ಹೊರಬಂದ ಹಕ್ಕಿ “ನಾನು ಈಗಾಗಲೇ ಬೇರೆಡೆ ಗೂಡು ಕಟ್ಟುತ್ತಿದ್ದೇನೆ” ಎಂದು ಹಾರಿಹೋಯಿತು. ಮತ್ತೆ ಬರಲೇ ಇಲ್ಲ.

ಮುದ್ದು ಹಕ್ಕಿಯೇ ಗೂಡು ಕಟ್ಟುವುದು ಬೇಡ. ಹಾಗೆ ಬಂದುಹೋಗಬಾರದೇ, ಹೂದೋಟದಲ್ಲಿ ಹೂಗಳು ಬಾಡಿಹೋಗಿವೆ. ನಾನು ಕಾಯುತ್ತಿದ್ದೇನೆ.
ಮಿನಿಕಥೆ: ಮುತ್ತಿನ ಉಂಗುರ

ಮಿನಿಕಥೆ: ಮುತ್ತಿನ ಉಂಗುರ

ಕ್ಲಾಸಿನಲ್ಲಿ ಅವಳೇ ಸುಂದರಿ. 4 ಕಾಲೇಜು ಹುಡುಗರು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದರು. ಆಕೆಗೂ ಒಬ್ಬ ಪ್ರಿಯಕರನ ಅವಶ್ಯಕತೆಯಿತ್ತು.

“ನನಗೆ ಮುತ್ತಿನ ಉಂಗುರ ತಂದುಕೊಡಿ. ನನಗೆ ಇಷ್ಟವಾದ ಉಂಗುರ ತರುವರನ್ನು ಪ್ರೀತಿಸ್ತಿನಿ”

ಆಕೆಯ ಬೇಡಿಕೆಗೆ ಮನಸ್ಸಲ್ಲೆ ನಕ್ಕು ಎಲ್ಲರೂ ಮನೆಗೆ ಹೋದರು. ಮರುದಿನ ಮೂವರು ತಾವು ತಂದ ಉಂಗುರಗಳನ್ನು ತೋರಿಸಿದರು.

ಒಬ್ಬ ವಜ್ರಖಚಿತ ಮುತ್ತಿನ ಉಂಗುರ ತಂದಿದ್ದ. ಮತ್ತೊಬ್ಬ ಆಕರ್ಷಕ ವಿನ್ಯಾಸದ ಮುತ್ತಿನ ಉಂಗುರ ತಂದುಕೊಂಡಿದ್ದ. ಮತ್ತೊಬ್ಬನೂ ಮುತ್ತಿನ ಉಂಗುರ ತಂದಿದ್ದ. ಮೊದಲ ನೋಟಕ್ಕೆ ಎಲ್ಲವೂ ದುಬಾರಿ ಬೆಲೆಯ ಉಂಗುರ ಎಂದು ಗೊತ್ತಾಗುತ್ತಿತ್ತು.

ಆಕೆ ಯಾವುದನ್ನು ಪಡೆದುಕೊಳ್ಳಲಿಲ್ಲ.

ನಾಲ್ಕನೆಯವ ಬಂದ.
ಅವನ ಮೇಲೆ ಅವಳಿಗೆ ಏನೋ ಭರವಸೆ ಇತ್ತು. ಉಂಗುರ ತೋರಿಸು ಎಂದಳು.

ನಾನು ಹೊಸ ಉಂಗುರ ಖರೀದಿಸಿಲ್ಲ ಅಂದ.

“ಓಹ್ ಅಷ್ಟೇನಾ ನಿನ್ನ ಪ್ರೀತಿ” ಅವಳು ಕೇಳಿದಳು. ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕೆ ಎಂಬ ಭೀತಿಯೂ ಅವಳಲ್ಲಿತ್ತು.

“ನನ್ನ ಅಪ್ಪ ಕೊಟ್ಟ ದುಡ್ಡಿನಲ್ಲಿ ನನ್ನ ಪ್ರೀತಿಗೆ ಉಂಗುರ ತೊಡಿಸೋದು ನನಗೆ ಇಷ್ಟವಿಲ್ಲ” ಅವನು ಸ್ವಾಭಿಮಾನದ ಮಾತನಾಡಿದ.

ಸರಿ ಹಾಗಾದರೆ ನಿನ್ನ ಸ್ವಂತ ದುಡ್ಡಿನಿಂದ ತಂದ ಉಂಗುರ ಕೊಡು.

ಆತ ತನ್ನ ಕೈನಲ್ಲಿದ್ದ ಉಂಗುರ ಬಿಚ್ಚಿ ಹೇಳಿದ.

“ತೆಗೆದುಕೋ ಇದು ನಾನು ರಜೆಯಲ್ಲಿ ದುಡಿದ ಹಣದಲ್ಲಿ ಖರೀದಿಸಿದ ಉಂಗುರ”

ಅವಳು ಉಂಗುರ ಕೈನಲ್ಲಿಡಿದು ಆ ಕಡೆ ಈ ಕಡೆ ತಿರುಗಿಸಿ ನೋಡಿ ಕೇಳಿದಳು

ಇದರಲ್ಲಿ ಮುತ್ತಿಲ್ಲ ಅವಳು ಮುಗ್ಧವಾಗಿ ಕೇಳಿ ಬಾಯಿಮುಚ್ಚಿಸುವಷ್ಟರಲ್ಲಿ

ಅವನಿಗೆ ಮುತ್ತುಕೊಟ್ಟಾಗಿತ್ತು.

ಅವಳ ಕಣ್ಣಲ್ಲಿ ಸಾವಿರ ಮುತ್ತುಗಳು ಮಿಣುಗುತ್ತಿದ್ದವು.
ಪ್ರಭಾ

ಪ್ರಭಾ

ಪ್ರಭಾ…

`ಎಲ್ಲಿಗೆ ಮೇಡಂ` ಕಂಡೆಕ್ಟರ್‌ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್‌ ನೀಡಿದ ಚಿಲ್ಲರೆಯನ್ನು ಪರ್ಸ್‌ಗೆ ತುಂಬಿಕೊಂಡವಳ ಮನಸ್ಸು ಚಡಪಡಿಸುತ್ತಿತ್ತು. ನಾನು ಕೆಲಸ ಬಿಟ್ಟು ಬಂದೆ ಅಂದರೆ ಅಮ್ಮ ಏನು ಹೇಳಬಹುದು. ಅಪ್ಪನ ಮುಖ ಸಪ್ಪೆಯಾಗಬಹುದಾ? ಎರಡು ವರ್ಷದ ಹಿಂದೆ ಎಷ್ಟು ಆರಾಮವಾಗಿದ್ದೆ. ಯಾರಿಗೆ ಬೇಕು ಬೆಂಗಳೂರು ಥೂ!

***

ಅವಳು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, ಅನುಭವ ಎಲ್ಲವೂ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚೇ ಸಿಕ್ಕಿದೆ. ಓದಿದ್ದು ಎಂಸಿಎ. ಕ್ಯಾಂಪಸ್‌ನಲ್ಲಿಯೇ ಪ್ರತಿಷ್ಠಿತ ಕಂಪನಿಗೆ ಸೆಲೆಕ್ಟ್‌ ಆಗಿದ್ದಳು. ತಿಂಗಳಿಗೆ ಹತ್ತುವರೆ ಸಾವಿರ ರೂ. ಸಂಬಳ ಇತ್ತು. ಸುಮ್ಮನೆ ಯಾಕೆ ಮನೆಯಲ್ಲಿ ಟೈಂವೇಸ್ಟ್‌ ಮಾಡುವುದು ಅಂತಲೂ ಅನಿಸಿತ್ತು. ಇವಳ್ಯಾಕೆ ಬೆಂಗಳೂರಿಗೆ ಹೋಗಬೇಕು ಅಂತಾ ಅಮ್ಮ ತಡೆದರೂ ಅನುಭವ ಆಗಲಿ ಅಂತ ಅಪ್ಪ ಓಕೆ ಎಂದಿದ್ದರು.

***

ಊರಿನಲ್ಲಿ ಓದು, ಭರತನಾಟ್ಯ, ಕ್ರೀಡೆ ಎಲ್ಲದರಲ್ಲೂ ಅವಳೇ ಫಸ್ಟ್‌. ಊರಿನವರಿಗಂತೂ ಪ್ರಭಾ ಎಂದರೆ ಅಚ್ಚುಮೆಚ್ಚು. ತುಂಬಾ ಮುಗ್ಧ ಹುಡುಗಿ. ಮೊದಲ ಸಲ ಬೆಂಗಳೂರಿನ ಬಸ್‌ ಏರಿದಾಗ ನೆರೆಮನೆಯ ಯಮುನಕ್ಕನ ಕಣ್ಣ ತುಂಬಾ ನೀರು. ಗೆಳತಿಯರಾದ ಸವಿತ, ರೇಖಾ, ಕವಿತ ಇವರೆಲ್ಲರ ಮುಖ ಕೂಡ ನೋಡುವಂತಿರಲ್ಲಿಲ್ಲ. ಊರಲ್ಲೇ ಟ್ರೈಮಾಡಿದ್ದರೆ ಟೀಚಿಂಗ್‌ ಕೆಲಸ ಸಿಗುತ್ತಿತ್ತು. ಇವಳಿಗೆ ಮನಸ್ಸಿರಲ್ಲಿಲ್ಲ. ಹಾಗಂತ ಇಷ್ಟು ಓದಿದ ತಪ್ಪಿಗೆ ಊರಲ್ಲಿ ಇರುವಂತಿಲ್ಲ. ಸ್ನಾತಕೋತ್ತರ ಪದವಿಗಾಗಿ ಬ್ಯಾಂಕ್‌ನಿಂದ ಸಾಲ ಬೇರೆ ಮಾಡಿಯಾಗಿದೆ. ಅನಿವಾರ್ಯವಾಗಿ ಮುಗ್ಧ ಮುಖದಲ್ಲಿ ದುಗುಡ ತುಂಬಿಕೊಂಡು ಬೆಂಗಳೂರು ಬಸ್ಸು ಹತ್ತಿದ್ದಳು. ಗೊತ್ತು ಗುರಿ ಇಲ್ಲದ ಊರಲ್ಲಿ ಒಬ್ಬಳೇ ಏನು ಮಾಡುವುದು. ಅದಕ್ಕೆ ಅಮ್ಮನೇ ಪರಿಹಾರ ನೀಡಿದ್ದಳು.  ಅಮ್ಮನ ದೂರದ ಸಂಬಂಧಿ ನಿಶಾಂತ್‌ ಬೆಂಗಳೂರಿನಲ್ಲಿದ್ದ. ಅವನೇ ಇವಳನ್ನು ಯಾವುದಾದರೂ ಲೇಡಿಸ್‌ ಹಾಸ್ಟೇಲ್‌ಗೆ ಸೇರಿಸುವ ಭರವಸೆ ನೀಡಿದ್ದ. ಇವಳಿಗಿಂತ ಒಂದು ವರ್ಷ ದೊಡ್ಡವ. ಬಾಲ್ಯದಲ್ಲಿ ಒಂದೆರಡು ಬಾರಿ ಅವನ ಮನೆಗೆ ಹೋಗಿ ಅವನೊಂದಿಗೆ ಆಟವಾಡಿದ ನೆನಪೂ ಅವಳಿಗಿದೆ. ಎಂಬಿಎ ಮುಗಿಸಿ ಕೈತುಂಬಾ ಸಂಪಾದಿಸುತ್ತಿದ್ದ.

***

ಅವಳು ಮೊದಲನೇ ದಿನವೇ ಬೆಂಗಳೂರನ್ನು ಬೆರಗುಗಣ್ಣಿನಿಂದಲೇ ನೋಡಿದಳು. ಇಲ್ಲಿನ ಗಿಜಿಗುಟ್ಟುವ ಜನ, ಟ್ರಾಫಿಕ್‌, ಆಧುನಿಕತೆ, ಅಪರಿಚಿತತೆ ಎಲ್ಲವೂ ಅವಳಲ್ಲಿ ಅವ್ಯಕ್ತ ನೋವು ಉಂಟು ಮಾಡಿದ್ದು ಸುಳ್ಳಲ್ಲ. ಬಸ್‌ಸ್ಟಾಂಡ್‌ನಲ್ಲಿ ನಿಶಾಂತ ಕಾಯುತ್ತಿದ್ದ. ಅವನ ಬೈಕ್‌ನಲ್ಲಿ ಸೀದಾ ಆತನ ಮನೆಗೆ ಕರೆದುಕೊಂಡು ಹೋದ. ಇವನು ರೂಂಗೆ ಕರೆದುಕೊಂಡು ಬಂದದ್ದನ್ನು ನೋಡಿ ಭಯದಿಂದ ನೋಡಿದವಳಿಗೆ ‘ಇವತ್ತು ಸಂಜೆ ತನಕ ಇಲ್ಲೇ ಇರು. ನನ್ನ ಆಫೀಸ್‌ನಲ್ಲಿರುವ ಮೇಡಂಗಳಲ್ಲಿ ವಿಚಾರಿಸಿ ಒಳ್ಳೆಯ ಹಾಸ್ಟೇಲ್‌ಗೆ ಸೇರಿಸ್ತಿನಿ’ ಅಂದ. ಬಕೆಟ್‌ನಲ್ಲಿ ಕ್ವಾಯಿಲ್‌ ಹಾಕಿ ಬಂದು ಯಾರ್ಯಾರಿಗೋ ಫೋನ್‌ ಮಾಡಿದ. ನೀರು ಬಿಸಿಯಾಗಿದೆ ಸ್ನಾನ ಮಾಡಿ ಬಾ ಅಂತ ಟವಲ್‌ ಕೊಟ್ಟು ಕಳುಹಿಸಿದ. ಇವಳು ಸ್ನಾನ ಮಾಡಿಬಂದಾಗ ಅವನು ಉಪ್ಪಿಟ್ಟು ರೆಡಿ ಮಾಡಿಟ್ಟಿದ್ದ. ಉಪ್ಪಿಟ್ಟು ರುಚಿಯಾಗಿತ್ತು. 10 ಗಂಟೆಯಾಗುತ್ತಿದ್ದಂತೆ ಅವನು ಆಫೀಸ್‌ಗೆ ಸಿದ್ದನಾಗಿ ಮನೆಯ ಕೀಯನ್ನು ಅವಳಲ್ಲಿ ನೀಡಿ. ಬೋರಾದರೆ ಕಂಪ್ಯೂಟರ್‌ ಆನ್‌ ಮಾಡು. ಮದ್ಯಾಹ್ನ ಊಟಕ್ಕೆ ಹೊರಗಡೆ ಹೋಗು ಎಂದಾಗ ಇವಳು ಉಳಿದಿರುವ ಅಷ್ಟು ಉಪ್ಪಿಟ್ಟನ್ನು ನೋಡಿ ಬೇಡಾ ಇದನ್ನೇ ತಿನ್ತಿನಿ ಅಂದಳು. ಅವನು ಮುಗುಳ್ನಗುತ್ತ ಹೊರಗೆ ಹೋದ. ಮನೆಯವರೊಂದಿಗೆ ಫೋನ್‌ ಮಾಡಿ ತುಂಬಾ ಮಾತನಾಡಿ ಬೆಂಗಳೂರನ್ನು ವಿವರಿಸತೊಡಗಿದಳು. ಕಂಪ್ಯೂಟರ್‌ನಲ್ಲಿದ್ದ ಹಾಡುಗಳನ್ನು ಕೇಳತೊಡಗಿದಳು. ನಿಶಾಂತ ಒಳ್ಳೆ ಹುಡುಗ ಅಂತ ಅವಳಿಗೆ ಅನಿಸಿತು. ರೂಮ್‌ನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾನೆ. ಟೆಲಿವಿಷನ್‌ ಮಾತ್ರ ಇಲ್ಲ. ಕಂಪ್ಯೂಟರ್‌, ಗೋಡೆಯಲ್ಲಿನ ಚಿತ್ರಗಳು ಎಲ್ಲವೂ ಅವಳಿಗೆ ಇಷ್ಟವಾದವು.

ಮನೆಯವರ ನೆನಪು ಕಾಡತೊಡಗಿದಾಗ ಫೋನ್‌ ಮಾಡಿದಳು. ಎಲ್ಲರ ಪ್ರೀತಿಯ ಮಾತುಗಳನ್ನು ಕೇಳಿದಾಗ ಊರಲ್ಲೇ ಇದ್ದರೆ ಎಷ್ಟು ಒಳ್ಳೆಯದ್ದಿತ್ತು ಅಂತ ಅವಳಿಗೆ ಅನಿಸಿತು. ಹಾಡು ಕೇಳಿ ಬೋರಾಯಿತು. ಅದರಲ್ಲಿ ಇಂಗ್ಲಿಷ್‌ ಸಿನಿಮಾಗಳೇ ತುಂಬಿಕೊಂಡಿದ್ದವು. ಹೆಸರಿಲ್ಲದ ಒಂದು ಫೈಲ್‌ನ್ನೂ ಆನ್‌ ಮಾಡಿದಾಗ ತಬ್ಬಿಬ್ಬಾದಳು. ಅದರಲ್ಲಿ ಬ್ಲೂಫಿಲ್ಮ್‌ಗಳ ದೊಡ್ಡ ರಾಶಿಯೇ ತುಂಬಿಕೊಂಡಿತ್ತು. ನೋಡುವ ಕುತೂಹಳವಾದರೂ ಕ್ಲೋಸ್‌ ಮಾಡಿದಳು. ಥೂ ಈ ನಿಶಾಂತನೂ ಇಂತವನೇ. ಊರಿನಲ್ಲಿ ಎಷ್ಟು ಒಳ್ಳೆಯ ಹುಡುಗನಾಗಿದ್ದ ಅಂತ ಅಂದುಕೊಂಡಳು.

***

ಸಂಜೆ ಬಂದ ನಿಶಾಂತ ಇವಳನ್ನು ಯಾವುದೋ ಹಾಸ್ಟೇಲ್‌ಗೆ ಕರೆದೊಯ್ದ. ಹಾಸ್ಟೇಲ್‌ನ ಪುಟ್ಟ ಕೋಣೆಯಲ್ಲಿ ಕುಳಿತಾಗ ಊರು, ಗೆಳೆಯ ಗೆಳತಿಯರು, ಕಾಡು, ನಾಯಿ ಬೆಕ್ಕು ದನ ಕರುಗಳೂ ಎಲ್ಲವೂ ನೆನಪಾಯಿತು. ರಾತ್ರಿಯಾದಗ ಇವಳಿದ್ದ ರೂಮ್‌ಗೆ ಮತ್ತೊಬ್ಬಳು ಬಂದಳು. ಐಟಿ ಕಂಪನಿಯಲ್ಲಿ ಕೆಲಸವಂತೆ ಇವಳ ಮುಗ್ಧಮುಖವನ್ನು ಒಂದು ತರಹಾ ನೋಡಿ ಹಾಯ್‌ ಐಹ್ಯಾಮ್‌ ನಮ್ರತಾ ಅಂತಾ ಕೈಕೊಟ್ಟಳು. ಸ್ವಲ್ಪಹೊತ್ತಾದರೂ ಅವಳು ಕೈ ಬಿಡಿಸದೇ ಇದ್ದಾಗ ಇವಳೇ ಬಿಡಿಸಿಕೊಂಡು ಐ ಏಮ್‌ ಪ್ರ..ಭಾ ಅಂತಾ ಉಗುಳು ನುಂಗುತ್ತ ಹೇಳಿದ್ದಳು. ಅವಳು ಒಂದಿಷ್ಟು ತೂರಾಡುವುದನ್ನು ನೋಡಿದಾಗ ಇವಳು ಕುಡಿದಿರುವುದು ಪ್ರಭಾಳಿಗೆ ಖಾತ್ರಿಯಾಗಿ ನಗರದ ಬಗೆಗಿನ ತಿರಸ್ಕಾರ ಮತ್ತಷ್ಟು ಹೆಚ್ಚಾಯಿತು. ತಿರಸ್ಕಾರದೊಂದಿಗೆ ನಗರದ ಕುರಿತು ಅಸಹ್ಯ ಮೂಡಿದ್ದು ರಾತ್ರಿ ಮಲಗಿದಾಗ ನಮ್ರತಾ ಇವಳ ಎದೆಗೆ ಕೈ ಹಾಕಿದಾಗ! ಪ್ರಭಾ ಭಯದಿಂದ ಮೂಲೆಯಲ್ಲಿ ಹೋಗಿ ಕುಳಿತುಕೊಂಡಳು. ಏನೋ ಗೊಣಗುತ್ತಿದ್ದ ಅವಳು ನಿದ್ದೆ ಹೋದದ್ದನ್ನು ಖಾತ್ರಿ ಪಡಿಸಿಕೊಂಡ ನಂತರ ಬೆಡ್‌ನ ಮೂಲೆಯಲ್ಲಿ ಮುದುಡಿಕೊಂಡಳು. ಎಲ್ಲಿಯ ನಿದ್ದೆ!

ಮುಂಜಾನೆ ಎದ್ದವಳೇ ನಿಶಾಂತನಿಗೆ ಫೋನ್‌ ಮಾಡಿ ಬಡಬಡಿಸಿದಳು. ಅವನು ಹಾಸ್ಟೇಲ್‌ನ ಓನರ್‌ಗೆ ಫೋನ್‌ ಮಾಡಿ ಬೇರೆ ರೂಂಗೆ ಶಿಫ್ಟ್‌ ಮಾಡಿಸಿದ.

**

ಮರುದಿನ ಆಫೀಸ್‌ಗೆ ಹೋಗಿ ಬಂದಳು. ಹೀಗೆ ಹಾಸ್ಟೇಲ್‌, ಆಫೀಸ್‌ ಅಂತ ದಿನಗಳುರಿದವು. ಹಣದ ರುಚಿಯೂ ಹಿಡಿಯಿತು. ಹಣ ನೀರಿನಂತೆ ಖರ್ಚಾಗುವುದನ್ನು ಕಂಡು ಬೆಚ್ಚಿದಳು. ಒಂದು ಸಾರಿ ಬಸ್‌ನಲ್ಲಿ ಇವಳ ಪರ್ಸ್‌ ಕಳುವಾಗಿ ಒಂದೆರಡು ಸಾವಿರ ಕಳೆದುಕೊಂಡಿದ್ದಳು.

ಒಂದು ಸಾರಿ ಇವಳಿಗೆ ಜ್ವರ ಬಂದಾಗ ರೂಂನಲ್ಲಿ ಗೀತಾ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅವಳಿಗೆ ಟೈಫಾಯಿಡ್‌ ಜ್ವರ ಬಂದ ಕಾರಣ ಕುಡಿಯುವ ನೀರು, ಸೇವಿಸುವ ಆಹಾರದ ಕುರಿತು ಎಚ್ಚರದಿರುವಂತೆ ಡಾಕ್ಟರ್‌ ಹೇಳಿದ್ದರು. ಮನೆಗೆ ಫೋನ್‌ ಮಾಡಿದಾಗ ಎಲ್ಲರೂ ಮನೆಗೆ ಬರಲು ಹೇಳಿದ್ದರು. ಆದರೆ ಪ್ರಯಾಣ ಮಾಡುವಷ್ಟು ತ್ರಾಸ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ. ಮೊದಲ ಒಂದು ದಿನ ಅವಳನ್ನು ನೋಡಿಕೊಳ್ಳುವರಿಲ್ಲದರಿಂದ ನಿಶಾಂತನೇ ಆಫೀಸ್‌ಗೆ ರಜೆ ಮಾಡಿ ಆಸ್ಪತ್ರೆಯಲ್ಲಿ ಉಳಿದಿದ್ದ.

ಅವನು ಅವಳನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ. ಆದರೆ ಅವಳ ಬಗ್ಗೆ ಕಾಮಕ್ಕಿಂತ ಮಮತೆಯೇ ಇವನಿಗೆ ಉಕ್ಕಿ ಬರುತ್ತಿತ್ತು. ಮುಖಕ್ಕೆ ಬಿದ್ದ ಕೂದಲನ್ನು ಹಿಂದಕ್ಕೆ ಸರಿಸಿ ತಲೆ ನೇವರಿಸುವ ಬಯಕೆಯೂ ಆಗುತ್ತಿತ್ತು.

ರಾತ್ರಿ ಇವಳ ನರಳಿಕೆ ಕೇಳಿ ಬಂದರೆ ಹಣೆ ಮುಟ್ಟಿ ನೋಡಿ ಹಣೆಗೆ ಒದ್ದೆ ಬಟ್ಟೆಯಿಡುತ್ತಿದ್ದ. ಅವನ ಆರೈಕೆಯ ಫಲವೋ ಅವಳು ಬೇಗ ಗುಣಗೊಂಡು ಹಾಸ್ಟೇಲ್‌ಗೆ ಮರಳಿದಳು.

***

ರೂಂಗೆ ಮರಳಿದವಳಿಗೆ ನಿಶಾಂತ ತೋರಿದ ಕಾಳಜಿಯದ್ದೇ ನೆನಪಾಗಿ ಎದೆ ತುಂಬಿ ಬಂತು. ಎಷ್ಟು ಒಳ್ಳೆಯವನು. ಅಂತ ನೂರಾರು ಸಾರಿ ಅಂದುಕೊಂಡಳು. ಸುಮ್ಮನೆ ಇವನ ಬಗ್ಗೆ ತಪ್ಪಾಗಿ ತಿಳಿದುಕೊಂಡೆ ಅಂತ ಅಂದುಕೊಂಡಳು. ಅವನ ನೆನಪು ಅವಳಿಗೆ ಇಷ್ಟವಾಗತೊಡಗಿತ್ತು. ಥಕ್‌ ಅವನಿಗೆ ನನ್ನ ಬಗ್ಗೆ ಯಾವ ಭಾವನೆ ಇದೆಯೋ ಸುಮ್ಮನೆ ದೂರಾಗುವುದು ಬೇಡಾ ಅಂತ ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಟುಕೊಂಡಳು.

ಅವನಿಗೂ ಅಷ್ಟೇ. ಅವಳೊಂದಿಗಿನ ಒಂದೆರಡು ದಿನದ ಸಾಮೀಪ್ಯ ಇಷ್ಟವಾಗಿತ್ತು. ಇವಳೊಂದಿಗೆ ಜೀವನ ಪೂರ್ತಿ ಕಳೆವ ಬದುಕ ನನ್ನದಾಗಿರಬಾರದೇ ಅಂತ ಮನ ಹಂಬಲಿಸಿತು.

**

ದಿನಗಳು ಕಳೆದವು.

ಆರ್ಥಿಕ ಬಿಕ್ಕಟ್ಟು ನಿಶಾಂತನ ಕಂಪನಿಗೂ ತಟ್ಟಿತು. ಪಿಂಕ್‌ಸ್ಲಿಪ್‌ ಇವನಿಗೂ ದೊರಕಿತು. ಮತ್ತೆ ಬೇರೆ ಕೆಲಸ ಹುಡುಕುವ ಗೋಜಿಗೆ ಹೋಗಲ್ಲಿಲ್ಲ. ಊರಿಗೆ ಮರಳಿದ ನಿಶಾಂತ್‌ ಸೈಬರ್‌ ಕೆಫೆಯೊಂದನ್ನು ಆರಂಭಿಸಿದ. ಇವಳು ಒಬ್ಬಂಟಿಯಾದಳು. ಇವಳನ್ನೂ ಊರಿಗೆ ಬರಲು ಒತ್ತಾಯ ಮಾಡುತ್ತಿದ್ದ. ಸೈಬರ್‌ನ ಹಿಂದಿನ ಖಾಲಿ ಜಾಗದಲ್ಲಿ ಟ್ಯುಟೋರಿಯಲ್‌ ಮಾಡುವಂತೆ ಹೇಳಿ ನಾನು ನೆರವಾಗುವುದಾಗಿ ಹೇಳುತ್ತಿದ್ದ. ಇವಳಲ್ಲಿ ಹೊಸ ಕನಸು ಕಟ್ಟ ತೊಡಗಿದ.

***

ಆಫೀಸ್‌ನಲ್ಲಿ ಬಾಸ್‌ ಸುಮ್ಮಗೆ ಕಿರಿಕಿರಿ ಮಾಡಿದಾಗ ಯಾಕೋ ನಗರದ ಸಹವಾಸವೇ ಬೇಡ ಅನಿಸಿ ಅಳು ಬಂದುಬಿಟ್ಟಿತ್ತು. ಬಿಕ್ಕಟ್ಟಿನಿಂದ ಮೊದಲ ವರ್ಷದ ಇನ್‌ಕ್ರಿಮೆಂಟ್‌ ಕೂಡ ಇಲ್ಲ. ನೆಮ್ಮದಿ ಅಂತು ಇಲ್ಲವೇ ಇಲ್ಲ. ದುಡ್ಡು ಕೊಡೋ ತೃಪ್ತಿಗಿಂತ ಬದುಕಿನ ನೆಮ್ಮದಿಯೇ ಮುಖ್ಯ ಅಂತ ಅನಿಸತೊಡಗಿತ್ತು. ಮತ್ತೆ ಊರು ನೆನಪಾಗತೊಡಗಿತು. ದನ ಕರು, ನಾಯಿ ಬೆಕ್ಕು, ಹೂವಿನ ಗಿಡಗಳು ಮತ್ತೆ ಕಾಡತೊಡಗಿದವು. ಗೆಳತಿಯ ಕೈ ಹಿಡಿದು ಬೆಟ್ಟ ಹತ್ತಬೇಕು. ತಂಗಿಯ ಜುಟ್ಟು ಹಿಡಿದು ಓದಿಸಬೇಕು. ತೋಡಲ್ಲಿ ಹೋಗಿ ಸುಮ್ಮನೆ ಏಡಿ ಹಿಡಿಯಬೇಕು.. ಇಂಥ ಕನಸುಗಳು ಇಷ್ಟವಾಗತೊಡಗಿದವು. ಊರಿನ ನೆನಪಿನ ಪುಳಕದಲ್ಲಿಯೇ ಇಂದು ಅಂತಿನ ನಿರ್ಧಾರ ಮಾಡಿ ಊರಿನ ಬಸ್‌ ಹತ್ತಿದ್ದಳು.

****

ಮತ್ತೆ ಊರಿಗೆ ಬಂದಾಗ ಮನಸ್ಸಿಗೆ ಏನೋ ನೆಮ್ಮದಿ. ಪ್ರತಿ ಗಿಡಮರಗಳನ್ನೂ ಹೊಸತು ಎಂಬಂತೆ ನೋಡಿದಳು. ಗೆಳತಿಯರು ಇವಳು ವಾಪಸ್‌ ಬಂದದ್ದನ್ನು ನೋಡಿ ಖುಷಿಗೊಂಡರು. ಮನೆಯವರು ಪ್ರೀತಿಯಿಂದ ಸ್ವಾಗತಿದರು. ನಿಶಾಂತನೂ ಫೋನ್‌ ಮಾಡಿ ಮಾತನಾಡಿದ.

***

ನಗರದಲ್ಲಿ ಕಳೆದ ಬದುಕು ಮತ್ತೆ ಊರಿಗೆ ಹೊಂದಿಕೊಳ್ಳಲು ಒಂದಿಷ್ಟು ತಡವರಿಸಿತು. ಟ್ರಾಫಿಕ್‌ ಕಿರಿಕಿರಿ ಇಲ್ಲದ ಕಿವಿ ಗುಂಯಿಗುಡುತ್ತಿತ್ತು. ಒಂದೆರಡು ವಾರ ಕಳೆದಿರಬಹುದು. ನಾಳೆ ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಅಂತ ಅಮ್ಮ ಹೇಳಿದಾಗ ಬೆಚ್ಚಿದಳು. ಒಳ್ಳೆ ಆಸ್ತಿ ಇರೋರು ಕಣೇ. ಒಬ್ಬನೇ ಮಗ ಒಪ್ಪಿಕೋ ಮತ್ತೆ ನಮಗೆ ಹುಡುಕಲು ಆಗುವುದಿಲ್ಲ. ಅಂತ ಅಪ್ಪ ಜೋರು ಮಾಡಿದಾಗ ಥೂ ನಗರದಲ್ಲಿಯೇ ಇದ್ರೆ ಆಗ್ತಾ ಇತ್ತು ಅಂತ ಅವಳಿಗೆ ಅನಿಸಿತು. ನಾಳೆ ಬರುವ ಹುಡುಗ ಇಷ್ಟವಾಗಿಲ್ಲ ಅಂತ ಹೇಳಬೇಕೆಂದು ಇವತ್ತೇ ತೀರ್ಮಾನ ಮಾಡಿಕೊಂಡಳು.

***

ನನ್ನ ಬಗ್ಗೆ ಈ ನಿಶಾಂತ್‌ಗೆ ಏನು ಭಾವನೆ ಇದೆ ಅಂತ ತಿಳಿದುಕೊಳ್ಳಬೇಕು ಅಂತ ಅವನಿಗೆ ಫೋನ್‌ ಮಾಡಿದಳು. ಪರಿಸ್ಥಿತಿ ಹೀಗಿದೆ ಅಂದಾಗ ಅವನು ನಗುತ್ತಾ ಹೇಳಿದ `ನಾಳೆ ನಿನ್ನನ್ನು ನೋಡಲು ಬಂದವರನ್ನು ಒಪ್ಪಿಕೋ. ಏನಾಗುವುದಿಲ್ಲ’ ಅಂತ ಹೇಳಿ ಫೋನ್‌ ಇಟ್ಟ. ಛೇ ಇವನಿಗೂ ನನ್ನ ಭಾವನೆ ಅರ್ಥವಾಗುತ್ತಿಲ್ವ. ಅಂತ ಬೇಜಾರಾಗಿ ಫೋನ್‌ ಕುಕ್ಕಿದಳು.

***

ಮರುದಿನ 11 ಗಂಟೆಗೆ ಸರಿಯಾಗಿ ಗಂಡಿನ ಕಡೆಯವರು ಬಂದರು. ಜ್ಯೂಸ್‌ ತೆಗೆದುಕೊಂಡು ಹೋಗು ಅಂತ ಅಮ್ಮ ಹೇಳಿದಾಗ ತಲೆತಗ್ಗಿಸಿ ಹೋದವಳು ಒಮ್ಮೆಗೆ ತಲೆಯೆತ್ತಿ ನೋಡಿದಳು. ನೋಡಲು ಬಂದ ಹುಡುಗ ನಿಶಾಂತನಾಗಿದ್ದ.

(ಕಥೆ ದಾರಾವಾಹಿಯಾಗುವ ಲಕ್ಷಣ ಕಂಡು ಬಂದಿರುವುದರಿಂದ ಇಲ್ಲಿಗೆ ನಿಲ್ಲಿಸಲಾಗಿದೆ. ಧನ್ಯವಾದಗಳು- ಪ್ರವೀಣ ಚಂದ್ರ)
ಅಜ್ಜ ಹೇಳಿದ ಲವ್ ಸ್ಟೋರಿ

ಅಜ್ಜ ಹೇಳಿದ ಲವ್ ಸ್ಟೋರಿ

"ಈ ಗುಲಾಬಿಗೆ ಎಷ್ಟು?" ಹರೆಯದ ಯುವಕನೊಬ್ಬ ಕೇಳುತ್ತಿದ್ದ. "30 ರೂಪಾಯಿ" ಹೂ ಮಾರುವ ಹೆಂಗಸಿನ ಮಾರುತ್ತರ. "ಜಾಸ್ತಿಯಾಯಿತು" ಹುಡುಗ ಅಸಹನೆಯ ಮುಖ ಮಾಡಿದ. "ಇವತ್ತು ಇದಕ್ಕಿಂತ ಕಡಿಮೆಗೆ ಎಲ್ಲೂ ಸಿಗೋಲ್ಲ, ತಗೋ" ಎಂದು ಪಕೆಳೆಗಳಲ್ಲಿ ನೀರಿನ ಬಿಂದು ಜಾರುತ್ತಿದ್ದ ಚಂದದ ಹೂವನ್ನು ಆತನ ಕೈಗಿತ್ತಳು. ಯುವಕ ಮರು ಮಾತಾಡದೆ ದುಡ್ಡು ನೀಡಿ ಹೂವನ್ನು ಹಿಡಿದುಕೊಂಡು ನಡೆದ. ನನಗೂ ಹೂವೊಂದು ಬೇಕಿತ್ತು. ಆಕೆಗೆ ಹಣ ನೀಡಿ ಮುದ್ದಾಗಿ ಕಂಡ ರೋಜಾವನ್ನು ಪಡೆದುಕೊಂಡೆ.


ಅಲ್ಲೇ ಕಲ್ಲು ಬೆಂಚಿನಲ್ಲಿ ಕುಳಿತಿದ್ದ ಅಜ್ಜ ಕುತೂಹಲದಿಂದ ನೋಡುತ್ತಿದ್ದರು. ಆ ಅಜ್ಜನನ್ನು ನೋಡಿದಾಗ ನನಗೂ ನನ್ನ ಅಜ್ಜನ ನೆನಪಾಯಿತು. ನನ್ನಜ್ಜನೂ ಇಷ್ಟೇ ಬಲಿಷ್ಠವಾಗಿದ್ದ. ಇಷ್ಟು ವಯಸ್ಸಾದರೂ ಮುಖದಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಅಜ್ಜ ಹೂವಮ್ಮನನ್ನು ಹತ್ತಿರ ಕರೆದು "ಏನಮ್ಮ ಇವತ್ತು ರೇಟು ಜಾಸ್ತಿ" ಎಂದರು. ಅದಕ್ಕೆ ಆಕೆ ""ಏನಜ್ಜ ನಿಂಗೂ ಹೂವು ಬೇಕಾ, ಲವರ್ಸ್ ಡೇ ಇವತ್ತು, ಅಜ್ಜಿಗೆ ಗುಲಾಬಿ ಕೊಡುವಿಯಂತೆ" ಎಂದು ವಿಚಿತ್ರವಾಗಿ ನಗುತ್ತ ಮುಂದೆ ಸಾಗಿದಳು. ಅಜ್ಜ ನಗಲಿಲ್ಲ.

ನಾನು ಮೆಲ್ಲಗೆ ಹೋಗಿ ಅಜ್ಜನ ಪಕ್ಕ ಕೂತೆ. "ಅಜ್ಜ ಇವತ್ತು ಲವರ್ಸ್ ಡೇ, ಅದಕ್ಕೆ ಹೂವಿನ ರೇಟು ಜಾಸ್ತಿ' ಅಂದೆ. "ಹೌದಾ? ಎಂದು ಅಜ್ಜ ಪ್ರಶ್ನಿಸಿ ಸುಮ್ಮನಾದರು. ನಂತರ ನನ್ನ ಬಗ್ಗೆ ವಿಚಾರಿಸಿದರು. ನನ್ನ ಸಂಕ್ಷಿಪ್ತ ಪರಿಚಯ ನೀಡಿದೆ.

ಆಗ ನನ್ನ ಮೊಬೈಲಿಗೆ "ಟಿಂಕ್" ಅಂತ ಎಸ್ ಎಂ ಎಸ್ ಬಂತು. ಅದನ್ನು ಓದುತ್ತಲೇ ನನ್ನ ಮುಖ ಅರಳಿತು. ಒಂದು ಗಂಟೆ ಕಳೆದು ಮಾಲ್ ಹತ್ತಿರ ಬರಲು ಹೇಳಿದ್ದಳು. ನಾನು ಪ್ರೀತಿಸುತ್ತಿರುವುದಾಗಿ ಅವಳಿಗೆ ಅವತ್ತೇ ಹೇಳಿದ್ದೆ. ಸುಮ್ಮಗೆ ನಕ್ಕಿದ್ದಳು. ಇವತ್ತು ಸ್ಪೆಷಲ್ ಆಗಿ ಪ್ರೊಪೊಸ್ ಮಾಡಬೇಕು. ಆಗ ಅಜ್ಜ ಕೆಮ್ಮಿ ನನ್ನ ಯೋಚನೆಗೆ ಕಡಿವಾಣ ಹಾಕಿದ್ರು.

ಅಜ್ಜ ನನ್ನ ಮುಖವನ್ನೇ ನೋಡುತ್ತ "ನಮ್ಮ ಕಾಲದಲ್ಲಿ ಪತ್ರ ವ್ಯವಹಾರ ಇಷ್ಟು ಸುಲಭವಾಗಿರಲಿಲ್ಲ. ಅವಳ ಪತ್ರ ತಲುಪಲು ದಿನಗಟ್ಟಲೆ ಕಾಯಬೇಕಿತ್ತು" ಎಂದಾಗ ನನಗೂ ಕುತೂಹಲ ತಡೆಯಲಿಲ್ಲ. "ಅಜ್ಜ ನಿಂಗೂ ಪ್ರೇಯಸಿ ಇದ್ದಳಾ?" ನನ್ನ ಕುತೂಹಲದ ಪ್ರಶ್ನೆಗೆ ನಕ್ಕ ಅಜ್ಜ ನನ್ನ ಒತ್ತಾಯದ ಮೇರೆಗೆ ಅವರ ಕತೆ ಹೇಳತೊಡಗಿದರು.

***
ಬಹುಶಃ ಇದೇ ದಿನವಾಗಿರಬೇಕು ಅವತ್ತು. ಸರಿಯಾಗಿ ನೆನಪಿಲ್ಲ. ಫೆಬ್ರವರಿ ಅನ್ನೋದು ನಿಜ. ನಾನೂ ಅವಳ ಮನೆಗೆ ಹೋಗಿದ್ದೆ. ಅವಳ ಮನೆಯ ಮುಂದಿನ ಮಾವಿನ ಮರ ಹೂವು ಬಿಟ್ಟು ಸೊಗಸಾಗಿ ಕಾಣುತ್ತಿತ್ತು. ಗೇಟಿನ ಬಳಿಯಲ್ಲಿ ಯಾರೋ ಗೂರ್ಖ ಕುಳಿತಿದ್ದ. ಅವನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸಿದೆ. ಆಗ ಆ ಉದ್ದ ಮೀಸೆಯವ ಬಂದ.

"ಯಾರು ಬೇಕಿತ್ತು" ದೊಡ್ಡ ಧ್ವನಿಯಲ್ಲಿ ಕೇಳಿದ್ದ. ಬ್ರಿಟಿಷ್ ಸರಕಾರದ ನೌಕರಿ ಮಾಡುವ ಹಮ್ಮು ಅವನಿಗೆ. "ಇದು ಅರುಂದತಿಯ ಮನೆನಾ?" ನನ್ನ ಪ್ರಶ್ನೆಗೆ ಆತ "ಹೌದು, ನಾನು ಅವಳಪ್ಪ". ಒಮ್ಮೆಗೆ ನಾನು ನೇರವಾಗಿ ನಿಂತುಕೊಂಡೆ. ಸರ್, ಅದು ಅದು ಅವರು ನನ್ನ ಬರಲು ಹೇಳಿದ್ರು... ಎಂದೆ. ಆತ ನಂಬಲಿಲ್ಲ. ಆಕೆಯಿಂದ ಬಂದ ಪತ್ರ ತೋರಿಸಿದೆ. ಅದು ನಾನು ಮಾಡಿದ ಮೂರ್ಖ ಕೆಲಸ.

ಅದರಲ್ಲಿ, "ಪ್ರೀತಿಯ ರಾಜ, ಇನ್ನೆಷ್ಟು ವರ್ಷ ಈ ಪತ್ರ ಸಲ್ಲಾಪ. ಮನೆಗೆ ಬಂದು ನನ್ನ ಕರೆದುಕೊಂಡು ಹೋಗು" ಎಂದೆಲ್ಲ ಬರೆದಿತ್ತು. ಅವನು ಒಮ್ಮೆಗೆ ಮುಖಗಂಟಿಕ್ಕಿಕ್ಕೊಂಡ. ನಂತರ ಆತನ ಮುಖ ಸಡಿಲಗೊಂಡಿತು. "ಬನ್ನಿ ಬನ್ನಿ, ಬಹಳ ದೂರದಿಂದ ಬಂದಹಾಗೆ ಇದೆ. ಎಲ್ಲರೂ ಕ್ಷೇಮವೇ? ಎಂದೆಲ್ಲ ಆದರಿಸಿ, ಪಕ್ಕದಲ್ಲಿದ್ದ ಸೇವಕನಿಗೆ "ಇವರನ್ನು ಕುಳಿತುಕೊಳ್ಳಲು ಹೇಳು, ನಾನೀಗ ಬಂದೆ" ಎಂದು ಅವಸರದಲ್ಲಿ ಹೊರಟರು. ನಾನು ಮನೆ ಪ್ರವೇಶಿಸಿದೆ.

ಮನೆಯೊಳಗೆ ದೊಡ್ಡದಾಗಿ ಇಂಗ್ಲೆಂಡ್ ರಾಣಿಯ ಭಾವಚಿತ್ರ ನೇತಾಡಿಸಿತ್ತು. ನಾನು ಬರಬಾರದ ದಾರಿಯಲ್ಲಿ ಬಂದೆನೋ... ಮನಸ್ಸಿಗೆ ಖೇದವೆನಿಸಿತು. ನಮ್ಮ ನಾಯಕರಿಗೆ ಈ ವಿಷಯ ತಿಳಿದರೆ ನನ್ನನ್ನು ಸಿಗಿದು ನೇತಾಡಿಸಿಬಿಡಬಹುದು. ಅವರಿಗೆ ಬ್ರಿಟಿಷರ ಎಂಜಲು ಕಾಯುವ ಭಾರತೀಯರೆಂದರೆ ರಕ್ತ ಕುದಿಯುತ್ತಿತ್ತು. ನಾನೂ ಅವರ ಸೇವಕ. ಅವರಷ್ಟು ಲೋಕ ಜ್ಞಾನ ಇಲ್ಲದಿದ್ದರೂ ನಮ್ಮ ದೇಶ ಬೇರೆಯವರ ಪಾಲಾಗಲು ಮನಸ್ಸು ವಿರೋಧಿಸುತ್ತಿತ್ತು. ದೇಶಕ್ಕಾಗಿ ರಕ್ತ ಕೊಡಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದೆ.

"ಬಾಯಾರಿಕೆ ತೆಗೆದುಕೊಳ್ಳಿ" ಸೇವಕ ದೊಡ್ಡ ಗಾಜಿನ ಗ್ಲಾಸಿನಲ್ಲಿ ಬಣ್ಣದ ಪಾನೀಯ ತಂದಿರಿಸಿದ. ನಾನು ಅದನ್ನು ಕೈಗೆ ತೆಗೆದುಕೊಂಡು ಪ್ರೀಯೆಯ ಸುಳಿವಿದೆಯೇ ಎಂದು ಸುತ್ತಮುತ್ತ ನೋಡತೊಡಗಿದೆ. ಆ ಬಣ್ಣದ ಪಾನೀಯ ಬಾಯಿಗಿರಿಸಿದೆ. ಹೆಜ್ಜೆಯ ಸದ್ದು ಕೇಳಿತು. ಯಾರೋಬರುತ್ತಿರುವಂತೆ ಅನಿಸಿತು. ಅವಳಪ್ಪ. ಕೈನಲ್ಲಿ ಚಾಟಿ. ಅಕ್ಕಪಕ್ಕ ದೊಣ್ಣೆ ಹಿಡಿದುಕೊಂಡ ಸೇವಕರು.

ಯಾಕೋ ತಲೆ ಧಿಮ್ಮೆನ್ನತೊಡಗಿತು. ಅರೇ ಎದುರಿಗೆ ಬರುತ್ತಿರುವರ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಣ್ಣು ಮಂಜು ಮಂಜಾಗುತ್ತಿದೆ. ಯಾಕೋ ಕಾಲುಗಳು ಜೋಮು ಹಿಡಿದಂತೆ ಭಾಸವಾಗತೊಡಗಿತು. ಪಾನೀಯಕ್ಕೆ ಮತ್ತು ಬೆರೆಸಿದ್ದಾರೆಯೇ? "ಈ ಕುನ್ನಿಯನ್ನು ಕಂಬಕ್ಕೆ ಕಟ್ಟಿ" ಅವಳಪ್ಪನ ಆಜ್ಞೆ ಕೇಳಿತು. "ಓಹ್, ದೇವರೆ ನಾನು ಮೋಸದ ಸುಳಿಗೆ ಬಿದ್ದೆ" ಎಂದು ತಿಳಿದು ಒಮ್ಮೆಗೆ ಎದ್ದು ನಿಂತು ವಸ್ತ್ರದೊಳಗಿನ ಸಣ್ಣ ಕತ್ತಿ ತೆಗೆಯಲು ಹೋದೆ. ತಲೆಗೆ ದಡ್ ಅಂತ ಯಾರೋ ಹೊಡೆದರು. ನಿಲ್ಲಲಾಗದೆ ತಲೆ ಹಿಡಿದುಕೊಂಡು ಬಿದ್ದೆ.

ಮುಖಕ್ಕೆ ನೀರು ಎರಚಿದಂತಾಗಿ ಮುಖ ಎತ್ತಿ ನೋಡಿದೆ. ನನ್ನ ಕೈಕಾಲುಗಳನ್ನು ಕಟ್ಟಿದ್ದರು. ಏನು ಇವರ ಉದ್ದೇಶ. ಏನಿದು ಮೋಸ. ನನ್ನ ನಾಯಕನ ಜೊತೆ ಹೋರಾಡುವುದು ಬಿಟ್ಟು ನನ್ನನ್ಯಾಕೆ ಇಲ್ಲಿಗೆ ಕರೆಸಿದರು...

