Tuesday 27 December 2016

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಸೂಕ್ತವಾದ ಸರ್ಟಿಫಿಕೇಷನ್ ಕೋರ್ಸ್‍ಗಳು ಯಾವುವು? ಇಲ್ಲಿದೆ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಇದು ಇಂಟರ್‍ನೆಟ್ ಯುಗ. ಮಾರಾಟ ಮತ್ತು ಖರೀದಿಗೆ ಇ-ಕಾಮರ್ಸ್ ಪ್ರಮುಖ ವೇದಿಕೆ. ಯಾವುದೇ ಕಂಪನಿಗೂ ವಹಿವಾಟು ನಡೆಸಲು ಇಂಟರ್‍ನೆಟ್ ಬಳಸುವುದು ಅನಿವಾರ್ಯವಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ಆನ್‍ಲೈನ್‍ನಲ್ಲಿ ಮಾರುಕಟ್ಟೆ ಮಾಡುವ ಪರಿಣತರಿಗೂ ಉತ್ತಮ ಬೇಡಿಕೆಯಿದೆ. ಇದಕ್ಕೆ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳು ಲಭ್ಯ ಇವೆ. ವಿಶೇಷವೆಂದರೆ ಆನ್‍ಲೈನ್‍ನಲ್ಲಿ ಹಲವು ಉಚಿತ ಕೋರ್ಸ್‍ಗಳು ಲಭ್ಯ. ಕೆಲವು ಸರ್ಟಿಫಿಕೇಷನ್ ಕೋರ್ಸ್‍ಗಳು 10ರಿಂದ 50 ಸಾವಿರ ರೂ. ತನಕ ದುಬಾರಿಯಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?
ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೆÇೀನ್ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ.
ಡಿಜಿಟಲ್ ಮಾರುಕಟ್ಟೆಯ ಬೇಸಿಕ್ಸ್, ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಡಿಜಿಟಲ್ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವುವುದು, ಮೊಬೈಲ್, ಸರ್ಚ್ ಮತ್ತು ಸೋಷಿಯಲ್ ನೆಟ್‍ವರ್ಕಿಂಗ್ ಇತ್ಯಾದಿ ನವಮಾಧ್ಯಮಗಳನ್ನು ಬಳಸಿ ಮಾರುಕಟ್ಟೆ ವಿಸ್ತರಿಸುವುದು, ಡಿಜಿಟಲ್ ಮಾರುಕಟ್ಟೆಗೆ ಸಂಬಂಧಪಟ್ಟ ಕಾನೂನುಗಳನ್ನು ತಿಳಿದುಕೊಳ್ಳುವುದು ಸಹ ಈ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಒಳಗೊಂಡಿರುತ್ತದೆ.

ಉಚಿತವಾಗಿ ಕಲಿಯಿರಿ
ಇಂದು ಜಗತ್ತಿನ ವಿವಿಧ ಸಂಸ್ಥೆಗಳು ಆನ್‍ಲೈನ್‍ನಲ್ಲೇ ಉಚಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಕೆಳಗೆ ನೀಡಿರುವ ಲಿಂಕ್‍ಗಳ ಮೂಲಕ ನೀವೂ ಉಚಿತವಾಗಿ ಕಲಿಯಬಹುದು.
* ಗೂಗಲ್‍ನ ಆನ್‍ಲೈನ್ ಮಾರ್ಕೆಟಿಂಗ್ ಚಾಲೆಂಜಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. ಇಲ್ಲಿ ವಿಡಿಯೋ ಟ್ಯುಟೋರಿಯಲ್ ಸಹ ಇದ್ದು, ಎಸ್‍ಇಎಂ, ಆ್ಯಡ್‍ವಡ್ರ್ಸ್, ಸೋಷಿಯಲ್ ನೆಟ್‍ವಕ್ರ್ಸ್, ಮೊಬೈಲ್ ಸ್ಟ್ರಾಟರ್ಜಿ ಸೇರಿದಂತೆ ಹಲವು ವಿಷಯಗಳನ್ನು ಕಲಿಯಬಹುದು. ಕೆಲವೊಂದು ವಿಷಯಗಳಲ್ಲಿ ಸರ್ಟಿಫಿಕೇಷನ್ ಸಹ ದೊರಕುತ್ತದೆ.
ಮಾಹಿತಿಗೆ ಲಿಂಕ್: 
* ವಲ್ರ್ಡ್‍ಸ್ಟ್ರೀಮ್ ಎಂಬ ವೆಬ್‍ಸೈಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತುಂಬಾ ಬೇಸಿಕ್ಸ್‍ನಿಂದ ಹಿಡಿದು ಹಲವು ಹಂತಗಳ ಕೋರ್ಸ್‍ಗಳಿವೆ. ಹಂತಹಂತವಾಗಿ ಕಲಿಯುವುದು ಇಲ್ಲಿ ಸುಲಭ. ಲಿಂಕ್:
* ಕಾಪಿಬ್ಲಾಗರ್ ಎಂಬ ವೆಬ್‍ಸೈಟ್ ನಿಮಗೆ ಇಮೇಲ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗಳನ್ನು ಕಳುಹಿಸಿಕೊಡುತ್ತದೆ. ಇದರಿಂದ ನೀವು ಕಂಟೆಂಟ್ ಮಾರ್ಕೆಟಿಂಗ್, ಕಾಪಿರೈಟಿಂಗ್, ಎಸ್‍ಇಒ, ಕೀವರ್ಡ್ ರಿಸರ್ಚ್ ಇತ್ಯಾದಿಗಳನ್ನು ಕಲಿಯಬಹುದು. ಲಿಂಕ್
* ಕೊರ್ಸ್‍ರಾ ಎಂಬ ವೆಬ್‍ಸೈಟ್‍ನಲ್ಲಿ ವಾರದಲ್ಲಿ ನಾಲ್ಕೈದು ಗಂಟೆಯಂತೆ 5 ವಾರದ ಡಿಜಿಟಲ್ ಮಾರ್ಕೆಟಿಂಗ್ ಕ್ಲಾಸ್ ಅನ್ನು ನಡೆಸಲಾಗುತ್ತದೆ. ಮುಂದಿನ ಕೋರ್ಸ್ ಫೆಬ್ರವರಿ 22ರಿಂದ ಏಪ್ರಿಲ್ 1ರ ತನಕ ಇದೆ. ಆದಷ್ಟು ಬೇಗ ಭೇಟಿ ನೀಡಿ. ಲಿಂಕ್
* ಹಬ್‍ಸ್ಪಾಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಲು 18 ಉಚಿತ ತರಗತಿಗಳಿವೆ. ಉಚಿತವೆಂದಿರುವ ಕೋರ್ಸ್ ಅನ್ನು ಈ ಲಿಂಕ್‍ನಲ್ಲಿ ಹುಡುಕಿರಿ. ಲಿಂಕ್

ಇವು ಉಚಿತವಲ್ಲ
ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಎಸ್‍ಇಒ, ಎಸ್‍ಇಎಂ, ಎಸ್‍ಎಂಒ, ಪಿಪಿಸಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಪಡೆಯಬಹುದು. ವಾರಾಂತ್ಯ ಕ್ಲಾಸ್‍ಗಳು ಮಾತ್ರವಲ್ಲದೆ ವಾರದ ಎಲ್ಲಾ ದಿನದ ಕ್ಲಾಸ್‍ಗಳೂ ಇವೆ. ಒಟ್ಟು 40 ದಿನಗಳ, 100 ಗಂಟೆಯ ಈ ಕೋರ್ಸ್‍ಗೆ 25ಸಾವಿರ ಶುಲ್ಕ ನೀಡಬೇಕು. ಆನ್‍ಲೈನ್ ಕೋರ್ಸ್‍ಗಳೂ ಲಭ್ಯ. ಹೆಚ್ಚಿನ ಮಾಹಿತಿಗೆ ಲಿಂಕ್
ಮನಿಪಾಲ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಪೆÇ್ರಲರ್ನ್ ಆನ್‍ಲೈನ್ ಕಲಿಕಾ ತಾಣದಲ್ಲಿ ಕಲಿಯಬಹುದು. ಗೂಗಲ್ ಜೊತೆ ಸೇರಿ ನೀಡುವ ಈ ಡಿಜಿಟಲ್ ಕೋರ್ಸ್‍ನ ಅವಧಿ 90 ಗಂಟೆ. ಬೆಂಗಳೂರಿನಲ್ಲಿ ಮುಂದಿನ ಎನ್‍ರೋಲ್‍ಮೆಂಟ್ ಫೆಬ್ರವರಿ 14. ಮ್ಯಾನೇಜ್‍ಮೆಂಟ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಈ ಕೋರ್ಸ್‍ಗೆ ಸೇರಬಹುದು. ಮಾಹಿತಿಗೆ ಲಿಂಕ್
ಬೆಂಗಳೂರಿನ ಇನ್‍ವೆಂಟಾಟೆಕ್‍ನಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಕುರಿತಾದ ಹಲವು ಕೋರ್ಸ್‍ಗಳು ಲಭ್ಯ ಇವೆ. ಲಿಂಕ್
ಎಎಂಪಿ ಡಿಜಿಟಲ್‍ನಲ್ಲಿ 14 ವಾರದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕೊಂಚ ದುಬಾರಿ ಎಂದೇ ಹೇಳಬೇಕು. ಇಲ್ಲಿ 48 ಸಾವಿರ ರೂ. ಶುಲ್ಕ ನೀಡಬೇಕು. ಇದು ಇಂಟರ್ನ್‍ಷಿಪ್ ಅವಕಾಶವನ್ನೂ ನೀಡುತ್ತದೆ. ಇದೇ ಸಂಸ್ಥೆಯು 14 ಸಾವಿರ ರೂ.ಗೆ ಸೋಷಿಯಲ್ ಮೀಡಿಯಾ ಕೋರ್ಸ್ ಸಹ ನೀಡುತ್ತಿದೆ.
ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿರುವ ಸ್ಕೈಡ್ರೀಮ್‍ಕನ್ಸಲ್ಟ್ ಸಂಸ್ಥೆಯು 100 ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಕೋರ್ಸ್ ನೀಡುತ್ತದೆ. ತೆರಿಗೆ ಸೇರಿ 25 ಸಾವಿರ ರೂ. ಶುಲ್ಕ ಇದೆ. ಮಾಹಿತಿಗೆ ಲಿಂಕ್

Published in Vijayakarnataka Mini

Saturday 10 December 2016

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?


  • ರಶ್ಮಿ ಪ್ರವೀಣ್

ಕರಾವಳಿಗರಿಗೆ ಬನ್ಸ್ ಅಂದ್ರೆ ಇಷ್ಟ. ಕರಾವಳಿ ಬಿಟ್ಟು ಪರ ಊರಿಗೆ ಹೋದವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಬನ್ಸ್ ಕಂಡರಂತೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.  ಮಂಗಳೂರು ಬನ್ಸ್ ಮಾಡುವುದು ಬಲು ಸುಲಭ. ನೀವೂ ಟ್ರೈ ಮಾಡಬಹುದು. ಬನ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು



  • ಮೈದಾ ಹಿಟ್ಟು 4 ಕಪ್





  • ಬಾಳೆಹಣ್ಣು 2 ಅಥವಾ 3 (ಚೆನ್ನಾಗಿ ಹಣ್ಣಾಗಿರಲಿ)



  • ಸಕ್ಕರೆ ಅರ್ಧ ಕಪ್ (ಸಿಹಿ ಹೆಚ್ಚು ಬೇಕಿದ್ದರೆ ಎರಡ್ಮೂರು ಸ್ಪೂನ್ ಜಾಸ್ತಿ ಹಾಕಿ.



  • ಒಂದು ಚಿಟಿಕೆ ಅಡುಗೆ ಸೋಡಾ.

  • ಉಪ್ಪು- ಒಂದುವರೆ ಚಮಚ.



  • ಮೊಸರು ಅರ್ಧ ಕಪ್.



ಮೊದಲ ಹಂತ

  • ಪಾತ್ರೆಯೊಂದರಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ. ಪೇಸ್ಟ್ ಆಗುವ ತನಕ



  • ಅದಕ್ಕೆ ಸಕ್ಕರೆ, ಅಡುಗೆ ಸೋಡಾ, ಮೊಸರು, ಉಪ್ಪು ಹಾಕಿ ಚೆನ್ನಾಗಿ ಹಿಸುಕಿ. ಸಕ್ಕರೆ ಇತ್ಯಾದಿಗಳು ಕರಗುವ ತನಕ.



  • ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಹಾಕಿ ಮುದ್ದೆ ಮಾಡಿ. ಚಪಾತಿ ಹಿಟ್ಟಿನಂತೆ ಮುದ್ದೆ ಆಗುವ ತನಕ ಮೈದಾ ಹಿಟ್ಟು ಹಾಕಿ. ನಾಲ್ಕು ಕಪ್ ಸಾಕಾಗದೆ ಇದ್ದರೆ ಇನ್ನು ಸ್ವಲ್ಪ ಹಾಕಿ.



  • ಚಪಾತಿ ಹಿಟ್ಟಿನಂತೆ ರೆಡಿಯಾದ ನಂತರ ಬನ್ಸ್ ಮಾಡಲು ರೆಡಿಯಾಗಬೇಡಿ. ಇನ್ನೂ ಏಳೆಂಟು ಗಂಟೆ ಕಾಯಬೇಕು. ಬೆಳಗ್ಗೆ ಹಿಟ್ಟು ಮುದ್ದೆ ರೆಡಿಯಾದರೆ ಸಂಜೆಯ ತನಕ ಹಿಟ್ಟು ಇಟ್ಟುಬಿಡಿ. ರಾತ್ರಿ ಸಿದ್ಧಮಾಡಿದ್ದರೆ ಬೆಳಗ್ಗೆ ಬನ್ಸ್ ಮಾಡಬಹುದಾಗಿದೆ.

ಎರಡನೇ ಹಂತ (ಎಂಟು ಗಂಟೆಯ ನಂತರ)

  • ಮುದ್ದೆಯನ್ನು ಚೆನ್ನಾಗಿ ಹಿಸುಕಿ.

  • ಪುಟ್ಟ ಪುಟ್ಟ ಉಂಡೆ ಮಾಡಿ ಚಪಾತಿಗಿಂತ ಕೊಂಚ ದಪ್ಪಗಾಗಿ ಪುಟ್ಟ ಪುಟ್ಟ ದೋಸೆಯಂತೆ ಲಟ್ಟಿಸಬೇಕು.



ಮೂರನೇ ಹಂತ

  • ಬಾಣಲೆಯಲ್ಲಿ ಎಣ್ಣೆ ಕುದಿಸಿ (ಬನ್ಸ್ ಮುಳುಗುವಷ್ಟು ಇರಲಿ)

  • ಲಟ್ಟಿಸಿಟ್ಟಿರುವುದನ್ನು ಒಂದೊಂದಾಗಿ ಕುದಿಯುವ ಎಣ್ಣೆಗೆ ಹಾಕಿ.

  • ಕುದಿಯುವ ಎಣ್ಣೆಯಲ್ಲಿ ಬನ್ಸ್ ಕೆಂಬಣ್ಣಕ್ಕೆ ಬರುವಷ್ಟು ಕಾಯಿಸಿ.



  • ಎಣ್ಣೆಯಿಂದ ಬನ್ಸ್ ಅನ್ನು ತೆಗೆಯಿರಿ.

ಬನ್ಸ್ ರೆಡಿ :-)







Friday 9 December 2016

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.


ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್‌ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ  ಹುಡುಗ ಇವನೇನಾ ಅಂತ ಅನಿಸಿರಬೇಕು.


ಶೇಷಮ್ಮ ಟೀಚರ್‌ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್‌ ಆಗಿದ್ದರು.  ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ  ಶೇಷಮ್ಮ ಟೀಚರ್‌ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್‌ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ.


ನನಗಿನ್ನೂ ನೆನಪಿದೆ. ನಾನು ಶಾಲೆಗೆ ಹೋಗುವಾಗ ಬ್ಯಾಗ್‌ನಲ್ಲಿ ಪಾಠ ಪುಸ್ತಕಕ್ಕಿಂತ ಚಂದಮಾಮ, ಬಾಲಮಂಗಳ ಮತ್ತು ಒಂದಿಷ್ಟು ಕಸ ಯಾವತ್ತೂ ಇರುತ್ತಿತ್ತು. ಟೀಚರ್‌ ನನ್ನ ಬ್ಯಾಗನ್ನು ಮೇಜಿನ ಮೇಲೆ ಸುರಿದು ಅದರಲ್ಲಿದ್ದ ಹರಿದ ಕತೆ ಪುಸ್ತಕಗಳನ್ನು ಎಲ್ಲರಿಗೆ ತೋರಿಸಿ ಅಪಹಾಸ್ಯ ಮಾಡುತ್ತಿದ್ದರು.  `ಇವನ ಚೀಲದಲ್ಲಿ ಪಾಠ ಪುಸ್ತಕಕ್ಕಿಂತ ಬಾಲಮಂಗಳ, ಚಂದಮಾಮ, ಕಸವೇ ಜಾಸ್ತಿ’ ಅಂತ ದಿನಾ ಅಮ್ಮನ ಬಳಿ ಬಂದು ದೂರು ಹೇಳುತ್ತಿದ್ದಳು. ಅಮ್ಮ ಇಂತಹ ದೂರುಗಳಿಗೆ ಕಿವುಡಿಯಾಗುತ್ತಿದ್ದಳು. ಪಕ್ಕದ ಮನೆಯ ರಶ್ಮಿಗೆ ಹೋಲಿಸಿ `ಅವಳು ನೋಡು ಎಷ್ಟು ಜಾಣ ಹುಡುಗಿ. ಕ್ಲಾಸ್‌ಗೆ ಯಾವಾಗಲೂ ಫಸ್ಟ್‌. ಇವನನ್ನು ಕೂಡ ಅದೇರೀತಿ ಕುಳಿತು ಓದೋಕೆ ಹೇಳಿ ಅಂತ’ ಅಮ್ಮನಿಗೆ ಹೇಳುತ್ತಿದ್ದರು. ರಶ್ಮಿಗೆ ನನ್ನನ್ನು ಹೋಲಿಸುವಾಗ ಅಮ್ಮ ಕೋಪಗೊಳ್ಳುತ್ತಿದ್ದಳು. ಅವಳಿಗೇನು ಅಪ್ಪ  ಸರ್ಕಾರಿ ಕೆಲಸದಲ್ಲಿದ್ದಾರೆ. ದುಡ್ಡು ವಿದ್ಯೆ ಎರಡೂ ಇದೆ. ಹೇಳಿ ಕೊಡ್ತಾರೆ’ ಅಂತ ಅಮ್ಮ ಸುಮ್ಮನಾಗುತ್ತಿದ್ದಳು.


ಇಷ್ಟಕ್ಕೂ ನನಗೆ ಕಥೆ ಪುಸ್ತಕ ಓದುವ ಹುಚ್ಚು ಹಿಡಿಸಿದೇ ಅಮ್ಮ. `ಒಂದು ಗೋಣಿ ತುಂಬಾ ಚಂದಮಾಮ ಇಟ್ಟಿದೆ. ಹಾಳಾದ ಗೆದ್ದಲು ತಿಂದು ಬಿಡ್ತು’ ಹಾಗಂತ ನಾನು ಹೈಸ್ಕೂಲ್‌ನಲ್ಲಿರುವಾಗ ಅವ್ಯಕ್ತ ನೋವಿನಿಂದ ಹೇಳುತ್ತಿದ್ದಳು. ಓದಿರುವುದು ನಾಲ್ಕನೇ ತರಗತಿಯಾದರೂ ರಾಮಾಯಣ, ಮಹಾಭಾರತ ಅಂತ ಅವಳು ಓದದ ಪುಸ್ತಕವಿಲ್ಲ. ನಾನು ಎಂಎ ಮುಗಿಸುವರೆಗೂ ಅವಳಿಗಾಗಿ ಲೈಬ್ರೆರಿಯಿಂದ ಪುಸ್ತಕ ತರುತ್ತಿದ್ದೆ. ಚಿಕ್ಕವರಿದ್ದಾಗ ನಾನು ಮತ್ತು ನನ್ಣಣ್ಣ ನಿದ್ರೆಗೆ ಮುನ್ನ ಅಮ್ಮನ ಅಕ್ಕ ಪಕ್ಕ ಮಲಗಿ ಕತೆ ಹೇಳುವಂತೆ ಪೀಡಿಸುತ್ತಿದ್ದೇವು.


ಪಂಚತಂತ್ರ, ನರಿ, ರಾಜರಾಣಿ, ಹುಲಿ ತೋಳ ರಾಕ್ಷಸ ಅಂತ ಅವಳಲ್ಲಿ ಕಥೆಗಳೆಂದೂ ಮುಗಿಯುತ್ತಿರಲ್ಲಿಲ್ಲ. ಏನೋ ತಪ್ಪು ಮಾಡಿದಕ್ಕೆ ತಡೆಯಾಲಾರದೇ ಅಮ್ಮ ಒಂದು ದಿನ ಚಾಟಿಯಿಂದ ಹೊಡೆದಿದ್ದಳು. ಆ ಏಟಿಗೆ ನಾನು ಅಮ್ಮ ಅಂತ ಕಿರುಚಿ ದೂರಕ್ಕೆ ಓಡಿದ್ದೆ. ಮತ್ತೆ ಬಂದು ನೋಡಿದಾಗ ಅಮ್ಮ ಅಳುತ್ತಿದ್ದಳು.


ಚಂದಮಾಮ ಅಂದಾಗ ನನಗೆ ನೆನಪಾಗುವುದು ಮಳಿಯ ವೆಂಕಟಕೃಷ್ಣ ಭಟ್ರು. ಪ್ರತಿವಾರ(ಗುರುವಾರ ಅಂತ ನೆನಪು) ತಪ್ಪದೇ ಮನೆಗೆ ಚಂದಮಾಮ ತರುತ್ತಿದ್ದರು. ಅಮ್ಮ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಭಟ್ರು ಸೈಕಲ್‌ ಮೂಲಕ ಮನೆ ಮನೆಗೆ ಚಂದಮಾಮ, ಪತ್ರಿಕೆಗಳನ್ನು ಹಂಚುತ್ತಿದ್ದರು. ಅವರಿಗೆ ಆಗಲೇ ಜೇನು ಸಾಕುವ ಹುಚ್ಚು ಕೂಡ ವಿಪರಿತವಾಗಿತ್ತು. ಇದೆಲ್ಲವುದರ ಪರಿಣಾಮ ಎಂಬಂತೆ ಅವರೀಗ `ಮಧು ಮಲ್ಟಿಪಲ್ಸ್‌’ ಎನ್ನುವ ಉದ್ಯಮ ಮಾಲೀಕ. ಸುಮಾರು ನೂರೈವತ್ತು ಜನರಿಗೆ ಉದ್ಯೋಗದಾತ. ಚಂದಮಾಮ ಮಾರುತ್ತಿದ್ದ ಭಟ್ರು ಈಗ ಯಶಸ್ವಿ ಉದ್ಯಮಿಯಾಗಲು ಎಷ್ಟು ಶ್ರಮ ಪಟ್ಟಿದ್ದಾರೋ? ಅವರಿಗೇ ಗೊತ್ತು. (http://madhumultiples.com).


ನನ್ನಣ್ಣ ನನಗಿಂತ ಎರಡು ಕ್ಲಾಸ್‌ ಮುಂದಿದ್ದ. ಸೈಕಲ್‌ ಕಲಿತದ್ದು ಅವನು ಫಸ್ಟ್‌. ಸೈಕಲ್‌ ಕಲಿತ ಖುಷಿಯಲ್ಲಿ ನನ್ನನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಆಗ ಸೋಡದಂಗಡಿಯ ಮಮ್ಮದೆ ಬಳಿ ಗಂಟೆಗೆ 2 ರೂಪಾಯಿಗೆ ಸೈಕಲ್‌ ಬಾಡಿಗೆಗೆ ಸಿಗುತ್ತಿತ್ತು.  ತುಂಬಾ ವೇಗವಾಗಿ ಹೋಗುತ್ತಿದ್ದ. ಅದು ನಮ್ಮೂರಿನ ದೊಡ್ಡ ತಿರುವು. ಅಲ್ಲಿ ಸಾಮಾನ್ಯ ಸೈಕಲ್‌ಗಳಿಗೆ ಬ್ರೇಕ್‌ ಹಿಡಿತಾ ಇರಲ್ಲಿಲ್ಲ. ಅತೀ ವೇಗದಿಂದ ಕೆಳಗಿಳಿಯುತ್ತಿರುವಾಗ ಎದುರಿನಿಂದ ಬಸ್‌ ಬರುತ್ತಿತ್ತು. ಅಣ್ಣ ಬ್ರೇಕ್‌ ಹಿಡಿಯೋಕೆ ನೋಡ್ತನೆ. ನಿಲ್ಲೋದೆ ಇಲ್ಲ. ಎದುರಿನಿಂದ ಯಮನಂತೆ ಬರುವ ಬಸ್ಸು. ಏನಾಯಿತು ಅಂತ ಗೊತ್ತಾಗಲ್ಲಿಲ್ಲ. ನಾವಿಬ್ಬರು ಮಾರ್ಗದಲ್ಲಿ ಬಿದ್ದಿದ್ದೇವು.


ಬಸ್‌ ನಿಂತಿತು. ಅದರಲ್ಲಿದ್ದವರು ನಮ್ಮನ್ನು ಎಬ್ಬಿಸಿದರು. ಅಣ್ಣ ಎದುರಿನ ಮೋರಿಗೆ ಸೈಕಲ್‌ನ್ನು ಗುದ್ದಿಸಿದ. ಸ್ವಲ್ಪ ಎಚ್ಚರ ತಪ್ಪಿದರೆ ಕೆಳಗಿನ ದೊಡ್ಡ ಗುಂಡಿಗೆ ಬೀಳುತ್ತಿದ್ದೇವು. ಸೈಕಲ್‌ನ ಎದುರಿನ ಟೈರ್‌ ಎಂಟು ಆಕಾರಕ್ಕೆ ತಿರುಗಿತ್ತು. ಅದೇ ಕೊನೆ ಮತ್ತೆ ನಾನು ಅವನೊಂದಿಗೆ ಸೈಕಲ್‌ನಲ್ಲಿ ಹೋಗಿಲ್ಲ.


ಶಾರದ ಪೂಜೆ, ಸ್ವಾತಂತ್ರೋತ್ಸವ ಸೇರಿದಂತೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ. ಕಾಗದ ಕೊಡೊಕೆ ನಾನು ಮತ್ತು ಸುನಿಲನೇ ಆಗಬೇಕು. ಕ್ಲಾಸ್‌ ಇಲ್ಲದೇ ಊರು ಸುತ್ತುವುದೆಂದರೆ ನಮಗೂ ಎಲ್ಲಿಲ್ಲದ ಖುಷಿ. ಕಾಡಿನೆಡೆಯಲ್ಲಿರುವ ಮನೆಗಳಿಗೆ, ಗುಡ್ಡದಾಚೆ ಹೋಗೊದಂದ್ರೆ ಮಜಾನೇ ಮಜಾ.


ಕಾಡಿನಲ್ಲಿ ಯಾವುದೋ ದೊಡ್ಡ ಬಂಡೆಯನ್ನು ತೋರಿಸಿ ಸುನಿಲ ‘ಇದು ಹುಲಿಯ ಗುಹೆಯಾಗಿತ್ತು’ ಅಂದ್ರೆ ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಈ ಮರದಲ್ಲಿ ಮೋಹಿನಿ ದೆವ್ವ ಇದೆ ಅಂತಲೂ ಹೆದರಿಸುತ್ತಿದ್ದ. ಕ್ಲಾಸ್‌ ಮುಗಿದ ಕ್ಷಣ ನಾನು ಮತ್ತು ಸುನಿಲ ಕಾಡಿಗೆ ಓಡುತ್ತಿದ್ದೇವು. ಅಲ್ಲಿ ನೆಲ್ಲಿಕಾಯಿ ಕಾರೆಕಾಯಿ ಅಂತ ಸಿಕ್ಕಿಸಿಕ್ಕಿದನ್ನು ತಿನ್ನುತ್ತಿದ್ದೇವು. ಕಾಡಿನಲ್ಲಿ ಜೇನು ಹಿಡಿಯೋ ನಾರ್ಣ ಸಿಕ್ಕದರೆ ಮುಗೀತು.ಮತ್ತೆ ಅವನೊಂದಿಗೆ ಕತ್ತಲಾಗುವ ತನಕ ಕಾಡು ಸುತ್ತುತ್ತಿದ್ದೇವು.


ನಾರ್ಣನಿಗೆ ಒಂದು ಜೇನು ಹುಳ ಕಣ್ಣಿಗೆ ಬಿದ್ದರೆ ಸಾಕು. ಅದರ ಹಿಂದೆಯೇ ಸಾಗಿ ಜೇನು ಗೂಡಿನ ಜಾಡು ಹಿಡಿಯುತ್ತಿದ್ದ. ಇವನ ತಾಯಿ ಅಯ್ತೆ ತೋಡಿನ ಬದಿಯಲ್ಲಿ ಕುಳಿತುಕೊಂಡು ಏಡಿಯ ಪುಟ್ಟ ಗುಹೆಯೊಳಗೆ ಕೈಹಾಕಿ ಏಡಿ ಹಿಡಿಯುವುದನ್ನು ನಾವು ನೋಡಿ ಆಶ್ಚರ್ಯಗೊಳ್ಳುತ್ತಿದ್ದೇವು. ಕಾಡಿನಲ್ಲಿ ಸಂಗ್ರಹಿಸಿದ ಸೀಗೆಕಾಯಿಗಳನ್ನು ನನ್ನ ಮನೆಯ ಪಕ್ಕದಲ್ಲಿದ್ದ ಅಜ್ಮೀರ್‌ನ ಅಂಗಡಿಗೆ ಮಾರುತ್ತಿದ್ದೇವು. ಆತ ನೀಡಿದ ಚಿಲ್ಲರೆ ಹಣದಲ್ಲಿ ತಪ್ಪದೆ ತಿಂಡಿ, ಐಸ್‌ಕ್ಯಾಂಡಿ ತಿನ್ನುತ್ತಿದ್ದೇವು.


ಅಜ್ಮೀರ್‌ ಅಂದಾಗ ನೆನಪಾಯಿತು. ನಾನು ಚಿಕ್ಕದಾಗಿರುವಾಗ ಕಿಸೆಯಲ್ಲಿ ಅಡಕೆ ತುಂಬಿಸಿಕೊಂಡು ಬಂದು ಇವನಿಗೆ ಮಾರುತ್ತಿದ್ದೆ. ಆತ ಒಂದೆರಡು ದಿನ ಸುಮ್ಮನಿದ್ದ. ಕೊನೆಗೆ ಅಜ್ಜನಿಗೆ ಕಂಪ್ಲೇಟ್‌ ಕೊಡೋದ?. ಅಜ್ಜ ಬೈರವನಂತೆ ದೊಣ್ಣೆ ಹಿಡಿದು ಬಂದಿದ್ದರು. ಮನೆಗೆ ಕರೆದುಕೊಂಡು ಹೋಗಿ ಕಳ್ಳತನ ಮಾಡಬಾರದೆಂದು ತುಂಬಾ ಬುದ್ದಿವಾದ ಹೇಳಿದ್ದರು. ಅಜ್ಜ ಅಂದರೆ ಅಜಾನುಬಾಹು ವ್ಯಕ್ತಿತ್ವ. ಹಳ್ಳಿ ಮದ್ದು ಕೊಡುವುದರಲ್ಲಿ ಹೆಸರುವಾಸಿಯಾಗಿದ್ದರು. ಪಾಡ್ದನ, ಸಂದಿ ಅಂತ ಅವರಿಗೆ ತಿಳಿಯದ ವಿಷಯವಿರಲ್ಲಿಲ್ಲ. ಅಜ್ಜ ನಮಗೊಂದು ಅಚ್ಚರಿಯಾಗಿದ್ದರು.


ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ. ಈಗೀಗ ನನಗೆ ಗೆದ್ದಲು ಹುಳುಗಳ ಮೇಲೆ ವಿಪರೀತ ಸಿಟ್ಟು ಬರುತ್ತಿದೆ. ನನ್ನ ಅಜ್ಜನಂತೆ ದೊಡ್ಡ ನೆಲ್ಲಿಕಾಯಿ ಮರ ಕೂಡ ಧರೆಗುರುಳಿದೆ. ಊರಿಗೆ ಹೋದಾಗ ಪ್ರೈಮರಿಯ ಮಕ್ಕಳು ನಮ್ಮನ್ನು ಅಚ್ಚರಿಗಣ್ಣಿನಿಂದ ನೋಡುತ್ತಾರೆ. ನನಗೆ ಅವರನ್ನು ನೋಡುವಾಗ ಅಸೂಯೆಯಾಗುತ್ತದೆ. ಬಾಲ್ಯವೆಂಬುದು ನೆನಪುಗಳ ಅಕ್ಷಯ ಪಾತ್ರೆ. ಅದು ಖಾಲಿಯಾಗುವುದೇ ಇಲ್ಲ. ದೊಡ್ಡಾದಾಗುತ್ತ ಬಂದಂತೆ ಊರು ಅಚ್ಚರಿಯಾಗಿ ಉಳಿಯಲ್ಲಿಲ್ಲ. ಪ್ರತಿಯೊಬ್ಬರಲ್ಲೂ ಬಾಲ್ಯದ ಅಕ್ಕರೆಯ ಸಕ್ಕರೆಯ ನೆನಪಿರುತ್ತದೆ. ಯಾಕೋ ಶೇಷಮ್ಮ ಟೀಚರ್‌ನಲ್ಲಿ ಮಾತನಾಡಿದ ನಂತರ ಮನದ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ನೆನಪುಗಳು ಮತ್ತೆ ಕಾಡತೊಡಗಿವೆ.

ಪ್ರವೀಣ ಚಂದ್ರ ಪುತ್ತೂರು

Tuesday 6 December 2016

ನಿಮಗಿದು ಗೊತ್ತೆ? Did You Know ಸೋಜಿಗದ ಸಂಗತಿಗಳು

ನಿಮಗಿದು ಗೊತ್ತೆ? Did You Know ಸೋಜಿಗದ ಸಂಗತಿಗಳು

* ನಮ್ಮ ಹೃದಯದ ಬಡಿತ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು.

* ನಮಗೆ ಎಷ್ಟು ವಯಸ್ಸಾದರೂ ನಮ್ಮ ಕಣ್ಣು ನಾವು ಹುಟ್ಟಿದಾಗ ಇದ್ದಷ್ಟೇ ಗಾತ್ರ ಇರುತ್ತದೆ. ಆದರೆ ಕಿವಿ ಮತ್ತು ಮೂಗು ನಿರಂತರವಾಗಿ ಬೆಳೆಯುತ್ತಿರುತ್ತದೆ.

* ಜಗತ್ತಿನಲ್ಲಿರುವ ಮನುಷ್ಯರ ಸಂಖ್ಯೆಗಿಂತ ಹೆಚ್ಚು ಬ್ಯಾಕ್ಟಿರಿಯಾಗಳು ನಿಮ್ಮ ಬಾಯಿಯಲ್ಲಿದೆಯಂತೆ!

* ನಿಮ್ಮ ಕೈಯ ಮಧ್ಯದ ಬೆರಳು ವೇಗವಾಗಿ ಬೆಳೆಯುತ್ತದೆ.

*ಟೊಮೆಟೊದ ನಂತರ ಬಾಳೆಹಣ್ಣು ಜಗತ್ತಿನಲ್ಲಿ ಅತ್ಯಂತ ಪ್ರಶಿದ್ಧ ಹಣ್ಣು

* ಚಿಟ್ಟೆಗಳು ಕಾಲಿನ ಮೂಲಕ ರುಚಿ ನೋಡುತ್ತವೆ.

* ಪ್ರಪಂಚದಲ್ಲಿ ಅತ್ಯಧಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ- ಭಾರತದ ರೈಲ್ವೆ

* ಈಜಬಲ್ಲ ಆದರೆ ಹಾರಲಾಗದ ಒಂದೇ ಹಕ್ಕಿಯೆಂದರೆ ಪೆಂಗ್ವಿನ್‌.

* ನಮ್ಮ ಹೃದಯದ ಬಡಿತ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು.

* ನಮಗೆ ಎಷ್ಟು ವಯಸ್ಸಾದರೂ ನಮ್ಮ ಕಣ್ಣು ನಾವು ಹುಟ್ಟಿದಾಗ ಇದ್ದಷ್ಟೇ ಗಾತ್ರ ಇರುತ್ತದೆ. ಆದರೆ ಕಿವಿ ಮತ್ತು ಮೂಗು ನಿರಂತರವಾಗಿ ಬೆಳೆಯುತ್ತಿರುತ್ತದೆ.

*ನಿಮ್ಮ ದೇಹ ಪ್ರತಿ ಸೆಕೆಂಡ್‌ಗೆ 15 ದಶಲಕ್ಷ ಕೆಂಪು ರಕ್ತಕಣಗಳನ್ನು ಕೊಲ್ಲುತ್ತದೆ. ಹೆದರಬೇಡಿ ಅಷ್ಟೇ ರಕ್ತಕಣಗಳನ್ನು ಉತ್ಪಾದಿಸುತ್ತದೆ.

*ವಿಶ್ವದಲ್ಲಿ ಆಯಾತಕಾರದ ಧ್ವಜ ಹೊಂದಿರದ ದೇಶ ನೇಪಾಲ ಮಾತ್ರ.*ಎಮ್ಮುಗಳಿಗೆ ಹಿಂದಕ್ಕೆ ನಡೆಯಲು ಸಾಧ್ಯವಾಗುವುದಿಲ್ಲವಂತೆ!

*ಕರಡಿಗಳಿಗೆ 42 ಹಲ್ಲುಗಳಿವೆ.

*ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಹೆಸರು- ಮೊಹಮ್ಮದ್‌

*`ಟೌನ್‌’ ಎಂಬುದು ಅತ್ಯಂತ ಹಳೆಯ ಆಂಗ್ಲ ಪದ.

* ಪ್ರತಿಗಂಟೆಗೆ ಬೆಕ್ಕು 20 ಕಿ.ಮೀ. ಓಡಬಲ್ಲದು.

* ವೆನಿಲಾ ಜಗತ್ತಿನಲ್ಲಿ ಅತ್ಯಂತ ಫೇಮಸ್‌ ಐಸ್‌ಕ್ರೀಂ ಪ್ಲೇವರ್‌.

* ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸುಮಾರು 60 ಸಾವಿರ ಪೌಂಡ್‌ ಆಹಾರ ಸೇವಿಸುತ್ತಾನೆ. ಅಂದ್ರೆ 6 ದೊಡ್ಡ ಆನೆಯಷ್ಟು.

* ನಿಮ್ಮ ಹುಟ್ಟುಹಬ್ಬದಂದೇ ಪ್ರಪಂಚದಲ್ಲಿ ಕನಿಷ್ಠ 9 ಲಕ್ಷ ಜನರಾದರೂ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರಂತೆ!

* ಮನುಷ್ಯರಿಗಿರುವುದಕ್ಕಿಂತ ಹೆಚ್ಚು ಸ್ನಾಯುಗಳು ಕಂಬಳಿ ಹುಳುಗಳಿಗೆ ಇವೆಯಂತೆ!

* ಆಗಷ್ಟೇ ಹುಟ್ಟಿದ ಕಾಂಗರೂ ಸುಮಾರು ಒಂದು ಇಂಚಿನಷ್ಟು ಮಾತ್ರ ಉದ್ಧವಿರುತ್ತದೆ.

* ಆಗಷ್ಟೇ ಹುಟ್ಟಿದ ಮಗುವಿನ ಮಿದುಳು ಮೊದಲ ವರ್ಷದಲ್ಲಿ ಸುಮಾರು ಮೂರು ಪಟ್ಟು ಬೆಳೆಯುತ್ತದಂತೆ!

* ಬೆಕ್ಕಿನ ಪ್ರತಿ ಕಣ್ಣಿನಲ್ಲೂ ಸುಮಾರು 32 ಸ್ನಾಯುಗಳಿವೆ.

*ಜೇಡಗಳಿಗೆ ಸಾಮಾನ್ಯವಾಗಿ 8 ಕಣ್ಣುಗಳಿರುತ್ತವೆ. ಆದರೂ ಅವಕ್ಕೆ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ.

*ಕಿಂಗ್‌ ಕಾಂಗ್‌ ಎಂಬುದು ಹಿಟ್ಲರ್‌ನ ಫೇವರಿಟ್‌ ಸಿನಿಮಾ.

*1993ರಲ್ಲಿ ಮಿಕ್ಕಿ ಮೌಸ್‌ಗೆ ಕಡಿಮೆಯೆಂದರೆ 8 ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳು ಪತ್ರ ಬರೆದಿರುವುದಾಗಿ ನಂಬಲಾಗಿದೆ.

*ಮನುಷ್ಯರ ಎಲುಬು ಉಕ್ಕಿನಷ್ಟೇ ಗಟ್ಟಿಯಾಗಿದೆ. ಆದರೆ 50 ಪಟ್ಟು ಕಡಿಮೆ ಹಗುರವಾಗಿದೆ.

*ಕತ್ತಲಿನಲ್ಲಿ ಬೆಕ್ಕಿನ ಮೂತ್ರ ಹೊಳೆಯುತ್ತದಂತೆ!

*ಬಿಸಿಗಾಳಿಯ ಬಲೂನ್‌ನಲ್ಲಿ ಮೊದಲು ಹಾರಾಟ ನಡೆಸಿದ್ದು ಒಂದು ಕುರಿ, ಒಂದು ಬಾತುಕೋಳಿ ಮತ್ತು ಒಂದು ಹುಂಜ.

*ಟೆಲಿಫೋನ್‌ ಕಂಡುಹಿಡಿದ ಅಲೆಕ್ಸಾಂಡರ್‌ ಗ್ರಾಹಂ ಬೆಲ್‌ ತನ್ನ ಪತ್ನಿ ಮತ್ತು ಹೆಂಡತಿಯರೊಂದಿಗೆ ಫೋನ್‌ನಲ್ಲಿ ಮಾತನಾಡಲಿಲ್ಲ.ಕಾರಣ ಅವರಿಬ್ಬರಿಗೆ ಕಿವಿ ಕೇಳಿಸುತ್ತಿರಲಿಲ್ಲ!

*12 ಮೊಟ್ಟೆಯಿಡಲು ಕೋಳಿ ಸುಮಾರು 1.81 ಕಿಲೋ ಗ್ರಾಂ.ನಷ್ಟು ಆಹಾರ ಸೇವಿಸಬೇಕಾಗುತ್ತದೆ.

*ಕಡಿಮೆ ಮತ್ತು ಅತ್ಯಧಿಕ ಕಂಪನ(ಪ್ರೀಕ್ವೆನ್ಸಿ)ಗಳನ್ನು ದನಗಳು ಮನುಷ್ಯರಿಗಿಂತ ಚೆನ್ನಾಗಿ ಗ್ರಹಿಸಿಕೊಳ್ಳಬಲ್ಲವು.

* ನಮ್ಮ ಬಾಯಿ ದಿನವೊಂದಕ್ಕೆ ಸುಮಾರು ಒಂದು ಲೀಟರ್‌ನಷ್ಟು ಜೊಳ್ಳು ಉತ್ಪಾದಿಸುತ್ತದೆ.

* ಕಣ್ಣು ತೆರೆದು ಸೀನಲು ಯಾರಿಗೂ ಸಾಧ್ಯವಿಲ್ಲವಂತೆ!

* ಮನುಷ್ಯ ಆಹಾರವಿಲ್ಲದೆ ತಿಂಗಳುಗಳ ಕಾಲ ಬದುಕಬಲ್ಲ. ಆದರೆ ನೀರಿಲ್ಲದೆ ಒಂದು ವಾರ ಬದುಕುವುದು ಕಷ್ಟ.

* ಪುರುಷರಲ್ಲಿ ದಿನವೊಂದಕ್ಕೆ ಸುಮಾರು 40 ಮತ್ತು ಮಹಿಳೆಯರಲ್ಲಿ ದಿನವೊಂದಕ್ಕೆ ಸುಮಾರು 70 ಕೂದಲು ಉದುರುತ್ತದೆ.

*ನೀವು ನಿಮ್ಮ ಜೀವಿತಾವಧಿಯಲ್ಲಿ ಸುಮಾರು 75 ಸಾವಿರ ಲೀಟರ್‌(20 ಸಾವಿರ ಗ್ಯಾಲನ್‌)ಗಿಂತ ಹೆಚ್ಚು ನೀರು ಕುಡಿಯಬಹುದು.

* ಒಬ್ಬ ವ್ಯಕ್ತಿಯ ತಲೆಕಡಿದ ನಂತರ ಆತನಿಗೆ 8 ಸೆಕೆಂಡ್‌ ಕಾಲ ಪ್ರಜ್ಞೆಯಿರುತ್ತದಂತೆ!

* ನೀರಿನಲ್ಲಿ ಶಬ್ದವು ಗಾಳಿಗಿಂತ ನಾಲ್ಕು ಪಟ್ಟು ವೇಗದಲ್ಲಿ ಚಲಿಸುತ್ತದೆ.

* ನೀಲಿ ತಿಮಿಂಗಿಲ 188 ಡೆಸಿಬಲ್‌ ಸದ್ದು ಹೊರಡಿಸುತ್ತದೆ.  ಎಲ್ಲ ಪ್ರಾಣಿಗಳಿಗಿಂತ ಅಧಿಕವಾಗಿದ್ದು ಸುಮಾರು 530 ಕಿ.ಮೀ. ವರೆಗೆ ಕೇಳುತ್ತದೆ.

* ದೇಹದಲ್ಲಿ ಹೆಚ್ಚು ವರ್ಷ ಬದುಕುವ ಜೀವಕೋಶವೆಂದರೆ ಮಿದುಳುಕೋಶ. ಇದು ಸಾಯೋವರೆಗೂ ಇರುತ್ತದೆ.

* ಆರ್ಮಡಿಲೋ, ಅಪಾಸಮ್‌ ಮತ್ತು ಸ್ಲಾತ್‌ ಮುಂತಾದ ಸಸ್ತನಿಗಳು ಜೀವಮಾನದ ಶೇಕಡ 80ಕ್ಕಿಂತ ಆಯಸ್ಸನ್ನು ನಿದ್ದೆಯಲ್ಲಿ ಕಳೆಯುತ್ತವೆ.

* ಜಗತ್ತಿನ ಎಲ್ಲ ಪ್ರಾಣಿಗಳಿಗೆ ಹೋಲಿಸಿದರೆ ಸೊಳ್ಳೆಗಳು ಹೆಚ್ಚು ಅಪಾಯಕಾರಿ. ಇವು ಎಲ್ಲಕ್ಕಿಂತ ಹೆಚ್ಚು ರೋಗ ಹರಡುತ್ತವೆ.

* ಪಾಯಿಸನ್‌ ಆ್ಯರೋ ಕಪ್ಪೆ- ದಕ್ಷಿಣ ಮತ್ತು ಮಧ್ಯಅಮೆರಿಕ ದೇಶಗಳಲ್ಲಿ ಅತೀ ಹೆಚ್ಚು ವಿಷ ಹೊಂದಿರುವ ಪ್ರಾಣಿ.

* ಮುಖದಲ್ಲಿರುವ ಎಲುಬುಗಳು ಮತ್ತು ತಲೆಬುರುಡೆ ಸೇರಿದಂತೆ ಮಾನವನ ತಲೆಯಲ್ಲಿ 22 ಎಲುಬುಗಳಿವೆ.

* ವಿಶ್ವದ ದೊಡ್ಡ ಹೂವು ರಫ್ಲೇಶಿಯಾ ಅರ್ನೊಲ್ಡಿ. ಇದು ಸುಮಾರು 7 ಕೆ.ಜಿ ಇದ್ದು ಇಂಡೋನೇಷ್ಯಾದ ಸುಮತ್ರಾ ದ್ವೀಪದಲ್ಲಿದೆ.

* ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಕ್ಕಳು ಹುಟ್ಟುವುದು ಆಗಸ್ಟ್‌ನಲ್ಲಂತೆ. ಕಾರಣ ಗೊತ್ತಿಲ್ಲ.

*ವಿಶ್ವದ ದೊಡ್ಡ ದ್ವೀಪ ಆಸ್ಟ್ರೇಲಿಯಾದಲ್ಲಿರುವ ಗ್ರೀನ್‌ಲ್ಯಾಂಡ್‌. ಅತ್ಯಂತ ಸಣ್ಣದ್ವೀಪ ಬ್ರಿಟನ್‌ನಲ್ಲಿರುವ ಬಿಷಪ್‌ ರಾಕ್‌.

* ನಮ್ಮ ಬಾಯಿ ದಿನವೊಂದಕ್ಕೆ ಸುಮಾರು ಒಂದು ಲೀಟರ್‌ನಷ್ಟು ಲಾವಾರಸ ಉತ್ಪಾದಿಸುತ್ತದೆ.

* ಮನುಷ್ಯರು ಶೇಕಡ 90ರಷ್ಟು ಕನಸನ್ನು ಮರೆಯುತ್ತಾರಂತೆ*ಬೆಕ್ಕಿನ ಪ್ರತಿಕಣ್ಣಿನಲ್ಲೂ 32 ಸ್ನಾಯುಗಳಿವೆ.

*ಸೊಳ್ಳೆಗಳಿಗೂ ಹಲ್ಲಿದೆ.

* ಪೆರುವಿನಲ್ಲಿ ಈಜಿಪ್ಟ್‌ಗಿಂತ ಹೆಚ್ಚು ಪಿರಾಮಿಡ್‌ಗಳಿವೆ.

*ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 500 ಜಾತಿಯ ಬಾಳೆಹಣ್ಣುಗಳಿವೆ.

* ಚೆಸ್‌ ಕಂಡು ಹುಡುಕಿದ ದೇಶ ಭಾರತ.

* ದೊಡ್ಡ ಆಕ್ಟೋಪಸ್‌ ಸುಮಾರು 15 ಕೆ.ಜಿ ತೂಕವಿರುತ್ತದೆ.

* ಚಿಟ್ಟೆಗಳು ರುಚಿ ನೋಡುವುದು ಕಾಲಿನ ಮೂಲಕವಂತೆ!

* ಪ್ರಪಂಚದಲ್ಲಿ ಅತ್ಯಧಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ- ಭಾರತದ ರೈಲ್ವೆ

* ಈಜಬಲ್ಲ ಆದರೆ ಹಾರಲಾಗದ ಒಂದೇ ಹಕ್ಕಿಯೆಂದರೆ ಪೆಂಗ್ವಿನ್‌.

Friday 2 December 2016

Scribe for blind people: ದೃಷ್ಟಿ ವಿಶೇಷ ಚೇತನರಿಗೆ ಓದಲು ನೆರವಾಗಿ

Scribe for blind people: ದೃಷ್ಟಿ ವಿಶೇಷ ಚೇತನರಿಗೆ ಓದಲು ನೆರವಾಗಿ

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪಾಠ ಓದಿ ಹೇಳುವುದು, ಸಹಾಯಕ ಬರಹಗಾರರಾಗಿ ಪರೀಕ್ಷೆ ಬರೆಯಲು ನೆರವಾಗುವುದು ಯುವಜನತೆಗೆ ಅಚ್ಚುಮೆಚ್ಚು. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ ಐಟಿಬಿಟಿ, ಸರಕಾರಿ, ಖಾಸಗಿ ರಂಗದಲ್ಲಿರುವ ತರುಣ ತರುಣಿಯರ ಈ ಸಮಾಜಮುಖಿ ಕಾರ್ಯದ ಬಗ್ಗೆ ಒಂದು ನೋಟ ಇಲ್ಲಿದೆ.

* ಪ್ರವೀಣ್ ಚಂದ್ರ

ಬೆಂಗಳೂರಿನ ಜಯನಗರದ ಒಂದು ಕಾಲೇಜು. ಅದಿತಿ ಇನ್ನೇನೂ ಕ್ಲಾಸ್ ಪ್ರವೇಶಿಸಬೇಕೆಂದಿದ್ದಳು. ಆಗ ಅವಳಿಗೆ ವಾಣಿಯಿಂದ ಒಂದು ಎಸ್‍ಎಂಎಸ್ ಬರುತ್ತದೆ. `ವೆರಿ ಅರ್ಜೆಂಟ್, ನೀಡೆಡ್ 4 ಸ್ಕ್ರೈಬ್ಸ್. ಸುರಾನ ಕಾಲೇಜು' ಎಂದಿರುತ್ತೆ. ಕ್ಲಾಸ್‍ನೊಳಗೆ ಹೋದವಳೇ ತನ್ನ ಮೂವರು ಗೆಳತಿಯರನ್ನು `ಕ್ಲಾಸ್ ಬಂಕ್ ಮಾಡೋಣ' ಎಂದು ಹೊರಗೆಳೆದುಕೊಂಡು ಬರುತ್ತಾಳೆ. ಎಲ್ಲೋ ಫಿಲ್ಮ್ ನೋಡುವ ಪ್ಲಾನ್ ಇರಬೇಕು ಎಂದು ಎಲ್ಲರೂ ಖುಷಿಯಿಂದಲೇ ಹೊರಬರುತ್ತಾರೆ. ಆದರೆ ಆಕೆ ಅವರೆಲ್ಲರನ್ನೂ ಕರೆದುಕೊಂಡು ಬಂದದ್ದು ಸುರಾನ ಕಾಲೇಜಿಗೆ.
ಅವರೆಲ್ಲರು ಎಗ್ಸಾಂ ಹಾಲ್ ಪ್ರವೇಶಿಸಿದರು. ಅಲ್ಲಿ ತಮಗೆ ನಿಗದಿಪಡಿಸಿದ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಯ ಮುಂದೆ ಕುಳಿತರು. ಅವರಿಗೆ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಗಳನ್ನು ಓದಿ ಹೇಳತೊಡಗಿದರು. ಆ ವಿದ್ಯಾರ್ಥಿ ಹೇಳಿದ ಉತ್ತರಗಳನ್ನು ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡತೊಡಗಿದರು. ಈ ರೀತಿ ಎಗ್ಸಾಂ ಬರೆಯುವವರನ್ನು ಸ್ಕ್ರೈಬ್ ಅಥವಾ ಸಹಾಯಕ ಬರಹಗಾರರು ಎನ್ನುತ್ತಾರೆ. ಪರೀಕ್ಷಾ ಅಭ್ಯರ್ಥಿ ಹೇಳಿದ್ದನ್ನೇ ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡುತ್ತಾರೋ ಎಂದು ನಿಗಾವಹಿಸಲು ಪಕ್ಕದಲ್ಲಿ ಒಬ್ಬರು ಇನ್ವಿಜಲೇಟರ್ ಇರುತ್ತಾರೆ.

ಕಾಲೇಜು ವಿದ್ಯಾರ್ಥಿಗಳ ಫೇವರಿಟ್
ದೃಷ್ಟಿ ವಿಶೇಷ ಚೇತನರಿಗೆ ಪರೀಕ್ಷೆ ಬರೆಯಲು ನೆರವಾಗುವ ಕಾರ್ಯ ಕಾಲೇಜಿನ ಕೆಲವು ತರುಣ ತರುಣಿಯರಿಗೆ ಅಚ್ಚುಮೆಚ್ಚು. `ಈ ವರ್ಷ ಒಟ್ಟು ಹನ್ನೆರಡು ಪರೀಕ್ಷೆ ಬರೆದಿದ್ದೇನೆ. ನನಗೆ ಸಿಕ್ಕ ಕ್ಯಾಂಡಿಡೆಟ್ ತುಂಬಾ ಬ್ರಿಲಿಯಂಟ್ ಆಗಿದ್ದ. ತುಂಬಾ ವಿಷಯ ತಿಳಿದುಕೊಂಡಿದ್ದ' ಎನ್ನುತ್ತಾರೆ ಕೃಪಾ ಕೆ. ಆಕೆ ಆರ್‍ವಿ ಕಾಲೇಜಿನ ವಿದ್ಯಾರ್ಥಿನಿ. `ಪಾಪಾ, ಅವರಿಗೂ ನಮ್ಮಂತೆ ಕಣ್ಣು ಕಾಣುತ್ತಿದ್ದರೆ ಚೆನ್ನಾಗಿತ್ತು. ಆದರೆ, ಅವರ ಗ್ರಹಿಕಾ ಶಕ್ತಿ ತುಂಬಾ ಉತ್ತಮವಾಗಿರುತ್ತದೆ. ಎಷ್ಟೆಷ್ಟೋ ಕಷ್ಟದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಈ ರೀತಿ ಎಗ್ಸಾಂ ಬರೆಯುವುದು ಸಮಾಜ ಸೇವೆಯೂ ಹೌದು. ನಮಗೂ ವಿಶೇಷ ಅನುಭವ ನೀಡುತ್ತದೆ' ಎನ್ನುತ್ತಾರೆ ಅವರು.
ಆಕೆಯ ಗೆಳತಿ ಅನುಪಮ ವಿಎಸ್ ಅನುಭವ ಭಿನ್ನವಾಗಿತ್ತು. `ಆ ವಿದ್ಯಾರ್ಥಿ ಏನೂ ಓದಿಕೊಂಡು ಬಂದಿರಲಿಲ್ಲ. ನೀವೇ ನಿಮಗೆ ಗೊತ್ತಿದ್ದನ್ನೇ ಟಿಕ್ ಮಾಡಿ ಎನ್ನುತ್ತಿದ್ದ. ಈ ರೀತಿ ಮಾಡಿದರೆ ನಿನಗೆ ಏನು ಉಪಯೋಗ' ಎಂದು ಪ್ರಶ್ನಿಸಿದೆ. `ನಮಗೆ ಒಂದು ಡಿಗ್ರಿ ಸಿಕ್ಕರೆ ಸಾಕು ಮೇಡಂ. ಎಲ್ಲಾದರೂ ಕೆಲಸ ಸಿಗಬಹುದು ಎಂದಾಗ ಪಾಪ ಎನಿಸಿತು' ಎಂದರು.
`ದೃಷ್ಟಿ ಚೇತನರಿಗೆ ಪರೀಕ್ಷೆ ಬರೆಯಲು ಕಾಲೇಜು ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಸಬ್ಜೆಕ್ಟ್ ಬರೆಯಲು ಮಾತ್ರ ಬರುತ್ತಾರೆ. ಆದರೆ, ಇಂತಹ ಸಮಾಜ ಸೇವೆ ಮಾಡಲು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು. ಈ ಮೂಲಕ ಅಂಧರ ಬದುಕು ಬೆಳಗಲು ಸಹಾಯ ಹಸ್ತ ನೀಡಬೇಕು' ಎನ್ನುತ್ತಾರೆ ಆರ್. ಜೆ. ಪೈ ಮಜೈನ್. ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಆರ್ ಸ್ಕೂಲ್ ಫಾರ್ ಬ್ಲೈಂಡ್ ಚಿಲ್ಡ್ರನ್ಸ್‍ನ ಮಾಜಿ ಅಧ್ಯಕ್ಷರು.

ಟೆಕಿಗಳಿಗೂ ಅಚ್ಚುಮೆಚ್ಚು
ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ. ಐಟಿಬಿಟಿಗಳಲ್ಲಿ ಕೆಲಸ ಮಾಡುವವರೂ ದೃಷ್ಟಿ ಚೇತನರಿಗೆ ಪರೀಕ್ಷೆ ಬರೆಯಲು ನೆರವಾಗುತ್ತಾರೆ. ಸಾಫ್ಟ್‍ವೇರ್ ಉದ್ಯೋಗಿಯಾಗಿರುವ 25 ವರ್ಷ ವಯಸ್ಸಿನ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಿವಾಸಿ ಕಾರ್ತಿಕ್ ಎಂ ಸಹ ಇಂತಹ ಅನೇಕ ಪರೀಕ್ಷೆಗಳನ್ನು ಬರೆದಿದ್ದಾರೆ. ಜಯನಗರ ನ್ಯಾಷನಲ್ ಕಾಲೇಜು, ಶೇಷಾದ್ರಿಪುರಂ ಕಾಲೇಜುಗಳಲ್ಲಿ ಸ್ಕ್ರೈಬ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾಗವೇಣಿ ಎಂಬ ವಿದ್ಯಾರ್ಥಿನಿಗೆ ಬ್ಯಾಂಕ್ ಎಗ್ಸಾಂ ಬರೆಯಲೂ ಇವರು ಸಹಾಯಕ ಬರಹಗಾರರಾಗಿದ್ದರು. ಮಾತ್ರವಲ್ಲದೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪಾಠ ಓದಿ ಹೇಳುವುದು, ರೆಕಾರ್ಡ್ ಕೇಳಿಸುವುದು, ಓದಿನ ಕುರಿತಾದ ಸಂದೇಹಗಳನ್ನು ನಿವಾರಿಸುವ ಕಾರ್ಯವನ್ನು ಮಾಡುತ್ತಾರೆ. ಇವರು ಕಾಲೇಜಿನಲ್ಲಿ ಓದುತ್ತಿದ್ದಾಗ ಈ ಕಾರ್ಯಕ್ಕೆ ಪ್ರತಿದಿನ ಒಂದಿಷ್ಟು ಸಮಯ ಮೀಸಲಿಡುತ್ತಿದ್ದರಂತೆ. ಈಗ ಉದ್ಯೋಗ ಸಿಕ್ಕ ನಂತರ ವಾರಾಂತ್ಯಗಳಲ್ಲಿ ಈ ಸೋಷಿಯಲ್ ವರ್ಕ್ ಮಾಡುತ್ತಾರೆ. ಇವರು ಆರಂಭದಲ್ಲಿ ಸಮರ್ಥನಂ ಎಂಬ ಎನ್‍ಜಿಒ ಜೊತೆ ಕಾರ್ಯನಿರ್ವಹಿಸುತ್ತಿದ್ದರು. ನಂತರ ಇಂತಹ ವಿಶೇಷ ಚೇತನರಿಗಾಗಿಯೇ ಸ್ಟೆಪ್ಪಿಂಗ್ ಸ್ಟೋನ್ ಎಂಬ ಕಂಪ್ಯೂಟರ್ ತರಬೇತಿ ಕೇಂದ್ರ ತೆರೆದಿದ್ದಾರೆ.
ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‍ನಲ್ಲಿ ಕೆಲಸ ಮಾಡುವ ವಾಣಿ ಶೆಟ್ಟಿ ಹಲವು ಬಾರಿ ಸ್ಕ್ರೈಬ್ ಆಗಿ ಸೇವೆ ಸಲ್ಲಿಸಿದ್ದಾರೆ. ಸೋಷಿಯಲ್ ನೆಟ್‍ವರ್ಕ್ ಸೈಟ್‍ಗಳ ಮೂಲವೂ ಇಂತಹ ವಾಲೆಂಟರ್ಸ್‍ಗಳನ್ನು ಕಂಡುಹಿಡಿಯಬಹುದು ಎನ್ನುತ್ತಾರೆ ಇವರು. ಫೇಸ್‍ಬುಕ್‍ನಲ್ಲಿ ಬ್ಲೈಂಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸಕ್ತರು ಬೇಕಿದ್ದಾರೆ ಎಂದು ಸ್ಟೇಟಸ್ ಹಾಕಿದ್ದಾರಂತೆ. ಬಹಳಷ್ಟು ಜನರು ಪ್ರತಿಕ್ರಿಯೆ ನೀಡಿದ್ದರು ಎನ್ನುತ್ತಾರೆ.

ನೀವೂ ವಾಲೆಂಟರ್ ಆಗಿ
ನಿಮ್ಮ ಊರಿನಲ್ಲಿರುವ, ಕಾಲೇಜಿನಲ್ಲಿರುವ ದೃಷ್ಟಿ ವಿಶೇಷಚೇತನರನ್ನು ನೇರವಾಗಿ ಸಂಪರ್ಕಿಸಿ ಅವರಿಗೆ ಓದಲು ಅಥವಾ ಪರೀಕ್ಷೆ ಬರೆಯಲು ನೆರವಾಗಬಹುದು. ಇಲ್ಲವಾದರೆ ಎನ್‍ಜಿಒಗಳ ನೆರವು ಪಡೆಯಬಹುದು. ಸಮರ್ಥನಂ ಎಂಬ ಎನ್‍ಜಿಒ ರಾಜ್ಯದಲ್ಲಿ ಬೆಂಗಳೂರು, ಗದಗ, ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮಿತ್ರಜ್ಯೋತಿ ಎಂಬ ಎನ್‍ಜಿಒ ಕಳೆದ 25 ವರ್ಷಗಳಿಂದ ಇಂತಹ ಸೇವೆ ನೀಡುತ್ತಿದೆ. ನೀವು ನಿಮ್ಮ ಊರಿನಲ್ಲಿರುವ ಇಂತಹ ಸಂಸ್ಥೆಗಳನ್ನು ಹುಡುಕಿ ವಾಲೆಂಟರ್ ಆಗಬಹುದು.
ದೃಷ್ಟಿ ವಿಶೇಷಚೇತನರ ಶಿಕ್ಷಣಕ್ಕೆ ನೀವು ಹಲವು ಬಗೆಯಲ್ಲಿ ನೆರವು ನೀಡಬಹುದು. ಉದಾಹರಣೆಗೆ ನೀವು ಪಾಠ ಓದಬೇಕು. ವಿಷುಯಲ್ ಚಾಲೆಂಜ್ಡ್ ವಿದ್ಯಾರ್ಥಿಗಳು ಅದನ್ನು ಕೇಳಿಸಿಕೊಳ್ಳುತ್ತಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೀವು ಸ್ಕ್ರೈಬ್ ಸರ್ವೀಸ್ ನೀಡಬಹುದು. ಇಂತಹ ವಿದ್ಯಾರ್ಥಿಗಳಿಗೆ ಟ್ಯೂಷನ್ ಸೇವೆಯನ್ನೂ ನೀಡಬಹುದು. ಕೆಲವೊಂದು ಎನ್‍ಜಿಒಗಳು ನಡೆಸುವ ಇಂತಹ ಸೇವೆಯಲ್ಲಿ ಆನ್‍ಲೈನ್ ಮೂಲಕ ಟ್ಯೂಷನ್ ನಡೆಸುವ ವ್ಯವಸ್ಥೆಯೂ ಇರುತ್ತದೆ. ಅಂದರೆ, ಸ್ಕೈಪ್ ಮೂಲಕ ವಾಯ್ಸ್ ಚಾಟ್ ಮಾಡುತ್ತ ಈ ಮಕ್ಕಳಿಗೆ ಪಾಠ ಮಾಡಬಹುದು. ಇಂಗ್ಲಿಷ್ ಭಾಷೆ, ಸಾಫ್ಟ್ ಸ್ಕಿಲ್, ಪರ್ಸನಲಿಟಿ ಡೆವಲಪ್‍ಮೆಂಟ್ ಬಗ್ಗೆಯೂ ಹೇಳಿಕೊಡಬಹುದು. ಇಂತಹ ಕೆಲವು ಮಕ್ಕಳು ಅತೀವ ಬೇಸರದಲ್ಲಿರುತ್ತಾರೆ. ಅವರಿಗೆ ಕೌನ್ಸಿಲಿಂಗ್ ನಡೆಸಿ ಬದುಕಿನಲ್ಲಿ ಹುಮ್ಮಸ್ಸು ತುಂಬಬಹುದು. ಕೇವಲ ಶಿಕ್ಷಣ ಮಾತ್ರವಲ್ಲದೆ ಸಂಗೀತ, ಡ್ಯಾನ್ಸ್, ಆಟ ಮತ್ತು ಇತರ ಚಟುವಟಿಕೆಗಳನ್ನು ಇವರಿಗೆ ಹೇಳಿಕೊಡಬಹುದು. ಒಟ್ಟಾರೆ ವಿಶೇಷ ಚೇತನರಿಗೆ ಕಣ್ಣಾಗುವ ಹೃದಯ ನಿಮ್ಮಲ್ಲಿದ್ದರೆ ಸಾಕು.
 




ಅನುಕಂಪ ಬೇಡ
ದೃಷ್ಟಿ ವಿಶೇಷ ಚೇತನರಿಗೆ ಬದಲಿ ಬರಹಗಾರರಾಗಿ ಅನುಕಂಪದಿಂದ ಕಾರ್ಯನಿರ್ವಹಿಸಬಾರದು. ಅವರು ನಮ್ಮಂತೆಯೇ ಎಂಬ ಫ್ರೆಂಡ್ಲಿ ಭಾವನೆಯಿಂದ ಈ ಕಾರ್ಯನಿರ್ವಹಿಸಬೇಕು. ಇದೊಂದು ಸೋಷಿಯಲ್ ರೆಸ್ಪಾನ್ಸಿಬಿಲಿಟಿ.
ಕಾರ್ತಿಕ್ ಎಂ | ಟೆಕಿ, ಬೆಂಗಳೂರು




ಕನ್ನಡಕ್ಕೆ ಇ-ಸ್ಪೀಕ್ ಕೊಟ್ಟ ಶ್ರೀಧರ್
ದೃಷ್ಟಿ ವಿಶೇಷ ಚೇತನರಿಗೆ ದೃಷ್ಟಿ ವಿಶೇಷ ಚೇತನ ಯುವಕ ಶ್ರೀಧರ್ ಟಿಎಸ್ ನೀಡಿದ ಕೊಡುಗೆ ಇಲ್ಲಿ ಸ್ಮರಿಸಲೇಬೇಕು. ಶ್ರೀಧರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು. ಸ್ಕ್ರೀನ್ ರೀಡರ್ ತಂತ್ರಾಂಶವನ್ನು ಕನ್ನಡ ಯೂನಿಕೋಡ್ ಅಕ್ಷರಗಳನ್ನು ಓದಲು ಸಾಧ್ಯವಾಗುವಂತಹ ಇ-ಸ್ಪೀಕ್ ತಂತ್ರಾಂಶವನ್ನು ಶ್ರೀಧರ್ ಟಿಎಸ್ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಕಂಪ್ಯೂಟರ್ ಪರದೆಯಲ್ಲಿ ಮೂಡುವ ಅಕ್ಷರಗಳನ್ನು `ಟೆಕ್ಸ್ಟ್ ಟು ಸ್ಪೀಚ್' ಮೂಲಕ ಧ್ವನಿ ರೂಪದಲ್ಲಿ ಕೇಳಿಸುತ್ತದೆ. ಇದರಿಂದ ಕಂಪ್ಯೂಟರ್‍ನಲ್ಲಿರುವ ವಿಷಯಗಳನ್ನು ಪಡೆದುಕೊಳ್ಳಲು ಮತ್ತು ಐಟಿಬಿಟಿಯಂತಹ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಲು ದೃಷ್ಟಿ ವಿಶೇಷ ಚೇತನರಿಗೆ ಸಾಧ್ಯವಾಗಿದೆ. ``ನನಗೆ ಶಿಕ್ಷಣ ಪಡೆಯಲು ಈ ಇ-ಸ್ಪೀಕ್ ಸಾಕಷ್ಟು ನೆರವಾಗಿದೆ. ಜೊತೆಗೆ, ನನ್ನ ಕುಟುಂಬ, ಕಸಿನ್ಸ್, ಕಾಲೇಜ್ ಬ್ಯಾಚ್‍ಮೇಟ್ಸ್, ಶಿಕ್ಷಕರ ಸಹಾಯ ಸದಾ ಸ್ಮರಣೀಯ. ದೃಷ್ಟಿ ವಿಶೇಷ ಚೇತನರಿಗೆ ಪಾಠ ಓದಲು, ಪರೀಕ್ಷೆ ಬರೆಯಲು ನೆರವಾಗಲೂ ತಾವೆಲ್ಲರೂ ಸ್ನೇಹಿತರಾಗಿ ಮುಂದೆ ಬರಬೇಕು' ಎಂದು ಮನವಿ ಮಾಡಿದ್ದಾರೆ ಶ್ರೀಧರ್ ಟಿಎಸ್.






facebook page- write for blind 


www.samarthanam.org





Tuesday 29 November 2016

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್' ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಟ್ರಾಫಿಕ್ ಪೆÇಲೀಸರನ್ನು ನೀವು ನೋಡಿದ್ದೀರಿ. ಸುಗಮ ವಾಹನ ಸಂಚಾರಕ್ಕೆ ಇವರ ಕೊಡುಗೆ ಅಪಾರವಾದದ್ದು. ಹಾಗೆಯೇ, ಆಕಾಶಕ್ಕೆ ರೊಂಯ್ಯನೆ ನೆಗೆಯುವ, ಭೂಮಿಗೆ ಇಳಿಯುವ ಅಷ್ಟೊಂದು ವಿಮಾನಗಳನ್ನು ವಿಮಾನ ನಿಲ್ದಾಣಗಳಲ್ಲಿ ನಿಯಂತ್ರಿಸಲು ಟ್ರಾಫಿಕ್ ಪೆÇಲೀಸರು ಇದ್ದಾರೆ. ಅವರ ಉದ್ಯೋಗದ ಹೆಸರು `ಏರ್ ಟ್ರಾಫಿಕ್ ಕಂಟ್ರೋಲರ್'. ಇವರ ಕೆಲಸ ಟ್ರಾಫಿಕ್ ಪೆÇಲೀಸರಂತೆಯೇ ಆದರೂ, ಕೆಲಸದ ರೀತಿ ರಿವಾಜುಗಳು ಟ್ರಾಫಿಕ್ ಪೆÇಲೀಸರಿಗಿಂತ ಸಂಪೂರ್ಣ ಭಿನ್ನ. ಅತ್ಯಧಿಕ ವೇಗದಲ್ಲಿ ಆಕಾಶದಲ್ಲಿ ಹಾರುವ ಇವುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‍ಗಳೂ ಕೊಂಚ ಮೈಮರೆತರೂ ಭಾರೀ ಅನಾಹುತ ಸಂಭವಿಸಬಹುದು. ವಿಮಾನ ನಿಲ್ದಾಣಗಳಲ್ಲಿ ಇರುವ ಆಕರ್ಷಕ ಮತ್ತು ಅತ್ಯಗತ್ಯ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಪ್ರಮುಖವಾದದ್ದು. ಈಗಾಗಲೇ ಆಕಾಶದಲ್ಲಿ ವಿಮಾನಗಳ ದಟ್ಟಣೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಉದ್ಯೋಗಕ್ಕೆ ಉತ್ತಮ ಬೇಡಿಕೆಯಿದೆ.

* ಏರ್ ಟ್ರಾಫಿಕ್ ಕಂಟ್ರೋಲರ್ ಆಗಬೇಕಿದ್ದರೆ ಯಾವ ಎಗ್ಸಾಂ ಪಾಸ್ ಆಗಬೇಕು?
ಸಿವಿಲ್ ಎಟಿಸಿ ಎಂಟ್ರೆನ್ಸ್ ಎಗ್ಸಾಂ ಪಾಸ್ ಆಗಬೇಕು.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಲು ಇರಬೇಕಾದ ಸಾಮಾನ್ಯ ವಿದ್ಯಾರ್ಹತೆ ಏನು?
ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್/ರೇಡಿಯೊ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ ಸ್ಪೆಷಲೈಜೇಷನ್‍ನಲ್ಲಿ ಎಲೆಕ್ಟ್ರಿಕಲ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಎಟಿಸಿ ಎಂಟೆನ್ಸ್ ಎಗ್ಸಾಂಗೆ ಅರ್ಜಿ ಸಲ್ಲಿಸಬಹುದು. ವೈರ್‍ಲೆಸ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್, ರೇಡಿಯೋ ಫಿಸಿಕ್ಸ್ ಅಥವಾ ರೇಡಿಯೊ ಎಂಜಿನಿಯರಿಂಗ್ ಅನ್ನು ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡು ಎಂಎಸ್ಸಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಪರೀಕ್ಷೆ ಬರೆಯಬಹುದಾಗಿದೆ.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಬರೆಯಲು ವಯೋಮಿತಿ ಎಷ್ಟು?
ಕನಿಷ್ಠ 21 ವರ್ಷ. ಗರಿಷ್ಠ 27 ವರ್ಷ.

* ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಶೇಕಡ 50ರಷ್ಟು ಪ್ರಶ್ನೆಗಳಿರುತ್ತವೆ. ಉಳಿದ ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ(ಇಂಟಲಿಜೆನ್ಸ್), ಜನರಲ್ ಆ್ಯಪ್ಟಿಟ್ಯೂಡ್, ಇಂಗ್ಲಿಷ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆ ಪಾಸ್ ಆದ ನಂತರ ಧ್ವನಿ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.

* ಎಟಿಸಿ ಎಂಟ್ರೆನ್ಸ್ ಎಗ್ಸಾಂನಲ್ಲಿ ಒಮ್ಮೆ ಅಭ್ಯರ್ಥಿಗಳು ಆಯ್ಕೆಯಾದ ನಂತರ ಮುಂದಿನ ತರಬೇತಿಗೆ ಎಲ್ಲಿಗೆ ಕಳುಹಿಸಲಾಗುತ್ತದೆ?
ಅಲಹಾಬಾದ್ ಅಥವಾ ಹೈದರಾಬಾದ್‍ನಲ್ಲಿರುವ ಸಿವಿಲ್ ಏವಿಯೇಷನ್ ಟ್ರೈನಿಂಗ್ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

* ತರಬೇತಿ ಅವಧಿ ಎಷ್ಟು? ಯಾವೆಲ್ಲ ಮಾಡ್ಯುಲ್‍ಗಳನ್ನು ಓದಬೇಕಾಗುತ್ತದೆ ಮತ್ತು ಪ್ರಾಕ್ಟಿಕಲ್‍ನಲ್ಲಿ ಏನೆಲ್ಲ ಇರುತ್ತದೆ?
ಈಗ ತರಬೇತಿ ಅವಧಿಯು ಸುಮಾರು 1 ವರ್ಷದ್ದಾಗಿದೆ. ಅಂದರೆ 6 ತಿಂಗಳ ಎರಡು ವಿಭಾಗದಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್‍ಗಳು: ಏರ್ ಟ್ರಾಫಿಕ್ ಸರ್ವೀಸಸ್, ಏರೊಡ್ರೊಮ್ಸ್ ಆ್ಯಂಡ್ ಗ್ರೌಂಡ್ ಏಯ್ಡ್‍ಸ್, ಏರ್ ಲಿಜಿಸ್ಲೆಷನ್, ಮೆಟಿಯೊರೊಲಾಜಿ, ಕಮ್ಯುನಿಕೇಷನ್ ಪೆÇ್ರಸಿಜರ್, ಟೆಕ್ನಿಕಲ್, ಸರ್ಚ್ ಆ್ಯಂಡ್ ರಿಸ್ಕ್ಯೂ, ಏರ್ ನ್ಯಾವಿಗೇಷನ್ ಇತ್ಯಾದಿ ಮಾಡ್ಯುಲ್‍ಗಳಿರುತ್ತವೆ.

* ತರಬೇತಿ ಖರ್ಚು ಎಷ್ಟು?
ವೆಚ್ಚವನ್ನು ದೇಶದ ವಿಮಾನಯಾನ ಪ್ರಾಧಿಕಾರ ನೋಡಿಕೊಳ್ಳುತ್ತದೆ.

* ತರಬೇತಿಯಲ್ಲಿ ಅನರ್ಹತೆ ಪಡೆಯುವ ಸಾಧ್ಯತೆ ಇದೆಯೇ?
ಹೌದು, ಅಭ್ಯರ್ಥಿಯು ಎರಡು ಬಾರಿ ಪರೀಕ್ಷೆ ಬರೆದರೂ ಶೇಕಡ 70ಕ್ಕಿಂತ ಹೆಚ್ಚು ಅಂಕ ಪಡೆಯದಿದ್ದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗುವ ಅರ್ಹತೆ ಕಳೆದುಕೊಳ್ಳುತ್ತಾರೆ.

* ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ಮೊದಲು ದೊರಕುವ ಉದ್ಯೋಗ ಯಾವುದು?
ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ).

* ಯಾರು ಕೆಲಸ ಕೊಡುತ್ತಾರೆ?
ಭಾರತದಲ್ಲಿ ಏರ್ ಪೆÇೀರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಮಾತ್ರ ಪ್ರಮುಖ ಉದ್ಯೋಗದಾತ. ಎಚ್‍ಎಎಲ್ ಇತ್ಯಾದಿ ಸಂಸ್ಥೆಗಳಲ್ಲಿಯೂ ಇಂತಹ ಉದ್ಯೋಗಗಳು ಇರುತ್ತವೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಎಎಐ ಜಾಬ್ ನೀಡುತ್ತದೆ. ಒಂಥರಾ ಇದು ಜಾಬ್ ಗ್ಯಾರಂಟಿ ಕೋರ್ಸ್ .

* ವೇತನ ಎಷ್ಟಿರುತ್ತದೆ?
ತರಬೇತಿ ಅವಧಿಯಲ್ಲಿ ಟ್ರೈನಿಗಳಿಗೆ ಉಚಿತ ವಸತಿಯೊಂದಿಗೆ 7,500 ರೂ. ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ)-ಗೆ 16,400ರಿಂದ 40 ಸಾವಿರ ರೂ. ಇರುತ್ತದೆ. ಮ್ಯಾನೇಜರ್(ಎಟಿಸಿ)ಗೆ 24,900ರೂ.ನಿಂದ 50,500 ರೂ.ವರೆಗೆ ಇರುತ್ತದೆ. ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)(ನಾನ್ ಎಕ್ಸಿಕ್ಯೂಟಿವ್ ಕೇಡರ್)ಗೆ 14, 500 ರೂ.ನಿಂದ 33, 500 ರೂ.ವರೆಗೆ ಇರುತ್ತದೆ.

* ಉದ್ಯೋಗದ ನೆಗೆಟಿವ್ ಮತ್ತು ಪಾಸಿಟೀವ್ ಗುಣಗಳೇನು?
ಪಾಸಿಟೀವ್: ಚಾಲೆಂಜಿಂಗ್ ಎನ್ವಾಯರ್ನ್‍ಮೆಂಟ್, ಕೆಲವೇ ಸೆಕೆಂಡಿನಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ, ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇದೆ.
ನೆಗೆಟಿವ್: ಅತ್ಯಧಿಕ ಒತ್ತಡವಿರುತ್ತದೆ. ಶಿಫ್ಟ್ ಡ್ಯೂಟಿ ಇರುತ್ತದೆ. ಹೆಚ್ಚುವರಿ ಕೆಲಸದ ಒತ್ತಡ ಇರುತ್ತದೆ. ರಜೆಯ ಕೊರತೆ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ರಜೆ ಸಿಗುವುದು ಅಪರೂಪ, ಅತ್ಯಧಿಕ ವೃತ್ತಿಪರ ರಿಸ್ಕ್ ಇರುವ ಕೆಲಸ ಇದಾಗಿದೆ.

* ಎಟಿಸಿ ಅಧಿಕಾರಿಗೆ ಯಾವೆಲ್ಲ ರ್ಯಾಂಕ್ ಅಥವಾ ಭಡ್ತಿ ದೊರಕುತ್ತದೆ?
ಜೂನಿಯರ್ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಡೈರೆಕ್ಟರ್(ಎಟಿಎಂ), ಎಎಐ ಆಡಳಿತ ಮಂಡಳಿಯ ಸದಸ್ಯ(ಎಟಿಎಂ).

* ತರಬೇತಿ ಮತ್ತು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸಗಳ ಲಿಂಕ್

www.aai.aero

www.atcguild.com

www.aviationmagic.com

www.aaians.org

www.iata.org


Published in Vijayakarnataka Mini
Cabin Crew ಉದ್ಯೋಗ ಪಡೆಯುವುದು ಹೇಗೆ?

Cabin Crew ಉದ್ಯೋಗ ಪಡೆಯುವುದು ಹೇಗೆ?

ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಉದ್ಯೋಗ ಪಡೆಯುವುದು ಹೇಗೆಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಇದಕ್ಕಾಗಿ ಯಾವ ಕೋರ್ಸ್ ಕಲಿಯಬೇಕು? ಎಲ್ಲಿ ತರಬೇತಿ ಪಡೆಯಬೇಕು? ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು

ವಿಮಾನ ಸಿಬ್ಬಂದಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. 1. ಫ್ಲೈಟ್ ಕ್ರ್ಯೂ. ಇವರು ವಿಮಾನದ ಹಾರಾಟ ನಡೆಸುವವರು. 2. ಕ್ಯಾಬಿನ್ ಕ್ರ್ಯೂ. ವಿಮಾನದ ಪ್ರಯಾಣಿಕರ ಸೇವೆ ಇತ್ಯಾದಿಗಳನ್ನು ಮಾಡುವವರು ಕ್ಯಾಬಿನ್ ಸಿಬ್ಬಂದಿ. ಕ್ಯಾಬಿನ್ ಕ್ರ್ಯೂ ವಿಭಾಗದಲ್ಲಿ ಫ್ಲೈಟ್ ಅಟೆಡೆಂಟ್, ಸ್ಟಿವಡ್ರ್ಸ್, ಸ್ಟಿವಡ್ರ್ಸ್‍ಸೆಸ್, ಗಗನ ಸಖರು ಅಥವಾ ಗಗನ ಸಖಿಯರು. ವಿಮಾನದಲ್ಲಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಆರಾಮದಾಯಕತೆ, ಸುರಕ್ಷತೆ ಒದಗಿಸುವ ಕಾರ್ಯ ಕ್ಯಾಬಿನ್ ಸಿಬ್ಬಂದಿಗಳದ್ದು.

ಫ್ಲೈಟ್ ಅಟೆಡೆಂಟ್ ಕಾರ್ಯಗಳು
ನೋಡುಗರಿಗೆ ಫ್ಲೈಟ್ ಅಟೆಡೆಂಟ್ ಅಥವಾ ಗಗನ ಸಖಿಯರು ಗ್ಲಾಮರಸ್ ಆಗಿ ಕಾಣಿಸಬಹುದು. ಇವರ ಕೆಲಸ ಸುಲಭ ಎಂದು ಕೊಳ್ಳಬಹುದು. ಫ್ಲೈಟ್ ಅಟೆಡೆಂಟ್‍ಗಳಿಗೆ ಅವರದ್ದೇ ಆದ ಹಲವು ಜವಾಬ್ದಾರಿಗಳಿವೆ.
* ಪ್ರಯಾಣಿಕರು ವಿಮಾನ ಏರುವಾಗ ಸ್ವಾಗತಿಸುವುದು ಅಥವಾ ವಿಮಾನ ಇಳಿಯುವಾಗ ಧನ್ಯವಾದ ಸಮರ್ಪಿಸುವುದು.
* ಪ್ರಯಾಣಿಕರಿಗೆ ತಮ್ಮ ತಮ್ಮ ಸೀಟುಗಳನ್ನು ತೋರಿಸಿಕೊಡುವುದು, ಮಕ್ಕಳಿಗೆ ಅಥವಾ ಹಿರಿಯರ ಕುರಿತು ವಿಶೇಷ ಕಾಳಜಿ ವಹಿಸುವುದು. ವಿಶೇಷ ಚೇತನ ಪ್ರಯಾಣಿಕರ ಕುರಿತು ವಿಶೇಷ ಅಸ್ಥೆ ತೋರುವುದು.
* ಪ್ರಯಾಣಿಕರಿಗೆ ಆಹಾರ ಅಥವಾ ಪಾನೀಯಗಳನ್ನು ಸರ್ವ್ ಮಾಡುವುದು.
* ಪ್ರಯಾಣಿಕರಿಗೆ ಲಭ್ಯವಿರುವ ತುರ್ತು ಸಲಕರಣೆಗಳು ಮತ್ತು ಸುರಕ್ಷತಾ ಪ್ರಕ್ರಿಯೆಗಳ ಮಾಹಿತಿ ನೀಡುವುದು.
* ಅಗತ್ಯವಿದ್ದರೆ ಪ್ರಥಮ ಚಿಕಿತ್ಸೆ ನೀಡುವುದು.
* ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸುವುದು.
* ಪ್ರಯಾಣಿಕರಿಗೆ ಸುದ್ದಿ ಪತ್ರಿಕೆಗಳನ್ನು, ಮ್ಯಾಗಜಿನ್‍ಗಳನ್ನು ಅಥವಾ ವಿಮಾನದಲ್ಲಿ ಲಭ್ಯವಿರುವ ಮನರಂಜನಾ ಅಥವಾ ಸುದ್ದಿ ಪತ್ರಿಕೆಗಳನ್ನು ಒದಗಿಸುವುದು.
* ಕೆಲವೊಂದು ವಾಣಿಜ್ಯ ಉತ್ಪನ್ನಗಳ ಮಾರಾಟ ಮಾಡುವ ಕೆಲಸವನ್ನೂ ವಿಮಾನದಲ್ಲಿ ಫ್ಲೈಟ್ ಅಟೆಡೆಂಟ್ ಮಾಡಬೇಕಾಗುತ್ತದೆ. ಪದಾರ್ಥಗಳ ಮಾರಾಟ ಮಾಡುವುದು.
ಇವರು ಈ ಕೆಲಸವನ್ನು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಮಾಡಬೇಕಾಗುತ್ತದೆ. ವಿಭಿನ್ನ ವರ್ತನೆಯ ಹಲವು ಪ್ರಯಾಣಿಕರ ಜೊತೆ ವ್ಯವಹರಿಸಬೇಕಾಗುತ್ತದೆ. ಕೆಲವು ಪ್ರಯಾಣಿಕರಿಗೆ ವಿವಿಧ ಟೈಮ್ ಝೋನ್‍ನಲ್ಲಿ ಪ್ರಯಾಣ ಮಾಡುವಾಗ ಅಥವಾ ಹೆಚ್ಚು ದೂರ ಪ್ರಯಾಣ ಮಾಡುವಾಗ ವಿಶೇಷ ಕಾಳಜಿ ಬೇಕಾಗುತ್ತದೆ. ಹಲವು ಸಂದರ್ಭದಲ್ಲಿ ಪ್ರಯಾಣಿಕರು ಸಿಡಿಮಿಡಿಗೊಂಡರೂ ಫ್ಲೈಟ್ ಅಟೆಡೆಂಟ್ ಸಾವಧಾನವಾಗಿ ವ್ಯವಹರಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆಗಳೇನು?
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರೂ ಪದವಿ ಅಥವಾ ಹೋಟೇಲ್ ಮ್ಯಾನೇಜ್‍ಮೆಂಟ್ ಆ್ಯಂಡ್ ಕೆಟರಿಂಗ್‍ನಲ್ಲಿ 3 ವರ್ಷದ ಡಿಪೆÇ್ಲಮಾ, ರಾಷ್ಟ್ರೀಯ ಭಾಷೆಗಳ ಜ್ಞಾನ ಮತ್ತು ಒಂದಾದರೂ ಅಂತಾರಾಷ್ಟ್ರೀಯ (ಇಂಗ್ಲಿಷ್)ಭಾಷಾ ಜ್ಞಾನ ಸಾಮಾನ್ಯವಾಗಿ ಇರಬೇಕಾಗುತ್ತದೆ. ದೈಹಿಕ ಆರೋಗ್ಯ ಉತ್ತಮವಾಗಿರಬೇಕಾಗುತ್ತದೆ. ವಯಸ್ಸು: 25 ವರ್ಷಕ್ಕಿಂತ ಕಡಿಮೆ ಇರಬೇಕು. ಎತ್ತರ: ಕನಿಷ್ಠ 170 ಸೆಂ.ಮಿ. ಇರಬೇಕಾಗುತ್ತದೆ. ಎತ್ತರಕ್ಕೆ ಹೊಂದಾಣಿಕೆಯಾಗುವಷ್ಟು ತೂಕ ಇರಬೇಕು. ಹೆಚ್ಚಾಗಿ ಅವಿವಾಹಿತರನ್ನೇ ಈ ಹುದ್ದೆಗೆ ನೇಮಿಸಿಕೊಳ್ಳಲಾಗುತ್ತದೆ. ಗೋಚರವಾಗುವಂತಹ ಟ್ಯಾಟೂ ಇತ್ಯಾದಿಗಳು ಇರಬಾರದು.
ಏರ್ ಕ್ಯಾಬಿನ್ ಸಿಬ್ಬಂದಿಗಳಿಗೆ ಉದ್ಯೋಗದಲ್ಲಿ ವಿವಿಧ ಆಯ್ಕೆಗಳು ಇರುತ್ತವೆ. ಇವರು ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬಹುದು. ಬಹುತೇಕರು ದೇಶ ಮತ್ತು ವಿದೇಶದಲ್ಲಿ ಸಂಚರಿಸುವ ಖಾಸಗಿ ವಿಮಾನ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸ್ಪೈಸ್ ಜೆಟ್, ಜೆಟ್ ಏರ್‍ವೇಸ್, ಇಂಡಿಗೊನಂತಹ ಕಂಪನಿಗಳು ಗಗನಸಖಿಯರಿಗೆ ನೆಚ್ಚಿನ ಸಂಸ್ಥೆಗಳಾಗಿ ಹೊರಹೊಮ್ಮಿದೆ. ಉದ್ಯೋಗದಲ್ಲಿ ಅನುಭವ ಪಡೆದ ನಂತರ ಇವರೆಲ್ಲರು ಸೂಪರ್‍ವೈಸರ್‍ಗಳಾಗಿ ಜೂನಿಯರ್ ಕ್ಯಾಬಿನ್ ಸಿಬ್ಬಂದಿಗಳಿಗೆ ಕೆಲಸ ವಹಿಸುವುದು ಅಥವಾ ತರಬೇತಿ ನೀಡುವ ಕಾರ್ಯವನ್ನೂ ಮಾಡಬಹುದಾಗಿದೆ. ಕೆಲವು ವಿಮಾನ ಕಂಪನಿಗಳು ಅನುಭವ ಪಡೆದವರನ್ನು ತಮ್ಮ ಸಂಸ್ಥೆಯಲ್ಲಿಯೇ ಉಳಿಸಿಕೊಂಡು ವಿವಿಧ ಆಡಳಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತದೆ.

ದೇಶದ ಪ್ರಮುಖ ತರಬೇತಿ ಸಂಸ್ಥೆಗಳು
ಕ್ಯಾಬಿನ್ ಕ್ರ್ಯೂ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ತರಬೇತಿ ನೀಡುವ ಸಂಸ್ಥೆಗಳೂ ದೇಶದಲ್ಲಿ ಹೆಚ್ಚಾಗುತ್ತಿವೆ. ಬಹುತೇಕ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹಣ ಪೀಕುವ ಉದ್ದೇಶದಿಂದ ಹುಟ್ಟಿಕೊಂಡಿವೆ. ದೇಶದಲ್ಲಿ ಇರುವ ನಂಬಿಕಸ್ಥ ತರಬೇತಿ ಸಂಸ್ಥೆಗಳ ಮಾಹಿತಿ ಇಲ್ಲಿದೆ.
* ಇಂಡಿಯನ್ ಏರ್‍ಲೈನ್ಸ್ ಲಿಮಿಟೆಡ್, ಸೆಂಟ್ರಲ್ ಟ್ರೈನಿಂಗ್ ಎಸ್ಟಾಬ್ಲಿಷ್‍ಮೆಂಟ್, ಹೈದರಾಬಾದ್
* ಐಎಟಿಎ
* ಸ್ಕೈಲೈನ್ ಎಜುಕೇಷನಲ್ ಇನ್‍ಸ್ಟಿಟ್ಯೂಟ್, ನವದೆಹಲಿ
* ಇಂಡಿಯನ್ ಏವಿಯೇಷನ್ ಅಕಾಡೆಮಿ, ಮುಂಬೈ
* ಕ್ಯೂನಿ ಅಕಾಡೆಮಿ ಆಫ್ ಟ್ರಾವೆಲ್, ದೆಹಲಿ
* ಏರ್ ಹೋಸ್ಟ್ರೇಸ್ ಅಕಾಡೆಮಿ(ಎಎಚ್‍ಎ), ದೆಹಲಿ, ಚಂಡೀಗಢ, ಮುಂಬೈ
* ಫ್ರಾಂಕ್ ಫಿನ್ ಇನ್‍ಸ್ಟಿಟ್ಯೂಟ್ ಆಫ್ ಏರ್ ಹೋಸ್ಟ್ರೇಸ್ ಟ್ರೈನಿಂಗ್, ದೆಹಲಿ

ರಾಜ್ಯದಲ್ಲಿರುವ ಕೆಲವು ತರಬೇತಿ ಸಂಸ್ಥೆಗಳು
ರಾಜ್ಯದಲ್ಲಿ ಹಲವು ಖಾಸಗಿ ತರಬೇತಿ ಸಂಸ್ಥೆಗಳು ಕ್ಯಾಬಿನ್ ಕ್ರ್ಯೂ ತರಬೇತಿ ನೀಡುತ್ತಿವೆ.
ಆಪ್ಟೆಕ್ ಏವಿಯೇಷನ್ ಆ್ಯಂಡ್ ಹಾಸ್ಪಿಟಲಿಟಿ ಅಕಾಡೆಮಿ: ಬೆಳಗಾವಿ, ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಆಪ್ಟೆಕ್ ಏವಿಯೇಷನ್ ಕೇಂದ್ರಗಳಿವೆ. ಇಲ್ಲಿ ಕ್ಯಾಬಿನ್ ಕ್ರ್ಯೂ ಮತ್ತು ಏರ್ ಹೋಸ್ಟ್ರಸ್ ಇತ್ಯಾದಿ ತರಬೇತಿಗಳನ್ನು ನೀಡಲಾಗುತ್ತದೆ.
ಎಸ್ಸೆನ್ಸ್ ಲರ್ನಿಂಗ್: ಬೆಂಗಳೂರಿನಲ್ಲಿರುವ ಎಸ್ಸೆನ್ಸ್ ಲರ್ನಿಂಗ್ ಸಹ ಏರ್ ಕ್ರ್ಯೂ ತರಬೇತಿ ನೀಡುತ್ತಿದೆ.
ಅವಲೊನ್ ಅಕಾಡೆಮಿ: ಇದು ರಾಜ್ಯದ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಹಲವು ಕೇಂದ್ರಗಳನ್ನು ಹೊಂದಿದೆ.
ಕೈರಾಳಿ ಏವಿಯೇಷನ್: ಇದು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ತರಬೇತಿ ಕೇಂದ್ರ ಹೊಂದಿದೆ.
* ಬೆಂಗಳೂರಿನಲ್ಲಿರುವ ವಾಸವಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ವಾನ್ಸಡ್ ಸ್ಟಡೀಸ್‍ನಲ್ಲಿ ಡಿಪೆÇ್ಲಮಾ ಇನ್ ಪೆÇ್ರಫೆಷನಲ್ ಕ್ಯಾಬಿನ್ ಕ್ರ್ಯೂ ಸರ್ವೀಸ್ ಎಂಬ ಕೋರ್ಸ್ ಲಭ್ಯವಿದೆ.
* ಬೆಂಗಳೂರಿನ ಏಜೆ ಏವಿಯೇಷನ್ ಅಕಾಡೆಮಿಯಲ್ಲಿ ಡಿಪೆÇ್ಲಮಾ ಇನ್ ಪೆÇ್ರಫೆಷನಲ್ ಕ್ಯಾಬಿನ್ ಕ್ರ್ಯೂ ಸರ್ವೀಸಸ್ ಕಲಿಯಬಹುದಾಗಿದೆ.

Published in Vijayakarnataka Mini

Sunday 27 November 2016

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಈಗಿನ ಇಂಟರ್‍ನೆಟ್ ಜಗತ್ತು ಹಲವು ವಿಭಿನ್ನ ಉದ್ಯೋಗಾವಕಾಶಗಳನ್ನು ಮನೆ ಬಾಗಿಲಿಗೆ ತಂದಿರಿಸಿದೆ. ಅಂತಹ ಹುದ್ದೆಗಳಲ್ಲಿ ಆನ್‍ಲೈನ್ ಟೀಚಿಂಗ್ ಸಹ ಪ್ರಮುಖವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಬಹುತೇಕ ವಿದ್ಯಾರ್ಥಿಗಳಿಂದು ಶಾಲೆ, ಕಾಲೇಜು ಮುಗಿಸಿ ಟ್ಯೂಷನ್‍ಗೆಂದು ಹೊರಗಡೆ ಹೋಗುವುದಿಲ್ಲ. ತಮ್ಮ ಮನೆಯಲ್ಲಿಯೇ ವೆಬ್ ಕ್ಯಾಮ್ ಆನ್ ಮಾಡಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರಿಗೆ ಆನ್‍ಲೈನ್ ಟೀಚರ್ ಪಾಠ ಮಾಡುತ್ತಾರೆ. ಈ ರೀತಿಯ ಶಿಕ್ಷಣ ಟ್ರೆಂಡ್ ಈಗ ಹೆಚ್ಚಾಗಿದೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚಾಗಿದೆ. ಆನ್‍ಲೈನ್ ಟ್ಯೂಟರ್ ಎಂದು ಜಾಬ್ ವೆಬ್‍ಸೈಟ್‍ಗಳಲ್ಲಿ ಹುಡುಕಿದರೆ ಸಾಕಷ್ಟು ಜಾಬ್ ಆಫರ್‍ಗಳು ಕಾಣಸಿಗುತ್ತವೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವುದರಿಂದ ಇದು ಗ್ರಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾರ್ಟ್‍ಟೈಂ ಉದ್ಯೋಗವಾಗುತ್ತದೆ. ಈಗ ಆನ್‍ಲೈನ್‍ನಲ್ಲಿ ಹೊಸ ಹೊಸ ಕೋರ್ಸ್‍ಗಳನ್ನು ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆನ್‍ಲೈನ್ ಟ್ಯೂಟರ್‍ಗಳಿಗೆ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ.

ಅರ್ಹತೆ ಏನಿರಬೇಕು?
ಆನ್‍ಲೈನ್ ಟ್ಯೂಟರ್ ಆಗಲು ಉಳಿದ ಟೀಚಿಂಗ್ ಪೆÇೀಸ್ಟ್‍ಗಳಿಗೆ ಇರುವಂತೆ ಟೀಚಿಂಗ್ ಶಿಕ್ಷಣ, ಸ್ನಾತಕೋತ್ತರ ಇತ್ಯಾದಿ ವಿದ್ಯಾರ್ಹತೆ ಇರಬೇಕು. ತಂತ್ರಜ್ಞಾನದ ಸಮರ್ಪಕ ಬಳಕೆ ತಿಳಿದರಬೇಕಾಗುತ್ತದೆ. ಹೆಚ್ಚಿನ ಟ್ಯೂಟರ್ ಸಂಸ್ಥೆಗಳು ಉತ್ತಮ ಸಂವಹನ ಕೌಶಲ ಇರುವವರಿಗೆ ಆದ್ಯತೆ ನೀಡುತ್ತವೆ.
ಹೇಗೆ ಟೀಚಿಂಗ್ ಮಾಡಬೇಕು?: ಆನ್‍ಲೈನ್ ಟ್ಯೂಟರ್‍ಗಳು ಕ್ಲಾಸ್ ರೂಂನಲ್ಲಿ ಪಾಠ ಮಾಡುವ ಕೆಲಸವನ್ನೇ ಮಾಡುತ್ತಾರೆ. ಆದರೆ, ಆನ್‍ಲೈನ್‍ನಲ್ಲಿ ಕೇವಲ ಬೋಧನೆ ಮಾಡುತ್ತ ಇದ್ದರೆ ಸಾಲದು. ಇಂಟರ್‍ನೆಟ್ ತಂತ್ರಜ್ಞಾನದ ವೆಬ್ ಕ್ಯಾಮೆರಾ, ಫೆÇೀರಮ್‍ಗಳು, ಸೋಷಿಯಲ್ ಮೀಡಿಯಾ, ಬ್ಲಾಗಿಂಗ್ ತಾಣಗಳು, ಚಾಟ್ ರೂಂ ಇತ್ಯಾದಿಗಳನ್ನು ಬಳಸಿ ಪಾಠ ಮಾಡಬೇಕಾಗುತ್ತದೆ. ಇಮೇಲ್, ಚಾಟ್ ರೂಂ ಅಥವಾ ಮೆಸೆಜ್ ಬೋರ್ಡ್ ಮೂಲಕ ವಿದ್ಯಾರ್ಥಿಯೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ.

ಟ್ಯೂಟರ್‍ಗೆ ಟಿಪ್ಸ್
ನಿಮ್ಮ ಆನ್‍ಲೈನ್ ಟೀಚಿಂಗ್ ಹೆಚ್ಚು ಪರಿಣಾಮಕಾರಿಯಾಗಲು ಸಹಕರಿಸುವ ಒಂದಿಷ್ಟು ಟಿಪ್ಸ್‍ಗಳು ಇಲ್ಲಿವೆ.
* ಆನ್‍ಲೈನ್‍ನಲ್ಲಿ ಏನು ಪಾಠ ಮಾಡಬೇಕೆಂದು ಮೊದಲೇ ರೂಪುರೇಷೆ ಸಿದ್ಧವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಪ್ರಸಂಟೇಷನ್ ಮಾಡುವ ಕಲೆ ನಿಮಗಿರಬೇಕು. ವಿದ್ಯಾರ್ಥಿಗಳು ತಕ್ಷಣ ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವ ಜ್ಞಾನ ನಿಮ್ಮಲ್ಲಿ ಇರಬೇಕು. ಇದಕ್ಕಾಗಿ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳಿಗೆ ಇಂಪ್ರೆಷನ್ ಮಾಡುವಂತಹ ಗುಣ ಬೆಳೆಸಿಕೊಳ್ಳಿ.
* ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಇರುವವರು ಎಂದು ಕಡೆಗಣಿಸಬೇಡಿ. ಕಾಲಕಾಲಕ್ಕೆ ಎಲ್ಲಾ ಅಸೈನ್‍ಮೆಂಟ್‍ಗಳನ್ನು ಕೇಳಿರಿ. ಅವರಿಗೆ ಹೋಂವರ್ಕ್ ಕುರಿತು ನೆನಪಿಸುತ್ತ ಇರಿ. ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮೂಡಿಸಿ. ಆನ್‍ಲೈನ್ ಎನ್ನುವುದು ಮಾಧ್ಯಮವಷ್ಟೇ, ಕ್ಲಾಸ್‍ರೂಂನಲ್ಲಿ ಪಾಠ ಮಾಡುವಷ್ಟು ಸೀರಿಯಸ್‍ನೆಸ್ ಇಲ್ಲೂ ಇರಲಿ.
* ನಿಗದಿತ ಸಮಯದಲ್ಲಿ ಇಂತಿಷ್ಟು ವಿಷಯಗಳನ್ನು ಬೋಧಿಸುವ ಅನಿವಾರ್ಯತೆ ಇರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ ಎಂದು ತಿಳಿದುಕೊಂಡೇ ಮುಂದುವರೆಯಿರಿ.
* ಪ್ಲಾನಿಂಗ್ ಇರಲಿ: ಸಿದ್ಧತೆ ನಡೆಸದೆ ಆನ್‍ಲೈನ್ ಟೀಚಿಂಗ್ ಮಾಡಬೇಡಿ. ಪ್ರತಿದಿನ ಹೆಚ್ಚು ಕಲಿಯಿರಿ. ಪರಿಣಾಮಕಾರಿಯಾಗಿ ಬೋಧನೆ ಮಾಡಿ.
* ಸಮರ್ಪಕ ಫೀಡ್‍ಬ್ಯಾಕ್ ನೀಡಿ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ. ಜೊತೆಗೆ, ಅವರಲ್ಲಿ ಹೆಚ್ಚು ಹೆಚ್ಚು ಪ್ರಶ್ನೆ ಕೇಳುವಂತೆ ಮಾಡಿ. ವಿದ್ಯಾರ್ಥಿಗಳು ಕೇಳಿದ ಕಲಿಕಾ ಸಾಮಾಗ್ರಿಗಳನ್ನು ಶೀಘ್ರದಲ್ಲಿ ಸಲ್ಲಿಸಲು ಪ್ರಯತ್ನ ಮಾಡಿ. ಸಾಧ್ಯವಾದರೆ ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಿ.
* ವಿದ್ಯಾರ್ಥಿಗಳೊಂದಿಗೆ ಪಠ್ಯದ ವಿಷಯ ಹೊರತುಪಡಿಸಿ ಬೇರೆ ಯಾವುದೇ ವಿಷಯಗಳನ್ನು ಮಾತನಾಡಬೇಡಿ.
* ಗುಣಮಟ್ಟ ಕಾಯ್ದುಕೊಳ್ಳಿ. ಆನ್‍ಲೈನ್ ಕಲಿಕಾ ಅನುಭವವನ್ನು ಉತ್ತಮ ಪಡಿಸಲು ಯತ್ನಿಸಿ. ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗಬೇಡಿ.

ಉದ್ಯೋಗ ಹುಡುಕಾಟ ಹೇಗೆ?
ಇಂಟರ್‍ನೆಟ್: ಆನ್‍ಲೈನ್ ಟೀಚಿಂಗ್ ಉದ್ಯೋಗ ಹುಡುಕಾಟಕ್ಕೆ ಇಂಟರ್‍ನೆಟ್ ಪ್ರಮುಖ ಮಾಧ್ಯಮ. ಜಾಬ್ ಪೆÇೀರ್ಟಲ್‍ಗಳಲ್ಲಿ ನಿಮ್ಮ ರೆಸ್ಯೂಂ ಅಪ್‍ಲೋಡ್ ಮಾಡಿ. ಅಲ್ಲಿ ಸ್ಪಷ್ಟವಾಗಿ ಆನ್‍ಲೈನ್ ಟ್ಯೂಟರ್ ಆಗಲು ಬಯಸಿರುವುದನ್ನು ಉಲ್ಲೇಖಿಸಿ. ರೆಸ್ಯೂಂನಲ್ಲಿ ಇಮೇಲ್ ಐಡಿ ಮತ್ತು ಫೆÇೀನ್ ನಂಬರ್ ಬರೆಯಲು ಮರೆಯಬೇಡಿ.
ವೆಬ್‍ಸೈಟ್‍ಗಳು: ನೀವು ಯಾವುದಾದರೂ ಪ್ರಮುಖ ಆನ್‍ಲೈನ್ ಟ್ಯೂಷನ್ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದಾರ? ನೇರವಾಗಿ ಆ ಸಂಸ್ಥೆಯ ವೆಬ್‍ಸೈಟ್‍ಗೆ ಪ್ರವೇಶಿಸಿ. ಅಲ್ಲಿ ಉದ್ಯೋಗಾವಕಾಶ ಇದೆಯೇ ಎಂದು ಕರಿಯರ್ ವಿಭಾಗದಲ್ಲಿ ಹುಡುಕಿ. ಅಲ್ಲಿ ಇದ್ದರೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೂ ಒಂದು ಇಮೇಲ್‍ನಲ್ಲಿ ರೆಸ್ಯೂಂ ಫಾವರ್ಡ್ ಮಾಡಿಬಿಡಿ.
ಆನ್‍ಲೈನ್ ನೇಮಕಾತಿ ಸಂಸ್ಥೆಗಳು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆನ್‍ಲೈನ್ ಟೀಚಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಲು ನೇಮಕಾತಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ಇರುತ್ತವೆ. ಇಂತಹ ಸಂಸ್ಥೆಗಳನ್ನೂ ಸಂಪರ್ಕಿಸಬಹುದು. ಆದರೆ, ಈ ವಿಭಾಗದಲ್ಲಿ ವಂಚಕರು ಹೆಚ್ಚಿರುತ್ತಾರೆ. ಅತ್ಯಧಿಕ ಶುಲ್ಕ ಕೇಳುವ ಏಜೆನ್ಸಿ ಅಥವಾ ಕನ್ಸಲ್ಟೆಂಟ್‍ಗಳಿಂದ ದೂರವಿರಿ.
ನ್ಯೂಸ್‍ಪೇಪರ್ಸ್-ಆನ್‍ಲೈನ್: ಸುದ್ದಿಪತ್ರಿಕೆಗಳ ಉದ್ಯೋಗ ಮಾಹಿತಿ ವಿಭಾಗದಲ್ಲಿಯೂ ಆನ್‍ಲೈನ್ ಟ್ಯೂಟರ್ ಓಪನಿಂಗ್ಸ್ ಕುರಿತು ಮಾಹಿತಿ ಇರುತ್ತದೆ. ಹೀಗಾಗಿ ಪತ್ರಿಕೆಗಳನ್ನು ಓದುತ್ತಿರಿ. ಆನ್‍ಲೈನ್ ನ್ಯೂಸ್ ಪೆÇೀರ್ಟಲ್‍ಗಳಲ್ಲಿಯೂ ಉದ್ಯೋಗ ಸುದ್ದಿಗಳಿವೆಯೇ ನೋಡಿಕೊಳ್ಳಿ.
ಪರ್ಸನಲ್ ರೆಫರೆನ್ಸ್: ಈಗಾಗಲೇ ಆನ್‍ಲೈನ್ ಟೀಚಿಂಗ್ ಮಾಡುತ್ತಿರುವ ಸ್ನೇಹಿತರು ಇದ್ದರೆ ಅವರಿಂದಲೂ ಉದ್ಯೋಗ ಮಾಹಿತಿ ಪಡೆದುಕೊಳ್ಳಿ. ಸೋಷಿಯಲ್ ನೆಟ್‍ವರ್ಕಿಂಗ್ ಸೈಟ್‍ಗಳಲ್ಲಿಯೂ ಇಂತಹ ಕರಿಯರ್ ಮಾಡುತ್ತಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಅವರಿಂದ ಮಾಹಿತಿ ಪಡೆದುಕೊಳ್ಳಬಹುದು.
ಆನ್‍ಲೈನ್ ಟ್ಯೂಟರ್ ಕೋರ್ಸ್
ನೀವು ಎಂಎ ಇತ್ಯಾದಿ ಶಿಕ್ಷಣ ಪಡೆದಿದ್ದರೂ ಆನ್‍ಲೈನ್‍ನಲ್ಲಿ ಟೀಚಿಂಗ್ ಮಾಡಲು ವಿಶೇಷ ಕೌಶಲ ಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳನ್ನು ಕಲಿತರೆ ಉಪಯೋಗವಾಗಬಹುದು. ಆನ್‍ಲೈನ್‍ನಲ್ಲಿ ಇದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳು, ಕೋರ್ಸ್‍ಗಳು ಲಭ್ಯ ಇವೆ. ಇವುಗಳನ್ನು ಬಳಸಿಕೊಳ್ಳಬಹುದು. ಕೆಲವು ಲಿಂಕ್‍ಗಳನ್ನು ಇಲ್ಲಿ ನೀಡಲಾಗಿದೆ.
ಟೀಚರ್ ಫೌಂಡೇಷನ್
ಟಿಇಎಫ್‍ಎಲ್ ಟೆಸೊಲ್:
ಟ್ಯೂಟರ್ ಇಂಡಿಯಾ
ಟೀಚರ್ ಡಿಪೆÇ್ಲಮಾ ಕೋರ್ಸ್

Thursday 24 November 2016

ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ 177 ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ `ಯೋಗ'ದ ಹವಾ ಆವರಿಸಿದೆ. ಯೋಗವನ್ನು ಕರಿಯರ್ ಆಯ್ಕೆ ಮಾಡಿಕೊಂಡವರಿಗೆ ಬೇಡಿಕೆಯೂ ಹೆಚ್ಚಾಗಿದೆ. ಯೋಗದಿಂದ ಯಾವೆಲ್ಲ ಉದ್ಯೋಗ ಪಡೆಯಬಹುದು? ಹೆಚ್ಚಿನ ಮಾಹಿತಿ ಇಲ್ಲಿದೆ.
ಹಣ, ಅಂತಸ್ತು, ಐಶ್ವರ್ಯವಿದ್ದರೂ ಮಾನಸಿಕ ನೆಮ್ಮದಿ ಇಲ್ಲವೆನ್ನುವುದು ಬಹುತೇಕರ ಅಳಲು. ಕೆಲಸದ ಒತ್ತಡ, ಸಂಸಾರದ ಜಂಜಾಟಗಳಿಂದ ಬೇಸೆತ್ತವರು ಸಾಕಷ್ಟಿದ್ದಾರೆ. ಮನಸ್ಸಿನ ಆರೋಗ್ಯ ಉತ್ತಮವಾಗಿದ್ದರೆ ಹ್ಯಾಪಿಯಾಗಿ ಇರಬಹುದು ಎಂಬುದು ಎಲ್ಲರಿಗೂ ಮನದಟ್ಟಾಗುತ್ತಿದೆ. ಈ ಒತ್ತಡ, ಜಂಜಡದ ಬದುಕಿನಲ್ಲಿ ರಿಲ್ಯಾಕ್ಸ್ ಆಗಲು ಎಲ್ಲರೂ ಯೋಗವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯೇ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದೆ. ಹೀಗಾಗಿ ಯೋಗಕ್ಕೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿದೆ.

ಯೋಗವೆಂಬ ಕರಿಯರ್
ಯೋಗವನ್ನೇ ಕರಿಯರ್ ಆಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವಿಯಾದ ಅದೇಷ್ಟೋ ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಕೆಲವರು ಶಾಲಾ ಕಾಲೇಜುಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಯೋಗ ತರಗತಿಗಳನ್ನು ನಡೆಸಿ ಜನರಿಗೆ ಯೋಗದ ಅರಿವು ಮೂಡಿಸುತ್ತಿದ್ದಾರೆ. ಇನ್ನು ಕೆಲವರು ಯೋಗವನ್ನೇ ಬಿಸ್ನೆಸ್ ಆಗಿಸಿ ದುಡ್ಡು ಬಾಚಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮವನ್ನು ಜೊತೆಯಾಗಿಸಿಕೊಂಡು ಸಾಕಷ್ಟು ಆಸ್ತಿ, ಅಂತಸ್ತು ಗಳಿಸಿದವರೂ ಸಿಗುತ್ತಾರೆ. ಹೀಗೆ ಯೋಗದಿಂದ ಸಾಕಷ್ಟು ಜನರಿಗೆ ಉದ್ಯೋಗಭಾಗ್ಯ ದೊರಕಿದೆ.

ಎಲ್ಲೆಲ್ಲಿ ಕೆಲಸ ಮಾಡಬಹುದು?
* ಸ್ವಂತ ಉದ್ಯೋಗ: ಬೆಂಗಳೂರಿನಂತಹ ನಗರಗಳಲ್ಲಿ ಯೋಗ ಟೀಚರ್/ಇನ್‍ಸ್ಟ್ರಕ್ಟರ್‍ಗಳಿಗೆ ಉತ್ತಮ ಬೇಡಿಕೆಯಿದೆ. ಸ್ವಂತ ಯೋಗ ಕ್ಲಾಸ್‍ಗಳನ್ನು ನಡೆಸಿದರೆ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಹೆಚ್ಚು ಹೂಡಿಕೆ ಅಗತ್ಯವಿಲ್ಲ. ಜಿಮ್ ಇತ್ಯಾದಿಗಳಿಗೆ ಕನ್ನಡಿ, ಆಧುನಿಕ ಸಲಕರಣೆಗಳ ಅಗತ್ಯವಿದೆ. ಆದರೆ, ಯೋಗ ಕ್ಲಾಸ್ ನಡೆಸಲು ಹೆಚ್ಚು ಹೂಡಿಕೆ ಬೇಕಿಲ್ಲ. ನೆಲಕ್ಕೆ ಹಾಸಲು ಕಾರ್ಪೇಟ್ ಇದ್ದರೆ ಸಾಕು. ಮನೆಯ ಟೇರಸಿಯಲ್ಲೇ ಯೋಗ ಕ್ಲಾಸ್ ನಡೆಸಿಕೊಳ್ಳಬಹುದು.
* ಟೀಚಿಂಗ್: ಸ್ವಂತ ಕಲಿಕಾ ಕೇಂದ್ರಗಳನ್ನು ತೆರೆಯಲು ಸಾಧ್ಯವಾಗದೆ ಇರುವವರು ರೆಸಾರ್ಟ್, ಜಿಮ್, ಸ್ಕೂಲ್, ಆರೋಗ್ಯ ಕೇಂದ್ರ, ಹೌಸಿಂಗ್ ಸೊಸೈಟಿಗಳು ಮತ್ತು ದೊಡ್ಡ ಸಂಸ್ಥೆಗಳಲ್ಲಿ ಯೋಗ ತರಬೇತುದಾರರಾಗಿ ಕೆಲಸ ಪಡೆಯಬಹುದು. ಈಗ ಶಾಲೆಗಳಲ್ಲಿ ಯೋಗ ಇನ್‍ಸ್ಟ್ರಕ್ಟರ್‍ಗಳನ್ನು ನೇಮಿಸುವುದು ಕಡ್ಡಾಯವೆಂದು ಸರಕಾರ ಹೇಳಿದೆ. ಹೀಗಾಗಿ ಖಾಸಗಿ, ಸರಕಾರಿ ಶಾಲೆಗಳಲ್ಲಿಯೂ ಯೋಗ ತರಬೇತುದಾರರಾಗಿ ಕೆಲಸ ಪಡೆದುಕೊಳ್ಳಬಹುದು.
* ಯೋಗದ ಉತ್ತೇಜನಕ್ಕೆ ಹಲವು ಕೇಂದ್ರಗಳನ್ನು, ಕೌನ್ಸಿಲ್‍ಗಳನ್ನು, ಸಂಶೋಧನಾ ವಿಭಾಗಗಳನ್ನು ಸರಕಾರ ತೆರೆದಿದೆ. ಇಂತಹ ವಿಭಾಗಗಳಲ್ಲಿಯೂ ಕೆಲಸ ಪಡೆಯಲು ಪ್ರಯತ್ನಿಸಬಹುದು.
* ವಿವಿಧ ಸೆಲೆಬ್ರೆಟಿಗಳು, ರಾಜಕಾರಣಿಗಳು, ವಿವಿಐಪಿಗಳು ಪರ್ಸನಲ್ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಹೀಗೆ ಪರ್ಸನಲ್ ಟ್ರೈನರ್ ಆಗಿಯೂ ಕೆಲಸ ಮಾಡಬಹುದಾಗಿದೆ.
* ವಿವಿಧ ಕಾಯಿಲೆಗಳಿಗೆ ನೀಡುವ ಯೋಗ ಥೆರಪಿಯೂ ಜನಪ್ರಿಯತೆ ಪಡೆದಿದೆ. ಇದು ಸಹ ಉದ್ಯೋಗಾವಕಾಶ ಹೆಚ್ಚಿಸಿದೆ.
ಹೊಸದಾಗಿ ಯೋಗ ತರಬೇತು ನೀಡುವವರಿಗೆ 10-15 ಸಾವಿರ ರೂ. ತಿಂಗಳ ವೇತನ ದೊರಕಬಹುದು. ಅನುಭವ ಹೆಚ್ಚಿದಂತೆಲ್ಲ ವೇತನ ಹೆಚ್ಚು ಸಿಗಬಹುದು. ಸ್ವಂತ ಯೋಗ ತರಗತಿ ಆರಂಭಿಸಿದವರು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.

ಯೋಗ ಶಿಕ್ಷಣ
ಬೆಂಗಳೂರು ವಿವಿ, ಕರ್ನಾಟಕ ವಿವಿ, ಮಂಗಳೂರು ವಿವಿ ಸೇರಿದಂತೆ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ವಿದ್ಯಾಸಂಸ್ಥೆಗಳಲ್ಲಿ ಯೋಗ ಕಲಿಸಲು ಪ್ರತ್ಯೇಕ ವಿಭಾಗ ಮೀಸಲಿಡಲಾಗಿದೆ. ಪಿಯುಸಿಯಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಅಂಕ ಪಡೆದವರು ಯೋಗ ಥೆರಪಿಯಲ್ಲಿ ಬಿಎ/ಬಿಎಸ್ಸಿ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಪದವಿ ಪಡದವರು ನಂತರ ಯೋಗ ಥೆರಪಿಯಲ್ಲಿ ಎಂಎ/ಎಂಎಸ್ಸಿ ಪಡೆಯಬಹುದಾಗಿದೆ. ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ನ್ಯಾಚುರೊಪಿ ಮತ್ತು ಯೋಗಿಕ್ ಸೈನ್ಸಸ್, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನ್ಯಾಚೊರೊಪತಿ ಮತ್ತು ಯೋಗಿಕ್ ಸೈನ್ಸಸ್, ಬೆಳಗಾವಿಯ ಕೆಎಲ್‍ಇಎಸ್ ಕಾಲೇಜ್ ಆಫ್ ನ್ಯಾಚೊರೊಪತಿ ಮತ್ತು ಯೋಗ, ಮೈಸೂರಿನ ನೇಚರ್ ಕ್ಯೂರ್ ಮತ್ತು ಯೋಗ ಕಾಲೇಜ್, ಪಿಕೆಟಿಆರ್ ಹಾಸ್ಪಿಟಲ್‍ನಲ್ಲೂ ಯೋಗ ಶಿಕ್ಷಣ ಪಡೆಯಬಹುದಾಗಿದೆ.

ಯಾವ ಕೆಲಸ ಸಿಗುತ್ತೆ?
* ರಿಸರ್ಚ್ ಆಫೀಸರ್-ಯೋಗ ಮತ್ತು ನ್ಯಾಚೊರೊಪಥಿ
* ಯೋಗ ಏರೋಬಿಕ್ ಇನ್‍ಸ್ಟ್ರಕ್ಟರ್
* ಅಸಿಸ್ಟೆಂಟ್ ಆಯುರ್ವೇದಿಕ್ ಡಾಕ್ಟರ್
* ಕ್ಲೀನಿಕಲ್ ಸೈಕೊಲಾಜಿಸ್ಟ್
* ಯೋಗ ಥೆರಪಿಸ್ಟ್
* ಯೋಗ ಇನ್‍ಸ್ಟ್ರಕ್ಟರ್
* ಯೋಗ ಟೀಚರ್
* ಥೆರಪಿಸ್ಟ್ಸ್ ಮತ್ತು ನ್ಯಾಚುರೊಪಥಿಸ್
* ಹೆಲ್ತ್ ಕ್ಲಬ್‍ಗಳಲ್ಲಿ ಟ್ರೈನರ್/ಇನ್‍ಸ್ಟ್ರಕ್ಟರ್

ನಿಮಗಿದು ತಿಳಿದಿರಲಿ
* ಕಿ.ಪೂ. 2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ `ಯೋಗ ಸೂತ್ರಗಳು' ಕೃತಿಯನ್ನು ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲಾಗಿದೆ.
* ಕಿ.ಶ. 15ನೇ ಶತಮಾನದಲ್ಲಿ ಸ್ವಾಮಿ ಗೋರಖನಾಥರು ಹಠ ಯೋಗ ಪ್ರದೀಪಿಕ ಎಂಬ ಕೃತಿ ಬರೆದಿದ್ದಾರೆ.

ಯೋಗದಿಂದ ಏನು ಪ್ರಯೋಜನ?
* ದೈಹಿಕ ಮತ್ತು ಮಾನಸಿಕ ಆರೋಗ್ಯ
* ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಕಾಯಿಲೆಗಳು ಯೋಗದ ಮೂಲಕ ಪರಿಹಾರವಾಗುತ್ತವೆ.

Monday 21 November 2016

ಮೆಡಿಕಲ್ ಶಾಪ್ ಇಡಬೇಕೆಂದಿದ್ದೀರಾ? ಇಲ್ಲಿದೆ ಮಾರ್ಗದರ್ಶನ

ಮೆಡಿಕಲ್ ಶಾಪ್ ಇಡಬೇಕೆಂದಿದ್ದೀರಾ? ಇಲ್ಲಿದೆ ಮಾರ್ಗದರ್ಶನ

ಸ್ವಂತ ಮೆಡಿಕಲ್ ಸ್ಟೋರ್ ಓನರ್ ಆಗಬೇಕಾದರೆ ಏನು ಓದಿರಬೇಕು? ಮೆಡಿಕಲ್ ಸ್ಟೋರ್‍ನಲ್ಲಿ ಯಾವೆಲ್ಲ ವಿಧಗಳಿವೆ? ಲೈಸನ್ಸ್ ಪಡೆಯುವುದು ಹೇಗೆ? ರಿಜಿಸ್ಟ್ರೇಷನ್ ಹೇಗೆ? ಫಾರ್ಮಸಿ ಬಿಸ್ನೆಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು
ಜಗತ್ತಿನಲ್ಲಿಂದು ರೋಗಗಳಿಗೆ ಬರವಿಲ್ಲ. ಇದಕ್ಕೆ ಪೂರಕವಾಗಿ ಕಾಪೆರ್Çರೇಟ್ ಆಸ್ಪತ್ರೆಗಳೂ, ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳೂ ಹೆಚ್ಚಾಗಿವೆ. ರೋಗಿಗಳಿದ್ದಲ್ಲಿ ಆಸ್ಪತ್ರೆಗಳು ಇರುವಂತೆ, ಆಸ್ಪತ್ರೆಗಳು ಇದ್ದಲ್ಲಿ ಮೆಡಿಕಲ್ ಸ್ಟೋರ್‍ಗಳು ಇದ್ದೇ ಇರುತ್ತವೆ. ಗಲ್ಲಿಗಲ್ಲಿಯಲ್ಲಿಂದು ಮೆಡಿಕಲ್ ಶಾಪ್‍ಗಳು ತಲೆಎತ್ತಿವೆ. ಹೆಲ್ತ್‍ಕೇರ್ ಮತ್ತು ಫಾರ್ಮಸಿ ಬಿಸ್ನೆಸ್ ಜೋರಾಗಿಯೇ ನಡೆಯುತ್ತಿದೆ. ಕೆಲವು ಕಡೆ ಸಾಕಷ್ಟು ಮೆಡಿಕಲ್ ಶಾಪ್‍ಗಳಿದ್ದರೆ, ಇನ್ನು ಕೆಲವೆಡೆ ಒಂದೂ ಮೆಡಿಕಲ್ ಶಾಪ್ ಇಲ್ಲದಿರಬಹುದು. ಇಂತಹ ಸ್ಥಳದಲ್ಲಿ ಮೆಡಿಕಲ್ ಶಾಪ್ ಇದ್ದಿದ್ದರೆ ಸಾಕಷ್ಟು ಜನರಿಗೆ ಹೆಲ್ಪ್ ಆಗಬಹುದಿತ್ತು ಎಂಬ ಭಾವನೆ ನಿಮ್ಮಲ್ಲಿ ಇರಬಹುದು. ಫಾರ್ಮಸಿ ಬಿಸ್ನೆಸ್‍ಗೆ ಬಿ.ಫಾರ್ಮಾ/ಎಂ.ಫಾರ್ಮಾ ಇತ್ಯಾದಿ ಶೈಕ್ಷಣಿಕ ಅರ್ಹತೆ ಇದ್ದರೆ ನೀವೂ ಮೆಡಿಕಲ್ ಶಾಪ್ ಮಾಲಿಕರಾಗಬಹುದು.

 

ಮೆಡಿಕಲ್ ಶಾಪ್ ವಿಧಗಳು
ಮೆಡಿಕಲ್ ಶಾಪ್ ತೆರೆಯಲು ವಿವಿಧ ಬಗೆಯ ಲೈಸನ್ಸ್‍ಗಳು ಅಸ್ತಿತ್ವದಲ್ಲಿವೆ.
1. ಹಾಸ್ಪಿಟಲ್ ಫಾರ್ಮಸಿ: ಆಸ್ಪತ್ರೆಯ ಒಳಭಾಗದಲ್ಲಿ ರೋಗಿಗಳ ಅನುಕೂಲಕ್ಕಾಗಿ ಮೆಡಿಕಲ್ ಶಾಪ್ ನಿರ್ಮಿಸುವುದನ್ನು ಹಾಸ್ಪಿಟಲ್ ಫಾರ್ಮಸಿ ಎನ್ನುತ್ತಾರೆ. ಹೆಚ್ಚಾಗಿ ಇದಕ್ಕೆ ಆ ಆಸ್ಪತ್ರೆಯ ರೋಗಿಗಳೇ ಪ್ರಮುಖ ಗ್ರಾಹಕರಾಗಿರುತ್ತಾರೆ.
2. ಸ್ಟಾಂಡೊಲಾನ್ ಫಾರ್ಮಸಿ: ಯಾವುದಾದರೂ ರೆಸಿಡೆನ್ಶಿಯಲ್ ಪ್ರದೇಶದಲ್ಲಿ ಅಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಫಾರ್ಮಸಿ ಅಥವಾ ಮೆಡಿಕಲ್ ಸ್ಟೋರ್ ಸೆಟಪ್ ಮಾಡುವುದಾಗಿದೆ.
3. ಚೈನ್ ಫಾರ್ಮಸಿ: ಮಾಲ್ ಅಥವಾ ಇತರ ಶಾಪಿಂಗ್ ತಾಣಗಳಲ್ಲಿ ಯಾವುದಾದರೂ ಫಾರ್ಮಸಿ ಜಾಲವು ತನ್ನ ಸ್ಟೋರ್ ತೆರೆಯುವುದಾಗಿದೆ. ಇದು ಒಂದು ನೆಟ್‍ವರ್ಕ್ ಆಗಿ ಕಾರ್ಯನಿರ್ವಹಿಸುತ್ತದೆ.
4. ಟೌನ್‍ಷಿಪ್ ಫಾರ್ಮಸಿ: ಯಾವುದಾದರೂ ಟೌನ್‍ಷಿಪ್ ಒಳಗೆ ಫಾರ್ಮಸಿ ನಿರ್ಮಿಸುವುದನ್ನು ಟೌನ್‍ಷಿಪ್ ಫಾರ್ಮಸಿ ಎನ್ನುತ್ತಾರೆ.
ದೇಶದಲ್ಲಿ ಬಹುತೇಕ ಮೆಡಿಕಲ್ ಸ್ಟೋರ್‍ಗಳಿಂದು ಸ್ಟಾಂಡ್‍ಅಲೋನ್ ಫಾರ್ಮಸಿ ಅನ್ವಯ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಂತಹ ನಗರಗಳಲ್ಲಿ ಇಂದು ಮೆಡ್‍ಪ್ಲಸ್, ಟ್ರಸ್ಟ್ ಕೆಮಿಸ್ಟ್, ಮೆಡ್ ಝೋನ್ ಇತ್ಯಾದಿ ಹಲವು ಚೈನ್ ಫಾರ್ಮಸಿಗಳು ಹೆಚ್ಚಾಗುತ್ತಿವೆ. ಚೈನ್ ಫಾರ್ಮಸಿ, ಟೌನ್‍ಷಿಪ್ ಫಾರ್ಮಸಿಗಳನ್ನು ಹೆಚ್ಚಾಗಿ ಆಸ್ಪತ್ರೆಗಳು ಅಥವಾ ಕಂಪನಿಗಳು ಸ್ಥಾಪಿಸುತ್ತವೆ. ಆದರೆ, ಸ್ಟಾಂಡ್‍ಅಲೊನ್ ಫಾರ್ಮಸಿಗಳನ್ನು ಹೆಚ್ಚಾಗಿ ಸ್ವಂತ ಮಾಲಿಕತ್ವ ಅಥವಾ ಪಾಲುದಾರಿಕೆಯಲ್ಲಿ ಇಂತಹ ಬಿಸ್ನೆಸ್ ಮಾಡಲಾಗುತ್ತದೆ.

ತೆರಿಗೆಗೆ ಸಂಬಂಧಪಟ್ಟ ವಿಷಯ
ಭಾರತದಲ್ಲಿ ಸರಕು ಅಥವಾ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಟ್ ರಿಜಿಸ್ಟ್ರೇಷನ್ ಅವಶ್ಯಕ. ಯಾವ ರಾಜ್ಯದಲ್ಲಿ ನೀವು ಮೆಡಿಕಲ್ ಸ್ಟೋರ್ ತೆರೆಯುವಿರೋ ಅಲ್ಲಿನ ವ್ಯಾಟ್ ನೀತಿನಿಯಮಕ್ಕೆ ತಕ್ಕಂತೆ ನೀವು ಕಾರ್ಯನಿರ್ವಹಿಸಬೇಕಾಗುತ್ತದೆ. ಆಯಾ ರಾಜ್ಯದ ವ್ಯಾಟ್ ಅಥವಾ ಮಾರಾಟ ತೆರಿಗೆ ಇಲಾಖೆಗೆ ವ್ಯಾಟ್ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ಕರ್ನಾಟಕ ವ್ಯಾಟ್ ರಿಜಿಸ್ಟ್ರೇಷನ್‍ಗಾಗಿ ಈ ವೆಬ್ ವಿಳಾಸಕ್ಕೆ ಭೇಟಿ ನೀಡಿರಿ. 

ಲೈಸನ್ಸ್ ಪಡೆಯುವುದು ಹೇಗೆ?
ಫಾರ್ಮಸಿ ಬಿಸ್ನೆಸ್‍ಗೆ ಫಾರ್ಮಸಿ ಅಥವಾ ಡ್ರಗ್ ಲೈಸನ್ಸ್ ಪಡೆಯುವುದು ಅತ್ಯಂತ ಅಗತ್ಯ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ಮತ್ತು ಸ್ಟೇಟ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ಕಂಟ್ರೋಲ್ ಈ ಡ್ರಗ್ ಲೈಸನ್ಸ್ ನೀಡುತ್ತದೆ. ಸಾಮಾನ್ಯ ಮೆಡಿಕಲ್ ಶಾಪ್ ತೆರೆಯಲು ರಿಟೇಲ್ ಡ್ರಗ್ ಲೈಸನ್ಸ್(ಆರ್‍ಡಿಎಲ್) ಸಾಕಾಗುತ್ತದೆ. ವೋಲ್ ಸೇಲ್ ಡ್ರಗ್ ಲೈಸನ್ಸ್(ಡಬ್ಲ್ಯುಡಿಎಲ್) ಸಹ ದೊರಕುತ್ತದೆ. ಹೆಚ್ಚಿನ ರಾಜ್ಯಗಳಲ್ಲಿ ಫಾರ್ಮಾಸಿಯಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದವರಿಗೆ ಮಾತ್ರ ಇಂತಹ ಲೈಸನ್ಸ್ ದೊರಕುತ್ತದೆ. ಈ ಕಂಡಿಷನ್ ವೋಲ್‍ಸೇಲ್ ಡ್ರಗ್ ಲೈಸನ್ಸ್‍ಗೆ ಅನ್ವಯವಾಗುವುದಿಲ್ಲ.

ಏನೆಲ್ಲ ಬೇಕು?
ಮೆಡಿಕಲ್ ಶಾಪ್ ಲೈಸನ್ಸ್ ಪಡೆಯಲು ಅಥವಾ ಮೆಡಿಕಲ್ ಶಾಪ್ ನಿರ್ಮಿಸಲು ಬೇಕಾಗುವ ಕನಿಷ್ಠ ಅವಶ್ಯಕತೆಗಳು ಈ ರೀತಿ ಇವೆ.
* ಸ್ಥಳ: ಮೆಡಿಕಲ್ ಶಾಪ್‍ಗಾದರೆ ಕನಿಷ್ಠ 10 ಚದರಡಿ ಸ್ಥಳಾವಕಾಶ ಇರಬೇಕು. ಎಲ್ಲಾದರೂ ರಿಟೇಲ್ ಅಥವಾ ವೋಲ್‍ಸೇಲ್ ಬಿಸ್ನೆಸ್‍ಗೆ ಕನಿಷ್ಠ 15 ಚದರಡಿ ಸ್ಥಳಾವಕಾಶ ಇರಬೇಕು.
* ಸ್ಟೋರೇಜ್: ಮೆಡಿಕಲ್ ಶಾಪ್‍ನಲ್ಲಿ ಕಡ್ಡಾಯವಾಗಿ ರೆಫ್ರಿಜರೇಟರ್ ಇರಬೇಕು.
* ಸಿಬ್ಬಂದಿ ವರ್ಗ: ಮೆಡಿಕಲ್ ಶಾಪ್‍ನಲ್ಲಿ ಔಷಧ ಮಾರಾಟ ಮಾಡುವವರು ಫಾರ್ಮಾ ಸಂಬಂಧಿತ ಶಿಕ್ಷಣ ಪಡೆದಿರಬೇಕು.

ಏನು ಓದಿರಬೇಕು?
ಫಾರ್ಮಸಿ ಲೈಸನ್ಸ್ ಪಡೆಯಲು ಮತ್ತು ಫಾರ್ಮಸಿ ರಿಜಿಸ್ಟ್ರಾರ್ ಮಾಡಲು ನೀವು ಬಿ.ಫಾರ್ಮಾ ಅಥವಾ ಎಂ. ಫಾರ್ಮಾ ಓದಿರಬೇಕು. ಕೆಲವರು ಈ ರೀತಿ ಶಿಕ್ಷಣ ಪಡೆದವರ ಹೆಸರಿನಲ್ಲಿ ಗುಡ್‍ವಿಲ್ ಪೇಮೇಂಟ್ ಒಪ್ಪಂದ ಮಾಡಿಕೊಂಡು ಮೆಡಿಕಲ್ ಶಾಪ್ ನಿರ್ಮಿಸಬಹುದು. ಇದು ನ್ಯಾಯಸಮ್ಮತವಲ್ಲವಾದರೂ ದೇಶದಲ್ಲಿಂದು ಇಂತಹ ಮೆಡಿಕಲ್ ಸಂಖ್ಯೆ ಸಾಕಷ್ಟಿದೆ.
ನೀವು ಎಷ್ಟು ಹಣ ಹೂಡಿಕೆ ಮಾಡಲು ರೆಡಿ ಇದ್ದೀರಿ ಎನ್ನುವುದರ ಮೇಲೆ ನೀವು ಎಷ್ಟು ದೊಡ್ಡ ಮೆಡಿಕಲ್ ಸ್ಟೋರ್ ನಿರ್ಮಿಸಬಹುದು ಎನ್ನುವುದು ನಿಂತಿದೆ. ಪುಟ್ಟ ಕೋಣೆಯಂತಹ ರೂಂಗೆ ಬಾಡಿಗೆ, ಅಡ್ವಾನ್ಸ್ ಎಂದು ಹಲವು ಲಕ್ಷ ಖರ್ಚು ಮಾಡಬೇಕಾಗುತ್ತದೆ. ನಂತರ ಅಲ್ಲಿ ಔಷಧಗಳನ್ನು ಸಂಗ್ರಹಿಸಬೇಕು.
ಇಂತಹ ಮೆಡಿಕಲ್ ಸ್ಟೋರ್ ಮಾಡಿದ ನಂತರ ಡಾಕ್ಟರ್ ಅಥವಾ ಹಾಸ್ಪಿಟಲ್‍ನ ನೆಟ್‍ವರ್ಕ್ ನಿಮಗೆ ಅಗತ್ಯವಿರುತ್ತದೆ. ನೀವು ಗಮನಿಸಿರಬಹುದು. ಕೆಲವು ಡಾಕ್ಟರ್‍ಗಳು ಅವರು ಹೇಳಿದ ಮೆಡಿಕಲ್ ಸ್ಟೋರ್‍ಗೆ ಹೋಗುವಂತೆ ತಿಳಿಸುತ್ತಾರೆ. ಇಲ್ಲಿ ಡಾಕ್ಟರ್‍ಗೂ ಮೆಡಿಕಲ್ ಸ್ಟೋರ್‍ನವರಿಗೂ ಒಳ ಒಪ್ಪಂದ ಇರುತ್ತದೆ. ಇಂತಹ ನೆಟ್ ವರ್ಕ್ ಳಿದ್ದರೆ ಮಾತ್ರ ಔಷಧಗಳು ಹೆಚ್ಚು ಮಾರಾಟವಾಗುತ್ತವೆ. ಇದು ಕೂಡ ನೈತಿಕ ಹಾದಿಯಲ್ಲ. ಆದರೆ, ಹೆಚ್ಚಿನವರು ಇದೇ ಹಾದಿಯನ್ನು ಫಾಲೊ ಮಾಡುತ್ತಿದ್ದಾರೆ.

ಡಾಕ್ಯುಮೆಂಟ್ಸ್ ಏನುಬೇಕು?
ಡ್ರಗ್ ಲೈಸನ್ಸ್ ಪಡೆಯಲು ಮತ್ತು ಮೆಡಿಕಲ್ ಶಾಪ್ ತೆರೆಯಲು ಬೇಕಾದ ಅರ್ಜಿ ನಮೂನೆಗಳು ಮತ್ತು ದಾಖಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ನೀವು ಕರ್ನಾಟಕ ರಾಜ್ಯದವರಾದರೆ ಈ ರಾಜ್ಯದ ಫಾರ್ಮಸಿ ಲೈಸನ್ಸ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಬೇಕು. ಡ್ರಗ್ ಲೈಸನ್ಸ್‍ಗಾಗಿ ಡೆಪೆÇಸಿಟ್ ಮಾಡಿದ ಮೊತ್ತದ ಚಲನ್, ಡಿಕ್ಲರೇಷನ್, ಸ್ಥಳದ ಕೀ ಪ್ಲಾನ್, ಸೈಟ್ ಪ್ಲಾನ್ ಬ್ಲೂಪ್ರಿಂಟ್ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಈ ಕುರಿತು ಮಾಹಿತಿ ಪಡೆಯಲು ಮತ್ತು ಅರ್ಜಿ ನಮೂನೆಗಾಗಿ ವೆಬ್‍ಸೈಟ್ ಗೆ ಭೇಟಿ ನೀಡಿ.

Published in Vijaya Karnataka Mini

Friday 18 November 2016

ವಿದೇಶಿ ಉದ್ಯೋಗಕ್ಕೆ ಹೋಗುವಿರಾ? ಈ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ

ವಿದೇಶಿ ಉದ್ಯೋಗಕ್ಕೆ ಹೋಗುವಿರಾ? ಈ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ

ಫಾರಿನ್ ಎಂಬ ಮೂರಕ್ಷರದ ಸೆಳೆದ ಅಗಾಧವಾದದ್ದು. ವಿದೇಶಕ್ಕೆ ತೆರಳಿ ಅಲ್ಲಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವುದು ಬಹುತೇಕರ ಕನಸು. ಫಾರಿನ್‍ಗೆ ಹೋಗಿ ಬಂದವರನ್ನು ಕಂಡಾಗ ನಮ್ಮಲ್ಲಿನ ಯುವಕರಿಗೂ ಆಸೆ ಚಿಗುರುತ್ತದೆ. ನಾವೂ ಅವರಂತಾಗಬೇಕು ಎಂದು ಸಾಲಗೀಲ ಮಾಡಿ ವೀಸಾ, ಪಾಸ್‍ಪೆÇೀರ್ಟ್ ರೆಡಿ ಮಾಡುತ್ತಾರೆ. ಕಾಣದ ಕಡಲಿಗೆ ಹಂಬಲಿಸಿದ ಮನದಂತೆ ಗೊತ್ತಿಲ್ಲದ ಊರಿಗೆ ಪ್ರಯಾಣ ಬೆಳೆಸುತ್ತಾರೆ.
ನಿಮಗೆ ಗೊತ್ತಿರಬಹುದು. ದುಬೈನಲ್ಲೀಗ ಮಹಾ ಬಿಕ್ಕಟ್ಟು. ತೈಲವನ್ನು ಮೊಗೆಮೊಗೆದು ಹಣ ಸಂಪಾದಿಸಿ ಶ್ರೀಮಂತವಾದ ಕೊಲ್ಲಿ ರಾಷ್ಟ್ರದಲ್ಲೀಗ ವಿದೇಶಿಗರು ಹಸಿವಿನಿಂದ ಕಂಗೆಟ್ಟಿದ್ದಾರೆ. ಲಕ್ಷ ಲಕ್ಷ ಭಾರತೀಯರು ಭಾರತಕ್ಕೆ ವಾಪಸ್ಸಾಗಲೂ ಆಗದೆ, ಅಲ್ಲಿರಲು ಆಗದೆ ತತ್ತರಿಸಿದ್ದಾರೆ. ಕಣ್ಣುಮುಚ್ಚಿ ವಿದೇಶಕ್ಕೆ ಉದ್ಯೋಗದ ಆಸೆಯಿಂದ ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಬಲ್ಲದು. ವಿದೇಶಿ ಉದ್ಯೋಗದ ಕನಸಿನಲ್ಲಿರುವವರಿಗೆ ಒಂದಿಷ್ಟು ಟಿಪ್ಟ್‍ಗಳು ಇಲ್ಲಿವೆ.

* ಪ್ರವೀಣ್ ಚಂದ್ರ ಪುತ್ತೂರು

ಮಧ್ಯವರ್ತಿಗಳಿಂದ ಮೋಸ: ವಿದೇಶದಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರನ್ನು ವಂಚಿಸಲೆಂದೇ ಸಾಕಷ್ಟು ವಂಚಕರು ಬಕಪಕ್ಷಿಗಳಂತೆ ಕಾದುಕುಳಿತಿದ್ದಾರೆ. ಫಾರಿನ್‍ನಲ್ಲಿ ಜಾಬ್ ನೀಡುತ್ತೇವೆ ಎಂದು ಭರವಸೆ ನೀಡಿ ವೀಸಾ, ಪಾಸ್‍ಪೆÇೀರ್ಟ್ ಇತ್ಯಾದಿ ಶುಲ್ಕವೆಂದು ಹೇಳಿ ಲಕ್ಷಲಕ್ಷ ಪೀಕಿ ಪರವೂರಿನಲ್ಲಿ ನರಕದರ್ಶನ ಮಾಡಿಸಲೆಂದೇ ಹಲವು ಏಜೆನ್ಸಿಗಳು, ಮಧ್ಯವರ್ತಿಗಳು ಇರುತ್ತಾರೆ. ವಿದೇಶಿ ಜಾಬ್ ಆಫರ್ ನೀಡುವ ಅಪರಿಚಿತ ಮಧ್ಯವರ್ತಿಗಳನ್ನು ಯಾವತ್ತೂ ನಂಬಲೇಬೇಡಿ. ಹೀಗಾಗಿ ನಂಬಿಕಸ್ಥ ಏಜೆನ್ಸಿಗಳ ಮುಖಾಂತರ ಮಾತ್ರ ಹೋಗಿ. ನೀವು ಆಯ್ಕೆ ಮಾಡಿಕೊಳ್ಳುವ ಏಜೆನ್ಸಿಗಳ ಕುರಿತು ಏನಾದರೂ ದೂರುಗಳಿವೆಯೇ ಎಂದು ಆನ್‍ಲೈನ್ ಫಾರಮ್‍ಗಳಲ್ಲಿ ಹುಡುಕಾಡಿ.

ವೀಸಾದ ವಿಷಯ: ನಿಮಗೆ ಉದ್ಯೋಗದ ಆಫರ್ ಜೊತೆ ನೀಡಿರುವ ವೀಸಾವನ್ನು ಸರಿಯಾಗಿ ಓದಿಕೊಳ್ಳಿ. ಕೆಲವರು ವಿಸಿಟಿಂಗ್ ವೀಸಾ ಕೊಟ್ಟು ನಿಮ್ಮನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಆಮೇಲೆ ನೀವು ಆ ದೇಶದಲ್ಲಿ ಕದ್ದು ಮುಚ್ಚಿ (ಕೆಲವೊಮ್ಮೆ ಸಂಪೂರ್ಣವಾಗಿ ಗ್ರಹಬಂಧನದಲ್ಲಿ) ಬದುಕಬೇಕಾಗುತ್ತದೆ. ಹೀಗಿದ್ದರೆ, ಅಲ್ಲಿಂದ ವಾಪಸ್ ಬರಲು ಸಹ ಕಳ್ಳತನದ ಹಾದಿಯನ್ನೇ ಹಿಡಿಯಬೇಕಾಗುತ್ತದೆ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ವೀಸಾದ ಅವಧಿ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ಅತ್ಯಂತ ಕಡಿಮೆ ಅವಧಿಯದ್ದಾಗಿದ್ದರೆ ವಾಪಸ್ ಬರಲು ವ್ಯವಸ್ಥೆಯೇನಿದೆ? ನೀವು ಅಷ್ಟು ದಿನ ದುಡಿದ ಹಣ ವಿಮಾನ ಟಿಕೇಟ್‍ಗೆ ಸಾಕಾಗಬಲ್ಲದೇ? ತಿಳಿದುಕೊಳ್ಳಿ.

ಯಾವ ಕಂಪನಿ?: ನಿಮಗೆ ಯಾವ ಕಂಪನಿಯಿಂದ ಜಾಬ್ ಆಫರ್ ಬಂದಿದೆ ಎಂದು ತಿಳಿದುಕೊಳ್ಳಿ. ಅಂತಹ ಕಂಪನಿ ಅಸ್ತಿತ್ವದಲ್ಲಿದೆಯೇ ತಿಳಿದುಕೊಳ್ಳಿ. ನಿಮಗೆ ಉದ್ಯೋಗದ ಆಫರ್ ನೀಡಿದ ಕಂಪನಿಯ ಅಸಲಿಯತ್ತನ್ನು ವೆಬ್‍ಸೈಟ್‍ನಲ್ಲಿಯೂ ಪರಿಶೀಲಿಸಬಹುದು. ಇದು ಬೆಂಗಳೂರಿನ ರಿಜೋರ್ಸ್ ರಿಸೋರ್ಸ್ ಫೌಂಡೇಷನ್ ಆಗಿದ್ದು, ಅಸಲಿ ಮತ್ತು ನಕಲಿ ಕಂಪನಿಗಳನ್ನು ಖಚಿತಪಡಿಸಲಾಗುತ್ತದೆ.

ಭಾವನಾತ್ಮಕ ಸಂಗತಿ: ಮೊದಲಿಗೆ ನೀವು ಪರವೂರಿನಲ್ಲಿ ಕೆಲಸ ಮಾಡುವಷ್ಟು ಮಾನಸಿಕ ಸಾಮಥ್ರ್ಯ ಹೊಂದಿದ್ದೀರೋ ತಿಳಿದುಕೊಳ್ಳಿ. ಅಲ್ಲಿ ಅತ್ಯಂತ ಕಷ್ಟವನ್ನೂ ಎದುರಿಸಬೇಕಾದೀತು. ಮನೆಯವರ ನೆನಪು ಕಾಡಬಹುದು. ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಫಾರಿನ್‍ಗೆ ಹೋಗುವ ಕುರಿತು ನಿರ್ಧಾರ ಮಾಡಿ.

ಎಲ್ಲಿಗೆ ಹೋಗುವಿರಿ?: ತೈಲ ದರ ಇಳಿಕೆಯಿಂದ ಬಿಕ್ಕಟ್ಟು ಅನುಭವಿಸುತ್ತಿರುವ ದುಬೈಗೋ, ಐಸಿಸ್ ಹಾವಳಿ ಅತಿಯಾಗಿರುವ ಇನ್ನೊಂದು ದೇಶಕ್ಕೋ, ಬಂಡುಕೋರರು ಇರುವ ಆ ದೇಶಕ್ಕೋ, ರಾಜಕೀಯ ಸಿತ್ಯಾಂತರದಲ್ಲಿ ಗಲಭೆಯೇಳುತ್ತಿರುವ ದೇಶಕ್ಕೋ, ವಿದೇಶಿಗರ ಮೇಲೆ ಸದಾ ಹಲ್ಲೆ ನಡೆಸುತ್ತಿರುವ ಅಸುರಕ್ಷಿತ ದೇಶಕ್ಕೋ... ಯಾವ ದೇಶಕ್ಕೆ ನೀವು ಹೋಗುವಿರಿ? ಅಲ್ಲಿನ ಬೆಳವಣಿಗೆಗಳೇನು? ಇತ್ಯಾದಿಗಳನ್ನು ತಿಳಿದುಕೊಂಡೇ ಮುಂದುವರೆಯಿರಿ.

ಎಷ್ಟು ವೇತನ ಸಿಗುತ್ತದೆ?: ಕೆಲವು ಉದ್ಯೋಗದ ಆಫರ್‍ಗಳು ಭಾರತದ ಹಣದ ಲೆಕ್ಕದಲ್ಲಿ ಆಫರ್ ನೀಡುತ್ತವೆ. ಆದರೆ, ವಿದೇಶದಲ್ಲಿ ಅಲ್ಲಿನ ಖರ್ಚುವೆಚ್ಚುಗಳು ಹೆಚ್ಚಿರುವುದರಿಂದ ಹಣ ಉಳಿಸುವುದು ಕಷ್ಟವಾಗುತ್ತದೆ. ನಿಮ್ಮ ವೇತನದಲ್ಲಿಯೇ ವಸತಿ ಇತ್ಯಾದಿಗಳೂ ಕಟ್ ಆದರೆ ನಿಮಗೆ ಏನೂ ಉಳಿಯದು. ಅದಕ್ಕಾಗಿ ಅತ್ಯಧಿಕ ಮೊತ್ತದ ಆಫರ್ ಸಿಕ್ಕಿದೆಯೇ, ಸಾಧಾರಣ ವೇತನದ ಆಫರ್ ದೊರಕಿರುವುದೇ ತಿಳಿದು ಮುಂದುವರೆಯಿರಿ. ವಸತಿ ಸೌಲಭ್ಯ ಇಲ್ಲದಿದ್ದರೆ ಗೊತ್ತಿಲ್ಲದ ಊರಿನಲ್ಲಿ ಎಲ್ಲಿ ಉಳಿದುಕೊಳ್ಳುವಿರಿ. ಅದಕ್ಕೆ ಬೇಕಾದಷ್ಟು ಹಣ ಎಲ್ಲಿಂದ ಹೊಂದಿಸುವಿರಿ.

ಕೌಶಲವಿದೆಯೇ?: ಫಾರಿನ್ ಜಾಬ್ ಆಫರ್ ಮಾಡುವಾಗ ನಿಮ್ಮಲ್ಲಿ ಯಾವುದಾದರೂ ಕೌಶಲವನ್ನು ಬಯಸಲಾಗುತ್ತದೆ. ಅಲ್ಲಿ ಹೋದ ಮೇಲೆ ನಿಮ್ಮಲ್ಲಿ ಆ ಕಂಪನಿಗೆ ಬೇಕಾದಷ್ಟು ಕೌಶಲವಿಲ್ಲವೆಂದು ಕೆಲಸದಿಂದ ತೆಗೆದು ಹಾಕಬಹುದು. ಆಗ ನಿಮ್ಮಲ್ಲಿ ಅಭದ್ರತೆ ಉಂಟಾಗಬಹುದು. ಸಿಕ್ಕ ಸಿಕ್ಕ ಕೆಲಸಕ್ಕೆ ಸೇರುವ ಅನಿವಾರ್ಯತೆ ಉಂಟಾಗಬಹುದು. ಹೋದ ಮೇಲೆ ಹೇಗೋ ಮ್ಯಾನೇಜ್ ಮಾಡಬಹುದೆಂದು ಅರೆಬರೆ ಕೌಶಲದೊಂದಿಗೆ ವಿಮಾನ ಹತ್ತಬೇಡಿ. ಆಮೇಲೆ ಕಷ್ಟಪಡಬೇಕಾದೀತು. ಸಂಬಂಧಿತ ಕೌಶಲವನ್ನು ಸರಿಯಾಗಿ ಪಡೆದುಕೊಂಡೇ ಫಾರಿನ್‍ಗೆ ಹೋಗಿ.

ಜಾಬ್ ಲೀಗಲ್ ಆಗಿರುವುದೇ?: ವಿದೇಶದಲ್ಲಿ ಜಾಬ್ ಕೊಡಿಸುತ್ತೇವೆ ಎಂದು ಯಾರೋ ಕರೆದರೂ ಎಂದು ಹೋಗಬೇಡಿ. ಅಲ್ಲಿ ನಿಮಗೇನು ಕೆಲಸವೆಂದು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರು ವಿದೇಶಿಗರನ್ನು ಬಳಸಬಹುದು. ವಿದೇಶಿ ನೆಲದಲ್ಲಿ ಇಲ್ಲಿಗಲ್ ಚಟುವಟಿಕೆ ನಡೆಸಿ ಸಿಕ್ಕಿ ಬಿದ್ದರೆ ಮತ್ತೆ ಭಾರತಕ್ಕೆ ವಾಪಸ್ ಆಗುವುದು ಕಷ್ಟವಾದೀತು.
ವಿದೇಶದಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎಂಬ ಕನಸು ಕಾಣುವುದು ತಪ್ಲಲ್ಲ. ಒಳ್ಳೆಯ ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಹೋಗಬಹುದು. ದೇಶದ ಆರ್ಥಿಕತೆಗೆ ವಿದೇಶದಲ್ಲಿರುವ ಭಾರತೀಯರ ಕೊಡುಗೆ ಸಾಕಷ್ಟಿದೆ. ಆದರೆ, ಫಾರಿನ್ ಜಾಬ್ ಆಫರ್ ಬಂದಾಕ್ಷಣ ಹಿಂದೆಮುಂದೆ ನೋಡದೆ ಹೊರಡುವ ಮೊದಲು ಎಲ್ಲರೂ ಎಚ್ಚರಿಕೆ ವಹಿಸಬೇಕೆನ್ನುವುದೇ ನಮ್ಮ ಕಳಕಳಿ.
ಇತ್ತ ಗಮನಿಸಿ
* ಭಾಷೆ ಗೊತ್ತೆ?: ಉದಾಹರಣೆಗೆ ದುಬೈಗೆ ಹೋದರೆ ಅಲ್ಲಿ ಅರೇಬಿಕ್ ಪ್ರಮುಖ ಭಾಷೆ. ನೀವು ಹೋಗುವ ದೇಶದ ಭಾಷೆ ನಿಮಗೆ ಗೊತ್ತಿದ್ದರೆ ಎಂತಹ ಪರಿಸ್ಥಿತಿಯಿಂದಲೂ ಪಾರಾಗಬಹುದು. ಇಂಗ್ಲಿಷ್‍ನಂತಹ ಭಾಷೆಯಾದರೂ ಗೊತ್ತಿರಲಿ. ನಿಮ್ಮ ಸಂಬಂಧಿಕರು, ಸ್ನೇಹಿತರು ಅಲ್ಲಿದ್ದರೆ ಅವರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಿ.
* ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ ಇದೆಯೇ ತಿಳಿದುಕೊಳ್ಳಿ. ಕೆಲವು ಏಜೆನ್ಸಿಗಳು ಯಾವುದೋ ಐಟಿ ಉದ್ಯೋಗದ ಆಫರ್ ನೀಡಬಹುದು. ಅಲ್ಲಿ ಹೋದಮೇಲೆ ನೀವು ಮನೆಕೆಲಸ ಅಥವಾ ಒಂಟೆ ತೊಳೆಯುವ ಕೆಲಸ ಮಾಡಬೇಕಾದೀತು.
* ಕಾನೂನು ಅರಿವು ಇರಲಿ: ಆಯಾ ದೇಶದ ವೀಸಾದಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬಾರದು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.

ಆನ್‍ಲೈನ್ ವಂಚಕರಿದ್ದಾರೆ ಎಚ್ಚರಿಕೆ!
ಹೆಸರು ಹರ್ಷ. ಸಾಫ್ಟ್‍ವೇರ್ ಎಂಜಿನಿಯರ್. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿ (40). ಇವರ ಇಮೇಲ್‍ಗೆ ಒಂದು ಸಂದೇಶ ಬಂದಿತ್ತು. ಲಂಡನ್‍ನ ಬಿ.ಎಚ್. ಸಾಲಿಸಿಟರ್ ಸಾಫ್ಟ್‍ವೇರ್ ಕಂಪನಿಯಲ್ಲಿ ಉದ್ಯೋಗಾವಕಾಶವಿದೆ. ಮಾಸಿಕ 8 ಲಕ್ಷಕ್ಕೂ ಹೆಚ್ಚು ವೇತನ ಮತ್ತು ಇತರ ಸೌಲಭ್ಯವಿದೆ ಎಂದು ಇಮೇಲ್‍ನಲ್ಲಿ ಬರೆಯಲಾಗಿತ್ತು. ಹರ್ಷ ಅವರು ಇಮೇಲ್ ಮೂಲಕವೇ ಉದ್ಯೋಗಕ್ಕೆ ಸೇರಲು ಸಮ್ಮತಿಸಿದರು. ಫಾರಿನ್‍ಗೆ ಹೋಗಲು ವಿವಿಧ ಹಂತಗಳಲ್ಲಿ ಆ ಕಡೆಯಿಂದ ದುಡ್ಡು ಕೇಳಲಾಗಿದೆ. ಏಪ್ರಿಲ್‍ನಿಂದ ಆಕ್ಟೋಬರ್‍ವರೆಗೆ ವಿವಿಧ ಕಂತುಗಳಲ್ಲಿ ಹರ್ಷ 26.50 ಲಕ್ಷ ಪಾವತಿಸಿದ್ದಾರೆ. ನಂತರ ಆ ಕಡೆಯಿಂದ ಇಮೇಲ್ ಬರುವುದು ಸ್ಥಗಿತವಾಗಿದೆ. ಕಳೆದ ವರ್ಷ ಡಿ. 2ರಂದು ಈ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಹಲವು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಮೊಬೈಲ್, ಇಮೇಲ್ ಖಾತೆಗೆ ಉದ್ಯೋಗದ ಆಫರ್ ನೀಡುವ ಅನಾಮಿಕ ಸಂದೇಶಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಕ್ರೈಂ ಪೆÇಲೀಸರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ.


www.praveenputtur.com


Published in VK Mini


Monday 14 November 2016

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

ಆರೋಗ್ಯವಲಯದಲ್ಲಿ ಈಗ ಬೇಡಿಕೆಯಲ್ಲಿರುವ ಮತ್ತು ಮುಂದೆ ಬೇಡಿಕೆ ಪಡೆಯಲಿರುವ ವಿವಿಧ ಉದ್ಯೋಗಾವಕಾಶಗಳ ಮಾಹಿತಿ ಇಲ್ಲಿದೆ.

ಹೆಲ್ತ್‍ಕೇರ್ ಎಂದರೆ ಔಷಧ ಮತ್ತು ಚಿಕಿತ್ಸಾ ವಿಭಾಗ ಮಾತ್ರವಲ್ಲದೆ ಇವೆರಡಕ್ಕೂ ಬೆಂಬಲ ನೀಡುವ ವಿಭಾಗವೂ ಸೇರಿದೆ. ಡಾಕ್ಟರ್, ನರ್ಸ್ ಮಾತ್ರವಲ್ಲದೆ ಆರೋಗ್ಯ ಸೇವೆಗೆ ಸಂಬಂಧಪಟ್ಟ ಇತರ ಉದ್ಯೋಗಗಳೂ ಬೇಡಿಕೆ ಪಡೆಯುತ್ತಿವೆ. ಆರೋಗ್ಯ ಸೇವಾ ವಿಭಾಗಕ್ಕೆ ಪ್ರವೇಶ ಪಡೆಯಲು ಆಯಾ ವಿಭಾಗದ ವಿಶೇಷ ಕೌಶಲಗಳು ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವಾ ವಿಭಾಗಗಳಲ್ಲಿ ಬೇಡಿಕೆ ಪಡೆಯುವ ನಿರೀಕ್ಷೆಯಲ್ಲಿರುವ ಕೆಲವು ಹುದ್ದೆಗಳ ವಿವರ ಇಲ್ಲಿದೆ.

ಫಾರ್ಮಾಸಿಸ್ಟ್
ಔಷಧ ವಿಭಾಗದಲ್ಲಿ ಕೆಲಸ ಮಾಡುವ ಫಾರ್ಮಾಸಿಸ್ಟ್‍ಗಳಿಗೆ ಈಗಲೂ ಉತ್ತಮ ಬೇಡಿಕೆಯಿದೆ. ಮುಂದೆಯೂ ಬೇಡಿಕೆ ಇರುವ ನಿರೀಕ್ಷೆ ಇದೆ. ಔಷಧ ತಯಾರಿಕೆ ಮಾತ್ರವಲ್ಲದೆ ರೋಗಿಯೂ ಎಷ್ಟು ಪ್ರಮಾಣದಲ್ಲಿ ಔಷಧ ಸೇವಿಸಬೇಕೆಂಬ ಸಂಶೋಧನೆಯೂ ಫಾರ್ಮಾಸಿಸ್ಟ್ ಮಾಡಬೇಕಾಗುತ್ತದೆ. ಇದು ಹೊಸ ಬಗೆಯ ಉದ್ಯೋಗವಲ್ಲದೆ ಇದ್ದರೂ ಈಗ ಔಷಧೀಯ ಲೋಕದಲ್ಲಿ ಹೊಸ ಹೊಸ ಅನ್ವೇಷಣೆಗಳು, ಬದಲಾವಣೆಗಳು ಉಂಟಾಗುತ್ತಿರುವುದರಿಂದ ಫಾರ್ಮಾಸಿಸ್ಟ್ ಉದ್ಯೋಗವು ಹೊಸ ಆಯಾಮದತ್ತ ತೆರೆದುಕೊಳ್ಳುತ್ತಿದೆ. ಫಾರ್ಮಾಸಿಸ್ಟ್‍ಗಳು ಡಾಕ್ಟರ್‍ಗಳಿಗೆ ಔಷಧ ತಯಾರಿಸಿ ವಿತರಿಸುವ ಕೆಲಸಕ್ಕೆ ಮಾತ್ರ ಇರುವವರಲ್ಲ. ವೈದ್ಯಕೀಯ ಸಿಬ್ಬಂದಿಗಳಿಗೆ ಔಷಧ ಕುರಿತಾದ ಸಂದೇಹಗಳಿದ್ದರೆ ಪರಿಹರಿಸುವುದು, ಸಂಶೋಧನೆಗಳನ್ನು ಕೈಗೊಳ್ಳುವುದು, ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡಿ ಔಷಧಗಳ ಪರಿಣಾಮಗಳ ಕುರಿತು ನಿಗಾ ವಹಿಸುವುದೂ ಇವರ ಕೆಲಸವಾಗಿದೆ.
ಈ ಕ್ಷೇತ್ರದಲ್ಲಿ ಆರಂಭಿಕರಿಗೆ ಅಥವಾ ಫ್ರೆಷರ್ಸ್‍ಗಳಿಗೆ ಉತ್ತಮ ಬೇಡಿಕೆಯಿದೆ. ಈಗ ಶೇಕಡ 60ರಷ್ಟು ಫಾರ್ಮಾಸಿಸ್ಟ್ ಉದ್ಯೋಗವು ಎಂಟ್ರಿ ಲೆವೆಲ್ ಹಂತದಲ್ಲಿದೆ. ಉಳಿದ ಹುದ್ದೆಗಳು ಅನುಭವಿಗಳಿಗೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಫ್ರೆಷರ್ಸ್‍ಗಳು ವರ್ಷಕ್ಕೆ 1.5-3.5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ.

ಐಟಿ ಎಕ್ಸಿಕ್ಯೂಟಿವ್ಸ್
ಆರೋಗ್ಯ ಸೇವಾ ವಲಯದಲ್ಲಿ ಐಟಿ ಎಕ್ಸಿಕ್ಯೂಟಿವ್ಸ್‍ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಡೇಟಾ ಬೇಸ್, ಅಭಿವೃದ್ಧಿ, ಟೆಕ್ ಸಪೆÇೀರ್ಟ್ ಮತ್ತು ಸೊಲ್ಯುಷನ್ಸ್ ವಿಭಾಗಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಲ್ತ್‍ಕೇರ್ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಅಂತರ್ಗತ ಭಾಗವಾಗುತ್ತಿರುವುದರಿಂದ ಸಾಫ್ಟ್‍ವೇರ್ ಮತ್ತು ಐಟಿ ಅಡ್ಮಿನಿಸ್ಟ್ರೇಷನ್ ಮತ್ತು ಸಪೆÇೀರ್ಟ್ ವಿಭಾಗದಲ್ಲಿ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶೇಕಡ 55ರಷ್ಟು ಥಟಿ/ಟೆಕ್ ಉದ್ಯೋಗಗಳು ಮಧ್ಯಮ ಹಂತದಲ್ಲಿ ನೇಮಕವಾಗುತ್ತಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4 ಲಕ್ಷ ರೂಪಾಯಿ.

ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್
ಆರೋಗ್ಯ ಸೇವಾ ವಿಜ್ಞಾನದಲ್ಲಿ ಕ್ಲಿನಿಕಲ್ ರಿಸರ್ಚ್ ಎನ್ನುವ ಶಾಖೆಯು ಔಷಧಿಗಳ ಪರಿಣಾಮಕಾರಿ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು, ಆರೋಗ್ಯ ಸಾಧನಗಳು, ರೋಗನಿರ್ಣಯದ ಉತ್ಪನ್ನಗಳನ್ನು ಮತ್ತು ಚಿಕಿತ್ಸಾ ಕಟ್ಟುಪಾಡುಗಳನ್ನು ಪರಿಶೀಲಿಸಲು ಮತ್ತು ಸಂಶೋಧಿಸುವ ಕಾರ್ಯವನ್ನು ಮಾಡುತ್ತದೆ. ಈ ವಿಭಾಗದಲ್ಲಿ ಅಸೋಸಿಯೇಟ್‍ಗಳು ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುವ ಕಾರ್ಯವನ್ನು ಮಾಡುತ್ತಾರೆ. ಇವರು ಗುಡ್ ಕ್ಲಿನಿಕಲ್ ಪ್ರಾಕ್ಟೀಸ್(ಜಿಎಸ್‍ಪಿ) ಮತ್ತು ಇಂಟರ್‍ನ್ಯಾಷನಲ್ ಕಾನ್ಫರೆನ್ಸ್ ಆನ್ ಹಾಮೊನಿಸೇಷನ್ (ಐಸಿಎಚ್)ನ ಅಂತಾರಾಷ್ಟ್ರೀಯ ನಿಯಂತ್ರಣ ಮತ್ತು ನೈತಿಕ ಮಾರ್ಗದರ್ಶನದಡಿ ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 2 ವರ್ಷದವರೆಗೆ ಅನುಭವ ಇದ್ದವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 67ರಷ್ಟು ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್ ಉದ್ಯೋಗಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್
ರೋಗಿಯ ಕಾಳಜಿಗೆ ಸಂಬಂಧಪಟ್ಟಂತೆ ವಿವಿಧ ಅಂಶಗಳನ್ನು ನಿರ್ವಹಿಸುವ ಕೆಲಸನವನ್ನು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್‍ಗಳು ಮಾಡುತ್ತಾರೆ. ಸಮಸ್ಯೆ ಕಂಡುಹಿಡಿಯುವಿಕೆ, ಪರಿಹಾರ ಇತ್ಯಾದಿಗಳು ಇವರ ಕಾರ್ಯ. ಇವರು ಹೆಲ್ತ್‍ಕೇರ್ ವಲಯದ ಎಲ್ಲಾ ಯೂನಿಟ್‍ಗಳಲ್ಲಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷ ಅನುಭವ ಇರುವವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಶೇಕಡ 70ರಷ್ಟು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಷನ್ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿ ಇವೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-3 ಲಕ್ಷ ರೂಪಾಯಿ.

ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್
ವೈದ್ಯಕೀಯ ದಾಖಲೆಗಳನ್ನು ಬರೆಯುವುದು ಮತ್ತು ನಿರ್ವಹಣೆ ಮಾಡುವುದು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಕೆಲಸ. ಈ ರೀತಿ ಬರೆದಿಟ್ಟರೆ ಮತ್ತು ನಿರ್ವಹಣೆ ಮಾಡಿದರೆ ವೈದ್ಯಕೀಯ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ರೋಗಿಯ ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಅನ್ನು ಅಂತಿಮ ಹಂತದಲ್ಲಿ ಪ್ರೂಫ್‍ರೀಡಿಂಗ್ ಮತ್ತು ಎಡಿಟಿಂಗ್ ಕೆಲಸವನ್ನೂ ಇವರು ಮಾಡಬೇಕಾಗುತ್ತದೆ. ಈ ಉದ್ಯೋಗಕ್ಕೆ ಬರುವವರು ಉತ್ತಮ ಕೇಳುಗರಾಗಿರಬೇಕು ಮತ್ತು ಟೈಪಿಸ್ಟ್‍ಗಳಾಗಿರಬೇಕು. ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಉದ್ಯೋಗವನ್ನು ಮನೆಯಲ್ಲಿ ಕುಳಿತು ಮಾಡಲೂ ಅವಕಾಶವಿದೆ.
ಬೇಡಿಕೆ ಹೇಗಿದೆ?: ಸುಮಾರು 2 ವರ್ಷದವರೆಗೆ ಅನುಭವ ಇರುವವರಿಗೆ ಹೆಚ್ಚ ಬೇಡಿಕೆಯಿದೆ. ಶೇಕಡ 80ರಷ್ಟು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಹುದ್ದೆಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-2.5 ಲಕ್ಷ ರೂಪಾಯಿ.

ಅರಿವಳಿಕೆ ತಜ್ಞರು
ಮೆಡಿಕಲ್ ಅಪರೇಷನ್, ಸರ್ಜರಿ ನಡೆಸುವ ಮೊದಲು ಅಥವಾ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಗಳಿಗೆ ಅರಿವಳಿಕೆ ಕೊಡುವ ಕಾರ್ಯವನ್ನು ಅರಿವಳಿಕೆ ತಜ್ಞರು ಮಾಡುತ್ತಾರೆ. ಅರಿವಳಿಕೆಯು ಆರೋಗ್ಯ ಸೇವಾ ವಿಭಾಗದಲ್ಲಿ ಅತ್ಯಂತ ನಿರ್ಣಾಯಕ ವಿಭಾಗವಾಗಿರುವುದರಿಂದ ಉದ್ಯೋಗಾವಕಾಶ ಹೆಚ್ಚಿದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 70ರಷ್ಟು ಈ ಕ್ಷೇತ್ರದ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ರೇಡಿಯೋಗ್ರಾಫರ್ಸ್
ಎಕ್ಸ್‍ರೇ ಪರೀಕ್ಷೆ, ಮ್ಯಾಗ್ನೆಟಿಕ್ ರಿಸೊನೊನೆನ್ಸ್ ಇಮೇಜಿಂಗ್(ಎಂಆರ್‍ಐ) ಮತ್ತು ಕಂಪ್ಯೂಟೆಡ್ ಟೊಮೊಗ್ರಾಫಿ(ಸಿಟಿ) ಸ್ಕ್ಯಾನ್ ಇತ್ಯಾದಿ ಕಾರ್ಯವನ್ನು ರೇಡಿಯೋಲಾಜಿಕ್ ಟೆಕ್ನೊಲಾಜಿಸ್ಟ್‍ಗಳು ಮಾಡುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 5 ವರ್ಷದ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 60ರಷ್ಟು ರೇಡಿಯೋಗ್ರಾಫಿ ಉದ್ಯೋಗಗಳು ಎಂಟ್ರಿ ಲೆವೆಲ್ ಮತ್ತು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4ಲಕ್ಷ ರೂಪಾಯಿ.
Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.


 

Published in VK Mini

Thursday 20 October 2016

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

"ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ' ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. "ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ" ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ.


"ಇವತ್ತು ಡೇಟ್ ಎಷ್ಟು?' ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  "ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು' ಎಂದಿತ್ತು. ಸಮಯ ಹೋಗೋದೇ ಗೊತ್ತಾಗ್ತ ಇಲ್ಲ. ರಾಮ ರಾಮ' ಎಂದೆ. ಅದನ್ನೇ ಕಮಾಂಡ್ ಎಂದುಕೊಂಡ ರೋಬೊ "ರಾಮ ರಾಮ ಜಯರಾಮ, ರಘುರಾಮ' ಎಂದು ರಾಮ ಶ್ಲೋಕ ಹಾಡತೊಡಗಿತು. ಸ್ವಲ್ಪ ಹೊತ್ತು ಕೇಳುತ್ತ ಕುಳಿತೆ.


ಸರಿ, ಬಾತ್ ರೂಂಗೆ ಹೋಗಿ ಬರೋಣ ಎಂದು ಎದ್ದೆ. ಜೊತೆಗೆ ರೋಬೊನೂ ಬಂತು. "ಶೀ, ನೀನು ಹೊರಗೆ ಇರಪ್ಪ' ಎಂದೆ. "ನಿಮ್ಮ ಸೇವೆ ನನ್ನ ಕರ್ತವ್ಯ' ಎಂದು ಒಳಗೆ ಬಂತು. ಪ್ರತಿದಿನ ಇದೇ ಡೈಲಾಗ್ ಎಂದುಕೊಂಡು ಕುಳಿತುಕೊಂಡೆ. "ಸರಿಯಾದ ಪೊಸಿಷನ್ ನಲ್ಲಿ ಕುಳಿತುಕೊಳ್ಳಿ' ಆಜ್ಞಾಪಿಸಿತು. ಅದು ಹೇಳಿದಂತೆ ಕೇಳದೆ ಬೇರೆ ವಿಧಿಯಿಲ್ಲ. "ರೋಬೊ ಇಂಡಿಯಾ" ಪರಿಕಲ್ಪನೆ ಸರಿಯಾಗಿ ಜಾರಿಯಾಗಿದೆ ಎಂದುಕೊಂಡೆ.


'ಯಾವ ಪೇಪರ್ ಓದಲು ಇಷ್ಟಪಡುವಿರಿ' ಅದೇ ಮಾಮೂಲಿ ಡೈಲಾಗ್. ಇದನ್ನು ಪ್ರೋಗ್ರಾಮ್ ಮಾಡಿದವ ಸಿಕ್ಕರೆ ಸಾಯಿಸಿಬಿಡುತ್ತಿದ್ದೆ. "ಮರ್ಡರ್ ಬಗ್ಗೆ ಯೋಚನೆ ಮಾಡುವುದು ಅಪರಾಧ' ಎಂದಿತು ರೋಬೊ. ಇದಕ್ಕೆ ಮೈಂಡ್ ರೀಡಿಂಗ್ ಸಹ ಗೊತ್ತು. ಇನ್ನೊಮ್ಮೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೋ ಏನೋ.


"ಪೇಪರ್ ಆಮೇಲೆ ಓದ್ತಿನಿ. ಕನ್ನಡ ಚಿತ್ರಗೀತೆ ಹಾಕಪ್ಪ' ಅಂದೆ. ತಕ್ಷಣ ಅದು ಯಾವುದೋ ಹಾಡು ಹಾಕಿತು. ನಾನು ಬೇಡವೆಂದು ತಲೆಯಾಡಿಸಿದರೆ ಬೇರೆ ಹಾಡುಬರುತ್ತಿತ್ತು. ಈಗ ಕನ್ನಡ ಹಾಡುಗಳಲ್ಲಿ ಕನ್ನಡ ಪದ ಹುಡುಕಬೇಕು ಎಂದು ಗೊಣಗಿದೆ. ಅದಕ್ಕೆ ರೋಬೊ "ಪ್ಲೀಸ್ ರಿಪೀಟ್ ಯುವರ್ ಕಮಾಂಡ್' ಅಂತು. "ಏನಿಲ್ಲ ಮುಗೀತು' ಅಂದೆ. ಅದು ಟಿಶ್ಯು ತಂದುಕೊಡ್ತು. ಟಾಯ್ಲೆಟ್ ನಲ್ಲಿ ನೀರು ಬಳಸುವುದು ಅಪರಾಧ ಅಂತ ಗ್ಲೋಬಲ್ ಐಟಿ ಕೋರ್ಟ್ ಬೇರೆ ಇತ್ತೀಚೆಗೆ ತೀರ್ಪು ನೀಡಿದೆ. .


ಅಲ್ಲಿಂದ ಹೊರಗೆ ಬಂದೆ. ರೋಬೊ ಅಲ್ಲೇ ಪಕ್ಕದಲ್ಲಿದ್ದ ಮೆಷಿನ್ ಒಳಗಿನಿಂದ ಒಂದು ಲೋಟ ಚಹಾ ತಂದುಕೊಡ್ತು. ಕುಡಿದಾಗ ಹಾಯೆನಿಸಿತ್ತು. "ಏನಪ್ಪ ಇವತ್ತಿನ ಸುದ್ದಿ?" ಅಂದೆ. ರೋಬೊ ಕೈಬೆರಳಿನಿಂದ ಬೆಳಕು ಹೊರಗೆ ಬಂದು ಗೋಡೆ ಮೇಲೆ ಬಿತ್ತು. ನೂರಾರು ಇಂಗ್ಲಿಷ್ ಪೇಪರ್ ಗಳ ಹೆಸರು ಪಟಪಟನೆ ಮೂಡಿದವು. ಕನ್ನಡ ಪೇಪರ್ ಅಂದ್ರೆ ಈ ರೋಬೊಗೂ ತಾತ್ಸಾರ. ವಿಜಯ ಕರ್ನಾಟಕ ಹಾಕಪ್ಪ ಅಂದೆ. ಸ್ವಲ್ಪ ಸ್ಲೋ ಆಗಿ ಲೋಡ್ ಆಯ್ತು. ಕನ್ನಡ ಪೇಪರ್ ಗಳೆಲ್ಲ ಸ್ಲೋ ಆಗಿಯೇ ಲೋಡ್ ಆಗೋದು. ಅದು ಈ ರೋಬೊ ಕುತಂತ್ರ ಆಗಿರಬೇಕು.


ವಿಜಯ ಕರ್ನಾಟಕ ಗೋಡೆ ಮೇಲೆ ಮೂಡಿತು. ರಾಜ್ಯದಲ್ಲಿ ವೈಫೈ ಉಚಿತ ಅಂತ ಮುಖ್ಯಮಂತ್ರಿ ಘೋಷಣೆ ಮಾಡಿದ್ರು. ಅಕ್ಕಿ ಬೆಲೆ ಇಳಿಕೆ ಎಂದಿತ್ತು. ಅದನ್ನು ನೋಡಿ ಖುಷಿಯಾಯ್ತು. ಒಂದು ಕೇಜಿ ಅಕ್ಕಿ ದರ 12 ಸಾವಿರಕ್ಕೆ ಇಳಿದಿತ್ತು. ಕೆಲವು ದಿನದ ಹಿಂದೆ ಅಕ್ಕಿ ರೇಟ್ ಕೇಜಿಗೆ 18 ಸಾವಿರ ರೂ. ಇತ್ತು. ದುಡ್ಡಿಗೆ ಬೆಲೆ ಇಲ್ಲ. ಒಂದೊಂದು ಸುದ್ದಿನ ನೋಡಿದಾಗ ಅದು ಝೂಮ್ ಆಗುತ್ತಿತ್ತು. ಏನೋ ಗೆಶ್ಚರ್ ಟೆಕ್ನಾಲಜಿಯಂತೆ. ನಾನು ದೂರದಿಂದಲೇ ಕೈಯಾಡಿಸಿದರೆ ಸುದ್ದಿ ಬೇಕಾದಂತೆ ಬದಲಾಗುತ್ತಿತ್ತು. ನಾನು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗಿರಲಿಲ್ಲ. ಚೆನ್ನಾಗಿ ಹತ್ತಿಪ್ಪತ್ತು ಪುಟಗಳ ಪೇಪರ್ ಬರುತ್ತಿತ್ತು. ಈಗ ಪೇಪರ್ ಕತೆ ಹೇಳಿದರೆ ಮಗ ನಗುತ್ತಾನೆ. ಈಗ ಅದೇ ವಿನ್ಯಾಸದ ಪೇಪರ್ ಗೋಡೆ ಮೇಲೆ ಮೂಡುತ್ತದೆ.


ಸರಿ, ನಾನು ವಾಕಿಂಗ್ ಹೋಗಿ ಬರ್ತಿನಿ ಅಂತ ಎದ್ದು ಹೋದೆ. ಓಕೆ ಅಂತ ಹೇಳಿತು ರೋಬೊ. ಸದ್ಯ ಇದರ ಸಹವಾಸ ತಪ್ಪಿತು ಅಂತ ಹೊರಗೆ ಬಂದೆ. ಹೆಸರಿಗಷ್ಟೇ ಪಾರ್ಕ್. ಎಲ್ಲವೂ ಗಿಡಗಳ ಕಾಂಕ್ರಿಟ್  ಕಲಾಕೃತಿಗಳು. ಒಂದೆಡೆ ಆಮ್ಲಜನಕ ಸಿಂಪಡಣೆ ಬೇರೆ. ಕೈನಲ್ಲಿದ್ದ ವಾಚ್ ವೈಬ್ರೆಟ್ ಆಯ್ತು. ಪಾರ್ಕ್ ಬೆಂಚ್ ಮೇಲೆ ವಾಚ್ ಪೋಕಸ್ ಮಾಡಿದೆ. ಅಲ್ಲಿ ಮೂಡಿದ ಪರದೆ ಮೇಲೆ ಗೆಳೆಯ ಸೂರ್ಯ ಇದ್ದ. ಅವನು ಆಗಾಗ ಚಾಟಿಂಗ್ ಗೆ ಬರುತ್ತಾನೆ. ಆತ ನನ್ನ ಕ್ಲಾಸ್ ಮೇಟ್. ನಾನು ವಿಜಯ ನೆಕ್ಸ್ಟ್ ವೀಕ್ಲಿಯಲ್ಲಿದ್ದಾಗ ಅವನು ಪ್ರಜಾವಾಣಿಯಲ್ಲಿದ್ದ.


"ಹೇ, ದನಿಕುಲೆ, ದಾನೆ ಮಾರಾಯ ಸುದ್ದಿನೇ ಇಜ್ಜಿ(ಏನು ಧನಿಗಳೇ ಸುದ್ದಿನೇ ಇಲ್ಲ)' ಅಂದ. "ಎಂಚಿ ಸಾವು ಮಾರೆ, ಬೋರ್ ಲೈಫ್' ಅಂದೆ. ಹೆಚ್ಚಾಗಿ ನಾವು ತುಳುವಿನಲ್ಲೇ ಮಾತಾಡೋದು. ತುಳು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ರೋಬೊ ಇನ್ನೂ ಬಂದಿಲ್ಲ. ರೋಬೊ ಭಾಷೆಗೆ ತುಳುವನ್ನು ಸೇರಿಸಬೇಕು ಎಂದು ದೆಹಲಿಯಲ್ಲಿ ಈಗಲೂ ಹೋರಾಟ ನಡೆಯುತ್ತಲೇ ಇದೆ.


ನಾವು ತುಳುವಿನಲ್ಲೇ ಮಾತು ಮುಂದುವರೆಸಿದೆವು. ಅದರ ಕನ್ನಡ ಅನುವಾದ ಹೀಗಿದೆ. "ಸೂರ್ಯ ನಿನ್ನ ಮಗ ಮಾರ್ಸ್ ನಿಂದ ಯಾವಾಗ ವಾಪಸ್ ಬರ್ತಾನೆ' ಎಂದೆ. "ಅವನನ್ನು ಬಿಡಪ್ಪ. ಅಲ್ಲೇ ಹೋಗಿ ಸೆಟ್ಲ್ ಆದರೂ ಆದನು' ಎಂದ. ಸೂರ್ಯನ ಮಗ ನಾಸಾದಲ್ಲಿ ಕೆಲಸ ಮಾಡೋದು. ಒಮ್ಮೆ ಮಾರ್ಸ್, ಒಮ್ಮೆ ಲೂನಾರ್ಸ್ ಅಂತ ವರ್ಷಕ್ಕೆ ಎರಡು ಬಾರಿ ಟ್ರಿಪ್ ಹೋಗ್ತಾ ಇರ್ತಾನೆ. "ನನ್ನನ್ನೂ ಲೂನಾರ್ಸ್ ಗೆ ಕರ್ಕೊಂಡು ಹೋಗ್ತಾನಂತೆ' ಎಂದು  ಸೂರ್ಯ. "ನೀನು ಬಿಡಪ್ಪ ನಿನ್ನ ಹೆಸರೇ ಸೂರ್ಯ, ಎಲ್ಲಾ ಗ್ರಹಗಳು ನಿನ್ನ ಸುತ್ತ ಸುತ್ತುತ್ತಿವೆ' ಅಂದೆ. "ಹ್ಹ ಹ್ಹ ಹ್ಹ' ಗಹಿಗಹಿಸಿ ನಕ್ಕ' ಅವನ ನಗುವೇ ಹಾಗೆ. ಕ್ಲಾಸಲ್ಲಿ ಪಾಠ ನಡೆಯುವಾಗಲೂ ಹೀಗೆ ಅಟ್ಟಹಾಸ ಮಾಡುತ್ತಿದ್ದ.


"ವಿಷ್ಯ ಗೊತ್ತಾಯ್ತ' ಅವನು ಬ್ರೇಕಿಂಗ್ ನ್ಯೂಸೊಂದು ಹೇಳಿದ. "ಗ್ಯಾಲಾಕ್ಸಿಯಲ್ಲಿ ತುಂಬಾ ನೀರಿರುವ ಒಂದು ಗ್ರಹ ಸಿಕ್ಕಿದೆಯಂತೆ. ಇಲ್ಲಿರುವ ಎಲ್ಲಾ ಓಲ್ಡ್ ಪೀಪಲ್ ಗಳನ್ನು ಅಲ್ಲಿಗೆ ಕಲಿಸ್ತಾರಂತೆ. ನಾಸಾದಲ್ಲಿ ಈ ಪ್ರಾಜೆಕ್ಟ್ ನಡೀತಾ ಇದೆ. ನಾವೇಲ್ಲ ಬೇಗ ಆ ಗ್ರಹಕ್ಕೆ ಹೋಗೋದು ಗ್ಯಾರಂಟಿ' ಅಂದ.


ಯಾರು ಬೇಕಾದರೂ ಹೋಗ್ಲಿ. ನಾನು ಮಾತ್ರ ಪುತ್ತೂರಲ್ಲೇ ಸಾಯೋದು ಅಂದೆ. ಮತ್ತೆ ಹ್ಹ ಹ್ಹ ಎಂದು ನಕ್ಕ ಸೂರ್ಯ "ಸರಿ, ನಾನು ಆಮೇಲೆ ಸಿಗ್ತಿನಿ. ರೋಬೊ ವಿಶ್ವಕಪ್ ಫುಟ್ಬಾಲ್ ನೋಡ್ಬೇಕು' ಅಂತ ಹೇಳಿ ಮರೆಯಾದ.


ಕತೆ ತುಂಬಾ ಉದ್ದ ಆಯ್ತು. ಸದ್ಯ ಇಷ್ಟು ಸಾಕು ;-).

ಒಂದು ವಾಕ್ಯಗಳು: ಸ್ನೇಹಿತೆಯ ಖಾಲಿ ಎಸ್ಎಂಎಸ್

ಒಂದು ವಾಕ್ಯಗಳು: ಸ್ನೇಹಿತೆಯ ಖಾಲಿ ಎಸ್ಎಂಎಸ್

* ಅರ್ಧ ಗಂಟೆಯಿಂದ ಸ್ನೇಹಿತೆ ಕಳುಹಿಸಿದ ಖಾಲಿ ಎಸ್ಎಂಎಸ್ ಓದುತ್ತಿದ್ದ.


* ಇಂಟರ್ನೆಟ್ನಲ್ಲಿ ಎಲ್ಲವೂ ಸಿಗುತ್ತೆ ಎಂದು ಹೇಳಿದ ಮಗನ ಮಾತು ನೆನಪಿಗೆ ಬಂದು ಮಗನ ಹುಡುಕಿದಳು.


* ಪಕ್ಕದ ಮನೆಯಲ್ಲಿ ಮಗು ಅಳುವುದನ್ನು ಕೇಳಿ ಇವಳು ಅತ್ತಳು.


* ಕೆಲವು ಹಕ್ಕಿಗಳು ಗೂಡು ಕಟ್ಟದೆ, ಮನೆಯ ಮಾಡಿನಲ್ಲಿ ಒಂದೆರಡು ದಿನ ಕುಳಿತು ಹಾರಿ ಹೋಗುತ್ತವೆ.


* ಅವಳು ಆನ್ ಲೈನ್ ಗೆ ಬರೋದನ್ನೇ ಕಾಯುತ್ತಿದ್ದ ಅವನಿಗೆ ಅವಳು ಆಫ್ ಲೈನಲ್ಲಿ ಚಾಟ್ ಮಾಡುತ್ತಿದ್ದ ಸಂಗತಿ ಗೊತ್ತಾಗಲೇ ಇಲ್ಲ.


* ದಯಾಮರಣ ಕಾನೂನು ಸಮ್ಮತವಾಗಿದ್ದರೆ ಇವರನ್ನು ಮುಗಿಸಿಬಿಡಬಹುದಿತ್ತು ಎಂಬ ಗುಸುಗುಸು ಕೇಳಿಸಿಕೊಂಡ ಅಜ್ಜ ಆಸ್ತಿಯನ್ನೆಲ್ಲ ಅನಾಥಶ್ರಮಕ್ಕೆ ಬರೆದುಬಿಟ್ಟ.



ಬೇರೆ ವಾಕ್ಯಗಳು






ನಿನ್ನ ನೆನಪು

ಸೂಜಿಮೊನೆ

ಎದೆಯಲ್ಲಿ ಚುಚ್ಚಿದ ಹಾಗೆ

ಯಾತನೆ


ಹೆಜ್ಜೆ

ಅವಳ ಹೆಜ್ಜೆ ಸದ್ದಾಗುವುದಿಲ್ಲ

ಆದರೆ

ಅವಳ ಕಾಲ್ಗೆಜ್ಜೆ

ಸುಮ್ಮನಿರುವುದಿಲ್ಲ


ತಾಳ

ಅಂದಿನ

ಹುಡುಗಿಯರ ಹೆಜ್ಜೆಗೆ

ಗೆಜ್ಜೆಯ ಸದ್ದಾಗಿತ್ತು ತಾಳ

ಇಂದಿನ

ಹುಡುಗಿಯರ ಹೆಜ್ಜೆಗೆ

ಹೈಹೀಲ್ಡ್‌ನ ಸದ್ದೇ

ಬ್ಯಾಂಡುಮೇಳ

ಒಂದು ವಾಕ್ಯಗಳು: ಅಮ್ಮನೊಳಗಿನ ಅತ್ತೆ

ಒಂದು ವಾಕ್ಯಗಳು: ಅಮ್ಮನೊಳಗಿನ ಅತ್ತೆ

* ಅಮ್ಮನೊಳಗಿನ ಅತ್ತೆಯನ್ನು ಕಂಡ ಮಗ ಬೆಚ್ಚಿದ.


* ಲಕ್ಷುರಿ ಹೋಟೆಲ್ ನಲ್ಲಿ ನಾವು ತಿಂದ ಕೂಳಿನಲ್ಲಿ ಸೆಕ್ಯೂರಿಟಿ ನೀಡಿದ ಸೆಲ್ಯೂಟ್ ಕೂಲಿಯೂ ಸೇರಿರುತ್ತದೆ.


* ಫೇಸ್ಬುಕ್ಕಿನಲ್ಲಿ ಸಾವಿರಾರು ಲೈಕುಗಳಿಗೆ ವಾರಸುದಾರನಾಗಿದ್ದವನಿಗೆ ಮನೆಯಲ್ಲಿ, ಊರಲ್ಲಿ ಸ್ನೇಹಿತರೇ ಇಲ್ಲ!


* ಈ ವರ್ಷ ಚಳಿ ಜಾಸ್ತಿ ಎಂದವನ ಮುಖದಲ್ಲಿ "ಮದುವೆಯಾಗೋಣ್ವ' ಎಂಬ ಕೋರಿಕೆಯೊಂದನ್ನು ಕಂಡಳು.

Tuesday 4 October 2016

ಸಿವಿ ಬರೆಯುವ ಶೈಲಿ ಹೇಗಿರಬೇಕು?

ಸಿವಿ ಬರೆಯುವ ಶೈಲಿ ಹೇಗಿರಬೇಕು?

ರೆಸ್ಯೂಂ ಅಥವಾ ಸಿವಿಯನ್ನು ಸಂಕ್ಷಿಪ್ತವಾಗಿ ಮತ್ತು ಸುಲಭವಾಗಿ ಓದಲು ಸಾಧ್ಯವಾಗುವಂತಹ ಶೈಲಿಯಲ್ಲಿ ಬರೆಯಬೇಕು. ಅದಕ್ಕಾಗಿ ಸೂಕ್ತವಾದ, ಪರಿಣಾಮಕಾರಿ ಪದಗಳ ಬಳಕೆ ಮಾಡಬೇಕು. ನೀವು ಈ ಹಿಂದಿನ ಉದ್ಯೋಗದಲ್ಲಿ ಏನು ಸಾಧನೆ ಮಾಡಿದ್ದೀರಿ ಇತ್ಯಾದಿ ವಿಷಯಗಳ ಬಗ್ಗೆ ಬರೆಯುವಾಗ ಆದಷ್ಟು ಆಕರ್ಷಕವಾಗಿ ಬರೆಯಲು ಪ್ರಯತ್ನಿಸಿ. ಎಲ್ಲಾ ಬರೆದ ನಂತರ ಯಾವುದಾದರೂ ಕಾಗುಣಿತ ಅಥವಾ ವ್ಯಾಕರಣ ತಪ್ಪುಗಳನ್ನು ಮಾಡಿದ್ದೀರಾ ಎಂದು ಪರಿಶೀಲಿಸಿ. ತಪ್ಪಿಲ್ಲದಂತೆ ಬರೆದು ಕಳುಹಿಸಿ.
ಸಿವಿಯಲ್ಲಿ ಎಷ್ಟು ವರ್ಷ ಹಳೆಯ ಮಾಹಿತಿಯನ್ನು ಬರೆಯಬೇಕು?

ಸಿವಿಯಲ್ಲಿ ಎಷ್ಟು ವರ್ಷ ಹಳೆಯ ಮಾಹಿತಿಯನ್ನು ಬರೆಯಬೇಕು?

ಗರಿಷ್ಠವೆಂದರೆ ಹತ್ತು ವರ್ಷ ಹಿಂದಿನ ಮಾಹಿತಿ ಬರೆದರೆ ಸಾಕು. ಇದು ಶಿಕ್ಷಣ ಮಾಹಿತಿಗೆ ಅಷ್ಟಾಗಿ ಅನ್ವಯವಾಗುವುದಿಲ್ಲ. 1ರಿಂದ 10ನೇ ತರಗತಿ ಇತ್ಯಾದಿ ಮಾಹಿತಿ ಅವಶ್ಯವಿದ್ದಲ್ಲಿ ಬರೆಯಬೇಕಾದೀತು. ಆದರೆ, ಉದ್ಯೋಗ ಅನುಭವ ಇತ್ಯಾದಿಗಳಲ್ಲಿ ಬಹಳಷ್ಟು ಹಳೆಯ ಮಾಹಿತಿಗಳು ಈಗಿನ ಕಾಲಕ್ಕೆ ಔಟ್‍ಡೇಟೆಡ್ ಆಗಿರುತ್ತದೆ. ಎಲ್ಲಾದರೂ ಒಂದೇ ವಾಕ್ಯದಲ್ಲಿ 25 ವರ್ಷಗಳ ಕೆಲಸದ ಅನುಭವ ಇದೆ ಎಂದು ಬರೆಯಬಹುದು.
ನನ್ನ ಸಿವಿಯನ್ನು ಉದ್ಯೋಗದಾತರು ಓದದೆ ಇದ್ದರೆ?

ನನ್ನ ಸಿವಿಯನ್ನು ಉದ್ಯೋಗದಾತರು ಓದದೆ ಇದ್ದರೆ?

ಬಹುತೇಕ ಕಂಪನಿಗಳು ನಿಮ್ಮ ಸಿವಿಯನ್ನು ಮೊದಲು ಓದುವುದಿಲ್ಲ. ಕಣ್ಣೋಟದಲ್ಲಿಯೇ ಜಸ್ಟ್ ಸ್ಕ್ಯಾನ್ ಮಾಡುತ್ತಾರೆ. ಇದಕ್ಕಾಗಿ ನೀವು ಸಣ್ಣ ಸಣ್ಣ ವಾಕ್ಯಗಳಲ್ಲಿ ಬರೆದಿರಬೇಕು. ಅನಗತ್ಯ ಮಾಹಿತಿ ಬರೆದಿರಬಾರದು. ಕೀವಡ್ರ್ಸ್ ಬರೆಯಲು ಮರೆತಿರಬಾರದು. ಮಾಹಿತಿಗಳನ್ನು ನೀಟಾಗಿ ಜೋಡಿಸಿರಬೇಕು. ನಿಮ್ಮ ಸ್ಕಿಲ್‍ಗಳ ಮಾಹಿತಿ ಹುಡುಕಲು ಕಂಪನಿಯ ವ್ಯಕ್ತಿ ಹೆಚ್ಚು ತ್ರಾಸ ಪಡುವಂತೆ ಇರಬಾರದು. ಕಣ್ಣಿಗೆ ಹಿತವಾಗಿರುವಂತಹ ಫಾಂಟ್ ಮತ್ತು ಟೆಕ್ಸ್ಟ್‍ಗಳನ್ನು ಬಳಸಿರಿ. ಸಕಾರಾತ್ಮಕ ಭಾಷೆಯಲ್ಲಿ ಬರೆಯಿರಿ. ಅನಗತ್ಯ ಮಾಹಿತಿಗಳಿಗೆಲ್ಲ ಕತ್ತರಿ ಹಾಕಿ. ಅಗತ್ಯವಾದ ವಿಷಯಗಳನ್ನು ಮಾತ್ರ ಸಿವಿ ಅಥವಾ ರೆಸ್ಯೂಂನಲ್ಲಿ ಬರೆಯಿರಿ.
ಹವ್ಯಾಸ, ವೈಯಕ್ತಿಕ ಆಸಕ್ತಿಗಳ ಕುರಿತು ಬರೆಯಬೇಕೆ?

ಹವ್ಯಾಸ, ವೈಯಕ್ತಿಕ ಆಸಕ್ತಿಗಳ ಕುರಿತು ಬರೆಯಬೇಕೆ?

ರೆಸ್ಯೂಂ ಅಥವಾ ಸಿವಿಯಲ್ಲಿ ನಿಮ್ಮ ಹವ್ಯಾಸ ಇತ್ಯಾದಿಗಳನ್ನು ಬರೆಯುವ ಅಗತ್ಯವಿಲ್ಲ. ನಿಮ್ಮ ರೆಸ್ಯೂಂ ಓಕೆ ಆದ ನಂತರ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಲು ಸಂದರ್ಶನದಲ್ಲಿ ಈ ಕುರಿತು ಪ್ರಶ್ನೆಗಳನ್ನು ಸಂದರ್ಶಕರು ಕೇಳಬಹುದು. ಆ ಸಮಯದಲ್ಲಿ ಏನೇಲ್ಲ ಹೇಳಬೇಕೆಂದು ಸಿದ್ಧತೆ ನಡೆಸಿ.
ಸಿವಿಯಲ್ಲಿ ಶಿಕ್ಷಣ ಮಾಹಿತಿಯನ್ನು ಮೊದಲೇ ಬರೆಯಬೇಕೆ?

ಸಿವಿಯಲ್ಲಿ ಶಿಕ್ಷಣ ಮಾಹಿತಿಯನ್ನು ಮೊದಲೇ ಬರೆಯಬೇಕೆ?

ನೀವು ಇತ್ತೀಚೆಗೆ ಶಿಕ್ಷಣ ಮುಗಿಸಿದ್ದರೆ ನಿಮ್ಮ ಅಕಾಡೆಮಿಕ್ ಅಚೀವ್‍ಮೆಂಟ್ ಅನ್ನು ರೆಸ್ಯೂಂ ಅಥವಾ ಸಿವಿಯಲ್ಲಿ ಹೆಚ್ಚು ಹೈಲೈಟ್ ಮಾಡಬಹುದು. ಅದಕ್ಕಾಗಿ ಶಿಕ್ಷಣ ಮಾಹಿತಿಯನ್ನು ಮೊದಲು ನೀಡಲೇಬೇಕು. ಪದವಿ ಜೊತೆಗೆ ನೀವು ಮಾಡಿರುವ ಇಂಟರ್ನ್‍ಷಿಪ್ ಇತ್ಯಾದಿಗಳ ಮಾಹಿತಿಯನ್ನು ನೀಡಲು ಮರೆಯಬೇಡಿ. ನೀವು ಕೆಲಸದಲ್ಲಿ ಸಾಕಷ್ಟು ಅನುಭವ ಪಡೆದಿದ್ದರೆ ನಿಮ್ಮ ಈಗಿನ ಉದ್ಯೋಗ ಮಾಹಿತಿಯನ್ನು ಹೈಲೈಟ್ ಮಾಡಬಹುದು.
ಸ್ವಚ್ಛವಾಗಿರಲಿ ಸೋಷಿಯಲ್ ಮೀಡಿಯಾ

ಸ್ವಚ್ಛವಾಗಿರಲಿ ಸೋಷಿಯಲ್ ಮೀಡಿಯಾ

ನಿಮ್ಮ ಫೇಸ್‍ಬುಕ್, ಲಿಂಕ್ಡ್‍ಇನ್, ಟ್ವಿಟ್ಟರ್ ಖಾತೆಗಳಿಗೆ ಉದ್ಯೋಗದಾತರು ಆಗಾಗ ಭೇಟಿ ನೀಡುತ್ತಿರುತ್ತಾರೆ. ಅದಕ್ಕಾಗಿ ಅವುಗಳನ್ನು ನೀಟಾಗಿಟ್ಟಿರಿ.

* ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದ ಮೌಲ್ಯಯುತವೆನಿಸುವ ಸ್ಟೇಟಸ್, ಅಪ್‍ಡೇಟ್‍ಗಳು ಮಾತ್ರ ಇರಲಿ.
* ಫೇಸ್‍ಬುಕ್‍ನಲ್ಲಿ ಸಿಕ್ಕಸಿಕ್ಕವುಗಳನ್ನೆಲ್ಲ ಶೇರ್ ಮಾಡಬೇಡಿ. ಶೇರ್ ಮಾಡಿದ್ದರೂ ಕೆಲವೇ ದಿನಗಳಲ್ಲಿ ಅವುಗಳನ್ನೆಲ್ಲ ಡಿಲೀಟ್ ಮಾಡಿಬಿಡಿ.
* ಅನವಶ್ಯಕವಾಗಿ ಯಾರಾದರೂ ಟ್ಯಾಗ್ ಮಾಡಿದ್ದರೆ ಅದನ್ನು ನಿಮ್ಮ ಟೈಮ್ ಲೈನ್‍ನಿಂದ ರಿಮೂವ್ ಮಾಡಿರಿ. ನೀವೂ ಇತರರಿಗೆ ಟ್ಯಾಗ್ ಮಾಡಬೇಡಿ.
* ಪ್ರೊಫೈಲ್ನಲ್ಲಿ ನೀವು ನೀಡುವ ಮಾಹಿತಿಗಳು ರೆಸ್ಯೂಂನಂತೆ ಇರಲಿ. ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳುವಂತೆ ಇರಲಿ.
* ಟ್ವಿಟ್ಟರ್‍ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಬರೆಯಲು ಸೀಮಿತ ಸ್ಥಳಾವಕಾಶ ಇರುತ್ತದೆ. ಅಲ್ಲಿ ನಿಮ್ಮ ವೃತ್ತಿ, ಹವ್ಯಾಸ, ಆಸಕ್ತಿಗಳ ಬಗ್ಗೆ ನಾಲ್ಕು ಲೈನ್ ಬರೆಯಿರಿ. ನಿಮ್ಮ ಬ್ಲಾಗ್ ಇತ್ಯಾದಿಗಳ ಲಿಂಕ್ ನೀಡಿರಿ.
* ಟ್ವಿಟರ್, ಫೇಸ್‍ಬುಕ್, ಲಿಂಕ್ಡ್‍ಇನ್‍ಗಳಲ್ಲಿ ಪೆÇ್ರಫೆಷನಲ್ ಆಗಿ ಕಾಣಿಸುವಂತಹ ಫೋಟೋ ಹಾಕಿ.
* ಲಿಂಕ್ಡ್‍ಇನ್‍ನಲ್ಲಿ ಎಲ್ಲಾ ಮಾಹಿತಿಗಳನ್ನು ಬರೆಯಿರಿ. ಅಲ್ಲಿ ನಿಮ್ಮ ಪೆÇ್ರಫೈಲ್ ಹೇಗೆ ಕಾಣಿಸುತ್ತದೆ ಎಂದು ನೋಡಿ. ಪ್ರೊಫೈಲ್ ಅಂದಗೆಡಿಸುವ ಅಂಶಗಳನ್ನೆಲ್ಲ ಡಿಲೀಟ್ ಮಾಡಿ.
* ನಿಮ್ಮ ಸೋಷಿಯಲ್ ನೆಟ್‍ವರ್ಕಿಂಗ್ ತಾಣಕ್ಕೆ ಯಾರಾದರೂ ಭೇಟಿ ನೀಡಿದಾಗ ಅವರ ಮನಸಿಗೆ ಮುದ ನೀಡುವಂತೆ ನಿಮ್ಮ ಪ್ರೊಫೈಲ್ ಇರಲಿ.
ಆನ್‍ಲೈನ್ ತಾಣಗಳಲ್ಲಿ ಕಾಗುಣಿತಕ್ಕೆ ಕೊಕ್

ಆನ್‍ಲೈನ್ ತಾಣಗಳಲ್ಲಿ ಕಾಗುಣಿತಕ್ಕೆ ಕೊಕ್

ಆನ್‍ಲೈನ್ ತಾಣಗಳಲ್ಲಿ ನೀವು ಬರೆಯುವಾಗ ಕಾಗುಣಿತ ತಪ್ಪು ಮಾಡಿದರೆ ಅದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಅಥವಾ ಉದ್ಯೋಗಕ್ಕೆ ಕುತ್ತಾಗಬಹುದು.
* ಫೇಸ್‍ಬುಕ್, ಟ್ವಿಟ್ಟರ್, ವಾಟ್ಸ್‍ಆ್ಯಪ್‍ಗಳಲ್ಲಿ ಉದ್ಯೋಗ ಅಥವಾ ವ್ಯವಹಾರ ಕುರಿತು ಸಂವಹನ ನಡೆಸುವಾಗ ಕಾಗುಣಿತ ತಪ್ಪು ಮಾಡಬೇಡಿ. ಇದರಿಂದ ನಿಮ್ಮ ಬಗ್ಗೆ ಇತರರು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ.
* ಉದ್ಯೋಗ ಅಥವಾ ವ್ಯವಹಾರ ಸಂಬಂಧಿತವಾಗಿ ನೀವು ಯಾರಿಗಾದಾರೂ ಇಮೇಲ್ ಮಾಡಬೇಕು ಎಂದಿರಲಿ. ಡಿಯರ್ ಸರ್ ಅಥವಾ ಮೇಡಂ ಎಂದು ಬರೆದು ಅವರ ಹೆಸರು ಬರೆಯುತ್ತೀರಿ. ಆದರೆ, ಆ ವ್ಯಕ್ತಿಯ ಹೆಸರನ್ನು ಸರಿಯಾಗಿ ಬರೆಯುವಿರಾ? ಸ್ಪೆಲ್ಲಿಂಗ್ ಚೆಕ್ ಮಾಡಿಕೊಳ್ಳುತ್ತೀರಾ? ನೀವು ಯಾರಾದರೂ ವ್ಯಕ್ತಿಯ ಹೆಸರನ್ನು ತಪ್ಪು ಬರೆದರೆ ಅದು ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ!
* ಹೆಸರಿನ ಸ್ಪೆಲ್ಲಿಂಗ್ ತಪ್ಪು ಮಾಡುವುದರಿಂದ ಕೆಲವೊಮ್ಮೆ ಭಿನ್ನ ಅರ್ಥ ಉಂಟಾಗಬಹುದು. ತನ್ನ ಹೆಸರನ್ನು ವಿಚಿತ್ರವಾಗಿ ಬರೆದ ವ್ಯಕ್ತಿಯ ಬಗೆಗೆ ಇಮೇಲ್ ಸ್ವೀಕೃತರಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಹೆಸರನ್ನು ತಪ್ಪಾಗಿ ಬರೆದರೆ `ಇದು ನನಗಾದ ಅವಮಾನ' ಎಂದು ತಿಳಿದುಕೊಳ್ಳಬಹುದು. ಇದರಿಂದ ನಿಮಗೆ ಸಿಗುವ ಉದ್ಯೋಗ ಅಥವಾ ವ್ಯವಹಾರದ ಡೀಲ್‍ಗಳಿಗೆ ತೊಂದರೆ ಉಂಟಾಗಬಹುದು.
* ಇಮೇಲ್ ಬರೆದು ಸೆಂಡ್ ಬಟನ್ ಒತ್ತುವ ಮೊದಲು ಸ್ಪೆಲ್ಲಿಂಗ್ ಚೆಕ್ ಮಾಡಲು ಒಂದೆರಡು ಸೆಕೆಂಡ್ ವಿನಿಯೋಗಿಸಿ. ಎಲ್ಲಾದರೂ ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರ ಹೆಸರು ಸರಿಯಾಗಿ ತಿಳಿಯದೆ ಇದ್ದರೆ ಕೇವಲ `ಸರ್/ಮೇಡಂ' ಎಂದು ಸಂಬೋಧಿಸಿದರೆ ಸಾಕು. ಒಟ್ಟಾರೆ ತಪ್ಪಿಲ್ಲದಂತೆ ಬರೆಯಲು ಕಲಿಯಿರಿ.
* ಇಮೇಲ್‍ನಲ್ಲಿ ತಪ್ಪಾಗಿ ಹೆಸರು ಬರೆಯಲು ಹಲವು ಕಾರಣಗಳಿವೆ. ಮೊದಲನೆಯ ಕಾರಣ ಅವಸರ. ಅರ್ಜೆಂಟಾಗಿ ಇಮೇಲ್ ಬರೆದು ಸೆಂಡ್ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಮತ್ತೆ ಕೆಲವರು ತಮ್ಮ ಹೆಸರನ್ನು ಫೆÇೀನ್‍ನಲ್ಲಿ ಹೇಳಿರುತ್ತಾರೆ. ಕೆಲವು ಹೆಸರುಗಳ ಪೆÇ್ರನೌನ್ಸ್ ಒಂದು ತರಹ ಇರುತ್ತದೆ. ಸ್ಪೆಲ್ಲಿಂಗ್ ಇನ್ನೊಂದು ತರಹ ಇರುತ್ತದೆ. ಹೆಸರಿನ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ತಿಳಿದುಕೊಂಡು ಇಮೇಲ್ ಬರೆಯಿರಿ.

* ಈಗ ವಾಟ್ಸ್‍ಆ್ಯಪ್‍ನಲ್ಲೂ ಆಫೀಸ್‍ಗೆ ಸಂಬಂಧಪಟ್ಟ ಸಂವಹನ ನಡೆಸಲಾಗುತ್ತದೆ. ಇಲ್ಲೂ ತಪ್ಪಿಲ್ಲದಂತೆ ಬರೆಯಿರಿ. ವ್ಯಾಕರಣ ಮತ್ತು ಕಾಗುಣಿತ ತಪ್ಪಿದ್ದಲ್ಲಿ ಇತರರು ನಿಮ್ಮ ಬಗ್ಗೆ ತಪ್ಪಾಗಿ ಅಂದಾಜಿಸಬಹುದು.
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸ್ಟೇಟಸ್ ಬೇಡ

ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸ್ಟೇಟಸ್ ಬೇಡ

ಸೋಷಿಯಲ್ ಮೀಡಿಯಾದಲ್ಲಿ ನೀವಿರುವ ಕಂಪನಿಯ ಬಗ್ಗೆ ಅಥವಾ ಬಾಸ್ ಬಗ್ಗೆ ಈ ಕೆಳಗಿನಂತೆ ಸ್ಟೇಟಸ್‍ಗಳನ್ನು ಹಾಕಬೇಡಿ.

* ನನ್ನ ಬಾಸ್ ಇವತ್ತು ಬೆಳಗ್ಗೆ ಬೆಳಗ್ಗೆನೆ ನನ್ನ ಮೂಡ್ ಹಾಳ್ ಮಾಡಿಬಿಟ್ಟ-ಫೀಲಿಂಗ್ ಆ್ಯಂಗ್ರಿ
* ವಾರದ ರಜೆ ಮುಗೀತು. ಮತ್ತೆ ಸೋಮವಾರ ಬಂತು. ಫೀಲಿಂಗ್ ಬೋರ್.
* ಯಾರಿಗೆ ಬೇಕು ಪ್ರಾಜೆಕ್ಟ್. ಎಲ್ಲಾದರೂ ಹಾಳಾಗಿ ಹೋಗೋಣ ಅನಿಸುತ್ತೆ
* ಸರಿಯಾದ ಸಮಯಕ್ಕೆ ಸ್ಯಾಲರಿ ಕೊಡದ ಕಂಪನಿಯಲ್ಲಿ ಅನಿವಾರ್ಯವಾಗಿ ಕೆಲಸ ಮಾಡುವ ಕರ್ಮ ನನ್ನದು.
* ಸೋಷಿಯಲ್ ಮೀಡಿಯಾದಲ್ಲಿ ನೀವಿರುವ ಕಂಪನಿಯ ಬಗ್ಗೆ ಸಕಾರಾತ್ಮಕವಾಗಿ ಬರೆಯಿರಿ. ಯಾವಾಗಲೂ ನಕಾರಾತ್ಮಕವಾಗಿ ಬರೆಯಬೇಡಿ.
* ಯಾವುದೇ ವ್ಯಕ್ತಿಯನ್ನು ನಿಂದಿಸುವ ಬರಹಗಳು ಬೇಡ.
* ಇಂತಹ ಕಮೆಂಟ್‍ಗಳನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆಯೇ ಇತರರು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ.
* ಸೋಷಿಯಲ್ ಮೀಡಿಯಾದಲ್ಲಿ professional ಆಗಿ ವರ್ತಿಸಿ.
* ನಿಮ್ಮ ಕಮೆಂಟ್‍ಗಳನ್ನು ನಿಮ್ಮ ಕಂಪನಿಗೆ ಸಂಬಂಧಪಟ್ಟ ವ್ಯಕ್ತಿಗಳು ಅವಲೋಕಿಸುತ್ತಿರಬಹುದು. ಎಚ್ಚರಿಕೆಯಿಂದ ಇರಿ.
ಸೋಷಿಯಲ್ ಮೀಡಿಯಾ ಯಾಕೆ ಬೇಕು?

