Saturday 14 January 2017

ನಿಮ್ಮ ಕರಿಯರ್‍ಗೆ ಈ ಸಾಧಕರು ಸ್ಫೂರ್ತಿಯಾಗಲಿ

SHARE
ಕರಿಯರ್‍ನಲ್ಲಿ ಸೋಲು ಬಂದಾಗ ಕುಗ್ಗುವವರಿಗೆ ಸ್ಫೂರ್ತಿಯಾಗಬಲ್ಲ ಪ್ರಮುಖ ಸಾಧಕರ ಪರಿಚಯ ಇಲ್ಲಿದೆ.

ಜೀವನದಲ್ಲಿ ಎಲ್ಲವೂ ಇದ್ದರೂ ಸಾಧಿಸಲು ಹಿಂಜರಿಯುವವರಿಗೆ ಪ್ರೇರಣೆ ನೀಡಬಲ್ಲ ವ್ಯಕ್ತಿಗಳ ಪುಟ್ಟ ಪರಿಚಯ ಇಲ್ಲಿದೆ. ಇವರೆಲ್ಲರು `ವಿಕಲತೆ ಎನ್ನುವುದು ಮನಸ್ಸಿನಲ್ಲಿದೆ' ಎನ್ನುವ ಮಾತನ್ನು ನಿಜವಾಗಿಸಿದವರು. ತಮ್ಮ ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಜಗತ್ತೇ ನಿಬ್ಬೆರಾಗುವಂತೆ ಮಾಡಿದವರು. ಇವರು ಬದುಕಿರುವ ರೀತಿ ಎಲ್ಲರಿಗೂ ಸ್ಫೂರ್ತಿಯಾಗಲಿ.

ಸುಧಾ ಚಂದ್ರನ್: ಭಾರತೀಯ ನಟಿ ಮತ್ತು ನೃತ್ಯ ಕಲಾವಿದೆ ಸುಧಾ ಚಂದ್ರನ್ ಬಗ್ಗೆ ನಿಮಗೆ ಗೊತ್ತಿರಬಹುದು. ಕೇರಳದಲ್ಲಿ ಜನಿಸಿದ ಇವರಿಗೆ ನೃತ್ಯವೇ ಸರ್ವಸ್ವ. ಭರತನಾಟ್ಯವೆಂದರೆ ಪಂಚಪ್ರಾಣ. 16ನೇ ವಯಸ್ಸಿನಲ್ಲಿ ನಡೆದ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡರು. ನೃತ್ಯವೇ ಸರ್ವಸ್ವ ಎಂದುಕೊಂಡ ಇವರಿಗೆ ಇದರಿಂದ ಆದ ಆಘಾತ ಅಷ್ಟಿಷ್ಟಲ್ಲ. ಎಲ್ಲವೂ ಮುಗಿದು ಹೋಯಿತು ಎಂದುಕೊಳ್ಳಲಿಲ್ಲ. ಜೈಪುರದ ಕೃತಕ ಕಾಲುಗಳಲ್ಲಿಯೇ ನೃತ್ಯ ಮುಂದುವರೆಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದರು. ನೃತ್ಯ ಮಾತ್ರವಲ್ಲದೆ ಟೀವಿ ಮತ್ತು ಸಿನಿಮಾ ಜಗತ್ತಿನಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ.

ರವೀಂದ್ರ ಜೈನ್: ಹುಟ್ಟಿದ್ದಾಗ ಇವರಿಗೆ ಜಗತ್ತು ಸುಂದರವಾಗಿ ಕಾಣಲಿಲ್ಲ. ಅಂಧತ್ವ ಇವರ ಜೊತೆಗಿತ್ತು. ಬೆಳೆಯುತ್ತ ತನಗೆ ಕಣ್ಣಿಲ್ಲ ಎಂಬ ಸತ್ಯ ಅರಿವಾಗತೊಡಗಿತು. ಇದನ್ನು ವೈಕಲ್ಯತೆ ಎಂದುಕೊಳ್ಳದೇ ತಮ್ಮ ಸಾಧನೆ ಮುಂದುವರೆಸಿದರು. ಬಾಲ್ಯದಿಂದಲೂ ಹಾಡಲು ಆರಂಭಿಸಿದ ಇವರು 1970ರ ಆಸುಪಾಸಿನಲ್ಲಿ ಜನಪ್ರಿಯ ಸಂಗೀತ ನಿರ್ದೇಶಕ ಎಂಬ ಹೆಸರು ಪಡೆದರು.