"ನನ್ನ ಮಗಳಿಗೆ ಪತ್ರ ಬರೆಯುವೆಯಾ? ಎಷ್ಟು ದೈರ್ಯ ನಿನಗೆ. ನೋಡು ಇವಳೇ ನನ್ನ ಮಗಳು. ಬೇಕೆ ನಿನಗೆ?" ಆತ ಅಬ್ಬರಿಸುತ್ತಿದ್ದ. ನಾನು ಮೆಲ್ಲಗೆ ತಲೆಯೆತ್ತಿ ನೋಡಿದೆ. ಕೊಂಚ ಕುಳ್ಳಗಿನ ನನ್ನ ಸುಂದರ ಪ್ರೇಯಸಿ ತಲೆತಗ್ಗಿಸಿ ನಿಂತಿದ್ದಳು. ಶಾಕುಂತಲೆ ನಾನೆಂದು ಪತ್ರ ಬರೆಯುತ್ತಿದ್ದ ನನ್ನ ಸುಂದರಿ, ನನಗ್ಯಾಕೆ ಇಂತಹ ಮೋಸ ಮಾಡಿದೆ ಎಂದು ಜೋರಾಗಿ ಕೇಳಬೇಕೆನಿಸಿತು. ಆಗ ಅವಳಪ್ಪ ಚಾಟಿಯ ಉದ್ದವನ್ನು ಎರಡು ಕೈನಿಂದ ಅಳೆದು ಚಟಿರನೆ ಬೀಸಿದ. ನನ್ನ ಪ್ರಿಯೆ ಮುಖಮುಚ್ಚಿ ಒಳಗೆ ಓಡಿದಳು.

ಒಂದು, ಎರಡು, ಮೂರು, ನಾಲ್ಕು ಎಷ್ಟು ಹೊಡೆದನೋ.. ಲೆಕ್ಕವಿಡಲಾಗಲಿಲ್ಲ. ಮೈನಲ್ಲಿ ರಕ್ತ ಹೊರಗೆ ಬರುತ್ತಿತ್ತು. ಅವನಿಗೆ ಅವನ ಸೇವಕನೊಬ್ಬ ಏನೋ ಗುಸುಗುಸು ಎಂದ. ತಕ್ಷಣ ಆತನ ಮುಖ ಇನ್ನಷ್ಟು ವ್ಯಗ್ರವಾಯಿತು. "ನೀನು ಸ್ವಾತಂತ್ರ್ಯ ಹೋರಾಟಗಾರನೇ? ನಿನ್ನ ನಾಯಕನ ಬಗ್ಗೆ ಸಂಪೂರ್ಣ ವಿಷಯ ಹೇಳು. ನೀವು ಎಷ್ಟು ಜನರಿದ್ದೀರಿ. ಯಾವಾಗ ದಂಗೆ? ಎಷ್ಟು ಮದ್ದುಗುಂಡುಗಳಿವೆ? ಎಲ್ಲೆಲ್ಲಿ ಅಡಗುತಾಣಗಳಿವೆ?" ಲೆಕ್ಕಪತ್ರ ಓದುವಂತೆ ಆತ ಪ್ರಶ್ನೆಗಳ ಮಳೆ ಸುರಿಸಿದ್ದ.

ಓಹ್, ಇದಾ ವಿಷಯ. ಮೈನಲ್ಲಿ ರಕ್ತ ಸುರಿಯುತ್ತಿದ್ದರೂ ದೇಶಭಕ್ತಿ ಉರಿದುಬಂತು. "ನಿನಗೆ ತಾಕತ್ತು ಇದ್ದರೆ ನನ್ನ ಹಗ್ಗ ಬಿಚ್ಚಿ ಯುದ್ದಕ್ಕೆ ಬಾರೋ" ನಾನು ಶಕ್ತಿಮೀರಿ ಜೋರಾಗಿ ಹೇಳಿದೆ. ಅವನ ಮುಖ ಒಮ್ಮೆಗೆ ಕಪ್ಪಿಟ್ಟಿತು. ಮತ್ತೊಂದಿಷ್ಟು ಚಾಟಿಯ ಏಟು ಬಿತ್ತು. ಹೊರಗೆ ಏನೋ ಸದ್ದಾದಂತೆ ಕೇಳಿತು. ಪೊಲೀಸರು ಬಂದು ನನ್ನ ಹಗ್ಗ ಬಿಚ್ಚಿ ಕೋಳ ಹಾಕಿ ಕರೆದೊಯ್ದರು.

ನಾನು ಕಂಬಿಯ ಹಿಂದೆ ಬಂಧಿಯಾದೆ. ಯಾವುದೋ ಸುಳ್ಳು ಪ್ರಕರಣ ದಾಖಲಿಸಿದ್ದರು. ಎಷ್ಟೇ ಹಿಂಸಿಸಿದರೂ ನಾಯಕನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡಲಿಲ್ಲ. ನನ್ನನ್ನು ಬೇರೆ ಯಾವುದೋ ಜೈಲಿಗೆ ಕಳುಹಿಸುವ ಬಗ್ಗೆ ಮಾತನಾಡುತ್ತಿದ್ದರು. ಈ ಮಾಹಿತಿಯನ್ನು ಪೊಲೀಸಪ್ಪನೊಬ್ಬ ನನಗೆ ನೀಡಿದ್ದ. ಅವನಿಗೆ ನನ್ನ ಬಗ್ಗೆ ಕರುಣೆಯಿತ್ತು. ಆತ ಅನಿವಾರ್ಯವಾಗಿ ಸರಕಾರಿ ಚಾಕರಿ ಮಾಡುತ್ತಿದ್ದ.  ನಿಮ್ಮ ನಾಯಕರ ಸೈನ ಈ ಕಡೆಗೆ ಬಂದಾಗ ನಾನು ಅವರ ಜೊತೆ ಸೇರುತ್ತೇನೆ ಎಂಬ ಭರವಸೆ ನೀಡಿದ್ದ. ಆತನಲ್ಲೂ ಸುಪ್ತವಾಗಿರುವ ದೇಶಪ್ರೇಮ ಕಂಡು ಎದೆಯುಬ್ಬಿ ಬಂದಿತ್ತು.

ಆದರೂ, ನನ್ನ ಪ್ರೇಯಸಿಯದ್ದು ಸುಳ್ಳು ಪ್ರೀತಿಯೆಂದು ನನ್ನ ಒಳಮನಸ್ಸು ಒಪ್ಪಲಿಲ್ಲ. ಆಕೆ ಬರೆಯುತ್ತಿದ್ದ ಪತ್ರಗಳಲ್ಲಿ ನಾಟಕೀಯತೆ ಇರಲಿಲ್ಲ. ಅವಳನ್ನು ಐದು ವರ್ಷದ ಹಿಂದೆ ನೋಡಿದ್ದು. ಮಡಿಕೇರಿಯಿಂದ ಎತ್ತಿನಗಾಡಿಯಲ್ಲಿ ಆಕೆ ತನ್ನ ಕುಟುಂಬದ ಜೊತೆ ಸಾಗುತ್ತಿದ್ದಳು. ನಾನು ಅದೇ ದಾರಿಯಲ್ಲಿ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆಗ ಆನೆಗಳ ಗುಂಪು ಅವರು ಹೋಗುವ ದಾರಿಯಲ್ಲಿ ಬೀಡುಬಿಟ್ಟಿತು.

ಆನೆಗಳ ಹಾದಿಯಲ್ಲಿ ಸಾಗಲಾಗದೆ ಭೀತಿಯಲ್ಲಿದ್ದ ಅವರನ್ನು ಮತ್ತೊಂದು ಒಳದಾರಿಯ ಮೂಲಕ ಕರೆದೊಯ್ದಿದೆ. ಅವಳ ಜೊತೆಯಿದ್ದ ಮುದುಕಿ ನನಗೆ ವಿಳಾಸ ನೀಡಿ "ಘಟ್ಟದ ಕೆಳಗೆ ತಾವು ಭಾರೀ ಪ್ರಭಾವಿಗಳು, ಏನಾದರೂ ಕಷ್ಟ ಬಂದರೆ ನಮ್ಮನ್ನು ಕಾಣು ಎಂದಿದ್ದರು. ಜೊತೆಗೆ ವಿಳಾಸವನ್ನೂ ನೀಡಿದ್ದರು. ಅದ್ಯಾವುದೋ ಸಮಯದಲ್ಲಿ ನಾನು ಕುಶಲ ಕ್ಷೇಮ ವಿಚಾರಿಸಿ ಪತ್ರ ಬರೆದಿದ್ದೆ. ಅದಕ್ಕೆ ಅವರ ಮನೆಯಿಂದ ಮಾರುತ್ತರ ಬಂದಿರಲಿಲ್ಲ. ತುಂಬಾ ದಿನ ಕಳೆದು ಕಾಗದವೊಂದು ಬಂತು. ಅಂದು ನಾನು ಬಂಡಿಯಲ್ಲಿ ನೋಡಿದ್ದ ಕುಳ್ಳಗಿನ ಸುಂದರಿಯ ಪತ್ರವಾಗಿತ್ತು.

"ಅಂದೇ ನನ್ನನ್ನು ನೋಡಿ ಇಷ್ಟಪಟ್ಟದಾಗಿಯೂ, ಮದುವೆಯಾಗುವುದಿದ್ದರೆ ನಿಮ್ಮನೇ" ಎಂದು ಬರೆದಿದ್ದಳು. ಪತ್ರ ವ್ಯವಹಾರಕ್ಕಾಗಿ ಸ್ನೇಹಿತೆಯೊಬ್ಬಳ ಮನೆಯ ವಿಳಾಸ ನೀಡಿದ್ದಳು. ದುಷ್ಯಂತ ಶಾಕುಂತಲೆ, ರೊಮಿಯೊ ಜ್ಯೂಲಿಯಟ್ ಬರಹಗಳ ಸಾಲುಗಳನ್ನೂ ಉಲ್ಲೇಖಿಸಿದ್ದಳು. ತುಂಬಾ ಓದಿಕೊಂಡಿದ್ದಾಳೆ ಅನಿಸಿತು.

ನನಗೂ ಜೀವನಕ್ಕೆ ಹೊಸ ಚೈತನ್ಯ ಬಂದಂತಾಗಿತ್ತು. ನಾನೂ ಮಾರುತ್ತರ ಬರೆದೆ. ನಮ್ಮ ಪತ್ರ ವ್ಯವಹಾರ ಯಾವುದೇ ಎಗ್ಗಿಲ್ಲದೇ ಸಾಗುತ್ತಿತ್ತು. ನಾನು ಒಮ್ಮೊಮ್ಮೆ ತಡವಾಗಿ ಕಾಗದ ಬರೆದರೆ ಮುನಿಸಿಕೊಳ್ಳುತ್ತಿದ್ದಳು. ಸ್ವಾತಂತ್ರ್ಯ ಹೋರಾಟಕ್ಕಾಗಿ ನಾವು ಗುಂಪುಗಟ್ಟಿ ರಹಸ್ಯ ಕಾರ್ಯಚರಣೆಗಳನ್ನು ಮಾಡುತ್ತಿದ್ದೇವು. ಬ್ರಿಟಿಷರನ್ನು ವಿರೋಧಿಸುತ್ತಿದ್ದರೂ ನನ್ನ ಪತ್ರ ವ್ಯವಹಾರಗಳು ಆಗ ಬ್ರಿಟಿಷ್ ಈಸ್ಟ್ ಇಂಡಿಯಾ ಪೋಸ್ಟಲ್ ಸೇವೆಯನ್ನು ಬಳಸಿಕೊಳ್ಳುತ್ತಿತ್ತು. ಈ ವಿಷಯ ನಮ್ಮ ನಾಯಕರಿಗೆ ಗೊತ್ತಿರಲಿಲ್ಲ. ಪೋಸ್ಟ್ ಮ್ಯಾನ್ ಕರಿಯಪ್ಪ ಯಾರಿಗೂ ಗೊತ್ತಾಗದಂತೆ ನನಗೆ ಪತ್ರಗಳನ್ನು ನೀಡುತ್ತಿದ್ದ.

ಆದರೆ ನಾನು ಎಡವಿದ್ದೆಲ್ಲಿ ಎನ್ನುವುದು ಇನ್ನೂ ಅರಿವಾಗಲಿಲ್ಲ. ಈ ಕುರಿತು ಆ ಜೈಲಿನ ಪೊಲೀಸ್ ಬಳಿಯೂ ವಿಚಾರಿಸಿದೆ. ಕೆಲವು ದಿನ ಕಳೆದ ಬಳಿಕ ಆತ ಒಂದು ಪತ್ರದೊಂದಿಗೆ ಬಂದ. ಅದು ನನಗೆ ಪ್ರೇಯಸಿ ಬರೆದ ಅಂತಿಮ ಪತ್ರವಾಗಿತ್ತು. ಅದರಲ್ಲಿ ಅವಳಪ್ಪ ಕ್ರೂರಿಯೆಂದೂ, ಸಾಕಷ್ಟು ಪ್ರಭಾವಿಯಾಗಿರುವುದರಿಂದ ಅವನನ್ನು ಎದುರಿಸುವುದು ಕಷ್ಟ. ಅವಳನ್ನು ಅವಳಪ್ಪ ಯಾವುದೋ ಬ್ರಿಟಿಷ್ ಅಧಿಕಾರಿಗೆ ಮದುವೆ ಮಾಡಲು ಬಯಸಿದ್ದಾನೆ, ಆ ನರಕದ ಬದುಕಿಗಿಂತ ಸಾವೇ ಮೇಲು, ಮುಂದಿನ ಜನ್ಮದಲ್ಲಿ ಒಂದಾಗೋಣ... ನೀನು ನಿನ್ನ ಜೀವನವನ್ನು ಸಂಪೂರ್ಣವಾಗಿ ದೇಶಸೇವೆಗೆ ಮುಡಿಪಾಗಿಡು" ಎಂದೆಲ್ಲ ಬರೆದಿದ್ದಳು.

ಆ ಪತ್ರ ನನ್ನ ಕೈಸೇರುವಾಗಲೇ ತಡವಾಗಿತ್ತು. ಪೊಲೀಸ್ ನೀಡಿದ ಮಾಹಿತಿ ಪ್ರಕಾರ ಆಕೆ ಆತ್ಮಹತ್ಯೆ ಮಾಡಿಕೊಂಡಾಗಿತ್ತು. ಕೆಲವೇ ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ದೇಶಸೇವೆ ಮಾಡಬೇಕಿದ್ದ ನಾನು ಪ್ರೇಮದ ಆಕರ್ಷಣೆಗೆ ಸಿಲುಕಿ, ಮೋಸದಿಂದ ಸುಳ್ಳು ಅಪರಾಧದ ಹೆಸರಿನಲ್ಲಿ ಜೈಲಿನಲ್ಲಿದ್ದು ಬಿಡುಗಡೆಯಾದೆ.

**
ಹಳೆಯ ನೆನಪಿನಿಂದ ತೇವವಾದ ಕಣ್ಣನ್ನು ಒರೆಸಿಕೊಂಡು ಅವರು ಎದ್ದು ನಿಂತರು. "ಈಗಿನ ಜನರೇಷನ್ ಬಗ್ಗೆ ಕರುಣೆ ಎನಿಸುತ್ತಿದೆ. ಕೆಲವೇ ಕ್ಷಣದಲ್ಲಿ ಎಲ್ಲಿಗೋ ಪತ್ರ ತಲುಪಿಸುತ್ತೀರಿ. ನಿಮಿಷದಲ್ಲೇ ಪ್ರೇಮಿಗಳನ್ನು ಪಡೆಯುತ್ತೀರಿ. ಮದುವೆಯಾಗುತ್ತೀರಿ. ಡೈವರ್ಸ್ ಮಾಡಿಕೊಳ್ಳುತ್ತೀರಿ. ತುಂಬಾ ಸ್ಪೀಡ್ ಒಳ್ಳೆಯದಲ್ಲ" ಎಂದು ಹೇಳುತ್ತ ಮುಂದೆ ಮುಂದೆ ಸಾಗಿದರು.

ಆಗಲೇ, "ಥ್ಯಾಂಕ್ಯು ಕಿರಣ್. ಐ ಲವ್ ಯು ಕಣೋ" ಎಂಬ ಸಂದೇಶ ನನ್ನ ಮೊಬೈಲಿಗೆ ಬಂದುಬಿತ್ತು. ನನಗೆ ದಿಗ್ಭಮೆಯಾಯಿತು. ನಾನು ಪ್ರೀತಿಸಿದಾಕೆ ಬೇರೊಬ್ಬನಿಗೆ ಕಳುಹಿಸಬೇಕಿದ್ದ ಎಸ್ಎಂಎಸ್ ನ್ನು ತಪ್ಪಿ ನನ್ನ ಮೊಬೈಲಿಗೆ ಕಳುಹಿಸಿದ್ದಳು. ನನಗೆ ನೂರಾರು ಚಾಟಿಯೇಟು ಬಿದ್ದಹಾಗಾಯ್ತು. ಕೈನಲ್ಲಿದ್ದ ಹೂವನ್ನು ಅಲ್ಲೇ ಬಿಸಾಕಿ ಅಜ್ಜನ ಹಿಂದೆಯೇ ಸಾಗಿದೆ.

______

ಪ್ರವೀಣ ಚಂದ್ರ ಪುತ್ತೂರು