ಸೋಷಿಯಲ್ ಮೀಡಿಯಾ ಯಾಕೆ ಬೇಕು?

ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರು ಮತ್ತು ಈಗಾಗಲೇ ಉದ್ಯೋಗದಲ್ಲಿ ಇರುವವರು ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸುವುದು ಇಂದಿನ ಅವಶ್ಯಕತೆ.
* ನೀವು ಈಗಿನ ತಂತ್ರಜ್ಞಾನಗಳ ಬಗ್ಗೆ ಎಷ್ಟು ಅಪ್‍ಡೇಟ್ ಆಗಿದ್ದೀರಿ ಎಂದು ಕಂಪನಿಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
* ಆನ್‍ಲೈನ್‍ನಲ್ಲಿ ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ವ್ಯಕ್ತಿಗಳನ್ನು ಭೇಟಿಯಾಗಬಹುದು.
* ನೀವು ಇಂಟರ್‍ನೆಟ್ ಮತ್ತು ಸೋಷಿಯಲ್ ಮೀಡಿಯಾವನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ ಎಂದು ಕಂಪನಿಗಳು ತಿಳಿದುಕೊಳ್ಳುತ್ತವೆ.
* ಆನ್‍ಲೈನ್‍ನಲ್ಲಿ ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳಬಹುದು.
* ಸೋಷಿಯಲ್ ಮೀಡಿಯಾದಲ್ಲಿ ಹೊಸ ಉದ್ಯೋಗಾವಕಾಶಗಳ ಕುರಿತು ಅಪ್‍ಡೇಟ್ ಸಿಗುತ್ತದೆ.
* ಕೈಗಾರಿಕೆಗಳು, ಕಂಪನಿಗಳು ಮತ್ತು ನಿಮ್ಮ ಆಸಕ್ತಿಯ ಕ್ಷೇತ್ರಗಳ ಕುರಿತು ಅಧ್ಯಯನ ಮಾಡಬಹುದು.
* ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಎಚ್‍ಆರ್‍ಗಳು, ನೇಮಕಾತಿ ಸಂಸ್ಥೆಗಳು ಅಥವಾ ಕಂಪನಿಯ ಮುಖ್ಯಸ್ಥರ ಗಮನವನ್ನು ಸೋಷಿಯಲ್ ಮೀಡಿಯಾದಲ್ಲಿ ಸೆಳೆಯಬಹುದು.
ಫೇಸ್‍ಬುಕ್‍ನಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ?

ಫೇಸ್‍ಬುಕ್‍ನಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ?

ಉದ್ಯೋಗ ಹುಡುಕುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಫೇಸ್‍ಬುಕ್‍ನಲ್ಲಿ ತಮ್ಮ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಸ್ಟೇಟಸ್ ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಶಕ್ತಿ ಫೇಸ್‍ಬುಕ್ ಸ್ಟೇಟಸ್‍ಗೆ ಇದೆ.

* ಫೇಸ್‍ಬುಕ್ ಅನ್ನು ನಿಮ್ಮ ಕರಿಯರ್ ಪ್ರಗತಿಗೆ ಬಳಸಿ.
* ಫೇಸ್‍ಬುಕ್‍ನಲ್ಲಿ ನೀವು ಉದ್ಯೋಗ ಮಾಡುತ್ತಿರುವ ಕಂಪನಿಯ ಬಗ್ಗೆ ಕೆಟ್ಟದ್ದಾಗಿ ಬರೆಯಬೇಡಿ.
* ನಿಮ್ಮ ಪ್ರತಿಸ್ಪರ್ಧಿ ಕಂಪನಿಯ ಬಗ್ಗೆಯೂ ಕೆಟ್ಟದ್ದಾಗಿ ಬರೆಯಬೇಡಿ. ಯಾರಿಗೊತ್ತು ಆ ಕಂಪನಿಯಲ್ಲೂ ಭವಿಷ್ಯದಲ್ಲಿ ನೀವು ಕೆಲಸ ಮಾಡಬೇಕಾಗಬಹುದು.
* ನೀವಿನ್ನೂ ಉದ್ಯೋಗ ಹುಡುಕುವ ಹಂತದಲ್ಲಿದ್ದಾರೆ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖರನ್ನು ಫ್ರೆಂಡ್ ಮಾಡಿಕೊಳ್ಳಿ. ಅವರಲ್ಲಿ ಆಗಾಗ ಸಲಹೆ ಸೂಚನೆಗಳನ್ನು ಕೇಳುತ್ತ ಇರಿ.
* ನಿಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಇತರರ ಪೆÇೀಸ್ಟ್‍ಗಳಿಗೆ ಉತ್ತಮವಾಗಿ ಕಮೆಂಟ್ ಮಾಡಿ. ಒಳ್ಳೆಯ ಭಾಷೆಯಲ್ಲಿ ಕಮೆಂಟ್ ಬರೆಯಿರಿ. ಅಕ್ಷರ ತಪ್ಪು ಮಾಡಬೇಡಿ.
* ಧರ್ಮ, ರಾಜಕೀಯದ ವಿಷಯಗಳ ಕುರಿತು ಫೇಸ್‍ಬುಕ್‍ನಲ್ಲಿ ಕೆಸರೆರಚಾಟ ಬೇಡ.
* ಅಶ್ಲೀಲವೆನಿಸುವ ಪೆÇೀಸ್ಟ್‍ಗಳನ್ನು ಲೈಕ್ ಮಾಡಬೇಡಿ.
* ನಿಮ್ಮ ಈಗಿನ ಅಥವಾ ಭವಿಷ್ಯದ ಉದ್ಯೋಗದಾತರು ಫೇಸ್‍ಬುಕ್‍ನಲ್ಲಿ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದುಕೊಂಡು ಸ್ಟೇಟಸ್ ಬರೆಯಿರಿ.
* ಫೇಸ್‍ಬುಕ್ ನಿಮ್ಮ ಸ್ಟೇಟಸ್ ಹೆಚ್ಚಿಸಲಿ. ನಿಮ್ಮ ಸ್ಟೇಟಸ್‍ಗೆ ಕುಂದು ಉಂಟುಮಾಡದೆ ಇರಲಿ.

 
ಫೇಸ್‍ಬುಕ್‍ನಲ್ಲಿ ಏನು ಪೋಸ್ಟ್ ಮಾಡುವಿರಿ?

ಫೇಸ್‍ಬುಕ್‍ನಲ್ಲಿ ಏನು ಪೋಸ್ಟ್ ಮಾಡುವಿರಿ?

ನಾನು ತುಂಬಾ ಖುಷಿಯಾಗಿದ್ದೇನೆ ಇವತ್ತು',ಫೀಲಿಂಗ್ ಅಲೊನ್',ನಾನು ಯಾರನ್ನೂ ಕೇರ್ ಮಾಡೋಲ್ಲ',ಹಾಳಾಗಿ ಹೋಗು' ಇದೆಲ್ಲ ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೆಲವರು ಹಾಕುವ ಸ್ಟೇಟಸ್‍ನ ಸ್ಯಾಂಪಲ್ ಅಷ್ಟೇ. ವೃತ್ತಿಪರ ಜೀವನಕ್ಕೆ ಪ್ರವೇಶಿಸುವವರು ಅಥವಾ ಈಗಾಗಲೇ ಜಾಬ್‍ನಲ್ಲಿರುವವರು ಫೇಸ್‍ಬುಕ್‍ನಲ್ಲಿ ಹೀಗೆಲ್ಲ ಹುಚ್ಚುಚ್ಚಾಗಿ ಸ್ಟೇಟ್‍ಮೆಂಟ್ ಕೊಡುತ್ತಿರಬಾರದು.

ನೀವು ಹಾಕುವ ಯಾವುದೇ ಸ್ಟೇಟ್‍ಮೆಂಟ್ ಅನ್ನು ನಿಮ್ಮ ಬಾಸ್ ಅಥವಾ ನಿಮ್ಮ ಕ್ಲಯೆಂಟ್ ಓದಿದರೆ ಹೇಗಿರುತ್ತೆ? ಅವರು ಓದಿದರೆ ನಿಮ್ಮ ಬಗ್ಗೆ ಕೆಟ್ಟದ್ದಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆಯೇ? ಇದರ ಬದಲು ಅವರಿಗೂ "ಇವನು ನನ್ನ ಉದ್ಯೋಗಿ' ಎಂದು ಹೆಮ್ಮೆ ಮೂಡಿಸುವಂತಹ ಸ್ಟೇಟಸ್‍ಗಳನ್ನು ಹಾಕಿ. ಸಾಧ್ಯವಾದರೆ ಕಂಪನಿಯ ಕುರಿತು ಸಕಾರಾತ್ಮಕ ವರದಿಗಳನ್ನು ಹಂಚಿಕೊಳ್ಳುತ್ತ ಇರಿ.
ಯಾವತ್ತೂ ಸೋಷಿಯಲ್ ಮೀಡಿಯದಲ್ಲಿ ಕೆಟ್ಟ ಭಾಷೆ ಬಳಸಿ ಬರೆಯಬೇಡಿ. ಅದು ನಿಮ್ಮ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿಬಿಡಬಹುದು. ನೀವು ಹಾಕುವ ಸ್ಟೇಟಸ್ ಮತ್ತು ಮಾಡುವ ಕಮೆಂಟ್ ಅನ್ನು ಹಲವು ಬಾರಿ ಓದಿ ಸಹ್ಯವಾಗಿದೆ ಎಂದು ಖಾತ್ರಿ ಪಡಿಸಿಕೊಂಡು ಶೇರ್ ಮಾಡಿ. ಧರ್ಮ, ಜಾತಿ, ಮಹಿಳೆಯರು, ದೇಹದ ಬಣ್ಣ, ರಾಜಕೀಯ ಇತ್ಯಾದಿಗಳ ಕುರಿತು ಮಾಹಿತಿ ಹಂಚಿಕೊಳ್ಳುವಾಗ ವಿಶೇಷ ಎಚ್ಚರಿಕೆ ವಹಿಸಿ.

ಇಲ್ಲವಾದರೆ ನೀವು ಪೆÇಲೀಸ್ ಸ್ಟೇಷನ್ ಮುಖ ನೋಡಬೇಕಾಗಬಹುದು. ಕುಟುಂಬ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಹೆಚ್ಚು ಭಾವನಾತ್ಮಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ಆಫೀಸ್‍ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಯಾವುದೇ ಸ್ಟೇಟಸ್ ಹಂಚಿಕೊಳ್ಳಬೇಡಿ. ಈ ರೀತಿ ಮಾಡಿದರೆ ನೀವು ಆಫೀಸ್‍ನಲ್ಲಿ ಕಾಲಹರಣ ಮಾಡುತ್ತಿರುವಿರಿ ಎಂದು ಇತರರು ತಿಳಿದುಕೊಳ್ಳಬಹುದು.
ಸೋಷಿಯಲ್ ಮೀಡಿಯಾದ ಸದ್ಭಳಕೆ

ಸೋಷಿಯಲ್ ಮೀಡಿಯಾದ ಸದ್ಭಳಕೆ

ಒಂದಾನೊಂದು ಕಾಲದಲ್ಲಿ ಕೆಲಸ ಪಡೆಯಲು ನಿಮ್ಮ ರೆಸ್ಯೂಂ ಮತ್ತು ಸಂದರ್ಶನ ಸಾಕಿತ್ತು. ಆದರೆ, ಈಗಿನ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಲಿಂಕ್ಡ್‍ಇನ್ ಕಾಲದಲ್ಲಿ ರೆಸ್ಯೂಂ ಮತ್ತು ಸಂದರ್ಶನ ಮಾತ್ರ ನಿಮಗೆ ಕೆಲಸ ಕೊಡಿಸುವುದಿಲ್ಲ. ಈಗ ಅಂದವಾಗಿ ಉಡುಗೆತೊಡುಗೆ ತೊಟ್ಟ ಉದ್ಯೋಗಿಯು ಸೋಷಿಯಲ್ ಮೀಡಿಯಾದಲ್ಲಿ ಹೇಗಿರುತ್ತಾನೆ, ಆತನ ನಿಜವಾದ ಬಣ್ಣವೇನು ಎಂದು ಕಂಪನಿಗಳು ತಿಳಿದುಕೊಳ್ಳುತ್ತವೆ. ನೀವು ಹಾಲು ಕುಡಿಯುವ ಹುಡುಗನಂತೆ ಇಂಟರ್‍ವ್ಯೂನಲ್ಲಿ ಪೆÇೀಸ್ ನೀಡಿರಬಹುದು. ಆದರೆ, ಫೇಸ್‍ಬುಕ್‍ನಲ್ಲಿ ಆಲ್ಕೊಹಾಲ್ ಕುಡಿದು ಪೆÇೀಸ್ ನೀಡಿರಬಹುದು. ಅದು ಉದ್ಯೋಗಾದಾತರ ಕಣ್ಣಿಗೆ ಬಿದ್ದರೆ ನಿಮಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು. ಅದು ನನ್ನ ಪರ್ಸನಲ್ ಲೈಫ್ ಎಂದುಕೊಂಡರೆ ನಿಮಗೇ ನಷ್ಟ.
ಇದರೊಂದಿಗೆ ನೀವು ಸೋಷಿಯಲ್ ಮೀಡಿಯಾಗಳಲ್ಲಿ ಯಾವ ರೀತಿ ವರ್ತಿಸುತ್ತೀರಿ, ನಿಮ್ಮ ಆಸಕ್ತಿಯ ಕ್ಷೇತ್ರಗಳೇನು? ಯಾವ ರೀತಿ ಕಾಮೆಂಟ್ ಮಾಡುವಿರಿ ಎಂದೆಲ್ಲ ತಿಳಿದುಕೊಳ್ಳುತ್ತಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೆÇ್ರಫೆಷನಲ್ ಆಗಿ ವರ್ತಿಸಿರಿ. ಅಲ್ಲಿ ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳಿ. ನಿಮ್ಮನ್ನು ಇಷ್ಟಪಡುವ ಗುಂಪನ್ನು ಸೃಷ್ಟಿಸಿಕೊಳ್ಳಿ. ಒಂದಿಷ್ಟು ಜನಪ್ರಿಯತೆ ಪಡೆಯಿರಿ. ಹಾಗಂತ, ಧರ್ಮ, ರಾಜಕೀಯ ಇತ್ಯಾದಿ ಗುಂಪುಗಳಲ್ಲಿ ಕಾಲ ಕಳೆಯಬೇಡಿ. ನಿಮ್ಮ ಬ್ಲಾಗ್, ಆಸಕ್ತಿಯ ಕ್ಷೇತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತ ಆನ್‍ಲೈನ್‍ನಲ್ಲಿ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿರಿ.
ಇಮೇಲ್‍ನಲ್ಲಿ ಕಾಗುಣಿತ ತಪ್ಪು ಮಾಡದಿರಿ

ಇಮೇಲ್‍ನಲ್ಲಿ ಕಾಗುಣಿತ ತಪ್ಪು ಮಾಡದಿರಿ

ಉದ್ಯೋಗ ಅಥವಾ ವ್ಯವಹಾರ ಸಂಬಂಧಿತವಾಗಿ ನೀವು ಯಾರಿಗಾದಾರೂ ಇಮೇಲ್ ಮಾಡಬೇಕು ಎಂದಿರಲಿ. ಡಿಯರ್ ಸರ್ ಅಥವಾ ಮೇಡಂ ಎಂದು ಬರೆದು ಅವರ ಹೆಸರು ಬರೆಯುತ್ತೀರಿ. ಆದರೆ, ಆ ವ್ಯಕ್ತಿಯ ಹೆಸರನ್ನು ಸರಿಯಾಗಿ ಬರೆಯುವಿರಾ? ಸ್ಪೆಲ್ಲಿಂಗ್ ಚೆಕ್ ಮಾಡಿಕೊಳ್ಳುತ್ತೀರಾ? ನೀವು ಯಾರಾದರೂ ವ್ಯಕ್ತಿಯ ಹೆಸರನ್ನು ತಪ್ಪು ಬರೆದರೆ ಅದು ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ!
ಇಮೇಲ್‍ನಲ್ಲಿ ತಪ್ಪಾಗಿ ಹೆಸರು ಬರೆಯಲು ಹಲವು ಕಾರಣಗಳಿವೆ. ಮೊದಲನೆಯ ಕಾರಣ ಅವಸರ. ಅರ್ಜೆಂಟಾಗಿ ಇಮೇಲ್ ಬರೆದು ಸೆಂಡ್ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಮತ್ತೆ ಕೆಲವರು ತಮ್ಮ ಹೆಸರನ್ನು ಫೆÇೀನ್‍ನಲ್ಲಿ ಹೇಳಿರುತ್ತಾರೆ. ಕೆಲವು ಹೆಸರುಗಳ ಪೆÇ್ರನೌನ್ಸ್ ಒಂದು ತರಹ ಇರುತ್ತದೆ. ಸ್ಪೆಲ್ಲಿಂಗ್ ಇನ್ನೊಂದು ತರಹ ಇರುತ್ತದೆ. ಹೆಸರಿನ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ತಿಳಿದುಕೊಂಡು ಇಮೇಲ್ ಬರೆಯಿರಿ.
ಹೆಸರಿನ ಸ್ಪೆಲ್ಲಿಂಗ್ ತಪ್ಪು ಮಾಡುವುದರಿಂದ ಕೆಲವೊಮ್ಮೆ ಭಿನ್ನ ಅರ್ಥ ಉಂಟಾಗಬಹುದು. ತನ್ನ ಹೆಸರನ್ನು ವಿಚಿತ್ರವಾಗಿ ಬರೆದ ವ್ಯಕ್ತಿಯ ಬಗೆಗೆ ಇಮೇಲ್ ಸ್ವೀಕೃತರಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಹೆಸರನ್ನು ತಪ್ಪಾಗಿ ಬರೆದರೆ `ಇದು ನನಗಾದ ಅವಮಾನ' ಎಂದು ತಿಳಿದುಕೊಳ್ಳಬಹುದು. ಇದರಿಂದ ನಿಮಗೆ ಸಿಗುವ ಉದ್ಯೋಗ ಅಥವಾ ವ್ಯವಹಾರದ ಡೀಲ್‍ಗಳಿಗೆ ತೊಂದರೆ ಉಂಟಾಗಬಹುದು.
ಇಮೇಲ್ ಬರೆದು ಸೆಂಡ್ ಬಟನ್ ಒತ್ತುವ ಮೊದಲು ಸ್ಪೆಲ್ಲಿಂಗ್ ಚೆಕ್ ಮಾಡಲು ಒಂದೆರಡು ಸೆಕೆಂಡ್ ವಿನಿಯೋಗಿಸಿ. ಎಲ್ಲಾದರೂ ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರ ಹೆಸರು ಸರಿಯಾಗಿ ತಿಳಿಯದೆ ಇದ್ದರೆ ಕೇವಲ `ಸರ್/ಮೇಡಂ' ಎಂದು ಸಂಬೋಧಿಸಿದರೆ ಸಾಕು. ಒಟ್ಟಾರೆ ತಪ್ಪಿಲ್ಲದಂತೆ ಬರೆಯಲು ಕಲಿಯಿರಿ.
ಇಮೇಲ್‍ನಲ್ಲಿ ಇದೇನಿದು ಸಿಸಿ ಮತ್ತು ಬಿಸಿಸಿ

ಇಮೇಲ್‍ನಲ್ಲಿ ಇದೇನಿದು ಸಿಸಿ ಮತ್ತು ಬಿಸಿಸಿ

ಬಹುತೇಕರು ಇಮೇಲ್ ಮಾಡುವಾಗ ಸಿಸಿ ಮತ್ತು ಬಿಸಿಸಿಯನ್ನು ಸಮರ್ಪಕವಾಗಿ ಬಳಕೆ ಮಾಡಲು ಮರೆಯುತ್ತಾರೆ. ಈ ರೀತಿ ಮಾಡುವುದರಿಂದ ಈತ `ವೃತ್ತಿಪರ ಅಲ್ಲ' ಅಥವಾ `ತಂತ್ರಜ್ಞಾನದಲ್ಲಿ ಅನಕ್ಷರಸ್ಥ' ಎಂಬ ಭಾವವನ್ನು ಮೇಲಾಧಿಕಾರಿಗಳಿಗೆ ಅಥವಾ ಸಹೋದ್ಯೋಗಿಗಳಿಗೆ ಮೂಡಿಸಬಹುದು.
ಇಮೇಲ್‍ನಲ್ಲಿ ಸಿಸಿರುವ ಸಿಸಿ ಮತ್ತು ಬಿಸಿಸಿ ಎಂದರೇನು ಎಂದು ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿಸಿ ಎಂದರೆ ಕಾರ್ಬನ್ ಕಾಪಿ. ಬಿಸಿಸಿ ಎಂದರೆ ಬ್ಲೈಂಡ್ ಕಾರ್ಬನ್ ಕಾಪಿ. ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರಿಗೆ ಮಾತ್ರವಲ್ಲದೆ ಇನ್ನೊಬ್ಬರಿಗೂ ಆ ಇಮೇಲ್ ಪ್ರತಿಯನ್ನು ಕಳುಹಿಸುವಾಗ ಬಳಸಬೇಕಾದದ್ದು ಸಿಸಿ. ನೀವು ಒಂದು ಇಮೇಲ್ ವಿಳಾಸದ ಗುಂಪಿಗೆ ಸಂದೇಶ ಕಳುಹಿಸುವಾಗ ಬಿಸಿಸಿ ಬಳಸಬೇಕು. ಬಿಸಿಸಿಯಲ್ಲಿ ಕಳುಹಿಸುವಾಗ ಗ್ರೂಪ್‍ನಲ್ಲಿರುವ ಉಳಿದವರ ಇಮೇಲ್ ವಿಳಾಸ ನೀವು ಕಳುಹಿಸಿದವರಿಗೆ ಕಾಣಿಸುವುದಿಲ್ಲ. ಸಿಸಿಯಲ್ಲಿ ಎಲ್ಲರಿಗೂ ಎಲ್ಲಾ ಇಮೇಲ್ ವಿಳಾಸ ಕಾಣಿಸುತ್ತದೆ. ಬಿಸಿಸಿಯಲ್ಲಿ ಇತರರಿಗೆ ಬೇರೆ ಇಮೇಲ್ ವಿಳಾಸ ಕಾಣಿಸುವುದಿಲ್ಲ. ಅಷ್ಟರ ಮಟ್ಟಿಗೆ ಇಮೇಲ್ ವಿಳಾಸ ಗುಪ್ತವಾಗಿರುತ್ತದೆ.
ಆಫೀಸ್‍ನಲ್ಲಿ ಕಚೇರಿಯಲ್ಲಿರುವ ಎಲ್ಲರಿಗೂ ನೀವು ಯಾವುದಾದರೂ ಸಂದೇಶ ಕಳುಹಿಸುವಾಗ ಬಿಸಿಸಿ ಬಳಸಿ. ನೀವು ರಜಾ ಅರ್ಜಿಯನ್ನು ಮೇಲಾಧಿಕಾರಿಗೆ ಕಳುಹಿಸುವಾಗ ನಿಮ್ಮ ಟೀಂನ ಇತರರಿಗೆ ಸಿಸಿ ಮಾಡಿ. ನೀವು ಹಂಚಿಕೊಳ್ಳುವ ವಿಷಯ ತುಂಬಾ ಗೌಪ್ಯವಾಗಿದ್ದರೆ ಸಿಸಿ, ಬಿಸಿಸಿ ಬಳಸದೆ ನೇರವಾಗಿ ಒಂದೇ ವ್ಯಕ್ತಿಗೆ ಇಮೇಲ್ ಮಾಡಿ. ಇಮೇಲ್‍ನಲ್ಲಿ `ಟು' ಎಂದಿರುವಲ್ಲಿ ನೀವು ಕೇವಲ ಒಂದೇ ವ್ಯಕ್ತಿಯ ಇಮೇಲ್ ವಿಳಾಸ ಬರೆಯುವುದು ಒಳ್ಳೆಯದು. ಉಳಿದವರ ಇಮೇಲ್ ಅನ್ನು ಸಿಸಿಯಲ್ಲಿ ಬರೆಯಿರಿ.
ಇಮೇಲ್ ಅಟ್ಯಾಚ್‍ಮೆಂಟ್ ಮರೆಯದಿರಿ

ಇಮೇಲ್ ಅಟ್ಯಾಚ್‍ಮೆಂಟ್ ಮರೆಯದಿರಿ

ವೃತ್ತಿಪರ ಜೀವನದಲ್ಲಿ ಇಮೇಲ್, ಸಾಮಾಜಿಕ ಮಾಧ್ಯಮ ಇತ್ಯಾದಿ ತಂತ್ರಜ್ಞಾನಗಳನ್ನು ಬಳಕೆ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಪರಿಣಾಮವನ್ನೇ ಉಂಟು ಮಾಡಬಲ್ಲದು.

ಪರಿಚಿತರೊಬ್ಬರ ರೆಫರೆನ್ಸ್ ಮೂಲಕ ನರೇಶ್ ಎಂಬ ಅಭ್ಯರ್ಥಿಗೆ ದೇಶದ ಪ್ರಮುಖ ಐಟಿ ಕಂಪನಿಯೊಂದರಿಂದ ಕೆಲಸದ ಕೆಲಸದ ಆಹ್ವಾನ ಬಂತು. ಕಂಪನಿ ಕಳುಹಿಸಿದ ಇಮೇಲ್‍ನಲ್ಲಿ ನಿಮ್ಮ ರೆಸ್ಯೂಂ ಕಳುಹಿಸಿ ಎಂದಿತ್ತು. ಕಷ್ಟಪಟ್ಟು ರೆಸ್ಯೂಂ ಸಿದ್ಧಪಡಿಸಿದ ನರೇಶ್ ಅದನ್ನು ಡೆಸ್ಕ್‍ಟಾಪ್‍ನಲ್ಲಿ ಸೇವ್ ಮಾಡಿಟ್ಟುಕೊಂಡ. ಇಮೇಲ್‍ನಲ್ಲಿ ತಾನು ಈಗ ಪಡೆಯುತ್ತಿರುವ ವೇತನ, ಬಯಸುವ ವೇತನ ಎಲ್ಲವನ್ನು ಬರೆದ. ಕೊನೆಗೆ `ಪ್ಲೀಸ್ ಫೈಂಡ್ ಅಟ್ಯಾಚ್ಡ್ ಫೈಲ್' ಎಂದು ಬರೆದು ಇಮೇಲ್ ಸೆಂಡ್ ಮಾಡಿದ. ಇಮೇಲ್ ಮಾಡಿ ದಿನಗಳು ಉರುಳಿದರೂ ಆತನಿಗೆ ಯಾವುದೇ ಕೆಲಸದ ಆಹ್ವಾನವೇ ಬರಲಿಲ್ಲ. ತನ್ನ ಪರಿಚಿತರನ್ನು ಈ ಕುರಿತು ಕೇಳಿದಾಗ `ವಿಚಾರಿಸಿ ಹೇಳುವೆ' ಎಂದರು. ಕೆಲವು ದಿನಗಳ ನಂತರ ಪರಿಚಿತ ವ್ಯಕ್ತಿ ಕರೆ ಮಾಡಿ ನಿನಗೆ ಆ ಜಾಬ್ ಮಿಸ್ಸಾಯಿತು ಎಂದರು. ಅದಕ್ಕೆ ಅವರು ನೀಡಿದ ಕಾರಣ `ಇಮೇಲ್‍ನಲ್ಲಿ ನೀನು ರೆಸ್ಯೂಂ ಅಟ್ಯಾಚ್‍ಮೆಂಟ್ ಮಾಡುವುದನ್ನೇ ಮರೆತ್ತಿದ್ದೆ. ಈ ರೀತಿ ಮಾಡುವ ಅಭ್ಯರ್ಥಿಗಳನ್ನು ಆ ಕಂಪನಿಯು ಇಷ್ಟಪಡುವುದಿಲ್ಲ'.
* ನರೇಶ್ ಮಾಡಿದ್ದು ಸಣ್ಣ ತಪ್ಪು. ಅದಕ್ಕೆ ಆತ ತೆತ್ತ ಬೆಲೆ ಪ್ರಮುಖ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗಾವಕಾಶ ಕಳೆದುಕೊಂಡ.
* ಈತನನ್ನು ಕ್ಷಮಿಸಿ ಇನ್ನೊಮ್ಮೆ ರೆಸ್ಯೂಂ ಕಳುಹಿಸುವಂತೆ ಕಂಪನಿ ಹೇಳಬಹುದಿತ್ತಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆತ ಕಂಪನಿಗೆ ಫಸ್ಟ್ ಇಂಪ್ರೆಷನ್ ಮೂಡುವಲ್ಲಿ ವಿಫಲನಾದ. ಆ ಕಂಪನಿಯು ಇಮೇಲ್ ಮೂಲಕವೇ ಸಾಕಷ್ಟು ವ್ಯವಹಾರ ನಡೆಸುತ್ತದೆ. ಮುಂದೆಯೂ ಈತ ಇಂತಹ ತಪ್ಪು ಮಾಡಬಹುದು ಎಂಬ ಭಾವನೆ ಕಂಪನಿಗೆ ಈತನ ಮೊದಲ ತಪ್ಪಲ್ಲೇ ಮೂಡಿತ್ತು.
* ನೀವು ಕೂಡ ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಪ್ರಮುಖ ವಿಷಯಗಳಿಗೆ ಸಂಬಂಧಪಟ್ಟಂತೆ ಇಮೇಲ್ ಮಾಡುವಾಗ ಅವಶ್ಯಕತೆ ಇದ್ದಲ್ಲಿ ಅಟ್ಯಾಚ್‍ಮೆಂಟ್ ಕಳುಹಿಸಲು ಮರೆಯದಿರಿ.

Friday 30 September 2016

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ವಾಹನ ಕಂಪನಿಗಳು ಒಂದು ಕಾರು ಮಾಡೆಲಿನ ವಿವಿಧ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತವೆ. ಆ ಆವೃತ್ತಿಗಳಲ್ಲಿ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ವರ್ಷನ್‍ಗಳಿರುತ್ತವೆ. ಹೈಎಂಡ್ ಆವೃತ್ತಿಯಲ್ಲಿರುವ ವಿವಿಧ ಫೀಚರುಗಳು ಎಂಟ್ರಿ ಲೆವೆಲ್ ಕಾರಿನಲ್ಲಿ ಇರುವುದೇ ಇಲ್ಲ. ಉದಾಹರಣೆಗೆ
ಸ್ವಿಫ್ಟ್ ವಿಡಿಐನಲ್ಲಿ ಸೆಂಟ್ರಲ್ ಲಾಕಿಂಗ್ ಇದೆ. ಆದರೆ ಎಲ್‍ಎಕ್ಸ್‍ಐ ಮತ್ತು ಎಲ್‍ಡಿಐ ಆವೃತ್ತಿಗಳಲ್ಲಿ ಈ ಫೀಚರ್ ಇಲ್ಲ. ಆಲ್ಟೊ 800 ಎಲ್‍ಎಕ್ಸ್ ಕಾರಿನಲ್ಲಿ ಪವರ್ ಸ್ಟಿಯರಿಂಗ್, ಲೊ ಲೆವೆಲ್ ಫ್ಯೂಯೆಲ್ ವಾರ್ನಿಂಗ್, ಏರ್‍ಬ್ಯಾಗ್ ಇಲ್ಲ. ಆದರೆ ಈ ಫೀಚರುಗಳು ಆಲ್ಟೊ 800 ಎಲ್‍ಎಕ್ಸ್‍ಐನಲ್ಲಿವೆ. ಟಾಟಾ ಸಫಾರಿ ಇಎಕ್ಸ್ ಡಿಕೊರ್‍ನಲ್ಲಿ ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಇದೆ. ಆದರೆ ಎಲ್‍ಎಕ್ಸ್ ಡಿಕೊರ್‍ನಲ್ಲಿ ಈ ಫೀಚರ್ ಇಲ್ಲ. ಇಂಡಿಕಾ ವಿಸ್ಟಾ ಡಿ90 ವಿಎಕ್ಸ್ ಕಾರಿನಲ್ಲಿ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಮತ್ತು ಜಿಪಿಎಸ್ ನ್ಯಾವಿಗೇಷನ್ ಇಲ್ಲ. ಆದರೆ ಈ ಫೀಚರುಗಳು ವಿಸ್ಟಾ ಡಿ90 ಝಡ್‍ಎಕ್ಸ್ ಪ್ಲಸ್ ಆವೃತ್ತಿಯಲ್ಲಿ ಇವೆ. ನಿಸ್ಸಾನ್ ಸನ್ನಿ ಎಕ್ಸ್‍ಇ ಆವೃತ್ತಿಯಲ್ಲಿ ಚೈಲ್ಡ್ ಸೇಫ್ಟಿ ಲಾಕ್, ರಿಯರ್ ಡಿಫಾಗರ್ ಇತ್ಯಾದಿ ಫೀಚರುಗಳು ಇಲ್ಲ. ಸನ್ನಿ ಎಕ್ಸ್‍ಎಲ್ ಡೀಸೆಲ್ ಆವೃತ್ತಿಯಲ್ಲಿ ಈ ಎಲ್ಲಾ ಫೀಚರುಗಳಿವೆ.

ಹೀಗೆ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ಆವೃತ್ತಿಗಳ ಫೀಚರುಗಳು, ವಿಶೇಷತೆಗಳ ನಡುವೆ ಹಲವು ವ್ಯತ್ಯಾಸಗಳು ಇರುತ್ತವೆ. ಕಾರು ಖರೀದಿಸುವಾಗ ಹಣಕಾಸಿನ ಅಭಾವವೋ.. ಅಥವಾ ಇನ್ನಿತರ ಕಾರಣಗಳಿಂದ ಕಡಿಮೆ ಫೀಚರ್‍ಗಳಿರುವ ಕಾರನ್ನು ನೀವು ಖರೀದಿಸಿರಬಹುದು. ಆದರೆ ದಿನಕಳೆದಂತೆ ಬೇಕೆನಿಸಿದರೆ ಹೈಎಂಡ್ ಆವೃತ್ತಿಗಳಲ್ಲಿರುವ ಸೆನ್ಸಾರ್, ಜಿಪಿಎಸ್, ಅಲಾಯ್ ಇತ್ಯಾದಿ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಅಲಾಯ್ ವೀಲ್
ಚಕ್ರಗಳಿಗೆ ಅಲಾಯ್ ವೀಲ್ ಅಳವಡಿಸಿದರೆ ಕಾರಿನ ಅಂದ ಹೆಚ್ಚಾಗುತ್ತದೆ. ಇವು ಹಗುರವಾಗಿರುವುದರಿಂದ ಕಾರಿನ ಹ್ಯಾಂಡ್ಲಿಂಗ್, ಪರ್ಫಾಮೆನ್ಸ್ ಸಹ ಹೆಚ್ಚಾಗುತ್ತದೆ. ರಿಮ್ ಬಾಳಿಕೆ ಹೆಚ್ಚಿಸುತ್ತದೆ ಮತ್ತು ರಿಮ್ ಬೆಂಡ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಸೆಟ್ ಅಲಾಯ್ ವೀಲ್‍ಗೆ ಸುಮಾರು 15-20 ಸಾವಿರ ರೂಪಾಯಿ ವಿನಿಯೋಗಿಸಬೇಕಾಗಬಹುದು. ಇದಕ್ಕಿಂತ ದುಬಾರಿ ಅಲಾಯ್‍ಗಳೂ ದೊರಕುತ್ತವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ಕಾರ್ ಪಾರ್ಕಿಂಗ್ ಮಾಡುವಾಗ ಕಾರಿನ ಹಿಂಬದಿಯ ಪ್ರದೇಶಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ದೊಡ್ಡ ಕಾರುಗಳಲ್ಲಿ ಈ ಸಮಸ್ಯೆ ಹೆಚ್ಚು. ಪಾರ್ಕಿಂಗ್ ಮಾಡುವಾಗ ಹಿಂಬದಿಯ ಗೋಡೆಗೆ, ಬೇರಾವುದೋ ವಾಹನಕ್ಕೆ ಗಾಡಿ ತಾಗಿಸಿದಾಗ `ಛೇ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್ ಇದ್ದಿದ್ದರೆ' ಎಂದೆನಿಸಬಹುದು. ಆಫ್ಟರ್ ಮಾರ್ಕೇಟ್ಟಿನಲ್ಲಿ ಇಂತಹ ಪ್ಲಗ್ ಇನ್ ಪಾರ್ಕಿಂಗ್ ಸೆನ್ಸಾರ್‍ಗಳು ಸಿಗುತ್ತವೆ. ಇವನ್ನು ನಿಮ್ಮ ಕಾರಿನ ರಿವರ್ಸ್ ಲ್ಯಾಂಪಿನ ಹತ್ತಿರ ಜೋಡಿಸಿ ನಿರಾಳವಾಗಿ ಕಾರನ್ನು ಪಾರ್ಕಿಂಗ್ ಮಾಡಬಹುದು. ಇದನ್ನು ಅಳವಡಿಸಲು ನೀವು 3 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಬಹುದು.

ರಿಮೋಟ್ ಲಾಕಿಂಗ್
ಇಮೊಬಿಲೈಝರ್ ರಿಮೋಟ್ ಲಾಕಿಂಗ್  ವ್ಯವಸ್ಥೆ ಕಾರಿನಲ್ಲಿದ್ದರೆ ಉತ್ತಮ. ಇದನ್ನು ಕಾರಿಗೆ ಅಳವಡಿಸಲು ಹೆಚ್ಚು ಕಷ್ಟಪಡಬೇಕಿಲ್ಲ. ಇದರ ದರ 4ರಿಂದ 12 ಸಾವಿರ ರೂಪಾಯಿವರೆಗಿದೆ. ಆಟೊಕಾಪ್, ಮೈಕ್ರೊವಿಬಿಬಿ, ಪಿಯೊನಿಕ್ಸ್, ಸಿಲಿಕಾನ್, ನಿಪ್ಪಾನ್ ಇತ್ಯಾದಿ ಕಂಪನಿಗಳ ರಿಮೋಟ್ ಲಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳಬಹುದು.

ಲೆದರ್ ಅಪ್‍ಹೊಲೆಸ್ಟ್ರೆ

ಕಾರಿನ ಸೀಟು ಮತ್ತು ಇತರ ಪ್ರಮುಖ ಭಾಗಗಳಲ್ಲಿ ಮೆತ್ತನೆಯ ಚರ್ಮದ ಹೊದಿಕೆ ಇದ್ದರೆ ಚೆನ್ನಾಗಿತ್ತು ಎಂದು ನೀವು ಅಂದುಕೊಂಡಿರಬಹುದು. ಸಂಪೂರ್ಣ ಅಸಲಿ ಲೆದರ್ ಅಪ್‍ಹೊಲೆಸ್ಟ್ರೆ ಅಳವಡಿಸಿಕೊಳ್ಳುವುದು ದುಬಾರಿ. ಯಾಕೆಂದರೆ ಇವುಗಳ ವೆಚ್ಚ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತವೆ. ಆದರೆ ಫಾಕ್ಸ್ ಲೆದರ್ ಹೊದಿಕೆಗಳು ಸುಮಾರು 15 ಸಾವಿರ ರೂಪಾಯಿಗೆ ದೊರಕುತ್ತವೆ. ವಿವಿಧ ಬಣ್ಣದ ಲೆದರ್ ಅಪ್‍ಹೊಲೆಸ್ಟ್ರೆ ಹಾಕಿಕೊಳ್ಳುವ ಮೂಲಕ ನಿಮ್ಮ ಕಾರಿನ ಅಂದ ಹೆಚ್ಚಿಸಿಕೊಳ್ಳಬಹುದು. ಸೆಖೆಗಾಲದಲ್ಲಿ ಇವು ಕೊಂಚ ಹೀಟ್ ಅನಿಸಬಹುದು.

ರಿಯರ್ ವ್ಯೂ ಕ್ಯಾಮರಾ
ನಿಮ್ಮ ಕಾರಿನಲ್ಲಿ ಡಿವಿಡಿ ಡಿಸ್‍ಪ್ಲೇ ಇದ್ದರೆ, ನೇರವಾಗಿ ಅದಕ್ಕ ರಿವರ್ಸ್ ಕ್ಯಾಮರಾವನ್ನು ಕನೆಕ್ಟ್ ಮಾಡಬಹುದು. ಆಕ್ಸೆಸರಿ ಮಾರುಕಟ್ಟೆಯಲ್ಲಿ ಡಿಸ್‍ಪ್ಲೇ ಜೊತೆಗೆ ರಿಯರ್ ವ್ಯೂ ಕ್ಯಾಮರಾಗಳ ಪೂರ್ತಿ ಸೆಟ್ ದೊರಕುತ್ತದೆ. ಕೆಲವೊಂದು ಕಂಪನಿಗಳು ಇಂತಹ ಕಿಟ್‍ನಲ್ಲಿ ಪಾರ್ಕಿಂಗ್ ಸೆನ್ಸಾರ್ ಸಹ ನೀಡುತ್ತವೆ. ಕ್ಯಾಮರಾ ಡಿಸ್‍ಪ್ಲೇಯನ್ನು ಕಾರಿನ ಡ್ಯಾಷ್‍ಬೋರ್ಡಿಗೆ ಜೋಡಿಸಬಹುದು. ಇದಕ್ಕೆ ಸುಮಾರು 3 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿ ಖರ್ಚಾಗಬಹುದು.

ಬ್ಲೂಟೂಥ್ ಸಾಧನ
ಕಾರ್ ಡ್ರೈವ್ ಮಾಡುತ್ತ ಮೊಬೈಲ್ ಫೆÇೀನ್ ಬಳಕೆ ಮಾಡುವುದು ತಪ್ಪು. ಆದರೆ ಈಗಿನ ಹೈಎಂಡ್ ಕಾರುಗಳಲ್ಲಿರುವ ಬ್ಲೂಟೂಥ್ ಸಾಧನಗಳು ಆಟೋಮ್ಯಾಟಿಕ್ ಆಗಿ ಕರೆ ಸ್ವೀಕರಿಸಿ ಮಾತನಾಡಲು ಅನುವು ಮಾಡಿಕೊಡುತ್ತವೆ. ಜಾಬ್ರಾ, ಪ್ಲಾಂಟ್ರೊನ್ಕಿಸ್, ಮೊಟೊರೊಲಾ, ನೊಕಿಯಾ ಮುಂತಾದ ಕಂಪನಿಗಳ ಬ್ಲೂಟೂಥ್ ಸಾಧನ ಖರೀದಿಸಿ ಅದನ್ನು ಕಾರಿನ ಸನ್ ವಿಷರ್‍ಗೆ ಕ್ಲಿಪ್ ಮಾಡಿ ನಿಮ್ಮ ಮೊಬೈಲ್ ಫೆÇೀನಿಗೆ ಪೇರ್ ಮಾಡಬಹುದು. ಕೆಲವು ಮ್ಯೂಸಿಕ್ ಪ್ಲೇಯರ್‍ಗಳಲ್ಲಿ ಇಂತಹ ಬ್ಲೂಟೂಥ್ ಸಾಧನ ಇರುತ್ತದೆ.

ಪವರ್ ವಿಂಡೋಸ್
ನಿಮ್ಮ ಕಾರಿನಲ್ಲಿ ಪವರ್ ವಿಂಡೋ ಇಲ್ಲವೆಂದು ಚಿಂತೆ ಮಾಡುವ ಅಗತ್ಯವಿಲ್ಲ. ಕಾರ್ ಆಫ್ಟರ್ ಮಾರ್ಕೇಟ್‍ಗಳಲ್ಲಿ ಪವರ್ ವಿಂಡೋಸ್ ಸಿಸ್ಟಮ್ ಸಹ ದೊರಕುತ್ತವೆ. ಸುಮಾರು 3ರಿಂದ 8 ಸಾವಿರ ರೂಪಾಯಿಗೆ ನಿಮ್ಮ ಕಾರಿಗೆ ಪವರ್ ವಿಂಡೋಸ್‍ಗಳನ್ನು ಅಳವಡಿಸಿಕೊಳ್ಳಬಹುದು.

ಜಿಪಿಎಸ್ಅಪರಿಚಿತ ರಸ್ತೆಗಳಲ್ಲಿ ದಾರಿ ತೋರಿಸುವ ಜಿಪಿಎಸ್ ಸಾಧನಗಳನ್ನು ಸಹ ನಿಮ್ಮ ಕಾರಿಗೆ ಅಳವಡಿಸಿಕೊಳ್ಳಬಹುದು. ಈಗ ಹೆಚ್ಚಿನ ಸ್ಮಾರ್ಟ್‍ಫೆÇೀನ್‍ಗಳಲ್ಲೂ ಜಿಪಿಎಸ್ ಸಾಧನವಿದೆ. ಇವಿಷ್ಟು ಮಾತ್ರವಲ್ಲದೇ ನಿಮ್ಮ ಕಾರಿಗೆ ಫಾಗ್ ಲ್ಯಾಂಪ್, ಸನ್‍ರೂಫ್‍ಗಳನ್ನು ಅಳವಡಿಸಿಕೊಳ್ಳಬಹುದು. 4-8 ಸಾವಿರ ರೂಪಾಯಿ ವಿನಿಯೋಗಿಸಿದರೆ ಕಾರಿನ ಸ್ಟಿಯರಿಂಗ್ ವೀಲ್‍ಗೆ `ಸ್ಟಿಯರಿಂಗ್ ಆಡಿಯೋ ರಿಮೋಟ್' ಅಳವಡಿಸಿಕೊಳ್ಳಬಹುದು.

ಕಾರ್ ಮಾಡಿಫೈ ಅಂದರೆ ಇಷ್ಟೇ ಅಲ್ಲ. ನಿಮ್ಮಲ್ಲಿ ವೆಚ್ಚ ಮಾಡಲು ಸಾಕಷ್ಟು ಹಣವಿದ್ದರೆ ಟೈರ್, ಎಗ್ಸಾಸ್ಟ್, ಏರ್‍ಫಿಲ್ಟರ್, ಸ್ಪಾರ್ಕ್ ಪ್ಲಗ್ಸ್, ಎಂಜಿನ್ ಸೇರಿದಂತೆ ಕಾರಿನ ಪರ್ಫಾಮೆನ್ಸ್ ವಿಷಯಗಳನ್ನು ಸಹ ಅಪ್‍ಗ್ರೇಡ್ ಮಾಡಿಕೊಳ್ಳಬಹುದು.
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ
ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಓದಿ ಅಕೌಂಟೆಂಟ್ ಆದವರಿಗೆ ವೃತ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲು ವಿವಿಧ ಸರ್ಟಿಫಿಕೇಷನ್ ಕೋರ್ಸ್‍ಗಳು ಸಾಥ್ ನೀಡುತ್ತವೆ. ಅವುಗಳಲ್ಲಿ ಎಸ್‍ಎಂಎ ಸರ್ಟಿಫಿಕೇಷನ್ ಸಹ ಪ್ರಮುಖವಾದದ್ದು. ಅಮೆರಿಕದ ಐಎಂಎ ಜೊತೆ ದೇಶದ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಸಿಎಂಎಯು ಎಂಒಯು ಒಪ್ಪಂದ ಮಾಡಿಕೊಂಡು ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ ಸರ್ಟಿಫಿಕೇಷನ್ ನೀಡುತ್ತಿದೆ. ಕಂಪನಿಯೊಳಗಿನ ಹಣಕಾಸು ಕಾರ್ಯಗಳನ್ನು ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂ ನೆರವಾಗುತ್ತದೆ. ಈಗಿನ ಸಂಕೀರ್ಣ ವಾಣಿಜ್ಯ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂನಿಂದ ಸಾಧ್ಯವಾಗುತ್ತದೆ.
ವಿಜಯ ಕರ್ನಾಟಕ ಕಾಂಪಿಟೇಷನ್ ವಿಕೆಯ ಪ್ರೊ ಲರ್ನಿಂಗ್ ಅಂಕಣದಲ್ಲಿ ಪ್ರಕಟಿ

ಯಾಕೆ ಸಿಎಂಎ ಕಲಿಯಬೇಕು?
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಮತ್ತು ಫೈನಾನ್ಸಿಯಲ್ ಅಕೌಂಟೆಂಟ್ ಕುರಿತು ಉತ್ತಮ ಜ್ಞಾನ ಲಭಿಸುತ್ತದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂ ತೂಕ ಹೆಚ್ಚಾಗುತ್ತದೆ. ಉದ್ಯೋಗಾವಕಾಶವೂ ಹೆಚ್ಚುತ್ತದೆ. ಹೆಚ್ಚು ವೇತನದ ಆಫರ್ ಸಹ ದೊರಕುತ್ತದೆ. ನಾಯಕತ್ವ ಕೌಶಲ, ವ್ಯವಹಾರದ ಅಂತಾರಾಷ್ಟ್ರೀಯ ಮಜಲುಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಯಾರು ಕಲಿಯಬಹುದು?
ಈ ಕೋರ್ಸ್ ಅನ್ನು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ವೃತ್ತಿಯಲ್ಲಿ ಇರುವವರೂ ಮಾಡಬಹುದಾಗಿದೆ. ಅಂಗೀಕೃತ ವಿವಿ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅರ್ಥಶಾಸ್ತ್ರ, ಬೇಸಿಕ್ ಸ್ಟಟಿಸ್ಟಿಕ್ಸ್ ಮತ್ತು ಫೈನಾನ್ಸಿಯಲ್ ಅಕೌಂಟಿಂಗ್‍ನ ಮೂಲಭೂತ ಜ್ಞಾನ ಇರಬೇಕು. ಎರಡು ವರ್ಷದ ವೃತ್ತಿಪರ ಅನುಭವ ಜೊತೆಗಿರಬೇಕು.
ಬಿಕಾಂ, ಬಿಬಿಎ, ಎಂಬಿಎ ಇತ್ಯಾದಿ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು, ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಪಡೆದವರು ಸಿಎಂಎ ಸರ್ಟಿಫಿಕೇಷನ್ ಪಡೆಯಬಹುದು. ಮ್ಯಾನೇಜ್‍ಮೆಂಟ್ ಹಂತದಲ್ಲಿ ವೃತ್ತಿಗೆ ಪ್ರವೇಶಿಸಬಯಸುವವರು ಸಹ ಈ ಕೋರ್ಸ್ ಪಡೆಯಬಹುದು. ಕೇವಲ ಆರೆಂಟು ತಿಂಗಳಲ್ಲಿ ಈ ಎಗ್ಸಾಂ ಅನ್ನು ಪಾಸ್ ಮಾಡಬಹುದಾಗಿದೆ. ಕೇವಲ 2 ಪೇಪರ್‍ಗಳಿದ್ದು, 6 ತಿಂಗಳಲ್ಲಿ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ. 12 ತಿಂಗಳು ಅಥವಾ 3 ವರ್ಷದ ಅವಧಿಯ ಕೋರ್ಸ್‍ಗಳನ್ನೂ ಮಾಡಬಹುದಾಗಿದೆ.

ಪರೀಕ್ಷೆಗೆ ಏನು ಓದಬೇಕು?
ಸಿಎಂಎ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿವೆ. ಭಾಗ 1 ಪ್ರಶ್ನೆಪತ್ರಿಕೆಯಲ್ಲಿ ಹಣಕಾಸು ಯೋಜನೆ, ಕಾರ್ಯಕ್ಷಮತೆ ಮತ್ತು ನಿಯಂತ್ರಣ- ಪ್ಲಾನಿಂಗ್ ಬಜೆಟಿಂಗ್ ಫಾರ್‍ಕಾಸ್ಟಿಂಗ್, ಫರ್ಫಾಮೆನ್ಸ್ ಮ್ಯಾನೇಜ್‍ಮೆಂಟ್, ಕಾಸ್ಟ್ ಮ್ಯಾನೇಜ್‍ಮೆಂಟ್, ಇಂಟರ್ನಲ್ ಕಂಟ್ರೋಲ್ಸ್ ಮತ್ತು ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಾರ್ಟ್ 2 ಪ್ರಶ್ನೆಪತ್ರಿಕೆಯಲ್ಲಿ ಫೈನಾನ್ಶಿಯಲ್ ಡಿಸಿಷನ್ ಮೇಕಿಂಗ್- ಫೈನಾನ್ಶಿಯಲ್ ಸ್ಟೇಟ್‍ಮೆಂಟ್ ಅನಾಲಿಸಿಸ್, ಕಾಪೆರ್Çರೇಟ್ ಫೈನಾನ್ಸ್, ಡಿಸಿಷನ್ ಅನಾಲಿಸಿಸ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್, ಇನ್ವೆಸ್ಟ್‍ಮೆಂಟ್ ಡಿಸಿಷನ್, ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಕುರಿತು ಪ್ರಶ್ನೆಗಳಿರುತ್ತವೆ. ಒಟ್ಟು 4 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಶೇಕಡ 75ರಷ್ಟು ಬಹುಆಯ್ಕೆ ಪ್ರಶ್ನೆಗಳು ಮತ್ತು ಶೇಕಡ 25ರಷ್ಟು ಪ್ರಬಂಧ ಬರೆಯುವ ಪ್ರಶ್ನೆಗಳಿರುತ್ತವೆ. ಜನವರಿ/ಫೆಬ್ರವರಿ, ಮೇ/ಜೂನ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಕಂಪ್ಯೂಟರೀಕೃತ ಆನ್‍ಲೈನ್ ಪರೀಕ್ಷೆ ನಡೆಯುತ್ತದೆ. ಪಾಸ್ ಆಗಲು ಶೇಕಡ 72ರಷ್ಟು ಅಂಕ ಪಡೆಯಬೇಕು.

ಉದ್ಯೋಗಾವಕಾಶ ಹೇಗಿದೆ?
ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಎಂಎ ಸರ್ಟಿಫಿಕೇಷನ್ ಇದ್ದವರಿಗೆ ಬಹುಬೇಡಿಕೆಯಿದೆ. ಫೈನಾನ್ಶಿಯಲ್ ಅನಾಲಿಸ್ಟ್, ಇಂಟರ್ನಲ್ ಅಡಿಟರ್, ಸೀನಿಯರ್ ಎಕ್ಸಿಕ್ಯುಟಿವ್, ಫೈನಾನ್ಸ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್, ಪ್ರೈಸಿಂಗ್ ಅನಾಲಿಸ್ಟ್, ಡೈರೆಕ್ಟರ್-ಫೈನಾನ್ಸ್, ಚೀಫ್ ಫೈನಾನ್ಸಿಯಲ್ ಆಫೀಸರ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಸಿಎಂಎ ಸರ್ಟಿಫಿಕೇಷನ್ ನೆರವಾಗುತ್ತದೆ. ಈ ಕೋರ್ಸ್ ಕಲಿಯಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ವೆಬ್ ಸೈಟ್‍ಗೆ ಭೇಟಿ ನೀಡಬಹುದು.

ಜನಪ್ರಿಯ ಫೈನಾನ್ಸ್ ಕೋರ್ಸ್‍ಗಳು
ಎಂಬಿಎ: ಎಂಬಿಎ ಇನ್ ಫೈನಾನ್ಸ್ ಓದಿದವರಿಗೆ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಫೈನಾನ್ಶಿಯಲ್ ಮಾಡೆಲಿಂಗ್, ಸ್ಟಟಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಎಂಬಿಎ ಪದವೀಧರರು ಹೆಚ್ಚಾಗುತ್ತಿದ್ದು, ಹೆಚ್ಚು ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.


ಚಾರ್ಟೆಡ್ ಅಕೌಂಟೆಂಟ್: 1949ರ ಚಾರ್ಟೆಡ್ ಅಕೌಂಟೆಂಟ್ ಕಾಯಿದೆ ಅನ್ವಯ ಸ್ಥಾಪನೆಯಾದ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್‍ಗೆ ದೇಶದಲ್ಲಿಂದು ಹೆಚ್ಚು ಬೇಡಿಕೆಯಿದೆ. ಕನ್ಸಲ್ಟೆನ್ಸಿ, ಅಡಿಟ್ ಪ್ರಾಕ್ಟೀಸ್, ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಇದು ನಿಮಗೆ ಉತ್ತಮ ಉದ್ಯೋಗವಕಾಶ ದೊರಕಿಸಿಕೊಡುತ್ತದೆ. ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ ಓದಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಪಡೆಯಬಹುದು. ಅಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗ ಪಡೆಯಲು ದೇಶದ ಸಿಎ ಕೋರ್ಸ್ ನೆರವಾಗುತ್ತದೆ.


ಕಾಸ್ಟ್ ಅಕೌಂಟೆಂಟ್: ಕಾಸ್ಟ್ ಆ್ಯಂಡ್ ವಕ್ರ್ಸ್ ಅಕೌಂಟೆಂಟ್ಸ್ ಕಾಯಿದೆ, 1959ತ ಅನ್ವಯ ಸ್ಥಾಪನೆಯಾದ ಕಾಸ್ಟ್ ಅಕೌಂಟೆಂಟ್ ಕೋರ್ಸ್ ಸಹ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ.


ಕಂಪನಿ ಸೆಕ್ರೆಟರಿ: ಕಂಪನಿ ಸೆಕ್ರೆಟರಿ ಕಾಯಿದೆ, 1980ರ ಅನ್ವಯ ಸ್ಥಾಪನೆಯಾದ ಈ ಕೋರ್ಸ್ ಅನ್ನು ಕಲಿತವರು ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಗ್ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ, ಕಾಪೆರ್Çರೇಟ್ ಆಫೀಸ್‍ಗಳಲ್ಲಿ ಉದ್ಯೋಗ ಪಡೆಯಬಹುದು.



ವೆಬ್‍ ಡಿಸೈನರ್ ಆಗುವುದು ಹೇಗೆ?

ವೆಬ್‍ ಡಿಸೈನರ್ ಆಗುವುದು ಹೇಗೆ?

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
Published in Vijaya Karnataka Mini

ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು ವೆಬ್ ಡೆವಲಪರ್, ವೆಬ್‍ಸೈಟ್ ಪೆÇ್ರಗ್ರಾಮರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಬಹುದು.
ಸರ್ಟಿಫಿಕೇಷನ್ ಬೇಕಿಲ್ಲವೆಂದರೆ ಇಂಟರ್‍ನೆಟ್‍ನಲ್ಲಿ ಉಚಿತವಾಗಿ ವೆಬ್ ವಿನ್ಯಾಸ ಕಲಿಸುವ ಟ್ಯುಟೋರಿಯಲ್‍ಗಳಿಗೆ ಸೇರಬಹುದು. ನೆಟ್‍ನಲ್ಲಿ ವೆಬ್ ಮಾಸ್ಟರ್ ಆಗಲು ತರಬೇತಿ ನೀಡುವ ಸಾಕಷ್ಟು ವಿಡಿಯೋಗಳು, ಪಠ್ಯಗಳೂ ದೊರಕುತ್ತವೆ. ಆನ್‍ಲೈನ್ ಅಥವಾ ಆಫ್‍ಲೈನ್ ಪುಸ್ತಕದಂಗಡಿಗೆ ಹೋಗಿ ವೆಬ್ ಡಿಸೈನ್ ಕುರಿತಾದ ಪುಸ್ತಕಗಳನ್ನೂ ಓದಿಯೂ ವೆಬ್ ವಿನ್ಯಾಸದಲ್ಲಿ ಪರಿಣತಿ ಪಡೆಯಬಹುದು.

ವೆಬ್ ಮಾಸ್ಟರ್‍ಗೆ ಬೇಡಿಕೆ
ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ಗೋಡ್ಯಾಡಿ.ಕಾಮ್‍ನಂತಹ ತಾಣಗಳಲ್ಲಿ ಅನುಭವ ಇಲ್ಲದವರೂ ವೆಬ್‍ಸೈಟ್ ರಚಿಸಬಹುದಾದರೂ ಪೆÇ್ರಫೆಷನಲ್ ವೆಬ್‍ಸೈಟ್ ವಿನ್ಯಾಸಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ನಿಮ್ಮಲ್ಲಿ ಅತ್ಯುತ್ತಮ ಕ್ರಿಯೇಟಿವಿಟಿ ಇದ್ದರಂತೂ ಗ್ರಾಹಕರನ್ನು ಪಡೆಯುವುದು ಕಷ್ಟವಲ್ಲ. ಪಾರ್ಟ್‍ಟೈಮ್ ಆಗಿಯೂ ಈ ಕ್ಷೇತ್ರದಲ್ಲಿ ದುಡಿಯಬಹುದು. ವೆಬ್‍ಡಿಸೈನ್ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮ್ಮಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸು ಇದ್ದರೆ ನಿಮ್ಮ ಊರಿಗೆ ಸಮೀಪವಿರುವ ಪಟ್ಟಣ, ನಗರಗಳಲ್ಲಿ ವೆಬ್ ಡಿಸೈನ್ ಸಂಸ್ಥೆಯನ್ನೂ ತೆರೆಯಬಹುದು.

ಏನಿದು ವೆಬ್ ಡಿಸೈನ್ ಪೆÇ್ರೀಗ್ರಾಮ್?
ಇಂತಹ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವೆಬ್‍ಸೈಟ್ ನಿರ್ಮಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತಾರೆ. ಹೈಪರ್‍ಟೆಕ್ಸ್ಟ್ ಪ್ರಿಪೆÇ್ರಸೆಸರ್(ಪಿಎಚ್‍ಪಿ), ಹೈಪರ್‍ಟೆಕ್ಸ್ಟ್ ಮಾರ್ಕ್- ಅಪ್ ಲ್ಯಾಂಗ್ವೇಜ್(ಎಚ್‍ಟಿಎಂಎಲ್) ಮತ್ತು ಕ್ಯಾಸ್‍ಕ್ಯಾಡಿಂಗ್ ಸ್ಟೈಲ್ ಶೀಟ್ಸ್(ಸಿಎಸ್‍ಎಸ್) ಇತ್ಯಾದಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನೀವು ಎಷ್ಟು ತಿಂಗಳ ಅವಧಿಯ ಕೋರ್ಸ್ ಮಾಡುವಿರೋ ಎಂಬುದರ ಮೇಲೆ ವೆಬ್ ಡಿಸೈನ್ ಕಲಿಕೆಯ ಸಬ್ಜೆಕ್ಟ್‍ಗಳು ಇರುತ್ತವೆ. ಕೆಲವೊಮ್ಮೆ ಪ್ರತಿಯೊಂದು ವಿಷಯಗಳಿಗೂ ಪ್ರತ್ಯೇಕ ಪ್ರತ್ಯೇಕ ಸರ್ಟಿಫಿಕೇಷನ್‍ಗಳಿರುತ್ತವೆ. ಅಂದರೆ, ಫ್ರೀಲ್ಯಾನ್ಸ್ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಅನಿಮೇಷನ್ ಕ್ರೀಯೆಟರ್, ವೆಬ್ ಡೆವಲಪರ್, ಪಿಎಚ್‍ಪಿ ಆ್ಯಂಡ್ ಸಿಎಸ್‍ಎಸ್ ಡೆವಲಪರ್ ಇತ್ಯಾದಿ ಕೋರ್ಸ್‍ಗಳನ್ನು ಮಾಡಬಹುದು.

ಎಲ್ಲಿ ಕಲಿಯಬಹುದು?
ರಾಜ್ಯದಲ್ಲಿ ವೆಬ್ ಡಿಸೈನ್ ಕಲಿಸುವ ಹಲವು ಶಿಕ್ಷಣ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಹಲವು ಬ್ರಾಂಚ್‍ಗಳನ್ನು ಹೊಂದಿರುವ ಆಪ್ಟೆಕ್ ಕಂಪ್ಯೂಟರ್ ಎಜುಕೇಷನ್ ಸಹ ವೆಬ್ ಡಿಸೈನರ್/ಡೆವಲಪ್‍ಮೆಂಟ್ ವಿಷಯದಲ್ಲಿ `ಎಸಿಡಬ್ಲ್ಯುಡಿ ಪೆÇ್ರ' ಎಂಬ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್ ನಡೆಸುತ್ತದೆ. ಪಿಯುಸಿ, ಪದವಿ ವಿದ್ಯಾರ್ಥಿಗಳು ಈ ಸರ್ಟಿಫಿಕೇಷನ್ ಪಡೆಯಬಹುದು. ಎಚ್‍ಟಿಎಂಎಲ್5, ಜಾವಾ ಸ್ಕ್ರಿಪ್ಟ್, ಸಿಎಸ್‍ಎಸ್3 ಪಿಎಚ್‍ಪಿ ಆ್ಯಂಡ್ ಮೈಎಸ್‍ಕ್ಯೂಎಲ್ ಇತ್ಯಾದಿ ಪೆÇ್ರಗ್ರಾಮಿಂಗ್ ಭಾಷೆಗಳನ್ನು ಕಲಿಸಿ ವೆಬ್‍ಸೈಟ್ ನಿರ್ಮಿಸುವುದನ್ನು ಕಲಿಯಬಹುದು. ಇದು 7 ತಿಂಗಳ ಕೋರ್ಸ್. ವಾರಕ್ಕೆ ಮೂರು ದಿನಗಳಂತೆ ದಿನಕ್ಕೆ ಎರಡು ಗಂಟೆÉ ಈ ಕೋರ್ಸ್ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಲಿಂಕ್
ಬೆಂಗಳೂರಿನಲ್ಲಿ ಅರೆನಾ ಮಲ್ಟಿಮೀಡಿಯಾವೂ ಪಿಯುಸಿ/ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ಆಸಕ್ತರಿಗೆ 10 ತಿಂಗಳ ಶಾರ್ಟ್‍ಟರ್ಮ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತದೆ. ವಾರಕ್ಕೆ ಮೂರು ದಿನ, ದಿನಕ್ಕೆ ಎರಡು ಗಂಟೆಯಂತೆ ಈ ಕೋರ್ಸ್ ಇರುತ್ತದೆ. ಹೆಚ್ಚುವರಿ ಗಂಟೆಗಳ ಕ್ಲಾಸ್ ತೆಗೆದುಕೊಂಡು ಕೋರ್ಸ್ ಅನ್ನು ಬೇಗ ಮುಗಿಸಲೂ ಅವಕಾಶವಿದೆ. ಮಾಹಿತಿಗೆ ವೆಬ್‍ಲಿಂಕ್
ಬೆಂಗಳೂರಿನ ಇಂಟರ್‍ನೆಟ್ ಅಕಾಡೆಮಿಯೂ ವೆಬ್ ಡೆವಲಪ್‍ಮೆಂಟ್ ಕೋರ್ಸ್‍ಗಳನ್ನು ನಡೆಸಿಕೊಡುತ್ತದೆ. ಸುಮಾರು ಒಂದೂವರೆ ತಿಂಗಳ ಕೋರ್ಸ್ ಇದಾಗಿದೆ. ಮೊಬೈಲ್ ವೆಬ್‍ಸೈಟ್ ನಿರ್ಮಾಣ ಕಲಿಕೆಯನ್ನು ಒಳಗೊಂಡ `ರೆಸ್ಪಾನ್ಸಿವ್ ವೆಬ್ ಡೆವಲಪ್‍ಮೆಂಟ್' ಕೋರ್ಸ್ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಲಿಂಕ್

ಮೈಸೂರಿನಲ್ಲಿರುವ ಟೂನ್2 ಮಲ್ಟಿಮೀಡಿಯಾ ಸ್ಕೂಲ್‍ನಲ್ಲಿ ವೆಬ್ ಡಿಸೈನ್‍ನಲ್ಲಿ ಶಾರ್ಟ್‍ಟರ್ಮ್ ಕೋರ್ಸ್‍ಗಳಿವೆ. ಮಾಸ್ಟರ್ ಇನ್ ವೆಬ್ ಡಿಸೈನ್ 7 ತಿಂಗಳ ಕೋರ್ಸ್. ಪೆÇ್ರಫೆಷನಲ್ ಇನ್ ವೆಬ್ ಡಿಸೈನ್ ಕೋರ್ಸ್ 4 ತಿಂಗಳಾದ್ದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್

ಮೈಸೂರಿನ ಅನಿಫ್ರೇಮ್ಸ್ ಸಹ ಸರ್ಟಿಫಿಕೇಟ್ ಇನ್ ಗ್ರಾಫಿಕ್ ಆ್ಯಂಡ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತಿದೆ. ಎಸ್‍ಎಸ್‍ಎಲ್‍ಸಿ ಪಾಸ್/ಫೇಲ್ ಆದವರು ಈ ಕೋರ್ಸ್ ಮಾಡಬಹುದು. ಇದು 15 ತಿಂಗಳ ಕೋರ್ಸ್. ವೆಬ್‍ಲಿಂಕ್

ಪಕ್ಕದ ರಾಜ್ಯವಾಗಿರುವ ಚೆನ್ನೈನಲ್ಲಿರುವ ವಿಎಫ್‍ಎಕ್ಸ್ ಮೀಡಿಯಾ ಆ್ಯಂಡ್ ಡಿಸೈನ್ ಸಂಸ್ಥೆಯು ವೆಬ್ ಡಿಸೈನ್ ಕುರಿತಾದ 9 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್ ನಡೆಸುತ್ತದೆ. ಇದು ಐಎಒ ಸರ್ಟಿಫಿಕೇಷನ್ ಅಂಗೀಕೃತ ಸರ್ಟಿಫಿಕೇಷನ್ ಆಗಿದೆ. ಎಸ್‍ಎಸ್‍ಎಲ್‍ಸಿ/ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಲಿಂಕ್
ಇವು ಕೆಲವು ವೆಬ್ ಡಿಸೈನ್ ಕಲಿಸುವ ಸಂಸ್ಥೆಗಳ ವಿವರವಾಗಿದೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವೆಲ್ಲ ಸಂಸ್ಥೆ ವೆಬ್ ಡಿಸೈನ್ ಕಲಿಸುತ್ತದೆ ಎಂದು ತಿಳಿದುಕೊಳ್ಳಿ. ಅಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ಜಾಯಿನ್ ಆಗಬಹುದು.

ಆನ್‍ಲೈನ್‍ನಲ್ಲಿ ಕಲಿಯಿರಿ
ಆನ್‍ಲೈನ್‍ನಲ್ಲೇ ವೆಬ್ ಡಿಸೈನ್ ಕಲಿಸುವ ಹಲವು ತಾಣಗಳು ಇವೆ. ಡಾಲರ್ ರೂಪದಲ್ಲಿ ಹಣ ನೀಡಲು ಸಿದ್ಧವಿದ್ದರೆ ವಿದೇಶಿ ವೆಬ್‍ತಾಣಗಳಿಂದಲೂ ಸರ್ಟಿಫಿಕೇಷನ್ ಪಡೆದುಕೊಳ್ಳಬಹುದು. ದೇಶದ ಕೆಲವು ಸಂಸ್ಥೆಗಳೂ ಇಂತಹ ಆನ್‍ಲೈನ್ ಕೋರ್ಸ್ ನಡೆಸುತ್ತವೆ. ಉಚಿತವಾಗಿ ವೆಬ್ ಡಿಸೈನ್ ಕಲಿಯುವ ಅವಕಾಶವನ್ನೂ ಕೆಲವು ವೆಬ್ ತಾಣಗಳು ಒದಗಿಸುತ್ತವೆ. ಇಂತಹ ಬಹುವೈವಿಧ್ಯತೆಯ ಆನ್‍ಲೈನ್ ವೆಬ್ ಡಿಸೈನ್ ಕಲಿಕಾ ತಾಣಗಳ ಲಿಂಕ್‍ಗಳು ಇಲ್ಲಿವೆ. ಆರಂಭಿಕರು ಉಚಿತ ತಾಣಗಳಲ್ಲಿ ಕಲಿತು ಮುಂದುವರೆಯುವುದು ಒಳಿತು.

1

2

3

ವೆಬ್ ಡಿಸೈನ್ ಪುಸ್ತಕಗಳು
ಪುಸ್ತಕದಂಗಡಿಗೆ ಭೇಟಿ ನೀಡಿದರೆ ವೆಬ್ ಡಿಸೈನ್‍ಗೆ ಸಂಬಂಧಿಸಿದ ಹಲವು ಪುಸ್ತಕಗಳು ದೊರಕುತ್ತವೆ. ಮೊದಲಿಗೆ ಬೇಸಿಕ್ ಕಲಿಸುವ ಪುಸ್ತಕ ಓದಿರಿ. ನಂತರ ಪೂರ್ಣ ಪ್ರಮಾಣದ ವೆಬ್ ಡಿಸೈನ್ ಪುಸ್ತಕ ಓದಿ. ಇಂಟರ್‍ನೆಟ್‍ನಲ್ಲಿ ಕೆಲವು ಉಚಿತ ಇ-ಬುಕ್‍ಗಳು ಸಿಗುತ್ತವೆ.
ವೆಬ್ ಡಿಸೈನ್ ಕಲಿಕೆಗೆ 15 ಉಚಿತ ಪುಸ್ತಕಗಳು
50 ಉಚಿತ ಪುಸ್ತಕಗಳು:

ಆನ್‍ಲೈನ್ ಅಂಗಡಿಗಳಿಗೆ ಹೋಗಿ ಅಲ್ಲಿ ಪುಸ್ತಕ ಎಂಬ ಕೆಟಗರಿಗೆ ಹೋಗಿ ಸರ್ಚ್ ಆಯ್ಕೆ ಇರುವಲ್ಲಿ ವೆಬ್ ಡಿಸೈನ್ ಎಂದು ಸರ್ಚ್ ಕೊಟ್ಟರೆ ಹಲವು ಪುಸ್ತಕಗಳು ಬರುತ್ತವೆ. ನಿಮ್ಮ ಊರಿಗೆ ಈ ತಾಣಗಳ ಸೇವೆಗಳು ಲಭ್ಯ ಇವೆಯೇ ಎಂದು ತಿಳಿದುಕೊಂಡು ಖರೀದಿಸಿರಿ.
ಲಿಂಕ್‍ಗಳು:

1

2

3

CAD and CAM Certification read