ಗಿರೀಶ್ ಶರ್ಮಾ: ಸಣ್ಣ ಪ್ರಾಯದಲ್ಲೇ ರೈಲು ಅಪಘಾತದಲ್ಲಿ ಗಿರೀಶ್ ತನ್ನ ಒಂದು ಕಾಲನ್ನು ಕಳೆದುಕೊಂಡರು. ಕಾಲಿಲ್ಲದಿದ್ದರೂ ಬ್ಯಾಂಡ್ಮಿಟನ್ ಚಾಂಪಿಯನ್ ಆಗಬೇಕೆಂಬ ಕನಸನ್ನು ತೊರೆಯಲಿಲ್ಲ. ಕೇವಲ ಒಂದೇ ಕಾಲಿನಲ್ಲಿ ಬ್ಯಾಂಡ್ಮಿಟನ್ ಕೋರ್ಟ್‍ನಲ್ಲಿ ಎಲ್ಲರೂ ಅಚ್ಚರಿಪಡುವಂತೆ ಆಡಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಶೇಖರ್ ನಾಯ್ಕ್: ಶಿವಮೊಗ್ಗದ ಶೇಖರ್ ನಾಯ್ಕ್‍ಗೆ ಹುಟ್ಟಿದಾಗಲೇ ಅಂಧತ್ವ ಜೊತೆಯಾಗಿತ್ತು. ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳ ಸರದಾರ. ಟಿ20 ಬ್ಲೈಂಡ್ ಕ್ರಿಕೆಟ್ ವಿಶ್ವ ಚಾಂಪಿಯನ್‍ನಲ್ಲಿ ಭಾಗವಹಿಸಿದ್ದಾರೆ. ಇವರ ಹೆಸರಿನಲ್ಲಿ 32 ಶತಕಗಳಿವೆ. ಸಾಕಷ್ಟು ಹಣಕಾಸು ತೊಂದರೆಯ ನಡುವೆಯೂ ಚಾಂಪಿಯನ್ ಆಗಿ ಹೊರಹೊಮ್ಮಿದ ಇವರ ಬದುಕು ನಮ್ಮ ನಿಮ್ಮೆಲ್ಲರ ಕರಿಯರ್ ಸಾಧನೆಗೆ ಸ್ಫೂರ್ತಿಯಾಗಬಲ್ಲದು.

ಎಚ್ ರಾಮಕೃಷ್ಣನ್: ಮಗುವಾಗಿದ್ದಾಗಲೇ ರಾಮಕೃಷ್ಣನ್ ಕಾಲುಗಳೆರಡು ಪೆÇಲೀಯೊದಿಂದ ಊನವಾಗಿದ್ದವು. ಎಲ್ಲರಂತೆ ಶಾಲೆಗೂ ಪ್ರವೇಶ ದೊರಕಲಿಲ್ಲ. ಬದುಕಿನಲ್ಲಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಆದರೂ, ಎದೆಗುಂದದೆ 40 ವರ್ಷ ಪತ್ರಕರ್ತರಾಗಿ ಹೆಸರುಗಳಿಸಿದರು. ಎಸ್‍ಎಸ್ ಮ್ಯೂಸಿಕ್ ಟೆಲಿವಿಷನ್ ಚಾನೆಲ್‍ನ ಸಿಇಒ ಆದರು. ವಿಶೇಷ ಚೇತನರಿಗಾಗಿಯೇ ಕೃಪಾ ಎಂಬ ಟ್ರಸ್ಟ್ ಅನ್ನೂ ನಡೆಸಿಕೊಡುತ್ತಿದ್ದಾರೆ.

ಸಾಯಿ ಪ್ರಸಾದ್ ವಿಶ್ವನಾಥನ್: ಬಾಲ್ಯದಲ್ಲಿಯೇ ತನ್ನ ದೇಹದ ಕೆಳ ಅರ್ಧಭಾಗದ ಸ್ವಾಧೀನ ಕಳೆದುಕೊಂಡರು. ತನ್ನ ವೈಕಲ್ಯವನ್ನು ಮರೆತು ಸಾಧನೆ ಮಾಡಿದ್ದಾರೆ. ಇವರು ಭಾರತದ ಮೊದಲ ವಿಶೇಷ ಚೇತನ ಸ್ಕೈ ಡೈವರ್. 14 ಸಾವಿರ ಅಡಿ ಆಳದಲ್ಲಿ ಸ್ಕೈ ಡೈವಿಂಗ್ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿಯೂ ಹೆಸರು ದಾಖಲಿಸಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್ ನೀಡುವ ಸಹಸ್ರ ಎಂಬ ಸಂಸ್ಥೆಯ ಸಹ ಸ್ಥಾಪಕರಾಗಿದ್ದಾರೆ.

ಅರುಣಿಮಾ ಸಿನ್ಹಾ: ಚಲಿಸುತ್ತಿರುವ ರೈಲಿನಿಂದ ದರೋಡೆಕೋರರು ತಳ್ಳಿದ್ದರಿಂದ ತನ್ನ ಕಾಲುಗಳನ್ನು ಕಳೆದುಕೊಂಡರು. ತನ್ನ ವೈಕಲ್ಯತೆಗೆ ಎದೆಗುಂದದ ದಿಟ್ಟೆ. ಘಟನೆ ನಡೆದ ಎರಡು ವರ್ಷದಲ್ಲೇ ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಿ ತೋರಿಸಿದರು. ಈ ಸಾಧನೆ ಮಾಡಿದ ಮೊದಲ ವಿಶೇಷ ಚೇತನ ವ್ಯಕ್ತಿ ಎಂಬ ದಾಖಲೆ ಮಾಡಿದ್ದಾರೆ.

ಮಾಲತಿ ಕೃಷ್ಣಮೂರ್ತಿ ಹೊಳ್ಳ: ವಿಷಮ ಜ್ವರದಿಂದ ತನ್ನ ದೇಹದ ಸ್ವಾಧೀನ ಕಳೆದುಕೊಂಡ ಮಾಲತಿ ಕೃಷ್ಣಮೂರ್ತಿ ಹೊಳ್ಳ ಮಾಡಿರುವ ಸಾಧನೆಯೂ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು. ವಿವಿಧ ಪ್ಯಾರಾ ಒಲಿಂಪಿಕ್‍ಗಳಲ್ಲಿ ಭಾಗವಹಿಸಿ 300ಕ್ಕೂ ಹೆಚ್ಚು ಮೆಡಲ್‍ಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published in Vijayakarnataka Mini
SHARE

Author: verified_user

1 comment: